Saturday, September 30, 2017

ಕೆಂಪಿರುವೆ ಎಲ್ಲಾ ಕಡೆ ನೀ ನಿರುವೆ...

ಒಂದಿರುವೆಗೆ ಎತ್ತಲಾಗದಷ್ಟು ದೊಡ್ಡದಿತ್ತು ಅದು. ಆದರೂ ಬಿಡದೆ ಎಳೆದಾಡುತ್ತಿತ್ತು. ಒಂದಿರುವೆ ಜೊತೆಗೆ ಮೊತ್ತೊಂದು ಜೊತೆಯಾಯಿತು.
 



ಎಳೆತ ಜೋರಾಯಿತು. ಮಧ್ಯಾಹ್ನದಿಂದ ಸಂಜೆವರೆಗೂ ಎಳೆದಾಡಿ ಹುಳದ ರಗಳೆ ತೆಗೆದೆವು.


ಈ ನಡುವೆ ಮತ್ತೊಂದು ಇರುವೆ ಬೀಟಲ್ ಒಂದನ್ನು ಎತ್ತಿಕೊಂಡು ಓಡುತ್ತಾ ಬಂದು ಇವುಗಳ ಮೈ ಮೇಲೆಲ್ಲಾ ಓಡಾಡಿ ಗೂಡು ಸೇರಿತು. ಮುಂದೇನಾಯಿತೆಂದು ಗೊತ್ತಿಲ್ಲ. ಸಂಜೆಗೆ ಭಾರಿ ಮಳೆ ಹೊಡೆಯಿತು ನೋಡಿ. ಅವು ಅಲ್ಲಿರಲಿಲ್ಲ. ಸುಮಾರು ನಾಲ್ಕು ಗಂಟೆಗೂ ಮಿಕ್ಕಿ ಅವುದನ್ನು ಕಚ್ಚಿಕೊಂಡಿದ್ದವು ಪಾಪ!













Wednesday, September 20, 2017

ಹೊರಗು ಮಳೆ ಒಳಗು ಮಳೆ......


ಕುಂಭ ದ್ರೊಣ ಮಳೆಯನ್ನು ನಾ ಕಂಡಿರಲೆ  ಇಲ್ಲ. ಮೊನ್ನೆ ಸಿಕ್ಕಿಂಗೆ ಹೊದಾಗ ಅದರ ಅನುಭವವಾಯಿತು. ಆಗಲೆ ಈ ಚಿತ್ರ ತೆಗೆದಿದ್ದು...ಮೊನ್ನೆ ನಮ್ಮಲ್ಲಿ ಸುರಿದ ಭಾರಿ ಮಳೆಗೆ ಹೊಳೆದ ಕವನ ನಿಮ್ಮ ಓದಿಗೆ.


ಹೊರಗೂ ಮಳೆ ಒಳಗೂ ಮಳೆ
ಸುರಿಯುತಿದೆ ಬಿಟ್ಟು ಬಿಡದೆ
ಜಿಟಿಜಿಟಿ ಜೀರಿಗೆ ಮಳೆ
ಮುತ್ತಿಕ್ಕುತಿವೆ ಮತ್ತೆ ಮತ್ತೆ
ನನ್ನ ಬಿಟ್ಟು ಬಿಡದೆ
ನೆನಪಲ್ಲಿ ನೆನಪೇ ನೆನೆದು ಬಿಟ್ಟಿದೆ
ಹರಿಸಿದೆ ಹೊಳೆ.
ಹೊರಗೂ ಮಳೆ ಒಳಗೂ ಮಳೆ!

(ಬರೆಹದ ತಪ್ಪುಗಳಿಗೆ ಕಾರಣ ನಾನಲ್ಲ)

Tuesday, September 12, 2017

ಶಿಕ್ಷಣ, ಮೆಕಾಲೆ ಮತ್ತು ಪಂಜರ ಶಾಲೆ......


 ಬ್ರಿಟಿಷ್ರು ತಮಗಾಗಿ ಮಾಡಿಕೊಂಡ ಈ ಶಿಕ್ಷಣ ಪದ್ದತಿ ಇನ್ನೂ ನಾವು ಜೀವಂತವಾಗಿಟ್ಟು ಹಾಗೇ ಕಾಪಿಡುತ್ತಿದ್ದೇವೆ. ಸತ್ತ ಶವವನ್ನ ಜೀವಂತವಾಗಿರಿಸಲು ಶತಾಯಗತಾಯ ಹೋರಾಡುತ್ತಲೇ ಇದ್ದೇವೆ! ಇನ್ನೆಷ್ಟು ದಿನ? ಉರು ಹೊಡೆದು, ಒತ್ತಡದಲ್ಲಿ ಯಾವುದೋ ಒಂದೆರಡು ಭಾಷೆ ಕಲಿತು ಬಿಟ್ಟರೆ ನಮ್ಮ ಜನ್ಮ ಪಾವನವೆಂಬಂತೆ ಆಡುತ್ತಿರುವವರ ಜನರ ನಡುವೆ ಹೋರಾಡಬೇಕಾದ ಅನಿವರ್ಾಯತೆ. ಊರಿನ ಜತಗೆ ಕುರುಡನೂ ಓಡಬೇಕಾದ ಸಂದಿಗ್ಧ ಸ್ಥಿತಿ ಉಂಟಾಗಿದೆ. ಇಚ್ಚೆ ಇಲ್ಲದವನೂ ಓಡಲೇ ಬೇಕಾಗಿದೆ.
Fairy Bull bull team with me.


ನಮ್ಮದೇಶಕ್ಕೆ ಸರಿ ಹೊಂದುವ ಶಿಕ್ಷಣ ಪದ್ಧತಿಯನ್ನು ನಾವಿನ್ನೂ ಅನ್ವೇಷಿಸಿಲ್ಲವೆಂಬದೇ ದೊಡ್ಡ ದುರಂತ. ಮತ್ತದೇ ಉರು ಹೊಡೆವ ಗುಮಾಸ್ತಗಿರಿಯ ಗುಲಾಮಿ ಪದ್ಧತಿ, ಎಲ್ಲರಿಗೂ ಎಲ್ಲವನ್ನು ಕಲಿಯಲಸಾಧ್ಯವೆಂಬ ಸರಳ ತತ್ವವನ್ನು ಮರೆತಿರುವ ಸ್ಥಿತಿ ನಮದಾಗಿದೆ. ಹೆಚ್ಚು ಹೆಚ್ಚು ಅಂಕ ಪಡೆದು ಇನ್ನೊಬ್ಬರ ಗುಲಾಮರಾಗಿ ಸ್ವಂತಿಕೆ ಮಾರಿಕೊಂಡಿದ್ದೇವೆ. ದೇಶವೇ ನಮಗೆ ಹೀನಾಯದಂತೆ ಕಾಣುವ ಸ್ಥಿತಿಯನ್ನು ನಾವೇ ತಂದುಕೊಂಡಿದ್ದೇವೆ. ಉಳಿದ ದೇಶಗಳು ಸಂಸ್ಕೃತಿಗಾಗಿ ನಮ್ಮತ್ತ ನೋಡುತ್ತಿದ್ದರೂ ನಾವು ಮೂಕರಂತಾಡುತ್ತಿದ್ದೇವೆ. ಹೀಗೆ ಕಲಿಕೆಯ ವಿಡಂಬನಾತ್ಮಕವಾಗಿ ನೋಡುವ, ಆಲೋಚಿಸುವವರಿಗಾಗಿ ಇರುವ ನಾಟಕ ಪಂಜರ ಶಾಲೆಯನ್ನು ನಮ್ಮ ಮಕ್ಕಳು ಅಭಿನಯಿಸಿದರು. ಒಂದೊಳ್ಳೆ ನಾಟಕವಾಡಿದ ಅನುಭೂತಿ ನನ್ನದಾಯಿತು.
ಪಂಜರ ಶಾಲೆಯ ನೆಪದಲ್ಲಿ ಇಷ್ಟೆಲ್ಲಾ ಹೇಳ ಬೇಕಾಯಿತು. ಮೇಲ್ನೋಟಕ್ಕೆ ಸಾಮಾನ್ಯ ನಾಟಕದಂತೆ ಕಂಡರೂ ಅದರ ತಿರುಳು ಮಾತ್ರ ನಿಮ್ಮನ್ನು ಕಾಡದೇ ಬಿಡದು. ಸಾಧ್ಯವಾದರೆ ಒಮ್ಮೆ ನೋಡಿ, ಓದಿ 

ತೇಜಸ್ವಿ ನೆನಪಿಗೆ ದಕ್ಕಿದ್ದು ..........2

      ಮನೆ ಎದುರಿಗೆ ಹಕ್ಕಿ ಹಿಂಡು ಗೌಜಿ ಮಾಡುತಲಿದ್ದವು. ಮದುವೆ ಮುಗಿದ ಮಂಟಪದಂತಿತ್ತು ಆ ಮನೆ. ನೀರವ ಮೌನ.   ನಾಯೊಂದು ಮನೆಗೆ ಗಿರಕಿ ಹೊಡೆಯುತ್ತಿತ್ತು. ಅವತ್ತು ಗೌರಿ ಹಬ್ಬ. ಮರುದಿನ ಗಣೇಶ ಬರುವವನಿದ್ದ. 'ಯಾರದು' ಎಂಬ ಒಳಗಿನಿಂದ ದನಿಯೊಂದು ಹೊರ ಬಂತು. 
ತೇಜಸ್ವಿ ತೋಡಿಸಿದ ಕೆರೆ.
ಒಮ್ಮೆಗೆ ಆ ನೀರವ ಏಕಾಂತದಲ್ಲಿ ಬಿರಿಯಾನಿ ಕರಿಯಪ್ಪ ಪಾತ್ರ ಮೈದೆಳೆದಿದ್ದು, ಕವರ್ಾಲೋ, ಮಂದಣ್ಣರ ಅನ್ವೇಷಣೆ, ಹೀಗೆ ಅವರ ಕಾದಂಬರಿಯ ಪಾತ್ರಗಳೆಲ್ಲಾ ಎದುರಿಗೆ ಬಂದವು. ಏಕಾಂತದ ಸರ ಹೊತ್ತಲ್ಲಿ ಕೈಹಿಡಿದು ಕರೆತಂದ ಪಾತ್ರಗಳು ನೆನಪಾದವು. ಕತೆ ಬಿಗಿ ಕಳೆದು ಕೊಳ್ಳದಂತಹ ನೇಯ್ಗೆ ಹೇಗೆ ಸಾಧ್ಯವಾಯಿತೆಂದು ನಮಗರ್ಥವಾಯಿತು.
ಮರುಕ್ಷಣ ಮನೆಯೊಳಗಿದ್ದೆವು. ತಂಡಿ ಹೊದ್ದ ನೆಲ. ಸ್ವೆಟರು ಹೊದ್ದು ಅಮ್ಮನಂತಿರುವ ರಾಜೇಶ್ವರಿ ತೇಜಸ್ವಿ ಸ್ವಾಗತಿಸಿದರು. ಯಾವುದೋ  ಚಾನಲ್ನವರು ಆಗಷ್ಟೇ ಬಂದು ಹೋಗಿದ್ದರೂ ಬೇಸರಿಸದೇ ನಮ್ಮ ಜೊತೆಗೆ ಹರಟೆ ಕೂತಿದ್ದರು. ಮಾತೆಲ್ಲಾ ತೇಜಸ್ವಿ ಸುತ್ತ. ಯಾಕಷ್ಟು ತೇಜಸ್ವಿ ಆಕರ್ಷಣೆಯೆಂದು ದೇವರಾಣೆಗೂ ತಿಳಿಯದು. ಚಿತ್ರಕೂಟ ಅವರ ತೋಟದ ಮನೆಯಿಂದ ನಿರುತ್ತರದ ಅವರ ತೋಟದ ಸಾಹಸಗಳು ಮಾತಿನಲ್ಲಿ ತೆರೆದುಕೊಂಡಿತು.
ಬಿಳಿಯಂಗಿ ತೊಟ್ಟ ತೇಜಸ್ವಿ ಸ್ಕೂಟರ್ ಏರಿ ಮೂಡಿಗೆರೆ ಪೇಟೆ ತಿರುಗಿ ಬರುವುದರೊಳಗೆ 'ಕೆಂಪಗಿ' ದಳವಾಗಿ ಬರುತ್ತಿದ್ದರು. ಪೇಟೆ ಸೇರಿ ಧೂಳು ಕುಡಿಯಬಹುದಾಗಿದ್ದ ಕಾಲದಲ್ಲಿ ಕಾಡು ಸೇರಿ, ಗಾಳ ಹಿಡಿದು ಗಂಭೀರ ಚಿಂತಕರಾದರು ತೇಜಸ್ವೀ. ಸುಲಭದಲ್ಲಿ ಮಾಸ್ತರಾಗ ಬಹುದಾಗಿದ್ದರೂ ಕಾಡಿನ ಅನ್ವೇಷಣೆಗೆ ಹೊರಟು ನಿಂತರು.
ವೆಂಕ್ಟನ ಪುಂಗಿಯ ನಾದದಂತೆ ಒಂದೊಂದೇ ಪುಸ್ತಕಗಳು ಹೊರ ಬಂದವು. ಬಿರಿಯಾನಿ ಕರಿಯಪ್ಪನಂತೇ, ಜುಗಾರಿ ಕ್ರಾಸ್ ಕಾದಂಬರಿಯ 'ಅಮೋಪಾಸ್ ಮೂಟೆ ಮತ್ತು ವಾಂತಿ' ಪ್ರಕರಣಗಳು ನೈಜ ಘಟನೆಗಳೆಂದು ಹೇಳಿದ ನೆನಪು. ಚಿಮುಣಿ ಬುಡ್ಡಿ ದೀಪದಲ್ಲಿ ಬರೆದ ಕವರ್ಾಲೋ ಕ್ಲಾಸಿಕ್ ಎಂದು ನೆನಪು ಮಾಡಿಕೊಂಡರು. ಮುಂದೆ ಕೃಷಿ ಬದುಕಿನ ಕಷ್ಟಗಳ ಬಗ್ಗೆ ಮಾತಾಡಿಕೊಂಡೆವು. ಕಾಲದ ಪರಿವೆಯೇ ಇರಲಿಲ್ಲ. 
ರಾಜೇಶ್ವರಿ ತೇಜಸ್ವಿ ಸ್ವತಃ ಚಹ ಮಾಡಿಕೊಟ್ಟರು. ತೇಜಸ್ವಿ ಕೆಲಸ ಮಾಡುತ್ತಿದ್ದ ಮಾಳಿಗೆ, ಅಲ್ಲಿಂದ ಕಾಣುತ್ತಿದ್ದ ಸಂಪಿಗೆ, ಚಕ್ಕೊತ್ತಾ ಮರ, ಹಕ್ಕಿ ಮರೆ ಹಾಗೇ ಇತ್ತು! ಅತಿ ಸಣ್ಣ ಪೇರಲೆಯೊಂದು ನಾಲ್ಕು ಕಾಯಿ ಬಿಟ್ಟು ನಗುತ್ತಿತ್ತು. ಇಂಬಳ ಕಚ್ಚಿಸಿಕೊಳ್ಳುತ್ತಾ ತೋಟ, ಕೆರೆ, ಗದ್ದೆ ನೋಡಿದೆವು. ಅವರಿಗಾಗಿ ತಂದ ತಿಂಡಿ ಪೊಟ್ಟಣವೊಂದ ಕೊಟ್ಟೆವು. ಅವರ ಮನೆಯ ಚಕ್ಕೊತ್ತಾ ಹಣ್ಣು ಜೊತೆಯಾದವು. ಚಕ್ಕೊತ್ತಾ ಹೇಗೆ ತಿನ್ನಬೇಕೆಂದು ಅವರೇ ಹೇಳಿದರು. ಸಿಪ್ಪೆ ಬಿಡಿಸಿಟ್ಟು ಮರುದಿನ ತಿನ್ನಬೇಕು ಆಗಲೇ ತಿನ್ನಬೇಕು. ಯಾಕೆಂದು ನಾನು ಈವರೆಗೂ ಆಲೋಚಿಸಿಲ್ಲ! ಮರುದಿನ ಸಾಯಂಕಾಲದವರೆಗೂ ಹಣ್ಣು ನಮ್ಮ ಬಗಲಿಗೆ ಅಂಟಿಕೊಂಡಿತ್ತು! ತೀರಾ ಹುಳಿಯೂ ಅಲ್ಲದ, ತೀರ ಕಹಿಯೂ ಅಲ್ಲದ ಹಣ್ಣದು. ತೇಜಸ್ವಿ ಇದ್ದಿದ್ದರೆ ಬೈಸಿಕೊಳ್ಳುತ್ತಿದ್ದಿರಿ ಎಂದರು ರಾಜೇಶ್ವರಿ.  ಅಷ್ಟು ತಿಂಡಿ ಒಯ್ದಿದ್ದೆವು.
ತೇಜಸ್ವಿ ಮನೆಯೆದುರಿನ ಚಕ್ಕೊತ್ತಾ ಮರ ಮತ್ತು ವರಾಂಡ
ಚಕ್ಕೊತ್ತಾದ ಸವಿ ಇನ್ನೂ ನಾಲಗೆಯ ತುದಿಯಲ್ಲಿದೆ. ಅವರು ಸಹಿ ಮಾಡಿಕೊಟ್ಟ ಪುಸ್ತಕ ಮತ್ತು ತೇಜಸ್ವಿ ತಂದಿಟ್ಟ ಇನ್ಲ್ಯಾಂಡ್ ಕಾಗದವೊಂದು ನಮ್ಮ ನೆನಪಿಗಾಗಿ ಕೊಟ್ಟರು. ತೇಜಸ್ವಿ ನೆನಪಾದಾಗ ಮತ್ತೆ ಮತ್ತೆ ಆ ನೆನಪಿಗೆ ಮರಳುತ್ತೇನೆ, ಕಾಗದ ತಡುವುತ್ತೇನೆ.


ಶ್ರೀಧರ್. ಎಸ್. ಸಿದ್ದಾಪುರ


Tuesday, September 5, 2017

ತೇಜಸ್ವಿ ನೆನಪಿಗೆ ದಕ್ಕಿದ್ದು....ಭಾಗ-1

  ಇದೇ ಸೆಪ್ಟೆಂಬರ್ 8 ರಂದು ತೇಜಸ್ವಿ ಹುಟ್ಟಿದ ದಿನ. ಜಪಾನ್ ಮಹಿಳೆಯೊಬ್ಬರು ಇಲ್ಲಿ ಬಂದು ಅವರ ತೋಟವೆಲ್ಲಾ ನೋಡಿ ಹೋಗಿರುವಾಗ ಸಣ್ಣ ಅಪರಾಧಿ ಪ್ರಜ್ಞೆ ಜಾಗೃತವಾಯಿತು. ಅವತ್ತು ಆದದ್ದೆಲ್ಲಾ ಅಚಾನಕ. ಅದರ ವಿವರಗಳು ಈಗ ನಿಮ್ಮ ಮುಂದೆ. ಇಷ್ಟವಾದರೂ ಇಲ್ಲದಿದ್ದರೂ ತಿಳಿಸಿ..

ಸುಮ್ನೆ ಸಿಕ್ಕಿದ ಬಸ್ ಹತ್ತಿ ಗೊತ್ತು ಗುರಿ ಇಲ್ಲದೇ ಅಲೆಯುವ ಆಸೆಗೆ ಪುಷ್ಟಿ ಬಂದಿದ್ದು ಅವತ್ತು. ನಾನು ಗೆಳೆಯ ನಾಗರಾಜ ಶೃಂಗೇರಿಯ ಬಸ್ ಹತ್ತಿ ಹೊರಟು ನಿಂತಿದ್ದೆವು. ಜೀರಿಗೆ ಮಳೆ ಬೇರೆ. ಮನದಲ್ಲಿ ತೇಜಸ್ವಿ ಕನವರಿಕೆಯೊಂದು ಹುಟ್ಟಿಕೊಂಡಿತು. ನೇರವಾಗಿ ಮೂಡಿಗೆರೆಗೆ ಬಂದಿಳಿದೆವು. ಹೊರಗೆಲ್ಲಾ ಮೋಡ ಕವಿದ ವಾತಾವರಣ. ನಿಧಾನಿ ಜನಗಳು. ತೀವ್ರ ಜರೂರತ್ತು ಇಲ್ಲದೇ ಜನ ಓಡಾಡುತ್ತಿದ್ದರು.



ಜಿಟಿ ಜಿಟಿ ಜೀರಿಗೆ ಮಳೆಯಲಿ.....

ನಿಧಾನಕ್ಕೆ ಜಿಟಿ ಜಿಟಿ ಜೀರಿಗೆ ಮಳೆಯಲಿ ಗೊತ್ತು ಗುರಿ ಇಲ್ಲದೆ ಹ್ಯಾಂಡ್ ಪೋಸ್ಟ್ನಲ್ಲಿ ಇಳಿದು ನಿರ್ಜನ ದಾರಿ ನೋಡುತ್ತಾ ಹೋಗುವುದೆಲ್ಲಿಗೆ ಎಂದು ಯಾರಲ್ಲಿ ಕೇಳುವುದೆಂದು ತೋಚದೆ ಎದುರಿಗಿದ್ದ ಗೇಟೊಳಗೆ ನುಗ್ಗಿದೆವು. ತೆರೆದಂತೆ ಮುಚ್ಚಿಕೊಂಡ ಗೇಟು, ಹೊಸ ಸತ್ಯವೊಂದ ನಮಗೆ ಅರುಹಿತು. ಇದೇ ಸ್ವಾಮಿ ತೇಜಸ್ವಿ ಮನೆಯೆಂದು! 



ಕಾಫಿ ಕಾಡು...
ಒಳಗೆ ನುಗ್ಗಿದ ನಮಗೆ ನಾಯಿ ಹಿಡಿಸುವರೋ ಎಂಬ ಹೆದರಿಕೆ ಬೇರೆ. ಪುಕ್ಕನಂತೆ ಕಾಫಿ ತೋಟ ನೋಡುತ್ತಾ ಹೊರಟೆವು. ಸುತ್ತಲೆಲ್ಲಾ ಕಾಡು ಕಾಡು. ನಡುವೆ ಕಾಫಿ ತೋಟ. ಅಲ್ಲಿಲ್ಲಿ ಹಣ್ಣಿನ ಗಿಡಗಳು. ಚಕ್ಕೊತ್ತಾ, ಪೇರಲೆ, ಹಲಸು, ಮಾವು ಇತ್ಯಾದಿ. ಚಕ್ಕೊತ್ತಾವಂತೂ ಹಣ್ಣ್ ತುಂಬಿ ಬೀಳುವ ಹಾಗಿತ್ತು. ಎಲ್ಲೆಲ್ಲೂ ಹಕ್ಕಿಗಳ ಉಲಿ. ಮುಂಜಾವಾದರೂ ರಾತ್ರಿಯಂತೆ ಭಾಸವಾದ ಭಾವ. ಹಕ್ಕಿಗಳ ಚಿಲಿ ಪಿಲಿ ಆಲಿಸುತ್ತಾ ಇದೇ ಇರಬೇಕೆಂದು ನಿಧಾನಕ್ಕೆ ಇಳಿಯುತ್ತಾ ಇಳಿಜಾರಿನಲ್ಲಿ ಸಾಗಿದೆವು. 

                                      











ಮುಂದಿನದು ಸೆಪ್ಟೆಂಬರ್ 7 ಕ್ಕೆ..

ವಾರೆ ನೋಟ

ಲೋಚನ ದ ತುಂಬಾ ಚಂದ್ರ ತಾಲದ ಬಿಂಬ

( Chandra tal lake .... Himachal pradesh) ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿ...