Thursday, July 9, 2026

ಬಲ ಉಳ್ಳವರ ಅಹೋ ಬಿಲಂ!

 


ನಾವು ಮೂವರು ಅಹೋಬಿಲಂಗೆ ಬಂದು ತಲುಪಿದ್ದೆ ಒಂದು ಅಚ್ಚರಿ. ಚೌಕಟ್ಟೇ ಇಲ್ಲದ ಒಂದು ಯೋಜನೆಯೊಳಗೆ ಅದು ಹೇಗೋ ಈ ದೇವಾಲಯ ತೂರಿಕೊಂಡಿತು. ಎಲ್ಲೋ ಓದಿದ ಪೇಪರ್‌ ತುಣುಕೊಂದರ ಸಹಾಯದಿಂದ ಆಂಧ್ರದ ಮೂಲೆಯೂರಿಗೆ ಪ್ರಯಾಣ ಬೆಳೆಸಿದೆವು. 

ಭವನಾಶಿನಿ ನದಿ ತಟದ ಅಹೋಬಿಲಂ -

 ಭರತ ಖಂಡದ ಯಾವ ಮೂಲೆಗೆ ಹೋದರೂ ನಿಮಗೆ ಒಂದೇ ಊರಿನಲ್ಲಿ 9 ನರಸಿಂಹ ದೇವಾಲಯಗಳು ಸಿಗಲಾರವು. ಅಂತಹ ಮಹಾ ವಿಚಿತ್ರ ಅಹೋಬಿಲಂ! ತೆಲುಗಿನಲ್ಲಿ ಬಿಲಂ ಎಂದರೆ ಗುಹೆ. ನಮ್ಮ ನಿಯಾನ್ ಕಣ್ಣುಗಳಲ್ಲಿ ಮಿಂಚಿದ ಪ್ರಶ್ನೆಗಳು ಹಲವು. ಒಂಭತ್ತು ದೇವಾಲಯಗಳನ್ನು ಒಂದೇ ಊರಿನಲ್ಲಿ ನಿರ್ಮಿಸುವ ಔಚಿತ್ಯವಾದರೂ ಏನು? ಅಚ್ಚರಿಯ ಅಹೋಬಿಲಂನ್ನು ಒಂದೇ ಗುಟುಕಿನಲಿ ನೋಡಿದ ನಮ್ಮ ಪಯಣದ ಮೆಲುಕು ಹಾಕೋಣ ಬನ್ನಿ. 

ಪೊಂಗಲ್‌ ಮುನ್ನುಡಿ!



 ಅದೆಲ್ಲಿಂದಲೋ ಕಾರು ಬಾಡಿಗೆಗೆ ಹಿಡಿದು. ಸಿಕ್ಕ ಒಂದು ರೈಲು ಹತ್ತಿ ಆಂಧ್ರದ ನಂದ್ಯಾಲ ಜಿಲ್ಲೆಯ ಅಹೋಬಿಲಂಗೆ ಬೆಳ್ಳಂ ಬೆಳಿಗ್ಗೆ ಹೆಜ್ಜೆ ಇಟ್ಟೆವು. ಮುಸುಕು ಎಳೆದು ಮಲಗಿದ್ದ ಊರನ್ನು ನಮ್ಮ ಬಸ್ಸು ಎಬ್ಬಿಸಿತು. ಜೊತೆಗೆ ಮಹಾ ಧೂಳಿನ ನೆಬ್ಯೂಲಾ ಊರನ್ನು ಮುಚ್ಚಿತು. ನಮ್ಮ ಮೂಗನ್ನೂ. 

 ಊರಿಗೆ ಕಾಲಿಡುತ್ತಲೆ ಸಣ್ಣ ಲಾಡ್ಜು ಹಿಡಿದು ಪ್ರಾತಃವಿಧಿಗಳನ್ನು ಪೂರೈಸಿ ಬಳ್ಳಾರಿ ಭಟ್ಟರ ಹೋಟೆಲಿಗೆ ಲಗ್ಗೆ ಇಟ್ಟೆವು. ಭಟ್ಟರಿನ್ನು ಬಾಗಿಲು ತೆರೆದಿರಲಿಲ್ಲ. ಹೋಟೆಲ್‌ ತೆರೆಯುತ್ತಲೇ ಪೊಂಗಲ್‌ ಬಾರಿಸಿ ಭಟ್ಟರ ಕುಶಲೋಪರಿ ವಿಚಾರಿಸಿ ನರಸಿಂಹ ದೇವಾಲಯ ಭೇಟಿಗೆ ಹೊರಟು ಬಿಟ್ಟೆವು. 

ಕನ್ನಡ ನಾಡಿನ ಬಳ್ಳಾರಿಯಿಂದ ಬಂದ ಭಟ್ಟರ ತಂದೆ ಇಲ್ಲೇ ನೆಲೆಯೂರಿದವರು. ಅಂದಿನ ಅವರ ದುರ್ದು ಏನಿತ್ತೋ. ಸಣ್ಣದೊಂದು ಕಿರಿಯ ಪ್ರಾಥಮಿಕ ಶಾಲೆ ಬಿಟ್ಟರೇ ಬೇರೆ ಸೌಲಭ್ಯಗಳಿಲ್ಲ. ವ್ಯಾಪಾರವಾಗುತ್ತದೆ ಎಂಬ ಭರವಸೆ ಏನಿಲ್ಲ. ಯಾರೂ ಇಲ್ಲಿ ಉಳಿಯಲು ಮನಸ್ಸು ಮಾಡುವುದಿಲ್ಲ! ಅತ್ತ ಮಲೆನಾಡು ಅಲ್ಲದ ಇತ್ತ ಬಯಲು ಸೀಮೆಯೂ ಅಲ್ಲದ ಕಾಡ ನಡುವಿನ ಊರು. ದೂರದ ಬಾಗಲ ಕೋಟೆಯ ಇಬ್ಬರು ಇಲ್ಲಿ ಸಿಕ್ಕರು.  

 ಬದುಕಿನ ನಾಗಾಲೋಟಕ್ಕೆ ಬ್ರೇಕ್‌ ಬೇಕೆನಿಸಿದರೆ ಇಲ್ಲಿಗೆ ಸುಮ್ಮನೆ ಬನ್ನಿ! ಯಾವುದೋ ನಾಟಕದ ಪಾತ್ರಧಾರಿಗಳಂತೆ ಇಲ್ಲಿನವರು ನಿಮಗೆ ಕಾಣುತ್ತಾರೆ. ತಮ್ಮ ಉಬ್ಬಿದ ಹೊಟ್ಟೆ ಹೊತ್ತು ಯಮ ಸದೃಶಃ ಪರ್ವತವನ್ನು ಏರಲಾಗದೇ ಬೆಟ್ಟವೇರುವವರು. 



ಜೀವನೋಪಾಯಕ್ಕೆ ಇಲ್ಲಿ ಹಲವು ವೇಷ ತೊಟ್ಟವರು ಇಲ್ಲಿ ಕಾಣಸಿಗುತ್ತಾರೆ. ದಾರಿಗುಂಟ ಚಾಟಿಯನು ಮೈಗೆ ನಗುತ ಬಾರಿಸಿಕೊಂಡು ಜೀವನ ನಿರ್ವಹಿಸುವ ನಿರ್ಮೋಹಿ ಅಮಾಯಕರು. ಕಿಲೋಮೀಟರ್‌ ಆಚೆಗೂ ಕೇಳಿಸುವ ಚಾಟಿ ಶಬ್ದ. ಇವರ ಕುರಿತೊಂದು ಮಹಾ ಮರುಕ ಹುಟ್ಟುವಂತೆ ಮಾಡುತ್ತದೆ. ಬಿಸಿಲ ಜಗುಲಿಗೆ ಕೂತು ಬೇಡುವವರು. ಭಕ್ತಾದಿಗಳಿಗೆ ಉಣ್ಣಲು ಬನ್ನಿ ಎನ್ನುವವರು. ಒಂದೇ ಎರಡೇ. ಎಷ್ಟೇ ಇದ್ದರೂ ಮತ್ತಷ್ಟು ಬೇಕೆನ್ನುವ ನಮ್ಮನ್ನು ಕಂಡರೆ ಅವರಿಗೂ ಹಾಗೇ ಅನಿಸಬಹುದೇ ಗೊತ್ತಿಲ್ಲ. ಅಹೋಬಿಲಂ ಎಂಬ ಮಾಯಾಲೋಕದಲ್ಲಿ ಕಳೆಯುವ ಇನ್ನೆಷ್ಟು ಜನರಿದ್ದಾರೋ ಗೊತ್ತಿಲ್ಲ.

ಅಚ್ಚರಿಯ ಅಹೋಬಿಲಂ.



ಈ ಒಂಭತ್ತು ದೇವಾಲಯಗಳು ನಲ್ಲಮಾಲಾ ಕಾಡೊಳಗೆ ಅವಿತಿದೆ ಎನ್ನುವುದೇ ಅಚ್ಚರಿ. ಕಾಡೊಳಗೆ ನಿರ್ಮಿಸುವ ದುರ್ದು ಏನಿತ್ತೊ. ಕಾಡ ಕಟ್ಟೆಯಲ್ಲಿ ಕಟ್ಟಿದ ಅಹೋಬಿಲಂನಲ್ಲಿ ಎರಡು ದೇವಾಲಯಗಳು ಕಾಡಿನಂಚಿನಲ್ಲಿವೆ. ಹೆಚ್ಚಿನ ಎಲ್ಲಾ ದೇವಾಲಯ 14 ಮತ್ತು 15 ನೆಯ ಶತಮಾನದ ಅಂಚಿನಲ್ಲಿ ವಿಜಯನಗರದ ಕಾಲದಲಿ ನಿರ್ಮಿಸಿದಂತವು. ನಾಲ್ಕು ದೇವಾಲಯ ಬೆಟ್ಟದ ಬುಡದಲ್ಲೂ ನಾಲ್ಕು ಬೆಟ್ಟದ ಮೇಲೆ ಹಾಗೂ ಒಂದು ಕಾಡೊಳಗೆ ಅವಿತಿದೆ. ಯೋಗಾನಂದ ಚತ್ರವಟ ನರಸಿಂಹ ಕಾಡಂಚಿನಲ್ಲಿದೆ.



ಯೋಗಾನಂದ ನರಸಿಂಹ ಶನಿಯನ್ನು ಆಳುತ್ತಾನೆಂದು ಪ್ರತೀತಿ ಇದೆ. ಇಲ್ಲಿನ ನರಸಿಂಹ ದೇವರನ್ನು ಅಹೋಬಾಲ ಎಂದೂ ಕರೆಯುತ್ತಾರೆ. ಅಂದರೆ ಮಹಾ ಶಕ್ತಿ ಶಾಲಿ ಎಂದು. ಯೋಗಾನಂದ ನರಸಿಂಹ ಯೋಗಾಸನದಲ್ಲಿದ್ದಾನೆ.


ಚತುರ್ವಾತ ನರಸಿಂಹ ಹಾಹಾ ಮತ್ತು ಹೋ ಹೋ ಎಂಬಿಬ್ಬರು ಗಂಧರ್ವರು ನರಸಿಂಹನಿಗೆ ಸಂಗೀತ ಸೇವೆ ಮಾಡಿ ಖುಷಿ ಪಡಿಸಿದರು. ಆ ಸಲುವಾಗಿಯೇ ಇಲ್ಲಿನ ನರಸಿಂಹನಲ್ಲಿ ಸಂಗೀತ ಮತ್ತು ಕಲೆಯ ಆರಾಧಕರು ಇಲ್ಲಿ ಬೇಡಿಕೊಂಡರೆ ಅವರಿಗೆ ಕಲೆ ಸಿದ್ಧಿಸುತ್ತದೆ ಎಂಬ ಪ್ರತೀತಿಯೂ ಇದೆ.

ಕೆಳಗಿನ ಎರಡು ದೇವಾಲಯ ದರ್ಶಿಸಿ ಮೇಲಿನ ದೇವಾಲಯ ದರ್ಶಿಸುವ ಹೊತ್ತು. ಇದೊಂದು ಅಚ್ಚರಿಯ ಪಯಣ! ಕಾಡು ತನ್ನ ಬಾಹು ಕವಚಿದ ಏಳು ದೇವಾಲಯಗಳ ತೋರಲೊಬ್ಬ ಕನ್ನಡ ಬಲ್ಲ ಗೈಡ್‌ಗಾಗಿ ತಡಕಾಡಿ ಗೆದ್ದೆವು. ಆತನೋ ನಮಗೆ ಮೂರು ಸಾವಿರಕ್ಕೆ ಬೇಡಿಕೆ ಇಟ್ಟ! ಆತನ ಬ್ರಹ್ಮಾಂಡ ಕನ್ನಡ ಪಾಂಡಿತ್ಯಕ್ಕೆ ಮೂರು ಸಾವಿರ ಬಹಳ ಕಡಿಮೆ!! ಹೊಕ್ಕ ದಾರಿ ಅಲ್ಲದೆ ಹೊರ ಬರುವ ಬೇರೊಂದು ದಾರಿ ಇರುವುದರಿಂದ ಈತನನ್ನೇ ಆಯ್ಕೆ ಮಾಡಿ ಕೊಂಡೆವು. ದಾರಿಯಾದರೂ ತೋರು ರಾಘವೇಂದ್ರನೇ ಎನ್ನುತ್ತ ಪುಟ್ಟ ಮಕ್ಕಳಂತೆ ಅವನ ಹಿಂದೆ ಹೆಜ್ಜೆ ಇಟ್ಟೆವು.

ಬೃಹತ್‌ ಮರಳು ಶಿಲೆಯೊಂದು ನಿಮ್ಮನ್ನು ಕೆಳಗಿನಿಂದಲೇ ಕರೆಯುತ್ತದೆ. ಬಹೃತ್‌ ಶಿಲೆಯ ಜಟೆಯಿಂದ ಧುಮುಕುವ ನೀರ ಹನಿಗಳ ಪ್ರೋಕ್ಷಣೆಗೈದು ದೇವಾಲಯ ಪ್ರವೇಶಿಸಬೇಕಾಗುವುದು ಇಲ್ಲಿನ ವಿಶೇಷ. ಮೂರು ಜಲಕನ್ನಿಕೆಯರು ನಿಮ್ಮ ಬರುವಿಕೆಗಾಗಿ ಕಾಯುವರು. ಬನ್ನಿ ಹಾಗೆ ಮುಂದೆ ಹೋಗೋಣ. 

ಯಗುವಾ ಅಹೋಬಿಲ ನರಸಿಂಹ-



ಭವನಾಶಿನಿ ನದಿ ದಡದ ನರಸಿಂಹ ಸ್ವಯಂ ಭೂ. ಅಂದರೆ ಉದ್ಭವ ನರಸಿಂಹ. ಇಲ್ಲಿ ಹತ್ತಾರು ಪೇರಳೆ ನಮ್ಮ ಚೀಲ ಸೇರಿದವು. ಭಕ್ತರು ಬೆಳಗಿದ ನೂರಾರು ಹಣತೆ ದೇವಾಲಯದೆದುರು ಪ್ರಜ್ವಲಿಸುತಲಿತ್ತು. ಯಾರೋ ಮಹಾಶಯನೊಬ್ಬ ನಮ್ಮ ಹಣೆಗೆ ನಾಮವೆಳೆದ ಸುಮ್ಮನಿದ್ದು ಎಳೆಸಿಕೊಂಡೆವು! ಬೆಟ್ಟವೇರಲು ಮೂರನೆ ಕಾಲಾಗಿ ಒಂದು ಕೋಲು ಕೊಟ್ಟರು ಬರೇ ಐದು ರೂಪಾಯಿಗೆ. ಇಸ್ಕೊಂಡೆವು. ಯಾರಿಗೆ ಹೊಡೆಯಲೋ ಗೊತ್ತಿಲ್ಲ. 

ಬೃಹತ್‌ ಪರ್ವತದ ಬುಡದಲ್ಲಿ ದೇವಾಲಯವಿದೆ. ಗಡಿಬಿಡಿಯಲ್ಲಿ ದೇವಾಲಯ ದರ್ಶನಕ್ಕೆ ಹೊರಟು ನಿಂತೆವು. ಸುಖಾಸೀನನಾದ ನರಸಿಂಹ ಹಿರಣ್ಯ ಕಶುಪುವಿನ ಎದೆ ಬಗೆಯುತ್ತಿದ್ದಾನೆ. ಇನ್ನೆರಡು ಕೈಗಳಿಂದ ಹಿರಣ್ಯಕಶುಪುವಿನ ಕಾಲು ತಲೆ ಹಿಡಿದು ಉಗ್ರರೂಪಿಯಾಗಿದ್ದಾನೆ. ಬಲ ತುದಿಯಲಿ ಅಬಲಾನಾದ ಪ್ರಹ್ಲಾದನು ಕೈ ಮುಗಿಯುವಂತೆ ಚಿತ್ರಿಸಿದ್ದಾನೆ ಶಿಲ್ಪಿ. ಯಗುವಾ ನರಸಿಂಹ ದರ್ಶನ ಮುಗಿಸಿ ಹಲಗೆಯ ಸೇತುವೆಯಲ್ಲಿ ಭವನಾಶಿನಿಯನ್ನು ದಾಟಿ ಹೊಸ ಲೋಕಕ್ಕೆ ಕಾಲಿಟ್ಟೆವು. 


ಕಾಡು ನಮ್ಮೊಳಗೋ ನಾವೇ ಕಾಡಿನೊಳಗೋ ಎಂಬಂತೆ ಕಾಡಿಗೆ ಕಾಲಿಟ್ಟೆವು. ಚಿತ್ರ ವಿಚಿತ್ರವಾಗಿ ಪ್ರಕೃತಿಯ ನಮ್ಮೆದುರು ತನ್ನ ಭವ್ಯತೆಯನ್ನು ತೋರುತಲಿತ್ತು. ಮಳೆಗಾಲದಲ್ಲಿ ಮೈದುಂಬಿ ಹರಿವ ಭವನಾಶಿನಿ ಹೊಳೆ ದಾಟಲು ಹಲವು ಕಡೆ ಹಗ್ಗ ಹಾಕಲಾಗಿತ್ತು. ಮಳೆಗಾಲದ ಮೂರು ತಿಂಗಳು ಅಸಾಧ್ಯ ವೇಗದಿಂದ ಹರಿವ ಇವಳನ್ನು ಹರಿಯುವುದು ಅಸಾಧ್ಯ. ಯಗುವಾ ನರಸಿಂಹ ದೇವಾಲಯದ ಸನಿಹವಂತು 6-7 ಅಡಿ ನೀರು ಧುಮ್ಮಿಕ್ಕುತ್ತದೆ. ಅಹೋಬಿಲಂ ಜಲಪಾತ ಮತ್ತು ಉಗ್ರ ಸ್ತಂಭ ಕಾಣಿಸುವ ಬ್ರಿಡ್ಜ್‌ ಮೇಲೆ ನಿಂತೆವು. ನಾವು ಗುರಿಯ ಸನಿಹವೆಂದು ಕೊಂಡೆವು. ನೀವಿನ್ನೂ 450 ಮೆಟ್ಟಿಲು ಏರುವುದಿದೆ ಎಂದು ಹೇಳಿ ಗೈಡ್‌ ನಮ್ಮನ್ನು ಗಾಬರಿ ಬೀಳಿಸಿದ. ಉಗ್ರ ಸ್ತಂಭದ ಸನಿಹದಲ್ಲೇ ಜ್ವಾಲಾ ನರಸಿಂಹ ದೇವಾಲಯವಿದೆ. ಇಲ್ಲಿಂದ ಮುಂದೆ ಏರುವುದೇ ಅತಿ ಕಠಿಣ ಹಾದಿ. ಉಗ್ರ ಸ್ತಂಭದ ಬಳಿಯ ಅಹೋ ಬಿಲಂ ಜಲಪಾತ ಅಂದು ತನ್ನ ಉಗ್ರ ರೂಪ ತೊರೆದು ಶಾಂತವಾಗಿತ್ತು.


ನರಸಿಂಹ ಜಯಂತಿ ಮತ್ತು ಸ್ವಾತಿ ನಕ್ಷತ್ರ!

ಸ್ವಾತಿ ನಕ್ಷತ್ರದಂದೇ ನರಸಿಂಹ ಸ್ವಾಮಿಯ ಜನ್ಮ ದಿನ. ಬೆಳಗಾವಿ ಬಾಗಲಕೋಟೆಯ ಹತ್ತಾರು ಭಕ್ತರು ಅಂದು ದರ್ಶನಕ್ಕೆ ಬಂದಿದ್ದರು. ನೀವು ಪುಣ್ಯವಂತರು, ಇಂದು ನವ ನರಸಿಂಹನ ದರ್ಶನ ಮಾಡಿದವರಿಗೆ ಮೋಕ್ಷ ಪ್ರಾಪ್ತಿ ಎಂದ ನಮ್ಮ ಗೈಡ್.‌ ನಿನ್ನೊಂದಿಗೆ ನಡೆಯುವ ಎಲ್ಲರಿಗೂ ಮೋಕ್ಷ ಖಾತರಿ ಮರಾಯ ಎಂದು ಅವನನ್ನು ಚೇಡಿಸುತ್ತ ಹೆಜ್ಜೆ ಹಾಕಿದೆವು. ಉಗ್ರ ಸ್ತಂಭದಿಂದ ಧುಮುಕುವ ನೀರಲ್ಲಿ ಅಭಿಶೇಕ ಮಾಡಿಸಿಕೊಂಡು ಬಲ ಭಾಗದ ಕೆಂಪು ಕೊಳವನ್ನು ನೋಡುತ್ತಾ ಜ್ವಾಲಾ ನರಸಿಂಹನ ಸೇರಿಕೊಂಡೆವು. 



ಕೆಂಪು ಆಲ್ಗೆ ತುಂಬಿದ ಈ ಕೊಳವನ್ನು ಹಿರಣ್ಯ ಕಶುಪುವಿನ ರಕ್ತ ತೊಳೆದ ಕೊಳವೆಂದು ಜನ ಈಗಲೂ ನಂಬುತ್ತಾರೆ. ಜ್ವಾಲಾ ನರಸಿಂಹ ದೇವಾಲಯದ ಹಿಂದೆ 80 ಡಿಗ್ರಿ ಕೋನದಲ್ಲಿದ್ದ ದಾರಿಯಲ್ಲಿ ಕೇವಲ ಹಗ್ಗದ ಸಹಾದಿಂದ ಏರಬೇಕು. ಕೈ ಕಾಲುಗಳಲ್ಲಿ ಕಸುವಿಲ್ಲದ ಕಾರಣ ಕೈ ಬಿಟ್ಟೆವು. 




ಮೈ ತೋಯಿಸಿಕೊಂಡ ನಿಮಗೆ ಇಲ್ಲಿ ಕತೆಗಳು ನಿಮ್ಮ ಮನಸ್ಸು ತೋಯಿಸುವವು. ಪ್ರಕೃತಿ ಮಡಿಲಲ್ಲಿ ಇಂತಹದೊಂದು ಅಚ್ಚರಿಯ ತಾಣವ ಹುಡುಕಿ ತೆಗೆದು ಅದಕೊಂದು ಕತೆಗಳನ್ನು ಜೋಡಿಸಿದ ಮಹಾ ಪುರುಷನಿಗೆ ಶರಣು. ದೇಶ ಕಾಲಾತೀತದಲ್ಲಿ ಹಬ್ಬಿ ಹರಡಿದ ನೂರಾರು ಕತೆಗಳು ನಿಜಕ್ಕೂ ನಿಮ್ಮನ್ನು ಕಾಡುವವು. 

ಕಾಡೊಳಗಿನ ಅಚ್ಚರಿ ಮೂಡಿಸುವ ಕಾಡುವ ಕತೆಗಳು 

ಚುಂಚೂ ಬುಡಕಟ್ಟು ಮತ್ತು ನರಸಿಂಹ-


ಇಲ್ಲಿನ ಚುಂಚೂ ಆದಿವಾಸಿಗಳು ನರಸಿಂಹನನ್ನು ತಮ್ಮ ಅಳಿಯನ್ನನ್ನಾಗಿಸಿದ ರೀತಿಗೆ ಅಚ್ಚರಿಗೊಂಡೆ. ನರಸಿಂಹನಿಗೆ ಆದಿವಾಸಿ ಲಕ್ಷ್ಮೀಯನ್ನು ಮದುವೆ ಮಾಡಿಸಿ ಇವರು ತಮ್ಮವನನ್ನಾಗಿ ಮಾಡಿ ಕೊಂಡಿದ್ದಾರೆ. ಹಾಗಾಗಿ ಹೋಗಿ ಬರುವವರಿಗಾಗಿ ಇಲ್ಲಿನ ಬುಡಕಟ್ಟು ಜನರು ದಾರಿ ಸ್ವಚ್ಛಗೊಳಿಸಿ ರಂಗೋಲಿ ಹಾಕಿ ಕಾದು ಕೂರುವುದು ನಮಗಂತೂ ಅಚ್ಚರಿ. ಸಾಕ್ಷಾತ್‌ ದೈವ ಸಂಭೂತರಾದ ಸರಳ ಜನ! ಇವರ ಚೇತನವೇ ಒಂದು ಒಗಟು. ನಮ್ಮ ದಾರಿಯಲ್ಲೊಬ್ಬಳೂ ನರಸಿಂಹ ಲಕ್ಷೀಗಾಗಿ ರಂಗೋಲಿ ಹಾಕಿ ಕುಳಿತಿದ್ದಳು. ಭಕ್ತರು ನೀಡಿದ ಅಷ್ಟೋ ಇಷ್ಟೋ ಇವರಿಗೆ ಆದಾಯ! ಅಬ್ಬಬ್ಬಾ ಎಂದರೂ ೨೦೦ ದಾಟದ ಸಂಪಾದನೆ. ಮತ್ತು ಮಗದೊಂದು ಯೋಚಿಸದ ಯೋಜಿಸದ ತೃಪ್ತ ಜನ.

ಮಾಲೋಲ ನರಸಿಂಹನೆಡೆಗೆ….


ಅಹೋ ಬಿಲಂನ ಜ್ವಾಲಾ ನರಸಿಂಹನಿಗೆ ಶರಣು ಬಂದು ನಿಧ ನಿಧಾನಕ್ಕೆ ಒಂದೊಂದು ಹೆಜ್ಜೆ ಇಟ್ಟು ನೀರ ಜೋಕಾಲಿಯಲಿ ಮಿಂದು ಕ್ಯಾಮರಕ್ಕೂ ಎರಡು ಹನಿ ಮೀಯಿಸಿ ನಮ್ಮ ಗೈಡ್‌ ಜೊತೆ ಹೊರಟು ನಿಂತೆವು.

ಕ್ಷೀಣ ಜಲಪಾತವೊಂದು ನನ್ನ ಕಣ್ಣವೆಯಲ್ಲಿ ತುಂಬಿ ಪೂರ್ಣ ಸೃಷ್ಟಿಯ ಸೊಬಗನ್ನು ಹೆಚ್ಚಿಸುವ, ಕತೆಗಳ ಸೃಷ್ಟಿಸುವ ಪರಿಗೆ ಚಕಿತಗೊಂಡಿರುವೆ.

ಇಲ್ಲಿಂದ ಹೊರಟು ಮಾಲೋಲ ನರಸಿಂಹನೆಡೆಗೆ ಹೆಜ್ಜೆ ಹಾಕಿದೆವು. ಹಿರಣ್ಯ ಕಶಪುವಿನ ಸಂಹರಿಸಿ ಕುಪಿತಗೊಂಡ ಆತನನ್ನು ಸಂತೈಸಲು ಆದಿವಾಸಿ ಲಕ್ಷ್ಮೀ ಎಂಬ ಮಹಿಳೆಯನ್ನು ಬ್ರಹ್ಮ ಕಳುಹುತ್ತಾನೆ. ಆಗಲೇ ಶಾಂತ ಸ್ವರೂಪಿಯಾಗಿ ಜ್ವಾಲಾ ನರಸಿಂಹ ಮಾಲೋಲ ಸ್ವರೂಪಿಯಾಗಿ ನೆಲೆ ನಿಲ್ಲುತ್ತಾನೆ. ದೇವರ ಸಿಟ್ಟಿಗೆ ಕತೆಯ ಒಗ್ಗರಣೆ ಅನಿಸಿತು. ಅದೇ ಹಾದಿಯಲಿ ಕೆಳಗಿಳಿಯುತ್ತಾ ಬಂದಾಗ ವರಾಹ ರೂಪಿಯಾಗಿ ನರಸಿಂಹ ನೆಲೆ ನಿಂತಿದ್ದಾನೆ. ಭೂ ಭಾರವನ್ನು ಎತ್ತಿದ್ದಾನೆ. ಕತೆಗಳ ಸಿಕ್ಕು ಬಿಡಿಸಲು ಹೋಗದೇ ಸುಮ್ಮನೆ ದರ್ಶನಗೈದು ಬಂದೆವು. 

ಮೇಲೇರುವ ಹಾದಿಯೊಂದು ವಾಪಾಸಾಗುವ ಹಾದಿ ಇನ್ನೊಂದು. ಪ್ರತಿ ಕಲ್ಲಿಗೂ ಇಲ್ಲೊಂದು ಸುಂದರ ಕತೆ ಹೆಣೆಯುವ ಚಾತುರ್ಯ ಇದೆ. ಕತೆಗಳನ್ನು ಕೇಳುತ್ತಾ ಕೇಳುತ್ತಾ ದಾರಿ ಸಾಗಿದ್ದೆ ತಿಳೀಲಿಲ್ಲ.

14 ಕಿಲೋ ಮೀಟರ್‌ ದೂರದ ಪವನ ನರಸಿಂಹ ದರುಶನಕ್ಕೆ ಅಹೋಬಿಲಂ ವೃತ್ತಕ್ಕೆ ಬಂದು ಜೀಪು ಹತ್ತಿ ಹೊರಟೆವು. ಕಾಡೊಳಗೆ ಜೀಪು ಸರ್ಕಸ್ ಮಾಡುತ್ತಾ ನರಸಿಂಹ ದೇವಾಲಯ ತಲುಪಿತು. ಮುಚ್ಚಿದ ಬಾಗಿಲ ನಡುವೆ ಹಣಕಿ ಹಾಕಿ ದರ್ಶನ ಮುಗಿಸಿ ಹಿಂದಿರುಗಿದೆವು. ಹೀಗೆ ಒಂಭತ್ತು ದೇವಾಲಯ ದರುಶನವಾದರೂ ನೋಡಿದ ಸಂಪೂರ್ಣತೆ ನನಗೆ ದಕ್ಕಲಿಲ್ಲ. ಇನ್ನೂ ನೋಡಬೇಕು ಅಲ್ಲೇ ಇನ್ನೆರಡು ದಿನವಿರಬೇಕೆಂಬ ಹಂಬಲ. ಆದರೆ ಕಾಲ ಪುರುಷನೆದುರು ನಾವು ಮಂಡಿ ಊರಲೇ ಬೇಕಲ್ಲ. ಹೊರಡಲೇ ಬೇಕಾಯಿತು.

ಮೇಲೇರಿದ ಜಾಗದ ಸನಿಹದಲ್ಲೇ ವಿಶಿಷ್ಟ ವನ ಭೋಜನವೊಂದು ನಮಗಾಗಿ ಕಾಯುತಲಿತ್ತು. ಅಣಬೆ ಗಸಿ ಮತ್ತು ಕಡಲೆ ಬೇಳೆ ಪಾಯಸವನ್ನು ಹಿತಮಿತವಾಗಿ ಸೇವಿಸಿ ಗಂಡೀ ಕೋಟದತ್ತ ಹೊರಟು ನಿಂತೆವು.


Saturday, June 27, 2026

ಹಂಪಿಯ ಹೊಳೆ ದಂಡೆ

 


ಹಂಪಿ ಎಂಬ ವಿಸ್ಮಯವನ್ನು ಪದಗಳಲ್ಲಿ ಹಿಡಿದಡಲು ಅಸಾಧ್ಯ. ಇಲ್ಲಿನ ಪ್ರತಿ ಕಲ್ಲೂ ಕಥೆ ಹೇಳುತ್ತವೆ. ಕತೆಗಳಿಗೆ ಕಿವಿಯಾಗಬೇಕಷ್ಟೆ. 

ನಿಗೂಢ ಹಂಪಿ


ಹಂಪಿ ನೋಡುವವರು ಕಮಲ್‌ ಮಹಲ್‌, ಗಜ ಶಾಲೆ, ವಿರುಪಾಕ್ಷ ದೇವಾಲಯ, ಹಜಾರ ರಾಮ, ವಿಜಯ ವಿಠಲ ನೋಡಿಕೊಂಡು ಹಿಂದಿರುಗುವರು. ಹೆಚ್ಚೆಂದರೆ ಅಚ್ಯುತರಾಯ ದೇವಾಲಯ ನೋಡಿ ಹಂಪಿಗೆ ಬೈ ಬೈ ಹೇಳುವರು. ನೋಡುವುದು ಬಿಡಿ ಅದರಾಚಿಗಿನ ಸ್ಥಳಗಳನ್ನು ಮುಟ್ಟಿ ಮೂಸುವುದು ಇಲ್ಲ. ನಿಜವಾಗಿ ನೋಡುವುದೇ ಬೇರೆ. ನೋಡುವುದು ಎಂದರೆ ಹಂಪಿಯ ಅಂತರ್ ಸತ್ವ ಅರಿಯುವುದು. ನೂರಾರು ವರ್ಷಗಳ ಕಾಲ ಇಲ್ಲಿನ ವಾಸ್ತು ಶಿಲ್ಪ ಕಾಪಾಡಿದವರು ಇಲ್ಲಿನ ರೈತರು!

ಹಂಪಿ ಎಂದರೆ ಇಷ್ಟೇ ಅಲ್ಲಾ. ಹಂಪಿಯ ಬಳುಕು ವೈಯಾರ ನೋಡಬೇಕೆಂದರೆ ಹೊರಗೆ ಕಾಲಿಡಬೇಕು. ಹಂಪಿಯ ಪಿಸುಮಾತನ್ನು ಆಲಿಸಬೇಕು. ಹಂಪಿಯ ಮುಖ್ಯ ಆಕರ್ಷಣೆಯ ಆಚೆಗೂ ಅನನ್ಯತೆ ಇದೆ. ಹಂಪಿಯ ನಿಜದ ಅಸ್ಮಿತೆ ಇರುವುದು ಬದುಕು ಇರುವುದು ಮುಖ್ಯ ಮಂದಿರಗಳ ಹೊರಗೆ! ಇವುಗಳಿಗೆ ಹಣಕಿ ಹಾಕಿದರೆ ಹೊಸ ನೋಟ ತೆರೆಯುತ್ತದೆ.

ಹಂಪಿಯ ಪ್ರವಾಸವನ್ನ ವಿಭಿನ್ನವಾಗಿಸಿಕೊಳ್ಳಬೇಕೆಂಬ ಬಯಕೆ ಇದ್ದರೆ ಇಲ್ಲಿನ ಮುಖ್ಯ ಆಕರ್ಷಣೆಯ ಹೊರಗೆ ಇಣುಕಬೇಕು. ಆಗಲೇ ಹಂಪಿಯ ಮೌನ, ಕಂಪನದ ಆಸ್ವಾದನೆ ಮತ್ತು ಅಚ್ಚರಿಗಳು ಅರ್ಥವಾಗುವುದು. ಹಂಪಿಯ ಜನಸಾಮಾನ್ಯರ ಬದುಕು ಅರ್ಥವಾಗುವುದು. ಹೀಗಾಗಿ ಹೊಸ ಬಗೆಯ ಸ್ಥಳಗಳ ಆಯ್ಕೆ ಮಾಡಿ ನಿರ್ಧರಿಸಿ ಹೊರಟೆವು. ಸ್ಥಳೀಯ ಗೈಡ್‌ ಈರಣ್ಣ ಎಂಬುವವರನ್ನು ಜೊತೆ ಮಾಡಿಕೊಂಡೆವು. ನಮ್ಮ ಪ್ರಯಾಣದ ಪಟ್ಟಿಯಲ್ಲಿ ಏನೇನೆಲ್ಲಾ ಇತ್ತೊ ಅವೆಲ್ಲಾ ಸಾಧ್ಯವಾಗದೇ ಇದ್ರೂ ಹನುಮ ಪಾದದ ನೆತ್ತಿ ಮುಟ್ಟಿ, ತೆಪ್ಪದೊಂದಿಗೆ ಪಯಣಿಸಿ, ಸ್ಥಳೀಯ ಆಹಾರ ಸೇವನೆ, ಮದನಕೊತ್ತಲ ಮಂಟಪದಲಿ ಸೂರ್ಯಾಸ್ತದ ಸೊಬಗು ಕಣ್ತುಂಬಿ ಕೊಂಡೆವು. ಗಜ ಸ್ನಾನವೊಂದು ತಪ್ಪಿ ಹೋಯಿತು.


 ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಜಾಗ ವಿರೂಪಾಕ್ಷ ಮಂದಿರ! ಅದರ ಸನಿಹವೇ ಒಂದು ಹಳೆಯ ದೋಣಿ ಹೆಂಚಿನ ಮಠವಿದೆ. ಪಿನ್‌ ಹೋಲ್‌ ಕ್ಯಾಮರದಲ್ಲಿ ತಲೆಕೆಳಗಾದ ಛಾಯೆ ತೋರುತ್ತದಷ್ಟೇ ಆದರಿಲ್ಲಿ ನಿಜದ ಬಿಂಬ! ಪಿನ್‌ ಹೋಲ್‌ ಕ್ಯಾಮರದಲ್ಲಿ ಮಠದಿಂದ ಕಂಡ ಸ್ವಾಗತ ಗೋಪುರದ ಬಣ್ಣದ ಪ್ರತಿಬಿಂಬ ಇಂದಿಗೂ ಒಂದು ಸೋಜಿಗ! ಅಲ್ಲಿ ಹೋಗಿ ಬರುವವರ ಪ್ರತಿಬಿಂಬವೂ ಬಣ್ಣದಲ್ಲಿ. ಸಾಮಾನ್ಯವಾಗಿ ಯಾವ ಗೈಡೂ ಈ ಸ್ಥಳಗಳನ್ನೂ ಕಾಣಿಸುವುದಿಲ್ಲ. ಆತ ಕಾಣಿಸದೇ ಉಳಿದಿದ್ದು ನೀವು ಕಂಡರೆ ನಿಮ್ಮೊಳಗೊಂದು ಒಳನೋಟವಿದೆ ಎಂದೇ ಅರ್ಥ. ಬದುಕಿಗೊಂದು ಹೊಸ ಒಳನೋಟ ಪ್ರಾಪ್ತವಾದರೆ ಪ್ರವಾಸ ಸಾರ್ಥಕ. 

ಹಂಪಿಯ ಹನುಮ ಪಾದದ ನೆತ್ತಿಯಿಂದ

ವಿಜಯ ವಿಠಲದ ಹಾದಿಯಲ್ಲೇ ಸಣ್ಣ ಗುಡ್ಡದ ತುದಿಯಲ್ಲಿ ಹನುಮ ಪಾದವಿದೆ. ವಿಜಯ ವಿಠಲ ಎರಡು ಕಿಲೋ ಮೀಟರ್‌ ಎಂಬ ಮೈಲಿಗಲ್ಲು ದಾಟಿ ಸ್ವಲ್ಪ ದೂರಕ್ಕೆ ಹೋಗಿ ಎಡಕ್ಕೆ ಹೊರಳಿ ಕಿಲೋ ಮೀಟರ್‌ ಹಲುಸಾಗಿ ಬೆಳೆದ ಬಾಳೆ ತೋಟದಂಚಲ್ಲಿ ಸಾಗಿ ಕಟ್ಟಿಗೆ ಅಹಮದ್‌ ಖಾನ್‌ ನ ಅರವಟ್ಟಿಗೆ ಬಳಿ ಮೇಲೇರುತ್ತಾ ಸಾಗಬೇಕು. ನಡು ನಡುವೆ ಜೋಳ ಬೆಳೆದ ಕುರುಹುಗಳು, ಅನೇಕ ಗೋರಿಗಳು ಪಾಳು ಬಿದ್ದ ಮನೆಗಳ ಅವಶೇಷಗಳು ನಿಮಗೆ ಕಾಣಸಿಗುತ್ತದೆ. ಅನೇಕ ನೀರು ಸಂಗ್ರಹಕಗಳು. ಅಲ್ಲಲ್ಲಿ ಬೆಳೆದ ಕಳ್ಳಿ ಗಿಡಗಳು ನಿಮ್ಮನ್ನು ಸ್ವಾಗತಿಸುತ್ತವೆ. ಹೆಚ್ಚು ಕಡಿಮೆಯಾದರೆ ನೀವೇ ಗತಿಸುವಿರಿ ಅಂತಹ ಜಾಗ! ಮೇಲೇರಿದಂತೆ ಚಲಿಸುವ ಜಾಗವೂ ಕಡಿದಾಗುತ್ತಾ ಸಾಗುತ್ತದೆ. ದಿಗಂತಕ್ಕೆ ಕೈ ಚಾಚಿದಂತೆ ಇರುವ ಇದರ ನೆತ್ತಿ ಸವರಲು ಬಂಡೆಗಳ ನಡುವೆ ತೆವಳುತ್ತಾ ಸಾಗಬೇಕು. ಹೃದಯ ಬಡಿತ ಹೆಚ್ಚಿಸುವ ಜಾಗಗಳಲ್ಲಿ ಹೆಜ್ಜೆ ಹಾಕಬೇಕು. ವರ್ಟಿಗೋ ಇಲ್ಲದವರಷ್ಟೇ ಸುಲಭವಾಗಿ ಮೇಲೇರಬಲ್ಲರು. ಮೇಲೆರಿದಾಗ ಬೃಹತ್‌ ಪಾದವೊಂದು ನಿರ್ಮಿಸಲಾಗಿದೆ. ಜೊತೆಗೊಂದು ಚಿಕ್ಕ ಮಂಟಪ ಇದರ ನೆತ್ತಿಯ ಮೇಲೆ. ಇಲ್ಲಿಂದ ಕೆಳಗಿಳಿದು ಮದನ ಕೊತ್ತಲ ಮಂಟಪದತ್ತ ಹೆಜ್ಜೆ ಹಾಕಿದೆವು.

ಮದನಕೊತ್ತಲ ಮಂಟಪವೂ ನಮ್ಮ ಪಟ್ಟಿಯಲ್ಲಿತ್ತು! ಹಂಪಿಗೆ ಬಂದವರು ಮದನಕೊತ್ತಲ ಮಂಟಪದ ಇಳಿ ಸಂಜೆಗೆ ಹೋಗದೇ ಇದ್ದರೆ ಹೇಗೆ? ಅದನ್ನು ಪದಗಳಲ್ಲಿ ಹಿಡಿದಿಡಲು ಸಾಧ್ಯವೇ? ಹೊಸಪೇಟೆಯಿಂದ ಹಂಪಿಗೆ ಬರುವವರು ಹಂಪಿಗೆ ತಿರುಗುವಲ್ಲಿ ಸಿಕ್ಕ ಬೋರ್ಡ್‌ ಒಂದಕ್ಕೆ ಸಿಕ್ಕಿಸಿದ ಬೃಹತ್‌ ಚಿತ್ರ ನೋಡದೇ ಮುಂಬರಿಯಲಾರರು. ಅದುವೇ ಮದನಕೊತ್ತಲ ಮಂಟಪದ ಸೂರ್ಯಾಸ್ತ! ಅಪಾರ ಸೌಂದರ್ಯದ ಸೂರ್ಯಾಸ್ತವನ್ನು ಕಣ್ಣು ತುಂಬಿಕೊಳ್ಳಲು ನೀವು ಹರ ಸಾಹಸ ಪಡಬೇಕು. ಇಲ್ಲಿಗೆ ಪಯಣಿಸುವ ಅನುಭವವು ಅನನ್ಯ. ಈ ಮಟಂಪಕ್ಕೆ ತೆನಾಲಿ ಮಂಟಪವೆಂಬ ಇನ್ನೊಂದು ಹೆಸರು. ಈ ಹೆಸರು ಹೇಗೆ ಬಂತೆಂಬುದು ಮಾತ್ರ ತಿಳಿದಿಲ್ಲ. ಬನ್ನಿ ಮದನ ಕೊತ್ತಲವನ್ನೇರೋಣ.

ಮದನ ಕೊತ್ತಲದ ದಾರಿಯಲ್ಲಿ

ಗಜ ಶಾಲೆಯ ಬಲ ತುದಿಯ ರಂಗನಾಥ ದೇವಾಲಯದ ಸನಿಹ ದಾರಿಯಲ್ಲಿ ಅನತಿ ದೂರದವರೆಗೆ ನಿರ್ಜನ ದಾರಿಯಲ್ಲಿ ಸಾಗಬೇಕು. ಅದೊಂದು ಬೆದರಿಸುವ ನಿರ್ಜನ ದಾರಿ. ಎದುರಿಗೆ ಏರು ಗುಡ್ಡ. ದೂರದಲ್ಲಿ ಮಹಾನವಮಿ ದಿಬ್ಬ. ಒಂದಾನೊಂದು ಕಾಲದಲ್ಲಿ ದೊಡ್ಡ ದೇವಾಲಯ. ವಿದೇಶಿ ಮತ್ತು ಸ್ವದೇಶಿ ಆಕ್ರಮಣದ ತರುವಾಯ ಕೇವಲ ದಿಬ್ಬ ಮಾತ್ರ ಉಳಿದಿದೆ ಎನ್ನಲಾಗುತ್ತಿದೆ!

ನೂರಾರು ಅವಶೇಷಗಳಡಿಯಲ್ಲಿ ನೆಟ್ಟನೋಟ. ಉದುದ್ದ ಮಲಗಿದ್ದ ವಹಿವಾಟಿನ ಖಾಲಿ ಅಂಗಡಿ ಸಾಲುಗಳು. ಕೃಷ್ಣ ಮತ್ತು ಅಚ್ಚುತರಾಯ ದೇವಾಲಯದ ಬೀದಿಗಳು ಅಚ್ಚರಿ ಮೂಡಿಸುತ್ತದೆ. ಇಷ್ಟೊಂದು ಅಗಲದ ಬೀದಿಯ ನೋಡಿದರೆ ಅವರ ಮುಂದಾಲೋಚನೆಗೆ ದೊಡ್ಡ ಸಲಾಮು. ಊರು ಎಲ್ಲಿಯವರೆಗೆ ಬೆಳೆಯುತ್ತದೆ ಎಂಬ ಅಂದಾಜು ಅವರ ತೀಕ್ಷ್ಣಮತಿಯ ಧ್ಯೋತಕ! 

ಗಜಶಾಲೆಯಿಂದ ಮುಂದಡಿ ಇಟ್ಟರೆ ಅಡಿಗಡಿಗೆ ಸಿಗುವ ಒಡೆದ ಮಡಿಕೆ ಚೂರುಗಳು. ಒಂಟಿಯಾಗಿ ಕಲ್ಲು ಮುಳ್ಳು ಕಂಟಿಗಳ ನಡುವೆ ಹುದುಗಿದ ಜೀವನೋತ್ಸಾಹದ ಹೆದ್ದಾರಿಗಳಾದ ದಾರಿಗಳನ್ನು ಕಂಡಾಗ ಕರಳು ಚುರುಕ್‌ ಎನ್ನುತ್ತದೆ. ವಿಷಾದದ ಒಣ ಬಿಸಿಲು ರಾಚುತ್ತದೆ. ಕಾಲದ ಕೈವಾಡಕ್ಕೆ ನಲುಗಿದ ಫಲವತ್ತತೆಯ ಭೂಮಿ. ಕಳಕೊಂಡ ಖಾಲಿತನ, ಹಳವಂಡಗಳ ಹದ್ದು ಮನದ ಮುಗಿಲಿನಲಿ! 

ತಾಳಿಕೋಟೆ ಕದನದ ನಂತರ ಹಂಪಿಯ ಕನಸು ಕರಗುತ್ತಾ ನಿಧ ನಿಧಾನಕ್ಕೆ ಈ ಜಾಗಗಳನ್ನೆಲ್ಲಾ ತೊರೆದು ಜನ ಹೊಸ ಕನಸ ಬೆನ್ನಟ್ಟಿ ಹೊರಟರಿರಬೇಕು. ಇವೆಲ್ಲವ ಕಂಡಾಗ ವಸುದೇಂದ್ರರ ತೇಜೋ-ತುಂಗಭದ್ರ ಕಾದಂಬರಿಯ ಮಹತ್ವಾಕಾಂಕ್ಷಿ ಅಹಮದ್‌ ಖಾನ್‌ ನೆನಪಿಗೆ ಬರುತ್ತಾನೆ. ಏನೋ ಆಗಲು ಹೋಗಿ ಏನೂ ಆಗದೆ ತುಂಗಾ ತೀರದಲ್ಲಿ ಒಂಟಿಯಾಗಿ ಉಳಿಯುತ್ತಾನೆ. ಜೊತೆಗೆ ಕಿವಿಯನ್ನೂ ಮತಾಂಧರಿಂದ ಕಳೆದುಕೊಳ್ಳುತ್ತಾನೆ. ಆತ ದುಡ್ಡಿನಾಸೆಗೆ ತನ್ನೂರ ತೊರೆದಂತೆ ಇಲ್ಲಿನ ಜನ ಬಿಡಾರ ಕೊಡವಿ ಹೊರಟಿರಬೇಕು. ತನ್ನ ತನವ ತೊರೆದ ನದಿಯಂತೆ.

 ಒಂದು ಕಾಲದಲ್ಲಿ ಅಪಾರ ಜನಸ್ತೋಮವನು ಕಟ್ಟಿಕೊಂಡ ಊರಿಗ ಪುಟಾಣಿ ಹಳ್ಳಿ. ಗುಡ್ಡದ ತುದಿಗಳಲ್ಲೂ ಮಡಿಕೆ ಕಂಡವನಿಗೆ ಎಂದೋ ಬಿಸುಟು ಹೋದವರ ತಾಪದ ಬಿಸಿ ತಟ್ಟುತ್ತದೆ. ಇಲ್ಲಿಯವರೆಗೆ ಆ ರಾಜ ಮಾಡಿಕೊಡುತ್ತಿದ್ದ ವ್ಯವಸ್ಥೆ ಅಚ್ಚರಿ ಹುಟ್ಟಿಸುತ್ತದೆ. ಗಜ ಶಾಲೆಯಿಂದ ಏನಿಲ್ಲವೆಂದರೂ ಎರಡು ಕಿಲೋ ಮೀಟರ್‌ಗೂ ಹೆಚ್ಚು ದೂರ ಕ್ರಮಿಸಬೇಕು. ಗಜ ಶಾಲೆಯಿಂದ ಇಲ್ಲಿಯವರೆಗಿನ ದೂರವೇ ನಿಮ್ಮನ್ನು ದಂಗು ಬಡಿಸುತ್ತದೆ! ಈಗ ಮುಳ್ಳು ಕಂಟಿಗಳ ಒಳ ದಾರಿ. ಬೆಟ್ಟದಿಂದ ಇಳಿಬಿಟ್ಟಂತಹ ಇಳಿಜಾರು ಬಂಡೆಯನು ಭಾರಿ ಕಷ್ಟದಲಿ ಏರಬೇಕು. ಯಾರೋ ಪುಣ್ಯಾತ್ಮ ಇಲ್ಲಿ ಪುಟಾಣಿ ಮೆಟ್ಟಿಲು ನಿರ್ಮಿಸಿದ್ದಾನೆ! ಎಲ್ಲೆಲ್ಲೂ ದೈವ ಮತ್ತು ದೇವರುಗಳು. ನಡುವೆಲ್ಲೋ ದೊಡ್ಡ ಹನುಮಂತ ಮೂರ್ತಿ ಕೆತ್ತಿಟ್ಟಿದ್ದರು. ಒಂದಾನೊಂದು ಕಾಲದಲ್ಲಿ ದೇವಾಲಯ ಮತ್ತು ಮನೆಗಳ ಸಮುಚ್ಚಯವಿದ್ದಿರಬೇಕು. ಈಗ ಬಟಾ ಬಯಲು. ಅಲ್ಲಲ್ಲಿ ಮಂಟಪಗಳು ನಿದ್ರಿಸುವ ವಿರಾಮ ಪಡೆಯುವ ಸಣ್ಣ ಜಾಗಗಳನ್ನು ನೀವು ನೋಡಬಹುದು. ತೆನಾಲಿ ಮಂಟಪದ ಉತ್ತರ ದಿಕ್ಕಿಗೆ ಮಾತಂಗ ಪರ್ವತ ಪವಡಿಸಿತ್ತು. ಹಾವಿನ ಹೆಡೆಯಂತಹ ಬಂಡೆಯೊಂದು ಕಂಡಿತು. ಪ್ರಕೃತಿಯ ಅಚ್ಚರಿಯ ಮುಂದೆ ಉಳಿದಚ್ಚರಿಗಳು ಗೌಣ.

ಹೀಗೆ ಬಂಡೆಗಳ ತಡವಿ ಮೇಲೇರಿ ಅಲ್ಲೆಲ್ಲಾ ನುಸುಳು ಕೋರರಾಗಿ ಅಸಾಧ್ಯ ಬಂಡೆಗಳನ್ನು ಅಪ್ಪಿ ಇಳಿ ಸಂಜೆಯ ಕೊನೆಯ ಕಂತಿಗೆ ಮದನಕೊತ್ತಲ ಮಂಟಪದಲ್ಲಿದ್ದೆವು. ಒಮ್ಮೆಯಂತೂ ಅಸಾಧ್ಯವೆಂಬ ಬಂಡೆ ಏರಿ ಬಂದೆ! ಚಾಕಲೇಟ್‌ ಕೊಡುವೆ ಮೇಲೆ ಬಾ ಎನ್ನಲು ಗೆಳೆಯ ನಾಗರಾಜ್‌ ಮತ್ತು ಈರಣ್ಣ. ಓಬವ್ವ ಮತ್ತು ಹೈದರಾಲಿಯ ಸೈನಿಕರು ನೆನಪಾದರು. ಎರಡು ಬೃಹತ್‌ ಬಂಡೆಯ ನಡುವೆ ಇರುವ ಇಕ್ಕಟ್ಟು ದಾರಿ ಹಾಯಬೇಕು. ದಿನವೂ ನೀರು ಮತ್ತು ಬುತ್ತಿಗಂಟು ಹಿಡಿದು ಈ ಮಂಟಪದ ನೆತ್ತಿಗೆ ಹತ್ತುವ ಅಂದಿನ ಯುವಕರ ಸಾಹಸ ಪ್ರವೃತ್ತಿಗೆ ಮನಸೋತೆ. ಇಲ್ಲಿ ಮೇಲೆರಿದರೆ ಹಂಪಿಯ ೩೬೦ ಡಿಗ್ರಿ ಕೋನದ ಸ್ಥಳಗಳು ನಿಚ್ಚಳ.

ಮದನಕೊತ್ತಳದ ಮುಸ್ಸಂಜೆ

 ನೆತ್ತಿ ಹತ್ತಿ ಪುಳಕಗೊಂಡು ಸ್ವಲ್ಪ ವಿಶ್ರಮಿಸಿಕೊಂಡೆವು. ಮೇಲೇರಿ ಬಂದ ಗೈಡ್‌ ಸನಿಹದ ಕಡಿದಾದ ಬಂಡೆ ಏರಿದ. ಇಳಿಯುವಾಗಂತೂ ನಮಗೇ ಭಯವಾಯಿತು. ಸೂರ್ಯನನ್ನು ನುಂಗುವಂತೆ, ಯೋಗ ನಮಸ್ಕಾರದ ನಡುವೆ ಸೂರ್ಯನ ಸಿಲುಕಿಸಿ ಮುಂತಾದ ವಿವಿಧ ಭಂಗಿಯಲ್ಲಿ ಚಿತ್ರ ತೆಗೆದು ಖುಷಿ ಪಟ್ಟೆವು. ಸ್ವಲ್ಪ ಆಯ ತಪ್ಪಿದರೂ ಮೂಳೆಗಳೆಲ್ಲಾ ಪುಡಿ ಪುಡಿ. ಮದನಕೊತ್ತಳ ಮಂಟಪದಲಿ ಮುಸ್ಸಂಜೆಯನು ಕಳೆದು, ಹಗಲು ಮುಗಿಯುವ ಮೊದಲೇ ಇಳಿಯ ತೊಡಗಿದೆವು. ಮದನ ಕೊತ್ತಲದ ಮುಸ್ಸಂಜೆ ಅನ್ಯಾದರ್ಶ. ಅಪರೂಪದ ಹಲವು ಚಿತ್ರಗಳು ನನ್ನ ಲ್ಯಾಪ್‌ಟಾಪ್‌ ಸೇರಿದವು.

ಮತ್ತದೇ ದಾರಿಯಲ್ಲಿ ಮುಳ್ಳು ಕಂಟಿಗಳ ನಡುವೆ ಮುಂದುವರಿಯ ಬೇಕಿರುವುದರಿಂದ ಹಾಗೂ ಈ ದಾರಿಯಲ್ಲಿ ಕರಡಿ, ಚಿರತೆಗಳ ಹಾವಳಿ ಬಲು ಜೋರೆಂದು ಬೇಗನೆ ಇಳಿದೆವು.

ಚಕ್ರ ತೀರ್ಥದ ಸೆಳೆತ

ವಿರೂಪಾಕ್ಷ ಮಂದಿರದಿಂದ ನೇರ ಚಲಿಸಿ ತುಂಗೆಯ ತೀರದ ಲಿಂಗದ ಮುಂದಿರುವುದೇ ಚಕ್ರತೀರ್ಥ. ಇಲ್ಲಿನ ಸೆಳತವೇ ಅನನ್ಯ. ಇಲ್ಲಿಂದಲೇ ಆಚೆ ದಡಕ್ಕೆ ತೆಪ್ಪದಲ್ಲಿ ಬಿಡಲಾಗುತ್ತದೆ. ಆಚೆ ದಡದ ಚಂದ್ರಮೌಳೇಶ್ವರ ದೇವಾಲಯ ಮತ್ತು ಮಠಗಳನ್ನು ನೋಡಿ ಬಂದಿದ್ದು ಇಲ್ಲಿಂದಲೇ. ಅದೊಂದು ವಿಶಿಷ್ಟ ಕಥನ.

ಚಕ್ರತೀರ್ಥದಲ್ಲಿ ಮಿಂದೆದ್ದು ಬಂದು ಕೋದಂಡ ರಾಮನಿಗೆ ನಮಿಸಿ ಅಲ್ಲೇ ಎಡಕ್ಕೆ ಸಿಗುವ ಮೆದು ಇಡ್ಲಿ ಮತ್ತು ಹಸಿರು ಚಟ್ನಿ, ಬೋಂಡಾ ಉದರದ ಉಪಶಮನಕ್ಕೆ ಹೇಳಿ ಮಾಡಿಸಿದ ತಂಪೆಳೆಯುವ ಜಾಗ. ೧೦ರೊಳಗೆಲ್ಲಾ ಖಾಲಿ ಖಾಲಿ. ಅಲಲ್ಲಿ ಚೌಕುಳಿ ವಯರ್‌ ಬುಟ್ಟಿ ಬಿಡಿಸಿ ಊಟಕ್ಕೆ ಕೂತ ಕಾರ್ಮಿಕರು ಗಮನ ಸೆಳೆಯುತ್ತಾರೆ. 

ಕೋದಂಡ ರಾಮ, ಯಂತ್ರೋದ್ಧಾರಕ ಹನುಮ, ಕೋಟಿಲಿಂಗ, ಸೀತಾ ಸೆರಗು, ರಂಗನಾಥ, ಅಚ್ಚುತರಾಯ ಪೇಟೆ ಇತ್ಯಾದಿಗಳನ್ನು ದರ್ಶಿಸಿ ಹಳೆಯ ಹೆದ್ದಾರಿಗಳನ್ನು ಹಾಯ ಬಹುದು.

 ಇಲ್ಲಿಂದಲೇ ಕಂಪ-ಭೂಪ ಮಾರ್ಗ ಪ್ರಾರಂಭವಾಗಿ ಸುಗ್ರಿವನ ಗುಹೆ ಹಾದು ವಿಠಲ ದೇವಾಲಯದ ಹಿಂಬಂದಿಗೆ ಪುರಂದರ ಮಂಟಪದ ಬಾಜುವಲ್ಲೇ ಹಾದು ಹೋಗುತ್ತದೆ. ಬೆಳ್ಳಂಬೆಳಗ್ಗೆ ನಾಲ್ಕಕ್ಕೆ ಹೊರಟರೆ ೫ರ ಸುಮಾರಿಗೆ ಪುರಂದರ ಮಂಟಪದ ಸನಿಹವಿರುತ್ತೀರಿ. ಇಲ್ಲೊಬ್ಬಳು ಲಕ್ಷ್ಮೀ ಇಡ್ಲಿ, ವಡೆ, ಬಿಸಿ ಬಿಸಿ ಮೆಣಸಿನ ಬಜ್ಜಿಯನ್ನು ಬಯನಿ ಮರದ ನೆರಳಡಿ ಮಾರಾಟಕ್ಕೆ ನಿಂತಿರುತ್ತಾಳೆ. ನೀವೇನೋ ಗ್ರಹಿಸದಿರಿ. ಮುಂಜಾವಿಗೆ ಪುರಂದರ ಮಂಟಪದ ಸ್ವಚ್ಚಂದದ ಗಾಳಿ ಕುಡಿದು ಬಂದು ಮೆದು ಇಡ್ಲಿ ಮೆಲ್ಲುವ ಆ ಸುಖವೇ ಬೇರೆ. ಪುರಂದರ ಮಂಟಪದಿಂದ ಆಚೆಗೆ ತಲುಪಲು ನಿರ್ಮಿಸಿದ ೫೦೦ ವರ್ಷ ಹಳೆಯ ಸೇತುವೆಯುದ್ದಕ್ಕೂ ಕಣ್ಣು ಹಾಯಿಸಿ. ಹೊಸ ಮಿಂಚೊಂದು ಸಂಚಾರವಾಗುತ್ತದೆ. ಹಾಗೆಯೇ ಆಚಯ ಬದಿಯ ದೇವಾಲಯಕ್ಕೂ ಕಲ್ಲುಗಳ ಮೇಲೆ ಜಿಗಿಯುತ್ತಾ ಹೋಗಿ ಬರಬಹುದು. ಆಚೆ ದಡದಲ್ಲಿ ನೆಲಕ್ಕುರುಳಲು ತಯಾರಾದ ದೇವಾಲಯ ಹಾಗು ಇಬ್ಬರು ವೃದ್ಧರಿರುವ ಪುಟಾಣಿ ಮಠವಿದೆ.

ಇಲ್ಲಿನ ಗಾಳಿ, ನೀರಲ್ಲಿ ಒಂಟಿತನದ ಅಮಲು. ಇಲ್ಲಿಂದ ಮುಂದಡಿ ಇಟ್ಟರೆ ತಿರುಮಲ ದೇವಾಲಯ, ತುಲಾಭಾರ ಮಂಟಪ ಮತ್ತು ವಿಜಯ ವಿಠಲನ ಗುಡಿ ಎದುರಿಗಿರುತ್ತೀರಿ.

 ಹೀಗೆ ಸಾಗಿದ ಅನನ್ಯ. ದಾರಿ ಗುಂಟ ಸಿಗುವ ವಿಶಾಲ ಬೀದಿ ಮತ್ತು ಪ್ರತಿ ಬೀದಿಯ ಅಚ್ಚುಕಟ್ಟುತನ ನಮ್ಮ ಇಂದಿನ ವ್ಯವಸ್ಥೆಯನ್ನು ಗೇಲಿ ಮಾಡುವಂತಿದೆ. ತುಂಗಭದ್ರೆಯನ್ನು ತಿರುಗಿಸಿ ಹಂಪಿಗೆ ಸದಾ ನೀರಿನ ಕೊರತೆಯಾಗದಂತೆ ಕಾಪಾಡಿದುದು ಒಂದು ಅದ್ಭುತ ಇಂಜಿನಿಯರಿಂಗ್‌ ಸಾಹಸ. ಇಂದಿಗೂ ಇದೊಂದು ಮಿಸ್ಟರಿಯೇ! 

ಮಾಲ್ಯವಂತದ ಮುಂಜಾನೆ

ಮಾಲ್ಯವಂತದ ಚುಬುಕು ಎಂತವರನ್ನು ಆಕರ್ಷಿಸದೇ ಬಿಡದು. ದೇವಾಲಯದವರೆಗೆ ರಸ್ತೆ ಇದೆ. ಮುಂದೆ ಸಣ್ಣ ದಾರಿಯಲ್ಲಿ ಕತ್ತಲಲ್ಲಿ ನಡೆಯಬೇಕು. 

ಮೇಲೇರಿದಾಗ ಕಾಣುವ ದೃಶ್ಯಾವಳಿಗಳಿಗೆ ನೀವು ಮಾರು ಹೋಗುವಿರಿ. ಒಂದೆಡೆ ಮಾಲ್ಯವಂತ ರಘುನಾಥ ದೇವಾಲಯ ಇನ್ನೊಂದೆಡೆ ಗಜಶಾಲೆ ಕಾಣಸಿಗುತ್ತದೆ. ಮಾಲ್ಯವಂತದ ಬೆಳಗು ಹಾಗೂ ಸಂಜೆಗಳು ಪ್ರೇಯಸಿಯ ಬಿಸಿ ಅಪ್ಪುಗೆಯಂತೆ ಬೆಚ್ಚಗೆ! ಸದಾ ಹಂಪಿಗಾಗಿ ಹಾತೊರೆಯುವಂತೆ ಮಾಡುತ್ತದೆ! 



ರಾಮನಿಲ್ಲಿಗೆ ವನವಾಸದ ಸಮಯಕ್ಕೆ ಬಂದಿರುವ ಕುರುಹಾಗಿ ರಘುನಾಥ ದೇವಾಲಯ ನಿರ್ಮಿಸಲಾಗಿದೆ. ಜೊತೆಗೊಂದು ವಿಶಿಷ್ಟ ಶಿವಾಲಯವಿದೆ. ಶಿವಾಲಯದೆದುರು ಪುಟಾಣಿ ಲಿಂಗಗಳನ್ನು ಕೆತ್ತಿಡಲಾಗಿದೆ. ಸೂರ್ಯೋದಯ ವೀಕ್ಷಣೆಗೆ ಅತ್ಯಂತ ಪ್ರಶಸ್ತವಾದ ಜಾಗವೇ ಮಾಲ್ಯವಂತ.



ಮಾಲ್ಯವಂತ ದೇವಾಲಯದಲ್ಲಿ ೨೪ ಗಂಟೆ ಭಜನೆ ಮತ್ತು ಪಾರಾಯಣ ನಡೆಯುತ್ತದೆ. ಅಲ್ಲಲ್ಲಿ ಅರಳುವ ನಾಗಸಂಪಿಗೆಯ ಘಮಲನ್ನು ಆಸ್ವಾದಿಸುತ್ತಾ ನೆತ್ತಿ ಏರಿದರೆ ಅಪೂರ್ವ ಅಹ್ಲಾದ. ಇನ್ನೂ ಎತ್ತರಕೆ ಏರಿದರೆ ಹಂಪಿಯ ದಶ ದಿಕ್ಕುಗಳೂ ಕಾಣ ಸಿಗುತ್ತದೆ. ಪ್ರತಿವರ್ಷ ನಡೆಯುವ ಹಂಪಿಯ ಫಲ ಪುಷ್ಪ ಪೂಜೆಗೆ ಕಾತರನಾಗಿ ಕಾಯುತ್ತಾ ನಮ್ಮ ರೂಂನತ್ತ ನಡೆದೆವು


ವರ್ಷ ವರ್ಷವೂ ಹಂಪಿಯ ನೋಡುವ ಬಯಕೆ ಜ್ವರದಂತೆ ಏರುತ್ತಲೇ ಇದೆ. ಮತ್ತೆಂದು ಹಂಪಿಯ ಅಲೆಮಾರಿತನದ ಗಾಳಿಯನ್ನು ಹೀರುವೆನೆಂಬ ತವಕದಲ್ಲೇ ಕಳೆಯುತ್ತಿದೆ ದಿನಗಳು.


 

Thursday, June 4, 2026

ಹಿಂಡ್ಲು ಮನೆಯ ಹಾದಿಯಲ್ಲಿ

 


 ಮಾಗಿ ಚಳಿ ಇನ್ನೂ ಪ್ರಾರಂಭವಾಗಿರಲಿಲ್ಲ. ಪ್ರಚಂಡ ಚಂಡಮಾರುತ ಬೀಸಿ ಹೋಗಿತ್ತು. ಬದುಕಿನಲ್ಲಿ ವಯಸ್ಸಿನ ಚಂಡಮಾರುತ! ಚಾರಣ, ಪ್ರವಾಸದ ಚುಬುಕು. ನಾಲ್ಕಾರು ಸ್ಥಳಗಳ ಕಾಕ್‌ಟೈಲ್ ತಯಾರಿಸಿದ್ದಾಯಿತು. ಡಬ್ಬಿ ಕ್ಯಾಮರಕ್ಕೆ ರೀಲು ತುಂಬಿಸಿದ್ದಾಯಿತು.

  ಎರಡು ಜಲಪಾತ, ಒಂದು ಸಣ್ಣ ಚಾರಣ. ಒಂದೆರಡು ದೇವಾಲಯ. ಸಿರಸಿ ಮಾರಿಕಾಂಬ ಬನವಾಸಿಯ ಮಧುಕೇಶ್ವರ, ಜೋಗ, ವರದಾನದಿ ಸಹ ಕಾಕ್‌ಟೈಲ್‌ನ ಭಾಗ! ಅಪ್ಪಟ ಅನಾಸ್ತಿಕ ಗೆಳೆಯರು ಮೂಗು ಮುರಿದಿದ್ದರು! 



ಓಮಿನಿ ಕಾರನ್ನು ಬಾಡಿಗೆಗೆ ಪಡೆದು , ಒಂದೇ ದಿನದಲ್ಲಿ ವಾಪಾಸು ಬರುವೆವು ಎಂದು ಕಾಗೆ ಹಾರಿಸಿ ಗೆಳೆಯನೊಬ್ಬನನ್ನು ನಂಬಿಸಿ ಕಿಡ್ನಾಪ್ ಶೈಲಿಯಲ್ಲಿ ಒಮ್ನಿಗೆ ತುಂಬಿಕೊಂಡು ಹೊರಟೆವು! ಆತನೇ ಇಂದಿನ ಕಥನದ ಕೇಂದ್ರ ಬಿಂದು. ಅಸಲಿಗೆ ಅದು ನಮ್ಮ ಮೂರು ದಿನಗಳ ಪ್ರವಾಸ! ಆತನಿಗೆ ಬೇಕಾದ ವಸನಗಳ ವ್ಯವಸ್ಥೆ ಮಾಡಿದ್ದಾಯಿತು. ಊರ ಗಲ್ಲಿಗಳಲ್ಲಿ ಕಾರಿನ ಬೆಳಕು ಚೆಲ್ಲಿ ಮೂಕಾಂಬಿಕಾ ಅಭಯಾರಣ್ಯದ ಮಗ್ಗುಲಿಗೆ ಹಾದು ಮರಕುಟಿಕವೆಂಬ ಸಣ್ಣ ಮೂರ್‌ಕೈಯಲ್ಲಿ ದಾರಿಕಾಣದೇ ಸ್ಥಿತವಾಯಿತು ನಮ್ಮ ಕಾರು.

ಜಲಪಾತದ ಜಿ.ಪಿ.ಎಸ್‌ ಕಳೆದು (Hindlumane)

  ಬೀಸಿ ಹೋದ ಮುಂಗಾರು ಮಳೆ ಹರಡಿದ ತರಗಲೆ ದಾರಿಯುದ್ದಕ್ಕೂ. ಎಡಕ್ಕೊ ಬಲಕ್ಕೊ ನೇರವೊ ತಿಳಿಯದೆ ನಿಂತಾಗ ದಿನೇಶ ಹೊಳ್ಳ ಬರೆದ ಲೇಖನವೊಂದು ದಾರಿದೀಪವಾಗಿ ಬಲಕ್ಕೆ ಹೊರಳಿಸಿದೆವು. ನಾಲ್ಕೈದು ಎಮ್ಮೆ ಹೊಡೆದುಕೊಂಡು ಕಂಬಳಿ ಕೊಪ್ಪೆ ಹೊದ್ದವನಲ್ಲಿ ಎಮ್ಮೆ ಹೊಂಡದ ದಾರಿ ಕೇಳಿದೆ. ನೇರ ದಾರಿ ಎಂಬಂತೆ ಸನ್ನೆ ಮಾಡಿದ ಮೂಕನಿರಬೇಕು ಎಂದುಕೊಂಡೆ ನೇರದಾರಿಯಲಿ ಮುಂದುವರಿದು ಕವಲಿನ ಹಾದಿಯ ನಡುವೆ ಎಲ್ಲೋ ಹಾದಿ ತಪ್ಪಿದೆವು. ಇನ್ನು ಮುಂದಿವರಿಯದಂತೆ ತೊರೆಯೊಂದು ತನ್ನ ಇರುವನ್ನು ಅರುಹಿತ್ತು. ಮುಂದುವರಿದರೆ ಸೈಲೆನ್ಸ್ರ್ ಒಳಗೆ ಹಾದು ಪ್ರವಾಸ ಮೊದಲ ದಿನಕ್ಕೆ ಮೊಟಕಾಗಬಹುದೆಂದು ಮತ್ತಿನೆರಡು ಘಳಿಗೆಯಲ್ಲೇ ಮಳೆ ಸುರಿದು ನೀರೇರಬಹುದೆಂಬ ಆತಂಕ ಮುಂಬರಿಯದಂತೆ ತಡೆದಿತ್ತು. ಸುತ್ತಲೂ ಮುಗಿಲ ಚುಂಬಿಸೋ ಮರಗಳು ನಡು ಹಗಲಿಗೇ ಕಡುಗತ್ತಲು! ಅಲ್ಲಲ್ಲಿ ಕೃಷಿ , ತೋಟಗಾರಿಕೆ. ಲಿಂಬೆ ಹುಲ್ಲಿನ `ವಾಹ್' ಪರಿಮಳ ಹೊತ್ತ ತುಂಟ ಗಾಳಿ. ಕಡಿದಾದ ಕೆಂಪು ಮಣ್ಣಿನ ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿ ಕನಸ ಬೆನ್ನತ್ತಿದೆವು.



 ಕನಸು ಅಬ್ಬೇಪಾರಿಯಾಗುವ ಕ್ಷಣ. ದಾರಿ ತಪ್ಪಿ ಯಾರದೋ ತೋಟದೊಳಗೆ ಕಾಲಿಟ್ಟೆವು. ಮನೆ ಮನಗಳಲ್ಲಿ ಹಸಿರುಟ್ಟ ಗದ್ದೆ ಕೋಗು. ಊರ ಮಂದಿ ಊರ ಬಿಟ್ಟಂತೆ ಮನೆಗಳೆಲ್ಲಾ ಖಾಲಿ ಖಾಲಿ. ಕನಸು ಅಬ್ಬೇಪಾರಿಯಾಗುವ ಪಾಳಿ. ಆತಂಕದಲ್ಲೇ ಕಳೆವ ಕ್ಷಣ. ಗೆಳೆಯರಿಗೆಲ್ಲಾ ಜಲಪಾತ ತೋರಿಸುತ್ತೇನೆಂದು ರೈಲು ಹತ್ತಿಸಿ ಎಲ್ಲೆಲ್ಲೋ ಅಲೆಸಿದ್ದದಾಯಿತು. ಜಲಪಾತ ಬಿಡಿ ಅದರ ಶಬ್ದವೂ ಎಲ್ಲೂ ಕೇಳಿಸಲೇ ಇಲ್ಲ! ಅಂತು ಇಂತು ದಾರಿ ಸಿಕ್ಕದೇ ಬಂದ ದಾರಿಗೆ ಸುಂಕವಿಲ್ಲವೆಂದುಕೊಳ್ಳುತ್ತಾ ನಿರಾಶೆಯಲ್ಲಿ ಹಿಂದಿರುಗುವ ಹುನ್ನಾರದಲ್ಲಿದ್ದೆವು. ಯಾವ ನರಪಿಳ್ಳೆಯ ಸುಳಿವೂ ಸಿಗದೇ ಜಲಪಾತದ `ಜಿ.ಪಿ.ಎಸ್' ಕಳೆದುಕೊಂಡಿದ್ದೆವು!

ಕದಡಿದ ಕೂಗು


  ಇನ್ನೇನು ಸ್ವಲ್ಪ ಹೊತ್ತಿನಲ್ಲೇ ತಂದ ಬುತ್ತಿಗಂಟು ಬಿಚ್ಚಿ ಉಂಡು ಹೊರಡೋಣವೆಂದುಕೊಂಡಿರುವಾಗಲೇ ಆರ್ತನಾದವೊಂದು ಕೇಳಿ ಎಲ್ಲರೂ ದಂಗಾದೆವು. ನಾನು ನನ್ನ ಜೊತೆಗಾರರಲ್ಲಿ ಇಬ್ಬರು ಮುಂದೆ ಮುಂದೆ ಹಳ್ಳಿಯ ದಾರಿಯಲ್ಲಿ ಮನುಷ್ಯ ಆವಾಸಕ್ಕಾಗಿ ಹುಡುಕುತ್ತಾ ಹೊರಟಿದ್ದೆವು. ಇಬ್ಬರು ಮಧ್ಯ. ಇನ್ನಿಬ್ಬರು ತೀರಾ ಹಿಂದೆ ಬಿದ್ದು ನಮ್ಮನ್ನು ಅನುಸರಿಸಿದ್ದರು.

  ದೂರದಲ್ಲಿದ್ದ ಇಬ್ಬರಲ್ಲಿ ಒಬ್ಬನಿಗೆ ಏನೋ ಆಗಿರಬೇಕು. ದೂರದಲ್ಲಿ ಆತನಿದ್ದಿದ್ದರಿಂದ ಆ ಕೂಡಲೇ ಸ್ಪಂದಿಸಲಾಗಲಿಲ್ಲ. ಏನೋ ಒಂದು ಈ ಕಗ್ಗಾಡಿನ ಮೂಲೆಯಲ್ಲಿ ಜರುಗಿತ್ತು! ಇಲ್ಲಿನ ಮೂಲ ಸೌಕರ್ಯ ಅಷ್ಟಕಷ್ಟೆ. ಓಮಿನಿ ದೂರದಲ್ಲಿ ನಿಲ್ಲಿಸಿ ಬಂದಿದ್ದೆವು. ದಾರಿತಪ್ಪಿದ ಮಕ್ಕಳಾಗಿದ್ದೆವು. ಸದಾ ಉಲ್ಲಾಸದ ಬುಗ್ಗೆಗೆ ಕಾರಣವಾಗಿದ್ದ ಕಾಡು, ಈ ಪರಿಸರ ನಮ್ಮ ಬದ್ಧ ವೈರಿಯಾಗಿ ಪ್ರತಿಸ್ಪರ್ಧಿಯಾಗಿ ಜೀವೋತ್ಕರ್ಷಕ್ಕೆ ಅಡ್ಡಿಯಾಗಿ ನಿಂತಂತೆ ಭಾಸವಾಯಿತು. ಈ ಕಠಿಣ ಕಾಲದಲ್ಲಿ ಸ್ಪಂದಿಸುವುದು ನಮ್ಮ ಆದ್ಯ ಕರ್ತವ್ಯವಾಗಿತ್ತು. ಇಂತಹ ಸುಮಧುರ ಕ್ಷಣವನ್ನು ನುಂಗಿ ಹಾಕುವಂತೆ ಏನೋ ಒಂದು ಘಟಿಸಿತ್ತೆಂದು ನನಗೆ ಭಾಸವಾಯಿತು. ಹಾಗಾಗಿ ಆತನಿದ್ದಲ್ಲಿಗೆ ದೌಡಾಯಿಸಿದೆ.

ಕನ್ನಡಿ ಹಾವು ಕಚ್ಚಿ



ಹೀಗೆ ದಾರಿ ಹುಡುಕುತ್ತಾ ಮುಂದೆ ಸಾಗಿದ ನನಗೆ ಹಿಂದಿನಿಂದ ನಮ್ಮ ತಂಡದ ಸದಸ್ಯ ಗಣೇಶನ ಬೊಬ್ಬೆ ಕೇಳಿ, ನಾನು ಒಂದೇ ಜಿಗಿತಕ್ಕೆ ಅಲ್ಲಿಗೆ ತಲುಪಿದೆ. ಆತನ ಕಾಲಿನಿಂದ ರಕ್ತ ಒಸರುತಿತ್ತು. ನಾವು ಗಾಬರಿ ಬಿದ್ದೆವು. ಏನಾಯಿತೆಂದು ವಿಚಾರಿಸಿದಾಗ ನಾನು ಸತ್ತೆ!. ನಾನು ಸತ್ತೆ ಎಂಬ ಗಣೇಶನ ಬೊಬ್ಬೆ ಮುಂದುವರೆದಿತ್ತು. ಆತನನ್ನು ಸಮಾಧಾನ ಪಡಿಸಿ ಕೇಳಿದಾಗ ರಕ್ತ ಕನ್ನಡಿ ಹಾವು ಕಡಿಯಿತು! ಎಂದು ಹೇಳಿ ನಮ್ಮನ್ನು ಗಾಬರಿಪಡಿಸಿದ! ಮೊದಲೇ ಅಂಜಿಕೆ ಸ್ವಭಾವದ ಆತನನ್ನು ಚಾರಣಕ್ಕೆ ಕರೆತಂದಿದ್ದು ನನ್ನ ತಪ್ಪೆಂದು ತಿಳಿಯಿತು. ಆತನ ಕಾಲಿಗೆ ಸಣ್ಣ ಟವೆಲ್ ಕಟ್ಟಿ ರಕ್ತ ಮೇಲೆ ಹರಡದಂತೆ ಜಾಗೃತೆ ಮಾಡಿದೆವು. ಅದಾಗಲೇ ನಮ್ಮ ತಂಡದವರಲ್ಲಿ ಗಡಿಬಿಡಿ ಮನೆ ಮಾಡಿತ್ತು. ಎಲ್ಲರ ಕೋಪಕ್ಕೆ ತುತ್ತಾಗುವ ಸರದಿ ನನ್ನದಾಗಿತ್ತು. ಹಾದಿ ತಪ್ಪಿಸಿದ್ದಿಯ ಜೊತೆಗೆ ಈ ದುರ್ಗಮ ಹಾದಿಯಲಿ ಹಾವಿನ ಕಾಟಕ್ಕೆ ಗೆಳೆಯನನ್ನೇ ಬಲಿ ಕೊಡಬೇಕಾದ ಪರಿಸ್ಥಿತಿ ಬಂತೆಂದು ಹಿಡಿ ಶಾಪ ಹಾಕತೊಡಗಿದರು. ಕನ್ನಡಿ ಹಾವು ಕಡಿದರೆ ಸಾಯೋದಿಲ್ಲವೆಂದು ನಿರ್ದಿಷ್ಟವಾಗಿ ಹೇಳಿದೆ. ಎಲ್ಲರೂ ನನ್ನ ಮೇಲೆ ದಾಳಿ ಮಾಡಿದರು!



ಗಣೇಶನ ತುರ್ತು ಅಗತ್ಯಕ್ಕೆ ಸ್ಪಂದಿಸುವ ಜವಬ್ದಾರಿ ನನ್ನ ಮೇಲಿದ್ದುದರಿಂದ ಆತನನ್ನು ಸಮಾಧಾನ ಪಡಿಸಿ ಏನಾಯಿತೆಂದು ವಿಚಾರಿಸಿದಾಗ ನಾನೊಂದು ದೊಡ್ಡ ರಕ್ತ ಕನ್ನಡಿ ಹಾವನ್ನು ತುಳಿದೆ, ಅದು ನನ್ನನ್ನು ಕಚ್ಚಿತು ಎಂಬುದು ಆತನ ವಿವರಣೆ, ಹಾವಿದ್ದ ಸ್ಥಳ ನೋಡಲು ಹೋದೆವು. ಗದ್ದೆ ಕಂಠದ ಬದಿಯಲ್ಲೊಂದು ತಗ್ಗಿನ ಸ್ಥಳವನ್ನು ಆತ ತೋರಿದ. ಅಲ್ಲಿ ಹುಡುಕಿದರೆ ರಕ್ತಕನ್ನಡಿ ಹಾವೊಂದು ನಿಶ್ಚಿಂತೆಯಿಂದ ಮಲಗಿತ್ತು.



ಈಗ ನಮ್ಮ ತಂಡ ಸಂದಿಗ್ದಕ್ಕೆ ಬಿದ್ದೆವು ಹಾವು ಕಚ್ಚಿದರೆ ಅದು ಅಲ್ಲಿರುತ್ತಲೇ ಇರಲಿಲ್ಲ, ಆದರೆ ಕಚ್ಚದೆ ಕಾಲಿನಿಂದ ರಕ್ತ ಒಸರುವುದು ಹೇಗೆ? ತೀವ್ರ ಗೊಂದಲಕ್ಕೆ ಬಿದ್ದೆವು. ನಮ್ಮ ಸ್ನೇಹಿತರೆಲ್ಲಾ ಗರ ಬಡಿದವರಂತೆ ನಿಂತರು.

ಚೆಲುವಾತಿ ಚೆಲುವ ಕನ್ನಿಕೆ 



ಇದಕ್ಕೂ ಮುಂಚೆ ಹತ್ತಾರು ಚಾರಣ ಮಾಡಿದ ಅನುಭವವಿದ್ದ ನನಗೆ ಈಗ ರಕ್ತ ಒಸರಿದ್ದು ಹೇಗೆಂದು ಹೊಳೆದು ಕೊಂಚ ಸಮಾದಾನವಾಯಿತು. ನಾನು ಗಣೇಶನ ಬಳಿಗೆ ಓಡಿ ಗಾಯವನ್ನು ಸೂಕ್ಷ್ಮವಾಗಿ ಪರಿಶೀಲಿಸಿದೆ. ಒಂದು ದೊಡ್ಡ ಗಾಯ ಮಾತ್ರವಿತ್ತು. ಇನ್ನೊಂದು ಗಾಯ ಸುಮಾರು 5 ಸೆ.ಮೀ. ಆಚೆಗಿತ್ತು. ಹಾಗಾಗಿ ಆತ ಇದು ಹಾವು ಕಡಿದದಲ್ಲಾ ಎಂದು ತೀರ್ಪಿತ್ತೆ. ಹಾವಾಗಿದ್ದರೆ ಗಾಯಗಳೆರಡು ಹತ್ತಿರ ಹತ್ತಿರವಿರಬೇಕಿತ್ತು.  ಹಾಗಾದರೆ ರಕ್ತ?! ಎಂದು ಉಳಿದವರೆಲ್ಲಾ  ಕಿರುಚಿದರು. ಅದು ಇಂಬಳ ಎಂಬ ಜೀವಿ. ರಕ್ತ ಹೀರಿ ಹೊದುದರಿಂದ ಉಂಟಾದ ಗಾಯದಿಂದ ಬರುತ್ತಿರುವುದು. ಎಂದಾಗ ಎಲ್ಲರು ಸಮಧಾನದ ನಿಟ್ಟುಸಿರು ಬಿಟ್ಟೆವು. ಹಾವನ್ನು ಕಂಡ ಗಣೇಶ ಗಾಬರಿ ಬಿದ್ದು ಭಯದಿಂದ ಸತ್ತೇ ಬಿಡುತ್ತೇನೆಂದು ಗಲಾಟೆ ಎಬ್ಬಿಸಿದ್ದ! 


ದೊಡ್ಡ ಗಂಡಾಂತರದಿಂದ ಪಾರಾದ ಎಲ್ಲರೂ ಒಮ್ಮೆ ನಿರುಮಳರಾದೆವು. ಗಣೇಶ ನಾಚಿಕೆಯಿಂದ ಮಾತೆ ಹೊರಡದಂತಾಯಿತು. ಮುಂದಿನ ಪಯಣದುದ್ದಕ್ಕೂ ಆತನನ್ನು ಗೋಳು ಹೊಯ್ದುಕೊಂಡೆವು. ಸುಮಾರು ಒಂದು ಗಂಟೆ ಕಾನನದಿ ಗಗನ ಸ್ಪರ್ಶಿ ಮರಗಳ ನಡುವೆ ಕೊಡಚಾದ್ರಿಯ ನೋಡುತ್ತಾ ಒಬ್ಬರಿಗೊಬ್ಬರು ಕಾಲೆಳೆಯುತ್ತಾ ಸಾಗಿದೆವು. 

ಹಿಂಡ್ಲು ಮನೆಯತ್ತ



ಹಿಂಡ್ಲು ಮನೆಯೊಂದು ವಿಶಿಷ್ಟ ಜಲಧಾರೆ. ಕೊಡಚಾದ್ರಿ ಕುಡಿದ ನೀರೆಲ್ಲಾ ಇಲ್ಲಿ ಇಳಿದು ಹರಿಯುತ್ತದೆ. ಕೊಡಚಾದ್ರಿ ಚಾರಣದ ಚಿಮ್ಮು ಹಲಗೆಯೂ ಹೌದು! ಜಲಪಾತದ ಸನಿಹದ ಏರುದಾರಿಯಲಿ ಏರಿದರೆ `ಒಂಟಿ ಮರ' ವೆಂಬ ವಿಶಿಷ್ಟ ಜಾಗಕ್ಕೆ ಬಂದು ತಲುಪುತ್ತೇವೆ. 


  ಕೆಳಗಿನಿಂದ ಮೇಲೇರುವುದು ಬಲು ಕಠಿಣವೆಂದು ಒಮ್ಮೆ ಮೇಲಿನಿಂದ ಕೆಳಗಿಳಿದು ಬಂದಿದ್ದೆ! ಜಲಪಾತದ ಬುಡದ ಮನೆಯಲ್ಲಿ ಮಲೆನಾಡಿನ ಮನೆಯ ವಿಶಿಷ್ಟ ತಂಬಳಿಯೂಟ ಸವಿದಿದ್ದೆ! ಇಂತಹ ಮಲೆನಾಡ ಮನೆಗಳು ಪೇಟೆ ಪಟ್ಟಣಗಳ ಮನೆಗಳಿಗಿಂತ ವಿಶಿಷ್ಟವಾಗಿ ನಿಲ್ಲುತ್ತವೆ! ತನ್ನ ಕಾಲಮೇಲೆ ನಿಂತ ಮನೆ. ಹತ್ತಲಿನಲಿ ತರಹೇವಾರಿ ತರಕಾರಿ, ಹೂ ಗಿಡ, ಸಂಪಿಗೆ, ಜಾಜಿ ಬಳ್ಳಿಗಳು. ನೀರ ಹನಿಗಳನ್ನು ನಿರಾಯಸವಾಗಿ ತಮ್ಮ ತಮ್ಮ ಮನೆಗಳತ್ತ ತಿರುಗಿಸಿಕೊಂಡು ನೆಮ್ಮದಿಯ ಬದುಕ ಕಂಡವರು ಆಗಷ್ಟೇ ವಿದ್ಯುತ್ ಎಂಬ ಅನಿಷ್ಟ ಅವರ ಅಂಗಳಕ್ಕೂ ಕಾಲಿಟ್ಟಿತ್ತು ಬಂದು ಹೋಗೋರಿಗೆ ಅವರ ತೋಟದ ಲಿಂಬೆ ಪಾನಕ ಅತಿ ಕಡಿಮೆ ದರದಲ್ಲಿ ವ್ಯವಸ್ಥೆ ಮಾಡಿದ್ದರು. ಈಗಂತೂ ಆರ್ಥಿಕತೆ ಮಗ್ಗಲು ಬದಲಿಸಿದ್ದರಿಂದ ಅಲ್ಲೊಂದು ಪುಟಾಣಿ ಅಂಗಡಿ ತಲೆ ಎತ್ತಿತ್ತು! ತರಹೇವಾರಿ ಬಾಟಲಿ ಪೇಯ ಮಾರಾಟಕ್ಕಿಟ್ಟಿದ್ದರು. ಪಟ್ಟಣದ ಎಲ್ಲಾ ವಸ್ತುಗಳು ಈಗಲ್ಲಿ ಲಭ್ಯ. ಪಯಣಿಗರು ಬಿಟ್ಟ ಕೊಟ್ಟೆ, ತಾಟು, ಪ್ಲೇಟುಗಳು ಈಗವರ ಅಂಗಳದಲಿ ತಬ್ಬಲಿಯಾಗಿ ಬಿದ್ದಿರುತ್ತವೆ.

ನೀರೂಡುವ ಬೃಹತ್‌ ಸ್ತನಗಳು



  ಶೋಲಾ ಕಾಡುಗಳ ವಿಶಿಷ್ಟತೆ ಇರುವುದೇ ಇಲ್ಲಿ. ಎರಡು ಎರಿನ ನಡುವಿನ ಕಣಿವೆಯಲ್ಲಿ ಬೆಳವ ಮರಗಳು ಬಯಲಿನ ಜನರಿಗೆ ನೀರೂಡುವ ಬೃಹತ್ ಸ್ತನಗಳು! ಪ್ರತೀ ಹುಲ್ಲು ಕುಡಿದ ನೀರನ್ನು ನಿಧ ನಿಧಾನವಾಗಿ ಕಣಿವೆಗೆ ತಳ್ಳುವ ಶೋಲಾ ಕಾಡುಗಳು ಬಯಲ ನೀರಿನ ತಾಯಿ ಬೇರು. ಹಾಗಾಗಿ ಶೋಲಾ ಅರಣ್ಯಗಳು ಪರಿಸರ ಸೂಕ್ಷ್ಮ ಪ್ರದೇಶಗಳೆಂದು ಪರಿಗಣಿತವಾಗಿದೆ. ಆದರೆ ಮಾನವನ ಅಪರಿಮಿತವಾದ ಆಸೆಗೆ ಬಲಿಯಾಗುತ್ತಲಿದೆ.

ಜಲಾಪಾತವಂತೂ ಅದ್ಭುತವಾಗಿತ್ತು. ಹಂತ ಹಂತವಾಗಿ ಹಲವು ಬಾರಿ ಧುಮುಕುವುದೆಂದು ಕೇಳಿದ್ದೆವು. ಆದರೆ ದಾರಿ ತಪ್ಪಿದ್ದರಿಂದ ಕೇವಲ 3 ಹಂತ ವೀಕ್ಷಿಸಿದೆವು. ನಮ್ಮ ತಂಡದಲ್ಲಿ ಹಲವರು ಜಲಪಾತವನ್ನು ಮೊದಲಬಾರಿಗೆ ಭೇಟಿಕೊಟ್ಟಿದ್ದರಿಂದ ರೋಮಾಂಚನಗೊಂಡು ನನ್ನನ್ನು ಆಲಂಗಿಸಿ ಕೊಂಡರು! ನೀರಲ್ಲಿ ಸ್ವಲ್ಪ ಹೊತ್ತು ಆಟವಾಡಿ ತಿಂಡಿ ತಿಂದೆವು. ಕಾನನದ ಏಕಾಂತದಲ್ಲಿ ಕುಳಿತು ಸ್ನೇಹಿತರೊಂದಿಗೆ ಭೋಜನಗೈಯುವುದು ವಿಶಿಷ್ಟ ಅನುಭವ ನೀಡಿತ್ತು. ಏಕಾಂತಕ್ಕೆ ಭಂಗ ತರುವಂತೆ ಆಗಾಗ ಹಕ್ಕಿಯೊಂದು ತನ್ನ ಇರುವಿಕೆ ತೋರಿಸುತಿತ್ತು.

ಕೊನೆಯ ಹನಿ 

ಅಂತೂ ಹಿಂಡ್ಲುಮನೆ ಜಲಪಾತದ ಚಾರಣ ಒಂದು ವಿಶಷ್ಟ ಘಟನೆಯಿಂದ ಜೀವನದಲ್ಲಿ ಮರೆಯಲಾಗದ ನೆನಪಾಗಿ ಉಳಿದು ಸದಾ ಕಾಡುತ್ತಾ ಉಳಿಯಿತು. ತಮ್ಮ ತಮ್ಮ ಕೆಲಸಗಳಲ್ಲಿ ಮುಳುಗಿದ ಗೆಳೆಯರು ಮತ್ತೆಂದೂ ಚಾರಣ ದಾರಿಗಳಲ್ಲಿ ಕಾಣಿಸಿಕೊಳ್ಳಲೇ ಇಲ್ಲ!

Wednesday, May 27, 2026

ಹಿಮಾಲಯದ ಅಪರೂಪದ ಹಳ್ಳಿಯ ಮಧುರ ಆಲಾಪ

 ಈ ಜಗ ಸೋಜಿಗ….

A portrait of a village. 

ಹೊಸ ಹಾದಿಗಳ ಅನ್ವೇಷಣೆಯಲ್ಲಿ


 ಸಾಮಾನ್ಯವಾಗಿ ಮನಾಲಿ ಹೆಸರು ಕೇಳದವರಿಲ್ಲ. ಅಲ್ಲಿಗೆ ಹೋಗದವರೂ ಮನಾಲಿಯ ಕುರಿತು ತಿಳಿದು ಕೊಂಡಿರುತ್ತಾರೆ. ಆದರೆ ಈ ಅಪರೂಪದ ಹಳ್ಳಿ ಮನಾಲಿಯ ಸನಿಹದಲಿ ಯಾರ ಅರಿವಿಗೂ ಬರದೇ ನಿಶ್ಚಿಂತವಾಗಿದೆ. ಕರಡಿಯಮ್ಮನ ಮರಿಯಂತೆ. ಪಹರೆ ಕಾಯುವ ಹಿಮ ಬೆಟ್ಟಗಳು, ನದಿಗಳ ಪದತಲದಲಿ ನಿಶ್ಚಿಂತವಾಗಿ ಪವಡಿಸಿದೆ. ಹೊಸ ಕಾಲದ ವ್ಯಾಧಿಗಳಾವುವೂ ಕಾಲಿಡದ ಪುಣ್ಯ ಭೂಮಿ!

ಕೊಕ್ಸರ್ ಮತ್ತೊಂದು ಹಳ್ಳಿ.


ಮನಾಲಿಯ ಕಿರೀಟದಂತಿರುವ ಊರು ಸೀಸು. ಅಟಲ್‌ ಟನಲ್‌ ದಾಟಿ ಎಡಕ್ಕೆ ಹೊರಳಿ ೫ ಹಾಡಿನ ದೂರದಲ್ಲಿದೆ ಸೀಸು ಎಂಬ ವಿಚಿತ್ರ ಹೆಸರಿನ ಪುಟಾಣಿ ಹಳ್ಳಿ. ಬಲಕ್ಕೆ ಹೊರಳಿದರೆ ಕೊಕ್ಸರ್‌ ಎಂಬ ಮತ್ತೊಂದು ಪುಟಾಣಿ ಹಳ್ಳಿ ಬೆಟ್ಟಗಳ ಬುಡದಲ್ಲಿ ತಣ್ಣಗೆ ಪವಡಿಸಿತ್ತು. ನೂರಾರು ಹಿಮ ಝರಿಗಳು ಹೊದಿಕೆ ಹೊದಿಸಿ ಕಾಪಿಟ್ಟ ಹಳ್ಳಿ. ಮತ್ತೆರಡು ಹಾಡಿನ ದೂರಕ್ಕೆ ಹಿಮವಾಟವಾಡುವ ಜಾಗ. ಇನ್ನೂ ಸ್ವಲ್ಪ ದೂರಕ್ಕೆ ಹಿಮ ಹೊದ್ದ ರೋತಾಂಗ್‌ ನ ಸುಳಿ ರಸ್ತೆ. ರಸ್ತೆ ಗುಂಟ ಬಿಡಿಸಲಾಗದ ಕಗ್ಗಂಟ್ಟು ಹಿಮ. ಹಿಮಪಾತದ ದಿನಗಳಲ್ಲಿ ರೋತಾಂಗ್‌ ಪಾಸ್‌ ಮುಚ್ಚುತ್ತದೆ. ಅಟಲ್‌ ಟನಲ್‌ ತೆರೆದಿರುತ್ತದೆ ಅಷ್ಟೇ. ಚಳಿಯ ಹೆದ್ದರೆಗಳು ಹೆದ್ದಾರಿ ತುಂಬಾ. ಅದ್ಯಾವುದೋ ಮಾಯಕದಲ್ಲಿ ಪ್ರತ್ಯಕ್ಷವಾದ ಚಿಕ್ಕ ರೆಸ್ಟೋರೆಂಟ್.‌ ಅಲ್ಲೇ ಉಂಡು ತೂರುವಗಾಳಿಗೆ ಬೆಟ್ಟವ ಮಾತಾಡಿಸಿ ಹೊರಟೆವು.



 ನಾಲ್ಕು ದಿಕ್ಕುಗಳಿಂದಲೂ ಹಿಮದ ಹೊದಿಕೆ ಹೊದ್ದ ಬೆಟ್ಟ ಸಾಲು. ಸೂರ್ಯ ಕಿರಣಕೆ ಏಳುವ ಮಂಜು. ಕೆಂಪಿನಿಂದ ಹಳದಿಯಾಗುವ ಎಲ್ಲೆಲ್ಲೂ ಹಿಮದ ಚಾದರ. ನೆನಪುಗಳಿಗೆ ಪುನರ್ಜನಮ್ಮ ಕೊಡುವಂತಹ ವಿಪರೀತ ಚಳಿ! ಬಯಕೆ ಕೆಂಡದ ಮೇಲಿಂದ ಬೀಸುವ ಸುಟ್ಟ ಕುಳಿರ್ಗಾಳಿ. ಒಣ ಮರುಭೂಮಿಯ ತಣ್ಣನೆಯ ಹವೆ. ಅಲ್ಲಲ್ಲಿ ಕಾಣ ಸಿಗುವ ವಿಶಿಷ್ಟ ಮೊಲ. ಕರಿ ಮಣ್ಣ ಗದ್ದೆಗಳಲ್ಲಿ ಎಲ್ಲೆಲ್ಲೂ ಚಿಗುರುವ ಹೂಕೋಸಿನ ಚಿಗುರು. ವಿಶಿಷ್ಟ ಜೀವ ಜಾಲದ ಸೆರಗು. ಊರಿಗೆ ಶಾಲು ಹೊದಿಸಿದಂತೆ ಹರಿವ ಚಂದ್ರಾ ನದಿ! ಚಳಿಗೆ ಬೇಗ ಮಲಗೋ ಬಾನ ಚಂದ್ರ!!

ಊರ ಚಾವಡಿಯಲ್ಲಿ 


 ಊರ ಚಾವಡಿಯಲ್ಲೊಂದು ಕೊಳ. ಕೊಳದ ಸನಿಹ ಗಡಿ ಹಾಕಿದಂತೆ ಹರಿವ ಚಂದ್ರಾನದಿ ಮತ್ತು ಕೊಳಲ ರಾಗ ತೆಗೆಯುವ ಸೀಸು ಜಲಧಾರೆ. ಸದಾ ಪ್ರಶಾಂತ ಸನ್ನಿಧಿ. ಅದರ ಸೌಂದರ್ಯಕ್ಕೆ ಮರಳಾಗದೇ ಮರಳಿದವರಿಲ್ಲ. ಗಂಟೆಗೆ ಸಾವಿರ ಸಾವಿರ ಕ್ಯೂಸೆಕ್ಸ್‌ ನೀರನ್ನ ಧರೆಗಿಳಿಸುವ ಭಗೀರಥ, ಸೀಸು ಜಲಧಾರೆ. ೨೪ ಗಂಟೆಯೂ ಬೇಸರಿಸದೆ ಬಸವಳಿಯದೇ ಸುರಿವ ಜಲಧಾರೆ ಎಂದು ಬತ್ತುವುದೆಂದು ಹೋಟೆಲ್‌ ಮಾಲಿಕನಲ್ಲಿ ಕೇಳಿದೆ. ಇಲ್ಲಿಯವರೆಗೆ ಬತ್ತಿದ್ದೇ ಇಲ್ಲವೆಂದ! ಹಿಮ ಟೋಪಿಗಳನ್ನು ಕರಗಿಸುತ್ತಲೇ ಇರುತ್ತದೆ. ಮತ್ತೆ ಮತ್ತೆ ನೀರುಣಿಸುವ ಹಿಮಗಡ್ಡೆಗಳು ಚಂದ್ರಾ ನದಿಯ ಮಹಾ ಮೊಲೆಗಳು! ಹಿಮದ ದಿನಗಳಲ್ಲಿ ಜಲಪಾತವೇ ಮರುಗಟ್ಟಿ ಕಂಬವಾಗುತ್ತದೆ. ಹಿಮಕಂಬ! ಗಡಿಯಾಚೆಗೂ ತನ್ನ ಕರುಣೆಯ ಕೈಚಾಚುತ್ತಾಳೆ. ಚಂದ್ರಾ ಸಿಂಧೂವಿನೊಂದಿಗೆ ಒಪ್ಪಿನ ಒಪ್ಪಂದವಗೈದು ಹರಿಯುತ್ತಲೇ ಪಾಕಿಸ್ತಾನ ಸೇರುತ್ತಾಳೆ. ಚಂದ್ರಾ ನದಿಯ ಒಂದು ಭಾಗ ಈ ಜಲಧಾರೆ. ಇಲ್ಲೇ ನದಿಗುಂಟ ರಿವರ್‌ ಕ್ರಾಸಿಂಗ್‌ ಮಾಡಿಸಲಾಗುತ್ತದೆ. ಉದುರುವ ಹುಡಿ ಮಣ್ಣಿಗೆ ಹುಗಿದ ಕಂಬಗಳು ನೀರಲಿ ತೇಲುವ ಹುನ್ನಾರದಲ್ಲಿದ್ದಂತೆ ಭಾಸ. ಮಹಾ ಮಳೆಗೆ ಕೊಚ್ಚಿ ಹೋದ ಹಳೆಯ ಸೇತುವೆಯ ಕುರುಹುಗಳಿನ್ನೂ ಅಲ್ಲೇ ಜೀವಂತ.

ಸೀಸುವಿನ ಮುಂಬೆಳಗು




ಮುಂಜಾವಿನ ಇಬ್ಬನಿಗೆ ತೊಯ್ದ ನೆಲ. ಸೂರ್ಯ ರಶ್ಮಿಗೆ ಎದ್ದ ಹಿಮದಾವಿ ಸವಿಯಲು ನೀವೊಮ್ಮೆ ಇಲ್ಲಿಗೆ ಬರಬೇಕು. ಪುಡಿಗೆಲಸ, ಪುಡಿಗಾಸು ಬರ್ಫದ ಹೊದಿಕೆ ಜಾರಿದಾಗಲೇ ಭರ್ತಿಯಾಗುವ ಬಟ್ಟಲು, ಬೆಳೆ ಎಲ್ಲಾ. ಒಂದು ತುಂಬಲು ಇನ್ನೊಂದು ಕರಗಲೇ ಬೇಕು. ಅತಿಥಿ ದೇವೋ ಭವ. ಕಲ್ಲುಗಳ ಗುಡ್ಡದಲ್ಲೂ ಅರಳುವ ಹಿಮ ಪ್ರೇಮ. ಆಕಾಶಕ್ಕೆ ಏಣಿ ಹಚ್ಚುವ ಅವಕಾಶವಿಲ್ಲದ ಸೀಮಿತ ಬದುಕಿನ ಓಣಿ. ಹೂಕೋಸು ಅರಳಲು ಬೇಡುವ ಹಿಮ ಕರುಣೆ. ಆಲುವಿಲ್ಲಿ ಭಾಲು!! 

ಸಣ್ಣ ಶಾಲೆ, ಪುಟಾಣಿ ಮ್ಯೂಜಿಯಂ, ಸಣ್ಣ ಔಷಧಾಲಯ ಇವಿಷ್ಟೇ ಸೌಲಭ್ಯಗಳು. ಮರಳಾಗದೇ ಮರಳುವುದು ಹೇಗೆ? ಬದುಕಿಡಿ ಅನುಭವಿಸುವ ಖಾಲಿತನವನ್ನು ಇಲ್ಲಿ ತುಂಬಿಕೊಳ್ಳಬಲ್ಲಿರಿ. ಮನದ ಬೇಗುದಿಯನು ಬೆಟ್ಟಕ್ಕೆ ವರ್ಗಾಯಿಸಿ ನಿರುಮ್ಮಳನಾಗಬಹುದು. 




ಮನದ ಆಗಸದಲ್ಲಿ ತುಂಬಿಕೊಂಡ ಅಪೂರ್ವ ಸೀಸು ಎಂಬ ಪುಟಾಣಿ ಹಳ್ಳಿಯಲ್ಲಿನ ಎರಡು ಹಗಲು ಮತ್ತು ಎರಡು ರಾತ್ರಿಗಳ ನೆನಪು ಸಣ್ಣ ಕಿಡಿ ಹೊತ್ತಿ ಹೊರಬಂದಿದೆ. ನನ್ನ ಕಾಡುತಲಿದೆ ಎಂದೂ ಬಾರದ ಗೆಳತಿಯ ನೆನಪಿನಂತೆ. ತಂಗಾಳಿಗೆ ತೆಗೆದ ಕಿಟಕಿಯಂತೆ. ನೀನಿಲ್ಲದ ಖಾಲಿ ದಿನಗಳ ಸಂಪುಟದ ಸಣ್ಣ ಪುಟದಂತೆ. ಕುದುರೆಯ ಕರಪುಟದಂತೆ ಆಧುನಿಕತೆಗೆ ಪುಟ ತೆರೆದುಕೊಂಡವರಿಗೆ ಅಪ್ಪಟ ದೇಸಿ ಸಂಪುಟ. ಬೆಟ್ಟದ ಬೆರಗಿಗೆ ಪಸುರೊಡೆದ ಪುಟಾಣಿ ಹೂಕೋಸಿನಂತಹ ಹಳ್ಳಿ. ಆರು ತಿಂಗಳು ಕೆಲಸ ಆರು ತಿಂಗಳು ಸೂಟಿ!!

 ಎಲ್ಲೆಲ್ಲಿಂದಲೋ ಬರುವ ಎಚ್‌ ಎಸ್‌ ಆರ್‌ ಟಿ ಸಿ ಬಸ್ಸುಗಳು ಅಪರಿಚತರಂತೆ ಹಾದು ಹೋಗುತ್ತವೆ. ಕೆಲವೊಮ್ಮೆ ಪರಿಚಿತರೂ ಅಪರಿಚಿತರಂತೆ! ಗೊತ್ತಿದ್ದೂ ಗೊತ್ತಿಲ್ಲದಂತೆ ಹಾದು ಹೋಗುವರು. ಹರಿದ್ವಾರದ ಬಯಲಿನಿಂದ ಬೆಟ್ಟಕ್ಕೆ ಬರುವ ಎಚ್‌ ಎಸ್‌ ಆರ್‌ ಟಿ ಸಿ ಬಸ್ಸುಗಳಂತೆ. ನಿರುದ್ವಿಗ್ನ ನೀರವ ರಾತ್ರಿಗಳನ್ನು ಕಳೆಯುವ ಪಾಪದ ಚಾಲಕರು. ಇಲ್ಲಿ ಬಂದಿಳಿದಿದ್ದೇ ಸುಳ್ಳು ಎಂಬಂತೆ ಬೆಳಗಿನ ಚಳಿಗೆ ಎದ್ದು ಜಿಪ್ಸಾ ಮತ್ತು ಕಿಲಾಂಗ ಎಂಬ ಸ್ವರ್ಗಕ್ಕೆ ಹೊರಟು ಬಿಡುತ್ತಾರೆ. ಅವರ ಕೈ ಚೀಲದ ಗಾತ್ರವು ನಮ್ಮನ್ನು ಅಚ್ಚರಿಗೆ ತಳ್ಳುತ್ತವೆ! ಅವರಿಗೆ ಈ ಲೋಕವೇ ಅಪರಿಚಿತ. ನಿರುದ್ವಿಗ್ನ! ರಸ್ತೆ ಮಾತ್ರ ಪರಿಚಿತ. ಏನೋ ಕಳೆದುಕೊಂಡು ಅರಸುವವರಂತೆ ಅಪರಿಚಿತ, ಅನೂಹ್ಯವಾಗಿ ಎಕ್ಸಲೇಟರ್‌ ಅದುಮುತ್ತಲೇ ಇರುತ್ತಾರೆ. ಮತ್ತೆ ಮತ್ತೆ ಈ ದಾರಿಗಳಲ್ಲಿ ಪಯಣಿಸಲು ಮನಸ್ಸು ಬಯಸುತ್ತಲೇ ಇರುತ್ತದೆ. ಯಾವುದೇ ಹೋಲಿಕೆಗೆ ನಿಲುಕದ ನಿರುದ್ವಿಗ್ನ ಹಳ್ಳಿ ಜಿಪ್ಸಾ. ಇಲ್ಲಿ ಬದುಕುವುದೇ ಇವರ ಸೌಭಾಗ್ಯ! ಎಲ್ಲವಿದ್ದು ಏನೋ ಕಳಕೊಂಡವರಂತೆ ಬದುಕುವ ನಾವು ಸೇಬಿನ ರಾಶಿಯ ಈರುಳ್ಳಿಯಂತೆ!

 ಏಕಾಂತವೇ ಪರಮ ಸೌಭಾಗ್ಯ. ಹಿಮದ ದೀವಟಿಗೆಯಲಿ ಸೂರ್ಯ ಅಪ್ಪಟ ಕೆಂಡ. ಮಂಜಿನಲಿ ನೆನದ ಮನೆಗಳು ಸೂರ್ಯ ಬಂದಾಗ ನೆಟಿಗೆ ಮುರಿಯುತ್ತವೆ. ನಿಧಾನಕ್ಕೆ ಏಳುತ್ತವೆ. ಗದ್ದೆ ಬಯಲುಗಳಲಿ ಅಲೆವ ಜನ ಮಂಜಿಗೆ ಮುಖ ಒಡ್ಡಿ ಸೂರ್ಯ ಮಾಮನಿಗೆ ಶುಭೋದಯ ಹೇಳುತ್ತಾ ತಮ್ಮ ತಮ್ಮ ಕೆಲಸಕ್ಕೆ ತೆರಳುತ್ತಾರೆ. ತುಂಬಾ ಮಂಜು ಬೀಳುವಾಗ ಆಕಾಶಕ್ಕೆ ಮುಖ ಮಾಡಿ ನಕ್ಷತ್ರಗಳ ಎಣಿಸುತ್ತಾರೆ. ಕೇವಲ ಗಾಳಿ ಮಾತನಾಡುತ್ತದೆ. ಮನುಷ್ಯ ಮಾತು ಮರೆಯುತ್ತಾನೆ. ಕಾಫಿ ಕಪ್ಪಿನ ಸಾಂಗತ್ಯದೊಂದಿಗೆ ಸುಖಿಸುವ ಸಖನಂತೆ ಸೀಸು ಸದಾ ಶಾಂತವಾಗಿ ನಮ್ಮನ್ನು ಮತ್ತೆ ಮತ್ತೆ ಬರುವಂತೆ ವಿನಂತಿಸುತ್ತದೆ.

ಸೀಸು ಎಂಬ ಆಪ್ತ ಸಖಿ


ಇಲ್ಲಿನ ತಣ್ಣಗಿನ ಹಳದಿ ಬೆಳಕಿನಲ್ಲಿ ತಿಂಗಳುಗಟ್ಟಲೆ ಮಿಂದೇಳಬೇಕು. ಅಪರಿಚಿತ ಬಸ್ಸುಗಳಲ್ಲಿ ಸುಮ್ಮನೆ ಪಯಣಿಸಬೇಕು ಎಂದು ನಿಮಗನಿಸದೇ ಇದ್ದರೆ ಕೇಳಿ. ಜನಪದದ ಗುಂಗಿನೊಳಗೆ ಪದವಾಗಿ, ಮಜ್ಜಿಗೆಯೊಳಗಿನ ಬೆಣ್ಣೆಯಂತೆ ಬೆರೆಯಬೇಕು. ನೀವೆಂದು ಬರುವಿರೆಂದು ನಿಮಗಾಗಿ ಕಾಯುತ್ತಲೇ ಇದೆ ಸೀಸು.

ಮಾತು ಮರೆತಂತ ಸುಖಭಾವ. ಅರ್ಧ ಬರೆದ ಕವನದಂತೆ. ಗಂಧರ್ವನ ಕನಸಿನಂತೆ ಎಲ್ಲವೂ ಇಲ್ಲಿ ಶಾಂತ. ಒನಕೆಯಂತೆ ಗಂಟೆಗೆ ಕೆಲವು ಕ್ಯೂಸೆಕ್‌ ನೀರನ್ನು ಬೇಜಾರಿಲ್ಲದೆ ಬೆಟ್ಟದಿಂದ ಭೂಮಿಗಿಳಿಸುವ ಭಗೀರಥನಂತೆ ಸದಾ ಸೀಸು ಜಲಧಾರೆ ಸುರಿಯುತ್ತಲೇ ಇರುವುದ ನೋಡುತ್ತಾ ಊರ ಜಗಲಿಯಿಂದ ಹೊರಬಿದ್ದೆ. ಮನಸ್ಸು ಇಲ್ಲಿನ ಗಾಳಿಗೆ ಪುಳಕಗೊಳ್ಳುತಲಿತ್ತು. ನಿನ್ನ ಕಣ್‌ ಬೆಳಕಿನ ಸಂತಸವನ್ನು ನನ್ನೊಡಲಿನಲ್ಲಿ ನಾ ಮತ್ತೆ ತುಂಬಿಕೊಳ್ಳಲು ಒಂಟಿಯಾಗಿ ಇಲ್ಲಿಗೆ ಮತ್ತೆ ಬರಬೇಕು. ಹಿಮ ಚಾದರವ ಹೊದ್ದು ಮಲಗಬೇಕು ಎಂಬ ಬಯಕೆಯೊಂದಿಗೆ ಸೀಸುವಿಗೆ ಹಿಮದ ಕೈ ಬೀಸಿದೆ.

Saturday, April 11, 2026

ತುಂಬಾ ಕುಡಿದರೂ ತಲೆಗೇರದ `ತುಂಬಾ'



 ನಿಮಗೂ ಸ್ವಲ್ಪ ಮತ್ತೇರಿಸುವ ಉದ್ದೇಶದಿಂದಲೇ ಈ ಲೇಖನ ಬರೆಯುತ್ತಿದ್ದೇನೆ. ಒಮ್ಮೆಯಾದರೂ ಕಣ್ಮುಚ್ಚಿ ಕುಡಿದು ಬಿಡಿ!! ನಿಮ್ಮ ಒಳಗೂ ಹೊರಗೂ ಒಂದಾಗಿ ನೀವೇ ದೇವರಾಗಿ ಬಿಡಬಹುದು! ಅದ್ವೈತಿಯಾಗಬಹುದು. ನಿಮ್ಮನ್ನಾರೂ ಕುಡುಕ ಎನ್ನಲಾರದು. ರೋಚಕತೆಗಾದರೂ ಒಮ್ಮೊಮ್ಮೆ ಸುಂದರ ತಪ್ಪುಗಳನ್ನು ಮಾಡಿಬಿಡಿ! ಬದುಕಿಡಿ ಆ ನೆನಪುಗಳ ಆಸರೆ ಪಡೆದು ಬದುಕಿಬಿಡಬಹುದು! ಏಕಾಂತದಲ್ಲಿ ನೆನಪಿಸಿಕೊಂಡು ಖುಷಿಪಡಬಹುದು! 

       ಅಯ್ಯೋ ಪೀಠಿಕೆಯೇ ದೀರ್ಘವಾದಂತಿದೆಯೇ. ಇಷ್ಟೂ ಹೇಳದೆ ಇದ್ದರೆ ಹೇಗೆ? ಭಾರತವೇ ಒಂದು ಅಚ್ಚರಿಗಳ ನಾಡು. ಇಲ್ಲಿ ದುರ್ಯೋಧನನ್ನೂ ಪೂಜಿಸುತ್ತಾರೆ! ಬೃಹನ್ನಳೆಯನ್ನೂ, ಐರಾವಣನನ್ನೂ ಸಮಾನವಾಗಿ ಪೂಜಿಸಲಾಗುತ್ತದೆ! ಕರ್ಣನಿಗೂ ಒಂದು ದೇವಾಲಯವಿದೆ! 

ಊರೂರ ಅಸ್ಮಿತೆಯನ್ನು ಅರಸುತ್ತಾ

  ಪ್ರತೀ ರಾಜ್ಯಕ್ಕೂ ವಿಶಿಷ್ಟವಾದ ಅಸ್ಮೀಯತೆಯೊಂದು ಅಂಟಿಕೊಂಡೇ ಇರುತ್ತೆ. ಕೇರಳ, ಕರ್ನಾಟಕದಲ್ಲಿ `ನೀರಾ' ಅತ್ಯಂತ ಪ್ರಿಯ ಪೇಯ ಜೊತೆಗೆ ಏಳನೀರು. ಆಯಾ ರಾಜ್ಯದ ಜನತೆ ಅದನ್ನು ನಿಷ್ಠೆಯಿಂದ ಕಾಪಾಡಿಕೊಂಡು ಬಂದಿರುತ್ತಾರೆ. ನಮ್ಮಲ್ಲಿ ನೀರಾ ಇಳಿಸಲೇ ಕೆಲ ಜನಾಂಗಗಳಿವೆ! ಅವರ ಮೂಲ ಕಾಯಕವೇ ನೀರಾ ಇಳಿಸೋದು!  

ಮನೆಗೆ ಬಂದ ಅತಿಥಿಗಳ ಸತ್ಕಾರಕ್ಕೆ ಅದಿರಲೇಬೇಕು. ಇಂದಿನ ಯುಗದ ಪೇಯ ಚಹ ಅಥವಾ ಕಾಫಿಯಂತೆ. ಕೆಲವು ದೇಶಗಳಲ್ಲಿ ಪುನುಗು ಬೆಕ್ಕಿನ(Civet) ಕಕ್ಕದ ಕಾಫಿ ಮಾಡಿ ಮಾರುತ್ತಾರೆ. ಇದನ್ನು ಲೂವಾಕ್‌ ಕಾಫಿ ಎನ್ನುತ್ತಾರೆ. ನಮ್ಮ ಕೊಡಗಿನಲ್ಲೂ ಈ ಲೂವಾಕ್‌ ಕಾಫಿ ಅಲ್ಲಲ್ಲಿ ಸಿಗುತಲಿದೆ. ಮಹಾರಾಷ್ಟ್ರದ ಹಳ್ಳಿಗಳಲ್ಲಿ ಈಗಲೂ ಬಂದವರಿಗೆ ಲಸ್ಸಿ ನೀಡುತ್ತಾರೆ. ಮೊದಲು ನಮ್ಮಲ್ಲೂ ಆರೋಗ್ಯಕರ ಕಡೆದ ಮಜ್ಜಿಗೆಯ ಸತ್ಕಾರ ನಡೆಯುತ್ತಿತ್ತು. ಅದೀಗ ಕಣ್ಮರೆಯಾಗಿ ಮರೆವಿಗೆ ಸಂದಿದೆ.

  ಹೀಗೆ ತಮ್ಮದೇ ಅಸ್ಮೀಯತೆಗೆ ಅಂಟಿಕೊಂಡ ಊರುಗಳು ನೂರಾರು. ಒಂದು ರಾಜ್ಯ ಹಲವು ಜಗತ್ತನ್ನು ಹೊತ್ತ ಕರ್ನಾಟಕ ತನ್ನ ಪ್ರಾದೇಶಿಕ ಅಸ್ಮಿಯತೆಗೆ ಹೆಸರುವಾಸಿ. ಕಲಾಪ್ರಕಾರಗಳು, ಭಾಷೆ, ಆಹಾರ ಸಂಸ್ಕೃತಿ ಪ್ರತಿ 50 ಕಿಲೋ ಮೀಟರ್‌ಗೆ ವಿಭಿನ್ನ ಜಗತ್ತೊಂದು ನಿಮ್ಮ ಮುಂದೆ ತೆರೆದುಕೊಳ್ಳುತ್ತದೆ. ತೆರೆದು ನೋಡುವ ತವಕವಿರಬೇಕಷ್ಟೇ ಬೀದರಿನ ಬಿದರಿ ಕಲೆ, ಕರಾವಳಿಗರ ತೆಂಕು ಮತ್ತು ಬಡಗು ಯಕ್ಷಗಾನ ಪ್ರಕಾರ, ದೊಡ್ಡಾಟ, ಗೊಂಬೆಯಾಟಗಳು, ಕಲಾ ಪ್ರಕಾರಗಳಾದರೆ ಹಲಸಿನೆಲೆ ಕಡಬು, ಪತ್ರೊಡೆ, ಗೋಳಿಬಜೆ, ಬನ್ಸ್‌, ತಟ್ಟೆ ಇಡ್ಲಿ, ಕಟ್ನಾ, ಕಡಕ್ ರೊಟ್ಟಿ, ಎಣ್‌ಗಾಯಿ, ಬಸ್ಸಾರು ಮುದ್ದೆ ಆಹಾರ ಸಂಸ್ಕೃತಿಯ ರುಚಿಮೊಗ್ಗುಗಳು. ಪ್ರತಿ ಜಿಲ್ಲೆಯೂ ವಿಭಿನ್ನ ವಿಶಿಷ್ಟ ಸಂಪ್ರದಾಯಗಳಿಂದ ನಮ್ಮನ್ನು ಕಾಡುತ್ತದೆ. ಪ್ರತಿ ಊರಿನ ಸಂಸ್ಕೃತಿ, ಸಂಸ್ಕಾರಗಳು ಜನರ ಸಂಸರ್ಗದಿಂದ ಉದಿಸಿದವು. ಕರಾವಳಿ, ಮಲೆನಾಡು ಜನರು ಮನೆಗೆ ಬಂದವರಿಗೆ ವೀಳ್ಯ ನೀಡಿ ಸತ್ಕರಿಸುತ್ತಾರೆ. 


ಭೂತಾನ್, ನಾಗಾಲ್ಯಾಂಡ್, ಸಿಕ್ಕಿಂ, ನೇಪಾಳಗಳಲ್ಲಿ ಒಂದು ವಿಶಿಷ್ಟ ಸಂಪ್ರದಾಯವಿದೆ. ಮನೆಗೆ ಅತಿಥಿಗಳು ಬಂದರೆ ಅವರಿಗೆ `ಸಿಕ್ಕಿಂ'ನಲ್ಲಿ ತುಂಬಾವೆಂಬ ವಿಶಿಷ್ಟ ಪೇಯದ ಮೂಲಕ ಸತ್ಕರಿಸುತ್ತಾರೆ.

ನಾಗಾಲ್ಯಾಂಡ್‌ಗೆ ಹೋದರೆ ಅಕ್ಕಿಯಿಂದ ಮಾಡಿದ ವಿಶಿಷ್ಟ ವೈನ್ ಅನ್ನು ಆಕರ್ಷಕ ಬಿದಿರ ಲೋಟಗಳಲ್ಲಿ ನೀಡಿ ನಿಮ್ಮನ್ನು ಅಚ್ಚರಿಗೆ ಕೆಡವುತ್ತಾರೆ! ನಾಗಾಲ್ಯಾಂಡ್‌ನಲ್ಲಿ ನಡೆಯುವ ವಿಶಿಷ್ಟ ಹಬ್ಬ ಹಾರ್ನ್‌ ಬಿಲ್.‌ ಇಲ್ಲಿ ಅಕ್ಕಿಯಿಂದ ತಯಾರಿಸಿದ ಬಿಯರ್‌ ಅನ್ನು ಚಂದದ ಬಿದಿರ ಲೋಟಗಳಲ್ಲಿ ಲಲನೆಯರು ತಂದಿಡುತ್ತಾರೆ. ಇಲ್ಲಿ ವೈನ್‌ ಮತ್ತು ಬಿಯರ್‌ಗಳಿಗಾಗಿ ಪ್ರತ್ಯೇಕ ಮಾರಾಟದ ವ್ಯೆವಸ್ಥೆ ಇರುತ್ತದೆ. ಅಕ್ಕಿಯಿಂದ ಭೂತಾನಿಗರೂ ಸಹ ಪೇಯ ತಯಾರಿಸುತ್ತಾರೆ. ನಾವು ಭೇಟಿಕೊಟ್ಟ ಥಿಂಪುವಿನ ಸಣ್ಣ ಹಳ್ಳಿಯೊಂದರಲ್ಲಿ ಬ್ಯಾರಲ್ ಗಟ್ಟಲೆ ಅಕ್ಕಿಯ ವೈನ್ (ಬಿಯರ್) ತಯಾರಿಸಿ ಅದೊಂದು ಬಲು ಅಪರೂಪದ ಪದಾರ್ಥವೆಂಬಂತೆ ತಮ್ಮ `ಮಟ್ಟೆ' ಮೇಲೆ ಇಟ್ಟು ಸಾಗಿಸುತ್ತಿದ್ದರು! ಇಲ್ಲಿನವರ ಹೆಸರು ಮಾತ್ರ ತಿಳಿದಿಲ್ಲ.

ʼಮೇಘಾಲಯದ ವಾಕೆನ್ ಹಳ್ಳಿಯೊಂದರಲ್ಲಿ ನಡೆಯುವ ಬುಡಕಟ್ಟು ಉತ್ಸವದಲ್ಲಿ ಇದೇ ರೀತಿಯ ಪೇಯ ನೀಡುತ್ತಾರೆʼ ಎಂದು ಮೇಘಾಲಯದ ಗೆಳೆಯನೊಬ್ಬ ಅರುಹಿದ್ದ. ಇಲ್ಲಿನ ನಿರ್ಮಲ ಬುಡಕಟ್ಟು ಯಾವುದೇ ಪಂಗಡಕ್ಕೆ ಸೇರಿದವರಲ್ಲ. ದೇವರ ಹೆಸರು ಲಿಂಗ್‌ದಾ. ನೀವು ಕೇಳಿಲ್ಲ ಬಿಡಿ. ತಮ್ಮ ಹೊಸ ಬೆಳೆಯನ್ನು ದೇವರಿಗೆ ಸಮರ್ಪಿಸುತ್ತಾರೆ. ಅಕ್ಕಿಯಿಂದ ತಯಾರಿಸಿದ ಬಿಯರಿನ ನೈವೇದ್ಯ. ಬಂದವರಿಗೆಲ್ಲಾ ತೀರ್ಥ ಹಂಚುತ್ತಾರೆ! ಹಾಗಾಗಿ ಸರ್ವಾಂತರಯಾಮಿ ಈ ಪೇಯ! ಜಗದಗಲ ಹಬ್ಬಿದ ಈ ಸಂಪ್ರದಾಯಗಳ ತಾಯಿ ಬೇರೊಂದೆ ಅತಿಥಿ ಸತ್ಕಾರ ಮತ್ತು ಆರೋಗ್ಯ.

  ಇಂತಂಹ ಬಿಸಿ ಬಿಸಿ ಹೊತ್ತಲ್ಲಿ ತಂಪೇರಿಸುವ ತುಂಬಾನ ಕುರಿತು ಓದಿಕೊಂಡು ನೇಪಾಳ, ಸಿಕ್ಕಿಂ, ಭೂತಾನ್, ಮೇಘಾಲಯ ಸುತ್ತಿ ಬಂದು ತುಂಬಾ ನೋಡಿ ತಂಪಾಗಿರೋಣ! ನೀವೇನಂತಿರಿ? 

ಸಿಕ್ಕಿಂನ ತುಂಬಾ 



  ತೀಸ್ಟಾ ನದಿಗುಂಟ ಹರವಿ ಕುಳಿತಂತ ಊರುಗಳಾದ ಸಿಕ್ಕಿಂನ ಹಳ್ಳಿಗಳಲ್ಲಿ `ತುಂಬಾ' ಬಲು ಜನಪ್ರಿಯ ಪೇಯ. ಉಚ್ಚಾರವಂತೂ ಇನ್ನೂ ತಿಳಿಯಾಗಿಲ್ಲ. ನಾಗಾಲ್ಯಾಂಡ್‌ನಲ್ಲೂ ಇಂತಹದೇ ಪೇಯವನ್ನು ಅಕ್ಕಿಯಿಂದ ತಯಾರಿಸುತ್ತಾರೆ. ಅಲ್ಲಿ ಮಾತ್ರ ಕುಡಿಯುವ ಧೈರ್ಯವಾಗಲೇ ಇಲ್ಲ. ಅದನ್ನವರು ರೈಸ್ ಬಿಯರ್ ಎನ್ನುತ್ತಾರೆ. `ಬಿಯರ್' ಇಲ್ಲಿ ಎಲ್ಲರಿಗೂ ಡಿಯರ್. ನಾಗಾಲ್ಯಾಂಡ್ ಅತಿ ವಿಶಿಷ್ಟ ಜನ ಸಂಸ್ಕೃತಿ ಹೊಂದಿದ ರಾಜ್ಯ. 30ಕ್ಕೂ ಹೆಚ್ಚು ಬುಡಕಟ್ಟುಗಳು, ಅವರ ವೇಷ ಭೂಷಣಗಳು, ಭಾಷೆ ಎಲ್ಲವೂ ಭಿನ್ನ! ಎತ್ತರದ ನಿಲುವು ಉಳ್ಳ `ಚಾಂಗ್' ಬುಡಕಟ್ಟು ಸಹ ಒಂದು. ಹೆಚ್ಚಿನ ಹುಡುಗಿರಯರೂ ಇಲ್ಲಿ ಮಧ್ಯ ಪ್ರಿಯರು. ಮಧ್ಯಂ ಹೃದ್ಯಂ! ಇಲ್ಲಿನವರ ಮದುವೆಯೂ ಅತ್ಯಂತ ವಿಶಿಷ್ಟ ಹಾಗೂ ಸುಧಾರಿತ. ಹುಟ್ಟಿದ ಮಕ್ಕಳೆಲ್ಲಾ ಒಂದಿಡಿ ಜನ ಸಮುದಾಯಕ್ಕೆ ಸೇರಿದವರು!

  ಪ್ರಾಕೃತಿಕವಾಗಿ ಅತಿ ಶ್ರೀಮಂತ ರಾಜ್ಯ ಸಿಕ್ಕಿಂ ದಾರಿಗೊಂದರಂತೆ ಜಲಪಾತಗಳು ಸಿಕ್ಕಿಂನಾದ್ಯಂತ ಕಾಣಸಿಗುತ್ತದೆ. ಜೊತೆಗೆ ಬಿಸಿನೀರ ಬುಗ್ಗೆಗಳು ಸಹ. ಒಂದೊಂದು ಜಾಗಗಳಲ್ಲಿ ನಾಲ್ಕೈದು ಬಿಸಿ ನೀರ ಬುಗ್ಗೆಗಳು. ಇವೆಲ್ಲದರ ಲೆಕ್ಕವಿಟ್ಟು ಸೋತೆವು. ಇವೆಲ್ಲವು ಸಡಿಲ ಮಣ್ಣಿನ ಬೆಟ್ಟಗಳು ಮತ್ತು ಇವು ಹೆಚ್ಚು ಮಣ್ಣಿನಿಂದಲೇ ಆಗಿವೆ ಎನ್ನುವುದಕ್ಕೆ ಕೊಟ್ಟ ಸೂಚನೆಗಳು. ಹಿಮ ಹೊದ್ದ ಶಿಖರಗಳು, ಎತ್ತರದ ಶಿಖರಗಳು ಹೀಗೆ ಪಟ್ಟಿ ಬೆಳೆಯುತ್ತದೆ.

  ಗ್ಯಾಂಗ್ ಟಾಕ್‌ನಿಂದ ಉತ್ತರದ ಹಳ್ಳಿಗೆ ಬಂದಾಗ ಈ `ತುಂಬಾ' ನಮ್ಮನ್ನು ತುಂಬಾ ಆಕರ್ಷಿಸಿತು. ನಮ್ಮ ಜೀಪ್ ಡ್ರೈವರ್ ಸಹ `ತುಂಬಾ' ವನ್ನು ತುಂಬಾ ಹೊಗಳುತ್ತಿದ್ದ. ಇದರ ಗುಣಗ್ರಾಹಿತ್ವ ಅರಹುವ ಮಹಾನುಭಾವ. ಗ್ಯಾಂಗ್‌ ಟಾಕ್‌ ನಿಂದ ಲಾಚೆನ್‌ಗೆ ಹೊರಟಾಗ ಇಲ್ಲೇ ಬೆಳೆದ ಸೊಪ್ಪು ಬಳಸಿ ಮಾಡಿದಡೆಗೆ ಉಂಡು ಹೊರಟಾಗ ತುಂಬಾ ಬಗ್ಗೆ ತಿಳಿದು ಒಂದು ಕೈ ನೋಡೇ ಬಿಡೋಣವೆಂದುಕೊಂಡೆವು.

ತಯಾರಿಕೆ

  ಶುದ್ಧೀಕರಿಸಿದ ರಾಗಿಯನ್ನು ದೊಡ್ಡ ದೊಡ್ಡ ಡ್ರಮ್‌ಗಳಲ್ಲಿ ಹಾಕಿ ಹುದುಗು ಬರಿಸಲಾಗುತ್ತದೆ. ಈ ಹುದುಗನ್ನು ಮತ್ತು ರಾಗಿ ಕಾಳನ್ನು ಚಂದದ ಬಿದಿರ ಲೋಟಗಳಿಗೆ ಸುರಿಯಲಾಗುತ್ತದೆ. ಅದಕ್ಕೊಂದು ಚಂದ ಬಿದಿರ ನಳಿಕೆಯಂತಹ ಸ್ಟ್ರಾ. ಸ್ಥಳೀಯರು ಇದನ್ನು ಲೋಕಲ್ ಬಿಯರ್ ಎನ್ನುತ್ತಾರೆ. ಹೆಚ್ಚಿನ ಮನೆಗಳಲ್ಲಿ ಇದನ್ನು ತಯಾರಿಸುತ್ತಾರೆ. ತಣ್ಣಗಿನ ವಾತಾವರಣಕ್ಕೆ ಬೆಚ್ಚಗಿನ ತುಂಬಾ.

  ನಾನು ಮತ್ತು ನನ್ನ ಸ್ನೇಹಿತ ಹಳ್ಳಿ ಮನೆಯ ಚಾವಡಿಯಲ್ಲಿ ಕುಳಿತು `ತುಂಬಾ' ಹೀರ ತೊಡಗಿದೆವು. ರುಚಿಯಲ್ಲಿ ತೀವ್ರ ಒಗರು. ಹಾಲಿನಂತೆ ತೆಳ್ಳಗೆ. ಸ್ವಲ್ಪ ಸಿಹಿ. ರಾಗಿಯ ಈ ಹುದುಗಿಗೆ ಮತ್ತೆ ನೀರು ಸುರಿಯುತ್ತಾರೆ. ಸುರಿಯುತ್ತಾ ಹೋದಂತೆ ರಾಗಿ ಕಾಳಿನಲ್ಲಿ ಅಡಗಿರುವ ಅಂಶ ಹೊರ ಬಿಟ್ಟು ಕೊಡುತ್ತಾ ಬರುತ್ತದೆ. ಟೈಂ ಟೆಸ್ಟೆಡ್ ಮೆಥಡ್. ತಂಪಿನ ವಾತಾವರಣದಲ್ಲಿ ಬಿಸಿ ಬಿಸಿ ತುಂಬಾ ಹೀರುವುದು ಅಪ್ಯಾಯ ಮಾನ ಲಿಂಬು, ರೈ ಸಮುದಾಯಗಳ ಮದುವೆ, ಹಬ್ಬ ಹರಿದಿನಗಳಲ್ಲಿ ಅಗತ್ಯವಾಗಿ ನೀಡ ಬೇಕಾದುದು ಸಂಪ್ರದಾಯ. ಇವರ ಮದುವೆಗಳ ವಧು ವರರು `ತುಂಬಾ' ಕುಡಿಯಲೇ ಬೇಕು! ಜಪಾನಿನ ಸಾಕೆ (Sake) ಸಮನಾದ ಪೇಯ ಎಂದೂ ಸಹ ಬಣ್ಣಿಸಿದ್ದಾರೆ! ಈ `ಸಾಕೆ'ಯ ರುಚಿ ನೋಡಿಲ್ಲ. ತುಂಬಾ ನೀಡದ ಆತಿಥ್ಯ ಅಪೂರ್ಣ. ಊಟ ಹಾಕದೆ ಇದ್ದರೂ ಪರವಾಗಿಲ್ಲ ಆದರೆ ʼತುಂಬಾತಿಥ್ಯʼ ತುಂಬಾನೇ ಮಾಡಲೇಬೇಕು. 

ಗುಣಗ್ರಾಹಿ ತುಂಬಾ

  ಜೀವಶಾಸ್ತಿಯವಾಗಿ ಅಪಾರ ಲಾಭಗಳನ್ನು ಹೊಂದಿದ ಪೇಯ. ಹೇರಳವಾಗಿ ಆ್ಯಂಟಿ ಆಕ್ಸಿಡೆಂಟ್, ಬ್ಯಾಕ್ಟೀರಿಯಾಗಳಿಂದ ಉಂಟಾಗುವ ಕಾಯಿಲೆ ತಡೆಯುವ ಗುಣ ಹೊಂದಿದೆ ತುಂಬಾ. ಜೊತೆಗೆ ನಿಮ್ಮ ಸಣ್ಣ ಕರುಳಿನ ಶಕ್ತಿ ವರ್ಧಕವಂತೆ. ಪಚನಾಗ್ರಹಿ.

  ಎರಡು ಲೀಟರ್ ತುಂಬಾ ಮೋರಿದ ಗೆಳೆಯ ಮೋರಿಗೆ ಬೀಳದೆ ನೆಟ್ಟಗೆ ನೆಡೆದಿದ್ದ! ಹೆಚ್ಚು ನನ್ನ ನೋಡ್ಬೇಡಿ ದೃಷ್ಟಿ ಆಯಿತದೆ ಎಂದು ತುಂಟ ನೆಗೆ ನಕ್ಕ! ಸಂಜೆ ಹೊತ್ತಿಗೆ ತುಂಬಾದ ನಿರುಪದ್ರವಿ ಗುಣಗಳ ಬಗ್ಗೆ ತಿಳಿದು ಮನವು ತಿಳಿಯಾಯಿತು.



  ಊರೂರಿನ ಅಸ್ಮಿಯತೆಗಳೆಲ್ಲಾ ಅಳಿಸಿ ಒಂದೇ ಎರಕ ಆಗುತ್ತಿರುವ ಈ ಕಾಲಘಟ್ಟದಲ್ಲಿ ಅಲ್ಲೊಂದು ಇಲ್ಲೊಂದು ಇಂತಹ ಬೆಳ್ಳಿ ರೇಖೆಗಳು ಕಾಣಸಿಕ್ಕಾಗ ಮನಸ್ಸು ಪುಟಿದೇಳುತ್ತದೆ. ಮುದಗೊಳ್ಳುತ್ತದೆ.

       ನೇಪಾಳದಲ್ಲೊಂದು ತುಂಬಾ (Tungba) ಎಂಬ ವೃತ್ತವೇ ಇದೆ ಎಂದು ತಿಳಿದು ಬಹಳ ಅಚ್ಚರಿಯೂ ಆಯಿತು. ಊರಿನ ಅಸ್ಮಿಯತೆಯನ್ನು ಅರಹುವ ಇಂತಹ ಬಿಡಿ ನೋಟಗಳು ಮುಂದಿನ ಜನಾಂಗಕ್ಕೆ ನಮ್ಮತನವನ್ನು ತೆರೆದಿಡುವ ವಿಶಿಷ್ಟ ಪರಿ. ಕೇವಲ ಮೊಬೈಲು ಲ್ಯಾಪುಟಾಪಿನೊಳಗೆ ನುಜ್ಜುಗುಜ್ಜಾಗುತ್ತಿರುವ ಇಂದಿನ ಯುವ ಜನತೆಯನ್ನು ನಮ್ಮ ಸಂಸ್ಕೃತಿ, ರೂಢಿ ಪದ್ಧತಿಗಳ ಪರಿಚಯ ಮಾಡುವವರಾರು? ಬಿದಿರ ಲೋಟ ಸ್ಟ್ರಾ ಮಾಡಿಟ್ಟಿದ್ದು ಕಂಡು ವಿಸ್ಮಯವೆನಿಸಿತು! 

   ತಮ್ಮೆಲ್ಲಾ ಮಡಿವಂತಿಕೆಯನ್ನು ಬಿಟ್ಟು ಇಂತಹ ಗುಣಗ್ರಾಹಿ ಪೇಯಗಳನ್ನು ಮುನ್ನಲೆಗೆ ತರಬೇಕು ಎಂಬುದು ನನ್ನ ಸದಾಶಯ. ಜಾಗತೀಕರಣದ ಈ ಹುಚ್ಚು ಹೊಳೆಯಲ್ಲಿ ಇಂತಹ ವಿಶೇಷತೆಯನ್ನು ನಾವೆಂದು ಅನುಸರಿಸುವೆವೋ ನಾ ತಿಳಿಯೇ. ಅಪಾರ ಅನುಭವ ಮತ್ತು ಜೀವ ಶ್ರೀಮಂತಿಕೆಯ ಜನಾಂಗವೊಂದರ ಜ್ಞಾನ ವಿಸ್ಮೃತಿಗೆ ಸರಿಯುತ್ತಿರುವ ಈ ಹೊತ್ತಿನಲ್ಲಿ ಇವೆಲ್ಲಾ ಸಣ್ಣ ಬೆಳ್ಳಿ ರೇಖೆಯಾಗಿ ಗೋಚರಿಸುತ್ತಿದೆ. ನೀವೇನಂತೀರಿ? ಇಂತಿ ತುಂಬಾ ಪುರಾಣಂ!

Wednesday, March 11, 2026

ಸೋಲೆಂಬ ಅಲ್ಪ ವಿರಾಮದ ನಡುವೆ.

 

ತೇಜಸ್ವಿಯ ನೆನಪಿಗೆ ನಡೆಸಿದ ಮೂರು ದಿನಗಳ ಕರ‍್ಯಾಗಾರದಲ್ಲಿ ನನ್ನ ಚಿತ್ರ ಪಟ ಕಥನ ಓದಲಿತ್ತು. ಹೇಗೂ ಹೊರಟಿದ್ದೆನಲ್ಲಾ ಎಂದು ಕೊಂಡು ದೇವರ ಮನೆಯಿಂದ ಅನತಿ ದೂರದ ನಾಣ್ಯ ಭೈರವನಿಗೂ ನಮಿಸೋಣ ಎಂದುಕೊಂಡು ಹೊರಟಿದ್ದೆ. ಒಂದಿಷ್ಟು ಹೊಸ ಲೇಖಕರು ಅಲ್ಲಿದ್ದರು. ಹೊಸಬರ ಪರಿಚಯವಾಯಿತು. `ಹೋಮ್'  ಸಾಕ್ಷಚಿತ್ರಕ್ಕೆ ದನಿಯಾದ ಈಶ್ವರ್‌ ಪ್ರಸಾದ ಬಂದಿದ್ದರು! ಏನೇನೋ ಪುಂಗುತಲಿದ್ದರು! ಜೊತೆಗೆ ತಮ್ಮ ಅನುಭವ ಸಾರವನ್ನು ಅರಹುತ್ತಿದ್ದರು!



ಭೈರವನಿಗೆ ನಮಿಸೋಣವೆಂದು ಹೊರಡೋಣವೆಂದರೆ ಪುರುಸೊತ್ತೇ ಆಗದಷ್ಟು ಕಾವ್ಯ ಮಳೆ! ಭೈರವನಿಗೂ ನಮ್ಮ ಮೇಲೆ ಮುನಿಸಿರಬೇಕು! ಬಿಡುವೇ ಆಗದೇ ಹಿಂದಿರುಗಿದೆ. ದೇವರ ಮನೆಯ ಸ್ನೇಹಿತ ಯಾವಾಗ ಬರುತ್ತಿ ಎಂದು ನೆನಪಿಸುತ್ತಲೇ ಇದ್ದ ಹೋಗಲಾಗಲಿಲ್ಲ.

ನಾಣ್ಯ ಭೈರವ(Nanya Bairava)

ನಾಣ್ಯ ಭೈರವ ದೇವಾಲಯ.


ಎತ್ತಿನ ಭುಜದ (Ettina Bhuja trek)  ಪದತಲದಲ್ಲಿ  ವಿರಮಿಸಿದ ನಾಣ್ಯ ಭೈರವನನ್ನು 13ನೆಯ ಶತಮಾನದಲ್ಲಿ ನಿರ್ಮಿಸಲಾಗಿದೆ. ಕರ್ನಾಟಕದಾದ್ಯಂತ ಕಾಲ ಭೈರವನ ಹೊರತು ಪಡಿಸಿದರೆ ಭೈರವನ ದೇವಾಲಯ ಬಲು ಅಪರೂಪ. ಇಂತಹ ಭೈರವನ ದೇವಾಲಯಗಳಲ್ಲಿ ನಾಣ್ಯ ಭೈರವನೇ ವಿಶಿಷ್ಟವಾದ ಹೆಸರು. ಇವನಿಂದಲೇ ಈ ಊರಿಗೆ ಭೈರಾಪುರವೆಂಬ ಹೆಸರು. ಭೈರವ ಪುರದಿಂದ ಭೈರಾಪುರವಾಗಿರಬೇಕು. ನಾಣ್ಯ ಭೈರವೇಶ್ವರ ಹೊಯ್ಸಳರ ಕಾಲದಲ್ಲಿ ಅತ್ಯಂತ ಪ್ರಮುಖ ಪಟ್ಟಣವಾಗಿತ್ತು. ಇಲ್ಲಿಯೇ ಟಂಕಸಾಲೆಯಿತ್ತು ಎಂಬುದಕ್ಕೆ ನಾಣ್ಯ ಭೈರವ ದೇವಾಲಯವೇ ಸಾಕ್ಷಿ. ಕೋಟೆ ಕೊತ್ತಲಗಳಿದ್ದ ಭೈರಾಪುರಕ್ಕೀಗ ಸನ್ಯಾಸ. ಅಜ್ಞಾತವಾಗಿ ಎರಡು ಜಿಲ್ಲೆಗಳ ನಡುವಿನ ಗರುಡಗಂಬದಂತಿದೆ. ಇತಿಹಾಸದ ಹೆಜ್ಜೆ ಗುರುತುಗಳನ್ನು ಬಿಡದೇ ಅಳಿಸಿಕೊಂಡು ಸ್ಮಶಾನ ವೈರಾಗಿಯಂತೆ ನಿಂತ ದೇವಾಲಯ! ಇದಕ್ಕೂ ನಮಗೂ ಸಂಬಂಧವೇ ಇಲ್ಲದಂತೆ ಬದುಕ ಬಂಡಿ ಎಳವ ಮಂದಿ! 



ಹೆಜ್ಜೆ ೧



               ಆಸಾಡಿಯ ಒಡ್ರು ಮಳೆ ಮುಗಿದು ಸ್ವಾತಿಯ ಸೋನೆ ಶುರುವಾಗಿದ್ದೇ ಗೆಳೆಯ ಮತ್ತು ನಾಣ್ಯ ಭೈರವನ ನೆನಪಾಯಿತು! ನಾಣ್ಯ ಭೈರವನೊಂದಿಗೆ ತಳುಕಿ ಹಾಕಿ ಆತನ ರಕ್ಷಣೆಗೆ ನಿಂತಂತೆ ಕಾಣುವ ಎತ್ತಿನ ಭುಜವೆಂಬ ಅಭೂತಪೂರ್ವ ವಿಶಿಷ್ಟ ಚಾರಣ ಮಾಡುವ ನೆನಪಾಗಿ ಹೊರಟು ನಿಂತಿದ್ದೆ. ಮಳೆ  ನಿಂತು ದಿನಕ್ಕೊಂದೊ ಎರಡೋ ಸೋನೆ ಸುರಿಸಿ ಹೋಗುತ್ತಿದ್ದ ಸಮಯ. ನಾವು ಸಂಜೆಯ ಚಹ ಹೀರಿ ಹೊರಟು ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ ಇಳಿದೆವು.



ತೇಜಸ್ವಿ ಮನೆ ಇಲ್ಲಿಂದ ಮಾರು ದೂರ. ಅವರ ತೋಟ ಗದ್ದೆ ತಿರುಗಿದ ನೆನಪುಗಳು. ರಾಜೇಶ್ವರಿಯವರು ಮಾಡಿಕೊಟ್ಟ ಚಹ. ಅವರ ಮನೆಯಂಗಳದ ಹಕ್ಕಿ ಚಿಲಿಪಿಲಿ, ಸ್ಕೂಟರ್, ನಿಂತ ಗಡಿಯಾರದ ಮೆಲುಕು ಹಾಕುತ್ತಾ ಹೊರಟೆವು. ಅಲ್ಲಿಗೆ ಭೇಟಿ ಇತ್ತ ನೆನಪು ದಾರಿಯುದ್ದಕ್ಕೂ ಹಸಿರು.



        ಎರಡು ಜಿಲ್ಲೆಗಳ ಗಡಿಯ ಗರುಡ ಗಂಬದಂತಿರುವ ಎತ್ತಿನ ಭುಜವನ್ನು ಶಿಶಿಲಾ ಧರ್ಮಸ್ಥಳ ಕಡೆಯಿಂದಲೂ ಏರಬಹುದು. ಶಿಶಿಲ ಕಡೆಯ ಕಠಿಣ ದಾರಿ ತೊರೆದು ಸುಲಭದ ಮೂಡಿಗೆರೆಯ ಹಾದಿ ಹಿಡಿದೆವು. ಎತ್ತಿನ ಭುಜ ದಂತಿರುವ ವಿಶಿಷ್ಟ ಚಾರಣ ದಾರಿ. ಜೇನು ಕಲ್ಲು ಗುಡ್ಡದ ನೆತ್ತಿಯಿಂದ ಒಮ್ಮೆ ನೋಡಿದ್ದೆ. ತನ್ನ ಅಪೂರ್ವ ನೋಟವನ್ನು ತೋರಿ ಮಿಡುಕಿತ್ತು. ತನ್ನ ವಿಶಿಷ್ಟ ಮೋಹಕತೆಯಿಂದ ಸೆಳೆದಿತ್ತು.

ಎತ್ತಿ ಭುಜ - ಚಿತ್ರ ಕೃಪೆ ಅಂತಜಾ೯ಲ.


ತೇಜಸ್ವಿ ಊರಾದ ಇಲ್ಲಿ ರಾತ್ರಿಯೂಟಕ್ಕೆ  ಯಾವಗಲೂ ತತ್ವಾರ. ಯಾವುದೋ ಗಲ್ಲಿಯಲ್ಲಿ ಸಿಕ್ಕ ಅಕ್ಕಿ ರೊಟ್ಟಿಯ ಪುಟಾಣಿ ಹೋಟೆಲಿನಲ್ಲಿ ಉಳಿದ ನಾಲ್ಕೇ ನಾಲ್ಕು ರೊಟ್ಟಿ ಹಂಚಿಕೊಂಡು ಹೊಟ್ಟೆಗಿಳಿಸಿ ಬಂದು ದಿಂಬಿಗೊರಗಿದೆವು.

ಹೊಸತೊಂದು ಚಾರಣದ ಅನುಭವವಾಗುತ್ತದೆಂದು ಅಂದು ಅಂದಾಜಿರಲಿಲ್ಲ. ನಾವಂತೂ ಸಣ್ಣ ಸಣ್ಣ ಚಾರಣಗಳನ್ನು ಪೂರ್ಣಗೊಳಿಸದೇ ಬಂದುದೇ ಇಲ್ಲ. ಹರಕಿ ದುನ್‌, ಕಾಶ್ಮೀರದ ಸರೋವರ ಮುಂತಾದ ಚಾರಣಗಳನ್ನು ಆಯಾಸವಿಲ್ಲದೇ ಪೂರ್ಣಗೊಳಿಸಿದ ನಮ್ಮ ಗೆಲುವಿನ ಎನ್‌ಸೈಕ್ಲೋಪಿಡಿಯಾದ ಒಂದು ವಿಶಿಷ್ಟ ಅಧ್ಯಾಯ!

****

            ಸದಾ ಗೆಲ್ಲುತ್ತಿರುವವನಿಗೆ ಆಗಾಗ ಸೋಲುಗಳು ಸಿಗಬೇಕು. ಸದಾ ಗೆಲ್ಲುತ್ತಿದ್ದರೆ ಗೆಲುವಿನ ರುಚಿ ತಿಳಿಯದು. ನಮ್ಮ ಅಹಂಕಾರದ ಬಲೂನಿಗೆ ಅರಿವಿನ ಸೂಜಿಯನು ಆಗಾಗ ಚುಚ್ಚುತ್ತಿರಬೇಕು. ಇಲ್ಲವಾದರೆ ನಾವೇ ದೇವರಾಗಿ ಬಿಡುವ ಅಪಾಯವಿದೆ ಎನ್ನುತ್ತಾರೆ ಕವಿ ಗೋಪಾಲ ಕೃಷ್ಣ ಅಡಿಗರು. ಕಷ್ಟ ಕಾಲದಲ್ಲೇ ನಮ್ಮ ಸಂಪೂರ್ಣ ಸಾಮರ್ಥ್ಯ ಹೊರಬರುವುದು. ನಮ್ಮ ಮೇಲಿನ ಬೃಹತ್‌ ನಂಬಿಕೆಯ ಬೆಟ್ಟವನ್ನು ಬಲಪಡಿಸುವುದು ಇಂತಹ ಪುಟಾಣಿ ಚಾರಣಗಳು. ಅಲ್ವೇ?! ಅಂತಹದೊಂದು ಅನುಭವ ನಿಮ್ಮೊಂದಿಗೆ.

ಮುಂಜಾವಿನ ಮಂಜಿಗೆ ಮುತ್ತಿಡುತ್ತಾ…




ಕರೋನ ತುತ್ತ ತುದಿಯಲ್ಲಿದ್ದ ಕಾಲ ನಾವೊಂದು ಐದು ಜನ ಗೆಳೆಯರಿಗೆ ಹೇಗಾದರೂ ಮಾಡಿ ಎತ್ತಿನ ಭುಜವನ್ನು ಅಲುಗಾಡಿಸಿ ನೆತ್ತಿಯಲಿ ಭಾವುಟ ಹಾರಿಸಲು ಹೊರಟೆವು. ಗಡದ್ದಾಗಿ ತಯಾರಿಯೂ ನಡೆಸಿದ್ದೆವು. ಎರಡೆರಡು ರೈನ್‌ ಕೋಟ್‌ ಖರೀದಿಸಿದ್ದೆವು. ಬಲಾಡ್ಯ ಕೊಡೆಯೊಂದು ಜೊತೆಗಿತ್ತು.


ಹಸಿರ ದಾರಿಯಲಿ ನೆನಪುಗಳ ಮೆರವಣಿಗೆ

ಚುಮು ಚುಮು ಮುಂಜಾವಿನಲ್ಲಿ ಇಡ್ಲಿ ಮತ್ತು ಕಾಫಿಗೆ ಜಿಟಿ ಜಿಟಿ ಜೀರಿಗೆ ಮಳೆಯ ಅಲಂಕಾರ. ಈ ನಡುವೆ ನಮ್ಮ ರಥ ಎತ್ತಿನಭುಜದ ನೆತ್ತಿ ಸವರಲು ಹೊರಟಿತ್ತು. ಜೊತೆಗೆ ನಾಣ್ಯ ಬೈರವನ ಜೊತೆ ಸೇರುವ ಮಾತಾಗಿತ್ತು.





ನಿನ್ನೆಯ ಮಳೆಗೆ ತೊಳೆದಿಟ್ಟಂತಹ ರಸ್ತೆಯಲ್ಲಿ ನಡುದಾರಿಗೆ ಬರುತ್ತಲೇ ಹನಿ ಮಳೆಯ ಸಿಂಚನ ಶುರುವಿಟ್ಟುಕೊಂಡಿತು. ದಾರಿ ನಡುವೆ ಮಂಡಾಳೆ ಹೊತ್ತ ಒಂದಿಷ್ಟು ಹಳ್ಳಿಗರು ತುಟಿ ಕೆಂಪಾಗಿಸಿಕೊಂಡು, ಮಂದಸ್ಮಿತವಾಗಿ ಒಬ್ಬರಿಗೊಬ್ಬರು ಕಾಲೆಳೆದುಕೊಳ್ಳುತ್ತಾ  ಎಲ್ಲಿಗೋ ಮಳೆಯಲ್ಲಿ ನಡೆದು ಹೋಗುತ್ತಿದ್ದರು. ಅವರ ಗೊರಬು ನನ್ನನ್ನು ಬಾಲ್ಯಕ್ಕೆ ಮರಳಿಸಿತು.



       ಕಂಬಳಿಯಿಂದ ತಯಾರಿಸಿದ ಗೊರುಬುಗಳು ಈಗ ಮಾಯವಾಗಿ ಪ್ಲಾಸ್ಟಿಕ್‌ನದ್ದಾಗಿದೆ. ಮೊದಲದಕ್ಕೆ ಅಪ್ಪನ ಬೆವರಿನ ನಂಟಿತ್ತು. ತನ್ನ ಮೊದಲಿನ ಆಪ್ತತೆಯ ಚುಬುಕಿತ್ತು. ಅಪಾರ ನೆನಪಿನ ಚಿತ್ತಾರವಿತ್ತು. ಅವರ ಬಳಿ ಕಷ್ಟ ಸುಖ ವಿಚಾರಿಸಿ, ಕವಳ ಕೇಳಿ ಪಡೆದು ಜಗಿದು, ಎತ್ತಿನ ಭುಜದ ದಾರಿ ಕೇಳಿ ಅವರನ್ನು ಬೀಳ್ಕೊಟ್ಟೆವು!

-


             ಇಕ್ಕೆಲಗಳಲ್ಲಿ ಕರ್ಣ ಕುಂಡಲಗಳು ಈಗಷ್ಟೇ ಸೂರ್ಯ ರಶ್ಮಿಗಾಗಿ ಕಾದು ನಮ್ಮ ನೋಡಿ ನಗುತಲಿದ್ದವು. ಪುಟಾಣಿ ಮಕ್ಕಳು ತಮ್ಮ ಕಿವಿಗೆ ಜೋತು ಬಿದ್ದ ಅಶ್ವಥದೆಲೆಯ ಆಭರಣದಂತೆ ಗಿಡಗಳು ಪುಟಾಣಿ ಹೂ ತೊಟ್ಟು ನಿಂತಿದ್ದವು. ನಾವು ಪುಟಾಣಿಗಳಿದ್ದಾಗ ಸ್ಲೇಟು ಉಜ್ಜಲು ಇದರ ಇನ್ನೊಂದು ಜಾತಿಯನ್ನು ಬಳಸುತ್ತಿದ್ದದು ನೆನಪು. ದಾರಿಯುದ್ದಕ್ಕೂ ಬಾಲ್ಯದ ನೆನಪುಗಳ ಮೆರವಣಿಗೆ. ಬಹಳ ದಪ್ಪವಾಗಿದ್ದ ಆ ತಳಿ ಈಗಿಲ್ಲ! ಅಳಿದವಿರಬೇಕು. ಯಾರ ಕಾಕ ದೃಷ್ಟಿ ಬಿತ್ತೋ.

                  ಮೂಡಿಗೆರೆ ಬಿಟ್ಟ ಕ್ಷಣದಿಂದ ಸೋನೆಯಂತೆ ಸುರಿದು ಚಾರಣಕ್ಕೆ ಸಂಭ್ರಮದ ಹಚ್ಚೆ ಹಚ್ಚುತಲಿದ್ದ ಮಳೆ. ಮಾಲಕೌಂಸ್‌ ರಾಗ ಹಚ್ಚಿ ಹಾಡ ತೊಡಗಿತು. ಎತ್ತಿನ ಭುಜ ಬರುತ್ತಲೇ ಉಸಿರ ಕಟ್ಟಿದ ಮಕ್ಕಳಂತೆ ಮಳೆಯ ರಚ್ಚೆ. ಯಾರ ಮೇಲಿನ ಸಿಟ್ಟೋ ಏನೋ. ಬೆಟ್ಟದ ಭೈರವನ ಪೂಜಾರಿಯ ಜೊತೆಯಿರಬೇಕು. ದಿನವೂ ಕಲ್ಲಂತಹ ಕಲ್ಲಿಗೆ ನೈವೇಧ್ಯ ಕೊಡುವಾತ ಯಾಕೆ ತನಗಿಲ್ಲವೆಂಬ ಸಿಟ್ಟಿರಬೇಕು. ಅಥವಾ ಹೆಂಡತಿಯೊಂದಿಗೆ ಜಗಳ ಕಾದು ನಮಗೆ ಹೀಗೆ ಸತಾಯಿಸಿದನೋ ಹೇಗೆ? ಎಂಬ ಗುಮಾನಿ.

ಮಳೆಯ ಶಿವತಾಂಡವ



        ಬೈರವನ ಗುಡಿಗುಂಟ ಸಾಲು ಸಾಲು ಎಲ್ನೋಡಿ ಕಾರು. ಭೈರವ ಗುಡಿಯ ಅರ್ಚಕರನ್ನು ಮಾತಾಡಿಸಿ ಪ್ರಸಾದ ಪಡೆದು ಬೆಟ್ಟದ ಭೈರವನಿಗೆ ಸುತ್ತು ಬಂದು ಪ್ರಾರ್ಥಿಸಿ ನಮ್ಮ ಚಾರಣ ಸುಖಕರವಾಗಿರಲಿ ಎಂದು ಬೆಟ್ಟವೇರಲು ಸಜ್ಜಾದೆವು. ಭಟ್ಟರ ಮೊಬೈಲ್‌ ಸಂಖ್ಯೆ ನಮ್ಮ ಮೊಬೈಲೊಳಗೆ ಸೇರಿಕೊಂಡಿತು.



ಕಷ್ಟ ಪಟ್ಟು ಹಾಗೂ ಹೀಗೂ ಬಂದ ಭೈರವೇಶ್ವರ ಗುಡಿಯ ಪೂಜಾರಿ  ಮಳೆ ನಿಲ್ಲಲ್ಲಿ ಎಂಬಂತೆ ಮಹಾ ಮಂಗಳಾರತಿ ಎತ್ತಿದರು. ಮಂಗಳಾರ
ತಿ ಎತ್ತಿದ್ದೆ ಎಲ್ಲಿತ್ತೊ ಕುಂಬ ದ್ರೋಣ ಮಳೆ ಹೊಡೆತ. ಗುಡುಗು ಸಿಡಿಲಿನೊಂದಿಗೆ ಮತ್ತೆ ಮಳೆ ದೇವಾಲಯದ ಗಂಟೆಯೊಂದಿಗೆ ಜುಗುಲ್‌ ಬಂದಿಗೆ ಇಳಿಯಿತು. ಗಂಟೆಯ ಶಬ್ಧವೆಲ್ಲಾ ಮಳೆಯ ನೀರಲಿ ಕರಗಿ ಹಳ್ಳ ಕೊಳ್ಳಗಳಲ್ಲಿ ಹರಿಯತೊಡಗಿತು. ಮನಸ್ಸುಗಳೆಲ್ಲಾ ಥಂಡಿ ಥಂಡಿ!

ನಿರಾಸೆಯ ಮೂಡಿಸಿದ ನೀಲ ಕುರುಂಜಿ

              ಈ ವರ್ಷವೇ ನೀಲ ಕುರುಂಜಿ/ನೀಲ ಕಾವರಿ ಹೂವುಗಳು ಅರಳಬೇಕಾಗಿರುವುದರಿಂದ ಸುತ್ತಲೂ ಕಣ್ಣರಳಿಸಿದೆ. ಮಳೆ ಪ್ರಾಕೃತಿಕ ವಿಕೋಪ ಮುಂತಾದ ಕಾರಣಗಳಿಂದ ಅರಳದೇ ಸುಪ್ತಾವಸ್ತೆಯಲ್ಲಿ ಉಳಿದು ನಮ್ಮನ್ನು ಸತಾಯಿಸಿತು. 2009ರಲ್ಲೊಮ್ಮೆ ಅರಳಿದಾಗ ಬರಬೇಕೆಂಬ ಬಯಕೆ ಇದ್ದರೂ ಬರಲಾಗಲಿಲ್ಲ. ಅಲ್ಲಲ್ಲಿ ತಡಕಾಡಿದರೂ ಕಾಣದ ಕುರುಂಜಿ. ಗಾಳಿಗುಡ್ಡ ಚಾರಣಕ್ಕೆ ಹೋದಾಗ ಒಂದೆರಡು ಕಂಡಿದ್ದೇ ಕೊನೆ ಮತ್ತೆಲ್ಲೂ ಕಂಡಿದಿಲ್ಲ. ಮತ್ತೆ ಕಂಡಿದ್ದು ಬಾಬಾ ಬುಡನ್‌ ಗಿರಿಯಲ್ಲಿ. ಎಲ್ಲಾ ಸರಿ ಇದ್ದರೆ ಇನ್ನು ದರ್ಶನ ೨೦೩೫ಕ್ಕೆ.



                 ಹುಚ್ಚು ಮಳೆಯಲ್ಲಿ ಹೆಜ್ಜೆ ಇಟ್ಟಿದ್ದೆವು. ಮಳೆ ತನ್ನ ರೌದ್ರ ರೂಪವನ್ನು ತೋರ ಹತ್ತಿತ್ತು. ಜೀವ ಮಾನದ ಮಹಾ ಮಳೆಯೊಂದು ನಮ್ಮ ನೆನಪಿನ ಪುಟಗಳಲ್ಲಿ ದಾಖಲಾಯಿತು. ಹೊರಗಿನ ನೋಟವಾಗಲಿ ನಮ್ಮ ತಂಡದವರೇ ನಮಗೆ ಕಾಣಿಸುತ್ತಿರಲಿಲ್ಲ. ಹಾಗಾಗಿ ನಿಧಾನವಾಗಿ ಒಬ್ಬರ ಹಿಂದೆ ಒಬ್ಬರು ರೈಲು ಬೋಗಿಗಳಂತೆ ಸಾಗುತ್ತಿದ್ದೆವು. ನೆತ್ತಿಯಿಂದ ಕನಿಷ್ಠ ದೂರದಲ್ಲಿದ್ದೆವು. ಅಸಾಧ್ಯ ಮಳೆ. ಕೊಡೆ, ರೈನು ಕೋಟುಗಳೊಳಗೆಲ್ಲಾ ನೀರ ಕಾರು ಬಾರು. ಎರಡೂ ಕಡೆ ಮಹಾ ಕಣಿವೆ. ನೇರ ಗೆರೆ ಎಳೆದಂತಹ ದಾರಿ ಇದ್ದರೂ ಮಳೆ ಹೊಡೆತಕ್ಕೆ ಸಿಕ್ಕಿ ೨ ಅಡಿಯ ಮುಂದೇನಿದೆ ಎಂದು ಗೋಚರವಾಗುತ್ತಿರಲಿಲ್ಲ. ನೆತ್ತಿಗೆ ನೂರು ಹೆಜ್ಜೆಯಷ್ಟೇ ಬಾಕಿ. ಎಡ ಬಲದ ನಡುವೆ ಸಣ್ಣ ಗೆರೆಯಂತಹ ದಾರಿಗೆ ಹುಲ್ಲು ಹಾಸು ಹಾಸಿತ್ತು. ಸುಮಾರು ೭೫ ಡಿಗ್ರಿ ಕೋನದಲ್ಲಿ ಲಂಬಿಸಿದ ದಾರಿ ನಮಗೀಗ ಸಾಕ್ಷಾತ್‌ ವೈಕುಂಠದ ಹೆದ್ದಾರಿಯಂತೆ ಭಾಸ.

                      ಕೊಡೆಯೊಂದಿಗೆ ಪ್ಯಾರಾ ಚೂಟ್ ಆಗಿ ಕೆಳಗಿನ ಶಿಶಿಲಕ್ಕೊ ಧರ್ಮಸ್ಥಳದಲ್ಲೋ ಶಿವೈಕ್ಯವಾಗುವುದರಲ್ಲಿ ಜಸ್ಟ್‌ ಮಿಸ್!‌ ಇನ್ನೇನು ಕೈಗೆಟಕುವ ದೂರದಲ್ಲಿದೆ ನೆತ್ತಿ ಆದರೂ ಕಾಣಿಸುತ್ತಿರಲಿಲ್ಲ. ಸುಮಾರು 75 ಡಿಗ್ರಿ ಕೋನದಲ್ಲಿ ವಾಲಿಕೊಂಡ ಮಣ್ಣು ದಾರಿ. ತೋರುತ್ತದ್ದೋ ಇಲ್ಲವೋ ಎಂಬಸ್ಟೇ  ತೆರೆದುಕೊಂಡ ದಾರಿ. ನೆತ್ತಿ ಕಾಣದ ಅನಾಥ ಅನಂತದಲ್ಲಿ ಲೀನವಾದ ದಾರಿ. ಬೇರೆಲೋಕಕ್ಕೆ ಮಾಯವಾದಂತೆ ಭಾಸ. ಹಿಡಿದ ಕೊಡೆ ಗಾಳಿಗೆ ತೂರತೊಡಗಿತು. ಮಸಲ ಧಾರೆ. ಗುಡ್ಡ ಕುಸಿಯುವಷ್ಟು ಮಳೆ. ಜೀವ ಇದ್ದರೆ ಬೆಲ್ಲ ಬೇಡಿ ಬದುಕಿಯೇನು. ಈ ಗಾಳಿಯ ಸಹಿಸಲು ಸಾಧ್ಯವಿಲ್ಲ ಎಂಬಷ್ಟು ಗಾಳಿ. ಗಾಳಿಯ ಶಿವ ತಾಂಡವ! ಇಳಿಯತೊಡಗಿದೆವು. ಮಳೆಯೂ ನಮ್ಮೊಂದಿಗೆ ಇಳಿಯದೇ ಏರತೊಡಗಿತು. ಪ್ರಳಯ ರುದ್ರದಂತಹ ಮಳೆ.

ಈ ಜನ್ಮದಲ್ಲಂತು ಇಂತಹ ಬೀಕರ ಮಳೆ ಕಂಡಿದ್ದು ಇಲ್ಲಾ!! ಕೆಳಗಿಳಿಯುತ್ತಾ ಜೀವಾದಿಗಳು ತಲ್ಲಣಿಸುತ್ತಿದ್ದವು. ತರಗಲೆಗಳ ತೂರಾಟ, ಹನಿಗಳ ಆರ್ಭಟ. ಕೆಳಗಿಳುತ್ತಲೇ ಮಳೆ ಕಡಿಮೆ ಆಗುವುದನ್ನೇ ತಲೆಗೊಂದು ಸೂರು ಹುಡುಕಿ ಹೊರಟೆವು. ಅಷ್ಟು ಮಳೆಯಲ್ಲೂ ಒಂದೆರಡು ಚಿತ್ರ ತೆಗೆದುದರಿಂದ ಎಲ್ಲರಿಗಿಂತ ಹಿಂದುಳಿದಿದ್ದ ನಾನು ಸ್ನೇಹಿತರಿಗಾಗಿ ಹುಡುಕಿದೆ. ಯಾರೂ ಕಾಣಲಿಲ್ಲ. ಭಟ್ಟರ ಹಿಂದೇ ಹೋದರೋ ಹೇಗೆ? ಭೈರವನಿಗೆ ಪೂಜೆ ಮುಗಿಸಿ ಭಟ್ಟರು ಆಗಲೇ ಹೋಗಿಯಾಗಿತ್ತು. ಭೈರವನ ಗುಡಿಯಲ್ಲಿ ಅಡಗುವ ಆಸೆ ಬಿಟ್ಟೇವು. ಸನಿಹದಲ್ಲೇ ಚಿಕ್ಕ ಗುಡಿಸಿಲಿನಂತಹ ಮಾಡಿತ್ತು. ಕಳ್ಳರಂತೆ ಅಲ್ಲಿ ಅಡಗಿಕೊಳ್ಳಲು ಹೊರಟೆ. ಗೆಳೆಯರೆಲ್ಲ ಅಲ್ಲೇ ಅಡಗಿ ಕುಳಿತ್ತಿದ್ದರು! ಒಬ್ಬರಿಗೊಬ್ಬರು ಒತ್ತಿ ನಿಂತು ಚಳಿ, ಮಳೆಯನ್ನು ಅನುಭವಿಸುತ್ತಾ ನಿಂತೆವು.

ರಕ್ತ ಪರೀಕ್ಷಕರು

                  ಜಿರಾಪತಿ ಮಳೆಯ ನಡುವೆ ಕಾಲಿಗೇನು ಏರಬಾರದೆಂದು ಪ್ಲಾಸ್ಟಿಕ್‌ ಕವರ್‌ ಹಾಕಿಕೊಂಡು ಬಂದವರಿಗೆ ತಕ್ಕ ಪಾಠ ಕಲಿಸಿದ ರಕ್ತ ಪರೀಕ್ಷಕ ಜಿಗಣೆಗಳು ಎಲ್ಲೆಲ್ಲಿಗೂ ನುಸುಳಿ ತನ್ನ ಪಾರುಪತ್ಯ ತೋರಿತ್ತು! ಕೆಲವರು ತಮ್ಮ ಮರ್ಮಾಂಗವನ್ನೆಲ್ಲಾ ಪರೀಕ್ಷೆ ಮಾಡಿಕೊಳ್ಳುತಲಿದ್ದರು! ಲೀಟರ್‌ ಗಟ್ಟಲೇ ರಕ್ತದಾನ ಮಾಡಿದ ನಂತರ ನಾವು ನಶ್ಯಾದ ಭರ್ಜರಿ ಸನ್ಮಾನ ಮಾಡಿದೆವು. ಕೊಂಚ ಖುಷಿ ಪಟ್ಟು, ಪಟ್ಟು ಸಡಿಲಿಸಿ ಉದುರಿದವು. ನಶ್ಯಾದ ಅಪರಿಮಿತ ಶಕ್ತಿಗೆ ಮನಸೋತೆ. ಯಕಶ್ಚಿತ್ ಜೀವಿಯೊಂದು ಜೀವ ವಿಸ್ಮಯವಾಗಿ ಕಂಡಿತು. ಅಬ್ಬಾ! ಇದರ ಪ್ರತಾಪವೇ ಎನಿಸಿತು. ತನ್ನ ಮೂತಿಯಿಂದಲೇ ನಡೆಯುತ್ತಾ ಬಿಸಿ ರಕ್ತ ಜೀವಿಗಳ ರಕ್ತ ಹೀರುವ ರಕ್ತ ಪೀಪಾಸುಗಳು. ಮರ, ಗಿಡ-ಗಂಟಿ ಮತ್ತು ಮನುಷ್ಯನಿಗೂ ವ್ಯತ್ಯಾಸವನ್ನು ಕ್ಷಣದಲ್ಲೇ ಗುರುತಿಸಬಲ್ಲದು! ತನ್ನ ಅಂಗಾಂಗಗಳ ಮೂಲಕ ಬಿಸಿ ರಕ್ತ ಪ್ರಾಣಿಗಳ ಬಿಸಿ, ಮೈಯ ಎಣ್ಣೆ, ನೆರಳು ಮತ್ತು ರಾಸಾಯನಿಕಗಳ ಇರುವಿಕೆಯನ್ನು ಪರಿಶೀಲಿಸಿ ಕಚ್ಚುತ್ತವೆ! ಜೊತೆಗೆ ಕಚ್ಚಿದ ಜಾಗದಲ್ಲಿ ಉಂಟಾಗುವ ನೆವೆ ತಿಂಗಳುಗಳ ಕಾಲ ಇರುತ್ತದೆ.  ನಮ್ಮೆಲ್ಲಾ ಗೆಳೆಯರು ತಮ್ಮ ತಮ್ಮ ಅಂಗಾಗಳ ಸಂಶೋಧನೆಗಿಳಿದರು! ಪುಣ್ಯಕ್ಕೆ ನನಗೊಂದು ಕಚ್ಚಲೇ ಇಲ್ಲ!!



            ಈ ವಿಶಿಷ್ಟ ಶಿಖರದ ನೆತ್ತಿಗೇರುವ ಬಯಕೆಯೊಂದು ಮಳೆಯೊಂದಿಗೆ ಬೆರೆತು, ನನ್ನ ನೂರಾರು ಸೋಲುಗಳ ಎನ್ ಸೈಕ್ಲೋಪಿಡಿಯಾದೊಳಗೆ ಸೇರಿ ಕರಗಿ ಹೋಯಿತು. ಮತ್ತೊಮ್ಮೆ ನೆತ್ತಿಯಲಿ ವಿಜಯದ ನಗೆಯ ನೆಡಬೇಕು. ಎತ್ತಿನ ಭುಜದ ಕನಸಿಗೆ ಬಸಿರಾಗುವ ಬಯಕೆಯೊಂದನ್ನು ಮನಸ್ಸು ಸದಾ ಹೆರುತ್ತಲೇ ಇರುತ್ತದೆ. ಕಾಲು ನೆಟ್ಟಗಿದ್ದರೆ ಒಮ್ಮೆ ಹತ್ತಿ ಬರಬೇಕು.


ವಾರೆ ನೋಟ

ಬಲ ಉಳ್ಳವರ ಅಹೋ ಬಿಲಂ!

  ನಾವು ಮೂವರು ಅಹೋಬಿಲಂಗೆ ಬಂದು ತಲುಪಿದ್ದೆ ಒಂದು ಅಚ್ಚರಿ. ಚೌಕಟ್ಟೇ ಇಲ್ಲದ ಒಂದು ಯೋಜನೆಯೊಳಗೆ ಅದು ಹೇಗೋ ಈ ದೇವಾಲಯ ತೂರಿಕೊಂಡಿತು. ಎಲ್ಲೋ ಓದಿದ ಪೇಪರ್‌ ತುಣುಕೊಂದರ ...