Monday, December 22, 2025

ಜೋಧಪುರದಲ್ಲಿ ಜುಗಲ್‌ಬಂದಿ

 


ಅದೇ ರುಚಿಯ ಅದದೇ ವಾಕ್ಯಗಳು, ಮಾಹಿತಿಗಳಿಂದ ರೋಸಿ ಹೋಗಿ ಬಿಟ್ಟೆ. ಓದದೇ ಹೇಳಬಹುದಾಗಿದ್ದ ಮುಂದಿನ ವಾಕ್ಯ. ಹಳಸಲು ಆಗಬಾರದು ಆದರೆ ಹೇಗೆ? ತಿಳಿಯದ ತಿಳಿಯಾಗದ ಅನವರತ ಜಿಜ್ಞಾಸೆ. ಬಾಲ್ದಿಲಿ ಇಟ್ಟ ನೀರೇ ಸಮುದ್ರವೆಂದು ತಿಳಿವ ಬದುಕು ನಮದಾಗಬಾರದು ಅಲ್ವಾ? ಸಣ್ಣ ಬದಲಾವಣೆಯ ಹನಿಯೊಂದು ಬೇಕಿದೆ. ಹಾಗಾಗಿ ಹೊಸ ವಿನ್ಯಾಸದ ಹುಡುಕಾಟ! ಜೋಧಪುರದಲ್ಲಿ ಜುಗಲ್‌ಬಂದಿ ನಿಮ್ಮ ಮುಂದೆ.

***



ಮೆಹರ್‌ಗಾನ್‌ ಕೋಟೆಯ ಹೊರ ಆವರಣದಲಿ ರಾವಣತಾರ ಸಂಗೀತ ವಾದ್ಯದ ಸ್ವರ ಚಮತ್ಕಾರ. ಬರಹಕ್ಕೆ ನೆನಪಿನ ಜುಗಲ್‌ಬಂಧಿ. ಬಿಸಿಲಿಗೆ ಬೆವರಿನ ಜುಗಲ್‌ಬಂಧಿ. ವಾಸ್ತವಕೆ ಇತಿಹಾಸದ ಜುಗಲ್‌ಬಂಧಿ ಎಂತಹ ಲಯ ವಿಜ್ಞಾನ ಇವರ ನರನಾಡಿಗಳಲ್ಲಿ ಮನಸೋಲದೇ ವಿಧಿ ಇಲ್ಲ. ರಾಜಸ್ಥಾನದ ಜೋಧಪುರದಲ್ಲಿ ಕಂಡ ದೃಶ್ಯಾವಳಿಯ ನೆನಪುಗಳ ಜುಗಲ್‌ಬಂಧಿ ನಿಮ್ಮ ಮುಂದೆ.

***

ಹೋಟೆಲ್ ವೀವ್ ಪಾಯಿಂಟ್ ಕಿಟಕಿ ತುಂಬಾ ಹರಡಿದ ಬೃಹತ್ ಕೋಟೆಯ ಹರವು! ಹೋಟೆಲ್ ಮಾಣಿ ಅಟ್ಟೆ ಅಟ್ಟೆ ಪರೋಟ ತಂದಿಟ್ಟಾಗ ತಿನ್ನುವುದು ಹೇಗೆಂದು ಕಳವಳಗೊಂಡೆ. ಪರೋಟಾಗೆ ಮೊಸರಿನ ಜುಗಲ್‌ಬಂಧಿ. " ಇಲ್ಲಿನ ಬಿಸಿಲಿಗೆ ಬೇಕಾಗುತ್ತೆ ತಿನ್ನಿ ಸಾರ್." ಎಂದ. ಬಿಸಿಲೇ ತಿನ್ನುತ್ತೊ ಬಿಸಿಲಿಗೆ ತಿನ್ನುವುದೋ ಅನುಮಾನ ಕಾಡಿತು. ಕೋಟೆಯ ಗೋಡೆಗಳಂತೆ ಒಂದರ ಮೇಲೊಂದು ಹೇರಿಕೊಂಡಿತ್ತು. ಅಂತು ಇಂತೂ ಕೋಟೆ ನೋಡುತ್ತಾ ಒಂದು ಪರೋಟವನ್ನು ಮೊಸರಿನ ಜುಗಲ್‌ಬಂಧಿಯೊಂದಿಗೆ ತಿಂದು ಮುಗಿಸಿದೆ.

ನೀವು ಸ್ವಲ್ಪ ನೋಡಿ... 😂


ಬಿಸಿಲ ಕೋಲುಗಳು ಕೋಟೆಯ ಗೋಡೆಯೊಂದಿಗೆ ಜುಗಲ್‌ಬಂಧಿ ನಡೆಸಿತ್ತು. ಕೋಟೆಯೊಳಗೆ ಬೆಳಕಿನ ಚಿತ್ತಾರ ಕೆತ್ತಿತ್ತು. ಇಲ್ಲಿಂದ ಹೊರಟಾಗ ಎಂಟು ಗಂಟೆ. ನೀಲಿ ನೀಲಿ ಮನೆಯಿಂದೆದ್ದ ಧೂಮ ಕೋಟೆಯ ಗೋಡೆಯ ಸೋಕಿ ಜುಗಲ್‌ಬಂಧಿ ನಡೆಸಿದ್ದವು. 

ಕೋಟೆ ವದನದ ತುಂಬಾ ರಾಜಸ್ಥಾನಿ ಚಿತ್ತಾರ

ಬನ್ನಿ ಕೋಟೆಯೊಳಗೆ ಹೋಗೋಣ. ಚಿತ್ರಕಾರಗಳಿದ್ದರೂ ಆತನ ಸೃಜನಶೀಲ ಮನಸ್ಸು ಪ್ರತೀ ಕೋನದಲ್ಲೂ ಪ್ರತಿಫಲಿಸುತಲಿತ್ತು. ಕೋಟೆಯ ಮಹಾದ್ವಾರಗಳಲ್ಲೇ ಅತ್ಯಂತ ಸುಂದರವಾದುದು ಜೈಪೋಲ್ 1806ರಲ್ಲಿ ಕಟ್ಟಲ್ಪಟ್ಟಿದ್ದು. ಇದರ ನಿರ್ಮಾತ ಮಾನ್‌ಸಿಂಗ್.




ಅಲ್ಲಿ ಕೆತ್ತಿದ ಆನೆ, ಕುದುರೆಗಳು ಈಗಷ್ಟೇ ಎದ್ದು ಬಂದಂತಿದ್ದವು. ಎರಡನೆಯ ದ್ವಾರ ಫತೇ ಪೋಲ್ ದ್ವಾರ ಯುದ್ದ ಕಾಲದಲ್ಲಿ ಬಿದ್ದ ಗುಂಡುಗಳಿಂದ ನುಜ್ಜು ಗುಜ್ಜಾದ ಮುದುಕನ ಗುಳಿಬಿದ್ದ ವದನದಂತಿತ್ತು!

ಕೋಟೆಯ ಮುಂದಡಿ ಇಟ್ಟರೆ ತುತ್ತಿನ ಚೀಲ ತುಂಬಲೊಬ್ಬ ರಾವಣ್ ತಾರ್‌ವಾದ್ಯವನ್ನು ತನ್ನ ರಾಧೆಯೊಂದಿಗೆ ಬಾರಿಸುತ್ತಿದ್ದ. ಈ ರಾವಣ್ ತಾರದ ಮಧುರ ಆಲಾಪ ಕೋಟೆಯ ಮೌನದೊಂದಿಗೆ ಜುಗಲ್‌ಬಂಧಿ ನಡೆಸಿತ್ತು! ಬಿಸಿಲಿಗೆ ಒಣಗುತ್ತಾ ಚಹವೇ ನಮ್ಮ ಲಕ್ಸೂರಿ ಎಂಬಂತೆ ಹೀರುತಲಿದ್ದರು! ಅವರಿಗೆ ಹತ್ತಿಪ್ಪತ್ತು ನೀಡಲೂ ಹಿಂಜರಿಯುವ ಕೆಲವರು ಒಂದು ದಿನದ ಸಂಗೀತ ಕಾರ‍್ಯಕ್ರಮಕ್ಕೆ ಐದು ಸಾವಿರ ಪೀಕುತ್ತಿದ್ದರು! ರಾವಣ್ ತಾರ್‌ದ ಸ್ವರ ನಮ್ಮ ನಾಡಿಗಳಲ್ಲಿ ವ್ಯಾಪಿಸುತ್ತಿತ್ತು.

 ವಿ ಆಕಾರದ ತುದಿಯಿಂದ ಕೋಟೆಯ ದ್ವಾರ ಪ್ರಾರಂಭವಾಗಿ ಎಡಮಗ್ಗುಲಿನಲಿ ಹೊರಳಿ ಏರುದಾರಿಯೊಂದಿಗೆ ಬಲಕ್ಕೆ ಹೊರಳಿಕೊಂಡಿತ್ತು. ಬೆಟ್ಟದ ಬಳುಕುಗಳನ್ನೇ ಬಳಸಿಕೊಂಡ ಪರಿ ನಿಜಕ್ಕೂ ಅನನ್ಯ. ಬಲಕ್ಕೆ ಕೋಟೆಯ ದ್ವಾರ. ಮಹಲುಗಳು ಗಗನಮುಖಿಯಾಗಿದ್ದವು!



ಚರ್ಮವಾದನದಲ್ಲಿ ಪರಿಣತಿ ಹೊಂದಿದವನನ್ನು ದಾಟಿದರೆ ಕೋಟೆಯ ಕಾವಲುಗಾರರು ಬಿಳಿ ಸಮವಸ್ತೃ ಮತ್ತು ರಾಜಸ್ಥಾನಿ ರುಮಾಲಿನಲ್ಲಿ ಕೋಟೆಯೊಂದಿಗೆ ಜುಗುಲ್‌ ಬಂದಿ ನಡೆಸಿದ್ದರು. ಎಲ್ಲರಿಗೂ ರುಮಾಲು ಸುತ್ತುವುದನು ತೋರಿಸುತಲಿದ್ದರು. ಮಹಲಿನ ಕೆತ್ತನೆ, ಕಾವಲುಗಾರರ ಉಡುಪು ಜುಗಲ್ ಬಂದಿಗಿಳಿದಿತ್ತು. ಮರ್‌ವಾರ ರಾಜರ ಕಲಾ ನೈಪಣ್ಯವಿಲ್ಲಿ ಅನಾವರಣಗೊಂಡಿದ್ದವು. ಒಂದಕ್ಕಿಂತ ಒಂದು ವಿಭಿನ್ನ ಕಿಟಕಿ ಗೋಡೆಗಳ ಕೆತ್ತನೆ ಬಿಸಿಲಿನೊಂದಿಗೆ ಜುಗಲ್‌ಬಂಧಿಗಿಳಿದಿತ್ತು. ಅನೇಕ ಸುತ್ತುಗಳಿಂದ ಸುತ್ತುವರಿದ ಏಳುದ್ವಾರಗಳಿಂದ ಅತಿಭದ್ರ ಕೋಟೆಯಾಗಿ ಉಳಿದಿದೆ. ಈಗಲೂ ಈ ಕೋಟೆ ಮೇವಾರದ ರಾಜ ಗಜಸಿಂಗನ ಹಿಡಿತದಲ್ಲಿದೆ!

ಕರಣೀ ಮಾತೆಯ ಕೃಪೆ 


ಕರಣೀ ಮಾತೆಯ ಕೃಪೆಯಿಂದ ಅಡಿಗಲ್ಲು ಹಾಕಿಸಿಕೊಂಡ ಕೋಟೆ, ಬೆಳಕಿನ ದೇವರು ಸೂರ್ಯನ ಕೋಟೆ ಎಂದು ರಾಜಸ್ಥಾನಿ ಭಾಷೆಯಲ್ಲಿ ಕರೆಸಿಕೊಳ್ಳುವುದು.



ಮರ್‌ವಾರ್ ಸಂಗೀತೋತ್ಸವದ ಸಲುವಾಗಿ ಅನೇಕರು ದೇಸಿ ಸಂಗೀತ ನೃತ್ಯದಿಂದ ನೆರೆದವರನ್ನು ರಂಜಿಸುತ್ತಿದ್ದರು. ಸುಂದರ ಕೆತ್ತನೆಗೆ ದೇಶೀಯ ನೃತ್ಯ ಸಂಗೀತದ ಜುಗಲ್‌ಬಂಧಿ ಕ್ಯಾಮಾರದಲ್ಲಿ ನೃತ್ಯ ಸಂಗೀತ ಬಂದಿ. ಬೆಳಗಿನಿಂದ ಹಾಡು, ಕುಣಿತ ಜೋಶ್‌ನಲ್ಲಿದ್ದರೂ ಸ್ವಲ್ಪವೂ ಬೇಸರ ಅವರ ಮುಖದಲ್ಲಿರಲಿಲ್ಲ. ಮೋತಿ ಮಹಲ್, ಫುಲ್ ಮಹಲ್ ನೋಡಿಕೊಂಡು ಶೀಶ್ ಮಹಲಿನಲ್ಲಿ ಕಾಲಿಟ್ಟರೆ ಅಚ್ಚರಿಗಳ ಜುಗಲ್‌ಬಂಧಿ. ಹಚ್ಚಿಟ್ಟ ಒಂದು ಮೇಣದ ಬತ್ತಿ ಸಾವಿರವಾಗಿ ಕಾಣುತಲಿತ್ತು. ಪುಡಿ ವರ್ಣದ ಅಮೃತಶಿಲೆಗಳಿಂದಾದ, ಶೃಂಗರಿಸಿದ ಮೂರಂತಸ್ತಿನ ಭವನದ ಹೊಸ್ತಿಲಲ್ಲೇ ರಾವಣ್‌ತಾರದ ಮೆಲುದನಿ ಸ್ವರ, ಶಿಲ್ಪದೊಂದಿಗೆ ಜುಗಲ್‌ಬಂದಿಗಿಳಿದಿತ್ತು.




ಹಲವು ಕೋಣೆಗಳಲ್ಲಿ ರಾಜಸ್ಥಾನಿ ಕಲೆ ಬಿಂಬಿಸುವ ವಸ್ತುಗಳಿದ್ದವು. ಕೆಲವು ಕೋಣೆ ಮುಚ್ಚಿದ್ದವು. ಅಮೃತಶಿಲೆಯಲ್ಲಿ ಚಿತ್ತಾಕರ್ಷಕ ಹೂ ಬಳ್ಳಿ. ಜಾಲಾಂಧ್ರ ರಚನೆ ನಿಮ್ಮನ್ನು ಸ್ವಾಗತಿಸುತ್ತೆ. ಮಾರ್‌ವಾರ್ ಹಬ್ಬದ ಸಲುವಾಗಿ ದೇಸಿ ನೃತ್ಯ ದರ್ಬಾರ್ ಹಾಲ್‌ನಲ್ಲಿ ಎದುರಿನ ಅಂಗಳದಲ್ಲಿ ನಡೆಯುತ್ತಿತ್ತು. 



ನೋಡಲೇ ಬೇಕಾದ ನೀಲೂರು

ಊರಿಗೊರೇ ನೀಲಿಕುಡಿದು ನೀಲವಾಗಿ ಕುಳಿತಿತ್ತು. ನೀಲೂರು! ಬ್ಲೂ ಸಿಟಿ ಕ್ಯಾಮರಾಕ್ಕಂತೂ ಪುರುಸೊತ್ತಿರಲಿಲ್ಲ ಊರಿಗೊಂದು ಕಿರೀಟ. ತಣ್ಣಗೆ ಮಲಗಿದ ರಕ್ಕಸಗಾತ್ರದ ಪಿರಂಗಿಗಳು ಇತಿಹಾಸದ ಹಸಿ ಬಿಸಿ ಕಥಾನಕವನ್ನು ಉಣಬಡಿಸುತ್ತಿವೆ. ಕೋಟೆಯನ್ನು ವಶಪಡಿಸಿಕೊಳ್ಳಲು ಬಂದ ಪ್ರತಿಯೊಬ್ಬರಿಗೂ ಅದು ನೀಡಿದ ಉತ್ತರಗಳ ನಿಟ್ಟುಸಿರು ಅಲ್ಲೇ ಇತ್ತು!




 ಫಿರಂಗಿಯ ಮೇಲೆ ಕುಳಿತ ಅಳಿಲು ತನ್ನ ಇನಿಯನೊಂದಿಗೆ ಜುಗಲ್‌ಬಂದಿಗಿಳಿದಿತ್ತು. ಕೈ ಕೈ ಹಿಡಿದ ನವವಿವಾಹಿತರು, ಅಪ್ಪ-ಮಗನ ಜುಗಲ್‌ಬಂದಿ ಕೋಟೆಯ ಛಾವಣಿಯಲ್ಲಿ ಛಾವಣಿಯಿಂದ ಕಾಣುವ ನೀವು ನೋಡದ ಅಮೃತ ಶಿಲೆಯ ತಾಜ್‌ಮಹಲ್ ಮೇಹರ್‌ನ್‌ಗಢದೊಂದಿಗೆ ಜುಗಲ್‌ಬಂದಿಗೆ ಇಳಿದಿತ್ತು. ಮುಳುಗುವ ಸೂರ‍್ಯ ಕತ್ತಲಿನೊಂದಿಗೆ ಜುಗಲ್‌ಬಂದಿಗಿಳಿದಿತ್ತು. ಮಹಲಿನ ಇಂಚಿಂಚು ಅದ್ಭುತ ಕಲಾಕುಸುರಿಯಿಂದ ಅಲ್ಲಿನ ಪಾರಂಪರಿಕ ಉಡುಗೆಯ ಜನರೊಂದಿಗೆ ಜುಗಲ್‌ಬಂದಿಗಳಿದಿತ್ತು. ಎಲ್ಲೆಲ್ಲೂ ಪೊಗದಸ್ತಾದ ಹುರಿ ಮೀಸೆಯ ಹುರಿಯಾಳುಗಳು ರುಮಾಲು ಸುತ್ತಿಕೊಂಡು ಜುಗಲ್‌ಬಂದಿಗಿಳಿದಿದ್ದರು.

ನೋಡಲೇ ಬೇಕಾದ ನೀಲಿಯೂರಿನ ಇತಿಹಾಸ

ರಾವ್ ಜೋಧನಿಂದ 1459ರಲ್ಲಿ ನಿರ್ಮಿಸಲ್ಪಟ್ಟ ಇದು ಮಂಡೋರದ 9 ಕಿ.ಮೀ. ದಕ್ಷಿಣಕ್ಕೆ ಸ್ಥಾಪಿಸಿದ ನಗರ ಜೋಧಪುರ. ಪಕ್ಷಿಗಳ ಗುಡ್ಡವಾಗಿತ್ತು ಒಮ್ಮೆ. ಊರ ನಡುವೆ ಕಾಂತದಂತೆ ಆಕರ್ಷಿಸುವ ಮೇಹರ್‌ಗಾನ್ ಕೋಟೆ. ಸೂರ‍್ಯನ ಆರಾಧಕರ ಸೂರ‍್ಯನ ಕೋಟೆ. ಘಡವಾಲಿಯಾ ಸಮುದಾಯದವರ ಅಪೂರ್ವ ಕಲ್ಲಿನ ಜ್ಞಾನಕ್ಕೊಂದು ಸಾಕ್ಷೀ. ಇವರ ಜೊತೆಗೆ ಬೆರೆತ ಚವಾಲಿಯ ಸಮುದಾಯದವರು ಎಂತಹ ಭಾರವನ್ನು ತಮ್ಮದೇ ತಂತ್ರಗಾರಿಕೆಯಲ್ಲಿ ಎತ್ತಿ ಸಾಗಿಸಬಲ್ಲವರು. ಈ ಎರಡೂ ಸಮುದಾಯದವರು ಪ್ರಕೃತಿಯನ್ನು ಪಳಗಿಸಿದ ಪರಿ ಅನನ್ಯ. ಇಲ್ಲಿನ ನೀರಿನ ಜ್ಞಾನವೂ ಅನನ್ಯ. ಇವರಿಬ್ಬರ ಜುಗಲ್‌ಬಂದಿಯಲ್ಲಿ ನಿರ್ಮಿತ ಈ ಕೋಟೆ ಏಷ್ಯಾದ ಒಂದು ಅತ್ಯುತ್ತಮ ಕಲಾಕೃತಿ! ಇಲ್ಲಿನ ಪ್ರತೀ ಕೋಣೆಯೂ ಗತ ಇತಿಹಾಸವ ಉಸುರುತ್ತದೆ. ಶೃಂಗಾರ ಕೋಣೆ , ಹೌದಾ, ಶೀಶ್‌ ಮಹಲ್‌, ಹೂವಿನರಮನೆ ಮತ್ತು ಹೆಮ್ಮಕ್ಕಳ ಅರಮನೆಯ ಕೋಣೆಯೊಳಗೊಮ್ಮೆ ಹೊಕ್ಕು ಬರೋಣ.

 ಶೃಂಗಾರ ಚೌಕ -

 ಗಜರಾಜ ಸಿಂಗ್ - 1 ರಾಜರನ್ನು ಪ್ರವೇಶಿಸುವ ಅದ್ಭುತ ಜಾಗ. ಅಲ್ಲಿಂದ ಮುಂದೆ ದೌಲತ್ ಖಾನಾ 18ನೆಯ ಶತಮಾನದಲ್ಲಿ ಅಜಿತ್‌ಸಿಂಗ್ ನಿರ್ಮಿತ.(1730) 


 ಆನೆ ಮೇಲೆ ಹೊರಿಸುವ ಹೌದಾಗಳಿಗಾಗಿಯೇ ರಚಿಸಿದ ಕೋಣೆ ನಿಮ್ಮ ಮುಂದೆ ತೆರೆದುಕೊಳ್ಳುತ್ತದೆ. ಮಹರಾಜ ಜಸ್ವಂತ್ ಸಿಂಗ್‌ನಿಗೆ ಶಹಜಾನ್ ನೀಡಿದ ಹೌದಾ ಕೋಟೆಯೊಂದಿಗೆ ಜುಗಲ್ ಬಂದಿಗಿಳಿದಿತ್ತು! ಇದರ ರಚನೆ ನಿಮ್ಮ ಕಣ್ಮನ ಸೆಳೆಯುತ್ತದೆ.

ಇವೆಲ್ಲವನ್ನು ನೋಡಿ ಮುಂದಡಿ ಇಟ್ಟರೆ ಸಿಗುವುದೇ ಅಜಿತ್ ಸಿಂಗ್‌ನ ಶಯನಗೃಹ ಶೀಶ್ ಮಹಲ್. ಅದ್ಭುತವಾದ ಕನ್ನಡಿ ಕಲೆಯಿಂದ ಬೆಳಕು ಕನ್ನಡಿಯೊಂದಿಗೆ ಬೆಳಕಿನ ಜುಗಲ್‌ಬಂದಿ ನಡೆಸಿತ್ತು. ಬನ್ನಿ ಗಾಜಿನ ಮಹಲಿಗೆ ಒಂದು ಸುತ್ತು ಬರೋಣ.

  ಗಾಜಿನ ಮಹಲ್‌ (ಶೀಶ್‌ ಮಹಲ್‌) 



ಶೀಶ್ ಮಹಲ್‌ನ್ನು ಅಜಿತ್‌ಸಿಂಗ್, ಪೂಲ್ ಮಹಲ್‌ನ್ನು ಅಭಯಸಿಂಗರು 17ನೆಯ ಶತಮಾನದಲ್ಲಿ ನಿರ್ಮಿಸಿದ್ದರು. ಕನ್ನಡಿ ಅಳವಡಿಸಿ ಚಿನ್ನ ಲೇಪಿಸಿ ಗೋಡೆ ಸೀಲಿಂಗ್ ಇರುವುದು ಶೀಶ್ ಮಹಲಿನ ವಿಶೇಷತೆ. ಬೆಳಕಿನೊಂದಿಗೆ ಕನ್ನಡಿ ಜುಗುಲ್‌ಬಂದಿಗಿಳಿದಿತ್ತು.

ಶೀಶ್ ಮಹಲಿನ ಕೋಣೆಯ ಬಾಗಿಲ ಬಾಗುವಿನಲ್ಲಿ ಕುಳಿತ ಶಿವ, ಬ್ರಹ್ಮ, ಪಾರ್ವತಿ, ದೇವಿ, ಕೃಷ್ಣ, ಗಣೇಶರ ನಡುವೆ ಸುಂದರ ಜುಗಲ್‌ಬಂದಿ. ಗೋವರ್ಧನ ಗಿರಿಯ ನೆತ್ತಿದ ಕೃಷ್ಣನ ಕೆತ್ತನೆ ಅದ್ಭುತ. ಇಲ್ಲಿ ಕಲೆಯೊಂದಿಗೆ ಬೆಳಕಿನ ಜುಗಲ್‌ಬಂದಿ ನಡೆದಿತ್ತು.

 ಅಭಯಸಿಂಗ್ ನಿರ್ಮಿತ ಹೂವಿನರಮನೆ ಇಲ್ಲಿಂದ ಮುಂದೆ ತೆರೆದುಕೊಳ್ಳುತ್ತದೆ. ಇದೊಂದು ಸಂಗೀತವನ್ನು ಆಲಿಸುವ ಖಾಸಗಿ ವರಾಂಡ ಇಲ್ಲಿಂದ ಮುಂದೆ ತಾಕತ್‌ಸಿಂಗ್ ನಿರ್ಮಿಸಿದ ತಾಕತ್‌ನಿವಾಸದ ಕಲ್ಲುಗಳು ಕಲೆ ನಮ್ಮೊಂದಿಗೆ ಮೌನ ಸಂವಾದಕ್ಕಿಳಿದಿದ್ದವು. 


 ಇವೆಲ್ಲವ ದರ್ಶಿಸಿ ಮುಂದಡಿ ಇಟ್ಟರೆ ಹಳದಿ ಮರಳುಕಲ್ಲಿನ ಅಪರೂಪದ ಕೆತ್ತನೆಯ, ನಿಮ್ಮ ಬಾಯಿಯಿಂದ `ವಾವ್' ಎಂಬ ಉದ್ಗಾರವನ್ನು ಹೊಮ್ಮಿಸುವ ಹೆಮ್ಮಕ್ಕಳ ಅರಮನೆ ಮಂತ್ರಮುಗ್ಧವಾಗಿಸುತ್ತದೆ. ಅರಮನೆಗೊಂದು ಶೋಭೆ ಅರಮನೆಯ ಅತ್ಯಂತ ಹಳೆಯ ಭಾಗವೂ ಇದಾಗಿದೆ. ಮೇವಾರರ ಸೌಂದರ್ಯ ಪ್ರಜ್ಞೆಗೆ ಸಾಕ್ಷಿ ನುಡಿಯುತ್ತದೆ.

ಮೇವಾರ್‌ ಚಿತ್ರಕಲೆ...

  ಮೇವಾರ್‌ ಚಿತ್ರಕಲೆ 17ನೆಯ ಶತಮಾನದಲ್ಲಿ ಪ್ರವರ್ಧಮಾನಕ್ಕೆ ಬಂದಿತು. ಮೊದಮೊದಲು ಮೊಗಲರಿಂದ ಪ್ರಭಾವಿಸಿದ್ದ ಈ ಕಲೆ ತದನಂತರ ತನ್ನದೇ ವಿಶಿಷ್ಟತೆಯ ಚಾಪ್‌ನ್ನು ಪಡೆದುಕೊಂಡಿತು. ಉಗುರಿನ ಮೇಲೆ ಇವರು ಮೂಡಿಸುವ ಚಿತ್ರ ಒಂದು ಅದ್ಭುತ ಕಲೆ. ಬಟ್ಟೆ ಮೇಲೆ ಮೂಡಿಸುವ ಅವರ ಕಲೆ ಅಪೂರ್ವ. ಇಂದಿಗೂ ನಮ್ಮ ಮನೆಯಲ್ಲಿ ಬಟ್ಟೆ ಮೇಲೆ ರಚಿಸಿದ ಸುಂದರ ಚಿತ್ರವೊಂದು ರಾಜಸ್ಥಾನದ ಮೇವಾರ್‌ ಕಲೆಯ ಜುಗಲ್‌ಬಂದಿ ನಡೆಸಿತ್ತು. ಇಲ್ಲಿಂದ ನಾವು ಹೊದ ಶಿಲ್ಪಗ್ರಾಮವು ರಾಜಸ್ತಾನಿ ಕಲೆಯನ್ನು ಅನಾವರಣಗೊಳಿಸುವ ಸಂಸ್ಕೃತಿಕ ನಿಲ್ದಾಣ. ಮುಂದಿನ ಜನಾಂಗಕ್ಕೆ ಕಲೆ ಸಂಸ್ಕೃತಿಯನ್ನು ಪರಿಚಯಿಸಲು ಅವರು ರೂಪಿಸಿಕೊಂಡು ನಿರ್ವಹಿಸುವ ತಾಣ. ನಿವಿಲ್ಲಿಗೆ ಭೇಟಿ ಕೊಟ್ಟಾಗ ತಪ್ಪದೇ ಹೋಗಿಬನ್ನಿ.

ಇಲ್ಲಿನ ಇಂಡೋ ಮೊಘಲ್ ಶೈಲಿಯ ಕಟ್ಟಡಗಳು ಒಂದಕ್ಕಿಂತ ಒಂದು ಭಿನ್ನ. ಎಲ್ಲಿ ಹೋಗಿ ಎಲ್ಲಿಂದ ಹೊರಬರುವುದೋ ಎಲ್ಲವೂ ಗೋಜಲು. ಕರನಿಮಾತೆಗೆ ನಮಸ್ಕರಿಸಿ ಕೋಟೆಯ ನೆತ್ತಿ ತಲುಪಿದರೆ ನಾಲ್ಕಾರು ಪಿರಂಗಿಗಳು ಮುಳುಗುವ ಸೂರ‍್ಯನೊಂದಿಗೆ ಜುಗಲ್‌ಬಂದಿಗಿಳಿದಿದ್ದವು.

 ಹಳದಿ ಮರಳು ಕಲ್ಲು, ಬಿಸಿಲಕೋಲು, ಅಮೃತಶಿಲೆಯ ಜಸವಂತ್ ಥಾಡಾ ನಮ್ಮ ಮನಸ್ಸಿನೊಂದಿಗೆ ಬೆರೆತು ಸದಾ ಜುಗಲ್‌ಬಂದಿಗಳಿದು ನೆನಪುಗಳನ್ನು ಮುನ್ನಲೆಗೆ ತರುತ್ತಲೇ ಇದೆ. 



Friday, October 24, 2025

ನೀರಿಗೆ ಬಿದ್ದ ಆಕಾಶದ ನೀಲಿ !

 


ಪೂರ್ವಾಪರ

ಮೇಘಾಲಯದ ಮೂರು ಬುಡಕಟ್ಟುಗಳು ಮೂರು ಬೆಟ್ಟಗಳಲ್ಲಿ ತಮ್ಮನ್ನು ಕಂಡು ಕೊಂಡವರು. ಸರಳರೂ ಮತ್ತು ಪ್ರಾಮಾಣಿಕರು. ಖಾಸಿ, ಗಾರೊ ಮತ್ತು ಜಟಿಂತ್ಯಾ ಬೆಟ್ಟದ ಬುಡಕಟ್ಟಿನವರು. ಎಲ್ಲರೂ ಬೆಟ್ಟಗಳ ನೆತ್ತಿಯಲಿ ಪುಟಾಣಿ ಮನೆ ಕಟ್ಟಿಕೊಂಡು ಬಿದಿರು, ಹಿಡಿಕಟ್ಟು, ಕಿತ್ತಳೆ, ಅಕ್ಕಿ ಬೆಳೆದುಕೊಂಡು ತಮ್ಮದೇ ಜಗತ್ತು ಮತ್ತು ಭಾಷೆ ಹಬ್ಬವನು ಸೃಷ್ಟಿಸಿಕೊಂಡು ಖುಷಿಯಾಗಿರುವವರು. 

ಕಳೆದ ಪ್ರವಾಸದ ವೇಳೆ ಖಾಸಿ ಬೆಟ್ಟಗಳಲ್ಲಿ ಅಲೆದು ಬಂದಿದ್ವಿ. ಈ ಬಾರಿಯ ಪ್ರವಾಸದ ವೇಳೆ ಜಟಿಂತ್ಯಾ ಮತ್ತು ಗಾರೋ ಬೆಟ್ಟಗಳ ಕೆಲವೊಂದು ಬೆಲ್ಲದಂತಹ ಜಾಗಗಳ ತಡುವಲು ಹೊರಟೆವು. ಗಾರೋ ಬುಡಕಟ್ಟುಗಳಂತೆ ಜಟಿಂತ್ಯಾ ಬುಡಕಟ್ಟು ಕುಳ್ಳಗಿನ ಜನ, ಸ್ವಲ್ಪ ದಪ್ಪಗಿನ ಮೈಕಟ್ಟು, ಗೋಧಿ ಬಣ್ಣ.


ಸ್ವಚ್ಛಂದ ಬೆಳಿಗ್ಗೆ

ನೀಲ ಗಗನಕ್ಕೇರಿದ ಸೂರ‍್ಯ ನಮ್ಮ ಹೊಸ ದಿನದತ್ತ ಕೈಚಾಚುತಲಿದ್ದ. ಚಳಿ ರಗ್ಗನು ಮೆಲ್ಲಗೆ ಸರಿಸುತಲಿದ್ದ. ನಸುಕಿಗೆ ಎದ್ದು ಬಿರಿದ ಚೆರಿ ಹೂಗಳ ನಲಿವನು ನೋಡುತ್ತಾ ಶಿಲ್ಲಾಂಗಿನಿಂದ ಜವಾಯಿ ಕಡೆಗೆ ಹೋಗಲು ಅಂಜಲಿ ಎಂಬ ಜಂಕ್ಷನ್ ಬಳಿ 57 ಕಿ.ಮೀ ದಾರಿಗಾಗಿ ಒಂದು ಲಟಾರಿ ಟಾಟಾ ಸುಮೋ ಬಾಡಿಗೆಗೆ ಪಡೆದೆವು. ನಮ್ಮನ್ನೇ ದೇವರೆಂಬಂತೆ ಚಂದಗೆ ಕೂರಿಸಿಕೊಂಡು ಖಾಸಿ ಬೆಟ್ಟಗಳ ನಡುವೆ ಹೊರಟ. ಚಾಲಕನ ಖುಷಿಗೆ ಪಾರವೇ ಇರಲಿಲ್ಲ!


ವಾಹನದಲ್ಲಿ ಪಚೀತಿ

ಹಾದಿಗೊಬ್ಬರು ನಮ್ಮ ವಾಹನಕ್ಕೆ ಕೈ ಅಡ್ಡ ಹಾಕುತಲಿದ್ದರು! ಇರಲಿ ಇನ್ನೊಂದಿಬ್ಬರನ್ನು ಕೂರಿಸಿಕೊ ಅವರು ಕಾಯಬೇಕಲ್ಲ ಪಾಪ ಎಂದೆವು ಚಾಲಕನಲ್ಲಿ. ತನ್ನ ಅರ್ಧ ಸೀಟ್‌ನ್ನು ಇನ್ನೊಬ್ಬರಿಗೆ ಬಿಟ್ಟುಕೊಟ್ಟು ನಾವೇ ಹೌಹಾರುವಂತೆ ಮಾಡಿದ. ಗೆಳೆಯನ ಬಳಿ ಇಬ್ಬರು ತರುಣಿಯರು ಸೀಟು ಹಂಚಿಕೊಂಡರು! ನನ್ನ ಕಾಲ ಬುಡದಲ್ಲೂ ಒಬ್ಬನನ್ನು ತುರುಕಿ ಕೂರಿಸಲು ನೋಡಿದ, ನಾವೇ ಮುಫ್ತಿನಲಿ ಹೋಗುತ್ತಿದ್ದೇವೇನೊ ಎಂಬ ಭಾವನೆ ಮೂಡಿಸಿ, ಏನೂ ಆಗದವನಂತೆ ವೀಳ್ಯ ಜಗಿಯತೊಡಗಿದ. 

ಹಳೆ ವಾಹನಗಳ ಪ್ರದರ್ಶನ ರಸ್ತೆ

ಚಳಿಗೆ ಪತರುಗುಟ್ಟುತ್ತಾ ಕೆಲವು ಪ್ರವಾಸಿಗರು ಬೈಕ್ ಸವಾರಿ ಮಾಡುತಲಿದ್ದರು! ಪಾಪ. ಎಲ್ಲೂ ಕಾಣ ಸಿಗದ ವಿಶಿಷ್ಟ ವಿನ್ಯಾಸದ ಹಳೆ ಕಾಲದ ವಾಹನಗಳು ಒಂದೊಂದೇ ಹಾದು ಹೋದವು. ನಾವೇನು ಟೈಮ್‌ ಮೆಷಿನ್‌ ನಲ್ಲಿ ಹಿಮ್ಮುಖವಾಗಿ ಪ್ರಯಾಣ ಮಾಡುತ್ತಿಲ್ಲ ತಾನೆ ಎಂದು ನನ್ನನ್ನೇ ಚಿವುಟಿ ಕೊಂಡೆ. ಕೆಲವು ಹಳೆ ವಾಹನಗಳು ತಮ್ಮೆಲ್ಲ ನಟ್ಟು ಬೋಲ್ಟು ಕಳಚಿಕೊಂಡು ಸುಮ್ಮನೆ ರಸ್ತೆ ಪಕ್ಕದಲ್ಲಿ ಹೋಗಿ ಬರುವ ವಾಹನಗಳ ಲೆಕ್ಕ ಮಾಡತೊಡಗಿದ್ದವು. ಎರಡನೆಯ ಮಹಾಯುದ್ಧ ಕಾಲದ ಕೆಲವು ಜೀಪುಗಳೂ ನಮ್ಮನ್ನು ಕಾಣಲು ಬಂದವು. ಜವಾಯಿಯಿಂದ ಹೊರಟ ಹಳೆ ಕಾಲದ ಬಸ್ಸುಗಳು ಕೆಲವು ದರ್ಶನಕೊಟ್ಟವು. 30 ವರ್ಷಗಳ ಹಿಂದೆ ಇಂತಹುದೇ ವಾಹನಗಳ ಕಂಡಿದ್ದೆ. ಹಳೆಯ ನೆನಪುಗಳು ತೊಟ್ಟಿಕ್ಕತೊಡಗಿತು. ರಸ್ತೆ ಬದಿಯಲ್ಲಿ ಕೆಲವು ಹಳೆ ವಾಹನಗಳು ತಮ್ಮ ಅಂಗಾಂಗ ಪ್ರದರ್ಶಿಸುತ್ತಾ ನಿಂತಿದ್ದು ಏಕೆಂದು ಗೊತ್ತಿಲ್ಲ.
ಇಲ್ಲಿ ಕಣ್ಣು ಹಚ್ಚಿದ್ದಲ್ಲೆಲ್ಲಾ ಭತ್ತದ ಗದ್ದೆಗಳು. ಶೀಟು ಹೊದ್ದ ಪುಟಾಣಿ ಮನೆಗಳು. ದಾರಿಗುಂಟಿದ ಓಕ್ ಮತ್ತು ಫೈನ್ ಮರಗಳು ಶುಭಕೋರಲು ನಿಂತಿದ್ದವು. ಚಾಲಕನಿಗೆ ನಮ್ಮೊಂದಿಗೆ ಹರಟಲು ನೂರಾರು ವಿಷಯಗಳಿದ್ದವು. ಗಳಿಗೆಗೊಮ್ಮೆ ಏನೇನೋ ಹೇಳುತ್ತಿದ್ದ. ಒಂದೂ ಅರ್ಥವಾಗುತ್ತಿರಲಿಲ್ಲ. ನಾಲಿಗೆ ಹೊರಳದ ನಾಡಿನಲ್ಲಿ ಏನು ಮಾತನಾಡುವುದು ತಿಳಿಯದಾದ ನಾನೂ ಸುಮ್ಮನಾದೆ. 


ಊರ ಹೆಬ್ಬಾಗಿಲಿನಲ್ಲಿ 

ಅಂತೂ ಒಂಭತ್ತರ ಸುಮಾರಿಗೆ ಜವಾಯಿಯ ಬಳಿ ಇಳಿಸಿ ಹೋದ. ವೀಳ್ಯ ಜಗಿಯುವ ಕೆಂದುಟಿಯ ಯುವಕರು, ಯುವತಿಯರು, ಸುಣ್ಣದ ಹಚ್ಚೆ ಹಾಕಿಸಿಕೊಂಡ ಕಟ್ಟಡಗಳ ನೋಡುತ್ತಾ ಖಾಸಿ ಗೆಳೆಯನ ನಿರೀಕ್ಷೆ ಮಾಡತೊಡಗಿದೆವು. ಊರ ಸಂತೆಯೊಂದು ಸಣ್ಣ ಓಣಿಯಲ್ಲಿ ಚಿತ್ರ ವಿಚಿತ್ರ ವಸ್ತುಗಳನ್ನಿಟ್ಟು ಮಾರುತ್ತಿದ್ದರು. ಹೋಗೋಣವೆನ್ನುವಷ್ಟರಲ್ಲೇ ಖಾಸಿ ಗೆಳೆಯನ ವಾಹನ ನಮ್ಮನ್ನು ಹೊತ್ತೊಯ್ಯಲು ಬಂದಿತು.
ಅಲ್ಲಿಂದ ಖಾಸಿ ಗೆಳೆಯನ ವಾಹನದಲ್ಲಿ ಗೊತ್ತು ಗುರಿ ಇಲ್ಲದೆ ಜಲಪಾತವೊಂದಕ್ಕೆ ಪ್ರಯಾಣ ಬೆಳೆಸಿದೆವು. ಗಡಿಗಡಿಗೆ ಒಂದರಂತೆ ಅರುಚಿಯ ವೀಳ್ಯ ಜಗಿಯುತ್ತಾ ಕಾಡು ಹರಟೆ ಕೊಚ್ಚುತ್ತಾ ಕ್ರೇಮ್‌ಸೂರಿ ಜಲಧಾರೆಯತ್ತ ಹೊರಟೆವು. ಇಲ್ಲಿ ಪ್ರತಿಯೊಬ್ಬರೂ ವೀಳ್ಯ ಜಗಿಯುವವರೇ. ಬೆಳೆಯೂ ಕಡಿಮೆ. ಹಾಗಾಗಿ ಅಡಿಕೆಗಿಲ್ಲಿ ಚಿನ್ನದ ಬೆಲೆ. ವ್ಯಾಪಾರ ಕುದುರಿಸುವ ಮಾತುಕತೆಯೂ ಆಯಿತು! ಮತ್ತೆ ಮುಂದುವರಿದಂತೆ ಕಾಣಲಿಲ್ಲ.









ಬೆಟ್ಟದಿಂದ ಬಯಲಿಗೆ.

ಜವಾಯಿಯಿಂದ ಡೌಕಿ ದಾರಿಯಲ್ಲಿ ಹೊರಬಿದ್ದು ನಾಲ್ಕಾರು ಕಿಲೋಮೀಟರ್‌ ಬಂದರೆ ವಿಶಾಲ ಬಯಲೊಂದು ತೆರೆದುಕೊಳ್ಳುತ್ತದೆ. ಬಯಲ ಮೇಲೆ ಹರಡಿದ ಸ್ಪಟಿಕ ಶುಭ್ರ ಜಲಧಾರೆಗಳು. ಚಂದಕ್ಕಿಂತ ಚಂದ. ಜೋವಾಯಿಯಿಂದ ೨೪ ಕಿಲೋಮೀಟರ್‌ ಚಲಿಸಿ ಒಂದೆಡೆ ಎಡಕ್ಕೆ ಹೊರಳಿ 4-5 ಕಿಲೋಮೀಟರ್‌ ಕ್ರಮಿಸಬೇಕು. ಜಟಿಂತ್ಯಾ ಮೋನೋಲಿತ್‌ ಸಹ ನಡುವೆ ಕಾಣ ಸಿಗುತ್ತದೆ. ನಡು ದಾರಿಯ ಹುಲ್ಲುಗಾವಲಿನಲಿ ಎಡಬದಿಯಲ್ಲಿ ಹಿರಿಯರ ಸಮಾಧಿಸಹ ಕಾಣಸಿಗುತ್ತದೆ. ಮಾಸ್ತಿ, ವೀರಗಲ್ಲುಗಳಂತೆ ಅನಾಥವಾಗಿ ನಿಂತು ತಮ್ಮ ಹಿರಿಯ ತಲೆಮಾರಿನ ಕತೆ ಹೇಳುತ್ತವೆ. ಇಂತಹ ದೊಡ್ಡ ಸಮಾಧಿಗಳು ಮೇಘಾಲಯದ ಸುತ್ತಮುತ್ತ ಬಹಳಷ್ಟಿದೆ. ಕಾಣದ ಇತಿಹಾಸದ ಕಗ್ಗತ್ತಲಿನಲ್ಲಿ ಪಯಣಿಸುವ ಆಸಕ್ತಿ ಇರಬೇಕಷ್ಟೆ. ಮಾತು ಮಥಿಸುತ್ತಾ ಜಲಪಾತದ ಹೆಬ್ಬಾಗಿಲಿಗೆ ಬಂದಿದ್ದೆವು. ಇಲ್ಲಿಂದ ಇಪ್ಪತ್ತರಿಂದ ಮವತ್ತು ನಿಮಿಷಗಳ ಅವರೋಹಣ.
ಪ್ರಪಾತಕ್ಕೆ ಬಾಯ್ತೆರೆದ ದಾರಿಯಲ್ಲಿ ಪ್ರತಿಯೊಬ್ಬರೂ ಇಲ್ಲಿ ತಲೆಗೆ ಐವತ್ತರಂತೆ ಸುಂಕ ಕಟ್ಟಿ ನೂರಾರು ಕೆಂಪು ಕಲ್ಲಿನ ಮೆಟ್ಟಿಲಿಳಿಯಬೇಕು. ಅರಿವೆಂಬ ಹರಿವು ಮನದ ಭಿತ್ತಿಯಲಿ ಹರಿದಂತೆ ಜಲಧಾರೆ ನೀಲಿ ಕುಡಿದ ಆಕಾಶದಂತೆ ಭಾಸವಾಗುತ್ತದೆ. ಆಕಾಶದ ನೀಲಿಯನ್ನೇ ಕದ್ದ ಜಲಧಾರೆ ತಣ್ಣಗೆ ಹರಿಯುತ್ತಲೇ ಇತ್ತು. ಕೆಳಗಿಳಿಯುತ್ತಲೇ ಕಿವಿ ತೂತಾಗುವಂತೆ ನೀರು ಮತ್ತು ಜೀರುಂಡೆಯ ಸದ್ದು ಕಿವಿತುಂಬುತ್ತದೆ. ಕುಂದಾಪುರ ಭಾಷೆಯಲ್ಲಿ ಹೇಳುವುದಾದರೆ ಒರ್ಲುತ್ತಿತ್ತು!! 







ಆಕಾಶದ ನೀಲಿಯನ್ನೇ ಕದ್ದ ಜಲಧಾರೆ.

ಅನಂತ ಕಾಲದಿಂದ ಹರಿದು ಬಂದ ನದಿಯೊಂದು ಬೆಟ್ಟದ ಕಣಿವೆಗಳಲ್ಲಿ ನುಗ್ಗಿ ಬಯಲಿಗೆ ಜೀಕಿ ಕಡಲೊಡಲ ಸೇರಲು ತವಕಿಸುತ್ತದೆ. ತನ್ನ ತನವ ಕಳಕೊಳ್ಳುತ್ತದೆ. ನದಿಯೊಂದು ಸದಾ ಹರಿಯಲೇ ಬೇಕು. ಹರಿದಾಗಲೇ ಅದಕ್ಕೆ ಅಸ್ತಿತ್ವ. ಗಮ್ಯ ತಲುಪಲು ನೂರಾರು ಏರು ತಗ್ಗು. ಇದರಿಂದಲೇ ಜಲಪಾತವೊಂದು ಸೃಷ್ಟಿಯಾಗುತ್ತದೆ.
ನೀರಿಗೆ ಮೆತ್ತಿದ ಬಣ್ಣ, ಸೋತ ಮನಕ್ಕಿಲ್ಲಿ ಉಲ್ಲಾಸದ ಬುಗ್ಗೆ. ಕಡುನೀಲ ತೆಳು ಹಸಿರ ಸ್ಫಟಿಕ ಸದೃಶ ಪ್ರಾಂಜಲಾಂಬುಧಿ ಧುಮುಕುತಿದೆ ನೋಡಲ್ಲಿ ಶಿವನ ಜಟೆಯಿಂದೆಂಬಂತೆ. ಸುತ್ತಲೂ ಕವುಚಿಕೊಂಡ ಕಾಡ ನಡುವೆ ವೈಯಾರದಿ ಬಳುಕಿ ಧುಮುಕುವ ವೈಯಾರಿಣಿ. 




ಹರಿವೆಂಬ ಹೊಸ ಅರಿವು

 ಈ ಜಲಧಾರೆಯ ಹರಿವಿಗಡ್ಡವಾಗಿ ಸಿಕ್ಕಿಸಿಕೊಂಡಂತೆ ಬೃಹತ್ ಬಂಡೆ ಹೊರಚಾಚಿದೆ. ಬಂಡೆಯಿಂದ ಜಾರಿದ ನೀರು ನವಿರಾಗಿ ಹರಿಯುತ್ತದೆ. ಪಶ್ಚಿಮ ಘಟ್ಟದಲ್ಲಿ ಧುಮುಕುವ ಜಲಪಾತದಡಿ ಹೋಗಲಸಾಧ್ಯ. ಆದರೆ ಇಲ್ಲಿ ನೀವು ಜಲಪಾತದಡಿ ನಿದ್ರಿಸಬಹುದು. ನಾನಲ್ಲಿ ಹೋಗಿ ನಿಂತು ಒಂದಿಷ್ಟು ಫೋಟೊ ಕ್ಲಿಕ್ಕಿಸಿದೆ. ನೀರಂತೂ ನೀಲ ಮಣಿ ಸ್ಪಟಿಕ. ದುರ್ಯೋಧನ ಅಡಗಲಾರದಷ್ಟು ಸುಸ್ಪಷ್ಟ. ಜಲಪಾತದ ಹೊಂಡದಲಿ ಕೆಲವರು ಲೈಫ್ ಜಾಕೆಟ್ ತೊಟ್ಟು ಈಜುತ್ತಿದ್ದರು. ಜಲಪಾತದಡಿ ತಲುಪಿದ ಕೆಲವರು ಪನ್ನೀರ ಅಭಿಷೇಕಕ್ಕೆ ತಲೆಕೊಟ್ಟು ಸುಖಿಸುತ್ತಿದ್ದರು. 
ಯಾವುದೇ ಮರಗಳಿಗೆ ಹಾನಿಯಾಗದಂತೆ ರೋಪ್‌ವೇ ಜಲಪಾತದೆದುರೇ ನಿರ್ಮಿಸಲಾಗಿದೆ. ಜಲಧಾರೆಯ ಮೇಲಿನ ಹರಿವಿನಲ್ಲಿ ಬೋಟಿಂಗ್ ವ್ಯವಸ್ಥೆ ಮಾಡಲಾಗಿದೆ. ಆಕಾಶದ ನೀಲಿ ಕುಡಿದ ನೀರಲಿ ತೇಲುತ್ತಾ ಬೋಟಿಂಗ್ ಮಾಡುವುದು ಒಂದು ರೋಚಕಾನುಭ! ಆಕಾಶದಲಿ ದೋಣಿ ಬಿಟ್ಟಂತಹ ಭ್ರಮೆ ಭರಿಸುವ ಅನುಭವ. ನೀರೋ ಆಕಾಶ ನೀಲಿ. ಕೆಲವೆಡೆ ಪಚ್ಚೆ ಹಸಿರು! 
ಕ್ರೆಮ ಸುರಿ ಜಲಧಾರೆ ಡಾರ್ವೆ ನದಿ ಸೇರಿ ತನ್ನ ಹರಿವನ್ನು ಕೊನೆಗೊಳಿಸುತ್ತದೆ. ಜೂನ್‌ನಿಂದ ಆಗಸ್ಟ್ ತನಕ ಅಬ್ಬರಿಸಿ ಸಪ್ಟೆಂಬರ್ ಬಳಿಕ ಮಂದಗಮನೆಯಾಗುತ್ತಾಳೆ. ಏಪ್ರಿಲ್ ಸುಮಾರಿಗೆ ತನ್ನೊಡಲ ಬರಿದು ಮಾಡಿಕೊಳ್ಳುತ್ತಾಳೆ. 
ನೀಲಕಂಠನ ನೆನಪು ಮಾಡಿಸುತ್ತಾ ಜಗದ ನೀಲಿ ನುಂಗಿದ ಜಲಪಾತ ನಗುತ್ತಲೆ ಬೀಳ್ಕೊಟ್ಟಿತು. ಚಂದ್ರಶೇಖರನ ಜಟೆಯ ಚಂದ್ರನಂತೆ ಅರ್ಧ ಚಂದ್ರನ ಕಾಮನಬಿಲ್ಲು ಮೂಡಿ ಮರೆಯಾಗಿ ಹೊಸ ನೋಟ ಹೊಸ ಹೊಳೆಹು ಒದಗಿಸಿತು. ಎಲ್ಲಾ ಕ್ಯಾಮರಾಗಳು ಕೂಡಲೇ ಸಚೇತನಗೊಂಡವು. ಕಾಮನಬಿಲ್ಲನು ಕಂಡ ಕಣ್ಣು ಜಲಪಾತದಿಂದ ಕಣ್ಣು ಕೀಳಲು ಮನಸ್ಸೊಪ್ಪದೇ ಹಾಗೆ ನೋಡುತ್ತಲೇ ಇತ್ತು. ಜಲಪಾತದ ಉಜಾಲ ನೀಲಿ ನೀರಲಿ ತೇಲಬೇಕೆಂಬ ಅದಮ್ಯ ಹಂಬಲವನು ಹತ್ತಿಕ್ಕಿ ಹೊರಟು ನಿಂತೆ!
ಜಲಪಾತದ ಹಿಂದೆ ಚಿಕ್ಕ ಡ್ಯಾಂ ಒಂದನ್ನು ನಿರ್ಮಿಸಿ ಸ್ಪಟಿಕ ಶುಭ್ರ ನೀರಿನಲ್ಲಿ ಬೋಟಿಂಗ್ ವ್ಯವಸ್ಥೆ ಮಾಡಿದ್ದಾರೆ. ನದಿಯಲಿ ತೇಲುವ ಮನಸಿದ್ದರೂ ಸಮಯವಿರಲಿಲ್ಲ. ಇಲ್ಲಿಂದ ನಾವು ಹೊರಟದ್ದೇ ಹೊಟ್ಟೆ ಪೂಜೆಗೆ. ಬೆಳಿಗ್ಗೆ ಸಹ ಸರಿಯಾಗಿ ಏನೂ ತಿಂದಿರಲಿಲ್ಲ.
ಜಟಿಂತ್ಯಾ ಬೆಟ್ಟಗಳ ವಿಶಿಷ್ಟ ರುಚಿಯ ಊಟವೊಂದಕ್ಕೆ ಸಾಕ್ಷಿಯಾಗಿ ಡಾವ್ಕಿ ನದಿ ನೋಡಲು ವೀಳ್ಯ ಜಗಿಯುತ್ತಾ ಹೊರಡಿಸಿದ ಖಾಸಿ ಗೆಳೆಯ. ಡಾವ್ಕಿ ನದಿಯದು ಇನ್ನೊಂದು ಕತೆ. ಪುರುಸೊತ್ತಾದಾಗ ಅರಹುವೆ.



ಬಾಂಗ್ಲಾ ಸನಿಹದ ಬಾಕೂರ್

ಬಾಂಗ್ಲಾಗೆ ತಾಕಿಕೊಂಡ ಬಾಕುರ್‌ ಹಳ್ಳಿ ಪ್ರವಾಸಿಗರಿಲ್ಲದೇ ಬಿಕೋ ಎನ್ನುತ್ತಿತ್ತು. ಬಾಂಗ್ಲಾ ಪ್ರವೇಶಿಸದೇ ಹಲವು ಬಾಂಗ್ಲಾ ನೋಟುಗಳನ್ನು ಸಂಪಾದಿಸಲು ಇಲ್ಲಿಗೆ ಬಂದಿದ್ದೆವು! ನನಗಂತೂ ಬಾಂಗ್ಲಾ ಗಡಿಯಾಚೆ ಹೋಗಬೇಕೆಂಬ ತವಕವಿತ್ತು. ಬಿಗಿ ಭದ್ರತೆಯಿಂದಾಗಿ ಅದು ಸಾಧ್ಯವಾಗಲಿಲ್ಲ. ಡಾವ್ಕಿ ನದಿ ತನ್ನ ಮೇಲಿರುವ ದೋಣಿಗಳನ್ನು ಪಚ್ಚೆ ಹಸಿರು ನೀರಲ್ಲಿ ಪ್ರತಿಫಲಿಸುತ್ತಿತ್ತು.





ಹಗಲು ರಾತ್ರಿ ಎನ್ನದೇ ನದಿಯೊಂದು ಯಾರೂ ಭಾರತದೊಳಗೆ ನುಸುಳದಂತೆ ಕಾವಲಿಗೆ ನಿಂತಿದೆ. ಬಾಂಗ್ಲಾದಿಂದ ಹಲವರು ಈ ನುಸುಳುದಾರಿಯಲ್ಲೇ ಒಳ ಬರುತ್ತಾರೆ ಎಂಬುದು ಗೆಳೆಯನ ಅಂಬೋಣ. ನದಿ ಬಲ ಕಳಕೊಂಡ ಕಡೆಗಳಲ್ಲಿ ನುಸುಳುಕೋರರು ಸದಾ ಒಳನುಗ್ಗುತ್ತಲೇ ಇರುತ್ತಾರೆ. ದೇಶದ ವಿವಿಧ ನಗರಗಳಲ್ಲಿ ಹರಡಿ ವೈರಸಿನಂತೆ ಹಬ್ಬುತ್ತಾರೆ ಎಂದು ಕರೆದುಕೊಂಡು ಬಂದ ಗೆಳೆಯ ಉಸುರಿದ. ಮನದಲ್ಲೇನೋ ಕ್ಲೇಶ, ಕಳವಳ, ಕಸಿವಿಸಿ, ಅಸ್ತವ್ಯಸ್ತತೆ. ಬಾಕುರ್ ಹಳ್ಳಿಯ ಬಾಜುವಲ್ಲೇ ಕಂಡ ಬಾಂಗ್ಲಾದ ಹಸಿ ಹಸಿ ನೆನಪುಗಳೊಂದಿಗೆ ಹಿಂದಿರುಗಿದೆವು.

Sunday, August 3, 2025

ಜಾರುಬಂಡಿ ಜಲಪಾತದ ದಾರಿಯಲ್ಲಿ…..


 ಮೌನ ಮಳೆ ಮತ್ತು ಪ್ರೀತಿಗೆ ಮಾತ್ರ ಚಿಗುರಿಸುವ ತಾಕತ್ತಿರುವುದು. ಅಂತಹ ಹೊಸತೊಂದು ನಡಿಗೆಯ ಮೌನದಲಿ ಚಿಗುರಿದ ಹೊಸ ಅಧ್ಯಾಯ.


ಯಾವುದೋ ಕಲಾಕಾರ ಕೆತ್ತಿಟ್ಟಂತಹ ಊರು. ಕಲಾ ನಿರ್ದೇಶಕನ ಕೈಚಳಕದಿ ಮೂಡಿ ಬಂದಂತಹ ಊರು. ಕೋಲ್‌ ಬಿಸಿಲಿಗೆ ಕುಣಿವ ಚಿಟ್ಟೆ ದಂಡು.  ನಿಮ್ಮ ಕಲ್ಪನೆಯೂ ಸಪ್ಪೆಯಾದೀತು ಸುಮ್ಮನಿರಿ. ಯಾರೋ ಚಿತ್ರಗಳಲ್ಲಿ ಬಿಡಿಸಿಟ್ಟ ಬಿದಿರ ಕಾಡು. ಹಾಡು ಹಾಡುವ ಹಳ್ಳೀ ‘ಕಾಂಗ್ ತಾಂಗ್’ ನಿಂದ ಅರ್ಧ ದಿನದ ಹಾದಿ. ಒಟ್ಟು ಜನಸಂಖ್ಯೆ ೭೫೦! ಹಾದಿ ತುಂಬಾ ಹೂವ ಹೊತ್ತ ಬೆಟ್ಟದಂಚು. ನೆನಪಿನ ನೀಲಿ ಕುಡಿದು ಕುಡಿ ಒಡೆದ ಆಕಾಶ. ಇಬ್ಬನಿ ತೋಯ್ದ ಒಂಟಿ ರಸ್ತೆ. ರಸ್ತೆಯುದ್ದಕ್ಕೂ ಫರ್ನ್‌ ಗಿಡಗಳ ಸ್ವಾಗತ. ನಿಲ್ಲದ ಬಿದಿರ ತೋಟದಲಿ ಅಲ್ಲಲ್ಲಿ ಕಿತ್ತಳೆ ಹಿಂಡಲು, ನಡುನಡುವೆ ಕಾಡು ಜನ. ವಿಹಂಗಮತೆ ಮತ್ತು ಪ್ರಪಾತಕ್ಕೆ ಮತ್ತೊಂದು ಹೆಸರು! ಇದು ಮೇಘಾಲಯದ ಕಾಂಗ್‌ತಾಂಗ್‌ ಹಳ್ಳಿಯಿಂದ ಜಾರುವ ಜಲಪಾತದ ದಾರಿಯಲ್ಲಿ ಕಂಡ ದೃಶ್ಯಾವಳಿ. ನಾಲಗೆ ಹೊರಳಲು ಕಷ್ಟ ಪಡುವ ಇಲ್ಲಿನ ಪ್ರತೀ ಊರಿನ ಹೆಸರು ನಾಲಗೆ ಸುರುಳಿ!

 

‘ಸೀಟಿʼ ಹೊಡೆಯುವ ಊರಿನಲ್ಲಿ!!


ಪುರದ ಹೊರಗೆ ಒರಗಿಕೊಂಡ ಸ್ವಾಗತ ಗೋಪುರ. ಹಾಡುವ ಹಳ್ಳಿ ಎಂಬ ವಿಶೇಷಣ (Whistling village of India). ಭಟ್ಕಳ ಬಳಿಯ ಹಾಡೋ ಹಳ್ಳಿ ಅಲ್ಲ. ಮೇಘಾಲಯದ ಸಣ್ಣೂರು! ಗುಡ್ಡದ ತುದಿಯೂರು. ವಿಶಿಷ್ಟ ಗುಡ್ಡಗಾಡು ಜನಾಂಗ. ಚಳಿ ಹೊತ್ತಿನಲ್ಲೂ ಬೆಳ್ಳಂಬೆಳಗ್ಗೆ ಪ್ರಾರಂಭವಾದ ಶಾಲೆ 12ರೊಳಗೇ ಮುಗಿದಿತ್ತು. ಅದರ ಸನಿಹವೇ ಪುಟಾಣಿ ಕಾಂಗ್ ತಾಂಗ್ ಬೋರ್ಡು. ಕ್ರಿಶ್ಚಿಯನ್ ಆಗಿ ಪರಿವರ್ತಿತರಾಗಿದ್ದಾರೆ. ಹೆಸರೂ ಅವರದೇ.


ವಸಾಹತುಶಾಹಿಗಳ ಆರ್ಭಟದಿಂದ ಮೂಲ ಸಂಸ್ಕೃತಿಯ ಪಳಿಯುಳಿಕೆಯಷ್ಟೇ ಉಳಿದಿದೆ! ಮೂಲತಃ ಇವರು ಯಾವುದೇ ಧರ್ಮಕ್ಕೆ ಸೇರಿದವರಲ್ಲ. ಕೇವಲ ಬೆಟ್ಟವಾಸಿ ಬುಡಕಟ್ಟು. ಮೂಲತಃ ಸೆಂಗ್‌ ಖಾಸಿ ಬುಡಕಟ್ಟು ಜನಾಂಗಕ್ಕೆ ಸೇರಿದ ಇವರನ್ನು ಬ್ರಿಟಿಷ್‌ರು ಕ್ರಿಶ್ಚಿಯನ್‌ರಾಗಿ ಪರಿವರ್ತಿಸಿದ್ದಾರೆ. ಇಲ್ಲಿಂದ ಇನ್ನೊಂದು ತುದಿಯಲ್ಲಿರುವ ವಾಕೆನ್‌ ಹಳ್ಳಿಗರು ಇನ್ನೂ ವರ್ಜಿನ್ ಗಳಾಗಿ ಉಳಿದಿದ್ದಾರೆ. ಯಾವುದೇ ಧರ್ಮಕ್ಕೆ ಸೇರದ ಇವರು ಸರಳರು. ಕಾಂಗ್‌ ತಾಂಗ್‌ ನಿಂದ ವಾಕೆನ್‌ ಹಳ್ಳಿಗೆ ನಮ್ಮ ಪಯಣವು ಮತ್ತೊಂದು ಸೋಜಿಗ. ಮತ್ತೆಂದಾದರೂ ಪುರುಸೊತ್ತು ಮಾಡಿಕೊಂಡು ವಾಕೆನ್‌ ಕತೆ ಹೇಳುವೆ. 

           ಕಾಂಗ್ ತಾಂಗನ ಹಳ್ಳಿ ಹೆಂಗಸು. 

ಸೀಟಿಯೊಂದು ಹೆಸರಾಗಿ:-

ಇಲ್ಲಿ ಮಗುವಿಗೊಂದು ಹೆಸರಿನಂತೆ ಹುಟ್ಟಿನಿಂದ ‘ಸೀಟಿಯೊಂದು’ ಮಗುವಿಗೆ ಇಡಲಾಗುತ್ತದೆ. ಸಿಳ್ಳೆಯಿಂದಲೇ ಮಗುವನ್ನು ಕರೆಯಲಾಗುತ್ತದೆ. ಹೆಂಗಳೆಯರನ್ನೂ ನೀವು ಸೀಟಿಯೂದಿ ಕರೆಯಬಹುದು! ಯಾರೂ ತಪ್ಪು ತಿಳಿಯಲ್ಲ! ಹಾಗಂತ ಸೀಟಿಯ ಹೊಡೆಯಬೇಡಿ.

ʼಜಿನ್ಗ್ರವಾಯಿ ಲಾವ್ಬಿʼ ಎಂಬ ವಿಶಿಷ್ಟ ಭಾಷಾ ಅಧ್ಯಯನಕ್ಕೆ ಅಮೇರಿಕಾ ಜರ್ಮನಿಯಿಂದೆಲ್ಲಾ ಸಂಶೋಧಕರ ತಂಡ ಇಲ್ಲಿಗೆ ಭೇಟಿ ನೀಡುತ್ತಾರೆ! ಈ ವಿಶಿಷ್ಟ ಪದ್ಧತಿಯಲ್ಲಿ ಮಗುವಿಗೆ ವಿಶಿಷ್ಟವಾದ ಸ್ವರವೊಂದನ್ನು ತಾಯಿಯಾದವಳು ನೀಡುವಳು. ಇದರಲ್ಲಿ ಎರಡು ವಿಧಗಳಿವೆ ಒಂದು ಚಿಕ್ಕ ಸ್ವರ ಇನ್ನೊಂದು ದೀರ್ಘ. ಜೀವ ಮಾನವಿಡಿ ಅದೇ ಸ್ವರದಿಂದ ಅವನನ್ನು/ಅವಳನ್ನು ಕರೆಯಲಾಗುತ್ತದೆ. ಊರಿನವರೆಲ್ಲಾ ಅದೇ ಸ್ವರದಿಂದ ಆತನನ್ನು/ಆಕೆಯನ್ನು ಗುರುತಿಸುತ್ತಾರೆ. ಬೆಟ್ಟದ ಮೇಲೆ ವಾಸಿಸ ಹೊರಟ ಇವರು ತಮ್ಮತನವನ್ನು ಉಳಿಸಿಕೊಳ್ಳಲು ಕಂಡು ಕೊಂಡ ವಿಚಿತ್ರ ಕ್ರಮ. ಬೆಟ್ಟದಲ್ಲಿನ ಕೆಟ್ಟ ಶಕ್ತಿಗಳು ಕಣ್ಣು ಹಾಕದಿರಲಿ ಎಂಬ ಮುಂದಾಲೋಚನೆಯ ಫಲವಾಗಿ ಈ ರೀತಿಯಾಗಿ ಮುಗುವಿಗೆ ಹೆಸರನ್ನಲ್ಲದೇ ʼಸೀಟಿʼಯಿಂದ ಕರೆಯುವ ಕ್ರಮ ರೂಢಿಗೆ ಬಂತು ಎನ್ನುತ್ತಾರೆ ನಮ್ಮ ಗೈಡ್ ಫಿಡ್ಲಿಂಗ್‌ ಸ್ಟಾರ್‌ನ ಅಮ್ಮ!



ಹುಟ್ಟಿಗೊಂದು ಹೆಸರಿಟ್ಟು : – ‌

ನಾವೆಲ್ಲಾ ಮಗು ಹುಟ್ಟಿದರೆ ಹೆಸರಿಡಲು ಒದ್ದಾಡಿದಂತೆ ಇಲ್ಲಿ ಆತನಿಗೆ ಸೀಟಿಯಂತಹ ಹೆಸರಿಡಲು ತಾಯಿ ಒದ್ದಾಡುವಳು. ಇಲ್ಲಿ ಹೆಸರೆಂಬುದೇ ಸೀಟಿ. ಹೊಸಕಂಪನ ಹೊಸ ಅಲೆ. ಅಮ್ಮನ ಮಡಿಲ ಶಾಖ. ನೆಲಮೂಲವಾದ ವಿಶಿಷ್ಟ ಸಂಸ್ಕೃತಿ! ಪ್ರತಿಯೊಬ್ಬನಿಗೂ ಒಂದು ವಿಶಿಷ್ಟ ಸೀಟಿ (ವಿಶಿಲ್) ಎಷ್ಟೇ ದೂರದಲ್ಲಿರಲಿ ಆತನಿಗದು ಕೇಳುವ ಕಂಪನನಾಂಕದಲ್ಲಿರುತ್ತದೆ. ಇದನ್ನೆಲ್ಲಾ ನಾವು ನಮ್ಮ ಗೈಡ್‌ ಫಿಡ್ಲಿಂಗ್‌ ಸ್ಟಾರ್‌ ಮನೆಯಲ್ಲಿ ಕುಳಿತು ಮಾತನಾಡುತ್ತಾ ತಿಳಿದುಕೊಂಡೆವು. ಇಲ್ಲಿನ ೨೩ ಹಳ್ಳಿಗಳಲ್ಲಿ ಈ ಕ್ರಮ ಅನುಸರಿಸುತ್ತಾರೆ ಎಂಬುದು ಸೋಜಿಗ. ಆದರೆ ಕಾಂಗ್ ತಾಂಗ್‌ ಮಾತ್ರ Whistling village of India ಎಂದು ಕರೆಯಿಸಿಕೊಂಡಿದೆ. ‌
ಜಾರ್‌ ಬಂಡೆ ಜಲಪಾತದ ಸಂಗದಲಿ ಸಿಕ್ಕ ಕೊಂಗ್‌ ತಾಂಗ್‌ ಎಂಬ ಹಾಡುವ ಹಳ್ಳಿ ಬೋನಸ್.
 ಇಲ್ಲಿಗ್ಯಾವ ಟಿಂಪೊ ವ್ಯವಸ್ಥೆಯಾಗಲೀ ಬಸ್ಸಿನ ವ್ಯವಸ್ಥೆಯಾಗಲಿ ಇಲ್ಲ. ಶಿಲ್ಲಾಂಗಿನಿಂದ ಕಾರು ಅಥವಾ ಬೈಕ್‌ ಬಾಡಿಗೆಗೆ ಪಡೆದು ಬರಬೇಕು. ನಾವೊಂದು ಕಾರು ಬಾಡಿಗೆಗೆ ಹಿಡಿದು ಹೊರಟೆವು.

ಜಲಧಾರೆಯೆಡೆಗೆ :-

ಸೀಟಿ ಹೊಡೆಯುವ ಕಾಂಗ್ ತಾಂಗ್ ಎಂಬ ವಿಚಿತ್ರ ಹಳ್ಳಿಯಿಂದ ಎರಡು ಪುರಿ ಹೊಡೆದು ಹೊರಟಾಗ ಗಂಟೆ 11. ನಿನ್ನೆ ರಾತ್ರಿಯೇ ಬಂದಿಳಿಯಬೇಕಿತ್ತು ಅನಿಸಿತೆನಗೆ.

ಮುಗಿಲಿಗೆ ಮುಟ್ಟೋ ಹುಮ್ಮಸ್ಸು ಹೊತ್ತ ನಾವು ಗೈಡ್‌ ಇಬ್ಬರ ಜೊತೆಗೆ ಪ್ರಪಾತಕ್ಕೆ ಇಳಿಬಿಟ್ಟಂತಹ ನಾಗವೇಣಿಯಂತಹ ದಾರಿಯಲ್ಲಿ ಹೊರಟೆವು. ಭಾಷೆ ಬಾರದ ಚಂದಕೆ ನೀಟಾಗಿದ್ದ ಗೈಡ್, ಅವನ ಜೊತೆಗೊಂದು ವಿಚಿತ್ರ ಕತ್ತಿ. ನೋಡಿದರೆ ಭಯ ಪಡಬೇಕು! ಇಂತಹ ಕತ್ತಿಗಳು ಇಲ್ಲಿ ಸರ್ವೇ ಸಾಮಾನ್ಯ!


ನಾಲಗೆ ರುಚಿಗೆ ಬಲಿಯಾದ ನವ ಯುವಕರು:-

ಸ್ವಲ್ಪ ದೂರ ನಡೆಯುತ್ತಲೇ ಎದುರಾದ ಡಬ್ಬಿ ಅಂಗಡಿ. ಗಿರಾಕಿಗಾಗಿ ಕಾಯೋ ನಿರ್ಲಿಪ್ತ ಕಣ್ಣಿನ ವ್ಯಾಪಾರಿ ಬೀಡಿ ಹಚ್ಚಿದ್ದ. ನಾವೇನೋ ಆತ್ಮಹತ್ಯೆಗಾಗಿ ಹೊರಟವರಂತೆ ಪ್ರಪಾತಕ್ಕೆ ಇಳಿಬಿದ್ದೆವು. ಅಯ್ಯೋ ಎನ್ನುವ ನಿರುದ್ವಿಗ್ನ ನೋಟ ಬೀರಿ ನಮ್ಮನ್ನು ಕಳುಹಿಸಿಕೊಟ್ಟ. ಆತನ ದೃಷ್ಟಿಯೂ ಹಾಗೆ ಇತ್ತು! ಲಿಮ್ಕಾ, ಕೊಕೋ ಕೊಲಾ, ಲೇಸ್‌, ಆತನಂಗಡಿಯಲಿ ಹಲ್ಲು ಕಿಸಿಯುತ್ತಾ ನೇತು ಬಿದ್ದಿದ್ದವು. ಜಾಗತೀಕರಣದ ಜಾರುಬಂಡಿಯಲಿ ಎಲ್ಲರೂ ಜಾರಲು ತೊಡಗಿದ್ದಾರೆ!


ಜಾಗತೀಕರಣ, ವ್ಯಾಪಾರಿಕರಣ, ಪ್ರೀತಿಯನ್ನು ನೆಲಮಟ್ಟದ ಸಂಸ್ಕೃತಿಯನ್ನು ದೋಚುತ್ತಲೇ ಇದೆ. ಪಿಜ್ಜಾ, ಬರ್ಗರ್‌ ರುಚಿಗೆ ನಮ್ಮೂರಿನ ಆರೋಗ್ಯಕರ ತಿನಿಸುಗಳು ಹೇಳ ಹೆಸರಿಲ್ಲದೇ ಜಾಗ ಕೀಳುತ್ತಿವೆ. ಕಿತ್ತಳೆ ರಸದ ರುಚಿಗೆ ಪಕ್ಕಾದ ನಾಲಿಗೆಯಲಿ ಘಂಟಾ ಥಂಸಪ್ ರುಚಿ ಮೊಗ್ಗ ಅರಳಿಸಲು ಹೊರಟಿದ್ದಾರೆ. ಜಾಗತೀಕರಣವೇ ಜಗತ್ತನ್ನು ಆಳುತ್ತಿವೆ. ಎಲ್ಲರೂ ಇಲ್ಲಿ ಖರೀದಿದಾರರೇ. ಕಳೆದ ವರ್ಷ ಪಾರ್ವತಿ ಕಣಿವೆಯ ಕೊನೆಯ ಹಳ್ಳಿ ತೋಷ್‌ಗೆ ಹೋದಾಗ ಅಲ್ಲಿಯೂ ಜರ್ಮನ್ ಬೇಕರಿಗಳು ಜಾಗ ಮಾಡಿಕೊಂಡಿರುವುದು ವಿಪರ್ಯಾಸ! ನಮ್ಮ ಅದ್ಭುತ ರುಚಿಯ ತಿಂಡಿಗಳನ್ನು ನಾವು ಶೋಕೇಸ್‌ ಮಾಡದೇ ಇದ್ದಿದ್ದು ನಮ್ಮ ಸೋಮಾರಿತನವೋ, ನಮ್ಮದೆಲ್ಲಾ ಕೀಳೆಂಬ ನಮ್ಮದೇ ಮೌಡ್ಯವೋ? ಅದನ್ನು ಬಿತ್ತಿದ ಹೊಸ ಶಿಕ್ಷಣ ನೀತಿಯೋ?! 



ದಾರಿ ತಪ್ಪಲಿ ದೇವರೇ!

ಅಪ್ರತಿಮ ಮೇಘಾಲಯದ ಸುಂಟರಗಾಳಿಯಂತಹ ಸೌಂದರ್ಯಕ್ಕೆ ಮರುಳಾಗಿ ಇಳಿಯೊ ಹಾದಿಯಲ್ಲಿ ದಾರಿತಪ್ಪಿ ಬಲಕೆ ತಿರುಗೋ ಬದಲು ನೇರವಾಗಿ ಹೊರಟ ಗೆಳೆಯ ಹಾದಿ ತಪ್ಪಿದ! ನಿಜವಾಗಿ ದಾರಿ ತಪ್ಪಿದ್ದು ಅವನೋ ನಾವೋ ಗೊತ್ತಿಲ್ಲ. ದಾರಿ ತಪ್ಪಿದ ಮಗ. ಇಬ್ಬರು ಗೈಡ್‌ಗಳಲ್ಲಿ  ಭಾಷೆ ಬಾರದ ವಿಚಿತ್ರ ಕತ್ತಿ ಹಿಡಿದ ಗೈಡ್ ಒಬ್ಬನೇ ನನ್ನ ಜೊತೆಗೆ ಉಳಿದ. ಎದೆಯಲ್ಲಿ ಕುಟ್ಟವಲಕ್ಕಿ. ಸುತ್ತಲೂ ನಿಬಿಡಾರಣ್ಯ. ಜೀರುಂಡೆ ಗಾಯನ. ಹಾದಿ ತಪ್ಪಲು ನೂರಾರು ದಾರಿ. ಇವನೋ ಅನನುಭವಿ. ಆದರೆ ಇವನಷ್ಟು ಪಾಪದ ಅಮಾಯಕ ಮತ್ತೊಬ್ಬನಿಲ್ಲ ಎಂಬುದು ಸ್ವಲ್ಪ ಹೊತ್ತಿಗೆ ತಿಳಿಯಿತು. ಬಯಲಿನ ಜನರಂತಲ್ಲ ಬೆಟ್ಟದವರು! ಕಾನನದ ಸ್ವರ ಸಂಮೋಹನಕ್ಕೆ ಒಳಗಾಗಿ ಜಲಧಾರೆಯ ನೆತ್ತಿಗೆ ನಡೆದು ತಲುಪಿದೆವು. ಅಂತೂ ಜಲಧಾರೆಯ ನೆತ್ತಿ ತಲುಪಿಸಿದ!
ಏನ್‌ ಅಚ್ಚರಿ ನಮಗಿಂತಲೂ ಮುಂದೆ ಗೆಳೆಯನ ಸವಾರಿ ಬಂದು ತಲುಪಿತ್ತು. ಬಂದವನೇ ದಾರಿ ತಪ್ಪಿದ್ದೇ ಒಳ್ಳೇದಾತು ಅಂತಿದ್ದ! ದಾರಿ ತಪ್ಪಲಿ ದೇವರೇ ಅಂತ ಬೇಡಿಕೊಂಡಿರಬೇಕು ಆತ! ದಾರಿ ತಪ್ಪಿದ್ದರಿಂದ ಮೇಘಾಲಯದ ಅತಿ ಎತ್ತರದ ಬೇರಿನ ಸೇತುವೆ, ಇನ್ನೊಂದೆರಡು ಜಲಧಾರೆಯ ಸಖ್ಯ ಬೆಳೆಸಿ ಬಂದಿದ್ದ. ಕಷ್ಟವಾದರೂ ಅದನ್ನೆಲ್ಲಾ ಅಚಾನಕ್‌ ಆಗಿ ನೋಡುವ ಅವಕಾಶವೊಂದು ಅವನ ಪಾಲಿಗೆ ಬಂತು. ಇಂತಹ ದಾರಿಗಳಲ್ಲಿ ಸದಾ ದಾರಿ ತಪ್ಪಲಿ. ಹೊಸ ಅಚ್ಚರಿಗಳು ತೆರೆದುಕೊಳ್ಳಲಿ! ಸದಾ ದಾರಿ ತಪ್ಪಿಸು ದೇವರೇ.
ದಾರಿ ತಪ್ಪಿದ್ದು ಒಳಿತೇ ಆಯಿತು ಎಂದೆನ್ನುತ್ತಾ ಹಿಂದಿರುಗಿದ ಮೆಲ್ಲಗೆ ಅರುಹಿದ ಗೆಳೆಯ! ಬಿದ್ದರೂ ಮೀಸೆ ಮಣ್ಣಾಗಲಿಲ್ಲ! ಮೇಘಾಲಯದ ಅತಿ ಎತ್ತರದ ಬೇರಿನ ಸೇತುವೆ ಇರುವುದೇ ಇಲ್ಲಿ. ಮತ್ತೆ ಮತ್ತೆ ಇಂತಹ ದಾರಿಯಲ್ಲಿ ದಾರಿ ತಪ್ಪಿಸು ದೇವರೇ ಎಂದು ಬೇಡಿಕೊಳ್ಳುವೆ ಎಂದ! ರುಚಿಕಟ್ಟಾದ ನಾಲ್ಕು ಫೋಟೋ ತೆರೆದಿಟ್ಟ! ಒಂದಕ್ಕಿಂತ ಒಂದು ಚೆಂದದ ಹೊಟ್ಟೆಕಿಚ್ಚಾಗುವಂತಹ ಚಿತ್ರ!! ದಾರಿ ತಪ್ಪಿಯೂ ನಮಗಿಂತ ಮೊದಲೇ ಜಲಪಾತದ ನೆತ್ತಿ ಹತ್ತಿ ಕುಣಿಯುತ್ತಲಿದ್ದ! 




ತಣ್ಣಗಿನ ನೀರಲ್ಲಿ ಜಾರುತ್ತಲೇ ಕೊಳ ಒಂದಕ್ಕೆ ಜಾರಲು ವಿದೇಶಿಗನೊಬ್ಬ ಸಶಬ್ದವಾಗಿ ಜಾರಿ ನಮಗೆ ಒಂದೆರಡು ಟ್ರಯಲ್ ತೋರಿದ ಮೇಲೆ ಸ್ವಲ್ಪ ಧೈರ್ಯ ಮಾಡಿ ಹೊರಟಿತು ಗೆಳೆಯನ ಸವಾರಿ. ಹೊರಟಿದ್ದೇನೋ ಸರಿ ನಡುವೆಯೇ ಜಾರದೆ ಸ್ಟ್ರಕ್ ಆಯಿತು. ಕೊನೆಗೂ ಕುಂಡೆ ಹರಿದುಕೊಳ್ಳದೇ ಗೆಳೆಯನ ಸವಾರಿ ಜಾರುತ್ತಾ ಕೆಳಗೆ ಬಂದಿತು! ನೀರ ಹೊಂಡಕ್ಕೆ ʼಗುಳುಮುಳಕʼದಂತೆ ಮುಳುಗು ಹಾಕಿದ. ನನ್ನ ಪುಣ್ಯ ಜಾರಿ ಪ್ರಪಾತಕ್ಕೆ ಹೋಗಲಿಲ್ಲ. ನಾನೂ ಸ್ವಲ್ಪ ಹೊತ್ತು ಸ್ಪಟಿಕ ಶುಭ್ರ ನೀರಲ್ಲಿ ಮಿಂದೆದ್ದು ಪುಣಕಗೊಂಡೆ. ಜಾರುವಿಕೆ ಎಲ್ಲಿಯಾದರೂ ಆಯತಪ್ಪಿದರೆ ನೇರ ಪ್ರಪಾತ ದರ್ಶನ! ಒಂದು ಹಲ್ಲೂ ಸಿಗದ ಮಹಾ ಬ್ರಹ್ಮಗುಂಡಿ. ಅವಾಂತರವಾಗುವುದು ಬೇಡವೆಂದು ನಾನಾ ಸಾಹಸಕ್ಕೆ ಇಳಿಯಲೇ ಇಲ್ಲ. ದಟ್ಟ ಕಾನನದ ನಡುವೆ ಅವಿತಿರುವ ಪ್ರಕೃತಿ ಮಡಿಲ ಈ ತಾಣ ರಮ್ಯಾದ್ಬುತ!

ಇಳಿ ಸಂಜೆಗೆ ಮೇಘಾಲಯದ ಹಾಡು ಹಳ್ಳಿಯಲ್ಲಿ ಅಂದು ತಂಗಿದೆವು. ಅಲ್ಲಿನ ಜೀರುಂಡೆ ಗಾಯನ, ನೊಣದ ಬೋನು ಗಿಡಗಳೊಂದಿಗೆ ಲೀನವಾಗಿ ಅಲ್ಲಿನ ಕಾಟೇಜ್‌ ಒಂದರಲ್ಲಿ ಉಳಿದುಕೊಂಡೆವು.




  ನೂರಾರು ಆರ್ಕಿಡ್‌ಗಳು ನಮಗೊಂದು ಅಚ್ಚರಿ! ಎಲ್ಲೆಲ್ಲೂ ಆರ್ಕಿಡ್‌ಗಳು. ಚಿತ್ರ ವಿಚಿತ್ರ ಬಣ್ಣಗಳು. ಕೆಲವನ್ನು ಕತ್ತರಿಸಿ ತಂದು ನಾವು ಉಳಿದುಕೊಂಡಿದ್ದ ಕಾಟೇಜ್‌ನಲ್ಲಿ ಬೆಳೆಸಿದ್ದರು. ಒಂದಿಷ್ಟು ತರೇವಾರಿ ಜೇಡಗಳು, ನೂರಾರು ಚಿಟ್ಟೆಗಳ ಮೆರವಣಿಗೆ ನಮಗೆ ಮುದ ನೀಡುತ್ತಲಿತ್ತು! ನೈಸರ್ಗಿಕ ಪರಿಸರದಲ್ಲಿ ನೊಣದ ಬೋನು ಎಂಬ ವಿಸ್ಮಯಕಾರಿ ಸಸ್ಯವನ್ನು ಬೆಳೆಸಿದ್ದ ನಮ್ಮ ಕಾಟೇಜ್ ಮಾಲೀಕ! ಎರಡನೆಯ ಬಾರಿಗೆ ಇಷ್ಟು ಸಂಖ್ಯೆಯ ನೊಣದ ಬೋನು ನೋಡಿದ ಖುಷಿ. ಅತ್ಯಂತ ಶುಭ್ರವಾಗಿಟ್ಟುಕೊಂಡ ಆತನ ಕಾಟೇಜ್ ಬಹಳ ಇಷ್ಟವಾದವು. 
ಇಲ್ಲಿಂದ ನಮ್ಮ ಸವಾರಿ ಹೊರಟಿದ್ದು ವಾಕೆನ್‌ ಎಂಬ ಮತ್ತೊಂದು ವಿಶಿಷ್ಟ ಹಳ್ಳಿಗೆ. ಆ ಕತೆಯನ್ನು ಮತ್ತೊಮ್ಮೆ ಅರಹುವೆ.

Thursday, May 29, 2025

ಮಹಾ ಪಯಣದ ಹೆಜ್ಜೆ ಗುರುತುಗಳು

 


ಯುದ್ಧದ ಭೀಕರತೆಯನ್ನು ಸಂದಿಗ್ಧ ಪರಿಸ್ಥಿತಿ  ಮತ್ತು ಗೊಂದಲಗಳನ್ನು ಬಹಳ ಸ್ಪಷ್ಟವಾಗಿ ಮತ್ತು ರೋಚಕವಾಗಿ ಪ್ರಸ್ತುತಪಡಿಸುವ ಮಹಾಪಲಾಯನ ಕನ್ನಡ ಬಲ್ಲವರೆಲ್ಲರೂ ಓದಬೇಕಾದ ಕೃತಿ.

 ತಮ್ಮ ನಾಲ್ಕು ಸಾವಿರ ಮೈಲುಗಳ ಭೀಕರ ನಡಿಗೆ ಮತ್ತು ಎದುರಾದ ಸಂಕಷ್ಟಗಳನ್ನು ನಮ್ಮ ಮುಂದೆ ಸರಳವಾಗಿ  ಹರವಿಟ್ಟಿದ್ದಾರೆ ತೇಜಸ್ವಿ. 

     ಬದುಕೇ ಒಂದು ಸ್ವಾತಂತ್ರ್ಯಕ್ಕಾಗಿ ಅನನ್ಯ ಹೋರಾಟ. ನದಿ ತೊರೆ ಬೆಟ್ಟಗಳನ್ನೆಲ್ಲ ಗೆಲ್ಲುತ್ತಾ ಸ್ಲೋವಿಯರ್ ಕೊನೆಗೆ ಭಾರತಕ್ಕೆ ಬಂದಿದ್ದೆ ಒಂದು ಮಹಾನ್ ಅಚ್ಚರಿ. ಹಿಮಾಲಯದ ಸಣ್ಣಪುಟ್ಟ ಬೆಟ್ಟಗಳನ್ನು ಹತ್ತಿ ಇಳಿಯಲು ನಾವು ತಿಣುಕಾಡಬೇಕು. ಅಂತಹುದರಲ್ಲಿ ಯಾವುದೇ ಉಪಕರಣಗಳಿಲ್ಲದೆ ಕೇವಲ ಚರ್ಮದ ದಾರ ಸಣ್ಣ ವಯರ್ ಬಳಸಿ ಹಿಮಾಲಯವನ್ನು ದಾಟಿಕೊಂಡಿದ್ದು ಪ್ರಪಂಚದ ಮಹಾ ಪವಾಡ. 

 ನೀರಿಲ್ಲದೆ ಗೋಬಿ ಮರುಭೂಮಿಯನ್ನು ಬರಿಗಾಲಲ್ಲಿ ದಾಟುವುದು  ಒಂದು ರೋಚಕ ಮಹಾಸಾಹಸ! ಮಹಾನರಕದ ಗೋಬಿ ಮರುಭೂಮಿಯನ್ನು ನೀರಿಲ್ಲದೆ ದಾಟಿದ್ದು ಒಂದು ವಿಶೇಷ ಅವರ ಮನೋ ಶಕ್ತಿ ಅಭೀಪ್ಸೆಗಳಿಗೆ ಸಾಕ್ಷಿ. ಹಾವು ತಿಂದು ಗೋಬಿ ಮರುಭೂಮಿಯಲ್ಲಿ ಬದುಕಿ ಉಳಿದದ್ದೊಂದು ಅಚ್ಚರಿ.

 ದಾರಿ ಉದ್ದಕ್ಕೂ ಸಿಕ್ಕ ಅನಾಗರಿಕರ ಆದೃ ಸಹಕಾರ. ಅವರ ಹೃದಯ ವೈಶಾಲ್ಯತೆ ನಾಗರಿಕರಲ್ಲೂ ಕಾಣಸಿಗದು ಪ್ರತಿಯೊಬ್ಬ ಅನಾಮಿಕನು ತಮಗೆ ಸಹಾಯ ಹಸ್ತ ಚಾಚುತ್ತಾ ಗಮ್ಯದೆಡೆಗೆ ಪಯಣಿಸುತ್ತಾ, ಈ ಪಯಣ ಹುಟ್ಟಿಸಿದ ಭರವಸೆ ಅಂತಿಂಥದ್ದಲ್ಲ. ಪ್ರತಿಯೊಂದುಕ್ಕೂ ಅನುಮಾನಿಸುವ ನಾಗರೀಕ ಪ್ರಪಂಚದಲ್ಲಿ ಗೊತ್ತಿಲ್ಲದೆಯೇ ಆದರಿಸುವ ಅನಾಗರಿಕ ಪ್ರಪಂಚವೆಲ್ಲಿ. ಯಾವುದಕ್ಕೆ ಯಾವುದು ಹೋಲಿಕೆ? ಮಾಡದ ತಪ್ಪಿಗೆ ಪರಿತಪಿಸುವಂತಹ ಶಿಕ್ಷೆ ನೀಡಿದ ನಾಗರಿಕ ಪ್ರಪಂಚ ಒಂದೆಡೆಯಾದರೆ ಕರೆದು ಆದರಿಸಿ ಸತ್ಕರಿಸುವ ಅಲೆಮಾರಿಗಳು. ತಕ್ಕಡಿಯ ಈ ಕಡೆಯೇ ಭಾರ. 

 ರಷ್ಯಾದಿಂದ ಭಾರತದವರೆಗೆ ಅಪರಿಚಿತ ಅನಾಗರಿಕರು ತೋರಿದ ಆಸ್ತೆ, ಪ್ರೀತಿ, ವಾತ್ಸಲ್ಯ ನಮ್ಮ ಕಣ್ಣನ್ನು ಹೊಳೆಯಾಗಿಸುತ್ತದೆ. ಗೋಬಿ ಮರುಭೂಮಿಯಲ್ಲಿ ಸಿಗುವ ಹಳ್ಳಿಗ, ಮಂಗೋಲಿಯ ದೇಶದಾಟಿದ ನಂತರ ಸಿಗುವ ಮುದುಕ, ಟಿಬೆಟ್ ಪ್ರಾರಂಭಕ್ಕಿಂತ ಮೊದಲು ಸಿಕ್ಕಿದ ಪುಟಾಣಿ ಹಳ್ಳಿಯ ಗ್ರಾಮಸ್ಥರ ಸತ್ಕಾರ ನಮ್ಮ ಹೃದಯ ತುಂಬಿ ಬರುವಂತೆ ಮಾಡುತ್ತದೆ.

 ಸೈಬೀರಿಯಾದ ಘೋರ ಚಳಿಯನ್ನು ಒಂದೇ ಒಂದು ಜೊತೆ ಬಟ್ಟೆಯಲ್ಲಿ ದಾಟಿದ್ದು , ಟಿಬೇಟ್ ಮತ್ತು ಹಿಮಾಲಯವನ್ನು  ಹತ್ತಿ ಇಳಿದಿದ್ದು, ಕೈಲಾಸ ಸರೋವರದ ಸನಿಹವೇ ಹಾದುಹೋಗಿದ್ದು, ನರಕ ಸದೃಶ ಗೋಬಿ ಮರುಭೂಮಿಯನ್ನು ದಾಟಿದ್ದು, ಎಂಟು ಅಡಿ ಎತ್ತರದ ಹಿಮ ಮಾನವನನ್ನು ನೋಡಿದ್ದು  ಈ ಪ್ರಯಾಣದ ಪ್ರಮುಖ ಹೆಜ್ಜೆ ಗುರುತುಗಳು.

 ಮನುಷ್ಯನ ಅಪಾರ ಮನೋಬಲ, ಸ್ವಾತಂತ್ರದೆಡೆಗಿನ  ತುಡಿತವನ್ನು ಎತ್ತಿ ಹಿಡಿಯುವ  ಅನನ್ಯ ಕೃತಿ.

 ಇಂತಹ ಮಹಾ ಪ್ರಯಾಣ ಮನುಕುಲದ ಹಾದಿಯಲ್ಲಿ ಹಿಂದೆಂದೂ ನಡೆದಿಲ್ಲ ಮುಂದೆ ನಡೆಯುವುದು ಇಲ್ಲ. ನಾಲ್ಕುವರೆ ತಿಂಗಳ ಅವಧಿಯಲ್ಲಿ ಸುಮಾರು 2000 ಮೈಲು ನಡೆದ ದಾಖಲೆ ಇಲ್ಲ!! ಒಟ್ಟು ನಡೆದ ಹಾದಿ ನಾಲ್ಕು ಸಾವಿರ ಮೈಲಿ!!


ಅಸಾಧ್ಯ ವಾದ ರೋಚಕ ಸಾಹಸದ ನೈಜಕತಾನಕ ಮಹಾಪಲಾಯನ.

ಏಕೆ ನೀವಿನ್ನು ಓದಿಲ್ಲ?

Sunday, May 25, 2025

ಹೂ ಕಣಿವೆಯಲಿ…

 ನೇಪಾಳ ಮತ್ತು ಭೂತಾನ್ ನಡುವೆ ಸಿಕ್ಕಿಹಾಕಿಕೊಂಡ ಸಿಕ್ಕಿಂನ ಕಥೆ ನಿಮ್ಮ ಮುಂದೆ. ಡಾರ್ಜಲಿಂಗ್‌ ನಲ್ಲಿಳಿದು ಸಿಕ್ಕಿಂಗೆ ಕಾಲಿಪೊಂಗ್‌ ಮೂಲಕ ದಾಟಿಕೊಂಡ ಅನನ್ಯ ಅನುಭವ.

ಲಾಚೆನ್‌ ಟೂ ಲಾಚುಂಗ್‌ ….

 ಸಿಕ್ಕಿಂನ ಲಾಚೆನ್ನಿಂದ ಲಾಚುಂಗ್ಗೆ ಬಂದಾಗ ಇಳಿಸಂಜೆ. ನಮ್ಮ ದಾರಿಗುಂಟ ಹರಿದ ನದಿಯ ಹೆಸರನ್ನು ಯಾರಲ್ಲೇ ಕೇಳಿದರು ಹೇಳುವ ಹೆಸರೊಂದೇ ತೀಸ್ಟಾ!

ಲಾಚುಂಗ್‌ನ ಪ್ರತಿ ಮನೆಯ ದಣಪೆ ಆಚೆಗಿನ ದಾರಿ ದಾಟುತ್ತಲೇ ಸಿಕ್ಕಿಂನ ತೀಸ್ಟಾ ನದಿ ಮೌನವಾಗಿ ಹರಿಯುತ್ತಾಳೆ. ಎಲ್ಲೆಲ್ಲೂ ಅಡ್ಡಗಟ್ಟಿಸಿಕೊಂಡು ಮನುಜನ ಅಭೀಪ್ಸೆಗೆ ಬಲಿಯಾಗಿ ʼಹರಿʼ ಯುತ್ತಾ ಅನೇಕರ ತುತ್ತಿನ ಚೀಲಕ್ಕೂ ದಾರಿಯಾಗಿದ್ದಾಳೆ. ಸಿಕ್ಕಿಂನ ಲಾಚುಂಗ್ ಕಣಿವೆಯುದ್ದಕ್ಕೂ ಬೆಳೆವ ಸೊಪ್ಪು ತರಕಾರಿಗಳಲ್ಲಿ ಇವಳದೇ ಪರಿಮಳ. ಸಿಕ್ಕಿಂನಲ್ಲಿ ಹುಟ್ಟಿ ತಾಯಿಯಾದವಳು ಬಂಗಾಲಕ್ಕೆ ಬರುತ್ತಲೇ ಕಾಳಿಯಾಗುತ್ತಾಳೆ. ಇಬ್ಬರಿಗೂ ನದಿಯು ಸೇತುವೆ ಕಟ್ಟಿದೆ. ಇವಳು ಸಿಕ್ಕಿಂನಿಂದ ಬ್ರಹ್ಮ ಪುತ್ರ ನದಿಯನ್ನು ಅಪ್ಪುವವರೆಗಿನ ತನ್ನ ದೀರ್ಘ ಪಯಣದಲ್ಲಿ ಮನುಜರ ಅಪರಿಮಿತ ಅಭೀಪ್ಸೆಗೆ ಕನಿಕರಿಸಿದ್ದಾಳೆ. ಬಂಗಾಲಿಗರಿಗೆ ಬುಟ್ಟಿ ತುಂಬಾ ಮೀನಿತ್ತು ಹರಿಸಿದ್ದಾಳೆ. ತೀಸ್ಟಾ ನದಿಯ ಟ್ರಾಟ್‌ ಮೀನಿನ ರುಚಿ ಅತ್ಯದ್ಭುತ. ಗುಡ್ಡ ಗುಡ್ಡಗಳ ಹನಿಗಳಿಗೂ ಇವಳ ಪ್ರೇಮ. ಲಾಚೆನ್‌ ನಿಂದ ಝೀರೋ ಪಾಯಿಂಟ್‌ ತಲುಪುವವರೆಗಿನ ಇವಳ ಸಂಗಗಕ್ಕೆ ಸಿಲುಕಿದ ನೂರಾರು ಝರಿಗಳ ಕಥನವು ವಿಭಿನ್ನ. ಬನ್ನಿ ಹರಿ ಕಥೆ ಶುರು ಮಾಡೋಣ! 

ತಿರುಗಿದೆ ವಿಳಾಸವಿಲ್ಲದೇ -


ಲಾಚೆನ್‌ ದಾಟುತ್ತಲೇ ಯುಗಾಂಗ್‌ ಜಲಧಾರೆಯೊಂದು ಅದೆಲ್ಲಿಂದಲೋ ಇದನ್ನು ಕಾಣಲು ಕಾತರತೆಯಿಂದ ಧುಮುಕುತ್ತದೆ. ಕಿವಾ ಎಂಬ ಇನ್ನೊಂದು ಜಲಧಾರೆ ನಾನೆಂಬ ನಾನು ಯಾವುದಕ್ಕೂ ಕಡಿಮೆ ಇಲ್ಲ ಎನ್ನುತ್ತಾ ಬಳುಕುತ್ತಾ ಹೋಗಿ ಬರುವವರಿಗೆಲ್ಲಾ ಟಾಟಾ ಬಾಯ್‌ ಬಾಯ್‌ ಮಾಡುತ್ತಿದ್ದಳು. 

ಪದ್ಯಗಳ ಅಡಿಗಡಿಗೆ ನುಗ್ಗುವ ಪ್ರಾಸದಂತೆ ಪ್ರಯಾಸವಿಲ್ಲದೇ ಗಿರಿ ನೆತ್ತಿಗಳ ಮೇಲಿಂದ ಸುರಿಯುತ್ತಲೇ ಇರುತ್ತದೆ. ಇವರನ್ನೆಲ್ಲಾ ಸೆರಗಿಗೆ ಕಟ್ಟಿಕೊಂಡು ಬ್ರಹ್ಮ ಪುತ್ರದೊಡಲಿಗೆ ಸೇರಲು ತವಕದಿ ಓಡುತ್ತಾಳೆ ತೀಸ್ಟಾ. 





ರಸ್ತೆ ರಿಪೇರಿಗೆ ನಿಂತ ಕಿನ್ನರರು ಎಲ್ಲಿಗೆ ಹೊರಟಿರುವಿರಿ ಎಂದು ಸನ್ನೆಯಲ್ಲೇ ಕೇಳುವರು. ಬ್ರೆಡ್ಡು ಕೂಡಿಟ್ಟಂತಹ ಕಲ್ಲು ರಸ್ತೆಯಲ್ಲಿ ಎಣ್ಣೆ ಕುಡಿದವರಂತೆ ಜೀಪು ಜೋಲಿ ಹೊಡೆಯುತ್ತಿತ್ತು. ಕೆಲವು ಕಲ್ಲುಗಳು ನಮ್ಮನ್ನು ಕಾಣಲು ರಸ್ತೆ ಬದಿಗೆ ಬಂದು ನಿಂತಿದ್ದವು!!

ಪ್ರತೀ ಕುಲುಕಾಟಕ್ಕೂ ಬೆನ್ನು ಹುರಿಯ ಲೆಕ್ಕ ಸಿಗುತ್ತಿತ್ತು. ಹೊಸ ಹಾದಿಯ ಹುಡುಕಾಟದಲ್ಲಿ ಇದೆಲ್ಲಾ ಮಾಮೂಲು ಎಂಬ ಹಸಿ ವೇದಾಂತ. ಇಂತಹ ಪರಿಸ್ಥಿತಿಯಲ್ಲೂ ತಣ್ಣಗೆ ಬದುಕುವ ಇವರ ಪ್ರಶಾಂತತೆಗೆ ದೊಡ್ಡ ಹೊಟ್ಟೆ ಕಿಚ್ಚು. 
ಹೂ ಕಣಿವೆಯ ಧ್ಯಾನ

 ಅಚಾನಕ್‌ ಆಗಿ ಆಯ್ದುಕೊಂಡ ಹೊಸ ದಾರಿಯಲ್ಲಿ ಸಿಕ್ಕ ಸಿಕ್ಕಿಂನ ಹೂ ಕಣಿವೆಯ ಯುಮ್‌ ತುಂಗ್‌ ಕಣಿವೆ ಮತ್ತು ಶಿಂಗ್‌ ಬಾ ರೆಡೋಡೆಂಡ್ರಾನ್‌ ಹೂ ಕಣಿವೆ. ಹೂ ಕಣಿವೆ ಸವಿಯಲು ಲಾಚುಂಗ್‌ ನಲ್ಲಿ ತಂಗಲೇ ಬೇಕು! 
 ಬೆಟ್ಟಕ್ಕೆ ಕಾವಲು ನಿಂತ ಇಂಡೋ ಟಿಬೇಟಿಯನ್‌ ಬೆಟಾಲಿನ್‌ . ನಾರಿ ಕೊರಳ ಹಾರದಂತೆ 


ಊರ ಹೆಬ್ಬಾಗಿಲಿನಲ್ಲಿ ಬೆಟ್ಟವೊಂದಕ್ಕೆ ನಾಚಿಕೆ ಇಲ್ಲದೇ ಜಲಪಾತವೊಂದು ಜೋತುಬಿದ್ದಿತ್ತು. ಓಂ ಮಣಿ ಪದ್ಮೇ ನಮಃ ಹೀಗೆ ಬೌಧ್ದರ ಭಾಷೆಯಲ್ಲಿನ ಭೌದ್ಧ ಧ್ವಜ ತೂಗುಹಾಕಲಾಗಿತ್ತು. ಊರ ಮಹನೀಯರಲ್ಲಿ ಹೆಸರ ಕೇಳಿದರೆ ನೀವೇ ಒಂದು ನಾಮಕರಣ ಮಾಡಿಕೊಳ್ಳಿ ಎಂದು ನಿರ್ಲಿಪ್ತರಾದರು. ಊರ ಬೀದಿಯಲ್ಲಿ ಲಾಚುಂಗ್‌ ನದಿಯ ಹಿಮ್ಮೇಳ. 

ಹೊಟ್ಟೆ ಹಸಿದುದರಿಂದ ಬಜ್ಜಿ ಅಂಗಡಿಗೆ ಅಡಿ ಇಟ್ಟೆವು. ನೀರ ಕಣದೊಂದಿಗೆ ಬೆರೆತ ನದಿಯ ಹಿಮ್ಮೇಳ. ಸಂತೃಪ್ತ ಜನ. ಊರು ತಿಳಿಯಲು ನಾಲ್ಕು ಸುತ್ತು ಬಂದೆವು. ಎರಡು ಹಾಡಿನಷ್ಟೇ ದೂರದ ಪುಟಾಣಿ ಊರು. 


ಊರಿನ ಪೂರ್ವ ತುದಿಯಲ್ಲಿ ತಂಗಲು ವ್ಯವಸ್ಥೆಯಾಗಿತ್ತು. ಜವೆ ಗೋಧಿ, ಬಾರ್ಲಿ, ಹೂ ಕೋಸು, ಆಲೂಗಡ್ಡೆಯ ತೋಟದ ನಡುವೆ ನಮಗೆ ರೂಂ ನೀಡಲಾಗಿತ್ತು. ಕರಿ ಮಣ್ಣಿನ ತೋಟದಲಿ ಹೂಕೋಸು ನಲಿಯುತ್ತಿತ್ತು. ಕೈ ಎಟುಕಿದರೆ ಹೂ ಕೋಸು.
ಧ್ಯಾನಕ್ಕೆ, ಆಧ್ಯಾತ್ಮಕ್ಕೆ ಹೇಳಿ ಮಾಡಿಸಿದ ಊರು. ಇಲ್ಲಿಂದ ಶಿಂಗ್‌ಬಾ ಹೂ ಕಣಿವೆಗೆ ಬರೀ 23 ಕಿ.ಮೀ. ಸಂಜೆಯ ರಗ್‌ ಬಿಚ್ಚುತ್ತಲೇ ಚಳಿ ಅಮರಿಕೊಂಡಿತು. ಊರ ತುದಿಯಲ್ಲೊಂದು ತೊರೆ. ತೊರೆಗೆ ಕಾಲು ಬಿಟ್ಟು ಬೆಟ್ಟವೊಂದು ನಿಂತಿತ್ತು. ಬೆಟ್ಟದ ನೆತ್ತಿಯಲಿ ಐಸ್‌ ಕ್ರೀಂ ಟೋಫಿ. ಅದರ ಬುಡವ ಕಡಿದು ಅಲೆ ಅಲೆಯಾಗಿ ಗದ್ದೆ ನಿರ್ಮಿಸಿದ್ದರು. ಕೆಲವು ಗದ್ದೆಗಳಲ್ಲಿ ಹೋಂ ಸ್ಟೇ ತಲೆ ಎತ್ತಿದ್ದವು.

ಬೆಳ್ಳಂ ಬೆಳಿಗ್ಗೆ ಹೂ ಕಣಿವೆಯತ್ತ…
ಮಗುಚಿ ಬಿದ್ದ ಶಿಂಗ್‌ಬಾ ರೆಡೋ ಡೆಂಡ್ರಾನ್‌ ಸ್ಯಾಂಚುರಿಯ ದಾರಿಯಲಿ ಸರ್ಕಸ್‌ ಮಾಡುತ್ತಾ ನಮ್ಮ ರಥವೇರಿ ಹೊರಟಾಗ ಮನದ ಕದ ತೆರೆದಂತೆ ಬೆಟ್ಟಗಳ ಕದವನ್ನು ಯಾರೋ ತೆರೆದಿಟ್ಟಂತೆ, ತಾಜಾ ಮಾವಿನ ರುಚಿಯಂತೆ, ತಾಜಾ ಕವಿತೆಯಂತೆ ಹೊಸ ಲೋಕವೊಂದು ತೆರೆದುಕೊಂಡಿತು. ದೂರದಿಂದ ಬಂದ ನಮ್ಮನ್ನು ಕಾಣಲು ನೂರಾರು ಕಲ್ಲುಗಳು ಕೈಯಲ್ಲಿ ಕಳಶವಿಲ್ಲದೇ ರಸ್ತೆ ಗುಂಟ ನೆರೆದಿದ್ದವು!! 
ಅಮರೀಶ ಪುರಿಯ ಗಡ್ಡದಂತಹ ರಸ್ತೆ. ರಸ್ತೆ ಯಿಂದ ಅನತಿ ದೂರದಲ್ಲಿ ಹರಿವ ತಿಳಿ ಹಸಿರ ಲಾಚುಂಗ್‌ ನದಿ. ಹಳ್ಳಿಗರಿಗೆ ತೀಸ್ಟಾ. ಲಾಚುಂಗ್‌ ದಾಟುತ್ತ ಸ್ವಲ್ಪ ದೂರದಲ್ಲೇ ಶಿಂಗ್‌ಬಾ ರೆಡೋಡೆಂಡ್ರಾನ್‌ ಹೂ ಕಣಿವೆ. 


ಸ್ವಾಗತಿಸಲು ನಿಂತಂತೆ ಕಾಣುವ ಸಾಲು ಸಾಲು ಡೆಂಡ್ರಾನ್‌ ಮರ. ಪ್ರತಿ ಮರದಲ್ಲೂ ಅರಳಿ ನಿಂತ ನೂರಾರು ಡೆಂಡ್ರಾನ್‌ ಪುಷ್ಪಗಳು. ಕ್ರಿಸ್‌ ಮಸ್ ಮರಕ್ಕೆ ಶೃಂಗರಿಸಿದಂತೆ ಕೆಂಪು, ತಿಳಿ ಅರಶಿನ, ನೇರಳೆ ಹೂ ಶೃಂಗಾರ.‌ ತಣ್ಣಗೆ ಹಸಿರಾಗಿ ಹರಿವ ನದಿ. ಸದಾ ತಣ್ಣಗಿರುವ ಹಿಮ ಪಾತ್ರೆಯಂತಹ ಹಲವು ಹೆಕ್ಟೇರ್‌ ಜಾಗವನ್ನು ಶಿಂಗ್‌ಬಾ ರೆಡೋ ಡೆಂಡ್ರಾನ್‌ ಸ್ಯಾಂಚರಿ ಎಂದು ನಾಮಕರಿಸಿದ್ದಾರೆ. ಯಾವುದೇ ಹೆಸರಿನ ಹಂಗಿಲ್ಲದ ನೂರಾರೂ ಹೂಗಳು ಕಣಿವೆಯುದ್ದಕ್ಕೂ ಅರಳಿ ಸ್ವಾಗತಕ್ಕೆ ನಿಂತಿದ್ದವು. ಭಾರತದ ವಿಶಿಷ್ಟ ಸ್ಯಾಂಚುರಿಯಲ್ಲಿ ನಾವಿದ್ದೆವು. ಎಪ್ರಿಲ್‌ ತಿಂಗಳು ಇಲ್ಲಿಗೆ ಭೇಟಿಕೊಡಲು ಪ್ರಶಸ್ತ. ಹಿಮಾಲಯದ ತಪ್ಪಲಿನಲಿ ಕೆಂಪು ರೆಡೋ ಡೆಂಡ್ರಾನ್‌ ಹೂಗಳು ಸಾಮಾನ್ಯ ಮತ್ತು ಸರ್ವಾಂತರಯಾಮಿ.

ಆದರಿಲ್ಲಿ ನೀವು 24 ಬಗೆಯ ರೆಡೋ ಡೆಂಡ್ರಾನ್‌ ಹೂಗಳಿಗೆ ಸಾಕ್ಷ್ಯವಾಗಬಹುದು. ಪ್ರತಿ ಹೂವು ವಿಶಿಷ್ಟ. ಜೊತೆಗೆ ಲಾಚುಂಗ್‌ ನಿಂದ 23 ಕಿ. ಮಿ ದೂರವಿರುವ ಝೀರೋ ಪಾಯಿಂಟ್‌ ಗೆ ಹೋಗಿ ಮನಸೋ ಇಚ್ಛೆ  ಆಡಬಹುದು. 



ಡೆಂಡ್ರಾನ್‌ ಹೂಗಳಿಗೆ ಮುತ್ತಿಕ್ಕಿ ಮುಂದಡಿ ಇಟ್ಟೆವು. ವಸಂತ ಕಾಲಿಡುತ್ತಿದ್ದಂತೆ ಯಾಕ್‌ಗಳನ್ನು ಇಲ್ಲಿ ಮೇಯಿಸಲಾಗುತ್ತದೆ. ವಸಂತವಿಡಿ ಕಣಿವೆಯಲ್ಲಿ ಮೆಂದು ಮಳೆಗಾಲಕ್ಕೆ ಮತ್ತೆ ಮರಳುತ್ತವೆ. ಸ್ಥಳೀಯರು ತಮ್ಮ ಗೂಡಿಗೆ ಅವನ್ನು ಕರೆತರುತ್ತಾರೆ. ಐರಿಸ್‌, ಪ್ರಿಮುಲಾಸ್‌, ಪೊಪ್ಪಿಸ್‌ ಗಿಡಗಳನ್ನು ಬೀಜ ಸಮೇತವಾಗಿ ತಿಂದು ಗೊಬ್ಬರ ದಾನ ಮಾಡುತ್ತವೆ. ಮರು ವರುಷ ಹಿಮ ಕರಗಿದಂತೆ ಒಂದೊಂದಾಗಿ ಮತ್ತೆ ಚಿಗುರಿ ಹೂ ಅರಳಿಸುತ್ತದೆ. ಶಿಂಗ್‌ಬಾ ರೆಡೋ ಡೆಂಡ್ರಾನ್‌ ಸ್ಯಾಂಚುರಿ ಮದುವಣ ಗಿತ್ತಿಯಂತೆ ಮತ್ತೆ ತೋರುತ್ತದೆ. ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ.

ಶಿಂಗ್‌ಬಾ ರೆಡೋ ಡೆಂಡ್ರಾನ್‌ ಸ್ಯಾಂಚುರಿಯಿಂದ ಮುಂದಕ್ಕೆ…


ತಣ್ಣಗಿನ ಊರಿನ ಬಿಸಿ ನೀರ ಬುಗ್ಗೆ…
ಶಿಂಗ್‌ಬಾ ರೆಡೋ ಡೆಂಡ್ರಾನ್‌ ಸ್ಯಾಂಚುರಿಯ ಸನಿಹದಲ್ಲೇ ಇರುವ ಇನ್ನೊಂದು ಸ್ಥಳ ಹಾಟ್‌ ಸ್ಪ್ರಿಂಗ್. 
ಇಲ್ಲಿನ ಬೆಟ್ಟಗಳು ಸಡಿಲ ಮಣ್ಣಿನ ಬೆಟ್ಟಗಳು. ಅಲ್ಲಲ್ಲಿ ಬಾಯ್ದೆರೆದು ಬಿಸಿ ನೀರಿನ ಬುಗ್ಗೆಗಳ ಉಗುಳುತ್ತವೆ. ಒಡಲೊಳಗಿನ ರಾಸಾಯನಿಕಗಳನ್ನೆಲ್ಲಾ ಕರಗಿಸಿಕೊಂಡು ಮೇಲಕ್ಕೆ ಚಿಮ್ಮುತ್ತದೆ. ಹೆಚ್ಚಿನವುಗಳಲ್ಲಿ ಗಂಧಕದ ಪರಿಮಳ. ಹೂ ಕಣಿವೆಯ ದಾಟುತ್ತಿದ್ದಂತೆ ಬೃಹತ್‌ ಬೆಟ್ಟದ ಬುಡದಲ್ಲೊಂದು ಬಿಸಿ ನೀರಿನ ಬುಗ್ಗೆ. ಬುಗ್ಗೆಯ ಬಿಸಿ ನೀರನ್ನು ತೊಟ್ಟಿಯೊಂದಕ್ಕೆ ಹಾಯಿಸಿ ತಣ್ಣೀರನ್ನೂ ಮಿಶ್ರ ಮಾಡಿ ನೀರ ತಾಪವನ್ನು ಕಡಿಮೆ ಗೊಳಿಸಿದ್ದರು.
ಆ ತೊಟ್ಟಿಯಲ್ಲಿದ್ದ ಕೊಳಕನ್ನು ನೋಡಿ ಅಸಹ್ಯವೆನಿಸಿ ಹಾಗೇ ಬಂದೆವು. ನೀರು ಸಹಾ ವಿಪರೀತ ಬಿಸಿಯಿತ್ತು. 


ಪಂಜಾಬಿ ಕುಟುಂಬವೊಂದು ಬಂದು ಬುಗ್ಗೆಯ ನೀರನ್ನು ಮೆಲಕ್ಕೆ ಚಿಮ್ಮಿಸಿದರು. ಮೌನದ ಬಗ್ಗೆ ಮತ್ತು ಸಾರ್ವಜನಿಕ ನಡೆವಳಿಕೆಯ ಕುರಿತು ವಿವರಿಸಿ ಹೇಳುವುದು ವ್ಯರ್ಥ ಎಂದು ಒಂದೂ ಮಾತನಾಡದೆ ಸುಮ್ಮನೆ ಬಂದೆ. ಸಾರ್ವಜನಿಕ ಸ್ಥಳಗಳಲ್ಲಿ ಹೇಗೆ ವರ್ತಿಸಬೇಕೆಂಬ ಮೂಲಪಾಠವನು ಇವರಿಗೆ ಕಲಿಸುವವರು ಯಾರು? ದಾಂದಲೆಗೆ ಕಿವುಡಾಗಿ ಯುಮ್ತಾಂಗ್‌ ಕಣಿವೆಯ ಸೌಂದರ್ಯವನು ಸವಿಯುತ್ತಾ ಕುಳಿತೆ. ಅಮ್ಮನ ನೀಲಿ ಸೆರಗಿನಂತೆ ತಿಳಿ ಹಸಿರಾಗಿ ಲಾಚುಂಗ್‌ ನದಿ ಹರಿಯುತ್ತಲೇ ಇತ್ತು. ದೂರದ ಝೀರೋ ಪಾಯಿಂಟ್‌ನಲ್ಲಿ ಹಿಮ ಹೊದ್ದ ಬೆಟ್ಟಗಳು ಕಣಿವೆಗೆ ನೀರುಣಿಸುವ ಬೆಟ್ಟದ ಮಹಾ ಮೊಲೆಗಳಂತೆ ಕಂಡವು. 
ಜೋಳಿಗೆಯಲ್ಲಿ ಅಡಗಿದ್ದ ನಾಲ್ಕು ರೆಡೋಡೆಂಡ್ರಾನ್‌ ಹೂಗಳು ಕಿವಿ ಏರಿ ಖುಷಿ ಪಟ್ಟವು. ಕೆಲವನ್ನು ಚಟ್ನಿ ಮಾಡುವ ಆಸೆಯಿಂದಲೂ ತೆಗೆದುಕೊಂಡೆ. ಕಾಡಿಗೆ ಬೆಂಕಿ ಬಿದ್ದಂತೆ ‌ಗಿರಿಯ ನೆತ್ತಿ ತುಂಬಾ ಡೆಂಡ್ರಾನ್‌ ಹೂಗಳ ರಾಶಿ ರಾಶಿ.

ತುದಿಯಿಂದ ತುದಿಗೆ ಜೋಕಾಲಿಯಂತೆ ನೇತುಬಿದ್ದ ತೂಗು ಸೇತುವೆಯಲಿ ನಿಂತು ಪ್ರಕೃತಿಯಲಿ ಕರಗಿದೆವು. ಬೆಟ್ಟಕ್ಕೂ ಬಯಲಿಗೂ ಸೇತುವೆಯಾದ ನದಿ, ಬಯಲ ಕನಸು ಹೊತ್ತು ತಣ್ಣಗೆ ಹರಿಯುತ್ತಿತ್ತು. ಪಾಪ ಏನೋ ಧಾವಂತ. ನಾವು ಬೆಟ್ಟ ಅರಸಿ ಬಂದಿದ್ದೆವು. ನಮಗ್ಯಾವ ಧಾವಂತವೂ ಇರಲಿಲ್ಲ.
ಬಯಲಿನ ಬದುಕು ಹಸನಾಗಲು ಬೆಟ್ಟ ಹಿಮ ಹೊರಬೇಕು ಮತ್ತು ಸದಾ ಕರಗುತ್ತಲೇ ಇರಬೇಕು. ಯಾವುದನ್ನೋ ಸಲಹಲು ಇನ್ನಾವುದನ್ನೋ ಕರಗಿಸುವ ಗಾರುಡಿಗ ಈ ಪ್ರಕೃತಿಯ. ಈ ಎಲ್ಲಾ ಪ್ರಕೃತಿಯ ವಿಸ್ಮಯದಿಂದ ಝೀರೋ ಪಾಯಿಂಟ್‌ ಕೆಲವೇ ಕಿಲೋ ಮೀಟರ್.

ಹೊಟ್ಟೆ ತನ್ನ ಏಕತಾಳ ಶುರುವಿಟ್ಟುಕೊಂಡಿತು. ೪೬ ನೆಯ ನಂಬರಿನ ಅಂಗಡಿಗೆ ನುಗ್ಗಿದೆವು. ಯಾವನೋ ಒಬ್ಬ ಯಾಕ್‌ ನ ಮಾಂಸ ಹದ ಮಾಡುತ್ತಾ ಕುಳಿತಿದ್ದ. ದೂರದಲ್ಲಿ ಹಸನ್ಮುಖಿ ಅಜ್ಜಿಯೊಬ್ಬಳು ಶಾಖಹಾರಿ ತುಪ್ಕಾ ತಯಾರಿಯಲ್ಲಿದ್ದಳು.

ನಾವು ಅನುಮಾನಿಸ ತೊಡಗಿದೆವು. ಶುದ್ಧ ಶಾಖಹಾರಿ ಎಂದು ಮತ್ತೊಮ್ಮೆ ಒತ್ತಿ ಹೇಳಿದಳು. ನಾವು ಆರ್ಡರಿಸಿ ಸಿಕ್ಕಿಂನ ಸ್ಪೆಷಲ್ ತುಪ್ಕಾ ಸವಿದೆವು.‌ ಹೊಟ್ಟೆ ಮತ್ತು ಮನಸ್ಸನ್ನು ತಣಿಸಿತು. 
ಇಂತಹ ಅವಿಸ್ಮರಣೀಯ ವಿಸ್ಮಯಗಳಿಗೆ ಸಾಕ್ಷಿಯಾಗಿ ಬಂದು ಏಳು ವರ್ಷ ಕಳೆದರೂ ಲಾಚುಂಗ್‌ ನದಿಯ ಬೋರ್ಗೆರೆತ ದೊಂದಿಗೆ ಬೆರೆತ ರೆಡೊ ಡೆಂಡ್ರಾನ ಹೂವ ಗಂಧವಿನ್ನು ನನ್ನ ನಾಸಿಕಾಗ್ರದಲ್ಲೇ ಇದೆ. ಇವುಗಳ ಪರಿಮಳಕ್ಕೆ ಸಾಕ್ಷಿಯಾಗಲು ತೀಸ್ಟಾ ನದಿಯ ಜುಳು ಜುಳುಗೆ ಕಿವಿಯಾಗಲು ನೀವು ಯಾವಾಗ ಬರುವಿರಿ. 





ವಾರೆ ನೋಟ

ತಿಲಮಿಟ್ಟಿಯ ತೀರದಲಿ

  ಭಾವುಟ ಹೊತ್ತ ಯಾವುದೋ ದೋಣಿ ಕಾರವಾರದ ದಡವ ತಡುವಲು ದೂರದಲಿ ಬರುತಲಿತ್ತು. ದಂಪತಿಗಳಿಬ್ಬರ ಜೊತೆ  ಇನ್ನಿಬ್ಬರು ಸೇರಿ ಮತ್ತೊಂದು ದೋಣಿಯ ದಡಕ್ಕೆ ಎಳೆಯುತ್ತಿದ್ದರು.  ...