Saturday, June 27, 2026

ಹಂಪಿಯ ಹೊಳೆ ದಂಡೆ

 


ಹಂಪಿ ಎಂಬ ವಿಸ್ಮಯವನ್ನು ಪದಗಳಲ್ಲಿ ಹಿಡಿದಡಲು ಅಸಾಧ್ಯ. ಇಲ್ಲಿನ ಪ್ರತಿ ಕಲ್ಲೂ ಕಥೆ ಹೇಳುತ್ತವೆ. ಕತೆಗಳಿಗೆ ಕಿವಿಯಾಗಬೇಕಷ್ಟೆ. 

ನಿಗೂಢ ಹಂಪಿ


ಹಂಪಿ ನೋಡುವವರು ಕಮಲ್‌ ಮಹಲ್‌, ಗಜ ಶಾಲೆ, ವಿರುಪಾಕ್ಷ ದೇವಾಲಯ, ಹಜಾರ ರಾಮ, ವಿಜಯ ವಿಠಲ ನೋಡಿಕೊಂಡು ಹಿಂದಿರುಗುವರು. ಹೆಚ್ಚೆಂದರೆ ಅಚ್ಯುತರಾಯ ದೇವಾಲಯ ನೋಡಿ ಹಂಪಿಗೆ ಬೈ ಬೈ ಹೇಳುವರು. ನೋಡುವುದು ಬಿಡಿ ಅದರಾಚಿಗಿನ ಸ್ಥಳಗಳನ್ನು ಮುಟ್ಟಿ ಮೂಸುವುದು ಇಲ್ಲ. ನಿಜವಾಗಿ ನೋಡುವುದೇ ಬೇರೆ. ನೋಡುವುದು ಎಂದರೆ ಹಂಪಿಯ ಅಂತರ್ ಸತ್ವ ಅರಿಯುವುದು. ನೂರಾರು ವರ್ಷಗಳ ಕಾಲ ಇಲ್ಲಿನ ವಾಸ್ತು ಶಿಲ್ಪ ಕಾಪಾಡಿದವರು ಇಲ್ಲಿನ ರೈತರು!

ಹಂಪಿ ಎಂದರೆ ಇಷ್ಟೇ ಅಲ್ಲಾ. ಹಂಪಿಯ ಬಳುಕು ವೈಯಾರ ನೋಡಬೇಕೆಂದರೆ ಹೊರಗೆ ಕಾಲಿಡಬೇಕು. ಹಂಪಿಯ ಪಿಸುಮಾತನ್ನು ಆಲಿಸಬೇಕು. ಹಂಪಿಯ ಮುಖ್ಯ ಆಕರ್ಷಣೆಯ ಆಚೆಗೂ ಅನನ್ಯತೆ ಇದೆ. ಹಂಪಿಯ ನಿಜದ ಅಸ್ಮಿತೆ ಇರುವುದು ಬದುಕು ಇರುವುದು ಮುಖ್ಯ ಮಂದಿರಗಳ ಹೊರಗೆ! ಇವುಗಳಿಗೆ ಹಣಕಿ ಹಾಕಿದರೆ ಹೊಸ ನೋಟ ತೆರೆಯುತ್ತದೆ.

ಹಂಪಿಯ ಪ್ರವಾಸವನ್ನ ವಿಭಿನ್ನವಾಗಿಸಿಕೊಳ್ಳಬೇಕೆಂಬ ಬಯಕೆ ಇದ್ದರೆ ಇಲ್ಲಿನ ಮುಖ್ಯ ಆಕರ್ಷಣೆಯ ಹೊರಗೆ ಇಣುಕಬೇಕು. ಆಗಲೇ ಹಂಪಿಯ ಮೌನ, ಕಂಪನದ ಆಸ್ವಾದನೆ ಮತ್ತು ಅಚ್ಚರಿಗಳು ಅರ್ಥವಾಗುವುದು. ಹಂಪಿಯ ಜನಸಾಮಾನ್ಯರ ಬದುಕು ಅರ್ಥವಾಗುವುದು. ಹೀಗಾಗಿ ಹೊಸ ಬಗೆಯ ಸ್ಥಳಗಳ ಆಯ್ಕೆ ಮಾಡಿ ನಿರ್ಧರಿಸಿ ಹೊರಟೆವು. ಸ್ಥಳೀಯ ಗೈಡ್‌ ಈರಣ್ಣ ಎಂಬುವವರನ್ನು ಜೊತೆ ಮಾಡಿಕೊಂಡೆವು. ನಮ್ಮ ಪ್ರಯಾಣದ ಪಟ್ಟಿಯಲ್ಲಿ ಏನೇನೆಲ್ಲಾ ಇತ್ತೊ ಅವೆಲ್ಲಾ ಸಾಧ್ಯವಾಗದೇ ಇದ್ರೂ ಹನುಮ ಪಾದದ ನೆತ್ತಿ ಮುಟ್ಟಿ, ತೆಪ್ಪದೊಂದಿಗೆ ಪಯಣಿಸಿ, ಸ್ಥಳೀಯ ಆಹಾರ ಸೇವನೆ, ಮದನಕೊತ್ತಲ ಮಂಟಪದಲಿ ಸೂರ್ಯಾಸ್ತದ ಸೊಬಗು ಕಣ್ತುಂಬಿ ಕೊಂಡೆವು. ಗಜ ಸ್ನಾನವೊಂದು ತಪ್ಪಿ ಹೋಯಿತು.


 ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಜಾಗ ವಿರೂಪಾಕ್ಷ ಮಂದಿರ! ಅದರ ಸನಿಹವೇ ಒಂದು ಹಳೆಯ ದೋಣಿ ಹೆಂಚಿನ ಮಠವಿದೆ. ಪಿನ್‌ ಹೋಲ್‌ ಕ್ಯಾಮರದಲ್ಲಿ ತಲೆಕೆಳಗಾದ ಛಾಯೆ ತೋರುತ್ತದಷ್ಟೇ ಆದರಿಲ್ಲಿ ನಿಜದ ಬಿಂಬ! ಪಿನ್‌ ಹೋಲ್‌ ಕ್ಯಾಮರದಲ್ಲಿ ಮಠದಿಂದ ಕಂಡ ಸ್ವಾಗತ ಗೋಪುರದ ಬಣ್ಣದ ಪ್ರತಿಬಿಂಬ ಇಂದಿಗೂ ಒಂದು ಸೋಜಿಗ! ಅಲ್ಲಿ ಹೋಗಿ ಬರುವವರ ಪ್ರತಿಬಿಂಬವೂ ಬಣ್ಣದಲ್ಲಿ. ಸಾಮಾನ್ಯವಾಗಿ ಯಾವ ಗೈಡೂ ಈ ಸ್ಥಳಗಳನ್ನೂ ಕಾಣಿಸುವುದಿಲ್ಲ. ಆತ ಕಾಣಿಸದೇ ಉಳಿದಿದ್ದು ನೀವು ಕಂಡರೆ ನಿಮ್ಮೊಳಗೊಂದು ಒಳನೋಟವಿದೆ ಎಂದೇ ಅರ್ಥ. ಬದುಕಿಗೊಂದು ಹೊಸ ಒಳನೋಟ ಪ್ರಾಪ್ತವಾದರೆ ಪ್ರವಾಸ ಸಾರ್ಥಕ. 

ಹಂಪಿಯ ಹನುಮ ಪಾದದ ನೆತ್ತಿಯಿಂದ

ವಿಜಯ ವಿಠಲದ ಹಾದಿಯಲ್ಲೇ ಸಣ್ಣ ಗುಡ್ಡದ ತುದಿಯಲ್ಲಿ ಹನುಮ ಪಾದವಿದೆ. ವಿಜಯ ವಿಠಲ ಎರಡು ಕಿಲೋ ಮೀಟರ್‌ ಎಂಬ ಮೈಲಿಗಲ್ಲು ದಾಟಿ ಸ್ವಲ್ಪ ದೂರಕ್ಕೆ ಹೋಗಿ ಎಡಕ್ಕೆ ಹೊರಳಿ ಕಿಲೋ ಮೀಟರ್‌ ಹಲುಸಾಗಿ ಬೆಳೆದ ಬಾಳೆ ತೋಟದಂಚಲ್ಲಿ ಸಾಗಿ ಕಟ್ಟಿಗೆ ಅಹಮದ್‌ ಖಾನ್‌ ನ ಅರವಟ್ಟಿಗೆ ಬಳಿ ಮೇಲೇರುತ್ತಾ ಸಾಗಬೇಕು. ನಡು ನಡುವೆ ಜೋಳ ಬೆಳೆದ ಕುರುಹುಗಳು, ಅನೇಕ ಗೋರಿಗಳು ಪಾಳು ಬಿದ್ದ ಮನೆಗಳ ಅವಶೇಷಗಳು ನಿಮಗೆ ಕಾಣಸಿಗುತ್ತದೆ. ಅನೇಕ ನೀರು ಸಂಗ್ರಹಕಗಳು. ಅಲ್ಲಲ್ಲಿ ಬೆಳೆದ ಕಳ್ಳಿ ಗಿಡಗಳು ನಿಮ್ಮನ್ನು ಸ್ವಾಗತಿಸುತ್ತವೆ. ಹೆಚ್ಚು ಕಡಿಮೆಯಾದರೆ ನೀವೇ ಗತಿಸುವಿರಿ ಅಂತಹ ಜಾಗ! ಮೇಲೇರಿದಂತೆ ಚಲಿಸುವ ಜಾಗವೂ ಕಡಿದಾಗುತ್ತಾ ಸಾಗುತ್ತದೆ. ದಿಗಂತಕ್ಕೆ ಕೈ ಚಾಚಿದಂತೆ ಇರುವ ಇದರ ನೆತ್ತಿ ಸವರಲು ಬಂಡೆಗಳ ನಡುವೆ ತೆವಳುತ್ತಾ ಸಾಗಬೇಕು. ಹೃದಯ ಬಡಿತ ಹೆಚ್ಚಿಸುವ ಜಾಗಗಳಲ್ಲಿ ಹೆಜ್ಜೆ ಹಾಕಬೇಕು. ವರ್ಟಿಗೋ ಇಲ್ಲದವರಷ್ಟೇ ಸುಲಭವಾಗಿ ಮೇಲೇರಬಲ್ಲರು. ಮೇಲೆರಿದಾಗ ಬೃಹತ್‌ ಪಾದವೊಂದು ನಿರ್ಮಿಸಲಾಗಿದೆ. ಜೊತೆಗೊಂದು ಚಿಕ್ಕ ಮಂಟಪ ಇದರ ನೆತ್ತಿಯ ಮೇಲೆ. ಇಲ್ಲಿಂದ ಕೆಳಗಿಳಿದು ಮದನ ಕೊತ್ತಲ ಮಂಟಪದತ್ತ ಹೆಜ್ಜೆ ಹಾಕಿದೆವು.

ಮದನಕೊತ್ತಲ ಮಂಟಪವೂ ನಮ್ಮ ಪಟ್ಟಿಯಲ್ಲಿತ್ತು! ಹಂಪಿಗೆ ಬಂದವರು ಮದನಕೊತ್ತಲ ಮಂಟಪದ ಇಳಿ ಸಂಜೆಗೆ ಹೋಗದೇ ಇದ್ದರೆ ಹೇಗೆ? ಅದನ್ನು ಪದಗಳಲ್ಲಿ ಹಿಡಿದಿಡಲು ಸಾಧ್ಯವೇ? ಹೊಸಪೇಟೆಯಿಂದ ಹಂಪಿಗೆ ಬರುವವರು ಹಂಪಿಗೆ ತಿರುಗುವಲ್ಲಿ ಸಿಕ್ಕ ಬೋರ್ಡ್‌ ಒಂದಕ್ಕೆ ಸಿಕ್ಕಿಸಿದ ಬೃಹತ್‌ ಚಿತ್ರ ನೋಡದೇ ಮುಂಬರಿಯಲಾರರು. ಅದುವೇ ಮದನಕೊತ್ತಲ ಮಂಟಪದ ಸೂರ್ಯಾಸ್ತ! ಅಪಾರ ಸೌಂದರ್ಯದ ಸೂರ್ಯಾಸ್ತವನ್ನು ಕಣ್ಣು ತುಂಬಿಕೊಳ್ಳಲು ನೀವು ಹರ ಸಾಹಸ ಪಡಬೇಕು. ಇಲ್ಲಿಗೆ ಪಯಣಿಸುವ ಅನುಭವವು ಅನನ್ಯ. ಈ ಮಟಂಪಕ್ಕೆ ತೆನಾಲಿ ಮಂಟಪವೆಂಬ ಇನ್ನೊಂದು ಹೆಸರು. ಈ ಹೆಸರು ಹೇಗೆ ಬಂತೆಂಬುದು ಮಾತ್ರ ತಿಳಿದಿಲ್ಲ. ಬನ್ನಿ ಮದನ ಕೊತ್ತಲವನ್ನೇರೋಣ.

ಮದನ ಕೊತ್ತಲದ ದಾರಿಯಲ್ಲಿ

ಗಜ ಶಾಲೆಯ ಬಲ ತುದಿಯ ರಂಗನಾಥ ದೇವಾಲಯದ ಸನಿಹ ದಾರಿಯಲ್ಲಿ ಅನತಿ ದೂರದವರೆಗೆ ನಿರ್ಜನ ದಾರಿಯಲ್ಲಿ ಸಾಗಬೇಕು. ಅದೊಂದು ಬೆದರಿಸುವ ನಿರ್ಜನ ದಾರಿ. ಎದುರಿಗೆ ಏರು ಗುಡ್ಡ. ದೂರದಲ್ಲಿ ಮಹಾನವಮಿ ದಿಬ್ಬ. ಒಂದಾನೊಂದು ಕಾಲದಲ್ಲಿ ದೊಡ್ಡ ದೇವಾಲಯ. ವಿದೇಶಿ ಮತ್ತು ಸ್ವದೇಶಿ ಆಕ್ರಮಣದ ತರುವಾಯ ಕೇವಲ ದಿಬ್ಬ ಮಾತ್ರ ಉಳಿದಿದೆ ಎನ್ನಲಾಗುತ್ತಿದೆ!

ನೂರಾರು ಅವಶೇಷಗಳಡಿಯಲ್ಲಿ ನೆಟ್ಟನೋಟ. ಉದುದ್ದ ಮಲಗಿದ್ದ ವಹಿವಾಟಿನ ಖಾಲಿ ಅಂಗಡಿ ಸಾಲುಗಳು. ಕೃಷ್ಣ ಮತ್ತು ಅಚ್ಚುತರಾಯ ದೇವಾಲಯದ ಬೀದಿಗಳು ಅಚ್ಚರಿ ಮೂಡಿಸುತ್ತದೆ. ಇಷ್ಟೊಂದು ಅಗಲದ ಬೀದಿಯ ನೋಡಿದರೆ ಅವರ ಮುಂದಾಲೋಚನೆಗೆ ದೊಡ್ಡ ಸಲಾಮು. ಊರು ಎಲ್ಲಿಯವರೆಗೆ ಬೆಳೆಯುತ್ತದೆ ಎಂಬ ಅಂದಾಜು ಅವರ ತೀಕ್ಷ್ಣಮತಿಯ ಧ್ಯೋತಕ! 

ಗಜಶಾಲೆಯಿಂದ ಮುಂದಡಿ ಇಟ್ಟರೆ ಅಡಿಗಡಿಗೆ ಸಿಗುವ ಒಡೆದ ಮಡಿಕೆ ಚೂರುಗಳು. ಒಂಟಿಯಾಗಿ ಕಲ್ಲು ಮುಳ್ಳು ಕಂಟಿಗಳ ನಡುವೆ ಹುದುಗಿದ ಜೀವನೋತ್ಸಾಹದ ಹೆದ್ದಾರಿಗಳಾದ ದಾರಿಗಳನ್ನು ಕಂಡಾಗ ಕರಳು ಚುರುಕ್‌ ಎನ್ನುತ್ತದೆ. ವಿಷಾದದ ಒಣ ಬಿಸಿಲು ರಾಚುತ್ತದೆ. ಕಾಲದ ಕೈವಾಡಕ್ಕೆ ನಲುಗಿದ ಫಲವತ್ತತೆಯ ಭೂಮಿ. ಕಳಕೊಂಡ ಖಾಲಿತನ, ಹಳವಂಡಗಳ ಹದ್ದು ಮನದ ಮುಗಿಲಿನಲಿ! 

ತಾಳಿಕೋಟೆ ಕದನದ ನಂತರ ಹಂಪಿಯ ಕನಸು ಕರಗುತ್ತಾ ನಿಧ ನಿಧಾನಕ್ಕೆ ಈ ಜಾಗಗಳನ್ನೆಲ್ಲಾ ತೊರೆದು ಜನ ಹೊಸ ಕನಸ ಬೆನ್ನಟ್ಟಿ ಹೊರಟರಿರಬೇಕು. ಇವೆಲ್ಲವ ಕಂಡಾಗ ವಸುದೇಂದ್ರರ ತೇಜೋ-ತುಂಗಭದ್ರ ಕಾದಂಬರಿಯ ಮಹತ್ವಾಕಾಂಕ್ಷಿ ಅಹಮದ್‌ ಖಾನ್‌ ನೆನಪಿಗೆ ಬರುತ್ತಾನೆ. ಏನೋ ಆಗಲು ಹೋಗಿ ಏನೂ ಆಗದೆ ತುಂಗಾ ತೀರದಲ್ಲಿ ಒಂಟಿಯಾಗಿ ಉಳಿಯುತ್ತಾನೆ. ಜೊತೆಗೆ ಕಿವಿಯನ್ನೂ ಮತಾಂಧರಿಂದ ಕಳೆದುಕೊಳ್ಳುತ್ತಾನೆ. ಆತ ದುಡ್ಡಿನಾಸೆಗೆ ತನ್ನೂರ ತೊರೆದಂತೆ ಇಲ್ಲಿನ ಜನ ಬಿಡಾರ ಕೊಡವಿ ಹೊರಟಿರಬೇಕು. ತನ್ನ ತನವ ತೊರೆದ ನದಿಯಂತೆ.

 ಒಂದು ಕಾಲದಲ್ಲಿ ಅಪಾರ ಜನಸ್ತೋಮವನು ಕಟ್ಟಿಕೊಂಡ ಊರಿಗ ಪುಟಾಣಿ ಹಳ್ಳಿ. ಗುಡ್ಡದ ತುದಿಗಳಲ್ಲೂ ಮಡಿಕೆ ಕಂಡವನಿಗೆ ಎಂದೋ ಬಿಸುಟು ಹೋದವರ ತಾಪದ ಬಿಸಿ ತಟ್ಟುತ್ತದೆ. ಇಲ್ಲಿಯವರೆಗೆ ಆ ರಾಜ ಮಾಡಿಕೊಡುತ್ತಿದ್ದ ವ್ಯವಸ್ಥೆ ಅಚ್ಚರಿ ಹುಟ್ಟಿಸುತ್ತದೆ. ಗಜ ಶಾಲೆಯಿಂದ ಏನಿಲ್ಲವೆಂದರೂ ಎರಡು ಕಿಲೋ ಮೀಟರ್‌ಗೂ ಹೆಚ್ಚು ದೂರ ಕ್ರಮಿಸಬೇಕು. ಗಜ ಶಾಲೆಯಿಂದ ಇಲ್ಲಿಯವರೆಗಿನ ದೂರವೇ ನಿಮ್ಮನ್ನು ದಂಗು ಬಡಿಸುತ್ತದೆ! ಈಗ ಮುಳ್ಳು ಕಂಟಿಗಳ ಒಳ ದಾರಿ. ಬೆಟ್ಟದಿಂದ ಇಳಿಬಿಟ್ಟಂತಹ ಇಳಿಜಾರು ಬಂಡೆಯನು ಭಾರಿ ಕಷ್ಟದಲಿ ಏರಬೇಕು. ಯಾರೋ ಪುಣ್ಯಾತ್ಮ ಇಲ್ಲಿ ಪುಟಾಣಿ ಮೆಟ್ಟಿಲು ನಿರ್ಮಿಸಿದ್ದಾನೆ! ಎಲ್ಲೆಲ್ಲೂ ದೈವ ಮತ್ತು ದೇವರುಗಳು. ನಡುವೆಲ್ಲೋ ದೊಡ್ಡ ಹನುಮಂತ ಮೂರ್ತಿ ಕೆತ್ತಿಟ್ಟಿದ್ದರು. ಒಂದಾನೊಂದು ಕಾಲದಲ್ಲಿ ದೇವಾಲಯ ಮತ್ತು ಮನೆಗಳ ಸಮುಚ್ಚಯವಿದ್ದಿರಬೇಕು. ಈಗ ಬಟಾ ಬಯಲು. ಅಲ್ಲಲ್ಲಿ ಮಂಟಪಗಳು ನಿದ್ರಿಸುವ ವಿರಾಮ ಪಡೆಯುವ ಸಣ್ಣ ಜಾಗಗಳನ್ನು ನೀವು ನೋಡಬಹುದು. ತೆನಾಲಿ ಮಂಟಪದ ಉತ್ತರ ದಿಕ್ಕಿಗೆ ಮಾತಂಗ ಪರ್ವತ ಪವಡಿಸಿತ್ತು. ಹಾವಿನ ಹೆಡೆಯಂತಹ ಬಂಡೆಯೊಂದು ಕಂಡಿತು. ಪ್ರಕೃತಿಯ ಅಚ್ಚರಿಯ ಮುಂದೆ ಉಳಿದಚ್ಚರಿಗಳು ಗೌಣ.

ಹೀಗೆ ಬಂಡೆಗಳ ತಡವಿ ಮೇಲೇರಿ ಅಲ್ಲೆಲ್ಲಾ ನುಸುಳು ಕೋರರಾಗಿ ಅಸಾಧ್ಯ ಬಂಡೆಗಳನ್ನು ಅಪ್ಪಿ ಇಳಿ ಸಂಜೆಯ ಕೊನೆಯ ಕಂತಿಗೆ ಮದನಕೊತ್ತಲ ಮಂಟಪದಲ್ಲಿದ್ದೆವು. ಒಮ್ಮೆಯಂತೂ ಅಸಾಧ್ಯವೆಂಬ ಬಂಡೆ ಏರಿ ಬಂದೆ! ಚಾಕಲೇಟ್‌ ಕೊಡುವೆ ಮೇಲೆ ಬಾ ಎನ್ನಲು ಗೆಳೆಯ ನಾಗರಾಜ್‌ ಮತ್ತು ಈರಣ್ಣ. ಓಬವ್ವ ಮತ್ತು ಹೈದರಾಲಿಯ ಸೈನಿಕರು ನೆನಪಾದರು. ಎರಡು ಬೃಹತ್‌ ಬಂಡೆಯ ನಡುವೆ ಇರುವ ಇಕ್ಕಟ್ಟು ದಾರಿ ಹಾಯಬೇಕು. ದಿನವೂ ನೀರು ಮತ್ತು ಬುತ್ತಿಗಂಟು ಹಿಡಿದು ಈ ಮಂಟಪದ ನೆತ್ತಿಗೆ ಹತ್ತುವ ಅಂದಿನ ಯುವಕರ ಸಾಹಸ ಪ್ರವೃತ್ತಿಗೆ ಮನಸೋತೆ. ಇಲ್ಲಿ ಮೇಲೆರಿದರೆ ಹಂಪಿಯ ೩೬೦ ಡಿಗ್ರಿ ಕೋನದ ಸ್ಥಳಗಳು ನಿಚ್ಚಳ.

ಮದನಕೊತ್ತಳದ ಮುಸ್ಸಂಜೆ

 ನೆತ್ತಿ ಹತ್ತಿ ಪುಳಕಗೊಂಡು ಸ್ವಲ್ಪ ವಿಶ್ರಮಿಸಿಕೊಂಡೆವು. ಮೇಲೇರಿ ಬಂದ ಗೈಡ್‌ ಸನಿಹದ ಕಡಿದಾದ ಬಂಡೆ ಏರಿದ. ಇಳಿಯುವಾಗಂತೂ ನಮಗೇ ಭಯವಾಯಿತು. ಸೂರ್ಯನನ್ನು ನುಂಗುವಂತೆ, ಯೋಗ ನಮಸ್ಕಾರದ ನಡುವೆ ಸೂರ್ಯನ ಸಿಲುಕಿಸಿ ಮುಂತಾದ ವಿವಿಧ ಭಂಗಿಯಲ್ಲಿ ಚಿತ್ರ ತೆಗೆದು ಖುಷಿ ಪಟ್ಟೆವು. ಸ್ವಲ್ಪ ಆಯ ತಪ್ಪಿದರೂ ಮೂಳೆಗಳೆಲ್ಲಾ ಪುಡಿ ಪುಡಿ. ಮದನಕೊತ್ತಳ ಮಂಟಪದಲಿ ಮುಸ್ಸಂಜೆಯನು ಕಳೆದು, ಹಗಲು ಮುಗಿಯುವ ಮೊದಲೇ ಇಳಿಯ ತೊಡಗಿದೆವು. ಮದನ ಕೊತ್ತಲದ ಮುಸ್ಸಂಜೆ ಅನ್ಯಾದರ್ಶ. ಅಪರೂಪದ ಹಲವು ಚಿತ್ರಗಳು ನನ್ನ ಲ್ಯಾಪ್‌ಟಾಪ್‌ ಸೇರಿದವು.

ಮತ್ತದೇ ದಾರಿಯಲ್ಲಿ ಮುಳ್ಳು ಕಂಟಿಗಳ ನಡುವೆ ಮುಂದುವರಿಯ ಬೇಕಿರುವುದರಿಂದ ಹಾಗೂ ಈ ದಾರಿಯಲ್ಲಿ ಕರಡಿ, ಚಿರತೆಗಳ ಹಾವಳಿ ಬಲು ಜೋರೆಂದು ಬೇಗನೆ ಇಳಿದೆವು.

ಚಕ್ರ ತೀರ್ಥದ ಸೆಳೆತ

ವಿರೂಪಾಕ್ಷ ಮಂದಿರದಿಂದ ನೇರ ಚಲಿಸಿ ತುಂಗೆಯ ತೀರದ ಲಿಂಗದ ಮುಂದಿರುವುದೇ ಚಕ್ರತೀರ್ಥ. ಇಲ್ಲಿನ ಸೆಳತವೇ ಅನನ್ಯ. ಇಲ್ಲಿಂದಲೇ ಆಚೆ ದಡಕ್ಕೆ ತೆಪ್ಪದಲ್ಲಿ ಬಿಡಲಾಗುತ್ತದೆ. ಆಚೆ ದಡದ ಚಂದ್ರಮೌಳೇಶ್ವರ ದೇವಾಲಯ ಮತ್ತು ಮಠಗಳನ್ನು ನೋಡಿ ಬಂದಿದ್ದು ಇಲ್ಲಿಂದಲೇ. ಅದೊಂದು ವಿಶಿಷ್ಟ ಕಥನ.

ಚಕ್ರತೀರ್ಥದಲ್ಲಿ ಮಿಂದೆದ್ದು ಬಂದು ಕೋದಂಡ ರಾಮನಿಗೆ ನಮಿಸಿ ಅಲ್ಲೇ ಎಡಕ್ಕೆ ಸಿಗುವ ಮೆದು ಇಡ್ಲಿ ಮತ್ತು ಹಸಿರು ಚಟ್ನಿ, ಬೋಂಡಾ ಉದರದ ಉಪಶಮನಕ್ಕೆ ಹೇಳಿ ಮಾಡಿಸಿದ ತಂಪೆಳೆಯುವ ಜಾಗ. ೧೦ರೊಳಗೆಲ್ಲಾ ಖಾಲಿ ಖಾಲಿ. ಅಲಲ್ಲಿ ಚೌಕುಳಿ ವಯರ್‌ ಬುಟ್ಟಿ ಬಿಡಿಸಿ ಊಟಕ್ಕೆ ಕೂತ ಕಾರ್ಮಿಕರು ಗಮನ ಸೆಳೆಯುತ್ತಾರೆ. 

ಕೋದಂಡ ರಾಮ, ಯಂತ್ರೋದ್ಧಾರಕ ಹನುಮ, ಕೋಟಿಲಿಂಗ, ಸೀತಾ ಸೆರಗು, ರಂಗನಾಥ, ಅಚ್ಚುತರಾಯ ಪೇಟೆ ಇತ್ಯಾದಿಗಳನ್ನು ದರ್ಶಿಸಿ ಹಳೆಯ ಹೆದ್ದಾರಿಗಳನ್ನು ಹಾಯ ಬಹುದು.

 ಇಲ್ಲಿಂದಲೇ ಕಂಪ-ಭೂಪ ಮಾರ್ಗ ಪ್ರಾರಂಭವಾಗಿ ಸುಗ್ರಿವನ ಗುಹೆ ಹಾದು ವಿಠಲ ದೇವಾಲಯದ ಹಿಂಬಂದಿಗೆ ಪುರಂದರ ಮಂಟಪದ ಬಾಜುವಲ್ಲೇ ಹಾದು ಹೋಗುತ್ತದೆ. ಬೆಳ್ಳಂಬೆಳಗ್ಗೆ ನಾಲ್ಕಕ್ಕೆ ಹೊರಟರೆ ೫ರ ಸುಮಾರಿಗೆ ಪುರಂದರ ಮಂಟಪದ ಸನಿಹವಿರುತ್ತೀರಿ. ಇಲ್ಲೊಬ್ಬಳು ಲಕ್ಷ್ಮೀ ಇಡ್ಲಿ, ವಡೆ, ಬಿಸಿ ಬಿಸಿ ಮೆಣಸಿನ ಬಜ್ಜಿಯನ್ನು ಬಯನಿ ಮರದ ನೆರಳಡಿ ಮಾರಾಟಕ್ಕೆ ನಿಂತಿರುತ್ತಾಳೆ. ನೀವೇನೋ ಗ್ರಹಿಸದಿರಿ. ಮುಂಜಾವಿಗೆ ಪುರಂದರ ಮಂಟಪದ ಸ್ವಚ್ಚಂದದ ಗಾಳಿ ಕುಡಿದು ಬಂದು ಮೆದು ಇಡ್ಲಿ ಮೆಲ್ಲುವ ಆ ಸುಖವೇ ಬೇರೆ. ಪುರಂದರ ಮಂಟಪದಿಂದ ಆಚೆಗೆ ತಲುಪಲು ನಿರ್ಮಿಸಿದ ೫೦೦ ವರ್ಷ ಹಳೆಯ ಸೇತುವೆಯುದ್ದಕ್ಕೂ ಕಣ್ಣು ಹಾಯಿಸಿ. ಹೊಸ ಮಿಂಚೊಂದು ಸಂಚಾರವಾಗುತ್ತದೆ. ಹಾಗೆಯೇ ಆಚಯ ಬದಿಯ ದೇವಾಲಯಕ್ಕೂ ಕಲ್ಲುಗಳ ಮೇಲೆ ಜಿಗಿಯುತ್ತಾ ಹೋಗಿ ಬರಬಹುದು. ಆಚೆ ದಡದಲ್ಲಿ ನೆಲಕ್ಕುರುಳಲು ತಯಾರಾದ ದೇವಾಲಯ ಹಾಗು ಇಬ್ಬರು ವೃದ್ಧರಿರುವ ಪುಟಾಣಿ ಮಠವಿದೆ.

ಇಲ್ಲಿನ ಗಾಳಿ, ನೀರಲ್ಲಿ ಒಂಟಿತನದ ಅಮಲು. ಇಲ್ಲಿಂದ ಮುಂದಡಿ ಇಟ್ಟರೆ ತಿರುಮಲ ದೇವಾಲಯ, ತುಲಾಭಾರ ಮಂಟಪ ಮತ್ತು ವಿಜಯ ವಿಠಲನ ಗುಡಿ ಎದುರಿಗಿರುತ್ತೀರಿ.

 ಹೀಗೆ ಸಾಗಿದ ಅನನ್ಯ. ದಾರಿ ಗುಂಟ ಸಿಗುವ ವಿಶಾಲ ಬೀದಿ ಮತ್ತು ಪ್ರತಿ ಬೀದಿಯ ಅಚ್ಚುಕಟ್ಟುತನ ನಮ್ಮ ಇಂದಿನ ವ್ಯವಸ್ಥೆಯನ್ನು ಗೇಲಿ ಮಾಡುವಂತಿದೆ. ತುಂಗಭದ್ರೆಯನ್ನು ತಿರುಗಿಸಿ ಹಂಪಿಗೆ ಸದಾ ನೀರಿನ ಕೊರತೆಯಾಗದಂತೆ ಕಾಪಾಡಿದುದು ಒಂದು ಅದ್ಭುತ ಇಂಜಿನಿಯರಿಂಗ್‌ ಸಾಹಸ. ಇಂದಿಗೂ ಇದೊಂದು ಮಿಸ್ಟರಿಯೇ! 

ಮಾಲ್ಯವಂತದ ಮುಂಜಾನೆ

ಮಾಲ್ಯವಂತದ ಚುಬುಕು ಎಂತವರನ್ನು ಆಕರ್ಷಿಸದೇ ಬಿಡದು. ದೇವಾಲಯದವರೆಗೆ ರಸ್ತೆ ಇದೆ. ಮುಂದೆ ಸಣ್ಣ ದಾರಿಯಲ್ಲಿ ಕತ್ತಲಲ್ಲಿ ನಡೆಯಬೇಕು. 

ಮೇಲೇರಿದಾಗ ಕಾಣುವ ದೃಶ್ಯಾವಳಿಗಳಿಗೆ ನೀವು ಮಾರು ಹೋಗುವಿರಿ. ಒಂದೆಡೆ ಮಾಲ್ಯವಂತ ರಘುನಾಥ ದೇವಾಲಯ ಇನ್ನೊಂದೆಡೆ ಗಜಶಾಲೆ ಕಾಣಸಿಗುತ್ತದೆ. ಮಾಲ್ಯವಂತದ ಬೆಳಗು ಹಾಗೂ ಸಂಜೆಗಳು ಪ್ರೇಯಸಿಯ ಬಿಸಿ ಅಪ್ಪುಗೆಯಂತೆ ಬೆಚ್ಚಗೆ! ಸದಾ ಹಂಪಿಗಾಗಿ ಹಾತೊರೆಯುವಂತೆ ಮಾಡುತ್ತದೆ! 



ರಾಮನಿಲ್ಲಿಗೆ ವನವಾಸದ ಸಮಯಕ್ಕೆ ಬಂದಿರುವ ಕುರುಹಾಗಿ ರಘುನಾಥ ದೇವಾಲಯ ನಿರ್ಮಿಸಲಾಗಿದೆ. ಜೊತೆಗೊಂದು ವಿಶಿಷ್ಟ ಶಿವಾಲಯವಿದೆ. ಶಿವಾಲಯದೆದುರು ಪುಟಾಣಿ ಲಿಂಗಗಳನ್ನು ಕೆತ್ತಿಡಲಾಗಿದೆ. ಸೂರ್ಯೋದಯ ವೀಕ್ಷಣೆಗೆ ಅತ್ಯಂತ ಪ್ರಶಸ್ತವಾದ ಜಾಗವೇ ಮಾಲ್ಯವಂತ.



ಮಾಲ್ಯವಂತ ದೇವಾಲಯದಲ್ಲಿ ೨೪ ಗಂಟೆ ಭಜನೆ ಮತ್ತು ಪಾರಾಯಣ ನಡೆಯುತ್ತದೆ. ಅಲ್ಲಲ್ಲಿ ಅರಳುವ ನಾಗಸಂಪಿಗೆಯ ಘಮಲನ್ನು ಆಸ್ವಾದಿಸುತ್ತಾ ನೆತ್ತಿ ಏರಿದರೆ ಅಪೂರ್ವ ಅಹ್ಲಾದ. ಇನ್ನೂ ಎತ್ತರಕೆ ಏರಿದರೆ ಹಂಪಿಯ ದಶ ದಿಕ್ಕುಗಳೂ ಕಾಣ ಸಿಗುತ್ತದೆ. ಪ್ರತಿವರ್ಷ ನಡೆಯುವ ಹಂಪಿಯ ಫಲ ಪುಷ್ಪ ಪೂಜೆಗೆ ಕಾತರನಾಗಿ ಕಾಯುತ್ತಾ ನಮ್ಮ ರೂಂನತ್ತ ನಡೆದೆವು


ವರ್ಷ ವರ್ಷವೂ ಹಂಪಿಯ ನೋಡುವ ಬಯಕೆ ಜ್ವರದಂತೆ ಏರುತ್ತಲೇ ಇದೆ. ಮತ್ತೆಂದು ಹಂಪಿಯ ಅಲೆಮಾರಿತನದ ಗಾಳಿಯನ್ನು ಹೀರುವೆನೆಂಬ ತವಕದಲ್ಲೇ ಕಳೆಯುತ್ತಿದೆ ದಿನಗಳು.


 

Thursday, June 4, 2026

ಹಿಂಡ್ಲು ಮನೆಯ ಹಾದಿಯಲ್ಲಿ

 


 ಮಾಗಿ ಚಳಿ ಇನ್ನೂ ಪ್ರಾರಂಭವಾಗಿರಲಿಲ್ಲ. ಪ್ರಚಂಡ ಚಂಡಮಾರುತ ಬೀಸಿ ಹೋಗಿತ್ತು. ಬದುಕಿನಲ್ಲಿ ವಯಸ್ಸಿನ ಚಂಡಮಾರುತ! ಚಾರಣ, ಪ್ರವಾಸದ ಚುಬುಕು. ನಾಲ್ಕಾರು ಸ್ಥಳಗಳ ಕಾಕ್‌ಟೈಲ್ ತಯಾರಿಸಿದ್ದಾಯಿತು. ಡಬ್ಬಿ ಕ್ಯಾಮರಕ್ಕೆ ರೀಲು ತುಂಬಿಸಿದ್ದಾಯಿತು.

  ಎರಡು ಜಲಪಾತ, ಒಂದು ಸಣ್ಣ ಚಾರಣ. ಒಂದೆರಡು ದೇವಾಲಯ. ಸಿರಸಿ ಮಾರಿಕಾಂಬ ಬನವಾಸಿಯ ಮಧುಕೇಶ್ವರ, ಜೋಗ, ವರದಾನದಿ ಸಹ ಕಾಕ್‌ಟೈಲ್‌ನ ಭಾಗ! ಅಪ್ಪಟ ಅನಾಸ್ತಿಕ ಗೆಳೆಯರು ಮೂಗು ಮುರಿದಿದ್ದರು! 



ಓಮಿನಿ ಕಾರನ್ನು ಬಾಡಿಗೆಗೆ ಪಡೆದು , ಒಂದೇ ದಿನದಲ್ಲಿ ವಾಪಾಸು ಬರುವೆವು ಎಂದು ಕಾಗೆ ಹಾರಿಸಿ ಗೆಳೆಯನೊಬ್ಬನನ್ನು ನಂಬಿಸಿ ಕಿಡ್ನಾಪ್ ಶೈಲಿಯಲ್ಲಿ ಒಮ್ನಿಗೆ ತುಂಬಿಕೊಂಡು ಹೊರಟೆವು! ಆತನೇ ಇಂದಿನ ಕಥನದ ಕೇಂದ್ರ ಬಿಂದು. ಅಸಲಿಗೆ ಅದು ನಮ್ಮ ಮೂರು ದಿನಗಳ ಪ್ರವಾಸ! ಆತನಿಗೆ ಬೇಕಾದ ವಸನಗಳ ವ್ಯವಸ್ಥೆ ಮಾಡಿದ್ದಾಯಿತು. ಊರ ಗಲ್ಲಿಗಳಲ್ಲಿ ಕಾರಿನ ಬೆಳಕು ಚೆಲ್ಲಿ ಮೂಕಾಂಬಿಕಾ ಅಭಯಾರಣ್ಯದ ಮಗ್ಗುಲಿಗೆ ಹಾದು ಮರಕುಟಿಕವೆಂಬ ಸಣ್ಣ ಮೂರ್‌ಕೈಯಲ್ಲಿ ದಾರಿಕಾಣದೇ ಸ್ಥಿತವಾಯಿತು ನಮ್ಮ ಕಾರು.

ಜಲಪಾತದ ಜಿ.ಪಿ.ಎಸ್‌ ಕಳೆದು (Hindlumane)

  ಬೀಸಿ ಹೋದ ಮುಂಗಾರು ಮಳೆ ಹರಡಿದ ತರಗಲೆ ದಾರಿಯುದ್ದಕ್ಕೂ. ಎಡಕ್ಕೊ ಬಲಕ್ಕೊ ನೇರವೊ ತಿಳಿಯದೆ ನಿಂತಾಗ ದಿನೇಶ ಹೊಳ್ಳ ಬರೆದ ಲೇಖನವೊಂದು ದಾರಿದೀಪವಾಗಿ ಬಲಕ್ಕೆ ಹೊರಳಿಸಿದೆವು. ನಾಲ್ಕೈದು ಎಮ್ಮೆ ಹೊಡೆದುಕೊಂಡು ಕಂಬಳಿ ಕೊಪ್ಪೆ ಹೊದ್ದವನಲ್ಲಿ ಎಮ್ಮೆ ಹೊಂಡದ ದಾರಿ ಕೇಳಿದೆ. ನೇರ ದಾರಿ ಎಂಬಂತೆ ಸನ್ನೆ ಮಾಡಿದ ಮೂಕನಿರಬೇಕು ಎಂದುಕೊಂಡೆ ನೇರದಾರಿಯಲಿ ಮುಂದುವರಿದು ಕವಲಿನ ಹಾದಿಯ ನಡುವೆ ಎಲ್ಲೋ ಹಾದಿ ತಪ್ಪಿದೆವು. ಇನ್ನು ಮುಂದಿವರಿಯದಂತೆ ತೊರೆಯೊಂದು ತನ್ನ ಇರುವನ್ನು ಅರುಹಿತ್ತು. ಮುಂದುವರಿದರೆ ಸೈಲೆನ್ಸ್ರ್ ಒಳಗೆ ಹಾದು ಪ್ರವಾಸ ಮೊದಲ ದಿನಕ್ಕೆ ಮೊಟಕಾಗಬಹುದೆಂದು ಮತ್ತಿನೆರಡು ಘಳಿಗೆಯಲ್ಲೇ ಮಳೆ ಸುರಿದು ನೀರೇರಬಹುದೆಂಬ ಆತಂಕ ಮುಂಬರಿಯದಂತೆ ತಡೆದಿತ್ತು. ಸುತ್ತಲೂ ಮುಗಿಲ ಚುಂಬಿಸೋ ಮರಗಳು ನಡು ಹಗಲಿಗೇ ಕಡುಗತ್ತಲು! ಅಲ್ಲಲ್ಲಿ ಕೃಷಿ , ತೋಟಗಾರಿಕೆ. ಲಿಂಬೆ ಹುಲ್ಲಿನ `ವಾಹ್' ಪರಿಮಳ ಹೊತ್ತ ತುಂಟ ಗಾಳಿ. ಕಡಿದಾದ ಕೆಂಪು ಮಣ್ಣಿನ ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿ ಕನಸ ಬೆನ್ನತ್ತಿದೆವು.



 ಕನಸು ಅಬ್ಬೇಪಾರಿಯಾಗುವ ಕ್ಷಣ. ದಾರಿ ತಪ್ಪಿ ಯಾರದೋ ತೋಟದೊಳಗೆ ಕಾಲಿಟ್ಟೆವು. ಮನೆ ಮನಗಳಲ್ಲಿ ಹಸಿರುಟ್ಟ ಗದ್ದೆ ಕೋಗು. ಊರ ಮಂದಿ ಊರ ಬಿಟ್ಟಂತೆ ಮನೆಗಳೆಲ್ಲಾ ಖಾಲಿ ಖಾಲಿ. ಕನಸು ಅಬ್ಬೇಪಾರಿಯಾಗುವ ಪಾಳಿ. ಆತಂಕದಲ್ಲೇ ಕಳೆವ ಕ್ಷಣ. ಗೆಳೆಯರಿಗೆಲ್ಲಾ ಜಲಪಾತ ತೋರಿಸುತ್ತೇನೆಂದು ರೈಲು ಹತ್ತಿಸಿ ಎಲ್ಲೆಲ್ಲೋ ಅಲೆಸಿದ್ದದಾಯಿತು. ಜಲಪಾತ ಬಿಡಿ ಅದರ ಶಬ್ದವೂ ಎಲ್ಲೂ ಕೇಳಿಸಲೇ ಇಲ್ಲ! ಅಂತು ಇಂತು ದಾರಿ ಸಿಕ್ಕದೇ ಬಂದ ದಾರಿಗೆ ಸುಂಕವಿಲ್ಲವೆಂದುಕೊಳ್ಳುತ್ತಾ ನಿರಾಶೆಯಲ್ಲಿ ಹಿಂದಿರುಗುವ ಹುನ್ನಾರದಲ್ಲಿದ್ದೆವು. ಯಾವ ನರಪಿಳ್ಳೆಯ ಸುಳಿವೂ ಸಿಗದೇ ಜಲಪಾತದ `ಜಿ.ಪಿ.ಎಸ್' ಕಳೆದುಕೊಂಡಿದ್ದೆವು!

ಕದಡಿದ ಕೂಗು


  ಇನ್ನೇನು ಸ್ವಲ್ಪ ಹೊತ್ತಿನಲ್ಲೇ ತಂದ ಬುತ್ತಿಗಂಟು ಬಿಚ್ಚಿ ಉಂಡು ಹೊರಡೋಣವೆಂದುಕೊಂಡಿರುವಾಗಲೇ ಆರ್ತನಾದವೊಂದು ಕೇಳಿ ಎಲ್ಲರೂ ದಂಗಾದೆವು. ನಾನು ನನ್ನ ಜೊತೆಗಾರರಲ್ಲಿ ಇಬ್ಬರು ಮುಂದೆ ಮುಂದೆ ಹಳ್ಳಿಯ ದಾರಿಯಲ್ಲಿ ಮನುಷ್ಯ ಆವಾಸಕ್ಕಾಗಿ ಹುಡುಕುತ್ತಾ ಹೊರಟಿದ್ದೆವು. ಇಬ್ಬರು ಮಧ್ಯ. ಇನ್ನಿಬ್ಬರು ತೀರಾ ಹಿಂದೆ ಬಿದ್ದು ನಮ್ಮನ್ನು ಅನುಸರಿಸಿದ್ದರು.

  ದೂರದಲ್ಲಿದ್ದ ಇಬ್ಬರಲ್ಲಿ ಒಬ್ಬನಿಗೆ ಏನೋ ಆಗಿರಬೇಕು. ದೂರದಲ್ಲಿ ಆತನಿದ್ದಿದ್ದರಿಂದ ಆ ಕೂಡಲೇ ಸ್ಪಂದಿಸಲಾಗಲಿಲ್ಲ. ಏನೋ ಒಂದು ಈ ಕಗ್ಗಾಡಿನ ಮೂಲೆಯಲ್ಲಿ ಜರುಗಿತ್ತು! ಇಲ್ಲಿನ ಮೂಲ ಸೌಕರ್ಯ ಅಷ್ಟಕಷ್ಟೆ. ಓಮಿನಿ ದೂರದಲ್ಲಿ ನಿಲ್ಲಿಸಿ ಬಂದಿದ್ದೆವು. ದಾರಿತಪ್ಪಿದ ಮಕ್ಕಳಾಗಿದ್ದೆವು. ಸದಾ ಉಲ್ಲಾಸದ ಬುಗ್ಗೆಗೆ ಕಾರಣವಾಗಿದ್ದ ಕಾಡು, ಈ ಪರಿಸರ ನಮ್ಮ ಬದ್ಧ ವೈರಿಯಾಗಿ ಪ್ರತಿಸ್ಪರ್ಧಿಯಾಗಿ ಜೀವೋತ್ಕರ್ಷಕ್ಕೆ ಅಡ್ಡಿಯಾಗಿ ನಿಂತಂತೆ ಭಾಸವಾಯಿತು. ಈ ಕಠಿಣ ಕಾಲದಲ್ಲಿ ಸ್ಪಂದಿಸುವುದು ನಮ್ಮ ಆದ್ಯ ಕರ್ತವ್ಯವಾಗಿತ್ತು. ಇಂತಹ ಸುಮಧುರ ಕ್ಷಣವನ್ನು ನುಂಗಿ ಹಾಕುವಂತೆ ಏನೋ ಒಂದು ಘಟಿಸಿತ್ತೆಂದು ನನಗೆ ಭಾಸವಾಯಿತು. ಹಾಗಾಗಿ ಆತನಿದ್ದಲ್ಲಿಗೆ ದೌಡಾಯಿಸಿದೆ.

ಕನ್ನಡಿ ಹಾವು ಕಚ್ಚಿ



ಹೀಗೆ ದಾರಿ ಹುಡುಕುತ್ತಾ ಮುಂದೆ ಸಾಗಿದ ನನಗೆ ಹಿಂದಿನಿಂದ ನಮ್ಮ ತಂಡದ ಸದಸ್ಯ ಗಣೇಶನ ಬೊಬ್ಬೆ ಕೇಳಿ, ನಾನು ಒಂದೇ ಜಿಗಿತಕ್ಕೆ ಅಲ್ಲಿಗೆ ತಲುಪಿದೆ. ಆತನ ಕಾಲಿನಿಂದ ರಕ್ತ ಒಸರುತಿತ್ತು. ನಾವು ಗಾಬರಿ ಬಿದ್ದೆವು. ಏನಾಯಿತೆಂದು ವಿಚಾರಿಸಿದಾಗ ನಾನು ಸತ್ತೆ!. ನಾನು ಸತ್ತೆ ಎಂಬ ಗಣೇಶನ ಬೊಬ್ಬೆ ಮುಂದುವರೆದಿತ್ತು. ಆತನನ್ನು ಸಮಾಧಾನ ಪಡಿಸಿ ಕೇಳಿದಾಗ ರಕ್ತ ಕನ್ನಡಿ ಹಾವು ಕಡಿಯಿತು! ಎಂದು ಹೇಳಿ ನಮ್ಮನ್ನು ಗಾಬರಿಪಡಿಸಿದ! ಮೊದಲೇ ಅಂಜಿಕೆ ಸ್ವಭಾವದ ಆತನನ್ನು ಚಾರಣಕ್ಕೆ ಕರೆತಂದಿದ್ದು ನನ್ನ ತಪ್ಪೆಂದು ತಿಳಿಯಿತು. ಆತನ ಕಾಲಿಗೆ ಸಣ್ಣ ಟವೆಲ್ ಕಟ್ಟಿ ರಕ್ತ ಮೇಲೆ ಹರಡದಂತೆ ಜಾಗೃತೆ ಮಾಡಿದೆವು. ಅದಾಗಲೇ ನಮ್ಮ ತಂಡದವರಲ್ಲಿ ಗಡಿಬಿಡಿ ಮನೆ ಮಾಡಿತ್ತು. ಎಲ್ಲರ ಕೋಪಕ್ಕೆ ತುತ್ತಾಗುವ ಸರದಿ ನನ್ನದಾಗಿತ್ತು. ಹಾದಿ ತಪ್ಪಿಸಿದ್ದಿಯ ಜೊತೆಗೆ ಈ ದುರ್ಗಮ ಹಾದಿಯಲಿ ಹಾವಿನ ಕಾಟಕ್ಕೆ ಗೆಳೆಯನನ್ನೇ ಬಲಿ ಕೊಡಬೇಕಾದ ಪರಿಸ್ಥಿತಿ ಬಂತೆಂದು ಹಿಡಿ ಶಾಪ ಹಾಕತೊಡಗಿದರು. ಕನ್ನಡಿ ಹಾವು ಕಡಿದರೆ ಸಾಯೋದಿಲ್ಲವೆಂದು ನಿರ್ದಿಷ್ಟವಾಗಿ ಹೇಳಿದೆ. ಎಲ್ಲರೂ ನನ್ನ ಮೇಲೆ ದಾಳಿ ಮಾಡಿದರು!



ಗಣೇಶನ ತುರ್ತು ಅಗತ್ಯಕ್ಕೆ ಸ್ಪಂದಿಸುವ ಜವಬ್ದಾರಿ ನನ್ನ ಮೇಲಿದ್ದುದರಿಂದ ಆತನನ್ನು ಸಮಾಧಾನ ಪಡಿಸಿ ಏನಾಯಿತೆಂದು ವಿಚಾರಿಸಿದಾಗ ನಾನೊಂದು ದೊಡ್ಡ ರಕ್ತ ಕನ್ನಡಿ ಹಾವನ್ನು ತುಳಿದೆ, ಅದು ನನ್ನನ್ನು ಕಚ್ಚಿತು ಎಂಬುದು ಆತನ ವಿವರಣೆ, ಹಾವಿದ್ದ ಸ್ಥಳ ನೋಡಲು ಹೋದೆವು. ಗದ್ದೆ ಕಂಠದ ಬದಿಯಲ್ಲೊಂದು ತಗ್ಗಿನ ಸ್ಥಳವನ್ನು ಆತ ತೋರಿದ. ಅಲ್ಲಿ ಹುಡುಕಿದರೆ ರಕ್ತಕನ್ನಡಿ ಹಾವೊಂದು ನಿಶ್ಚಿಂತೆಯಿಂದ ಮಲಗಿತ್ತು.



ಈಗ ನಮ್ಮ ತಂಡ ಸಂದಿಗ್ದಕ್ಕೆ ಬಿದ್ದೆವು ಹಾವು ಕಚ್ಚಿದರೆ ಅದು ಅಲ್ಲಿರುತ್ತಲೇ ಇರಲಿಲ್ಲ, ಆದರೆ ಕಚ್ಚದೆ ಕಾಲಿನಿಂದ ರಕ್ತ ಒಸರುವುದು ಹೇಗೆ? ತೀವ್ರ ಗೊಂದಲಕ್ಕೆ ಬಿದ್ದೆವು. ನಮ್ಮ ಸ್ನೇಹಿತರೆಲ್ಲಾ ಗರ ಬಡಿದವರಂತೆ ನಿಂತರು.

ಚೆಲುವಾತಿ ಚೆಲುವ ಕನ್ನಿಕೆ 



ಇದಕ್ಕೂ ಮುಂಚೆ ಹತ್ತಾರು ಚಾರಣ ಮಾಡಿದ ಅನುಭವವಿದ್ದ ನನಗೆ ಈಗ ರಕ್ತ ಒಸರಿದ್ದು ಹೇಗೆಂದು ಹೊಳೆದು ಕೊಂಚ ಸಮಾದಾನವಾಯಿತು. ನಾನು ಗಣೇಶನ ಬಳಿಗೆ ಓಡಿ ಗಾಯವನ್ನು ಸೂಕ್ಷ್ಮವಾಗಿ ಪರಿಶೀಲಿಸಿದೆ. ಒಂದು ದೊಡ್ಡ ಗಾಯ ಮಾತ್ರವಿತ್ತು. ಇನ್ನೊಂದು ಗಾಯ ಸುಮಾರು 5 ಸೆ.ಮೀ. ಆಚೆಗಿತ್ತು. ಹಾಗಾಗಿ ಆತ ಇದು ಹಾವು ಕಡಿದದಲ್ಲಾ ಎಂದು ತೀರ್ಪಿತ್ತೆ. ಹಾವಾಗಿದ್ದರೆ ಗಾಯಗಳೆರಡು ಹತ್ತಿರ ಹತ್ತಿರವಿರಬೇಕಿತ್ತು.  ಹಾಗಾದರೆ ರಕ್ತ?! ಎಂದು ಉಳಿದವರೆಲ್ಲಾ  ಕಿರುಚಿದರು. ಅದು ಇಂಬಳ ಎಂಬ ಜೀವಿ. ರಕ್ತ ಹೀರಿ ಹೊದುದರಿಂದ ಉಂಟಾದ ಗಾಯದಿಂದ ಬರುತ್ತಿರುವುದು. ಎಂದಾಗ ಎಲ್ಲರು ಸಮಧಾನದ ನಿಟ್ಟುಸಿರು ಬಿಟ್ಟೆವು. ಹಾವನ್ನು ಕಂಡ ಗಣೇಶ ಗಾಬರಿ ಬಿದ್ದು ಭಯದಿಂದ ಸತ್ತೇ ಬಿಡುತ್ತೇನೆಂದು ಗಲಾಟೆ ಎಬ್ಬಿಸಿದ್ದ! 


ದೊಡ್ಡ ಗಂಡಾಂತರದಿಂದ ಪಾರಾದ ಎಲ್ಲರೂ ಒಮ್ಮೆ ನಿರುಮಳರಾದೆವು. ಗಣೇಶ ನಾಚಿಕೆಯಿಂದ ಮಾತೆ ಹೊರಡದಂತಾಯಿತು. ಮುಂದಿನ ಪಯಣದುದ್ದಕ್ಕೂ ಆತನನ್ನು ಗೋಳು ಹೊಯ್ದುಕೊಂಡೆವು. ಸುಮಾರು ಒಂದು ಗಂಟೆ ಕಾನನದಿ ಗಗನ ಸ್ಪರ್ಶಿ ಮರಗಳ ನಡುವೆ ಕೊಡಚಾದ್ರಿಯ ನೋಡುತ್ತಾ ಒಬ್ಬರಿಗೊಬ್ಬರು ಕಾಲೆಳೆಯುತ್ತಾ ಸಾಗಿದೆವು. 

ಹಿಂಡ್ಲು ಮನೆಯತ್ತ



ಹಿಂಡ್ಲು ಮನೆಯೊಂದು ವಿಶಿಷ್ಟ ಜಲಧಾರೆ. ಕೊಡಚಾದ್ರಿ ಕುಡಿದ ನೀರೆಲ್ಲಾ ಇಲ್ಲಿ ಇಳಿದು ಹರಿಯುತ್ತದೆ. ಕೊಡಚಾದ್ರಿ ಚಾರಣದ ಚಿಮ್ಮು ಹಲಗೆಯೂ ಹೌದು! ಜಲಪಾತದ ಸನಿಹದ ಏರುದಾರಿಯಲಿ ಏರಿದರೆ `ಒಂಟಿ ಮರ' ವೆಂಬ ವಿಶಿಷ್ಟ ಜಾಗಕ್ಕೆ ಬಂದು ತಲುಪುತ್ತೇವೆ. 


  ಕೆಳಗಿನಿಂದ ಮೇಲೇರುವುದು ಬಲು ಕಠಿಣವೆಂದು ಒಮ್ಮೆ ಮೇಲಿನಿಂದ ಕೆಳಗಿಳಿದು ಬಂದಿದ್ದೆ! ಜಲಪಾತದ ಬುಡದ ಮನೆಯಲ್ಲಿ ಮಲೆನಾಡಿನ ಮನೆಯ ವಿಶಿಷ್ಟ ತಂಬಳಿಯೂಟ ಸವಿದಿದ್ದೆ! ಇಂತಹ ಮಲೆನಾಡ ಮನೆಗಳು ಪೇಟೆ ಪಟ್ಟಣಗಳ ಮನೆಗಳಿಗಿಂತ ವಿಶಿಷ್ಟವಾಗಿ ನಿಲ್ಲುತ್ತವೆ! ತನ್ನ ಕಾಲಮೇಲೆ ನಿಂತ ಮನೆ. ಹತ್ತಲಿನಲಿ ತರಹೇವಾರಿ ತರಕಾರಿ, ಹೂ ಗಿಡ, ಸಂಪಿಗೆ, ಜಾಜಿ ಬಳ್ಳಿಗಳು. ನೀರ ಹನಿಗಳನ್ನು ನಿರಾಯಸವಾಗಿ ತಮ್ಮ ತಮ್ಮ ಮನೆಗಳತ್ತ ತಿರುಗಿಸಿಕೊಂಡು ನೆಮ್ಮದಿಯ ಬದುಕ ಕಂಡವರು ಆಗಷ್ಟೇ ವಿದ್ಯುತ್ ಎಂಬ ಅನಿಷ್ಟ ಅವರ ಅಂಗಳಕ್ಕೂ ಕಾಲಿಟ್ಟಿತ್ತು ಬಂದು ಹೋಗೋರಿಗೆ ಅವರ ತೋಟದ ಲಿಂಬೆ ಪಾನಕ ಅತಿ ಕಡಿಮೆ ದರದಲ್ಲಿ ವ್ಯವಸ್ಥೆ ಮಾಡಿದ್ದರು. ಈಗಂತೂ ಆರ್ಥಿಕತೆ ಮಗ್ಗಲು ಬದಲಿಸಿದ್ದರಿಂದ ಅಲ್ಲೊಂದು ಪುಟಾಣಿ ಅಂಗಡಿ ತಲೆ ಎತ್ತಿತ್ತು! ತರಹೇವಾರಿ ಬಾಟಲಿ ಪೇಯ ಮಾರಾಟಕ್ಕಿಟ್ಟಿದ್ದರು. ಪಟ್ಟಣದ ಎಲ್ಲಾ ವಸ್ತುಗಳು ಈಗಲ್ಲಿ ಲಭ್ಯ. ಪಯಣಿಗರು ಬಿಟ್ಟ ಕೊಟ್ಟೆ, ತಾಟು, ಪ್ಲೇಟುಗಳು ಈಗವರ ಅಂಗಳದಲಿ ತಬ್ಬಲಿಯಾಗಿ ಬಿದ್ದಿರುತ್ತವೆ.

ನೀರೂಡುವ ಬೃಹತ್‌ ಸ್ತನಗಳು



  ಶೋಲಾ ಕಾಡುಗಳ ವಿಶಿಷ್ಟತೆ ಇರುವುದೇ ಇಲ್ಲಿ. ಎರಡು ಎರಿನ ನಡುವಿನ ಕಣಿವೆಯಲ್ಲಿ ಬೆಳವ ಮರಗಳು ಬಯಲಿನ ಜನರಿಗೆ ನೀರೂಡುವ ಬೃಹತ್ ಸ್ತನಗಳು! ಪ್ರತೀ ಹುಲ್ಲು ಕುಡಿದ ನೀರನ್ನು ನಿಧ ನಿಧಾನವಾಗಿ ಕಣಿವೆಗೆ ತಳ್ಳುವ ಶೋಲಾ ಕಾಡುಗಳು ಬಯಲ ನೀರಿನ ತಾಯಿ ಬೇರು. ಹಾಗಾಗಿ ಶೋಲಾ ಅರಣ್ಯಗಳು ಪರಿಸರ ಸೂಕ್ಷ್ಮ ಪ್ರದೇಶಗಳೆಂದು ಪರಿಗಣಿತವಾಗಿದೆ. ಆದರೆ ಮಾನವನ ಅಪರಿಮಿತವಾದ ಆಸೆಗೆ ಬಲಿಯಾಗುತ್ತಲಿದೆ.

ಜಲಾಪಾತವಂತೂ ಅದ್ಭುತವಾಗಿತ್ತು. ಹಂತ ಹಂತವಾಗಿ ಹಲವು ಬಾರಿ ಧುಮುಕುವುದೆಂದು ಕೇಳಿದ್ದೆವು. ಆದರೆ ದಾರಿ ತಪ್ಪಿದ್ದರಿಂದ ಕೇವಲ 3 ಹಂತ ವೀಕ್ಷಿಸಿದೆವು. ನಮ್ಮ ತಂಡದಲ್ಲಿ ಹಲವರು ಜಲಪಾತವನ್ನು ಮೊದಲಬಾರಿಗೆ ಭೇಟಿಕೊಟ್ಟಿದ್ದರಿಂದ ರೋಮಾಂಚನಗೊಂಡು ನನ್ನನ್ನು ಆಲಂಗಿಸಿ ಕೊಂಡರು! ನೀರಲ್ಲಿ ಸ್ವಲ್ಪ ಹೊತ್ತು ಆಟವಾಡಿ ತಿಂಡಿ ತಿಂದೆವು. ಕಾನನದ ಏಕಾಂತದಲ್ಲಿ ಕುಳಿತು ಸ್ನೇಹಿತರೊಂದಿಗೆ ಭೋಜನಗೈಯುವುದು ವಿಶಿಷ್ಟ ಅನುಭವ ನೀಡಿತ್ತು. ಏಕಾಂತಕ್ಕೆ ಭಂಗ ತರುವಂತೆ ಆಗಾಗ ಹಕ್ಕಿಯೊಂದು ತನ್ನ ಇರುವಿಕೆ ತೋರಿಸುತಿತ್ತು.

ಕೊನೆಯ ಹನಿ 

ಅಂತೂ ಹಿಂಡ್ಲುಮನೆ ಜಲಪಾತದ ಚಾರಣ ಒಂದು ವಿಶಷ್ಟ ಘಟನೆಯಿಂದ ಜೀವನದಲ್ಲಿ ಮರೆಯಲಾಗದ ನೆನಪಾಗಿ ಉಳಿದು ಸದಾ ಕಾಡುತ್ತಾ ಉಳಿಯಿತು. ತಮ್ಮ ತಮ್ಮ ಕೆಲಸಗಳಲ್ಲಿ ಮುಳುಗಿದ ಗೆಳೆಯರು ಮತ್ತೆಂದೂ ಚಾರಣ ದಾರಿಗಳಲ್ಲಿ ಕಾಣಿಸಿಕೊಳ್ಳಲೇ ಇಲ್ಲ!

ವಾರೆ ನೋಟ

ಬಲ ಉಳ್ಳವರ ಅಹೋಬಿಲಂ!

  ನಾವು ಮೂವರು ಅಹೋಬಿಲಂಗೆ ಬಂದು ತಲುಪಿದ್ದೆ ಒಂದು ಅಚ್ಚರಿ. ಚೌಕಟ್ಟೇ ಇಲ್ಲದ ಒಂದು ಯೋಜನೆಯೊಳಗೆ ಅದು ಹೇಗೋ ಈ ದೇವಾಲಯ ತೂರಿಕೊಂಡಿತು. ಎಲ್ಲೋ ಓದಿದ ಪೇಪರ್‌ ತುಣುಕೊಂದರ ...