Sunday, January 25, 2026

ನದಿ ದಾಟಿ ಬಂದವರು


 

ನಾನ್ಯಾವುದೇ ಪುಸ್ತಕವನ್ನು ಒಂದೇ ಗುಕ್ಕಿಗೆ ಓದಿ ಮುಗಿಸುವುದೇ ಕಡಿಮೆ! ಸ್ವಲ್ಪ ಜಿಡುಕಾದರೂ ಎತ್ತಿ ಬದಿಗಿಡುತ್ತೇನೆ. ಇಲ್ಲ ಓದಿನ ಕೊಂಡಿ ಮುರಿದು ಮುಂದಿನ ಪುಸ್ತಕಕ್ಕೆ ಹೆಜ್ಜೆ ಇಡುತ್ತೇನೆ. ಉದಾಹರಣೆಗೆ ಮಾಂಡೋವಿ ಕಾದಂಬರಿ. ಹಾಗೇ ಹಲವು ಪುಸ್ತಕಗಳ ಹೆಸರು ಹೇಳಬಲ್ಲೆ.  ಆದರೆ ಇದೊಂದು ಪುಸ್ತಕ ಸಲೀಸಾಗಿ ಓದಿಸಿಕೊಂಡು ಕೊನೆ ಪುಟಕ್ಕೆ ಬಂದಿದ್ದೇ ತಿಳಿಯಲಿಲ್ಲ. ಕೊನೆಯ ಹತ್ತು ಪುಟ ಮಾತ್ರ ಕಣ್ಣು ನೋವಿನ ಕಾರಣವಾಗಿ ಓದಲು ಎರಡು ದಿನ ತೆಗೆದುಕೊಂಡೆ. 

ಲೋಕಾಭಿರಾಮದ ಮಾತುಕತೆ

ಕುಂದಾಪುರ ಕಡೆಯ ಕತೆಯನ್ನು ಇಷ್ಟು ಸಶಕ್ತವಾಗಿ ವಿವರಿಸಿದ ಇತ್ತೀಚಿನ ಕಾದಂಬರಿಗಳಲ್ಲಿ ಸೂಡಿ ಮತ್ತು ನದಿದಾಟಿ ಬಂದವರು ಪ್ರಮುಖವಾಗಿ ನಿಲ್ಲುತ್ತದೆ. ಸ್ವಲ್ಪವೇ ಸ್ವಲ್ಪ ಶಿವರಾಮ ಕಾರಂತರ ಶೈಲಿಯನ್ನು ಹೋಲುತ್ತದೆ.  ಅತ್ಯಂತ ಸರಳವಾಗಿ ಕಥೆ ಹೆಣೆಯುವ ಕಸುಬು ದಾರಿಗೆ ಇವರಿಗೆ ಸಿದ್ಧಿಸಿದೆ. ಯಾವುದೇ ರೀತಿಯ ಮಸಾಲೆ ಇನ್ನು ಬೆರೆಸದೆ ಸರಳವಾಗಿ ಕಥೆಯನ್ನು ಹೆಣದಿದ್ದಾರೆ.

 ನಿರ್ಲಿಪ್ತ ಕಥನಗಾರಿಕೆ

ಕತೆಯಿಂದ ಬೇರ್ಪಟ್ಟು ನಿಶ್ಪಕ್ಷಪಾತವಾಗಿ ದೂರನಿಂತು ಕತೆಗಾರರು ಕತೆ ಹೇಳುತ್ತಾ ಹೋಗುತ್ತಾರೆ. ಕತೆಯ ಎಡೆಗಿನ ಅವರ ನಿರ್ಲಿಪ್ತ ದೋರಣೆ ಅಚ್ಚರಿಯಾಗಿ ಎದ್ದು ಕಾಣುತ್ತದೆ. 

ಕತೆಯು ಕುಂದಾಪುರ ಕಡೆಯ ಹಿಂದುಳಿದ ಜನಾಂಗ, ಮಧ್ಯಮ ವರ್ಗ ಹಾಗೂ ಜಮೀನುದಾರರ  ಬದುಕಿನ ಚಿತ್ರಣದ ಜೊತೆಗೆ ಸ್ವಾತಂತ್ರ್ಯೋತ್ತರದ ಪಲ್ಲಟಗಳನ್ನು ನಿರ್ಲಿಪ್ತರಾಗಿ ಪ್ರತಿಬಿಂಂಬಿಸುತ್ತಾ ಸಾಗುತ್ತದೆ. ಅಂದಿನ ಬದುಕಿನ ಅನನ್ಯ ಚಿತ್ರಣ  ಚಿತ್ರಿಸುತ್ತಾ ಎಲ್ಲಿಯೂ ದೀರ್ಘವೆನಿಸದೇ ಸಾಗುತ್ತದೆ. ಗೆಳೆಯನೊಂದಿಗೆ ಕಲ್ಲು ಬೆಂಚಿನ ಮೇಲೆ ಕುಳಿತು ಮಾತನಾಡಿದಂತೆ.

ಊರ ಪಟೇಲನ ಹಳವಂಡಗಳಾಗಲಿ, ಕೃಷ್ಣಯ್ಯನ ರಸಿಕತೆಯನ್ನಾಗಲಿ, ಹಯವದನ ಭಟ್ಟರು ಪೆಟ್ಟು ತಿನ್ನುವ ಪ್ರಸಂಗವಾಗಲಿ, ಸಾಕಮ್ಮ ಊರು ತೊರೆಯುವ ಕ್ಷಣ ಇವೆಲ್ಲವನ್ನೂ ಹೆಚ್ಚಿನ ನಾಟಕೀಯತೆ ಬಳಸದೇ ಸರಳವಾಗಿ ನಿರೂಪಿಸಿದ್ದಾರೆ. ಕತೆಗಾರರ ವ್ಯಕ್ತಿತ್ವವೇ ಈ ಪುಸ್ತಕದಲ್ಲಿ ಅನಾವರಣಗೊಂಡಿದೆ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಪಾತ್ರ ಪೋಷಣೆಯಲ್ಲಾಗಲೀ ವಿವರಣೆಯಲ್ಲಾಗಲಿ ಎಲ್ಲೂ ಎಳೆಯದೇ ಅಚ್ಚುಕಟ್ಟುತನ ಎದ್ದು ಕಾಣುತ್ತದೆ. ಪ್ರತೀ ಪಾತ್ರದೊಂದಿಗೂ ಒಂದು ಅಂತರವನ್ನು ಕತೆಗಾರರು ಕಾಯ್ದಕೊಂಡಿದ್ದಾರೆ! ಜೊತೆ ಜೊತೆಗೆ ಸರಿ ತಪ್ಪುಗಳ ತೀರ್ಮಾನ ಕೊಡದೇ ಇಂತಹ ಕತೆ ಹೆಣೆಯುವುದು ಬಹಳ ಕಷ್ಟ. ಇವೆಲ್ಲವನ್ನು ಮೀರುತ್ತಾ  ತಾಜಾ ಕತೆಯೊಂದನ್ನು ಉಣಬಡಿಸಿದ್ದಾರೆ.

ಇದೆಲ್ಲದಕ್ಕಿಂತ ಪ್ರಮುಖವಾದುದು ನದಿದಾಟಿ ಬಂದವರು ಎಂಬುದು ಅತ್ಯಂತ ಸುಂದರ ರೂಪಕ.  ನಾವು ದಾಟಿ ಬರಬೇಕಾದ ನದಿ ಯಾವುದೆಂದು ನಾವೇ ನಿರ್ಧರಿಸಬೇಕು.

ಕಾಲದೋಣಿಯಲ್ಲಿ ಮತ್ತೆ ಪಯಣ ಮಾಡ ಬಯಸುವ ರಸಿಕರು ಸ್ವಾತಂತ್ರ್ಯೋತ್ತರ ಸ್ಥಿತ್ಯಂತರವನ್ನು ಅಧ್ಯಯನ ಮಾಡಬಯಸುವವರು ಓದಲೇ ಬೇಕಾದ ಹೊತ್ತಿಗೆ ನದಿದಾಟಿ ಬಂದವರು.

ಇವರು ಆಯ್ಕೆ ಮಾಡಿಕೊಂಡ ಮೂರೂ ಕಾದಂಬರಿಗಳ ವಸ್ತು ವಿಭಿನ್ನ. ಹಾಗಾಗಿ ಶಶಿಧರ್ ಹಾಲಾಡಿ ಅವರಿಂದ ಇನ್ನೂ ಹೆಚ್ಚಿನ ಕೃತಿಗಳನ್ನು ವೈಯಕ್ತಿಕವಾಗಿ ನಿರೀಕ್ಷೆ ಮಾಡುತ್ತೇನೆ.


No comments:

Post a Comment

ವಾರೆ ನೋಟ

ಹೊಷಾಯ್ ಹೊಸೆದ ಹೊಸ ಕತೆ….

  ಕಾರ್ಕಳದ ಗೊಮ್ಮಟ ಗಿರಿಯ ಪ್ರತೀ ಮೆಟ್ಟಿಲುಗಳು ಹೊಷಾಯ್ ಕತೆಯನ್ನು ಪ್ರತಿಫಲಿಸುತ್ತದೆ . ಬದುಕಿನ ಬವಣೆಯ ಸಾರವನ್ನು ತೆರೆದಿಡುತ್ತದೆ. ಆತನ ಆರ್ತತತೆ ಪ್ರತೀ ಮೆಟ್ಟಿಲು...