Thursday, February 12, 2026

ಹೊಷಾಯ್ ಹೊಸೆದ ಹೊಸ ಕತೆ….

 

ಕಾರ್ಕಳದ ಗೊಮ್ಮಟ ಗಿರಿಯ ಪ್ರತೀ ಮೆಟ್ಟಿಲುಗಳು ಹೊಷಾಯ್ ಕತೆಯನ್ನು ಪ್ರತಿಫಲಿಸುತ್ತದೆ . ಬದುಕಿನ ಬವಣೆಯ ಸಾರವನ್ನು ತೆರೆದಿಡುತ್ತದೆ. ಆತನ ಆರ್ತತತೆ ಪ್ರತೀ ಮೆಟ್ಟಿಲುಗಳ ಮೇಲೆ ಪ್ರತಿಫಲಿಸುತ್ತದೆ. 






ಯಾಕಾಗಿ ನಮ್ಮ ಹಿಂದಿನವರು ಬೆಟ್ಟದ ಮೇಲೆ ಇಲ್ಲ ದೊಡ್ಡ ಪೀಠದ ಮೇಲೆಯೇ ದೇವಾಲಯಗಳನ್ನು ನಿರ್ಮಿಸುತ್ತಿದ್ದರು? ಎಂಬ ಸಣ್ಣ ಜಿಜ್ಞಾಸೆ ನನ್ನನ್ನು ಸದಾ ಕಾಡುತ್ತಲೇ ಇತ್ತು. ಇಲ್ಲಿಯವರೆಗೆ ಅದಕ್ಕೊಂದು ಸಮರ್ಪಕವಾದ ಉತ್ತರ ದೊರೆತಿರಲಿಲ್ಲ. ಆದರೆ ಹೊಷಾಯ್‌ನ ಭೇಟಿ ಮಾಡಿ ಬಂದ ನಂತರ ಹೊಸ ಹೊಳಹು ಹೊಳೆಯಿತು. ನಿಮಗೂ ಹೊಳೆದರೆ ಹೇಳಿ.


****

ಹುಚ್ಚು ಮಳೆ ಅಬ್ಬರ ಮತ್ತು ಕಾಫಿ






ನಾಲ್ಕು ದಿನಗಳಿಂದ ಹೊಡೆಯುತ್ತಿದ್ದ ಮಳೆ ಅಂದೂ ಬಿಡುವು ಕೊಟ್ಟಿರಲಿಲ್ಲ. ಮಳೆ ನೋಟಕ್ಕಾಗಿ ಹಾತೊರೆದು ಹೊರಟೆ. ಮಳೆ ಬಾರದೇ ನಾನು ಹೊರಡದೇ ಇದ್ದಿದ್ದರೆ ಹೊಷಾಯ್ ಆಗಲಿ ಈ ಕತೆಯ ಭೇಟಿಯೇ ಆಗುತ್ತಿರಲಿಲ್ಲ! ಕಾಲ ನಿರ್ಣಯದ ಕಸರತ್ತು.

ಎರಡು ಅಡ್ಡಾಗಳ ನಡುವೆ!




ಹೊತ್ತು ಹುಟ್ಟುವ ಮುಂಚೆ ಹೆಬ್ರಿಯ ಭಟ್ಟರ ಹೋಟೆಲಿನಲ್ಲಿ ಕಾಫಿ ಸಮಾರಾಧನೆ! ಅವರ ಕಷ್ಟ ಸುಖ ವಿಚಾರಿಸಿ ಎರಡೆರಡು ಹಬೆಯಾಡುವ ಕಡಬು ಹೊಡೆದು ಹೊರಟೆವು. ನೀವು ಹೆಬ್ರಿಗೆ ಬಂದರೆ ಅಥೆಂಟಿಕ್ ಆಹಾರಕ್ಕಾಗಿ ಹಪಾಹಪಿಸುವವರಾದರೆ ಆಗುಂಬೆ ರಸ್ತೆಯಲ್ಲಿನ ಭಟ್ಟರ ಹೋಟೆಲ್ ಬಹಳ ಅನನ್ಯವಾದ ಹೋಟೆಲ್‌. ನಿಮ್ಮ ರುಚಿ ಮೊಗ್ಗುಗಳನ್ನು ಬಡಿದೆಬ್ಬಿಸುವ ಹೋಟೆಲ್. ಇಲ್ಲಿನ ಶ್ಯಾವಿಗೆ, ಕಡಬು ಮುಂತಾದ ದೇಸಿ ತಿನಿಸುಗಳು ಮನತಣಿಸುತ್ತವೆ. ಒಂದು ಕಾಲದಲ್ಲಿ ಬಡ್ಕಿಲಾಯ ಹೋಟೆಲ್ ಎಂಬ ಹೆಸರು ಹೊತ್ತು ಇದೀಗ ಭಟ್ಟರ ಹೋಟೆಲ್ ಆಗಿ ಹೆಸರು ಬದಲಿಸಿ ಕೂತಿದೆ. ಅನನ್ಯ ರುಚಿಯ ಹಬೆಯನ್ನು ಪಸರಿಸಿದ ಬಡ್ಕಿಲಾಯರ ಮುಂದುವರಿಕೆಯತೆ ಭಟ್ಟರ ಹೋಟೆಲ್ ಕಾರ್ಯ ನಿರ್ವಹಿಸುತ್ತಿದೆ. ಭಟ್ಟರು ಪ್ರೀತಿಯಿಂದ ಕೊಟ್ಟ ಹಲಸಿನಕಾಯಿ ತಣ್ಣಗೆ ಕಾರ್‌ ಡಿಕ್ಕಿಯಲ್ಲಿ ಕುಳಿತಿತ್ತು! ಮನೆಗೆ ತಂದು ವಾರ ಕಳೆದರೂ ಹಣ್ಣಾಗಲಿಲ್ಲ! ಚಿಗುರೇ ಕೊಯ್ದಿರಬೇಕು! ಅವರ ಕತೆಗೆ ಕಿವಿಯಾಗುತ್ತಲೇ ಹುಚ್ಚು ಮಳೆ ಅಟಕಾಯಿಸಿಕೊಂಡಿತು. 




ವರಂಗದ ಬಸದಿ ನೋಡಿ ಬರುತ್ತಲೇ ಕಾಫಿ ಹುಚ್ಚು ಅಟಕಾಯಿಸಿಕೊಂಡಿತು!   ಎಂತಹ ಹೊಟ್ಟೆ ಬಾಕನೆಂದು ಕಣ್ಣು ಹಾಕಬೇಡಿ! ಕಡಬು ಹೊಡೆದ ಮೇಲೆ ಕಾಫಿನಾ ಅಂತ ಕಣ್ಣು ಅರಳಿಸಬೇಡಿ. ನಾನಿರುವುದೇ ಹಾಗೆ. ಕಡು ಕಾಫೀ ಮೋಹಿ. ಕಾರ್ಕಳದ ಆನೆ ಕೆರೆಯ ಸನಿಹದ ರಂಗನಾಥ ಕೆಫೆಗೆ ಕಾಲಿಟ್ಟು  ಕಾಫಿಗೆ ಆರ್ಡರಿಸಿ ಕೆರೆ ನೋಡುತ್ತಾ ಕಾಲು ಚಾಚಿದೆ. ಕಾರ್ಕಳದ ಅಥೆಂಟಿಕ್‌ ಆಹಾರದ ಅಡ್ಡಾ ರಂಗನಾಥ ಕೆಫೆ. ಇಲ್ಲಿನ ಶ್ಯಾವಿಗೆ ದಾಲ್‌ ಸವಿದವನೇ ಬಲ್ಲ! ಕ್ಷಮಿಸಿ ಹೆಚ್ಚು ಹೇಳಲಾರೆ ನಾಲಗೆ ನೀರೂರಿಸುತ್ತಿದೆ.



 ಪರಿಚಾರಕ ತಂದಿಟ್ಟ ಕಾಫಿಯ ಡಿಕಾಕ್ಷನ್ ಹಾಲು ಸೇರದೆ ಹಾಗ ಹಾಗೇ ಉಳಿದಿತ್ತು. ಏನು ಮ್ಯಾಜಿಕ್‌ ಮಾಡಿದ್ದನೋ? ಎಷ್ಟು ಕಾದರೂ ಸೇರದೆ ಇದ್ದುದ ನೋಡಿ ಪರಿಚಾರಕನಲ್ಲಿ ಕೇಳಿದಾಗ `ನೀವೇ ತಿರುಗಿಸಬೇಕು' ಎಂದ! ಅರರೇ ಎನ್ನುತ್ತಾ ಚಮಚ ತಿರುವಿ ಗಂಟಲು ಒದ್ದೆ ಮಾಡಿದೆ. ಅಬ್ಬಾ ಅದ್ಭುತ ರುಚಿ! ರಂಗನಾಥ ಕೆಫೆಯ ಅದೈತ ರುಚಿಯ ಕಾಫಿಗೆ ಮರುಳಾದೆ!

 ಅದೇ ಕಾಫಿಯ ನೆನೆಯುತ್ತಾ ಕಾರು ಹತ್ತಿದೆ. ಗುಡ್ಡವೇರುವಾಗಲೂ ಕಾಫಿ ನೆನಪುಗಳು! ನಾವಾಗಿಯೇ ತಿರುಗಿಸದ ಹೊರತು ಇಲ್ಲಿ ಏನೂ ಆಗದು. ಸ್ವಪ್ರಯತ್ನ ಬೇಕೇ ಬೇಕು! ಎಂಬ ಹೊಸ ಹೊಳಹೊಂದು ನನ್ನೊಡಲ ಸೇರಿತ್ತು. ಜೊತೆಗೆ ಮತ್ತೊಂದು ಅಚ್ಚರಿಯೂ ಜೊತೆಗೆ ಸೇರಬಹುದೆಂಬ ಸಣ್ಣ ಅಂದಾಜು ನನಗಿರಲಿಲ್ಲ.

***

ಮಿಲಿಯಾಂತರ ವರ್ಷಗಳಿಂದ ಕುಳಿತ ಬಲಿತ ಕಲ್ಲುಗಳ ಬಗೆದು ಕಟ್ಟಿದ ಕತ್ತಲೆ ಬಸದಿ ಹೊಕ್ಕೆವು. ದೇವರನ್ನು ಮಾತಾಡಿಸಿ, ಪ್ರದೀಪ್‌ ಚಂದ್ರನಲ್ಲಿ ಇತಿಹಾಸ ಕೆದಕಿ ಗೊಮ್ಮಟ ಗಿರಿಗೆ ಅಡಿ ಇಟ್ಟೆ.







  ಬೆಟ್ಟವ ಪಳಗಿಸಿ ವಿರಾಗಿಯನ್ನು ಕಡೆದು ನಿಲ್ಲಿಸಿದ ಗಿರಿ. ಗಿರಿ ಹಿಂದಿನ ಕಣಿವೆಯಿಂದ ನಿಧಾನಕ್ಕೆ ಎತ್ತಿ ನಿಲ್ಲಿಸಿ ಪ್ರತಿಷ್ಠಾಪಿಸಲಾಗಿದೆ. ಬೆಟ್ಟದ ಬಗಲಿನ ಕಲ್ಲು ಬಳಸಿ ಈ ಬಾಹುಬಲಿಯನ್ನು ಕೆತ್ತಿದ್ದಾರೆ. ಉಳಿದ ತೀರ್ಥಂಕರರ ಚಿಕ್ಕ ಚಿಕ್ಕ ಚಂದದ ಮೂರ್ತಿಗಳ್ನನು ದೊಡ್ಡ ಪಾಗಾರದ ಸುತ್ತ ಮಲ್ಲಿಕಾಫರ್‌ನ ದಾಳಿಯ ಮುನ್ಸೂಚನೆಯವರೆಗೆ ಅವಕ್ಕೆಲ್ಲಾ ಸುಂದರವಾದ ಗೂಡನ್ನು ನಿರ್ಮಿಸಿ ಕಾಫಿಡಲಾಗಿತ್ತು! ತದನಂತರ ದಕ್ಷಿಣ ಭಾರತಕ್ಕೆ ದಾಳಿಯ ಸಮಯದಲ್ಲಿ ಅವನ್ನೆಲ್ಲಾ ಬೆಟ್ಟದ ಸನಿಹ ಹೂತಿಟ್ಟು ಕಾಫಿಟ್ಟರು. ದೇವರನ್ನೇ ಅಕ್ಷರಶಃ ಹೂತಿಟ್ಟರು! ಕಾಫಿಟ್ಟವರು ಅಲ್ಲಿ ಹೂತಿದ್ದೆ ಎಂಬುದನ್ನೇ ಮರೆತು ಬಿಟ್ಟರು. ಶತಮಾನಗಳ ಭವಣೆಯ ನಂತರ ಕಾಲ ಗರ್ಭದಲ್ಲಿ ಅವಿತ ಕೆಲ ತೀರ್ಥಂಕರರ ಮೂರ್ತಿಗಳನ್ನು ಹೊರತೆಗೆದು ಬಾಹುಬಲಿಯ ಮೂರ್ತಿಯ ಹಿಂಬಂದಿಯಲಿ ಜೋಡಿಸಲಾಯಿತು. ನಮ್ಮ ದುರಾದೃಷ್ಟವಶಾತ್ ಎಲ್ಲವೂ ಸಿಕ್ಕಿಲ್ಲ ಕೆಲವಷ್ಟೇ. ಇವನ್ನೆಲ್ಲಾ ನಮಗೆ ಅಚ್ಚು ಕಟ್ಟಾಗಿ ವಿವರಿಸಿದವರು ಹೊಷಾಯ್‌ ಕರುಣಾಕರ ಆಳ್ವ!! ಹೆಸರೇ ವಿಚಿತ್ರ ವಾಗಿದೆಯೆಲ್ಲ ಎಂದು ಆತನ ವಿಚಾರಿಸಿದಾಗ ಆತ ತನ್ನ ಕರುಣಾಜನಕ ಕತೆಯನ್ನು ಹೇಳಿದ.



***

“೧೮೯೫ನೆಯ ಇಸವಿ. ತನ್ನಜ್ಜ ಹಿಂದೂ ಧರ್ಮವ ತೊರೆದು ಕಾಲದ ಹೊಡೆತಕ್ಕೆ ಸಿಕ್ಕಿ ಮತಾಂತರಗೊಂಡ. ಅವನಿಗಾಗಲೇ ೮ ಮಕ್ಕಳು. ನನ್ನಪ್ಪನೂ ಕ್ರಿಶ್ಚಿಯನ್‌ ಆದ. ಆದರೆ ಅಪ್ಪನ ಹೆಸರು ಕರುಣಾಕರ ನನ್ನೊಂದಿಗೆ ಹಾಗೇ ಪಯಣಿಸಿತು. ನನ್ನ ಜೊತೆಗೂ ಅಂಟಿಕೊಂಡು ಬಂದಿತು! ಹೊಷಾಯ್‌ ಕರುಣಾಕರ ಆಳ್ವ ಆದೆ. ನನ್ನ ಅಜ್ಜನ ತಲ್ಲಣಗಳು  ಏನಿದ್ದವೋ? ಕಲಿತ ಧರ್ಮವನ್ನು ಬಿಟ್ಟು ಹೊಸತನಕ್ಕೆ ಒಗ್ಗಬೇಕಾದ ಅನಿವಾರ್ಯತೆ. ಯಾವ ಧರ್ಮವಾದರೇನು ಬಿಡಿ. ಬದುಕಲು ಧರ್ಮದ ಹಂಗೇಕೆ? ನನಗೆ ಮಕ್ಕಳಾಗುವವರೆಗೂ ಬದುಕು ನಿರಾಯಾಸವಾಗಿ ಸಾಗಿತ್ತು.  ಬದುಕು ಹೀಗೆ ಕಾಲನ ಹೊಡೆತಕ್ಕೆ ಸಿಕ್ಕು ಛಿದ್ರವಾಗುತ್ತದೆ ಎಂದು ನಾನೆಣಿಸಿಯೇ ಇರಲಿಲ್ಲ.”


ಕೇವಲ ಒಂದು ಧರ್ಮದವರ ಕತೆಗಳನ್ನಷ್ಟೇ ಅಲ್ಲದೆ ಒಂದು ಸಮಾಜದ ಪಲ್ಲಟಗಳನ್ನು, ಅಂದಿನ ದುರ್ದನ್ನು ಬಿಂಬಿಸುವ ಇಂತಹ ಸ್ಥಳ ಪುರಾಣಗಳು ಸೋಜಿಗವನ್ನು ಹಾಗೂ ಇಂದಿನ ಬದುಕಿಗೆ ಹೊಸ ನೋಟಗಳನ್ನು ಒದಗಿಸುತ್ತದೆ. ಇಲ್ಲಿನವರ ಮೇಲಾದ ಅನ್ಯರ ದಾಳಿಯ ವಿವರಗಳನ್ನೆಲ್ಲಾ ಈ ಅನಾಥ ಮೂರ್ತಿಗಳು ಮತ್ತು ಅವರ ಕ್ರೌರ್ಯವನ್ನು ಬಿಂಬಿಸುವುದರ ಜೊತೆ ಜೊತೆಗೆ ನಮ್ಮವರ ಕೈಲಾಗದಿರುವಿಕೆಯನ್ನೂ, ಎಲ್ಲದ್ದಕ್ಕೂ ಹೊಂದಿಕೊಂಡು ಹೋಗುವ, ಬಾಗುವ ನಮ್ಮವರ ಹೇಡಿತನದ ಅಸಲಿಯತ್ತನ್ನು ಅನಾವರಣಗೊಳಿಸುತ್ತಾ, ಹೊಸ ಹೊಳಹಗೆ ನಮ್ಮನ್ನು ತೆರೆದುಕೊಳ್ಳುವಂತೆ ಮಾಡುತ್ತದೆ. ಹೊಸ ಹೊಳಹು ಹುಟ್ಟದೇ ಹೋದರೆ ಬದುಕು ನಿಂತ ನೀರಾಗುತ್ತದಲ್ಲವೇ?

***

ಗೋಣು ಮುರಿದ ಹಕ್ಕಿ 

ಹೊಷಾಯ ಅರುಹಿದ ಕತೆ ಹೀಗಿತ್ತು, “ಒಂದು ದಿನ ವಿಪರೀತ ಬೆನ್ನಿನ ಸೆಳಕು ಪ್ರಾರಂಭವಾಯಿತು. ದಿನ ಕಳೆದಂತೆ ಹೆಚ್ಚುತ್ತಾ ಹೋಯಿತು. ನಿಲ್ಲಲು ನಡೆಯಲು ಕಷ್ಟ ಪಡಬೇಕಾದ ಸ್ಥಿತಿ ಬಂದೊದಗಿತು. ಎಲ್ಲಾ ವೈದ್ಯರು ನಿಮಗಿನ್ನು ನಡೆಯಲು ಸಾಧ್ಯವಾಗಲ್ಲ! ನಿಮ್ಮ ಕಾಯಿಲೆಗೆ ಮದ್ದಿಲ್ಲ. ಉಳಿದ ಬದುಕಿಡಿ ಹೀಗೇ ಕಳೆಯಬೇಕು. ಬೆನ್ನುಹುರಿಯ ನರವೊಂದು ಸಂಪೂರ್ಣವಾಗಿ ಇನ್ನೊಂದರ ಮೇಲೆ ಕೂತಿದೆ. ಅದನ್ನು ಬೇರ್ಪಡಿಸಲು ಸಾಧ್ಯವೇ ಇಲ್ಲ ಎಂದು ಕೈಚಲ್ಲಿದರು. ನಾನೂ ಕೈ ಚೆಲ್ಲಿದೆ. ಹಲವು ತಿಂಗಳು ಮಗನ, ಮಗಳ ಆಶ್ರಯದಲ್ಲಿ ಕಳೆದೆ.

ಕೊನೆಗೊಂದು ದಿನ ಗೊಮ್ಮಟ ಗಿರಿಯ ನೆತ್ತಿ ಹತ್ತುವ ನಿರ್ಧಾರ ಮಾಡಿದೆ.  ನೆಡೆಯಲು ನಿಲ್ಲಲೂ ಆಗದ ಸ್ಥಿಯಲ್ಲಿ ನಿಧಾನಕ್ಕೆ ಒಂದೊಂದೇ ಮೆಟ್ಟಿಲೇರಿ ಮಗನ ಆಶ್ರಯದಲ್ಲಿ ಇಲ್ಲಿಗೆ ಬಂದೆ! ಮೊದಲ ಬಾರಿಯಂತೂ ವಿಪರೀತ ನೋವು ಪ್ರಾರಂಭವಾಯಿತು. ಮಲಗಿದ ಸ್ಥಿತಿಯಲ್ಲೇ ಹಿಮ್ಮರಳಿದೆ. ಹೀಗೆ ಮೇಲಿಂದ ಮೇಲೆ ಮೂರ್ನಾಲ್ಕು ಬಾರಿ ಬಂದ ನಂತರ ಸುಧಾರಣೆ ಕಾಣತೊಡಗಿತು. 




  ನಿಧಾನಕ್ಕೆ ನಾಲ್ಕಾರು ಬಾರಿ ಹತ್ತಿ ಇಳಿಯುತ್ತಾ ನನ್ನ ಕಾಲಿಗೆ ಬಲ ಬರಲು ಪ್ರಾರಂಭವಾಯಿತು! ನಿಧಾನವಾಗಿ ನನ್ನ ಕಾಲಿನ ಶಕ್ತಿ ಮರಳಿತು. ಮೊದಲಿನಂತಾದೆ. ಕೂಡಿಕೊಂಡ ನರಗಳೆರಡು ನೈಸರ್ಗಿಕ ವಿಧಾದಲ್ಲೇ ಬೇರ್ಪಟ್ಟವು! ವಾವ್‌ ಅದ್ಭುತ! ಬದುಕಿನ ಆಸೆ ಕಳಕೊಂಡ ನಾನು ಮತ್ತೆ ಬದುಕ ಜೀವಿಸ ತೊಡಗಿದೆ. ತಾನು  ಹೊಷಾಯ್ ಆದರೂ ಬಾಹುಬಲಿಯ ಸೇವೆಗೆ ನಿಂತೆ! ಬೆಳಿಗ್ಗೆ ಬೇಗ ಬಂದು ಬಾಗಿಲು ತೆಗೆಯುವುದು. ದೇವಾಲಯದ ವಠಾರದ ಸ್ವಚ್ಛತೆ. ಬಂದವರಿಗೆ ಮಾಹಿತಿ ನೀಡುವುದು. ಪೂಜೆಗೆ ಬರುವ ಪುರೋಹಿತರಿಗೆ ಸಹಾಯ ಮಾಡುತ್ತಾ ನನ್ನ ಕೃತಜ್ಞತೆ ಸಲ್ಲಿಸುತ್ತಿದ್ದೇನೆ.

ಈ ಬೆಟ್ಟದ ಬಾಹುಬಲಿ ತನ್ನ ಬದುಕು ಬದಲಿಸಿದ ಪರಿಗೆ ಬೆರಗಾಗಿದ್ದೇನೆ. ಉಸಿರಿರುವ ತನಕ ಇವನ ಸೇವೆ ಮಾಡುತ್ತಾ ಕಳೆಯಬೇಕೆಂದಿರುವೆ!” ಎನ್ನುತ್ತಾ ನನ್ನ ಜೊತೆಗೆ ಫೋಟೋಗೆ ಫೋಜುಕೊಟ್ಟರು. ಅವರ ಆತ್ಮೀಯತೆ ಮಾತಿನ ವೈಖರಿಗೆ ಬೆರಗಾದೆ.

ಒಂಚೂರು ಇತಿಹಾಸ



ಸುರುಳಿ ಕೂದಲು, ಬೊಗಸೆಕಣ್ಣು, ನೀಳಕೈಯ ೮೦ ಟನ್ ತೂಕ. ಈತನ ನೋಡಲು ಕಾತರನಾಗಿ ರಂಗನಾಥ ಕೆಫೆಯಲ್ಲಿ ಕಾಫಿ ಹೀರಿ ಹೊರಟಾಗ ಸಣ್ಣ ಜಿಟಿ ಜಿಟಿ ಜೀರಿಗೆ ಮಳೆ ನೆಲಕ್ಕೆ ಮುತ್ತಿಕ್ಕುತ್ತಿತ್ತು.

ಶ್ರವಣ ಬೆಳಗೊಳದ (೯೮೩) ಬಾಹುಬಲಿಯಿಂದ ಸ್ಫೂರ್ತಿ ಪಡೆದು ೧೪೩೨ ರಲ್ಲಿ ವೀರಪಾಂಡ್ಯ ಬೈರಸ ವಡೆಯರ್ ನಿರ್ಮಿಸಿದ ಬಹೃತ್‌ ಶಿಲ್ಪ. ಆತ ಸಂತಾರಾದ ರಾಜವಂಶದವ. ಏಕಶಿಲೆಯ ೪೨ ಅಡಿ ಬೃಹತ್ ಬಾಹುಬಲಿಯ ಮೂರ್ತಿಯನ್ನು ಅಚ್ಚುಕಟ್ಟಾಗಿ ಕೆತ್ತಿದವನು ಕಲ್ಕುಡಾ. ಮೂರ್ತಿಗೆ ಯಾವುದೇ ದಕ್ಕೆಯಾಗದಂತೆ ಕೆತ್ತಿ ಬೃಹತ್ ಪರ್ವತದ ಮೇಲೆ ತಂದು ನಿಲ್ಲಿಸಿದ್ದು, ಅಂದಿನ ಕಾಲದ ಇಂಜಿನಿಯರಿಂಗ್‌ ಜ್ಞಾನದ ದ್ಯೋತಕ. ೪೨ ಅಡಿಯ ಬಾಹುಬಲಿ ಎದುರಿಗೆ ಮಾನಸ್ತಂಭ ಮತ್ತು ಯಕ್ಷ. ಸನಿಹದಲ್ಲೇ ಬೃಹತ್‌ ಕೆರೆಯೊಂದಿದೆ.

***

ಇತಿಹಾಸಕ್ಕೊಂದು ಕರಿ ಚುಕ್ಕಿ



ಅಂದಿನ ರಾಜ ವೀರ ಪಾಂಡ್ಯ ಬೈರರಸ ಕಲ್ಕುಡಾ ಶಿಲ್ಪಿಯ ಕೈ ಮತ್ತು ಕಾಲು ಕಡಿದು ಹಾಕಿದ್ದು ಕೇಳಿ ನಾನು ನಿಸ್ತೇಜನಾದೆ!! ರಾಜ ಜೈನನಾಗಿದ್ದು ಇಂತಹ ಇನ್ನೊಂದು ಮೂರ್ತಿ ಕೆತ್ತಬಾರದೆಂದು ಕಲ್ಕುಡನ ಕೈ ಕಡಿದಿದ್ದು ಅವಮಾನವೀಯ ಕೃತ್ಯ. ಕಲ್ಕುಡನ ನಿರಂತರ ತಲ್ಲಣಗಳು ಸದಾ ಕಾಡುತ್ತಲೇ ಇರುತ್ತದೆ. ಆತನ ಮನೆಯವರ ತಲ್ಲಣಗಳ ನೆನೆದು ಮನಸ್ಸು ಮರುಗಿತು. ಕಲ್ಕುಡನ ಪ್ರಕರಣ ನನ್ನೆದೆಯ ಕವಾಟಗಳನ್ನು ಕುಟುಕುತ್ತಲೇ ಇದೆ. ಆಡಳಿತದ ಹೆಬ್ಬಾಗಿಲಲಿ ಇವರ ಈ ಕೃತ್ಯ ಕ್ಷಮಾರ್ಹವಲ್ಲ. ತನ್ನ ಅದ್ಭುತ ಪ್ರತಿಭೆಯನ್ನು ಪ್ರದರ್ಶಿಸಿದ್ದೇ ಆತನ ಅಪರಾಧವೇ? ಎಂಬಿತ್ಯಾದಿ ಪ್ರಶ್ನೆಯ ಅಲೆ ತಾಕುತ್ತಲೇ ಇದೆ. 

ಇತಿಹಾಸದ ಮಗ್ಗುಲಿಗೆ ಮೆತ್ತಿದ ಹೊಸ ಕತೆಗಳಿಗೆ ಕಿವಿಯಾಗುವ ಆಸೆಯೊಂದಿಗೆ, ಮತ್ತೊಂದು ಅಚ್ಚರಿಗಾಗಿ ಕಾಯುತ್ತಾ ವಿರಾಗಿಗೆ ವಿಶಾದದ ಕೈ ಬೀಸಿದೆ!





Friday, January 30, 2026

ಕೀರ್‌ಗಂಗಾ ದಾರಿಯಲ್ಲಿ ಸಿಕ್ಕ ಸಂತ

 


ನನ್ನ ಸ್ಮೃತಿಪಟಲದಿಂದ ಅಳಿಸಿಹೋಯಿತೆಂಬತೆ ಆಗಿದ್ದ ಹಿಮಾಚಲದ ಕೀರ್‌ಗಂಗಾ ಚಾರಣ ಮತ್ತೆ ಮುನ್ನಲೆಗೆ ಬಂದಿದ್ದೇ ಆಕಸ್ಮಿಕ! ಬೆಟ್ಟಗಳಲ್ಲಿ ಕಳೆದೋಗುವುದು ಅಂತಾರೆ ಆದರೆ ಇಲ್ಲಿ ಬರೋಬ್ಬರಿ 1768 ಜನ ಮತ್ತೆಂದೂ ಸಿಗದಂತೆ ಕಣ್ಮರೆಯಾಗಿದ್ದಾರೆ! ಭಾರತದ ಉದ್ದಗಲಕ್ಕೂ ಇಂತಹ ಇನ್ನೊಂದು ಚಾರಣ ಪಥ ಕಾಣಸಿಗದು! ನೆತ್ತಿಯಿಂದ ೨೪ ಗಂಟೆಯೂ ಹರಿದು ಬರುವ ಹಾಲಿನಂತಹ ಬಿಸಿ ನೀರು ಮತ್ತೊಂದು ವಿಶೇಷ! ಜಗತ್ತು ಹುಚ್ಚರ ಸಂತೆ. ಇಲ್ಲಿ ಎಲ್ಲರದೂ ಒಂದು ವಿಭಿನ್ನ ಹುಡುಕಾಟ. ನನ್ನಂಥವರಿಗೆ ತಿರುಗಾಟವೇ ಒಂದು ಬಿಡುಗಡೆ. 



  ಈ ಅಚ್ಚರಿಯ ಜಾಡು ಹಿಡಿದು ಹೊರಟವನಿಗೆ ಹೊಸ ಹೊಸ ವಿಷಯಗಳ ಮಹಾಪೂರವೇ ಕೀರ್‌ಗಂಗಾ ಚಾರಣದ ದಾರಿಯಲ್ಲಿ ಕಾಣಸಿಕ್ಕವು. ಹಾಗಾಗಿ ಕನಸಿನ ಈ ಚಾರಣಕ್ಕೆ ಅಡಿಯಿಟ್ಟೆ ಬನ್ನಿ ನಿಮ್ಮನ್ನೂ ಕರೆದೊಯ್ಯುವೆ.

ಕೀರ್‌ಗಂಗಾ ಹಿಮಾಚಲದ ಕಸೋಲ್‌ ಹಳ್ಳಿಯಿಂದ ಅನತಿ ದೂರದಲ್ಲಿದೆ. ಮಣಿಕರಣವನ್ನೂ ದಾಟಿ ಸಿಗುವ ತೋಷ್‌ನಿಂದಲೂ ಚಾರಣ ಮಾಡಬಹುದು. ದೊಡ್ಡ ಪ್ರವಾಸದ ನಡುವೆ ಹೇಗೋ ಜಾಗ ಮಾಡಿಕೊಂಡು ಚಾರಣಕ್ಕಾಗಿ 3 ದಿನ ತೆಗೆದಿರಿಸಿದೆ. ಕನಿಷ್ಟ ನಾಲ್ಕು ದಿನಗಳ ಚಾರಣವನ್ನು ಎರಡೇ ದಿನದಲ್ಲಿ ಮುಗಿಸುವ ಹಠಕ್ಕೆ ಬಿದ್ದು ಪೂರ್ಣ ಗೊಳಿಸಿದೆವು. ಕೀರ್‌ಗಂಗಾ ರಾಷ್ಟ್ರೀಯ ಉದ್ಯಾನವನದಲ್ಲಿನ 12 ಕಿ.ಮೀ ಅತಿ ಉದ್ದದ ಚಾರಣವನ್ನು ಎರಡೇ ದಿನದಲ್ಲಿ ಪೂರೈಸುವ ಮನಸ್ಸು ಮಾಡಿದೆವು.

ಮಣಿಕರಣದಿಂದ ತೋಷ್‌ಗೆ




ನಾವು ಬಿಜಿಲಿ ಮಹಾದೇವನಿಗೆ ನಮಿಸಿ, ಮಲಾನಾ ದಾರಿಯಲ್ಲಿ ಕಳೆದುಹೋಗಿ, ಮಣಿಕರಣದ ಬಸಿ ನೀರ ಬುಗ್ಗೆಯಲಿ ಮಿಂದೆದ್ದು̧ ಮೈಮನ ತಣಿಸಿಕೊಂಡು ಕೀರ್‌ಗಂಗಾ ಚಾರಣಕ್ಕೆ ಹೊರಟು ನಿಂತಾಗ ನಡು ಹಗಲು. ಬೆಳಗಿನ ಬಸ್ಸಾಗಲೇ ಊರು ತೊರೆದಿತ್ತು. ಕುಂಬಕರ್ಣನ ಹೊಟ್ಟೆಯಂತಹ ಎರಡು ಲಗೇಜು ಹೊತ್ತು ಹೋಗುವುದೂ ಸುಲಭವಿರಲಿಲ್ಲ. ಕಾರು ಹತ್ತಿದೆವು. 

ಓಕ್, ಪೈನ್ ಮರಗಳ ಚಪ್ಪರದಡಿ ನುಸುಳುತ್ತಾ ನುಜ್ಜುಗುಜ್ಜಾದ ರಸ್ತೆಯಿಲ್ಲದ ರಸ್ತೆಯಲ್ಲಿ ತೋಷ್‌ನತ್ತ ಕಾರಿನಲ್ಲಿ ಪ್ರಯಾಣ ಬೆಳೆಸಿದೆವು. ನಡು ಹಗಲಿಗೇ ತಂಪಾದ ಚಂದ್ರನಂತಹ ಸೂರ್ಯ! ಏಕಮುಖಿ ರಸ್ತೆಯ ಗೋಜಲಿಗೆ ಸಿಕ್ಕಿಹಾಕಿಕೊಂಡ ನಮ್ಮ ವಾಹನ ನಡುರಸ್ತೆಯಲ್ಲಿ ಉಳಿಯಿತು. ನಾವು ಊರಿಗೆ ಪಾದ ಸೇವೆಗೈದೆವು. ಒಂದಿಷ್ಟು ಪಡ್ಡೆಗಳು ಊರ ಹೆಬ್ಬಾಗಿಲಿನಲ್ಲಿ  ಅಗ್ನಿ ಕಾರ್ಯ ನಡೆಸಿದ್ದರು. ಅದೇನು ಹುಚ್ಚು ಗೊತ್ತಿಲ್ಲ ಪ್ರತಿ ಸಾರಿ ಕಂಡ ಬೆಟ್ಟವು ನೋಡಿದಷ್ಟು  ಮತ್ತೆ ನೋಡಬೇಕೆನ್ನುವ ಬಯಕೆ. ತನ್ನ ಮೇಲೆ ನೀರ ಗಾಯಗಳನ್ನ ಮಾಡಿಕೊಂಡ ಬೆಟ್ಟ ನಗುತ್ತಲೇ ನಮ್ಮನ್ನು ಸ್ವಾಗತಿಸಿತು. ಅಸಂಖ್ಯಾತ ಬೇರುಗಳು ಹರಿದಾಡಿದಂತೆ ಹಿಮ ಕೊರೆದ ಗೀರುಗಳು. ದೂರದ ಗ್ಲೇಶಿಯರ್ ನಿಂದ ಬೀಸುವ ಕುಳಿರ್ಗಾಳಿ. ಅಪಾರವಾದ ನಿಲುಕದ ಸೌಂದರ್ಯ ಹೊತ್ತ ತೋಷ ಹಳ್ಳಿಗೆ ಮರುಳಾಗಿ ತುಂಬಾ ಹೊತ್ತು ಹಾಗೇ ನಿಂತೆ. 

ತೋಷ್‌ ಎಂಬ ಗ್ಲೋಬಲ್‌ ಹಳ್ಳಿ!




ಮೊದಲೊಂದು ಹಳ್ಳ ದಾಟಿ ಏರು ದಾರಿ ಏರುತ್ತಾ ಜರ್ಮನ್‌ ಬೇಕರಿ, ಇಸ್ರೇಲಿ ಕೆಫೆ ಇವನ್ನೆಲ್ಲಾ ಬಳಸಿ, ಜಮ್ಲು ಮಂದಿರ ದಾಟಿ, ದೂರದ ಜಲಧಾರೆಯ ಶಬ್ದಕ್ಕೆ ಕಿವಿಯಾಗುತ್ತಾ ರೂಂ ಸೇರಿ ಅಲ್ಲೇ ಕುಳಿತು ಎರಡೆರಡು ಲೋಟ ಕಾಫಿ ಸಮಾರಾದನೆ ನಡೆಸಿ ಮನ ತಣಿಸಿಕೊಂಡೆ. ಸ್ವಲ್ಪ ವಿಶ್ರಾಂತಿ ಪಡೆದು ಊರು ಸುತ್ತಲು ಹೊರಟೆವು. 


  ತೋಷ್ ಪಾರ್ವತಿ ಕಣಿವೆಯ ಕೊನೆಯ ಹಳ್ಳಿ. ಹೈನುಗಾರಿಕೆಯೇ ಪ್ರಧಾನ ಉದ್ಯೋಗ. ಗೋಧೂಳಿಯಲ್ಲಿ ಗಂಟೆ ಬಾರಿಸುತ್ತಾ ಗೋಪಾಲಕರ ಹಿಂಡು ಊರ ಕಡೆ ಹೆಜ್ಜೆ ಹಾಕಿದ್ದವು. ಊರ ನೆತ್ತಿಯಲ್ಲೊಂದು ಹಿಮಟೋಪಿ ಹೊತ್ತ ಶಿಖರವೊಂದು ಫ್ರೇಮ್ ಹಾಕಿಸಿದಂತೆ ಆಕಾಶಕ್ಕೆ ತೂಗು ಬಿದ್ದಿತ್ತು. ಪಾರ್ವತಿ ಕಣಿವೆಯ ತುದಿಯೂರು ಸನಿಹದಲ್ಲೆ ತೋಷ್ ನದಿ ಬೋರ್ಗರೆಯುತ್ತಾ ಪಾರ್ವತಿ ನದಿಗೆ ಸೇರುವ ತವಕದಲ್ಲಿ ಕ್ಷಣಕ್ಷಣಕ್ಕೂ ದೂರದ ಬೃಹತ್ ಹಿಮಗಡ್ಡೆ ಕರಗಿಸಿಕೊಂಡು ತನ್ನೊಡಲು ತುಂಬಿಸಿಕೊಂಡು ಹರಿಯುತಿತ್ತು.

 ತೋಷ್ ನದಿ ಹರಿವಿಗಡ್ಡವಾಗಿ ಇತ್ತೀಚಿಗೆ ಚಿಕ್ಕ ಡ್ಯಾಂ ನಿರ್ಮಿಸಿದ್ದಾರೆ. ಅದರ ಹರಿವೆ ಇಲ್ಲಿನ ಪ್ರತಿ ಮನೆಯ ಬೆಳಕ ಪ್ರಜ್ವಲನೆಗೆ ಕಾರಣ. ಊರ ಹಿರಿಯರು ಬಿಸಲು ಕಾಸಿ ಮೈ ಬೆಚ್ಚಗೆ ಮಾಡಿಕೊಂಡು ಹೊರಡುತ್ತಿದ್ದರು. 

ಊರ ಹೆಬ್ಬಾಗಿಲಿನಲ್ಲಿ




ಊರ ಹೆಬ್ಬಾಗಿಲಿನಲಿ ಕಂಡ ಜರ್ಮನ್ ಬೇಕರಿ ನಮ್ಮನ್ನು ಅಚ್ಚರಿಗೆ ತಳ್ಳಿತು. ಅಲ್ಲಿ ಸಿಗುವ ಬ್ರೆಡ್, ಕ್ರೊಸೊಂಟ್ ಗಳಿಂದ ಸ್ಥಳೀಯ ಆಹಾರದ ಮೇಲೆ ಅಲಾವುದ್ದೀನ್ ಖಿಲ್ಜ್ ಆಕ್ರಮಣ! ಆಹಾರ ದಾಸ್ಯದ ಮುಂದುವರಿಕೆ! ಹೇವರಿಕೆ! Eat local ತತ್ವವೇ ನಮ್ಮ ಪಥವಾದುದರಿಂದ ಸ್ಥಳೀಯ ಆಹಾರಕ್ಕೆ ಪ್ರಥಮ ಪ್ರಾಶಸ್ತ್ಯ. ಈ ಕೊನೆಯ ಹಳ್ಳಿಯಲ್ಲೂ ಜರ್ಮನ್ ಬೇಕರಿ ಕಂಡು ಅಚ್ಚರಿ ಮತ್ತು ವಿಶಾದ ಒಟ್ಟೊಟ್ಟಿಗೆ ಉಂಟಾದವು. ಯಾರದೋ ಬಾಯಿ ಚಪಲವ ತಣಿಸಲು ಎಲ್ಲೆಲ್ಲಿಂದಲೋ ಇಲ್ಲಿಗೆ ಬಂದ ಸಕ್ಕರೆ, ಮೈದಾ ಮಿಶ್ರಿತ ತಿನಿಸುಗಳ ಸಂಗಕ್ಕೆ ಬಿದ್ದ ಸ್ಥಳೀಯರನ್ನು ಮೋಹಗೊಳಿಸುತ್ತಲೇ ಇದೆ. ಇಲ್ಲಿನ ಸ್ಥಳೀಯ ಆಹಾರಕ್ಕಾಗಿ ಹುಡುಕಿದಾಗ ಊರ ಚೌಕದ ಸನಿಹ ಜಮದಗ್ನಿಯ ದೇವಾಲಯದ ದಾರಿಯಲ್ಲಿ ಸ್ಥಳೀಯ ಪುಟ್ಟ ಹೋಟೆಲ್ ಕಣ್ಣಿಗೆ ಬಿತ್ತು. ಕತ್ತಲ ಕವಿದ ರಾತ್ರಿಯಲಿ ಮೇಣದ ದೀಪದ ಬೆಳಕಿನಲಿ ಆತನು ಬಡಿಸಿದ ಪದರ ಪದರವಾದ ಜವೆ ಗೋಧಿಯ ರೊಟ್ಟಿ ಹೊಟ್ಟೆ ಜೊತೆಗೆ ಮನಸ್ಸನ್ನೂ ತಣಿಸಿತ್ತು. ಇಲ್ಲಿಗೆ ಆಗಮಿಸಿದ್ದೇ ಈ ಚಾರಣದ ತಿರು ಬಿಂದು!

ಚಾರಣಿಗರ ಸಂತೆಯಲ್ಲೊಬ್ಬ ಸಂತ




ಈ ಉಪಹಾರ ಗೃಹದಲ್ಲೇ ಪ್ರಾನ್ಸ್ ದೇಶದವನೊಬ್ಬ ಭೇಟಿಯಾದ. ಡೂಡೋ ಆತನ ಹೃಸ್ವ ನಾಮಧೇಯ! ಯಾವುದೇ ಆತಂಕವಿಲ್ಲದೆ ಮನೆ ಮಗನಂತೆ ಉಣ್ಣುತಲಿದ್ದ! ಆತ ತನ್ನ ಸಣ್ಣ ಕತೆಯ ಕರಂಡಿಕೆ ಬಿಚ್ಚಿಟ್ಟಿದ್ದು ಹೀಗೆ.


 "ನಾನು ಡೂಡೋ" (ಪೂರ್ಣ ನಾಮ ಮರೆತಿದ್ದೇನೆ) ಪ್ರಾನ್ಸ್ ದೇಶದವ ತೋಷ್‌ನ ಪ್ರಕೃತಿ ಸೌಂದರ್ಯಕ್ಕೆ ಮರುಳಾಗಿ ಪ್ರತಿವರ್ಷ ಬರುತ್ತಿದ್ದೇನೆ! ನಾನು ನನ್ನ ಅಕ್ಕನ ಜೊತೆ ವಾಸವಾಗಿದ್ದೇನೆ. ಮದುವೆ ಆಗಿಲ್ಲ, ಆಗುವ ಆಸೆಯೂ ಇಲ್ಲ. ಪ್ರಾಯ 50. ನನ್ನ 25ನೆಯ ವರ್ಷಕ್ಕೆ ಅಂದರೆ 2000ನೆಯ ಇಸವಿಗೆ ಇಲ್ಲಿಗೆ ಮೊದಲ ಬಾರಿಗೆ ಬಂದೆ! ಇದು ನನ್ನ 25ನೆಯ ಭೇಟಿ! ಎಂದು ಬೆರಳು ಚೀಪುತ್ತಾ ಊಟ ಮುಗಿಸಿದ. ಆತನ ಈ ಮಾತು ನನ್ನಲ್ಲಿ ಪ್ರಶ್ನೆಗಳ ಮಹಾಪೂರದ ಅಲೆಯನ್ನೇ ಎಬ್ಬಿಸಿತು. ಒಬ್ಬ ವ್ಯಕ್ತಿ ತನ್ನೆಲ್ಲಾ ಕೆಲಸವನ್ನು, ತಿರುಗಾಟವನ್ನು ಬದಿಗಿಟ್ಟು ಬರಬೇಕೆಂದರೆ ಇಲ್ಲಿನ ಅಪೂರ್ವ ಆಕರ್ಷಣೆಯಾದರೂ ಏನು? ಊರವರ ಗೆಳೆತನವೇ? ಮುಕ್ತವಾಗಿ ಸಿಗುವ ಗಾಂಜಾವೇ? ಯಾವುದು ಅವನ ಹಿಡಿದಿಟ್ಟ ಆಸಕ್ತಿಯ ಬಿಂದು? ತಿಳಿಯದಾದೆ. ಮರುದಿನದ ತರುವಾಯ ಕೀರ್‌ಗಂಗಾ ಚಾರಣ ಹಾದಿಯಲ್ಲೂ 12ರ ಸುಮಾರಿಗೆ ಸಿಕ್ಕಿ ಅಚ್ಚರಿಗೆ ತಳ್ಳಿದ್ದ! ಕೇಳುವ ನೂರಾರು ಪ್ರಶ್ನೆಗಳು ನನ್ನಲೇ ಉಳಿದವು. ಎಲ್ಲವನ್ನು ನುಂಗಿಕೊಂಡು ಹೊರಟು ಬಿಟ್ಟೆ! ಊರ ಜಗುಲಿಯಲಿ ಅನೇಕ ಇಸ್ರೇಲಿ ಹೋಟೆಲುಗಳು, ವಿಶಿಷ್ಟ ವಿನ್ಯಾಸದಿಂದ ಕಂಗೊಳಿಸುತ್ತಿದ್ದವು. ಎಲ್ಲಿಯ ಇಸ್ರೇಲ್ ಎಲ್ಲಿಯ ತೋಷ್, ಎಲ್ಲಿಯ ಪಾರ್ವತಿ ಕಣಿವೆ? ಉದಾರಿಕರಣದ ಪದತಲದಲ್ಲಿ ಕಮರಿದ ದೇಸಿ ತಿನಿಸುಗಳ ಲೆಕ್ಕಾವಿಟ್ಟರ‍್ಯಾರು? ನಮ್ಮ ತನವ ಫೋಕೇಸ್ ಮಾಡಲಾಗದ ಮೂರ್ಖರಂತೆ, ಪೆಕರರಂತೆ ಭಾಸವಾದೆವು. 

ಯಾವುದೇ ಹೆಚ್ಚಿನ ಲಗೇಜುಗಳಿಲ್ಲದೇ ಮಣಿಪುರದ ಶಂಗೈ ಹಬ್ಬದಲ್ಲೂ ಇಟಲಿಯ ಪ್ರವಾಸಿಗನೊಬ್ಬ ಸಿಕ್ಕಿದ್ದ. ಅವನಂತೆಯೇ ಈ ಡುಡೋ ಭಾಸವಾಗಿದ್ದ! ಮುರುಕು ಇಂಗ್ಲೀಷ್‌ನಲ್ಲಿ ಮಾತನಾಡಿ ಅವನ ಸ್ನೇಹ ಸಂಪಾದಿಸಿದ್ದೆ. ತನ್ನ ಪೋನ್ ಸಂಖ್ಯೆ ನೀಡಿ ಇಟಲಿಗೂ ಆಹ್ವಾನಿಸಿದ್ದ!

ಒರಟು ಒಳದಾರಿಗೆ ಹೊರಳಿ  





ಸಾಮಾನ್ಯ ಚಾರಣದಂತೆ ಕಂಡರೂ ಇದು ಸಾಮಾನ್ಯ ಚಾರಣವಲ್ಲ. ಎಲ್ಲ ದೊಡ್ಡ ಚಾರಣಗಳ ಹೂರಣ ಹೊತ್ತ ದಾರಿ. ಯಾಮಾರಿದರೆ ಸ್ವರ್ಗಕ್ಕೆ ರಹದಾರಿ! ಇದೊಂದು ಅನನ್ಯ ಚಾರಣ ದಾರಿ. ದಾರಿಯುದ್ದಕ್ಕೂ ಸಿಗುವ ನೂರಾರು ತೊರೆಗಳು, ಫರ್ನ್‌ಗಳು, ಜಲಪಾತಗಳು, ನಕ್ತಾನ್‌, ಕಲ್ಗಾ ಎಂಬ ಹಳ್ಳಿ ಇದನ್ನು ವಿಶಿಷ್ಟ ಚಾರಣವನ್ನಾಗಿಸಿದೆ. ಅಲ್ಲದೇ ಕಳೆದು ಹೋದ ಆ ೧೭೬೮ ಜನ ಚಾರಣಕ್ಕೊಂದು ನಿಗೂಢ ಮೆರಗನ್ನು ನೀಡಿ ಹೋಗಿದ್ದಾರೆ!  

  


ಕೀರ್‌ಗಂಗಾಕೆ ಪ್ರಮುಖ ಎರಡು ದಾರಿಗಳು ಮೊದಲನೆ ಬರ್‌ಶೈನಿಯಿಂದ ವಯಾ ಕಲ್ಗಾ. ಎರಡನೆಯ ದಾರಿ ನಾಕ್‌ತಾನ್‌ ಹಳ್ಳಿಯ ಮೂಲಕ. ನಾಕ್ತಾನ್ ದಾರಿ ಬಲು ಕಠಿಣ. ಹೊಸ ದಾರಿಯ ಹುಡುಕಾಟದಲ್ಲಿರುವವರಿಗಾಗಿ ಕಾದಿರುವ ದಾರಿ ಬುನ್‌ಬುನಿ. ಸ್ವಲ್ಪ ಕಠಿಣವಾದರೂ ಅನ್ವೇಷಣಾ ಅಲೆಮಾರಿಗಳಿಗೆ ಉತ್ತಮ!

  ನಾವು ಆಯ್ಕೆ ಮಾಡಿಕೊಂಡ ದಾರಿ ಬರ್‌ಶೈನಿಯಿಂದ ಕಲ್ಗಾ ಮೂಲಕ ಕಾಡು ಬೀಳುವುದೆಂದು ತೀರ್ಮಾನಿಸಿ ನಾಕ್ತಾನ್‌ ಹಳ್ಳಿ ದಾರಿ ಬಿಟ್ಟೆವು. ಹೇಗೆ ಈ ಊರ ಉಚ್ಚಾರಣೆ ನನಗಿನ್ನೂ ಗೊಂದಲವಿದೆ.





  ಬರ್‌ಶೈನಿಯಲ್ಲೇ ಚಾರಣಿಗರ ಸಂತೆ ನೆರೆದಿತ್ತು. ತಲೆಗೊಂದು ಸಾವಿರವಿತ್ತು. ಅಲ್ಲೊಬ್ಬ ದಾಂಡಿಗನತಹ ಗೈಡ್‌ನೊಂದಿಗೆ ಸನಿಹದ ಬರಶೈನಿ ಡ್ಯಾಂ ದಾಟಿ ಕೀರ್‌ಗಂಗಾ ದಾರಿಗಡಿ ಇಟ್ಟೆವು.

 ಕೀರ್‌ಗಂಗಾದ ದಾರಿ ಓಕ್ ಮತ್ತು ಮ್ಯಾಪಲ್ ಮರಗಳ ದಟ್ಟಣಿಯ ನಡುವೆ ಕಾಲು ಹಾದಿ ಜಾಗ ಮಾಡಿಕೊಂಡು ನುಸುಳಿ ಹೊರಟಿತ್ತು. ಕಡು ನೀಲ ಹಕ್ಕಿಯೆಂದು ನನಗೆ ಕೀರ್‌ಗಂಗಾ ಚಾರಣಕ್ಕೆ ಸ್ವಾಗತವೆಂದುಸುರಿ ನಭಕ್ಕೆ ಹಾರಿತು. ಅದರ ಹತ್ತಾರು ಚಿತ್ರ ನನ್ನ ಕ್ಯಾಮರಾದಲ್ಲಿ ದಾಖಲಾಯಿತು. ಹತ್ತು ಹೆಜ್ಜೆ ಹಾಕುತ್ತಲೆ ಚಾರಣದಾರಿ ಗಡ್ಡವಾಗಿ ಹರಿವ ತೊರೆಯನು ಹರ ಸಾಹಸಗೈದು ದಾಟಿದೆವು. ನಮ್ಮ ಸಾಹಸ ಪರೀಕ್ಷೆ ಮಾಡಲು ಕೇವಲ ಒಂದೇ ಒಂದು ತುಂಡು ಮರವನ್ನು ದಾರಿಗಡ್ಡವಾಗಿ ಹಾಕಲಾಗಿತ್ತು. ಇವೆಲ್ಲವು ಬರ್‌ಶೈನಿಯ ಬೃಹತ್ ಅಣೆಕಟ್ಟಿಗೆ ನೀರೂಡುವ ಪುಟಾಣಿ ಸ್ತನಗಳು. 


ತೋಷ್‌ಗೆ, ಬರಶೈನಿಗೆ ಬೆಳಕು ಚೆಲ್ಲುವ ಪುಟಾಣಿ ಡ್ಯಾಂ ಕರಗಿದ ಹಿಮಗಡ್ಡೆಗಳಿಂದ ವಿದ್ಯುತ್ ಉತ್ಪಾದಿಸುತ್ತಲೇ ಇದೆ. ಮಾನವ ಅಭೀಪ್ಸೆಗೆ ಬೆಲೆ ತೆತ್ತುತ್ತಲೇ ಇದೆ. 2025ರ ಮಹಾ ಮಳೆಯೊಂದು ರಾತ್ರೋರಾತ್ರಿ ಪಾರ್ವತಿಕೊಳ್ಳದ ಊರನ್ನು ನದಿಗುಂಟ ಕೊಚ್ಚಿ ಸಾಗಿಸಿದೆ ಎಂಬ ಸುದ್ದಿ ತಿಳಿಯುತ್ತಲೇ ಖಿನ್ನನಾದೆ. ಅಂತಹ ಜಲಪ್ರಳಯಕ್ಕೆ ಈ ಊರುಗಳು ಸಾಕ್ಷಿಯಾಗಬೇಕಾಗಿದ್ದು, ದುರಾದೃಷ್ಣ.





 ದಾರಿಯುದ್ದಕ್ಕೂ 3-4 ಜಲಪಾತಗಳು ಬಳುಕುತ್ತಾ ಹರಿಯುವವು. ಒಂದು ಜಲಪಾತದಲ್ಲಂತೂ 3-4 ಜನ ತಮ್ಮ ಪ್ರಾಣ ಕಳಕೊಂಡಿದ್ದರು! ಅವುಗಳಿಗೆ ಅವರ ಹೆಸರನ್ನೇ ಇರಿಸಲಾಗಿತ್ತು. ಭೀಕರತೆಯಿಂದ ಹರಿವ ನಡು ಚಾರಣದ ನಡುವೆ ಸಿಗುವ ಹೆಸರೇ ಇಲ್ಲದ ಜಲಪಾತವೂ ಒಂದು. ಇಲ್ಲಿ ದಣಿವಾರಿಸಿಕೊಳ್ಳಲು ಹಲವು ಕೆಫೆಗಳಿಗೆ. ಝಳು ಝಳು ಹರಿವ ತೊರೆಗೆ ಕಾಲಿಟ್ಟು ಕಾಫಿ ಹೀರಿ ಚಾರಣಿಗರನ್ನು ನೋಡುತ್ತಾ ಕೂರುವುದು ವಿಶೇಷ ಅನುಭವ! ಸನಿಹ ದೂರಿನ ಹಲವು ನಾಯಿಗಳು ನಮ್ಮನ್ನು ಹಿಂಬಾಲಿಸಿ ಇಲ್ಲಿ ಬಿಸಿಲ ಹೀರುತ್ತಾ ಕುಳಿತವು. 



ಹೆಸರಿಸದ ಜಲಪಾತ ದಾಟುತ್ತಲೇ ದಾರಿ ಏರು ಮುಖವಾಗಿತ್ತು. ಏರು ಇಳಿಯ ದಾರಿಗಳ ದಾಟಿ ಅರ್ಧ ದಾರಿ ಏರಿ ಬಂದಾಗ ಮತ್ತೊಂದು ಜಲಪಾತ ನಿರುಮ್ಮಳವಾಗಿ ಹರಿಯುತಲಿತ್ತು. ದೂರದಿಂದೊಂದು ಜಲಧಾರೆ ಈ ಜಲಧಾರೆಗೆ ಬಂದು ಸೇರಿತ್ತು. ಇಲ್ಲಿ ತಂಗಲು ವ್ಯವಸ್ಥೆ ಸಹ ಇದೆ. ನಮ್ಮ ಗುರಿ ಕೀರ್‌ಗಂಗಾವಾದುದರಿಂದ ಕಾಲು ತೋಯಿಸಿ ಹರಿವ ನೀರ ಜೋಗುಳವನು ಆಲಿಸಿ ಕಾಫಿ ಹೀರಿ, ಹೊಟ್ಟೆ ಪೂಜೆ ಮಾಡಿ ಹೊರಟು ಬಿಟ್ಟೆವು.

ಕಾಡ ಗರ್ಭದಲ್ಲಿ


 ಕಾಡಗರ್ಭಕ್ಕಿಳಿದಂತೆ ಧಾರೆ ಮತ್ತು ಮಸ್ಕ್ ಜಿಂಕೆಗಳು ಉಜ್ಜಿ ಹೋದ ಮರಗಳು ಅವುಗಳ ಇರುವಿಕೆಯ ಸಾಕ್ಷಿ ನುಡಿಯುತ್ತಿತ್ತು. ಮುಂದಿನ ಕಠಿಣ ಏರುದಾರಿಗಳ ಏರಲು ಅಲ್ಲಲ್ಲಿ ಕಬ್ಬಿಣದ ಸಲಾಖೆ ನೆಟ್ಟಿದ್ದರು. ಒಂದೆರಡು ಜಲಪಾತಗಳ ರುದ್ರ ಭೀಕರತೆ ಕಂಡು ಬೆರಗಾದೆನು. ಒಂದು ಜಲಪಾತದಲ್ಲಂತೂ ಇತಿಂಥವರು ಸತ್ತಿದ್ದಾರೆಂದು ಗಿಡಗಳ ಕೊಂಬೆಗಳಿಗೆ ಬೋರ್ಡು ನೇತು ಹಾಕಿದ್ದರು.




ಕಾಡ ಗರ್ಭ ಹೊಕ್ಕು ಹೊರಟು ನಿಂತಾಗ ದಾರಿಯುದ್ದಕ್ಕೂ ಒರಟು ಕಲ್ಲುಗಳ ಪತ್ತೆದಾರಿಕೆ. ಓಕ್ ಮರಗಳ ಎಲೆಗಳು ದಾರಿಯ ಜಾರುವಿಕೆಯಲ್ಲಿ ಮತ್ತಷ್ಟು ತೀವ್ರಗೊಳಿಸಿ ಜಿಡುಕಾಗಿಸಿತ್ತು. ಅಲ್ಲಲ್ಲಿ ಸಿಗುವ ಸಣ್ಣ ತೊರೆಗಳ ಬಳಸಿ ದಾಟುವಾಗಲೇ ಆಕಾಶ ಬಿಕ್ಕ ತೊಡಗಿತು. ಚಳಿಯಲ್ಲಿ ನಡುಗುತ್ತಾ ಪೋಂಚೋ ಹಾಕಿ ಯಾವುದೇ ಭಯವಿಲ್ಲದೇ ದಾಟಿಕೊಂಡದ್ದು ನೆನೆದರೆ ಬೆನ್ನು ಹುರಿಯಲ್ಲಿ ಸಣ್ಣ ನಡುಕ. ಕೆಲವೆಡೆ ಜಾರುವ ಬಂಡೆಗಳ ಮೇಲೆ ಕಪ್ಪೆ ಹಿಡಿದಂತೆ ಬಂಡೆ ಹಿಡಿದು ನೀರ ಝರಿಗಳ ದಾಟಬೇಕು.







 ನಡು ದಾರಿಗೊಂದು ಚಂದದ ಜಲಪಾತ. ಜಲಪಾತದ ಹಾದಿಯಲ್ಲೇ ಟೇಬಲ್ ಕುರ್ಚಿ ಜೋಡಿಸಿದ ಚಿಕ್ಕ ಮ್ಯಾಗಿ ಪಾಯಿಂಟ್. ಇಲ್ಲಿಂದ ಪ್ರಪಾತದ ಸನಿಹವೇ ಬಳಸು ದಾರಿಯೊಂದು ಕೀರ್‌ಗಂಗಾದತ್ತ ಪ್ರಯಾಣ ಬೆಳೆಸುತ್ತದೆ. ಅರಣ್ಯ ಇಲಾಖೆ ಇಲ್ಲಿ ಪ್ರಯಾಣಿಕರ ನೋಂದಣಿ ಮಾಡಿಕೊಳ್ಳುತ್ತದೆ. ನಡು ಮಧ್ಯಾಹ್ನ ದಾಟಿದ್ದರಿಂದ ಇಲ್ಲಿ ಚಿಕ್ಕ ಉಪಹಾರ ಸೇವಿಸಿ ಜಲಪಾತದಲ್ಲಿ ಕಾಲು ತೋಯಿಸಿ ಹೊರಟೆವು. ಸರಿಸುಮಾರು 5 ಗಂಟೆ ಹೊತ್ತಿಗೆ ಕೀರ್‌ಗಂಗಾದ ನೆತ್ತಿಯಲ್ಲಿದ್ದೆವು.




 ನೂರಾರು ಕ್ಯಾಂಪ್‌ಗಳು ಚಾರಣಿಗರಿಗಾಗಿ ಇಲ್ಲಿ ಹಾಕಲಾಗಿದೆ. ಹಣ್ಣಿನ ರಸ ಒಂದನು ಹೀರಿ ಕೀರ್‌ಗಂಗಾದ ಬಿಸಿ ನೀರಿನ ಬುಗ್ಗೆಗೆ ಲಗ್ಗೆ ಇಟ್ಟೆವು. ಚಾರಣದ ಆಯಾಸವನ್ನೆಲ್ಲಾ ಒಂದು ಚಿಕ್ಕ ಸ್ನಾನ ತೊಳೆದು ಹಾಕಿತು. ಪ್ರತಿ ಹನಿಯಲ್ಲೂ ಹರಿದು ಬರುವ ಹಾಲಿನ ಕೆನೆಯಂತಹ ಸಣ್ಣ ಕಣ! ಕ್ಷಣ ಕ್ಷಣವೂ ಉಕ್ಕುಕ್ಕಿ ಹರಿವ ಬಿಸಿ ನೀರು! ತಣ್ಣಗಿನ ವಾತಾವರಣದಲ್ಲಿ ಮೈ ತಾಗಿಸಿದರೆ ಸುಟ್ಟು ಹೋಗುವಷ್ಟು ಬಿಸಿನೀರು ಚಾರಣದ ಆಯಾಸ ತೊಡೆದು ಹಾಕಲು ಮನಸೊ ಇಚ್ಚೆ ಮಿಂದು ಮುಳುಗುವ ಸೂರ‍್ಯನಿಗೆ ಮುಖ ಮಾಡಿ ಕುಳಿತೆವು. ಬೃಹತ್ ಬೆಟ್ಟವೊಂದರ ನೆತ್ತಿಯಿಂದ ಹರಿವ ಬಿಸಿನೀರೇ ಒಂದು ಕೌತುಕ. ಬೇಸಿಗೆ ಪೂರ್ಣ ಬಿಸಿನೀರ ಔತಣ ಉಣ ಬಡಿಸುತ್ತದೆ. ಡಿಸೆಂಬರ್‌ನಿಂದ ಮಾರ್ಚ್ವರೆಗೆ ಬಿಸಿನೀರ ಬುಗ್ಗೆಗೆ ಬಿಡುವು! ಹಿಮ ಕಟ್ಟಿ ನೀರ ಹರಿವು ನಿಲ್ಲುತ್ತದೆ. ಮೊದ ಮೊದಲು ಈ ಬಿಸಿನೀರನ್ನು ಕೊಳವೊಂದಕ್ಕೆ ಹಾಯಿಸಲಾಗುತ್ತಿತ್ತು. ಆದರೆ ಈಗ ಕೇವಲ ಸಣ್ಣ ನಲ್ಲಿಯಂತಹುದನು ಮಾಡಿ ಸ್ನಾನ ಮಾಡಬೇಕಾದ ಅನಿವಾರ್ಯತೆ! ಸನಿಹದ ಶಿವ ಮತ್ತು ಕಾರ್ತಿಕೆಯನ ಗುಹಾ ದರ್ಶನ ಮಾಡಿ ರಾತ್ರಿಯ ಆಕಾಶಗಂಗೆಗಾಗಿ ಕಾದು ಕುಳಿತೆವು.

ಮ್ಯಾಗಿ ಮತ್ತು ಮಿಲ್ಕೀವೇ




  ಬಿಸಿ ಬಿಸಿಯಾಗಿ ಹರಿವ ಚಿಲುಮೆಯಲಿ ಮಿಂದು, ಮ್ಯಾಗಿ ತಿಂದು ಮಿಲ್ಕೀವೇ ಕಾಣುವ ಕನಸಿಗೆ ಕಾತರಿಸಿದೆವು. ಚಳಿಯಾಗದಿರಲೆಂದು ಬೆಟ್ಟಗಳೆಲ್ಲಾ ಹಿಮ ಟೋಪಿ ಹೊದ್ದು ಕುಳಿತಿದ್ದವು. ಸುಂದರವಾದ ಸಂಜೆ 3000 ಮೀ ಎತ್ತರದಲ್ಲಿ ಸಾಕ್ಷಿಯಾಯಿತು! ರಾತ್ರಿಯಾಗುತ್ತಲೇ ನಮ್ಮ `ಓಂ ಶಾಂತಿ' ಟೆಂಟ್‌ನ ಬಾಣಸಿಗ ಬಡಿಸಿದ ದಾಲ್ ಖಿಚಿಡಿ, ಪನ್ನೀರ್ ಗ್ರೇವಿ, ಸಲಾಡ್ ನಮ್ಮ ರುಚಿಮೊಗ್ಗುಗಳನ್ನು ಬಡಿದೆಬ್ಬಿಸಿತ್ತು! ಬದುಕಿನ ಅತ್ಯುತ್ತಮ ಊಟವೊಂದು ದಾಖಲಾಯಿತು. ಕಾಲು ಸರಿಯಿಲ್ಲದ ಬಾಣಸಿಗನೊಬ್ಬ ಕಷ್ಟಪಟ್ಟು ಮೇಲೇರಿ ಬಂದು ಅಡುಗೆ ಮಾಡಿದ್ದ. ಆತನ ಬದುಕಿನ ಕಷ್ಟಗಳು ಏನಿದ್ದವೋ? ಸದಾ ಚಡ ಪಡಿಸುತ್ತಲೇ ಇರುತ್ತಿದ್ದ. ಹಿಮಾಚಲ, ಮೇಘಾಲಯದಲ್ಲಿ ಹಬ್ಬುತ್ತಿರುವ ಗಾಂಜಾ ವಾಸನೆ ಇಲ್ಲಿ ನನ್ನ ಮೂಗಿಗೂ ಬಡಿದಿತ್ತು!! ರಾತ್ರಿಯಾಗುತ್ತಲೇ ಆಗಸದ ಬೀದಿಯಲ್ಲಿ ತಾರಾ ಮೆರವಣಿಗೆ. ಎಲ್ಲೂ ಜಾಗವಿಲ್ಲದಂತೆ ಹಾಸಿದ್ದ ನಕ್ಷತ್ರ ಚಾಪೆ! ಕೌತುಕಮಯ ನೀಲಾಕಾಶ. ನಮ್ಮಲ್ಲಿ ಒಂದೆರಡು ತಾರಾ ದರ್ಶನವಷ್ಟೇ ಅಲ್ಲಿನ ಆಕಾಶವೇ ಬೇರೆ ಎಂಬಂತೆ ಭಾಸ.

ಕೊನೆಯ ಮತ್ತು

 ನಕ್ತಾನ ದಾರಿಯಲ್ಲಿ ಇಳಿಯುವ ಮನಸ್ಸಾದರೂ ದಾರಿತಪ್ಪುವ ಭಯದಲ್ಲಿ ಕುಲ್ಗಾದ ಅದೇ ದಾರಿ ಹಿಡಿದೆವು. ತೀವ್ರ ಕಡಿದಾದ ಮೂರು ಕಿಲೋಮೀಟರ್ ಇಳಿದಿದ್ದೇವಷ್ಟೇ ಆಗಷ್ಟೇ ಸೂರ‍್ಯ ಕಣ್ಣು ಒಡೆದಿದ್ದ. ಇಳಿವ ಧಾವಂತದ ನಡುವೆ ಕಾರ್ತಿಕೇಯ ಗುಹೆ ಹೊಕ್ಕು ಕತೆಗಳಿಗೆ ಆವಿಯಾದೆ. ನಮ್ಮ ದಂಡು ಹೊರಡಲು ತಯಾರಿ ನಡೆಸಿತ್ತು. 

 ಹಳದಿ ಬೆಳಕಲಿ ಮೀಯುತ್ತಾ ಬೆಟ್ಟಗಳ ಬಾಯ್ ಬಾಯ್ ಹೇಳಿದೆ. ಪೈನ್ ಡಿಯೋದಾರ್ ಮರಗಳ ನೆರಳಲ್ಲಿ ಜಾರುತ್ತಾ ನಡೆಯ ಹತ್ತಿದೆವು. ಅರ್ಧ ದಾರಿ ಕ್ರಮಿಸಿದ್ದೆವಷ್ಟೇ ಕೊನೆಯ ಜಲಪಾತದ ನಿಲ್ದಾಣ ಎದುರಾಯಿತು.

ಡೂಡೋ ಎದುರಾಗಿ



 ತೋಷ್ ಊರಿನಲ್ಲಿ ಸಿಕ್ಕ ಸಂತ `ಡೂಡೋ' ಎದುರಾದ. ಒಂದು ಕೋಲು, ಹತ್ತಿ ಜೋಳಿಗೆ ಹಿಡಿದು ಚಾರಣಕ್ಕೆ ಹೊರಟಿದ್ದ! ಆತನೊಂದಿಗೆ ಹರಟಲು ಹಲವು ವಿಷಯಗಳಿದ್ದವು. ಆಗಲೇ ನನ್ನ ಬಿಟ್ಟು ತೆರಳಿದ ಗುಂಪು ಮುಂದಡಿ ಇಟ್ಟಾಗಿತ್ತು. ಕೇವಲ ಸೆಲ್ಫಿಯೊಂದ ಕ್ಲಿಕ್ಕಿಸಿ ಪ್ರಶ್ನೆಯ ದೊಡ್ಡದೊಂದು ಮೂಟೆ ಹೊತ್ತು ಹೊರಟು ಬಿಟ್ಟೆ. ಗೆಳೆಯರ ಗುಂಪು ಬಿಟ್ಟು ಈತನ ಕತೆಗಳಿಗೆ ಕಿವಿಯಾಗಬೇಕಿತ್ತೆಂದು ಈಗ ಪಶ್ಚಾತ್ತಾಪವಾಗುತ್ತಿದ್ದೆ! ಇನ್ನೆಂದರೂ ಇಂತಹ ಅವಕಾಶವೊಂದನು ಮತ್ತೆ ಬಿಡಬಾರದೆಂಬ ಪ್ರತಿಜ್ಞೆಯೊಂದಿಗೆ ಬರಶೈನಿ ಕಡೆಗೆ ಹೆಜ್ಜೆ ಹಾಕಿದೆ.

 ಬರಶೈನಿಯ ಹೋಟೆಲ್‌ನಲ್ಲಿ ಉಂಡ ದಾಲ್‌ ಮಾಕ್ನಿ, ಸಬ್ಜಿ ಊಟದ ಸವಿಯಿನ್ನೂ ನಾಲಿಗೆ ತುದಿಯಲ್ಲಿದೆ. ಮತ್ತೊಮ್ಮೆ ಅಂತಹ ಊಟಕ್ಕಾಗಿ ತಹತಹಿಸುತ್ತಾ ಬರಶೈನಿಗೆ ಬಾಯ್ ಹೇಳುತ್ತಾ ಸೀಸುವಿನ ಅನಂತ ಆಕಾಶವನ್ನು ಅಪ್ಪಲು ಬರಶೈನಿಯಿಂದ ಕಾರು ಹತ್ತಿದೆ!

ವಾರೆ ನೋಟ

ಹೊಷಾಯ್ ಹೊಸೆದ ಹೊಸ ಕತೆ….

  ಕಾರ್ಕಳದ ಗೊಮ್ಮಟ ಗಿರಿಯ ಪ್ರತೀ ಮೆಟ್ಟಿಲುಗಳು ಹೊಷಾಯ್ ಕತೆಯನ್ನು ಪ್ರತಿಫಲಿಸುತ್ತದೆ . ಬದುಕಿನ ಬವಣೆಯ ಸಾರವನ್ನು ತೆರೆದಿಡುತ್ತದೆ. ಆತನ ಆರ್ತತತೆ ಪ್ರತೀ ಮೆಟ್ಟಿಲು...