Friday, January 30, 2026

ಕೀರ್‌ಗಂಗಾ ದಾರಿಯಲ್ಲಿ ಸಿಕ್ಕ ಸಂತ

 


ನನ್ನ ಸ್ಮೃತಿಪಟಲದಿಂದ ಅಳಿಸಿಹೋಯಿತೆಂಬತೆ ಆಗಿದ್ದ ಹಿಮಾಚಲದ ಕೀರ್‌ಗಂಗಾ ಚಾರಣ ಮತ್ತೆ ಮುನ್ನಲೆಗೆ ಬಂದಿದ್ದೇ ಆಕಸ್ಮಿಕ! ಬೆಟ್ಟಗಳಲ್ಲಿ ಕಳೆದೋಗುವುದು ಅಂತಾರೆ ಆದರೆ ಇಲ್ಲಿ ಬರೋಬ್ಬರಿ 1768 ಜನ ಮತ್ತೆಂದೂ ಸಿಗದಂತೆ ಕಣ್ಮರೆಯಾಗಿದ್ದಾರೆ! ಭಾರತದ ಉದ್ದಗಲಕ್ಕೂ ಇಂತಹ ಇನ್ನೊಂದು ಚಾರಣ ಪಥ ಕಾಣಸಿಗದು! ನೆತ್ತಿಯಿಂದ ೨೪ ಗಂಟೆಯೂ ಹರಿದು ಬರುವ ಹಾಲಿನಂತಹ ಬಿಸಿ ನೀರು ಮತ್ತೊಂದು ವಿಶೇಷ! ಜಗತ್ತು ಹುಚ್ಚರ ಸಂತೆ. ಇಲ್ಲಿ ಎಲ್ಲರದೂ ಒಂದು ವಿಭಿನ್ನ ಹುಡುಕಾಟ. ನನ್ನಂಥವರಿಗೆ ತಿರುಗಾಟವೇ ಒಂದು ಬಿಡುಗಡೆ. 



  ಈ ಅಚ್ಚರಿಯ ಜಾಡು ಹಿಡಿದು ಹೊರಟವನಿಗೆ ಹೊಸ ಹೊಸ ವಿಷಯಗಳ ಮಹಾಪೂರವೇ ಕೀರ್‌ಗಂಗಾ ಚಾರಣದ ದಾರಿಯಲ್ಲಿ ಕಾಣಸಿಕ್ಕವು. ಹಾಗಾಗಿ ಕನಸಿನ ಈ ಚಾರಣಕ್ಕೆ ಅಡಿಯಿಟ್ಟೆ ಬನ್ನಿ ನಿಮ್ಮನ್ನೂ ಕರೆದೊಯ್ಯುವೆ.

ಕೀರ್‌ಗಂಗಾ ಹಿಮಾಚಲದ ಕಸೋಲ್‌ ಹಳ್ಳಿಯಿಂದ ಅನತಿ ದೂರದಲ್ಲಿದೆ. ಮಣಿಕರಣವನ್ನೂ ದಾಟಿ ಸಿಗುವ ತೋಷ್‌ನಿಂದಲೂ ಚಾರಣ ಮಾಡಬಹುದು. ದೊಡ್ಡ ಪ್ರವಾಸದ ನಡುವೆ ಹೇಗೋ ಜಾಗ ಮಾಡಿಕೊಂಡು ಚಾರಣಕ್ಕಾಗಿ 3 ದಿನ ತೆಗೆದಿರಿಸಿದೆ. ಕನಿಷ್ಟ ನಾಲ್ಕು ದಿನಗಳ ಚಾರಣವನ್ನು ಎರಡೇ ದಿನದಲ್ಲಿ ಮುಗಿಸುವ ಹಠಕ್ಕೆ ಬಿದ್ದು ಪೂರ್ಣ ಗೊಳಿಸಿದೆವು. ಕೀರ್‌ಗಂಗಾ ರಾಷ್ಟ್ರೀಯ ಉದ್ಯಾನವನದಲ್ಲಿನ 12 ಕಿ.ಮೀ ಅತಿ ಉದ್ದದ ಚಾರಣವನ್ನು ಎರಡೇ ದಿನದಲ್ಲಿ ಪೂರೈಸುವ ಮನಸ್ಸು ಮಾಡಿದೆವು.

ಮಣಿಕರಣದಿಂದ ತೋಷ್‌ಗೆ




ನಾವು ಬಿಜಿಲಿ ಮಹಾದೇವನಿಗೆ ನಮಿಸಿ, ಮಲಾನಾ ದಾರಿಯಲ್ಲಿ ಕಳೆದುಹೋಗಿ, ಮಣಿಕರಣದ ಬಸಿ ನೀರ ಬುಗ್ಗೆಯಲಿ ಮಿಂದೆದ್ದು̧ ಮೈಮನ ತಣಿಸಿಕೊಂಡು ಕೀರ್‌ಗಂಗಾ ಚಾರಣಕ್ಕೆ ಹೊರಟು ನಿಂತಾಗ ನಡು ಹಗಲು. ಬೆಳಗಿನ ಬಸ್ಸಾಗಲೇ ಊರು ತೊರೆದಿತ್ತು. ಕುಂಬಕರ್ಣನ ಹೊಟ್ಟೆಯಂತಹ ಎರಡು ಲಗೇಜು ಹೊತ್ತು ಹೋಗುವುದೂ ಸುಲಭವಿರಲಿಲ್ಲ. ಕಾರು ಹತ್ತಿದೆವು. 

ಓಕ್, ಪೈನ್ ಮರಗಳ ಚಪ್ಪರದಡಿ ನುಸುಳುತ್ತಾ ನುಜ್ಜುಗುಜ್ಜಾದ ರಸ್ತೆಯಿಲ್ಲದ ರಸ್ತೆಯಲ್ಲಿ ತೋಷ್‌ನತ್ತ ಕಾರಿನಲ್ಲಿ ಪ್ರಯಾಣ ಬೆಳೆಸಿದೆವು. ನಡು ಹಗಲಿಗೇ ತಂಪಾದ ಚಂದ್ರನಂತಹ ಸೂರ್ಯ! ಏಕಮುಖಿ ರಸ್ತೆಯ ಗೋಜಲಿಗೆ ಸಿಕ್ಕಿಹಾಕಿಕೊಂಡ ನಮ್ಮ ವಾಹನ ನಡುರಸ್ತೆಯಲ್ಲಿ ಉಳಿಯಿತು. ನಾವು ಊರಿಗೆ ಪಾದ ಸೇವೆಗೈದೆವು. ಒಂದಿಷ್ಟು ಪಡ್ಡೆಗಳು ಊರ ಹೆಬ್ಬಾಗಿಲಿನಲ್ಲಿ  ಅಗ್ನಿ ಕಾರ್ಯ ನಡೆಸಿದ್ದರು. ಅದೇನು ಹುಚ್ಚು ಗೊತ್ತಿಲ್ಲ ಪ್ರತಿ ಸಾರಿ ಕಂಡ ಬೆಟ್ಟವು ನೋಡಿದಷ್ಟು  ಮತ್ತೆ ನೋಡಬೇಕೆನ್ನುವ ಬಯಕೆ. ತನ್ನ ಮೇಲೆ ನೀರ ಗಾಯಗಳನ್ನ ಮಾಡಿಕೊಂಡ ಬೆಟ್ಟ ನಗುತ್ತಲೇ ನಮ್ಮನ್ನು ಸ್ವಾಗತಿಸಿತು. ಅಸಂಖ್ಯಾತ ಬೇರುಗಳು ಹರಿದಾಡಿದಂತೆ ಹಿಮ ಕೊರೆದ ಗೀರುಗಳು. ದೂರದ ಗ್ಲೇಶಿಯರ್ ನಿಂದ ಬೀಸುವ ಕುಳಿರ್ಗಾಳಿ. ಅಪಾರವಾದ ನಿಲುಕದ ಸೌಂದರ್ಯ ಹೊತ್ತ ತೋಷ ಹಳ್ಳಿಗೆ ಮರುಳಾಗಿ ತುಂಬಾ ಹೊತ್ತು ಹಾಗೇ ನಿಂತೆ. 

ತೋಷ್‌ ಎಂಬ ಗ್ಲೋಬಲ್‌ ಹಳ್ಳಿ!




ಮೊದಲೊಂದು ಹಳ್ಳ ದಾಟಿ ಏರು ದಾರಿ ಏರುತ್ತಾ ಜರ್ಮನ್‌ ಬೇಕರಿ, ಇಸ್ರೇಲಿ ಕೆಫೆ ಇವನ್ನೆಲ್ಲಾ ಬಳಸಿ, ಜಮ್ಲು ಮಂದಿರ ದಾಟಿ, ದೂರದ ಜಲಧಾರೆಯ ಶಬ್ದಕ್ಕೆ ಕಿವಿಯಾಗುತ್ತಾ ರೂಂ ಸೇರಿ ಅಲ್ಲೇ ಕುಳಿತು ಎರಡೆರಡು ಲೋಟ ಕಾಫಿ ಸಮಾರಾದನೆ ನಡೆಸಿ ಮನ ತಣಿಸಿಕೊಂಡೆ. ಸ್ವಲ್ಪ ವಿಶ್ರಾಂತಿ ಪಡೆದು ಊರು ಸುತ್ತಲು ಹೊರಟೆವು. 


  ತೋಷ್ ಪಾರ್ವತಿ ಕಣಿವೆಯ ಕೊನೆಯ ಹಳ್ಳಿ. ಹೈನುಗಾರಿಕೆಯೇ ಪ್ರಧಾನ ಉದ್ಯೋಗ. ಗೋಧೂಳಿಯಲ್ಲಿ ಗಂಟೆ ಬಾರಿಸುತ್ತಾ ಗೋಪಾಲಕರ ಹಿಂಡು ಊರ ಕಡೆ ಹೆಜ್ಜೆ ಹಾಕಿದ್ದವು. ಊರ ನೆತ್ತಿಯಲ್ಲೊಂದು ಹಿಮಟೋಪಿ ಹೊತ್ತ ಶಿಖರವೊಂದು ಫ್ರೇಮ್ ಹಾಕಿಸಿದಂತೆ ಆಕಾಶಕ್ಕೆ ತೂಗು ಬಿದ್ದಿತ್ತು. ಪಾರ್ವತಿ ಕಣಿವೆಯ ತುದಿಯೂರು ಸನಿಹದಲ್ಲೆ ತೋಷ್ ನದಿ ಬೋರ್ಗರೆಯುತ್ತಾ ಪಾರ್ವತಿ ನದಿಗೆ ಸೇರುವ ತವಕದಲ್ಲಿ ಕ್ಷಣಕ್ಷಣಕ್ಕೂ ದೂರದ ಬೃಹತ್ ಹಿಮಗಡ್ಡೆ ಕರಗಿಸಿಕೊಂಡು ತನ್ನೊಡಲು ತುಂಬಿಸಿಕೊಂಡು ಹರಿಯುತಿತ್ತು.

 ತೋಷ್ ನದಿ ಹರಿವಿಗಡ್ಡವಾಗಿ ಇತ್ತೀಚಿಗೆ ಚಿಕ್ಕ ಡ್ಯಾಂ ನಿರ್ಮಿಸಿದ್ದಾರೆ. ಅದರ ಹರಿವೆ ಇಲ್ಲಿನ ಪ್ರತಿ ಮನೆಯ ಬೆಳಕ ಪ್ರಜ್ವಲನೆಗೆ ಕಾರಣ. ಊರ ಹಿರಿಯರು ಬಿಸಲು ಕಾಸಿ ಮೈ ಬೆಚ್ಚಗೆ ಮಾಡಿಕೊಂಡು ಹೊರಡುತ್ತಿದ್ದರು. 

ಊರ ಹೆಬ್ಬಾಗಿಲಿನಲ್ಲಿ




ಊರ ಹೆಬ್ಬಾಗಿಲಿನಲಿ ಕಂಡ ಜರ್ಮನ್ ಬೇಕರಿ ನಮ್ಮನ್ನು ಅಚ್ಚರಿಗೆ ತಳ್ಳಿತು. ಅಲ್ಲಿ ಸಿಗುವ ಬ್ರೆಡ್, ಕ್ರೊಸೊಂಟ್ ಗಳಿಂದ ಸ್ಥಳೀಯ ಆಹಾರದ ಮೇಲೆ ಅಲಾವುದ್ದೀನ್ ಖಿಲ್ಜ್ ಆಕ್ರಮಣ! ಆಹಾರ ದಾಸ್ಯದ ಮುಂದುವರಿಕೆ! ಹೇವರಿಕೆ! Eat local ತತ್ವವೇ ನಮ್ಮ ಪಥವಾದುದರಿಂದ ಸ್ಥಳೀಯ ಆಹಾರಕ್ಕೆ ಪ್ರಥಮ ಪ್ರಾಶಸ್ತ್ಯ. ಈ ಕೊನೆಯ ಹಳ್ಳಿಯಲ್ಲೂ ಜರ್ಮನ್ ಬೇಕರಿ ಕಂಡು ಅಚ್ಚರಿ ಮತ್ತು ವಿಶಾದ ಒಟ್ಟೊಟ್ಟಿಗೆ ಉಂಟಾದವು. ಯಾರದೋ ಬಾಯಿ ಚಪಲವ ತಣಿಸಲು ಎಲ್ಲೆಲ್ಲಿಂದಲೋ ಇಲ್ಲಿಗೆ ಬಂದ ಸಕ್ಕರೆ, ಮೈದಾ ಮಿಶ್ರಿತ ತಿನಿಸುಗಳ ಸಂಗಕ್ಕೆ ಬಿದ್ದ ಸ್ಥಳೀಯರನ್ನು ಮೋಹಗೊಳಿಸುತ್ತಲೇ ಇದೆ. ಇಲ್ಲಿನ ಸ್ಥಳೀಯ ಆಹಾರಕ್ಕಾಗಿ ಹುಡುಕಿದಾಗ ಊರ ಚೌಕದ ಸನಿಹ ಜಮದಗ್ನಿಯ ದೇವಾಲಯದ ದಾರಿಯಲ್ಲಿ ಸ್ಥಳೀಯ ಪುಟ್ಟ ಹೋಟೆಲ್ ಕಣ್ಣಿಗೆ ಬಿತ್ತು. ಕತ್ತಲ ಕವಿದ ರಾತ್ರಿಯಲಿ ಮೇಣದ ದೀಪದ ಬೆಳಕಿನಲಿ ಆತನು ಬಡಿಸಿದ ಪದರ ಪದರವಾದ ಜವೆ ಗೋಧಿಯ ರೊಟ್ಟಿ ಹೊಟ್ಟೆ ಜೊತೆಗೆ ಮನಸ್ಸನ್ನೂ ತಣಿಸಿತ್ತು. ಇಲ್ಲಿಗೆ ಆಗಮಿಸಿದ್ದೇ ಈ ಚಾರಣದ ತಿರು ಬಿಂದು!

ಚಾರಣಿಗರ ಸಂತೆಯಲ್ಲೊಬ್ಬ ಸಂತ




ಈ ಉಪಹಾರ ಗೃಹದಲ್ಲೇ ಪ್ರಾನ್ಸ್ ದೇಶದವನೊಬ್ಬ ಭೇಟಿಯಾದ. ಡೂಡೋ ಆತನ ಹೃಸ್ವ ನಾಮಧೇಯ! ಯಾವುದೇ ಆತಂಕವಿಲ್ಲದೆ ಮನೆ ಮಗನಂತೆ ಉಣ್ಣುತಲಿದ್ದ! ಆತ ತನ್ನ ಸಣ್ಣ ಕತೆಯ ಕರಂಡಿಕೆ ಬಿಚ್ಚಿಟ್ಟಿದ್ದು ಹೀಗೆ.


 "ನಾನು ಡೂಡೋ" (ಪೂರ್ಣ ನಾಮ ಮರೆತಿದ್ದೇನೆ) ಪ್ರಾನ್ಸ್ ದೇಶದವ ತೋಷ್‌ನ ಪ್ರಕೃತಿ ಸೌಂದರ್ಯಕ್ಕೆ ಮರುಳಾಗಿ ಪ್ರತಿವರ್ಷ ಬರುತ್ತಿದ್ದೇನೆ! ನಾನು ನನ್ನ ಅಕ್ಕನ ಜೊತೆ ವಾಸವಾಗಿದ್ದೇನೆ. ಮದುವೆ ಆಗಿಲ್ಲ, ಆಗುವ ಆಸೆಯೂ ಇಲ್ಲ. ಪ್ರಾಯ 50. ನನ್ನ 25ನೆಯ ವರ್ಷಕ್ಕೆ ಅಂದರೆ 2000ನೆಯ ಇಸವಿಗೆ ಇಲ್ಲಿಗೆ ಮೊದಲ ಬಾರಿಗೆ ಬಂದೆ! ಇದು ನನ್ನ 25ನೆಯ ಭೇಟಿ! ಎಂದು ಬೆರಳು ಚೀಪುತ್ತಾ ಊಟ ಮುಗಿಸಿದ. ಆತನ ಈ ಮಾತು ನನ್ನಲ್ಲಿ ಪ್ರಶ್ನೆಗಳ ಮಹಾಪೂರದ ಅಲೆಯನ್ನೇ ಎಬ್ಬಿಸಿತು. ಒಬ್ಬ ವ್ಯಕ್ತಿ ತನ್ನೆಲ್ಲಾ ಕೆಲಸವನ್ನು, ತಿರುಗಾಟವನ್ನು ಬದಿಗಿಟ್ಟು ಬರಬೇಕೆಂದರೆ ಇಲ್ಲಿನ ಅಪೂರ್ವ ಆಕರ್ಷಣೆಯಾದರೂ ಏನು? ಊರವರ ಗೆಳೆತನವೇ? ಮುಕ್ತವಾಗಿ ಸಿಗುವ ಗಾಂಜಾವೇ? ಯಾವುದು ಅವನ ಹಿಡಿದಿಟ್ಟ ಆಸಕ್ತಿಯ ಬಿಂದು? ತಿಳಿಯದಾದೆ. ಮರುದಿನದ ತರುವಾಯ ಕೀರ್‌ಗಂಗಾ ಚಾರಣ ಹಾದಿಯಲ್ಲೂ 12ರ ಸುಮಾರಿಗೆ ಸಿಕ್ಕಿ ಅಚ್ಚರಿಗೆ ತಳ್ಳಿದ್ದ! ಕೇಳುವ ನೂರಾರು ಪ್ರಶ್ನೆಗಳು ನನ್ನಲೇ ಉಳಿದವು. ಎಲ್ಲವನ್ನು ನುಂಗಿಕೊಂಡು ಹೊರಟು ಬಿಟ್ಟೆ! ಊರ ಜಗುಲಿಯಲಿ ಅನೇಕ ಇಸ್ರೇಲಿ ಹೋಟೆಲುಗಳು, ವಿಶಿಷ್ಟ ವಿನ್ಯಾಸದಿಂದ ಕಂಗೊಳಿಸುತ್ತಿದ್ದವು. ಎಲ್ಲಿಯ ಇಸ್ರೇಲ್ ಎಲ್ಲಿಯ ತೋಷ್, ಎಲ್ಲಿಯ ಪಾರ್ವತಿ ಕಣಿವೆ? ಉದಾರಿಕರಣದ ಪದತಲದಲ್ಲಿ ಕಮರಿದ ದೇಸಿ ತಿನಿಸುಗಳ ಲೆಕ್ಕಾವಿಟ್ಟರ‍್ಯಾರು? ನಮ್ಮ ತನವ ಫೋಕೇಸ್ ಮಾಡಲಾಗದ ಮೂರ್ಖರಂತೆ, ಪೆಕರರಂತೆ ಭಾಸವಾದೆವು. 

ಯಾವುದೇ ಹೆಚ್ಚಿನ ಲಗೇಜುಗಳಿಲ್ಲದೇ ಮಣಿಪುರದ ಶಂಗೈ ಹಬ್ಬದಲ್ಲೂ ಇಟಲಿಯ ಪ್ರವಾಸಿಗನೊಬ್ಬ ಸಿಕ್ಕಿದ್ದ. ಅವನಂತೆಯೇ ಈ ಡುಡೋ ಭಾಸವಾಗಿದ್ದ! ಮುರುಕು ಇಂಗ್ಲೀಷ್‌ನಲ್ಲಿ ಮಾತನಾಡಿ ಅವನ ಸ್ನೇಹ ಸಂಪಾದಿಸಿದ್ದೆ. ತನ್ನ ಪೋನ್ ಸಂಖ್ಯೆ ನೀಡಿ ಇಟಲಿಗೂ ಆಹ್ವಾನಿಸಿದ್ದ!

ಒರಟು ಒಳದಾರಿಗೆ ಹೊರಳಿ  





ಸಾಮಾನ್ಯ ಚಾರಣದಂತೆ ಕಂಡರೂ ಇದು ಸಾಮಾನ್ಯ ಚಾರಣವಲ್ಲ. ಎಲ್ಲ ದೊಡ್ಡ ಚಾರಣಗಳ ಹೂರಣ ಹೊತ್ತ ದಾರಿ. ಯಾಮಾರಿದರೆ ಸ್ವರ್ಗಕ್ಕೆ ರಹದಾರಿ! ಇದೊಂದು ಅನನ್ಯ ಚಾರಣ ದಾರಿ. ದಾರಿಯುದ್ದಕ್ಕೂ ಸಿಗುವ ನೂರಾರು ತೊರೆಗಳು, ಫರ್ನ್‌ಗಳು, ಜಲಪಾತಗಳು, ನಕ್ತಾನ್‌, ಕಲ್ಗಾ ಎಂಬ ಹಳ್ಳಿ ಇದನ್ನು ವಿಶಿಷ್ಟ ಚಾರಣವನ್ನಾಗಿಸಿದೆ. ಅಲ್ಲದೇ ಕಳೆದು ಹೋದ ಆ ೧೭೬೮ ಜನ ಚಾರಣಕ್ಕೊಂದು ನಿಗೂಢ ಮೆರಗನ್ನು ನೀಡಿ ಹೋಗಿದ್ದಾರೆ!  

  


ಕೀರ್‌ಗಂಗಾಕೆ ಪ್ರಮುಖ ಎರಡು ದಾರಿಗಳು ಮೊದಲನೆ ಬರ್‌ಶೈನಿಯಿಂದ ವಯಾ ಕಲ್ಗಾ. ಎರಡನೆಯ ದಾರಿ ನಾಕ್‌ತಾನ್‌ ಹಳ್ಳಿಯ ಮೂಲಕ. ನಾಕ್ತಾನ್ ದಾರಿ ಬಲು ಕಠಿಣ. ಹೊಸ ದಾರಿಯ ಹುಡುಕಾಟದಲ್ಲಿರುವವರಿಗಾಗಿ ಕಾದಿರುವ ದಾರಿ ಬುನ್‌ಬುನಿ. ಸ್ವಲ್ಪ ಕಠಿಣವಾದರೂ ಅನ್ವೇಷಣಾ ಅಲೆಮಾರಿಗಳಿಗೆ ಉತ್ತಮ!

  ನಾವು ಆಯ್ಕೆ ಮಾಡಿಕೊಂಡ ದಾರಿ ಬರ್‌ಶೈನಿಯಿಂದ ಕಲ್ಗಾ ಮೂಲಕ ಕಾಡು ಬೀಳುವುದೆಂದು ತೀರ್ಮಾನಿಸಿ ನಾಕ್ತಾನ್‌ ಹಳ್ಳಿ ದಾರಿ ಬಿಟ್ಟೆವು. ಹೇಗೆ ಈ ಊರ ಉಚ್ಚಾರಣೆ ನನಗಿನ್ನೂ ಗೊಂದಲವಿದೆ.





  ಬರ್‌ಶೈನಿಯಲ್ಲೇ ಚಾರಣಿಗರ ಸಂತೆ ನೆರೆದಿತ್ತು. ತಲೆಗೊಂದು ಸಾವಿರವಿತ್ತು. ಅಲ್ಲೊಬ್ಬ ದಾಂಡಿಗನತಹ ಗೈಡ್‌ನೊಂದಿಗೆ ಸನಿಹದ ಬರಶೈನಿ ಡ್ಯಾಂ ದಾಟಿ ಕೀರ್‌ಗಂಗಾ ದಾರಿಗಡಿ ಇಟ್ಟೆವು.

 ಕೀರ್‌ಗಂಗಾದ ದಾರಿ ಓಕ್ ಮತ್ತು ಮ್ಯಾಪಲ್ ಮರಗಳ ದಟ್ಟಣಿಯ ನಡುವೆ ಕಾಲು ಹಾದಿ ಜಾಗ ಮಾಡಿಕೊಂಡು ನುಸುಳಿ ಹೊರಟಿತ್ತು. ಕಡು ನೀಲ ಹಕ್ಕಿಯೆಂದು ನನಗೆ ಕೀರ್‌ಗಂಗಾ ಚಾರಣಕ್ಕೆ ಸ್ವಾಗತವೆಂದುಸುರಿ ನಭಕ್ಕೆ ಹಾರಿತು. ಅದರ ಹತ್ತಾರು ಚಿತ್ರ ನನ್ನ ಕ್ಯಾಮರಾದಲ್ಲಿ ದಾಖಲಾಯಿತು. ಹತ್ತು ಹೆಜ್ಜೆ ಹಾಕುತ್ತಲೆ ಚಾರಣದಾರಿ ಗಡ್ಡವಾಗಿ ಹರಿವ ತೊರೆಯನು ಹರ ಸಾಹಸಗೈದು ದಾಟಿದೆವು. ನಮ್ಮ ಸಾಹಸ ಪರೀಕ್ಷೆ ಮಾಡಲು ಕೇವಲ ಒಂದೇ ಒಂದು ತುಂಡು ಮರವನ್ನು ದಾರಿಗಡ್ಡವಾಗಿ ಹಾಕಲಾಗಿತ್ತು. ಇವೆಲ್ಲವು ಬರ್‌ಶೈನಿಯ ಬೃಹತ್ ಅಣೆಕಟ್ಟಿಗೆ ನೀರೂಡುವ ಪುಟಾಣಿ ಸ್ತನಗಳು. 


ತೋಷ್‌ಗೆ, ಬರಶೈನಿಗೆ ಬೆಳಕು ಚೆಲ್ಲುವ ಪುಟಾಣಿ ಡ್ಯಾಂ ಕರಗಿದ ಹಿಮಗಡ್ಡೆಗಳಿಂದ ವಿದ್ಯುತ್ ಉತ್ಪಾದಿಸುತ್ತಲೇ ಇದೆ. ಮಾನವ ಅಭೀಪ್ಸೆಗೆ ಬೆಲೆ ತೆತ್ತುತ್ತಲೇ ಇದೆ. 2025ರ ಮಹಾ ಮಳೆಯೊಂದು ರಾತ್ರೋರಾತ್ರಿ ಪಾರ್ವತಿಕೊಳ್ಳದ ಊರನ್ನು ನದಿಗುಂಟ ಕೊಚ್ಚಿ ಸಾಗಿಸಿದೆ ಎಂಬ ಸುದ್ದಿ ತಿಳಿಯುತ್ತಲೇ ಖಿನ್ನನಾದೆ. ಅಂತಹ ಜಲಪ್ರಳಯಕ್ಕೆ ಈ ಊರುಗಳು ಸಾಕ್ಷಿಯಾಗಬೇಕಾಗಿದ್ದು, ದುರಾದೃಷ್ಣ.





 ದಾರಿಯುದ್ದಕ್ಕೂ 3-4 ಜಲಪಾತಗಳು ಬಳುಕುತ್ತಾ ಹರಿಯುವವು. ಒಂದು ಜಲಪಾತದಲ್ಲಂತೂ 3-4 ಜನ ತಮ್ಮ ಪ್ರಾಣ ಕಳಕೊಂಡಿದ್ದರು! ಅವುಗಳಿಗೆ ಅವರ ಹೆಸರನ್ನೇ ಇರಿಸಲಾಗಿತ್ತು. ಭೀಕರತೆಯಿಂದ ಹರಿವ ನಡು ಚಾರಣದ ನಡುವೆ ಸಿಗುವ ಹೆಸರೇ ಇಲ್ಲದ ಜಲಪಾತವೂ ಒಂದು. ಇಲ್ಲಿ ದಣಿವಾರಿಸಿಕೊಳ್ಳಲು ಹಲವು ಕೆಫೆಗಳಿಗೆ. ಝಳು ಝಳು ಹರಿವ ತೊರೆಗೆ ಕಾಲಿಟ್ಟು ಕಾಫಿ ಹೀರಿ ಚಾರಣಿಗರನ್ನು ನೋಡುತ್ತಾ ಕೂರುವುದು ವಿಶೇಷ ಅನುಭವ! ಸನಿಹ ದೂರಿನ ಹಲವು ನಾಯಿಗಳು ನಮ್ಮನ್ನು ಹಿಂಬಾಲಿಸಿ ಇಲ್ಲಿ ಬಿಸಿಲ ಹೀರುತ್ತಾ ಕುಳಿತವು. 



ಹೆಸರಿಸದ ಜಲಪಾತ ದಾಟುತ್ತಲೇ ದಾರಿ ಏರು ಮುಖವಾಗಿತ್ತು. ಏರು ಇಳಿಯ ದಾರಿಗಳ ದಾಟಿ ಅರ್ಧ ದಾರಿ ಏರಿ ಬಂದಾಗ ಮತ್ತೊಂದು ಜಲಪಾತ ನಿರುಮ್ಮಳವಾಗಿ ಹರಿಯುತಲಿತ್ತು. ದೂರದಿಂದೊಂದು ಜಲಧಾರೆ ಈ ಜಲಧಾರೆಗೆ ಬಂದು ಸೇರಿತ್ತು. ಇಲ್ಲಿ ತಂಗಲು ವ್ಯವಸ್ಥೆ ಸಹ ಇದೆ. ನಮ್ಮ ಗುರಿ ಕೀರ್‌ಗಂಗಾವಾದುದರಿಂದ ಕಾಲು ತೋಯಿಸಿ ಹರಿವ ನೀರ ಜೋಗುಳವನು ಆಲಿಸಿ ಕಾಫಿ ಹೀರಿ, ಹೊಟ್ಟೆ ಪೂಜೆ ಮಾಡಿ ಹೊರಟು ಬಿಟ್ಟೆವು.

ಕಾಡ ಗರ್ಭದಲ್ಲಿ


 ಕಾಡಗರ್ಭಕ್ಕಿಳಿದಂತೆ ಧಾರೆ ಮತ್ತು ಮಸ್ಕ್ ಜಿಂಕೆಗಳು ಉಜ್ಜಿ ಹೋದ ಮರಗಳು ಅವುಗಳ ಇರುವಿಕೆಯ ಸಾಕ್ಷಿ ನುಡಿಯುತ್ತಿತ್ತು. ಮುಂದಿನ ಕಠಿಣ ಏರುದಾರಿಗಳ ಏರಲು ಅಲ್ಲಲ್ಲಿ ಕಬ್ಬಿಣದ ಸಲಾಖೆ ನೆಟ್ಟಿದ್ದರು. ಒಂದೆರಡು ಜಲಪಾತಗಳ ರುದ್ರ ಭೀಕರತೆ ಕಂಡು ಬೆರಗಾದೆನು. ಒಂದು ಜಲಪಾತದಲ್ಲಂತೂ ಇತಿಂಥವರು ಸತ್ತಿದ್ದಾರೆಂದು ಗಿಡಗಳ ಕೊಂಬೆಗಳಿಗೆ ಬೋರ್ಡು ನೇತು ಹಾಕಿದ್ದರು.




ಕಾಡ ಗರ್ಭ ಹೊಕ್ಕು ಹೊರಟು ನಿಂತಾಗ ದಾರಿಯುದ್ದಕ್ಕೂ ಒರಟು ಕಲ್ಲುಗಳ ಪತ್ತೆದಾರಿಕೆ. ಓಕ್ ಮರಗಳ ಎಲೆಗಳು ದಾರಿಯ ಜಾರುವಿಕೆಯಲ್ಲಿ ಮತ್ತಷ್ಟು ತೀವ್ರಗೊಳಿಸಿ ಜಿಡುಕಾಗಿಸಿತ್ತು. ಅಲ್ಲಲ್ಲಿ ಸಿಗುವ ಸಣ್ಣ ತೊರೆಗಳ ಬಳಸಿ ದಾಟುವಾಗಲೇ ಆಕಾಶ ಬಿಕ್ಕ ತೊಡಗಿತು. ಚಳಿಯಲ್ಲಿ ನಡುಗುತ್ತಾ ಪೋಂಚೋ ಹಾಕಿ ಯಾವುದೇ ಭಯವಿಲ್ಲದೇ ದಾಟಿಕೊಂಡದ್ದು ನೆನೆದರೆ ಬೆನ್ನು ಹುರಿಯಲ್ಲಿ ಸಣ್ಣ ನಡುಕ. ಕೆಲವೆಡೆ ಜಾರುವ ಬಂಡೆಗಳ ಮೇಲೆ ಕಪ್ಪೆ ಹಿಡಿದಂತೆ ಬಂಡೆ ಹಿಡಿದು ನೀರ ಝರಿಗಳ ದಾಟಬೇಕು.







 ನಡು ದಾರಿಗೊಂದು ಚಂದದ ಜಲಪಾತ. ಜಲಪಾತದ ಹಾದಿಯಲ್ಲೇ ಟೇಬಲ್ ಕುರ್ಚಿ ಜೋಡಿಸಿದ ಚಿಕ್ಕ ಮ್ಯಾಗಿ ಪಾಯಿಂಟ್. ಇಲ್ಲಿಂದ ಪ್ರಪಾತದ ಸನಿಹವೇ ಬಳಸು ದಾರಿಯೊಂದು ಕೀರ್‌ಗಂಗಾದತ್ತ ಪ್ರಯಾಣ ಬೆಳೆಸುತ್ತದೆ. ಅರಣ್ಯ ಇಲಾಖೆ ಇಲ್ಲಿ ಪ್ರಯಾಣಿಕರ ನೋಂದಣಿ ಮಾಡಿಕೊಳ್ಳುತ್ತದೆ. ನಡು ಮಧ್ಯಾಹ್ನ ದಾಟಿದ್ದರಿಂದ ಇಲ್ಲಿ ಚಿಕ್ಕ ಉಪಹಾರ ಸೇವಿಸಿ ಜಲಪಾತದಲ್ಲಿ ಕಾಲು ತೋಯಿಸಿ ಹೊರಟೆವು. ಸರಿಸುಮಾರು 5 ಗಂಟೆ ಹೊತ್ತಿಗೆ ಕೀರ್‌ಗಂಗಾದ ನೆತ್ತಿಯಲ್ಲಿದ್ದೆವು.




 ನೂರಾರು ಕ್ಯಾಂಪ್‌ಗಳು ಚಾರಣಿಗರಿಗಾಗಿ ಇಲ್ಲಿ ಹಾಕಲಾಗಿದೆ. ಹಣ್ಣಿನ ರಸ ಒಂದನು ಹೀರಿ ಕೀರ್‌ಗಂಗಾದ ಬಿಸಿ ನೀರಿನ ಬುಗ್ಗೆಗೆ ಲಗ್ಗೆ ಇಟ್ಟೆವು. ಚಾರಣದ ಆಯಾಸವನ್ನೆಲ್ಲಾ ಒಂದು ಚಿಕ್ಕ ಸ್ನಾನ ತೊಳೆದು ಹಾಕಿತು. ಪ್ರತಿ ಹನಿಯಲ್ಲೂ ಹರಿದು ಬರುವ ಹಾಲಿನ ಕೆನೆಯಂತಹ ಸಣ್ಣ ಕಣ! ಕ್ಷಣ ಕ್ಷಣವೂ ಉಕ್ಕುಕ್ಕಿ ಹರಿವ ಬಿಸಿ ನೀರು! ತಣ್ಣಗಿನ ವಾತಾವರಣದಲ್ಲಿ ಮೈ ತಾಗಿಸಿದರೆ ಸುಟ್ಟು ಹೋಗುವಷ್ಟು ಬಿಸಿನೀರು ಚಾರಣದ ಆಯಾಸ ತೊಡೆದು ಹಾಕಲು ಮನಸೊ ಇಚ್ಚೆ ಮಿಂದು ಮುಳುಗುವ ಸೂರ‍್ಯನಿಗೆ ಮುಖ ಮಾಡಿ ಕುಳಿತೆವು. ಬೃಹತ್ ಬೆಟ್ಟವೊಂದರ ನೆತ್ತಿಯಿಂದ ಹರಿವ ಬಿಸಿನೀರೇ ಒಂದು ಕೌತುಕ. ಬೇಸಿಗೆ ಪೂರ್ಣ ಬಿಸಿನೀರ ಔತಣ ಉಣ ಬಡಿಸುತ್ತದೆ. ಡಿಸೆಂಬರ್‌ನಿಂದ ಮಾರ್ಚ್ವರೆಗೆ ಬಿಸಿನೀರ ಬುಗ್ಗೆಗೆ ಬಿಡುವು! ಹಿಮ ಕಟ್ಟಿ ನೀರ ಹರಿವು ನಿಲ್ಲುತ್ತದೆ. ಮೊದ ಮೊದಲು ಈ ಬಿಸಿನೀರನ್ನು ಕೊಳವೊಂದಕ್ಕೆ ಹಾಯಿಸಲಾಗುತ್ತಿತ್ತು. ಆದರೆ ಈಗ ಕೇವಲ ಸಣ್ಣ ನಲ್ಲಿಯಂತಹುದನು ಮಾಡಿ ಸ್ನಾನ ಮಾಡಬೇಕಾದ ಅನಿವಾರ್ಯತೆ! ಸನಿಹದ ಶಿವ ಮತ್ತು ಕಾರ್ತಿಕೆಯನ ಗುಹಾ ದರ್ಶನ ಮಾಡಿ ರಾತ್ರಿಯ ಆಕಾಶಗಂಗೆಗಾಗಿ ಕಾದು ಕುಳಿತೆವು.

ಮ್ಯಾಗಿ ಮತ್ತು ಮಿಲ್ಕೀವೇ




  ಬಿಸಿ ಬಿಸಿಯಾಗಿ ಹರಿವ ಚಿಲುಮೆಯಲಿ ಮಿಂದು, ಮ್ಯಾಗಿ ತಿಂದು ಮಿಲ್ಕೀವೇ ಕಾಣುವ ಕನಸಿಗೆ ಕಾತರಿಸಿದೆವು. ಚಳಿಯಾಗದಿರಲೆಂದು ಬೆಟ್ಟಗಳೆಲ್ಲಾ ಹಿಮ ಟೋಪಿ ಹೊದ್ದು ಕುಳಿತಿದ್ದವು. ಸುಂದರವಾದ ಸಂಜೆ 3000 ಮೀ ಎತ್ತರದಲ್ಲಿ ಸಾಕ್ಷಿಯಾಯಿತು! ರಾತ್ರಿಯಾಗುತ್ತಲೇ ನಮ್ಮ `ಓಂ ಶಾಂತಿ' ಟೆಂಟ್‌ನ ಬಾಣಸಿಗ ಬಡಿಸಿದ ದಾಲ್ ಖಿಚಿಡಿ, ಪನ್ನೀರ್ ಗ್ರೇವಿ, ಸಲಾಡ್ ನಮ್ಮ ರುಚಿಮೊಗ್ಗುಗಳನ್ನು ಬಡಿದೆಬ್ಬಿಸಿತ್ತು! ಬದುಕಿನ ಅತ್ಯುತ್ತಮ ಊಟವೊಂದು ದಾಖಲಾಯಿತು. ಕಾಲು ಸರಿಯಿಲ್ಲದ ಬಾಣಸಿಗನೊಬ್ಬ ಕಷ್ಟಪಟ್ಟು ಮೇಲೇರಿ ಬಂದು ಅಡುಗೆ ಮಾಡಿದ್ದ. ಆತನ ಬದುಕಿನ ಕಷ್ಟಗಳು ಏನಿದ್ದವೋ? ಸದಾ ಚಡ ಪಡಿಸುತ್ತಲೇ ಇರುತ್ತಿದ್ದ. ಹಿಮಾಚಲ, ಮೇಘಾಲಯದಲ್ಲಿ ಹಬ್ಬುತ್ತಿರುವ ಗಾಂಜಾ ವಾಸನೆ ಇಲ್ಲಿ ನನ್ನ ಮೂಗಿಗೂ ಬಡಿದಿತ್ತು!! ರಾತ್ರಿಯಾಗುತ್ತಲೇ ಆಗಸದ ಬೀದಿಯಲ್ಲಿ ತಾರಾ ಮೆರವಣಿಗೆ. ಎಲ್ಲೂ ಜಾಗವಿಲ್ಲದಂತೆ ಹಾಸಿದ್ದ ನಕ್ಷತ್ರ ಚಾಪೆ! ಕೌತುಕಮಯ ನೀಲಾಕಾಶ. ನಮ್ಮಲ್ಲಿ ಒಂದೆರಡು ತಾರಾ ದರ್ಶನವಷ್ಟೇ ಅಲ್ಲಿನ ಆಕಾಶವೇ ಬೇರೆ ಎಂಬಂತೆ ಭಾಸ.

ಕೊನೆಯ ಮತ್ತು

 ನಕ್ತಾನ ದಾರಿಯಲ್ಲಿ ಇಳಿಯುವ ಮನಸ್ಸಾದರೂ ದಾರಿತಪ್ಪುವ ಭಯದಲ್ಲಿ ಕುಲ್ಗಾದ ಅದೇ ದಾರಿ ಹಿಡಿದೆವು. ತೀವ್ರ ಕಡಿದಾದ ಮೂರು ಕಿಲೋಮೀಟರ್ ಇಳಿದಿದ್ದೇವಷ್ಟೇ ಆಗಷ್ಟೇ ಸೂರ‍್ಯ ಕಣ್ಣು ಒಡೆದಿದ್ದ. ಇಳಿವ ಧಾವಂತದ ನಡುವೆ ಕಾರ್ತಿಕೇಯ ಗುಹೆ ಹೊಕ್ಕು ಕತೆಗಳಿಗೆ ಆವಿಯಾದೆ. ನಮ್ಮ ದಂಡು ಹೊರಡಲು ತಯಾರಿ ನಡೆಸಿತ್ತು. 

 ಹಳದಿ ಬೆಳಕಲಿ ಮೀಯುತ್ತಾ ಬೆಟ್ಟಗಳ ಬಾಯ್ ಬಾಯ್ ಹೇಳಿದೆ. ಪೈನ್ ಡಿಯೋದಾರ್ ಮರಗಳ ನೆರಳಲ್ಲಿ ಜಾರುತ್ತಾ ನಡೆಯ ಹತ್ತಿದೆವು. ಅರ್ಧ ದಾರಿ ಕ್ರಮಿಸಿದ್ದೆವಷ್ಟೇ ಕೊನೆಯ ಜಲಪಾತದ ನಿಲ್ದಾಣ ಎದುರಾಯಿತು.

ಡೂಡೋ ಎದುರಾಗಿ



 ತೋಷ್ ಊರಿನಲ್ಲಿ ಸಿಕ್ಕ ಸಂತ `ಡೂಡೋ' ಎದುರಾದ. ಒಂದು ಕೋಲು, ಹತ್ತಿ ಜೋಳಿಗೆ ಹಿಡಿದು ಚಾರಣಕ್ಕೆ ಹೊರಟಿದ್ದ! ಆತನೊಂದಿಗೆ ಹರಟಲು ಹಲವು ವಿಷಯಗಳಿದ್ದವು. ಆಗಲೇ ನನ್ನ ಬಿಟ್ಟು ತೆರಳಿದ ಗುಂಪು ಮುಂದಡಿ ಇಟ್ಟಾಗಿತ್ತು. ಕೇವಲ ಸೆಲ್ಫಿಯೊಂದ ಕ್ಲಿಕ್ಕಿಸಿ ಪ್ರಶ್ನೆಯ ದೊಡ್ಡದೊಂದು ಮೂಟೆ ಹೊತ್ತು ಹೊರಟು ಬಿಟ್ಟೆ. ಗೆಳೆಯರ ಗುಂಪು ಬಿಟ್ಟು ಈತನ ಕತೆಗಳಿಗೆ ಕಿವಿಯಾಗಬೇಕಿತ್ತೆಂದು ಈಗ ಪಶ್ಚಾತ್ತಾಪವಾಗುತ್ತಿದ್ದೆ! ಇನ್ನೆಂದರೂ ಇಂತಹ ಅವಕಾಶವೊಂದನು ಮತ್ತೆ ಬಿಡಬಾರದೆಂಬ ಪ್ರತಿಜ್ಞೆಯೊಂದಿಗೆ ಬರಶೈನಿ ಕಡೆಗೆ ಹೆಜ್ಜೆ ಹಾಕಿದೆ.

 ಬರಶೈನಿಯ ಹೋಟೆಲ್‌ನಲ್ಲಿ ಉಂಡ ದಾಲ್‌ ಮಾಕ್ನಿ, ಸಬ್ಜಿ ಊಟದ ಸವಿಯಿನ್ನೂ ನಾಲಿಗೆ ತುದಿಯಲ್ಲಿದೆ. ಮತ್ತೊಮ್ಮೆ ಅಂತಹ ಊಟಕ್ಕಾಗಿ ತಹತಹಿಸುತ್ತಾ ಬರಶೈನಿಗೆ ಬಾಯ್ ಹೇಳುತ್ತಾ ಸೀಸುವಿನ ಅನಂತ ಆಕಾಶವನ್ನು ಅಪ್ಪಲು ಬರಶೈನಿಯಿಂದ ಕಾರು ಹತ್ತಿದೆ!

Sunday, January 25, 2026

ನದಿ ದಾಟಿ ಬಂದವರು


 

ನಾನ್ಯಾವುದೇ ಪುಸ್ತಕವನ್ನು ಒಂದೇ ಗುಕ್ಕಿಗೆ ಓದಿ ಮುಗಿಸುವುದೇ ಕಡಿಮೆ! ಸ್ವಲ್ಪ ಜಿಡುಕಾದರೂ ಎತ್ತಿ ಬದಿಗಿಡುತ್ತೇನೆ. ಇಲ್ಲ ಓದಿನ ಕೊಂಡಿ ಮುರಿದು ಮುಂದಿನ ಪುಸ್ತಕಕ್ಕೆ ಹೆಜ್ಜೆ ಇಡುತ್ತೇನೆ. ಉದಾಹರಣೆಗೆ ಮಾಂಡೋವಿ ಕಾದಂಬರಿ. ಹಾಗೇ ಹಲವು ಪುಸ್ತಕಗಳ ಹೆಸರು ಹೇಳಬಲ್ಲೆ.  ಆದರೆ ಇದೊಂದು ಪುಸ್ತಕ ಸಲೀಸಾಗಿ ಓದಿಸಿಕೊಂಡು ಕೊನೆ ಪುಟಕ್ಕೆ ಬಂದಿದ್ದೇ ತಿಳಿಯಲಿಲ್ಲ. ಕೊನೆಯ ಹತ್ತು ಪುಟ ಮಾತ್ರ ಕಣ್ಣು ನೋವಿನ ಕಾರಣವಾಗಿ ಓದಲು ಎರಡು ದಿನ ತೆಗೆದುಕೊಂಡೆ. 

ಲೋಕಾಭಿರಾಮದ ಮಾತುಕತೆ

ಕುಂದಾಪುರ ಕಡೆಯ ಕತೆಯನ್ನು ಇಷ್ಟು ಸಶಕ್ತವಾಗಿ ವಿವರಿಸಿದ ಇತ್ತೀಚಿನ ಕಾದಂಬರಿಗಳಲ್ಲಿ ಸೂಡಿ ಮತ್ತು ನದಿದಾಟಿ ಬಂದವರು ಪ್ರಮುಖವಾಗಿ ನಿಲ್ಲುತ್ತದೆ. ಸ್ವಲ್ಪವೇ ಸ್ವಲ್ಪ ಶಿವರಾಮ ಕಾರಂತರ ಶೈಲಿಯನ್ನು ಹೋಲುತ್ತದೆ.  ಅತ್ಯಂತ ಸರಳವಾಗಿ ಕಥೆ ಹೆಣೆಯುವ ಕಸುಬು ದಾರಿಗೆ ಇವರಿಗೆ ಸಿದ್ಧಿಸಿದೆ. ಯಾವುದೇ ರೀತಿಯ ಮಸಾಲೆ ಇನ್ನು ಬೆರೆಸದೆ ಸರಳವಾಗಿ ಕಥೆಯನ್ನು ಹೆಣದಿದ್ದಾರೆ.

 ನಿರ್ಲಿಪ್ತ ಕಥನಗಾರಿಕೆ

ಕತೆಯಿಂದ ಬೇರ್ಪಟ್ಟು ನಿಶ್ಪಕ್ಷಪಾತವಾಗಿ ದೂರನಿಂತು ಕತೆಗಾರರು ಕತೆ ಹೇಳುತ್ತಾ ಹೋಗುತ್ತಾರೆ. ಕತೆಯ ಎಡೆಗಿನ ಅವರ ನಿರ್ಲಿಪ್ತ ದೋರಣೆ ಅಚ್ಚರಿಯಾಗಿ ಎದ್ದು ಕಾಣುತ್ತದೆ. 

ಕತೆಯು ಕುಂದಾಪುರ ಕಡೆಯ ಹಿಂದುಳಿದ ಜನಾಂಗ, ಮಧ್ಯಮ ವರ್ಗ ಹಾಗೂ ಜಮೀನುದಾರರ  ಬದುಕಿನ ಚಿತ್ರಣದ ಜೊತೆಗೆ ಸ್ವಾತಂತ್ರ್ಯೋತ್ತರದ ಪಲ್ಲಟಗಳನ್ನು ನಿರ್ಲಿಪ್ತರಾಗಿ ಪ್ರತಿಬಿಂಂಬಿಸುತ್ತಾ ಸಾಗುತ್ತದೆ. ಅಂದಿನ ಬದುಕಿನ ಅನನ್ಯ ಚಿತ್ರಣ  ಚಿತ್ರಿಸುತ್ತಾ ಎಲ್ಲಿಯೂ ದೀರ್ಘವೆನಿಸದೇ ಸಾಗುತ್ತದೆ. ಗೆಳೆಯನೊಂದಿಗೆ ಕಲ್ಲು ಬೆಂಚಿನ ಮೇಲೆ ಕುಳಿತು ಮಾತನಾಡಿದಂತೆ.

ಊರ ಪಟೇಲನ ಹಳವಂಡಗಳಾಗಲಿ, ಕೃಷ್ಣಯ್ಯನ ರಸಿಕತೆಯನ್ನಾಗಲಿ, ಹಯವದನ ಭಟ್ಟರು ಪೆಟ್ಟು ತಿನ್ನುವ ಪ್ರಸಂಗವಾಗಲಿ, ಸಾಕಮ್ಮ ಊರು ತೊರೆಯುವ ಕ್ಷಣ ಇವೆಲ್ಲವನ್ನೂ ಹೆಚ್ಚಿನ ನಾಟಕೀಯತೆ ಬಳಸದೇ ಸರಳವಾಗಿ ನಿರೂಪಿಸಿದ್ದಾರೆ. ಕತೆಗಾರರ ವ್ಯಕ್ತಿತ್ವವೇ ಈ ಪುಸ್ತಕದಲ್ಲಿ ಅನಾವರಣಗೊಂಡಿದೆ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಪಾತ್ರ ಪೋಷಣೆಯಲ್ಲಾಗಲೀ ವಿವರಣೆಯಲ್ಲಾಗಲಿ ಎಲ್ಲೂ ಎಳೆಯದೇ ಅಚ್ಚುಕಟ್ಟುತನ ಎದ್ದು ಕಾಣುತ್ತದೆ. ಪ್ರತೀ ಪಾತ್ರದೊಂದಿಗೂ ಒಂದು ಅಂತರವನ್ನು ಕತೆಗಾರರು ಕಾಯ್ದಕೊಂಡಿದ್ದಾರೆ! ಜೊತೆ ಜೊತೆಗೆ ಸರಿ ತಪ್ಪುಗಳ ತೀರ್ಮಾನ ಕೊಡದೇ ಇಂತಹ ಕತೆ ಹೆಣೆಯುವುದು ಬಹಳ ಕಷ್ಟ. ಇವೆಲ್ಲವನ್ನು ಮೀರುತ್ತಾ  ತಾಜಾ ಕತೆಯೊಂದನ್ನು ಉಣಬಡಿಸಿದ್ದಾರೆ.

ಇದೆಲ್ಲದಕ್ಕಿಂತ ಪ್ರಮುಖವಾದುದು ನದಿದಾಟಿ ಬಂದವರು ಎಂಬುದು ಅತ್ಯಂತ ಸುಂದರ ರೂಪಕ.  ನಾವು ದಾಟಿ ಬರಬೇಕಾದ ನದಿ ಯಾವುದೆಂದು ನಾವೇ ನಿರ್ಧರಿಸಬೇಕು.

ಕಾಲದೋಣಿಯಲ್ಲಿ ಮತ್ತೆ ಪಯಣ ಮಾಡ ಬಯಸುವ ರಸಿಕರು ಸ್ವಾತಂತ್ರ್ಯೋತ್ತರ ಸ್ಥಿತ್ಯಂತರವನ್ನು ಅಧ್ಯಯನ ಮಾಡಬಯಸುವವರು ಓದಲೇ ಬೇಕಾದ ಹೊತ್ತಿಗೆ ನದಿದಾಟಿ ಬಂದವರು.

ಇವರು ಆಯ್ಕೆ ಮಾಡಿಕೊಂಡ ಮೂರೂ ಕಾದಂಬರಿಗಳ ವಸ್ತು ವಿಭಿನ್ನ. ಹಾಗಾಗಿ ಶಶಿಧರ್ ಹಾಲಾಡಿ ಅವರಿಂದ ಇನ್ನೂ ಹೆಚ್ಚಿನ ಕೃತಿಗಳನ್ನು ವೈಯಕ್ತಿಕವಾಗಿ ನಿರೀಕ್ಷೆ ಮಾಡುತ್ತೇನೆ.


Wednesday, January 14, 2026

ತಿಲಮಿಟ್ಟಿಯ ತೀರದಲಿ

 


ಭಾವುಟ ಹೊತ್ತ ಯಾವುದೋ ದೋಣಿ ಕಾರವಾರದ ದಡವ ತಡುವಲು ದೂರದಲಿ ಬರುತಲಿತ್ತು. ದಂಪತಿಗಳಿಬ್ಬರ ಜೊತೆ  ಇನ್ನಿಬ್ಬರು ಸೇರಿ ಮತ್ತೊಂದು ದೋಣಿಯ ದಡಕ್ಕೆ ಎಳೆಯುತ್ತಿದ್ದರು.  ಮತ್ತಿಬ್ಬರು ಬೆಳಗಿನ ಮೀನು ಶಿಖಾರಿಗೆ ಬಲೆ ಸರಿಪಡಿಸುತ್ತಿದ್ದರು. ಮರಳ ಮೇಲೆ ಚೆಲ್ಲಿದ ಹಳದಿ ಬೆಳಕು. ಸಮುದ್ರದ ನೀಲಿ ಕುಡಿದು ಕುಡಿ ಒಡೆದ ಆಕಾಶ. ಗಾಳಿ ತೆಕ್ಕೆಗೆ ಸೇರಿದ  ತೆಂಗಿನ ಗರಿಗಳ ಓಲಾಟದ ನಡುವೆ ಹರಿದ ನೇರ ರಸ್ತೆ. ಕಾರೊಳಗೆ ನುಗ್ಗುವ ಕಡಲ್ಗಾಳಿ. ಹಾರುವ ಮರಳಿನ ಕಣ. ಸೂರ್ಯನಾಗಲೇ ದಿನವಿಡೀ ದುಡಿದ ಸುಸ್ತು ಕಳೆಯಲು ಅಂಗಿ ಚಡ್ಡಿ ಕಳಚಿ ಕಡಲಿಗಿಳಿದು ಮೀಯುವ ತಯಾರಿಯಲ್ಲಿದ್ದಿದ್ದ. ಮುಂಬರಿದಾಗ ದೂರದಿಂದಲೇ ಕಣ್ಣಿಗೆ ಬಿದ್ದ ಸಣ್ಣ ಫಲಕ ʻತಿಲಮಿಟ್ಟಿʻ, ನಮ್ಮನ್ನು ಆಕರ್ಷಿಸಿತು. ಏನಿದೆಂದು ಕೇಳಲೂ ಒಬ್ಬರೂ ಸನಿಹದಲ್ಲಿ ಪತ್ತೆಯಿಲ್ಲ. ಒಂದು ಕಿ.ಮೀ ಕಳೆದಾಗ ಸಿಕ್ಕ ಮೀನುಗಾರರ ಮನೆಯಲ್ಲಿ ಏನಿದು ತಿಲಮಿಟ್ಟಿ ಎಂದು ಕೇಳಿದೆವು. ಖಾರ್ವಿ ಕೊಂಕಣಿ, ಮರಾಠಿ ಮಿಶ್ರಿತ ಕನ್ನಡದಲಿ ನಾಚಿಕೆಯಿಂದ ಏನೋ ಉಲಿದಳೊಬ್ಬಳು ತ್ರಿಪುರ ಸುಂದರಿ. ನನಗಂತೂ ಅರ್ಥವಾಗಲಿಲ್ಲ. ಮರಾಠಿ ಬಲ್ಲ  ಗೆಳೆಯನೊಬ್ಬನಿಗೆ ಅಲ್ಪ ಸ್ವಲ್ಪ ಅರ್ಥವಾಗಿ ಕಡಲ ಕಿನಾರೆಯ ತುದಿಗೆ ಕರೆದೊಯ್ದ.  ಕನ್ನಡದ ಅನಂತ ಸಾಧ್ಯತೆಯ ವಿಸ್ತೃತ ಪ್ರಸ್ತುತಿಯೊಂದು ನಮ್ಮೆದುರಿಗೆ ಅನಾವರಣಗೊಂಡು ಹಾಗೋ ಹೀಗೋ ಅರ್ಥೈಸಿ ಕಡಲ ತುದಿಗಿಳಿದಿದ್ದೆವು. ಗುಡ್ಡದಾಟಿ ಆಚೆಗೆ ಹೋಗಬೇಕೆಂಬುದು ಅವಳ ಭಾವವಷ್ಟೇ ನನಗೆ ಅರ್ಥವಾಗಿದ್ದು. ಭಾಷೆಯ ಅನಂತ ಸಾಧ್ಯತೆಯನಿಲ್ಲಿ ಆಕೆ ನಮಗೆ ತೋರಿಸಿಕೊಟ್ಟಿದ್ದಳು. ಅವಳ ಉಚ್ಛಾರ ಎಲ್ಲವೂ ಕನ್ನಡದಂತಿಲ್ಲ. 

ದೂರದೂರದಲ್ಲಿ ನಿಂತ ನಡುಗುಡ್ಡೆಗಳು ನಡುವೆ ಸೂರ್ಯ ನಮ್ಮನ್ನೇ ಅಣಕಿಸುತ್ತಾ ಕಡಲಿಗಿಳಿದಿದ್ದ. ಖಾರ್ವಿ ಹೆಂಗಸು ದಾರಿ ತೋರಿದಲ್ಲಿ ಕುಂಬದಂತಹ ಗುಡ್ಡ ತನ್ನ ನೀಳ ಕಾಲುಗಳನ್ನು ಕಡಲಿಗೆ ಚಾಚಿ ಮಲಗಿತ್ತು. ಮಲಗಿದ ಕುಂಬದಂತಹ ಬಸಾಲ್ಟ್‌ ಶಿಲೆಯ ಗುಡ್ಡವೇರಿ ಆಚೆಗೆ ಹೊರಟೆವು.

ಬಸಾಲ್ಟ್‌ ಬೆಟ್ಟವೇರಿ

ತೆಂಗಿನ ಗರಿಗಳ ನಡುವೆ ಜಾಗ ಮಾಡಿಕೊಂಡು ಮರಾಠಿ ಮಿಶ್ರಿತ ಕೊಂಕಣಿ ಕನ್ನಡದ ದಾರಿ ತೋರಿದೆಡೆಗೆ ಓಡಿ ಕಿನಾರೆಗೆ ಜೋಡಿಸಿದ ಕಿರುದಾರಿಯಲಿ ಸಣ್ಣ ಗುಡ್ಡವೇರಿದೆವು. ಜ್ವಾಲಾಮುಖಿ ಉಗುಳಿನಿಂದಾದ ಕಿರುಗುಡ್ಡ ಕಿನಾರೆಗೆ ತಾಕಿಕೊಂಡಿತ್ತು. ಸೂರ್ಯ ಚೆಲ್ಲಿದ ಪ್ರತಿಫಲಿತ ಬೆಳಕಿನಲ್ಲಿ 20 ನಿಮಿಷದ ಏರು ದಾರಿಯಲಿ ಪಯಣ. ಎಲ್ಲಿಗೆ ಹೋಗುತ್ತಿದ್ದೇವೆ ದಾರಿ ಕೊನೆಗೆ ನಮಗೆ ದಕ್ಕುವುದಾದರೂ ಏನು ಎಂಬ ಕಲ್ಪನೆ ಇಲ್ಲದ ನಿರುದ್ಧೀಶ ನಡಿಗೆ. ದಾರಿ, ಕಿನಾರೆ ಎರಡೂ ಆಹ್ಲಾದಕರ. ಅಲ್ಲಲ್ಲಿ ಕೇಸರಿ ಬಾವುಟ ನೆಟ್ಟು ದೂರದ ದೋಣಿಗಳು ಈ ಕಡೆ ಬರದಂತೆ ಪ್ರತಿಬಂದಿಸಿದ್ದರು. ದೂರದಿಂದಲೇ ಲಂಗರು ಹಾಕಿದ ದೋಣಿಯೊಂದು ಕಂಡಿತು. ಪ್ರವಾಸಿಗರೋ ಇರಬೇಕೆಂದುಕೊಂಡು ಹೆಜ್ಜೆ ಮುಂದಿಟ್ಟೆವು. 

 


ಕರಿ ಕಲ್ಲುಗಳ ನಡುವೆ ಜಾಗ ಮಾಡಿಕೊಂಡು ನಡೆದು ತಲುಪುವ ಧಾವಂತದಲ್ಲಿದ್ದೆವು. ಸುತ್ತಲೂ ಕಲ್ಲು ಕುರುಚಲುಗಳ ನಡುವೆ ತುರುಕಿಟ್ಟಂತಹ ಕೆಂಪು ಮಣ್ಣು. ಮಿಲಿಯಾಂತರ ವರ್ಷಗಳ ಕೆಳಗೆ ಜ್ವಾಲಾಮುಖಿಯಿಂದ ರೂಪುಗೊಂಡ ಕಲ್ಲುಗಳು ಭೂಮಿಯ ವಿವರವನ್ನರಹುತ್ತದೆ. ಇಲ್ಲಿನ ಬಂಡೆಗಳು ಭೂ ಸಂರಚನೆಯ, ಭೂ ಖಂಡಗಳ ಚಲನೆಯ ವಿಸ್ತೃತ ವಿವರದ ಪಟ್ಟಿಯಂತೆ ಸಂಶೋಧಕರಿಗೆ ವಿವರಿಸುತ್ತವೆ. ಬಸಾಲ್ಟ ಶಿಲೆಯ ರೂಪಾಂತರದ ಕತೆಯನ್ನೂ ಅರಹುತ್ತದೆ.

ಕರಿ ಸುಂದರಿಯ ಬೆನ್ನು ಬಿದ್ದು



ಕಾರವಾರ ಮತ್ತು ಗೋವಾದ ಕಿನಾರೆಯಲ್ಲಿ ಅಡ್ಡಾಡುತ್ತಿದ್ದಾಗ ಕಂಡ ಬೋರ್ಡಿನೆಡೆಗೆ ಸೆಳದ ವಿಚಿತ್ರ ಸೆಳೆತ ಇಲ್ಲಿಗೆ ಎಳೆದುಕೊಂಡು ಬಂದಿತ್ತು. ಕಾರವಾರದ ಟ್ಯಾಗೋರ್ ಬೀಚಿನಿಂದ ಕೇವಲ 20 ನಿಮಿಷದ ಹಾದಿ!


ಬೆಟ್ಟವಿಳಿಯುತ್ತಲೇ ಅಲ್ಲಿಬ್ಬರು ದಂಪತಿಗಳು ಕಾಣಸಿಕ್ಕರು. ಪ್ರವಾಸಿಗರಿರಬೇಕೆಂದು ಕೊಂಡೆ. ಸನಿಹ ಬರುತ್ತಲೇ ಸಂಜೆ ಮೀನುಗಾರಿಕೆ ಮಾಡಿ ಮರಳಿದ ಮೀನುಗಾರರೆಂದು ತಿಳಿಯಿತು. ಆಕೆ, ಆತ ಮತ್ತು ಕಡಲಷ್ಟೇ ಅಲ್ಲಿ. ಅವರ ನಡುವೆ ಅನೂಹ್ಯ ಮಾತುಕತೆಯೊಂದು ನಿರ್ಲಿಪ್ತ ಏಕಾಂತದ ಆ ಘಳಿಗೆಯಲಿ ಅಲ್ಲಿ ನಡೆಯುತ್ತಲಿತ್ತು. ಅಲೆಗಳ ಮೊರೆತ. ಮೌನವೂ ಸಹಾ ಸಹಜ ಮಾತಂತೆ ಭಾಸ. ಮಹಾ ಧ್ಯಾನದಂತೆ ಮೀನನ್ನು ಬಲೆಯಿಂದ ಬಿಡಿಸುತ್ತಾ ಇರುವ ಇವರು ಬದುಕಿನ ಸಿಕ್ಕು ಬಿಡಿಸುವವರಂತೆ ಕಂಡರು! ಮರಾಠಿ ಮಿಶ್ರಿತ ಕೊಂಕಣಿಯಲ್ಲಿ ಏನೋ ಮಾತನಾಡುತ್ತಿದ್ದರು.


ದಂಡೆಗೆ ಬಡಿ ಬಡಿದು ತಮ್ಮನ್ನು ಮಾತಾಡಿಸಲೋ ಎಂಬಂತೆ ಬಂದು ಹೋಗುತ್ತಿದ್ದ ಅಲೆಗಳ ಮುತ್ತಿಗೆ ವಿಚಲಿತರಾಗದೆ ಮೀನು ಬಿಡಿಸುವುದರಲ್ಲೇ ತಲ್ಲೀನ. ಮೂರು ಮತ್ತೊಂದು ಮೀನು ಬಿಡಿಸುತ್ತಾ ಬದುಕಿನ ಸಿಕ್ಕುಗಳಲ್ಲಿ ಸಿಕ್ಕಿ ಹಾಕಿಕೊಂಡಂತೆನಿಸಿ ವಿಷಾದ ಕಾಡಿತು.

ಅಚಾನಕ್‌ ಆಗಿ ಸಿಕ್ಕ ಕರಿ ಸುಂದರಿ

ಸಹಸ್ರ ಮಾನದಿಂದ ಬೇಸರಿಸದೇ ಬಡಿದ ಅಲೆಗಳು ಕರಿ ಬಂಡೆಗಳನ್ನು ಗೀಚುತ್ತಾ ತನ್ನೊಲವ ತೋರುತ್ತಾ ಬಂಡೆಗಳನ್ನು ಖಾಲಿ ಮಾಡುತಲಿದ್ದವು!  ಹೊಸತೊಂದನು ಸಾಧ್ಯವಾಗಿಸುತಲಿದ್ದವು. ತಿಲಮಿಟ್ಟಿಯು ಕರಿ ಮುರುಳ ಕಿನಾರೆಗೆ ಬಡಿದ ಅಲೆಗಳಿಂದ ಸೃಷ್ಟಿಯಾಗಿತ್ತು. ಕರಿ ಮರಳ ಕಿನಾರೆಯ ಗುಟ್ಟದು! ತಿಲ ಎಂದರೆ ಎಳ್ಳು ಮಿಟ್ಟಿ ಎಂದರೆ ಮಣ್ಣು. ತಿಲಮಿಟ್ಟಿ ಎಂದರೆ ಕರಿ ಮಣ್ಣ ಕಿನಾರೆ. ಯಾವ ಅಲಂಕಾರ ಎಂದು ಮಾತ್ರ ಕೇಳಬೇಡಿ! 



ಭಾರತದಲ್ಲಿ ಒಟ್ಟು ೧೦ ಕರಿ ಮಣ್ಣ ಕಿನಾರೆಗಳಿವೆ. ಅವುಗಳಲ್ಲಿ ತಿಲ ಮಿಟ್ಟಿಯು ಒಂದು. ಅನನ್ಯವಾದ ಕರ್ನಾಟಕದ ಕರಿ ಮರಳ ಕಿನಾರೆಯಾಗಿ ಕಂಗೊಳಿಸುತಲಿದೆ. ಇದು ಜ್ವಾಲಾಮುಖಿ ಸ್ಪೋಟದಿಂದಾದ ಬಸಾಲ್ಟ್‌ ಶಿಲೆ ಕರಗಿ ಉಂಟಾದ ಕಿನಾರೆಯಾಗಿದೆ. ಕಿನಾರೆಯ ಸುತ್ತಲೂ ಬಸಾಲ್ಟ್‌ ಶಿಲೆಗಳದೇ ಕಾರುಬಾರು.

ಅಲೆ ಎಂಬ ಒಲವ ದೋಣಿ ಏರಿ



ಇನ್ನೊಬ್ಬರಿಗಾಗಿ ತಾನು ಖಾಲಿಯಾಗುವುದೇ ಒಲವಲ್ಲವೇ?  ಈ ಜಗದ ಜಗುಲಿಯಲಿ ಅದು ಸಾಧ್ಯವೇ? ಎಂಬ ಪ್ರಶ್ನೆಯೊಂದು ನನ್ನ ಮನಪಟಲದಲ್ಲಿ ಎದ್ದಿತು.  ಹೊಸತೊಂದನು ಸೃಷ್ಟಿಸಲು ಸವೆಯದೇ ಬೇರೆ ವಿಧಿಯಿಲ್ಲ ಎಂದು ಸಾರಿ ಸಾರಿ ಹೇಳುತಲಿದೆ ಎನಿಸುತ್ತಿತ್ತು. ಸವಕಲಾಗುವುದರಲ್ಲೂ ಸಂತೋಷವಿದೆ ಎಂಬ ಭಾವ ಉಕ್ಕುಕ್ಕಿ ತೆರೆಯಂತೆ ಮನದ ಕಡಲಿಗಪ್ಪಳಿಸುತ್ತಲೇ ಇದೆ. ತಿಲ ಮಿಟ್ಟಿಯ ನೆನಪಿನಂತೆ. 

ಅವನ ಕಣ್ಣ ಪಾಪಿಯಲ್ಲಿನ ಸೂರ್ಯ ಕಂತುತಲಿದ್ದ. ಭವದ ಬವಣೆ ತೀರಿಸಿತೇ ಕಡಲು. ಬೆಲೆಯೇ ಇಲ್ಲದ ಮೀನುಗಳ ಸಂಗಡ ಮೀನಾರಿಸುತ್ತಾ ತಿಲಮಿಟ್ಟಿಯ ದಡದಲ್ಲಿ ಬದುಕಿನ ನೌಕೆಗೆ ಹುಟ್ಟು ಹಾಕುತಿರುವ ತೀರ ಸಿಗದ ಜೋಡಿ! ಅಪ್ಪಟ ಕೊಂಕಣಿ ಮಿಶ್ರಿತ ಮರಾಠಿಯಲ್ಲಿ ಸ್ನೇಹಿತನ ಜೊತೆ ಮಾತೆಗಿಳಿದರು! ನಡುನಡುವೆ ನಗುವಿನ ಅಲೆಗಳ ವಿನಿಮಯವಾಗಿದ್ದಷ್ಟೇ ನನಗೆ ಗೊತ್ತು.  ಹತ್ತಾರು ಸಿಗಡಿಗಳು, ಸ್ವಲ್ಪ ಸ್ವಲ್ಪವೇ ಪುಡಿ ಮೀನುಗಳೊಂದಿಗೆ ಮರಳುವ ದಾವಂತದಲ್ಲಿದ್ದರು. ಆದರೂ ನಾಲ್ಕಾರು ಮೀನುಗಳನ್ನೂ ನಮಗೂ ಕಟ್ಟಿಕೊಡಲು ಬಂದರು! ನಾವು ಬೇಡವೆಂದಿದ್ದಕ್ಕೆ ಬೇಸರಿಸಿಕೊಂಡರು. ನಾಲ್ಕಾರು ಸಿಗಡಿಗಳ ತೋರಿಸಿ ಕುಶಿ ಪಟ್ಟ. ಕಡಲ ಕಿನಾರೆಗೆ ಬಡಿದು ಬಡಿದೂ ಸವೆದ ಚಪ್ಪಲಿ ಹಾಕಿ ಹೊರಟಾಗ ಮನದ ಕರಳು ಚುರುಕ್‌ ಎಂದಿತು. ಬೈರವಿ ರಾಗದ ಆಲಾಪದಂತೆ ಭಾಸವಾದ ಅಲೆಗಳು ಅವಳ ಕಾಲಂದುಗೆಗೆ ಮತ್ತೆ ಮತ್ತೆ ಮುತ್ತಿಕ್ಕುತಾ ಖುಷಿಯಲ್ಲಿ ಮರಳುತ್ತಲಿದ್ದವು.

ಕೊನೆಯ ತುತ್ತು



ಇಂತಹ ವಿಶಿಷ್ಟ ಕಿನಾರೆಯಲ್ಲಿ ಸಿಕ್ಕ ಅಪರೂಪದ ಜೋಡಿಗಳ ನಗು, ಹಾಸ್ಯ, ಬೆರಗು, ಬೇಸರವಿಲ್ಲದ ಅವರ ನಿರ್ಮಲ ಮನ ನನ್ನೆದೆಯ ಆಲ್ಬಂನಲ್ಲಿ ಸದಾ ಜೀವಂತವಾಗಿ ಒಂದು ವಿಶಿಷ್ಟ ಪುಟವಾಗಿ ಸೇರ್ಪಡೆಗೊಂಡಿತು. ಕಡಲು ಕಾಣಲು ಬಂದ ಪ್ರವಾಸಿಗರೆಸೆದ ಕಸವನ್ನೆಲ್ಲಾ ತನ್ನೊಡಲಿನಿಂದ ಕಡಲು ದಡಕ್ಕೆ ಮರಳಿಸಿತ್ತು. ಕಡಲ ಬದುಕು ಕದಡದಂತೆ ಬದುಕಲು ಎಂದು ನಾವು ಕಲಿವೆವೋ? ವಿಧಿ ಲಿಖಿತದ ಅಲೆಯೊಂದು ನಮ್ಮ ಕಾಲಿಗೆ ಸೋಕಿ ಕೇವಲ ನೆನಪನ್ನು ಮಾತ್ರ ಉಳಿಸಿ ಸರ್ವವನೂ ಸ್ವಚ್ಛಗೊಳಿಸಿ ಕಡಲಿಗಿಳಿಯಿತು.




ಶ್ರೀಧರ್‌ ಎಸ್.‌ ಸಿದ್ದಾಪುರ.

Monday, December 22, 2025

ಜೋಧಪುರದಲ್ಲಿ ಜುಗಲ್‌ಬಂದಿ

 


ಅದೇ ರುಚಿಯ ಅದದೇ ವಾಕ್ಯಗಳು, ಮಾಹಿತಿಗಳಿಂದ ರೋಸಿ ಹೋಗಿ ಬಿಟ್ಟೆ. ಓದದೇ ಹೇಳಬಹುದಾಗಿದ್ದ ಮುಂದಿನ ವಾಕ್ಯ. ಹಳಸಲು ಆಗಬಾರದು ಆದರೆ ಹೇಗೆ? ತಿಳಿಯದ ತಿಳಿಯಾಗದ ಅನವರತ ಜಿಜ್ಞಾಸೆ. ಬಾಲ್ದಿಲಿ ಇಟ್ಟ ನೀರೇ ಸಮುದ್ರವೆಂದು ತಿಳಿವ ಬದುಕು ನಮದಾಗಬಾರದು ಅಲ್ವಾ? ಸಣ್ಣ ಬದಲಾವಣೆಯ ಹನಿಯೊಂದು ಬೇಕಿದೆ. ಹಾಗಾಗಿ ಹೊಸ ವಿನ್ಯಾಸದ ಹುಡುಕಾಟ! ಜೋಧಪುರದಲ್ಲಿ ಜುಗಲ್‌ಬಂದಿ ನಿಮ್ಮ ಮುಂದೆ.

***



ಮೆಹರ್‌ಗಾನ್‌ ಕೋಟೆಯ ಹೊರ ಆವರಣದಲಿ ರಾವಣತಾರ ಸಂಗೀತ ವಾದ್ಯದ ಸ್ವರ ಚಮತ್ಕಾರ. ಬರಹಕ್ಕೆ ನೆನಪಿನ ಜುಗಲ್‌ಬಂಧಿ. ಬಿಸಿಲಿಗೆ ಬೆವರಿನ ಜುಗಲ್‌ಬಂಧಿ. ವಾಸ್ತವಕೆ ಇತಿಹಾಸದ ಜುಗಲ್‌ಬಂಧಿ ಎಂತಹ ಲಯ ವಿಜ್ಞಾನ ಇವರ ನರನಾಡಿಗಳಲ್ಲಿ ಮನಸೋಲದೇ ವಿಧಿ ಇಲ್ಲ. ರಾಜಸ್ಥಾನದ ಜೋಧಪುರದಲ್ಲಿ ಕಂಡ ದೃಶ್ಯಾವಳಿಯ ನೆನಪುಗಳ ಜುಗಲ್‌ಬಂಧಿ ನಿಮ್ಮ ಮುಂದೆ.

***

ಹೋಟೆಲ್ ವೀವ್ ಪಾಯಿಂಟ್ ಕಿಟಕಿ ತುಂಬಾ ಹರಡಿದ ಬೃಹತ್ ಕೋಟೆಯ ಹರವು! ಹೋಟೆಲ್ ಮಾಣಿ ಅಟ್ಟೆ ಅಟ್ಟೆ ಪರೋಟ ತಂದಿಟ್ಟಾಗ ತಿನ್ನುವುದು ಹೇಗೆಂದು ಕಳವಳಗೊಂಡೆ. ಪರೋಟಾಗೆ ಮೊಸರಿನ ಜುಗಲ್‌ಬಂಧಿ. " ಇಲ್ಲಿನ ಬಿಸಿಲಿಗೆ ಬೇಕಾಗುತ್ತೆ ತಿನ್ನಿ ಸಾರ್." ಎಂದ. ಬಿಸಿಲೇ ತಿನ್ನುತ್ತೊ ಬಿಸಿಲಿಗೆ ತಿನ್ನುವುದೋ ಅನುಮಾನ ಕಾಡಿತು. ಕೋಟೆಯ ಗೋಡೆಗಳಂತೆ ಒಂದರ ಮೇಲೊಂದು ಹೇರಿಕೊಂಡಿತ್ತು. ಅಂತು ಇಂತೂ ಕೋಟೆ ನೋಡುತ್ತಾ ಒಂದು ಪರೋಟವನ್ನು ಮೊಸರಿನ ಜುಗಲ್‌ಬಂಧಿಯೊಂದಿಗೆ ತಿಂದು ಮುಗಿಸಿದೆ.

ನೀವು ಸ್ವಲ್ಪ ನೋಡಿ... 😂


ಬಿಸಿಲ ಕೋಲುಗಳು ಕೋಟೆಯ ಗೋಡೆಯೊಂದಿಗೆ ಜುಗಲ್‌ಬಂಧಿ ನಡೆಸಿತ್ತು. ಕೋಟೆಯೊಳಗೆ ಬೆಳಕಿನ ಚಿತ್ತಾರ ಕೆತ್ತಿತ್ತು. ಇಲ್ಲಿಂದ ಹೊರಟಾಗ ಎಂಟು ಗಂಟೆ. ನೀಲಿ ನೀಲಿ ಮನೆಯಿಂದೆದ್ದ ಧೂಮ ಕೋಟೆಯ ಗೋಡೆಯ ಸೋಕಿ ಜುಗಲ್‌ಬಂಧಿ ನಡೆಸಿದ್ದವು. 

ಕೋಟೆ ವದನದ ತುಂಬಾ ರಾಜಸ್ಥಾನಿ ಚಿತ್ತಾರ

ಬನ್ನಿ ಕೋಟೆಯೊಳಗೆ ಹೋಗೋಣ. ಚಿತ್ರಕಾರಗಳಿದ್ದರೂ ಆತನ ಸೃಜನಶೀಲ ಮನಸ್ಸು ಪ್ರತೀ ಕೋನದಲ್ಲೂ ಪ್ರತಿಫಲಿಸುತಲಿತ್ತು. ಕೋಟೆಯ ಮಹಾದ್ವಾರಗಳಲ್ಲೇ ಅತ್ಯಂತ ಸುಂದರವಾದುದು ಜೈಪೋಲ್ 1806ರಲ್ಲಿ ಕಟ್ಟಲ್ಪಟ್ಟಿದ್ದು. ಇದರ ನಿರ್ಮಾತ ಮಾನ್‌ಸಿಂಗ್.




ಅಲ್ಲಿ ಕೆತ್ತಿದ ಆನೆ, ಕುದುರೆಗಳು ಈಗಷ್ಟೇ ಎದ್ದು ಬಂದಂತಿದ್ದವು. ಎರಡನೆಯ ದ್ವಾರ ಫತೇ ಪೋಲ್ ದ್ವಾರ ಯುದ್ದ ಕಾಲದಲ್ಲಿ ಬಿದ್ದ ಗುಂಡುಗಳಿಂದ ನುಜ್ಜು ಗುಜ್ಜಾದ ಮುದುಕನ ಗುಳಿಬಿದ್ದ ವದನದಂತಿತ್ತು!

ಕೋಟೆಯ ಮುಂದಡಿ ಇಟ್ಟರೆ ತುತ್ತಿನ ಚೀಲ ತುಂಬಲೊಬ್ಬ ರಾವಣ್ ತಾರ್‌ವಾದ್ಯವನ್ನು ತನ್ನ ರಾಧೆಯೊಂದಿಗೆ ಬಾರಿಸುತ್ತಿದ್ದ. ಈ ರಾವಣ್ ತಾರದ ಮಧುರ ಆಲಾಪ ಕೋಟೆಯ ಮೌನದೊಂದಿಗೆ ಜುಗಲ್‌ಬಂಧಿ ನಡೆಸಿತ್ತು! ಬಿಸಿಲಿಗೆ ಒಣಗುತ್ತಾ ಚಹವೇ ನಮ್ಮ ಲಕ್ಸೂರಿ ಎಂಬಂತೆ ಹೀರುತಲಿದ್ದರು! ಅವರಿಗೆ ಹತ್ತಿಪ್ಪತ್ತು ನೀಡಲೂ ಹಿಂಜರಿಯುವ ಕೆಲವರು ಒಂದು ದಿನದ ಸಂಗೀತ ಕಾರ‍್ಯಕ್ರಮಕ್ಕೆ ಐದು ಸಾವಿರ ಪೀಕುತ್ತಿದ್ದರು! ರಾವಣ್ ತಾರ್‌ದ ಸ್ವರ ನಮ್ಮ ನಾಡಿಗಳಲ್ಲಿ ವ್ಯಾಪಿಸುತ್ತಿತ್ತು.

 ವಿ ಆಕಾರದ ತುದಿಯಿಂದ ಕೋಟೆಯ ದ್ವಾರ ಪ್ರಾರಂಭವಾಗಿ ಎಡಮಗ್ಗುಲಿನಲಿ ಹೊರಳಿ ಏರುದಾರಿಯೊಂದಿಗೆ ಬಲಕ್ಕೆ ಹೊರಳಿಕೊಂಡಿತ್ತು. ಬೆಟ್ಟದ ಬಳುಕುಗಳನ್ನೇ ಬಳಸಿಕೊಂಡ ಪರಿ ನಿಜಕ್ಕೂ ಅನನ್ಯ. ಬಲಕ್ಕೆ ಕೋಟೆಯ ದ್ವಾರ. ಮಹಲುಗಳು ಗಗನಮುಖಿಯಾಗಿದ್ದವು!



ಚರ್ಮವಾದನದಲ್ಲಿ ಪರಿಣತಿ ಹೊಂದಿದವನನ್ನು ದಾಟಿದರೆ ಕೋಟೆಯ ಕಾವಲುಗಾರರು ಬಿಳಿ ಸಮವಸ್ತೃ ಮತ್ತು ರಾಜಸ್ಥಾನಿ ರುಮಾಲಿನಲ್ಲಿ ಕೋಟೆಯೊಂದಿಗೆ ಜುಗುಲ್‌ ಬಂದಿ ನಡೆಸಿದ್ದರು. ಎಲ್ಲರಿಗೂ ರುಮಾಲು ಸುತ್ತುವುದನು ತೋರಿಸುತಲಿದ್ದರು. ಮಹಲಿನ ಕೆತ್ತನೆ, ಕಾವಲುಗಾರರ ಉಡುಪು ಜುಗಲ್ ಬಂದಿಗಿಳಿದಿತ್ತು. ಮರ್‌ವಾರ ರಾಜರ ಕಲಾ ನೈಪಣ್ಯವಿಲ್ಲಿ ಅನಾವರಣಗೊಂಡಿದ್ದವು. ಒಂದಕ್ಕಿಂತ ಒಂದು ವಿಭಿನ್ನ ಕಿಟಕಿ ಗೋಡೆಗಳ ಕೆತ್ತನೆ ಬಿಸಿಲಿನೊಂದಿಗೆ ಜುಗಲ್‌ಬಂಧಿಗಿಳಿದಿತ್ತು. ಅನೇಕ ಸುತ್ತುಗಳಿಂದ ಸುತ್ತುವರಿದ ಏಳುದ್ವಾರಗಳಿಂದ ಅತಿಭದ್ರ ಕೋಟೆಯಾಗಿ ಉಳಿದಿದೆ. ಈಗಲೂ ಈ ಕೋಟೆ ಮೇವಾರದ ರಾಜ ಗಜಸಿಂಗನ ಹಿಡಿತದಲ್ಲಿದೆ!

ಕರಣೀ ಮಾತೆಯ ಕೃಪೆ 


ಕರಣೀ ಮಾತೆಯ ಕೃಪೆಯಿಂದ ಅಡಿಗಲ್ಲು ಹಾಕಿಸಿಕೊಂಡ ಕೋಟೆ, ಬೆಳಕಿನ ದೇವರು ಸೂರ್ಯನ ಕೋಟೆ ಎಂದು ರಾಜಸ್ಥಾನಿ ಭಾಷೆಯಲ್ಲಿ ಕರೆಸಿಕೊಳ್ಳುವುದು.



ಮರ್‌ವಾರ್ ಸಂಗೀತೋತ್ಸವದ ಸಲುವಾಗಿ ಅನೇಕರು ದೇಸಿ ಸಂಗೀತ ನೃತ್ಯದಿಂದ ನೆರೆದವರನ್ನು ರಂಜಿಸುತ್ತಿದ್ದರು. ಸುಂದರ ಕೆತ್ತನೆಗೆ ದೇಶೀಯ ನೃತ್ಯ ಸಂಗೀತದ ಜುಗಲ್‌ಬಂಧಿ ಕ್ಯಾಮಾರದಲ್ಲಿ ನೃತ್ಯ ಸಂಗೀತ ಬಂದಿ. ಬೆಳಗಿನಿಂದ ಹಾಡು, ಕುಣಿತ ಜೋಶ್‌ನಲ್ಲಿದ್ದರೂ ಸ್ವಲ್ಪವೂ ಬೇಸರ ಅವರ ಮುಖದಲ್ಲಿರಲಿಲ್ಲ. ಮೋತಿ ಮಹಲ್, ಫುಲ್ ಮಹಲ್ ನೋಡಿಕೊಂಡು ಶೀಶ್ ಮಹಲಿನಲ್ಲಿ ಕಾಲಿಟ್ಟರೆ ಅಚ್ಚರಿಗಳ ಜುಗಲ್‌ಬಂಧಿ. ಹಚ್ಚಿಟ್ಟ ಒಂದು ಮೇಣದ ಬತ್ತಿ ಸಾವಿರವಾಗಿ ಕಾಣುತಲಿತ್ತು. ಪುಡಿ ವರ್ಣದ ಅಮೃತಶಿಲೆಗಳಿಂದಾದ, ಶೃಂಗರಿಸಿದ ಮೂರಂತಸ್ತಿನ ಭವನದ ಹೊಸ್ತಿಲಲ್ಲೇ ರಾವಣ್‌ತಾರದ ಮೆಲುದನಿ ಸ್ವರ, ಶಿಲ್ಪದೊಂದಿಗೆ ಜುಗಲ್‌ಬಂದಿಗಿಳಿದಿತ್ತು.




ಹಲವು ಕೋಣೆಗಳಲ್ಲಿ ರಾಜಸ್ಥಾನಿ ಕಲೆ ಬಿಂಬಿಸುವ ವಸ್ತುಗಳಿದ್ದವು. ಕೆಲವು ಕೋಣೆ ಮುಚ್ಚಿದ್ದವು. ಅಮೃತಶಿಲೆಯಲ್ಲಿ ಚಿತ್ತಾಕರ್ಷಕ ಹೂ ಬಳ್ಳಿ. ಜಾಲಾಂಧ್ರ ರಚನೆ ನಿಮ್ಮನ್ನು ಸ್ವಾಗತಿಸುತ್ತೆ. ಮಾರ್‌ವಾರ್ ಹಬ್ಬದ ಸಲುವಾಗಿ ದೇಸಿ ನೃತ್ಯ ದರ್ಬಾರ್ ಹಾಲ್‌ನಲ್ಲಿ ಎದುರಿನ ಅಂಗಳದಲ್ಲಿ ನಡೆಯುತ್ತಿತ್ತು. 



ನೋಡಲೇ ಬೇಕಾದ ನೀಲೂರು

ಊರಿಗೊರೇ ನೀಲಿಕುಡಿದು ನೀಲವಾಗಿ ಕುಳಿತಿತ್ತು. ನೀಲೂರು! ಬ್ಲೂ ಸಿಟಿ ಕ್ಯಾಮರಾಕ್ಕಂತೂ ಪುರುಸೊತ್ತಿರಲಿಲ್ಲ ಊರಿಗೊಂದು ಕಿರೀಟ. ತಣ್ಣಗೆ ಮಲಗಿದ ರಕ್ಕಸಗಾತ್ರದ ಪಿರಂಗಿಗಳು ಇತಿಹಾಸದ ಹಸಿ ಬಿಸಿ ಕಥಾನಕವನ್ನು ಉಣಬಡಿಸುತ್ತಿವೆ. ಕೋಟೆಯನ್ನು ವಶಪಡಿಸಿಕೊಳ್ಳಲು ಬಂದ ಪ್ರತಿಯೊಬ್ಬರಿಗೂ ಅದು ನೀಡಿದ ಉತ್ತರಗಳ ನಿಟ್ಟುಸಿರು ಅಲ್ಲೇ ಇತ್ತು!




 ಫಿರಂಗಿಯ ಮೇಲೆ ಕುಳಿತ ಅಳಿಲು ತನ್ನ ಇನಿಯನೊಂದಿಗೆ ಜುಗಲ್‌ಬಂದಿಗಿಳಿದಿತ್ತು. ಕೈ ಕೈ ಹಿಡಿದ ನವವಿವಾಹಿತರು, ಅಪ್ಪ-ಮಗನ ಜುಗಲ್‌ಬಂದಿ ಕೋಟೆಯ ಛಾವಣಿಯಲ್ಲಿ ಛಾವಣಿಯಿಂದ ಕಾಣುವ ನೀವು ನೋಡದ ಅಮೃತ ಶಿಲೆಯ ತಾಜ್‌ಮಹಲ್ ಮೇಹರ್‌ನ್‌ಗಢದೊಂದಿಗೆ ಜುಗಲ್‌ಬಂದಿಗೆ ಇಳಿದಿತ್ತು. ಮುಳುಗುವ ಸೂರ‍್ಯ ಕತ್ತಲಿನೊಂದಿಗೆ ಜುಗಲ್‌ಬಂದಿಗಿಳಿದಿತ್ತು. ಮಹಲಿನ ಇಂಚಿಂಚು ಅದ್ಭುತ ಕಲಾಕುಸುರಿಯಿಂದ ಅಲ್ಲಿನ ಪಾರಂಪರಿಕ ಉಡುಗೆಯ ಜನರೊಂದಿಗೆ ಜುಗಲ್‌ಬಂದಿಗಳಿದಿತ್ತು. ಎಲ್ಲೆಲ್ಲೂ ಪೊಗದಸ್ತಾದ ಹುರಿ ಮೀಸೆಯ ಹುರಿಯಾಳುಗಳು ರುಮಾಲು ಸುತ್ತಿಕೊಂಡು ಜುಗಲ್‌ಬಂದಿಗಿಳಿದಿದ್ದರು.

ನೋಡಲೇ ಬೇಕಾದ ನೀಲಿಯೂರಿನ ಇತಿಹಾಸ

ರಾವ್ ಜೋಧನಿಂದ 1459ರಲ್ಲಿ ನಿರ್ಮಿಸಲ್ಪಟ್ಟ ಇದು ಮಂಡೋರದ 9 ಕಿ.ಮೀ. ದಕ್ಷಿಣಕ್ಕೆ ಸ್ಥಾಪಿಸಿದ ನಗರ ಜೋಧಪುರ. ಪಕ್ಷಿಗಳ ಗುಡ್ಡವಾಗಿತ್ತು ಒಮ್ಮೆ. ಊರ ನಡುವೆ ಕಾಂತದಂತೆ ಆಕರ್ಷಿಸುವ ಮೇಹರ್‌ಗಾನ್ ಕೋಟೆ. ಸೂರ‍್ಯನ ಆರಾಧಕರ ಸೂರ‍್ಯನ ಕೋಟೆ. ಘಡವಾಲಿಯಾ ಸಮುದಾಯದವರ ಅಪೂರ್ವ ಕಲ್ಲಿನ ಜ್ಞಾನಕ್ಕೊಂದು ಸಾಕ್ಷೀ. ಇವರ ಜೊತೆಗೆ ಬೆರೆತ ಚವಾಲಿಯ ಸಮುದಾಯದವರು ಎಂತಹ ಭಾರವನ್ನು ತಮ್ಮದೇ ತಂತ್ರಗಾರಿಕೆಯಲ್ಲಿ ಎತ್ತಿ ಸಾಗಿಸಬಲ್ಲವರು. ಈ ಎರಡೂ ಸಮುದಾಯದವರು ಪ್ರಕೃತಿಯನ್ನು ಪಳಗಿಸಿದ ಪರಿ ಅನನ್ಯ. ಇಲ್ಲಿನ ನೀರಿನ ಜ್ಞಾನವೂ ಅನನ್ಯ. ಇವರಿಬ್ಬರ ಜುಗಲ್‌ಬಂದಿಯಲ್ಲಿ ನಿರ್ಮಿತ ಈ ಕೋಟೆ ಏಷ್ಯಾದ ಒಂದು ಅತ್ಯುತ್ತಮ ಕಲಾಕೃತಿ! ಇಲ್ಲಿನ ಪ್ರತೀ ಕೋಣೆಯೂ ಗತ ಇತಿಹಾಸವ ಉಸುರುತ್ತದೆ. ಶೃಂಗಾರ ಕೋಣೆ , ಹೌದಾ, ಶೀಶ್‌ ಮಹಲ್‌, ಹೂವಿನರಮನೆ ಮತ್ತು ಹೆಮ್ಮಕ್ಕಳ ಅರಮನೆಯ ಕೋಣೆಯೊಳಗೊಮ್ಮೆ ಹೊಕ್ಕು ಬರೋಣ.

 ಶೃಂಗಾರ ಚೌಕ -

 ಗಜರಾಜ ಸಿಂಗ್ - 1 ರಾಜರನ್ನು ಪ್ರವೇಶಿಸುವ ಅದ್ಭುತ ಜಾಗ. ಅಲ್ಲಿಂದ ಮುಂದೆ ದೌಲತ್ ಖಾನಾ 18ನೆಯ ಶತಮಾನದಲ್ಲಿ ಅಜಿತ್‌ಸಿಂಗ್ ನಿರ್ಮಿತ.(1730) 


 ಆನೆ ಮೇಲೆ ಹೊರಿಸುವ ಹೌದಾಗಳಿಗಾಗಿಯೇ ರಚಿಸಿದ ಕೋಣೆ ನಿಮ್ಮ ಮುಂದೆ ತೆರೆದುಕೊಳ್ಳುತ್ತದೆ. ಮಹರಾಜ ಜಸ್ವಂತ್ ಸಿಂಗ್‌ನಿಗೆ ಶಹಜಾನ್ ನೀಡಿದ ಹೌದಾ ಕೋಟೆಯೊಂದಿಗೆ ಜುಗಲ್ ಬಂದಿಗಿಳಿದಿತ್ತು! ಇದರ ರಚನೆ ನಿಮ್ಮ ಕಣ್ಮನ ಸೆಳೆಯುತ್ತದೆ.

ಇವೆಲ್ಲವನ್ನು ನೋಡಿ ಮುಂದಡಿ ಇಟ್ಟರೆ ಸಿಗುವುದೇ ಅಜಿತ್ ಸಿಂಗ್‌ನ ಶಯನಗೃಹ ಶೀಶ್ ಮಹಲ್. ಅದ್ಭುತವಾದ ಕನ್ನಡಿ ಕಲೆಯಿಂದ ಬೆಳಕು ಕನ್ನಡಿಯೊಂದಿಗೆ ಬೆಳಕಿನ ಜುಗಲ್‌ಬಂದಿ ನಡೆಸಿತ್ತು. ಬನ್ನಿ ಗಾಜಿನ ಮಹಲಿಗೆ ಒಂದು ಸುತ್ತು ಬರೋಣ.

  ಗಾಜಿನ ಮಹಲ್‌ (ಶೀಶ್‌ ಮಹಲ್‌) 



ಶೀಶ್ ಮಹಲ್‌ನ್ನು ಅಜಿತ್‌ಸಿಂಗ್, ಪೂಲ್ ಮಹಲ್‌ನ್ನು ಅಭಯಸಿಂಗರು 17ನೆಯ ಶತಮಾನದಲ್ಲಿ ನಿರ್ಮಿಸಿದ್ದರು. ಕನ್ನಡಿ ಅಳವಡಿಸಿ ಚಿನ್ನ ಲೇಪಿಸಿ ಗೋಡೆ ಸೀಲಿಂಗ್ ಇರುವುದು ಶೀಶ್ ಮಹಲಿನ ವಿಶೇಷತೆ. ಬೆಳಕಿನೊಂದಿಗೆ ಕನ್ನಡಿ ಜುಗುಲ್‌ಬಂದಿಗಿಳಿದಿತ್ತು.

ಶೀಶ್ ಮಹಲಿನ ಕೋಣೆಯ ಬಾಗಿಲ ಬಾಗುವಿನಲ್ಲಿ ಕುಳಿತ ಶಿವ, ಬ್ರಹ್ಮ, ಪಾರ್ವತಿ, ದೇವಿ, ಕೃಷ್ಣ, ಗಣೇಶರ ನಡುವೆ ಸುಂದರ ಜುಗಲ್‌ಬಂದಿ. ಗೋವರ್ಧನ ಗಿರಿಯ ನೆತ್ತಿದ ಕೃಷ್ಣನ ಕೆತ್ತನೆ ಅದ್ಭುತ. ಇಲ್ಲಿ ಕಲೆಯೊಂದಿಗೆ ಬೆಳಕಿನ ಜುಗಲ್‌ಬಂದಿ ನಡೆದಿತ್ತು.

 ಅಭಯಸಿಂಗ್ ನಿರ್ಮಿತ ಹೂವಿನರಮನೆ ಇಲ್ಲಿಂದ ಮುಂದೆ ತೆರೆದುಕೊಳ್ಳುತ್ತದೆ. ಇದೊಂದು ಸಂಗೀತವನ್ನು ಆಲಿಸುವ ಖಾಸಗಿ ವರಾಂಡ ಇಲ್ಲಿಂದ ಮುಂದೆ ತಾಕತ್‌ಸಿಂಗ್ ನಿರ್ಮಿಸಿದ ತಾಕತ್‌ನಿವಾಸದ ಕಲ್ಲುಗಳು ಕಲೆ ನಮ್ಮೊಂದಿಗೆ ಮೌನ ಸಂವಾದಕ್ಕಿಳಿದಿದ್ದವು. 


 ಇವೆಲ್ಲವ ದರ್ಶಿಸಿ ಮುಂದಡಿ ಇಟ್ಟರೆ ಹಳದಿ ಮರಳುಕಲ್ಲಿನ ಅಪರೂಪದ ಕೆತ್ತನೆಯ, ನಿಮ್ಮ ಬಾಯಿಯಿಂದ `ವಾವ್' ಎಂಬ ಉದ್ಗಾರವನ್ನು ಹೊಮ್ಮಿಸುವ ಹೆಮ್ಮಕ್ಕಳ ಅರಮನೆ ಮಂತ್ರಮುಗ್ಧವಾಗಿಸುತ್ತದೆ. ಅರಮನೆಗೊಂದು ಶೋಭೆ ಅರಮನೆಯ ಅತ್ಯಂತ ಹಳೆಯ ಭಾಗವೂ ಇದಾಗಿದೆ. ಮೇವಾರರ ಸೌಂದರ್ಯ ಪ್ರಜ್ಞೆಗೆ ಸಾಕ್ಷಿ ನುಡಿಯುತ್ತದೆ.

ಮೇವಾರ್‌ ಚಿತ್ರಕಲೆ...

  ಮೇವಾರ್‌ ಚಿತ್ರಕಲೆ 17ನೆಯ ಶತಮಾನದಲ್ಲಿ ಪ್ರವರ್ಧಮಾನಕ್ಕೆ ಬಂದಿತು. ಮೊದಮೊದಲು ಮೊಗಲರಿಂದ ಪ್ರಭಾವಿಸಿದ್ದ ಈ ಕಲೆ ತದನಂತರ ತನ್ನದೇ ವಿಶಿಷ್ಟತೆಯ ಚಾಪ್‌ನ್ನು ಪಡೆದುಕೊಂಡಿತು. ಉಗುರಿನ ಮೇಲೆ ಇವರು ಮೂಡಿಸುವ ಚಿತ್ರ ಒಂದು ಅದ್ಭುತ ಕಲೆ. ಬಟ್ಟೆ ಮೇಲೆ ಮೂಡಿಸುವ ಅವರ ಕಲೆ ಅಪೂರ್ವ. ಇಂದಿಗೂ ನಮ್ಮ ಮನೆಯಲ್ಲಿ ಬಟ್ಟೆ ಮೇಲೆ ರಚಿಸಿದ ಸುಂದರ ಚಿತ್ರವೊಂದು ರಾಜಸ್ಥಾನದ ಮೇವಾರ್‌ ಕಲೆಯ ಜುಗಲ್‌ಬಂದಿ ನಡೆಸಿತ್ತು. ಇಲ್ಲಿಂದ ನಾವು ಹೊದ ಶಿಲ್ಪಗ್ರಾಮವು ರಾಜಸ್ತಾನಿ ಕಲೆಯನ್ನು ಅನಾವರಣಗೊಳಿಸುವ ಸಂಸ್ಕೃತಿಕ ನಿಲ್ದಾಣ. ಮುಂದಿನ ಜನಾಂಗಕ್ಕೆ ಕಲೆ ಸಂಸ್ಕೃತಿಯನ್ನು ಪರಿಚಯಿಸಲು ಅವರು ರೂಪಿಸಿಕೊಂಡು ನಿರ್ವಹಿಸುವ ತಾಣ. ನಿವಿಲ್ಲಿಗೆ ಭೇಟಿ ಕೊಟ್ಟಾಗ ತಪ್ಪದೇ ಹೋಗಿಬನ್ನಿ.

ಇಲ್ಲಿನ ಇಂಡೋ ಮೊಘಲ್ ಶೈಲಿಯ ಕಟ್ಟಡಗಳು ಒಂದಕ್ಕಿಂತ ಒಂದು ಭಿನ್ನ. ಎಲ್ಲಿ ಹೋಗಿ ಎಲ್ಲಿಂದ ಹೊರಬರುವುದೋ ಎಲ್ಲವೂ ಗೋಜಲು. ಕರನಿಮಾತೆಗೆ ನಮಸ್ಕರಿಸಿ ಕೋಟೆಯ ನೆತ್ತಿ ತಲುಪಿದರೆ ನಾಲ್ಕಾರು ಪಿರಂಗಿಗಳು ಮುಳುಗುವ ಸೂರ‍್ಯನೊಂದಿಗೆ ಜುಗಲ್‌ಬಂದಿಗಿಳಿದಿದ್ದವು.

 ಹಳದಿ ಮರಳು ಕಲ್ಲು, ಬಿಸಿಲಕೋಲು, ಅಮೃತಶಿಲೆಯ ಜಸವಂತ್ ಥಾಡಾ ನಮ್ಮ ಮನಸ್ಸಿನೊಂದಿಗೆ ಬೆರೆತು ಸದಾ ಜುಗಲ್‌ಬಂದಿಗಳಿದು ನೆನಪುಗಳನ್ನು ಮುನ್ನಲೆಗೆ ತರುತ್ತಲೇ ಇದೆ. 



ವಾರೆ ನೋಟ

ಕೀರ್‌ಗಂಗಾ ದಾರಿಯಲ್ಲಿ ಸಿಕ್ಕ ಸಂತ

  ನನ್ನ ಸ್ಮೃತಿಪಟಲದಿಂದ ಅಳಿಸಿಹೋಯಿತೆಂಬತೆ ಆಗಿದ್ದ ಹಿಮಾಚಲದ ಕೀರ್‌ಗಂಗಾ ಚಾರಣ ಮತ್ತೆ ಮುನ್ನಲೆಗೆ ಬಂದಿದ್ದೇ ಆಕಸ್ಮಿಕ! ಬೆಟ್ಟಗಳಲ್ಲಿ ಕಳೆದೋಗುವುದು ಅಂತಾರೆ ಆದರೆ ಇಲ್...