Showing posts with label Shivamogga. Show all posts
Showing posts with label Shivamogga. Show all posts

Monday, July 11, 2011

ಒಂದು ಮರೆಯಲಾಗದ ಅನುಭವ....


ನೆನಪುಗಳ ಸೋನೆ ಮಳೆ.................ಹಿಂಡ್ಲು ಮನೆ 
ನನ್ನ ಚಟಕ್ಕೆ ಬಲಿಯಾದವರು


ಒಂದೊಂದು ಪ್ರವಾಸವೂ ಒಂದು ವಿಶಿಷ್ಟ ಅನುಭವ ಅನೂಭೂತಿಯನ್ನು ನೀಡುತ್ತದೆ. ಅದರಲ್ಲೂ ಜಲಪಾತ ಚಾರಣಗಳು ನೀಡುವ ವಿಶೇಷ ಅನುಭವ ಅನುಭೂತಿಗಳು ವಿಸ್ಮಯ ಘಟನಾ ಸರಣಿಗಳು ಬೇರಾವಾ ಪ್ರವಾಸಗಳಲ್ಲಿ (ದೇವಸ್ಥಾನ, ತೀರ್ಥಕ್ಷೇತ್ರ) ನೀಡಲಾರವು. ಹೀಗೆ ಅವನ್ನು ಮತ್ತೆ ಮತ್ತೆ ನೆನೆದು ನವಿರಾಗಲು ಜೀವನ್ಮುಖಿಯಾಗಲು ಪ್ರೇರೇಪಿಸುತ್ತವೆ. ಈ ವಿಸ್ಮಯಗಳಿಗಾಗಿ ಮತ್ತೆ ಮತ್ತೆ ಚಾರಣಗೈಯಲು ನಮ್ಮನ್ನು ಉತ್ತೇಜಿಸುತ್ತವೆ.
ಬೋರ್ಗೆರೆತದಲಿ ಹಿಂಡ್ಲುಮನೆ, ಎದುರಿಗೆ ನಮ್ಮ ತಂಡದ ಐಕಳು.. 
ಅಂತಹುದೇ ಒಂದು ಘಟನೆ ನಾವು ಹಿಂಡ್ಲು ಮನೆ ಜಲಪಾತ ವೀಕ್ಷಿಸಲು ಹೋದಾಗ ಎದುರಾಯಿತು. ಎಲ್ಲೋ ಓದಿದ ನೆನಪಿನೊಂದಿಗೆ ನಾವೆಲ್ಲಾ ಹಿಂಡ್ಲು ಮನೆಗೆ ಬೆಳಿಗ್ಗೆ 7.00ಕ್ಕೆ ಸಿದ್ದಾಪುರದಿಂದ ಹೊರಟೆೆವು. ಕೊಲ್ಲೂರಿನ ನಾಗೋಡಿ ಘಾಟಿ ಏರಿದೆವು, ಘಾಟಿಯ ಮಂಜಿನಲ್ಲಿ ನಲಿಯುತ್ತಾ ಒಬ್ಬರಿಗೊಬ್ಬರು ಕಾಲೆಳೆಯುತ್ತಾ ಮರಕುಟಿಕ ಎಂಬ ಸ್ಥಳ ತಲುಪಿದೆವು. ಅಲ್ಲಿಂದ ಸುಮಾರು 2 ಕಿ.ಮೀ ಕಾಲ್ನಡಿಗೆಯಲ್ಲಿ ಸಾಗಿದರೆ ಜಲಪಾತಕ್ಕೆ ನಮ್ಮನ್ನು ಕೊಂಡೊಯ್ಯುತ್ತದೆ. ಆಗಸ್ಟ್ ಮಳೆ ಬಂದು ದಾರಿ ತೊಯ್ದಿತ್ತು. ಕಚ್ಚಾರಸ್ತೆಯಲ್ಲಿ ಸ್ವಲ್ಪದೂರ ಸಾಗಿ ನಾವು ದಿಕ್ಕು ತಪ್ಪಿ ಗದ್ದೆ ಬಯಲಿಗೆ ಬಂದೆವು. ಮುಂದೆ ರಾಶಿ ರಾಶಿ ಹಿಂಡಲು ನಮಗೆ ಸ್ವಾಗತ ಕೋರಿದವು ಮುಂದುವರಿಯುವುದು ಸಾಧ್ಯವಿಲ್ಲವೆಂಬಂತೆ ಹಿಂಡಲುಗಳು ಬೆಳೆದಿತ್ತು.

ಹೀಗೆ ದಾರಿ ಹುಡುಕುತ್ತಾ ಮುಂದೆ ಸಾಗಿದ ನನಗೆ ಹಿಂದಿನಿಂದ ನಮ್ಮ ತಂಡದ ಸದಸ್ಯ ಗಣೇಶನ ಬೊಬ್ಬೆ ಕೇಳಿ, ನಾನು ಒಂದೇ ಜಿಗಿತಕ್ಕೆ ಅಲ್ಲಿಗೆ ತಲುಪಿದೆ. ಆತನ ಕಾಲಿನಿಂದ ರಕ್ತ ಒಸರುತಿತ್ತು. ನಾವು ಗಾಬರಿ ಬಿದ್ದೆವು. ಏನಾಯಿತೆಂದು ವಿಚಾರಿಸಿದಾಗ ನಾನು ಸತ್ತೆ!. ನಾನು ಸತ್ತೆ ಎಂಬ ಸತೀಶನ ಬೊಬ್ಬೆ ಮುಂದುವರೆದಿತ್ತು. ಆತನನ್ನು ಸಮಾಧಾನ ಪಡಿಸಿ ಕೇಳಿದಾಗ ರಕ್ತ ಕನ್ನಡಿ ಹಾವು ಕಡಿಯಿತು! ಎಂದು ಹೇಳಿ ನಮ್ಮನ್ನು ಗಾಬರಿಪಡಿಸಿದ! ಮೊದಲೇ ಅಂಜಿಕೆ ಸ್ವಭಾವದ ಆತನನ್ನು ಚಾರಣಕ್ಕೆ ಕರೆತಂದಿದ್ದು ನನ್ನ ತಪ್ಪೆಂದು ತಿಳಿಯಿತು. ಆತನ ಕಾಲಿಗೆ ಸಣ್ಣ ಟವೆಲ್ ಕಟ್ಟಿ ರಕ್ತ ಮೇಲೆ ಹರಡದಂತೆ ಮಾಡಿದೆವು. ಅದಾಗಲೇ ನಮ್ಮ ತಂಡದವರಲ್ಲಿ ಗಡಿಬಿಡಿ ಮನೆ ಮಾಡಿತ್ತು. ಎಲ್ಲರ ಕೋಪಕ್ಕೆ ತುತ್ತಾಗುವ ಸರದಿ ನನ್ನದಾಗಿತ್ತು. ಹಾದಿ ತಪ್ಪಿಸಿದ್ದಿಯ ಎಂದು ಹಿಡಿ ಶಾಪ ಹಾಕಿದರು.
ಹಿನ್ನಲೆಯಲ್ಲಿ ಕೊಡಚಾದ್ರಿ ಮುನ್ನಲೆಯಲ್ಲಿ ನಮ್ಮ ತಂಡ.. 


ಸತೀಶನ ತುತರ್ು ಅಗತ್ಯಕ್ಕೆ ಸ್ಪಂದಿಸುವ ಜವಬ್ದಾರಿ ನನ್ನ ಮೇಲಿದ್ದುದರಿಂದ ಆತನನ್ನು ಸಮಾಧಾನ ಪಡಿಸಿ ಏನಾಯಿತೆಂದು ವಿಚಾರಿಸಿದಾಗ ನಾನೊಂದು ದೊಡ್ಡ ರಕ್ತ ಕನ್ನಡಿ ಹಾವನ್ನು ತುಳಿದೆ, ಅದು ನನ್ನನ್ನು ಕಚ್ಚಿತು ಎಂಬುದು ಆತನ ವಿವರಣೆ, ಹಾವಿದ್ದ ಸ್ಥಳ ನೋಡಲು ಹೋದೆವು. ಗದ್ದೆ ಕಂಠದ ಬದಿಯಲ್ಲೊಂದು ತಗ್ಗಿನ ಸ್ಥಳವನ್ನು ಆತ ತೋರಿದ. ಅಲ್ಲಿ ಹುಡುಕಿದರೆ ರಕ್ತಕನ್ನಡಿ ಹಾವೊಂದು ನಿಶ್ಚಿಂತೆಯಿಂದ ಮಲಗಿತ್ತು.

ಈಗ ನಮ್ಮ ತಂಡ ಸಂದಿಗ್ದಕ್ಕೆ ಬಿದ್ದೆವು ಹಾವು ಕಚ್ಚಿದರೆ ಅದು ಅಲ್ಲಿರುತ್ತಲೇ ಇರಲಿಲ್ಲ, ಆದರೆ ಕಚ್ಚದೆ ಕಾಲಿನಿಂದ ರಕ್ತ ಒಸರುವುದು ಹೇಗೆ? ತೀವ್ರ ಗೊಂದಲಕ್ಕೆ ಬಿದ್ದೆವು.
ಚೆಲುವಾತಿ ಚೆಲುವ ಕನ್ನಿಕೆ 

ನಾವೆಲ್ಲಾ ಗರ ಬಡಿದವರಂತೆ ನಿಂತಿದ್ದಾಗ ನನಗೆ  ಹೇಗೆ ರಕ್ತ ಬಂತೆಂದು ಹೊಳೆಯಿತು. ನಾನು ಸತೀಶನ ಬಳಿಗೆ ಓಡಿ ಗಾಯವನ್ನು ಸೂಕ್ಷ್ಮವಾಗಿ ಪರಿಶೀಲಿಸಿಡೇ. ಒಂದು ದೊಡ್ಡ ಗಾಯ ಮಾತ್ರವಿತ್ತು. ಇನ್ನೊಂದು ಗಾಯ ಸುಮಾರು 5 ಸೆ.ಮೀ. ಆಚೆಗಿತ್ತು. ಹಾಗಾಗಿ ಆತ ಇದು ಹಾವು ಕಡಿದದಲ್ಲಾ ಎಂದು ತೀರ್ಪಿತ್ತೆ. ಹಾಗಾದರೆ ರಕ್ತ?! ಎಂದು ಉಳಿದವರೆಲ್ಲಾ  ಕಿರುಚಿದರು. ಅದು ಇಂಬಳ ಎಂಬ ಜೀವಿ ರಕ್ತ ಹೀರಿ ಹೊದುದರಿಂದ ಉಂಟಾದ ಗಾಯದಿಂದ ಬರುತ್ತಿರುವುದು. ಎಂದಾಗ ಎಲ್ಲರು ಸಮಧಾನದ ನಿಟ್ಟುಸಿರು ಬಿಟ್ಟೆವು. ಹಾವನ್ನು ಕಂಡ ಸತೀಶ ಗಾಬರಿ ಬಿದ್ದು ಭಯದಿಂದ ಸತ್ತೇ ಬಿಡುತ್ತೇನೆಂದು ಗಲಾಟೆ ಎಬ್ಬಿಸಿದ್ದ.


ದೊಡ್ಡ ಗಂಡಾಂತರದಿಂದ ಪಾರಾದ ಎಲ್ಲರೂ ಒಮ್ಮೆ ನಿರುಮಳರಾದೆವು. ಸತೀಶ ನಾಚಿಕೆಯಿಂದ ಮಾತೆ ಹೊರಡದಂತಾಯಿತು. ಮುಂದಿನ ಪಯಣದುದ್ದಕ್ಕೂ ಆತನನ್ನು ಗೋಳು ಹೊಯ್ದುಕೊಂಡೆವು.😂😃😃 ಸುಮಾರು ಒಂದು ಗಂಟೆ ಕಾನನದಿ ಗಗನ ಸ್ಪರ್ಶಿ ಮರಗಳ ನಡುವೆ ಕೊಡಚಾದ್ರಿ ಗಿರಿ ನೋಡುತ್ತಾ ನಡೆದೆವು. ಒಬ್ಬರಿಗೊಬ್ಬರು ಕಾಲೆಳೆಯುತ್ತಾ ಸಾಗಿದೆವು.

ಜಲಾಪಾತವಂತೂ ಅದ್ಭುತವಾಗಿತ್ತು. ಹಂತ ಹಂತವಾಗಿ 14 ಬಾರಿ ಧುಮುಕುವುದೆಂದು ಕೇಳಿದ್ದೆವು. ಆದರೆ ದಾರಿ ತಪ್ಪಿದ್ದರಿಂದ ಕೇವಲ 3 ಹಂತ ವೀಕ್ಷಿಸಿದೆವು. ನಮ್ಮ ತಂಡದಲ್ಲಿ ಹಲವರು ಜಲಪಾತವನ್ನು ಮೊದಲಬಾರಿಗೆ ಭೇಟಿಕೊಟ್ಟಿದ್ದರಿಂದ ರೋಮಾಂಚನಗೊಂಡು ನನ್ನನ್ನು ಆಲಂಗಿಸಿ ಕೊಂಡರು. ನೀರಲ್ಲಿ ಸ್ವಲ್ಪ ಹೊತ್ತು ಆಟವಾಡಿ ತಿಂಡಿ ತಿಂದೆವು. ಕಾನನದ ಏಕಾಂತದಲ್ಲಿ ಕುಳಿತು ಸ್ನೇಹಿತರೊಂದಿಗೆ ಭೋಜನಗೈಯುವುದು ವಿಶಿಷ್ಟ ಅನುಭವ ನೀಡಿತ್ತು. ಏಕಾಂತಕ್ಕೆ ಭಂಗ ತರುವಂತೆ ಆಗಾಗ ಹಕ್ಕಿಯೊಂದು ತನ್ನ ಇರುವಿಕೆ ತೋರಿಸುತಿತ್ತು.

ಅಂತೂ ಹಿಂಡ್ಲುಮನೆ ಜಲಪಾತದ ಚಾರಣ ಒಂದು ವಿಶಷ್ಟ ಘಟನೆಯಿಂದ ಜೀವನದಲ್ಲಿ ಮರೆಯಲಾಗದ ನೆನಪಾಗಿ ಉಳಿದು ಹೊಸ ಪಾಠ ಕಲಿಸಿತ್ತು.

ಹೀಗೆ ಬನ್ನಿ:- ಕೊಲ್ಲೂರುನಿಂದ ನಾಗೋಡಿ ಹೋಗುವ ದಾರಿಯಲ್ಲಿ ಸಾಗಿ ಮರಕುಟುಕ ಎಂಬ ವೃತ್ತದಲ್ಲಿ ನೇರವಾಗಿ 10 ಮಾರು ಮುಂದೆ ಸಾಗಬೇಕು.. ಅಲ್ಲಿಂದ ಬಲಕ್ಕೆ ಹೋಗುವ ಕಚ್ಚಾರಸ್ತೆಯಲ್ಲಿ ಸಾಗಬೇಕು. ಒಂದೆರಡು ಕಿಲೋಮೀಟರ್ ಸಾಗಿದ ನಂತರ ಹಳ್ಳವೊಂದು ಸಿಗುತ್ತದೆ. ಅಲ್ಲಿಂದ ಕಾಲ್ನಡಿಗೆಯಲ್ಲಿ ಕಚ್ಚಾರಸ್ತೆಯಲ್ಲಿ 2 ಕಿಲೋ ಮೀಟರ್ ಪಯಣಿಸಿದಾಗ ಒಂದು ಸಣ್ಣ ಮನೆ ಸಿಗುತ್ತದೆ. ಅಲ್ಲಿಂದ ಮುಂದೆ ಬರುವುದೇ ಕಾಲ್ದಾರಿ. ಆ ಕಾಲ್ದಾರಿಯಲ್ಲಿ ಸುಮಾರು 10 ಇಮಿಷ ಸಾಗಿದಾಗ ಹಿಂಡ್ಲು ಮನೆಯ ದರ್ಶನವಾಗುತ್ತದೆ. ದಟ್ಟ ಹಿಂಡ್ಲುಗಳ ನಡುವೆ ಇರುವುದರಿಂದ ಅದಕ್ಕೆ ಹಿಂಡ್ಲು ಮನೆ ಎಂಬ ಹೆಸರು ಬಂದಿದೆ. ಅಲ್ಲಿನ ಸ್ಥಳೀಯರು ಎಮ್ಮೆ ಹೊಂಡ ಎಂತಲೂ ಕರೆಯುತ್ತಾರೆ.

ಮುಗಿದ ಹನಿ  ;

ಮುಕ್ತ ಈ ಸುಂದರ ಪರಿಸರವನ್ನು ಹಾಗೆಯೇ ಕಾಪಾಡೋಣ, ಆಸ್ವಾದಿಸೋಣ, ಮುಂದಿನ ಜನಾಂಗಕ್ಕೆ ಉಳಿಸೋಣ.

ನೆನಪುಗಳೊಂದಿಗೆ.

ಶ್ರೀದರ ಎಸ್. ಸಿದ್ದಾಪುರ 

ವಾರೆ ನೋಟ

ಅಲೆಮಾರಿಯ ಆಗುಂಬೆ ಹಾಗೂ ಟ್ರೋಗನ್

  ‌ಆಗುಂಬೆ ಎಂಬ ಲಾಂಚ್‌ ಪ್ಯಾಡ್‌  ನಾನಿದನ್ನು ಮಲೆನಾಡಿನ ಹೆಬ್ಬಾಗಿಲೆಂದೇ ಕರೆಯುವೆ. ಯಾವುದೇ ಊರಿಗೆ ಹೋಗಬೇಕಾದರೂ ಉಡುಪಿಯ ನೀವು ಆಗುಂಬೆಯ ದಾಟಿಯೇ ಹೋಗಬೇಕು. ಮೂಡಿಗೆರೆ...