Thursday, May 29, 2025

ಮಹಾ ಪಯಣದ ಹೆಜ್ಜೆ ಗುರುತುಗಳು

 


ಯುದ್ಧದ ಭೀಕರತೆಯನ್ನು ಸಂದಿಗ್ಧ ಪರಿಸ್ಥಿತಿ  ಮತ್ತು ಗೊಂದಲಗಳನ್ನು ಬಹಳ ಸ್ಪಷ್ಟವಾಗಿ ಮತ್ತು ರೋಚಕವಾಗಿ ಪ್ರಸ್ತುತಪಡಿಸುವ ಮಹಾಪಲಾಯನ ಕನ್ನಡ ಬಲ್ಲವರೆಲ್ಲರೂ ಓದಬೇಕಾದ ಕೃತಿ.

 ತಮ್ಮ ನಾಲ್ಕು ಸಾವಿರ ಮೈಲುಗಳ ಭೀಕರ ನಡಿಗೆ ಮತ್ತು ಎದುರಾದ ಸಂಕಷ್ಟಗಳನ್ನು ನಮ್ಮ ಮುಂದೆ ಸರಳವಾಗಿ  ಹರವಿಟ್ಟಿದ್ದಾರೆ ತೇಜಸ್ವಿ. 

     ಬದುಕೇ ಒಂದು ಸ್ವಾತಂತ್ರ್ಯಕ್ಕಾಗಿ ಅನನ್ಯ ಹೋರಾಟ. ನದಿ ತೊರೆ ಬೆಟ್ಟಗಳನ್ನೆಲ್ಲ ಗೆಲ್ಲುತ್ತಾ ಸ್ಲೋವಿಯರ್ ಕೊನೆಗೆ ಭಾರತಕ್ಕೆ ಬಂದಿದ್ದೆ ಒಂದು ಮಹಾನ್ ಅಚ್ಚರಿ. ಹಿಮಾಲಯದ ಸಣ್ಣಪುಟ್ಟ ಬೆಟ್ಟಗಳನ್ನು ಹತ್ತಿ ಇಳಿಯಲು ನಾವು ತಿಣುಕಾಡಬೇಕು. ಅಂತಹುದರಲ್ಲಿ ಯಾವುದೇ ಉಪಕರಣಗಳಿಲ್ಲದೆ ಕೇವಲ ಚರ್ಮದ ದಾರ ಸಣ್ಣ ವಯರ್ ಬಳಸಿ ಹಿಮಾಲಯವನ್ನು ದಾಟಿಕೊಂಡಿದ್ದು ಪ್ರಪಂಚದ ಮಹಾ ಪವಾಡ. 

 ನೀರಿಲ್ಲದೆ ಗೋಬಿ ಮರುಭೂಮಿಯನ್ನು ಬರಿಗಾಲಲ್ಲಿ ದಾಟುವುದು  ಒಂದು ರೋಚಕ ಮಹಾಸಾಹಸ! ಮಹಾನರಕದ ಗೋಬಿ ಮರುಭೂಮಿಯನ್ನು ನೀರಿಲ್ಲದೆ ದಾಟಿದ್ದು ಒಂದು ವಿಶೇಷ ಅವರ ಮನೋ ಶಕ್ತಿ ಅಭೀಪ್ಸೆಗಳಿಗೆ ಸಾಕ್ಷಿ. ಹಾವು ತಿಂದು ಗೋಬಿ ಮರುಭೂಮಿಯಲ್ಲಿ ಬದುಕಿ ಉಳಿದದ್ದೊಂದು ಅಚ್ಚರಿ.

 ದಾರಿ ಉದ್ದಕ್ಕೂ ಸಿಕ್ಕ ಅನಾಗರಿಕರ ಆದೃ ಸಹಕಾರ. ಅವರ ಹೃದಯ ವೈಶಾಲ್ಯತೆ ನಾಗರಿಕರಲ್ಲೂ ಕಾಣಸಿಗದು ಪ್ರತಿಯೊಬ್ಬ ಅನಾಮಿಕನು ತಮಗೆ ಸಹಾಯ ಹಸ್ತ ಚಾಚುತ್ತಾ ಗಮ್ಯದೆಡೆಗೆ ಪಯಣಿಸುತ್ತಾ, ಈ ಪಯಣ ಹುಟ್ಟಿಸಿದ ಭರವಸೆ ಅಂತಿಂಥದ್ದಲ್ಲ. ಪ್ರತಿಯೊಂದುಕ್ಕೂ ಅನುಮಾನಿಸುವ ನಾಗರೀಕ ಪ್ರಪಂಚದಲ್ಲಿ ಗೊತ್ತಿಲ್ಲದೆಯೇ ಆದರಿಸುವ ಅನಾಗರಿಕ ಪ್ರಪಂಚವೆಲ್ಲಿ. ಯಾವುದಕ್ಕೆ ಯಾವುದು ಹೋಲಿಕೆ? ಮಾಡದ ತಪ್ಪಿಗೆ ಪರಿತಪಿಸುವಂತಹ ಶಿಕ್ಷೆ ನೀಡಿದ ನಾಗರಿಕ ಪ್ರಪಂಚ ಒಂದೆಡೆಯಾದರೆ ಕರೆದು ಆದರಿಸಿ ಸತ್ಕರಿಸುವ ಅಲೆಮಾರಿಗಳು. ತಕ್ಕಡಿಯ ಈ ಕಡೆಯೇ ಭಾರ. 

 ರಷ್ಯಾದಿಂದ ಭಾರತದವರೆಗೆ ಅಪರಿಚಿತ ಅನಾಗರಿಕರು ತೋರಿದ ಆಸ್ತೆ, ಪ್ರೀತಿ, ವಾತ್ಸಲ್ಯ ನಮ್ಮ ಕಣ್ಣನ್ನು ಹೊಳೆಯಾಗಿಸುತ್ತದೆ. ಗೋಬಿ ಮರುಭೂಮಿಯಲ್ಲಿ ಸಿಗುವ ಹಳ್ಳಿಗ, ಮಂಗೋಲಿಯ ದೇಶದಾಟಿದ ನಂತರ ಸಿಗುವ ಮುದುಕ, ಟಿಬೆಟ್ ಪ್ರಾರಂಭಕ್ಕಿಂತ ಮೊದಲು ಸಿಕ್ಕಿದ ಪುಟಾಣಿ ಹಳ್ಳಿಯ ಗ್ರಾಮಸ್ಥರ ಸತ್ಕಾರ ನಮ್ಮ ಹೃದಯ ತುಂಬಿ ಬರುವಂತೆ ಮಾಡುತ್ತದೆ.

 ಸೈಬೀರಿಯಾದ ಘೋರ ಚಳಿಯನ್ನು ಒಂದೇ ಒಂದು ಜೊತೆ ಬಟ್ಟೆಯಲ್ಲಿ ದಾಟಿದ್ದು , ಟಿಬೇಟ್ ಮತ್ತು ಹಿಮಾಲಯವನ್ನು  ಹತ್ತಿ ಇಳಿದಿದ್ದು, ಕೈಲಾಸ ಸರೋವರದ ಸನಿಹವೇ ಹಾದುಹೋಗಿದ್ದು, ನರಕ ಸದೃಶ ಗೋಬಿ ಮರುಭೂಮಿಯನ್ನು ದಾಟಿದ್ದು, ಎಂಟು ಅಡಿ ಎತ್ತರದ ಹಿಮ ಮಾನವನನ್ನು ನೋಡಿದ್ದು  ಈ ಪ್ರಯಾಣದ ಪ್ರಮುಖ ಹೆಜ್ಜೆ ಗುರುತುಗಳು.

 ಮನುಷ್ಯನ ಅಪಾರ ಮನೋಬಲ, ಸ್ವಾತಂತ್ರದೆಡೆಗಿನ  ತುಡಿತವನ್ನು ಎತ್ತಿ ಹಿಡಿಯುವ  ಅನನ್ಯ ಕೃತಿ.

 ಇಂತಹ ಮಹಾ ಪ್ರಯಾಣ ಮನುಕುಲದ ಹಾದಿಯಲ್ಲಿ ಹಿಂದೆಂದೂ ನಡೆದಿಲ್ಲ ಮುಂದೆ ನಡೆಯುವುದು ಇಲ್ಲ. ನಾಲ್ಕುವರೆ ತಿಂಗಳ ಅವಧಿಯಲ್ಲಿ ಸುಮಾರು 2000 ಮೈಲು ನಡೆದ ದಾಖಲೆ ಇಲ್ಲ!! ಒಟ್ಟು ನಡೆದ ಹಾದಿ ನಾಲ್ಕು ಸಾವಿರ ಮೈಲಿ!!


ಅಸಾಧ್ಯ ವಾದ ರೋಚಕ ಸಾಹಸದ ನೈಜಕತಾನಕ ಮಹಾಪಲಾಯನ.

ಏಕೆ ನೀವಿನ್ನು ಓದಿಲ್ಲ?

No comments:

Post a Comment

ವಾರೆ ನೋಟ

ಮಹಾ ಪಯಣದ ಹೆಜ್ಜೆ ಗುರುತುಗಳು

  ಯುದ್ಧದ ಭೀಕರತೆಯನ್ನು ಸಂದಿಗ್ಧ ಪರಿಸ್ಥಿತಿ  ಮತ್ತು ಗೊಂದಲಗಳನ್ನು ಬಹಳ ಸ್ಪಷ್ಟವಾಗಿ ಮತ್ತು ರೋಚಕವಾಗಿ ಪ್ರಸ್ತುತಪಡಿಸುವ ಮಹಾಪಲಾಯನ ಕನ್ನಡ ಬಲ್ಲವರೆಲ್ಲರೂ ಓದಬೇಕಾದ ಕ...