Sunday, August 11, 2024

ಹಸಿರು ಮುಕ್ಕಳಿಸುವ ದಾರಿಯಲ್ಲಿ ಮೂರು ಹೆಜ್ಜೆ


ಯಲ ಜಗಲಿಗೆ ಬಂದ ಸೂರ್ಯ ಗುಟ್ಟಾಗಿ ಹೂಗಳ ಮಧುವ ಹೀರುತಲಿದ್ದ. ಕಾಫೀ ಪ್ಲಾಂಟೇಷನೊಳಗೆ ಅಲ್ಲಲ್ಲಿ ಬಿಸಿಲ ಛಾಪೆ ಹಾಸಿದ್ದ. ಮೂಡಿಗೆರೆಯಿಂದ ನಮ್ಮ ತೇರು ಹೊರಟಿದ್ದು ಜೇನು ಕಲ್ಲು ಗುಡ್ಡಕ್ಕೆ. ಉಜಿರೆಯ ಗೆಳೆಯನ ಮನೆಗೆ ಹೋದಾಗ ಅಕಸ್ಮಾತ್ತಾಗಿ ನೆನಪಾದ ಜೇನುಕಲ್ಲು ಗುಡ್ಡ ಹತ್ತುವ ಉಮೇದು ಮಾಡಿದೆವು. ನೂರಾರು ಚಾರಣ ದಾರಿಗಳಲ್ಲಿ ಇದೊಂದು ವಿಶಿಷ್ಟ. ತೇಜಸ್ವೀ ಕತೆಗಳಲ್ಲಿ ಕಂಡ ಊರುಗಳೆಲ್ಲಾ ಮರೆವಣಿಗೆ ಹೊರಟಿದ್ದವು. ನೆನಪಿನ ಆಗಸದಲ್ಲಿ ಬಿಳಿ ಮೋಡಗಳ ಚಿತ್ತಾರ.




ಕಾಫಿ ನಾಡು ಗೋಪ್ರೋ ಕ್ಯಾಮರದಲ್ಲಿ ಯಥಾವತ್ತು ಚಿತ್ರಿತವಾಗುತ್ತಿತ್ತು.  ಪ್ರತಿ ತಿರುವುಗಳು, ಮಂಡಾಳೆ ಹಾಕಿ ಹೊರಟ ಜನರೆಲ್ಲಾ ಗೋಪ್ರೋ ಕ್ಯಾಮರದಲ್ಲಿ ಬಂದಿ. ನಮ್ಮೊಂದಿಗೆ ಕಿಲೋ ಮೀಟರ್‌ ಗಟ್ಟಲೆ ಕಂಪೆನಿ ನೀಡಿದ ಜೇನು ಕಲ್ಲು ಗುಡ್ಡ ಮರೆಯಾಗಿ ಹೋಗಿತ್ತು. ಚದುರಿದ ಜನಸಂಖ್ಯೆ. ಗುಡ್ಡಕ್ಕೆ ಬಡಿದ ಬುಲೆಟ್‌ ಸದ್ದು ಕಿವಿತುಂಬುತಲಿತ್ತು. ಮೂಡಿಗೆರೆಯಿಂದ ಖಾನಾಪುರದ ದಾರಿ ಹಿಡಿದು ಅಲ್ಲಿ ಬಲಕ್ಕೆ ಹೊರಳಿ ಕೊಳ್ಳಬೇಕು. ಕಾಫಿ ಕಾಡಿನ ಹೆಬ್ಬಾವಿನ ಹೆದ್ದಾರಿ. ಅಲ್ಲಲ್ಲಿ ಚದುರಿದ ಮನೆಗಳ ನಡುವೆ ಅನಂತದ ಓಟ. ಜನರೇ ಜಗತ್ತಿನಿಂದ ಕಣ್ಮರೆಯಾದಂತೆ ಭ್ರಮಿಸ ಬಹುದಾದ ಭ್ರಾಮಕ ಜಗತ್ತಿನಲ್ಲಿ ಒಂಟಿ ಬುಲೆಟ್‌ನ ಓಟ. ಗದ್ದೆಯಂಚಿನ ದಾರಿಗಳಲ್ಲಿ ನಮ್ಮ ಒಂಟಿ ಸಲಗ. ಇಪ್ಪತ್ತು ಮವತ್ತು ವರುಷಗಳ ಕೆಳಗಿನ ಪರಿಸ್ಥಿತಿಯನ್ನು ನೆನೆದು ಚಕಿತಗೊಂಡೆ.

ವಿಚಿತ್ರ ಹೆಸರುಗಳ ಊರಿನಲ್ಲಿ…….

ಯಾವ ಮನೆ ಹಾಳ ಈ ಹೆಸರಿಟ್ಟನೋ ಭಗವಂತ ಬಲ್ಲ ಬೂದಿಹಾಳ! ಬೂದಿಹಾಳ ಊರಿನಲ್ಲಿ ಎಡಕ್ಕೆ ತಿರುಗಿ ಬೈಕ್‌ನ ಕೀಲಿ ತಿರುವಿ ಸುಮ್ಮನಿರಿಸುತ್ತಲೇ ಸಾವಿರ ಜೀರುಂಡೆಗಳು ಮಾಲ್‌ಕೌಂಸ್‌ ರಾಗದಲ್ಲಿ ತಮ್ಮ ಆರ್ಕೆಸ್ಟ್ರಾ ಶುರು ಮಾಡಿದವು. ಇಂತಹುದೇ ನೂರಾರು ವಿಚಿತ್ರ ಹೆಸರಿನ ಊರುಗಳ ಹಿಂದೆ ಬೀಳಬೇಕು. ಮೂಲ ಕೆದುಕ ಬೇಕು. 

ಬೂದಿ ಹಾಳ ಊರಿನಲ್ಲಿ ಎಡಕ್ಕೆ ತಿರುಗಿ ಬೈಕ್‌ನ ಕೀಲಿ ತಿರುವಿ ಸುಮ್ಮನಿರಿಸುತ್ತಲೇ ಸಾವಿರ ಜೀರುಂಡೆಗಳು ತಮ್ಮ ವಯೋಲಿನ್‌ ಹಿಡಿದು ಆರ್ಕೆಸ್ಟ್ರಾ ಮಾಡಲು ಬಂದವು.

ದಾರಿ ಯಾವುದಯ್ಯ-

ಒಂಟಿ ಮನೆಯ ಯಜಮಾನನಲ್ಲಿ “ಹೊಯ್‌ ಜೇನುಕಲ್ಲು ಗುಡ್ಡಕ್ಕೆ ಹೋಪುದು ಹ್ಯಾಂಗೆ?” ಎಂದರೆ ತನ್ನ ಉಬ್ಬಸಮಯ ಉಸಿರನ್ನು ಮೇಲೆ ಕೆಳಕ್ಕೆ ಒಯ್ದು ತನ್ನ ವಿಶಿಷ್ಟ ಕನ್ನಡದಲ್ಲಿ ದಾರಿ ಉಸುರಿದ. ಜೀರುಂಡೆಯ ಜಗತ್ತಿನಲ್ಲಿ ಸದಾ ಒಂಟಿಯಾಗಿ ಬದುಕುವ ಇವರ ಬದುಕು ನಮಗೆ ಪರಮಾಶ್ಚರ್ಯ. ಜನ ಸಮುದ್ರದ ನಡುವೆ ಇದ್ದರೂ ನಮ್ಮಂತವರು ಸದಾ ಒಂಟಿ.

ಕಾಡ ಜಗುಲಿಗೂ ಕಾಲಿಟ್ಟ ನೂರಾರು ರೆಸಾರ್ಟಗಳು, ಕಲ್ಪನೆ ಬುಡಮೇಲು ಮಾಡಿದ ಅನೇಕ ಹೋಂ ಸ್ಟೇಗಳು. ಹಸಿರ ಕಾಡಿನ ನಡುವೆ ಕಾಂಕ್ರಿಟ್‌ ಕಾಡು ಬೆಳೆಸುತ್ತಿರುವವರ ಬಗಗೆ ಒಂದು ವಿನಮ್ರ ಕಾಳಜಿ. ಪರಿಸರವ ಹಾಳುಗೆಡುಹದಿರಿ.


ಆತ್ಮಹತ್ಯೆಗೆ ಸಮಾನವಾದ ದಾರಿಯನ್ನು ತೋರಿ ನಮ್ಮಿಬ್ಬರನ್ನು ಸಾಗಹಾಕಿದ ಆಸಾಮಿ ನಾಪತ್ತೆ.

ತೀವ್ರ ಕೊರಕಲಿನ ಇಳಿಜಾರು ಹಾದಿ. ಹಾದಿಗುಂಟ ಹಾಸಿದ ಮರಗಳ ಚಪ್ಪರ. ಸಹಸ್ರ ಸಹಸ್ರ ಜೀರುಂಡೆಗಳು ಪಿಟೀಲು ಹಿಡಿದು ನಮ್ಮ ಆಗಮನವನ್ನು ಸಂಭ್ರಮಿಸತೊಡಗಿದವು. ಕೆಲವೊಮ್ಮೆ ಏಕತಾಳ ಕೆಲವೊಮ್ಮೆ ದ್ವಿತಾಳ. ನೂರಾರು ಕೀಟಗಳೂ ನಮ್ಮ ಜೊತೆಗೇ ಪ್ರಯಾಣ ಹೊರಟಿದ್ದವು. ಕಕ್ಕೆ ಮುಂತಾದ ಮರಗಳ ಪುಟ್ಟ ವಿಶ್ವವಿಧ್ಯಾಲಯ ತೆರೆದುಕೊಂಡಿತು. ಇಲ್ಲಿನ ಜೀವ ವೈವಿಧ್ಯ ಬೆರಗು ಮೂಡಿಸುವಂತಹದು. ಅಧ್ಯಯನ ಕಾರರಿಗೆ ಪಂಥಾಹ್ವಾನ.

ಗೆಳೆಯನೊಂದಿಗೆ ಹರಟುತ್ತಾ ಗುಡ್ಡಕ್ಕೆ ದಾಗುಂಡಿ ಇಟ್ಟೆವು. ಗೋವುಗಳ ನಾದದ ಜೊತೆಗೆ ಗೋಪಾಲಕನ ಸದ್ದು ಕಿವಿ ತುಂಬಿತ್ತು. ಚಾರಣ ಪ್ರಾರಂಭದಲಿ ಚಿಕ್ಕ ಕಾಡು, ಎರಡು ಗುಡ್ಡಗಳು ಸಂಧಿಸುವ ಜಾಗ.

ಮೇಲೆರುತ್ತಲೇ ಕಾಲಿಗೆ ಮುತ್ತಿದ ಇಂಬಳವನ್ನು ಉದುರಿಸಲು ಅವುಗಳ ಮೇಲೆ ನಶ್ಯ ಹುಡಿಯ ಸನ್ಮಾನ ಮಾಡಿದೆ. ಸನ್ಮಾನಕ್ಕೆ ತಲೆಬಾಗಿ ಖುಷಿ ಪಟ್ಟವು!!

ಗುರ್ಗಿ ಗಿಡದ ಸಮುದ್ರವೇ ನಮ್ಮ ಮುಂದೆ. ಜೊತೆಗೆ ಕಕ್ಕೆ ಮುಂತಾದ ಮರಗಳ ಸಂಧಿನಲಿ ನುಸುಳ ಬೇಕಾಯಿತು. ಶೋಲಾ ಕಾಡಿನ ನಡುವೆ ಹುದುಗಿಸಿಟ್ಟ ಬೆಟ್ಟ ಕಾಣದೇ ದಾರಿ ತಪ್ಪಿದ ಮಕ್ಕಳಾದೆವು. ದಾರಿಯುದ್ದಕ್ಕೂ ಆನೆ, ಕಾಡುಕೋಣಗಳ ಲದ್ಧಿ, ಕುಮಾರ ಪರ್ವತದ ತಪ್ಪಲಿನಲಿ ಆನೆಯ ಆರ್ಭಟದ ನೆನಪು ಬೆನ್ನು ಹುರಿಯಲ್ಲೊಂದು ಸಣ್ಣ ಭಯ ಹುಟ್ಟಿಸಿತು. ಈ ಭಯವೇ ಸುತ್ತಲಿನ ಪ್ರಾಣಿ ಪಕ್ಷಿ ಗಿಡ ಗಂಟೆಗಳನ್ನು ಆಸ್ವಾದಿಸದಂತೆ ಪ್ರತಿಬಂಧಿಸಿದವು. ಭಯವಿಲ್ಲದ ಸ್ಥಿತಿಯೇ ಅನುಭವ ಸಾಣೆಯ ಆಶಾ ಕಿರಣ.

ಮೂಡಿ ಬಂದ ಬೆಳ್ಳಿ ಕಿರಣ-

        ಜೇನು ಕಲ್ಲು ಗುಡ್ಡ ದೂರದಿಂದಲೇ ಕಿಸಕ್ಕನೇ ನಕ್ಕು ತನ್ನಲ್ಲೇ, ಬೇಕಾ ಬಡ್ಡಿ ಮಗನೇ ಎಂದತಾಯ್ತು. ನನ್ನ ಜೊತೆಗೇ ಅಸಂಖ್ಯಾತ ಹುಳು ಹುಪ್ಪಟೆಗಳೂ ಜೇನುಕಲ್ಲು ಗುಡ್ಡಕ್ಕೆ ಪ್ರವಾಸ ಹೊರಟಿದ್ದವು! ಜೀರುಂಡೆಗಳು ತಮಾಷೆಯಾಗಿ ನಕ್ಕವು. 




ಅಗೋಚರ ದಾರಿಯಲಿ ಅರ್ಧ ಗಂಟೆಯ ತೀವ್ರ ಹುಡುಕಾಟದ ನಂತರ ಬೆಳ್ಳಿ ಕಿರಣದ ಟಿಸಿಲು. ಬೆಟ್ಟದ ಕಿರು ದಾರಿ ತೆರೆದುಕೊಳ್ಳುತ್ತಲೇ ಸುತ್ತಲಿನ ಚರಾಚರಗಳೆಲ್ಲಾ ಸಜೀವಗೊಂಡವು. ಸುಮ್ಮನಾದ ಜೀರುಂಡೆಗಳು ಒಂದೇ ಸಲಕ್ಕೆ ತಮ್ಮ ಮೊದಲಿನ ಮಾಲ್ಕಂಸ್‌ ರಾಗವನ್ನು ಬಾರಿಸಿತೊಡಗಿದವು. ರಾಗದಲ್ಲಿ ಕರಗಿ ಮುಂದಡಿ ಇಟ್ಟೆವು. ಲಯಕ್ಕೆ ಮರಳಿದವು. ಪೊದೆ ಜಾತಿಯ ಮರಗಳು ತೆಳುವಾಗುತ್ತಾ ಸಾಗಿ ಶಿಖರಾಗ್ರ ಕಾಣತೊಡಗಿತ್ತು.


ನೀಲಿ ಹೊತ್ತ ಆಗಸದಡಿಯಲಿ ಹೂ ಹಾಸಿಗೆಯಂತಹ ಹುಲ್ಲ ಮೇಲಿನ ಸುಂದರ ಪ್ರಯಾಣ.  ಸ್ವಾಗತಕ್ಕೆ ನೀಲ ಮತ್ತು ಗಾಢ ಗುಲಾಲಿಯ ಕರ್ಣ ಕುಂಡಲ ಗಿಡಗಳು ಪೂರ್ಣ ಕುಂಬ ಹಿಡಿದು ಬಂದಿದ್ದವು. ನೀಲ ಕುರುಂಜಿ ಎಂಬ ವಿಶಿಷ್ಟ ಹೂವಿನ ನೆನಪಾಯಿತು. ಕೂಡಲೇ ಸಂಶೋಧನೆಗೆ ಇಳಿದೆ. ಮತ್ತೊಮ್ಮೆ ಬಂದು ಸಂಶೋಧಕನಾಗುವಿಯಂತೆ ಎಂದು ಗೆಳೆಯ ಕಾಲೆಳೆದನಾದುದರಿಂದ ಬೆಟ್ಟದೆಡೆಗೆ ಹೊರಳುವವನಾದೆ. ಗಾಳಿಯ ಕಣ ಕಣದಲ್ಲೂ ಹೂವ ಗಂಧ. ಚೇತೋಹಾರಿ ಚೆಲುವಿನ ಗುಚ್ಛ. ದಾರಿಯುದ್ದಕ್ಕೂ ತಂಪು ಗಾಳಿಯ ಸಾಂತ್ವನ. ಬಲದ ದಿಕ್ಕಿಗೆ ತೀವ್ರ ಕಣಿವೆ. ದೂರದಲ್ಲೆಲ್ಲೋ ಎರಡು ಒಂಟಿ ಮನೆಗಳು. ನಿರ್ಮಲವಾಗಿ ಬದುಕುವ ಇವರ ಜೀವನೋತ್ಸಾಹ. ಇಲ್ಲಗಳ ನಡುವೆಯೂ ನಗುವ ನಯನಗಳು ನಗರವಾಸಿಗಳಾದ ನಮ್ಮ ನಿದ್ದೆ ಕೆಡಿಸಿದವು. ಆಗಾಗ ಕೇಳಿಬರುವ ದನಗಳ ಕೊರಳ ನಿನಾದ. ಜೇನಿಗೆ ಮುತ್ತಿಡುವ ದುಂಬಿಗಡಣ. ಇಂಗ್ಲೀಷ್‌ ನ ಎಲ್‌ ಆಕಾರದಲ್ಲಿ ಹರವಿನಿಂತ ಗುಡ್ಡ. ಗುಡ್ಡಗುಂಟ ಕೇವಲ ಎರಡೇ ಎರಡು ಇಳಿಜಾರು. ಬಾಕಿ ಎಲ್ಲವೂ ಆರೋಹಣ. ಈ ಗುಡ್ಡ ಜೇನುಕಲ್ಲು ಹೇಗಾಯಿತು ಎಂದು ಚಿಂತಿಸುತ್ತಾ ಮೇಲೇರಿದೆ. 





ನೆತ್ತಿಯಲಿ ನಿಂತು-

ನಿರಹಂಕಾರಿ ಗುಡ್ಡದ ನೆತ್ತಿಯಲಿ ನಿಂತಾಗ ಸೂರ್ಯನು ನಡು ನೆತ್ತಿಯ ಮೇಲೆ ಕತ್ತಿ ಝಳಪಿಸುತಲಿದ್ದ. ಅಲೆ ಅಲೆ ಯಂತೆ ಶಿಖರಗಳು. ಹಸಿರು ಜುಟ್ಟು ಬಿಟ್ಟ ನೂರಾರು ಸುಂದರಾಂಗನೆಯರು ಸುತ್ತಲೂ ನೆರೆದಿದ್ದರು! ಅದರಲ್ಲೊಂದು ಎತ್ತಿನ ಭುಜ. ಎಂತಹ ಎಂಟೆದೆಯ ಬಂಟನನ್ನು ಬೆದರಿಸುವ ಅದರ ನೆತ್ತಿ ಇಲ್ಲಿಂದ ನಿಚ್ಚಳ. ಜಾರದಂತೆ ಸಮತೋಲನ ಕಾಪಾಡಿಕೊಂಡು ನೆತ್ತಿಯ ಸವರುವುದು ಬಲು ಕಠಿಣ.





ಕುದುರೆ ಮುಖವೂ ಇಲ್ಲಿಂದ ಸ್ಪಷ್ಟ. ನೆತ್ತಿ ಮೇಲಿನ ಹುಲ್ಲ ಹಾಸಿಗೆಯಲಿ ಒಂದರ್ಧ ಗಂಟೆ ವಿರಮಿಸಿ ಬುತ್ತಿಗಂಟಿನೊಡನೆ ಹೊರಟು ಬಿಟ್ಟೆವು. ಸುತ್ತಲಿನ ದೃಶ್ಯ ಕಾವ್ಯವನ್ನು ಪದಗಳಲ್ಲಿ ಹಿಡಿದಿಡುವಲ್ಲಿ ಸೋತವು.

 

ಅಚ್ಚರಿಗೊಳಿಸಿದ ಡ್ರಾಸಿರ:-

ಬೆಟ್ಟದೊಡಲಿನ ಅಚ್ಚರಿಗಳ ತಿಳಿಯಬೇಕಾದರೆ ಒಂಟಿಯಾಗಿ ಏರಬೇಕು. ಪ್ರಕೃತಿಯ ಸೊಬಗಿನ ಜೊತೆಗೆ ಸೋಜಿಗಗಳು ತನ್ನಿಂದ ತಾನೇ ತೆರೆದುಕೊಳ್ಳುವುದು.










ಜನುಮದಲ್ಲೊಮ್ಮೆ ಕೀಟಾಹಾರಿ ಸಸ್ಯವನು ಅದರ ಆವಾಸದಲ್ಲೇ ನೋಡಬೇಕು. ಅದರ ವಿವರ ಕಲೆಹಾಕಬೇಕು ಎಂಬ ಕನಸಿತ್ತು. ಪರಶಿವನು ಹಂದಿಯ ರೂಪದಲ್ಲಿ ಬಂದಂತೆ ಪ್ರತ್ಯಕ್ಷವಾಗಿ ಅಚ್ಚರಿ ಮೂಡಿಸಿತು. ನನ್ನ ಅದೃಷ್ಟಕ್ಕೆ ನಾನೇ ಪುಳಕಗೊಂಡೆ. ಕೆಂಬಣ್ಣದ ಹೂವಿಗೊಂದು ಜುಟ್ಟೊಂದು ಬಂದಂತೆ ಸಣ್ಣ ಕುಡಿಯಿಂದ ಅಲಂಕೃತಗೊಂಡಿತ್ತು. ಮೈಯ ಮೇಲೆ ಸಣ್ಣ ಸಣ್ಣ ರೋಮಗಳು. ಮುಟ್ಟಿದರೆ ಎಲ್ಲಿ ಉದರುವುದೋ ಎಂಬಷ್ಟು ಚಿಕ್ಕವು. ಹೂವೆಂದು ಲಾಸ್ಯವಾಡಲು ಬಂದ ದುಂಬಿಗಳು ಅಪರಾಧ ಮಾಡಿದ ಖೈದಿಯಂತೆ ಸಿಕ್ಕಿಬಿದ್ದು ಒದ್ದಾಡುತಲಿದ್ದವು. ಇನ್ನೆಂದೂ ಈ ತಪ್ಪು ಮಾಡೊಲ್ಲವೆಂದು ಆರ್ತವಾಗಿ ಬೇಡುತಲಿದ್ದವು. ತುಂಬಾ ಹೊತ್ತು ಅವನ್ನೇ ನೋಡುತ್ತಾ ಕುಳಿತೆ.

 ತಾನೆಷ್ಟೇ ಏರಿದರೂ ತನ್ನ ಹಿರಿತನವ ಎಲ್ಲೂ ಸಾರದ ನಿರಂಹಕಾರಿ ಈ ಗುಡ್ಡ.

ಅದಮ್ಯವಾದ ಜೀವನೋತ್ಸಾಹ ತುಂಬಿದ ಅದ್ರಿಗೊಂದು ಸಲಾಂ ಹೇಳಿ ಇಳಿಯತೊಡಗಿದೆವು. ಹೊಟ್ಟೆ ಎಕ್‌ ದಂ ಚುರುಗುಟ್ಟುತಲಿತ್ತು ಬೆನ್ನ ಚೀಲದಲ್ಲಿದ್ದ ಪಲಾವಿನ ಪರಿಮಳಕ್ಕೆ ಮನಸೋತು ಮನಸೋ ಇಚ್ಚೆ ತಿಂದು ಕೆಳಗಿಳಿದೆವು. ಯಾವುದೇ ಪ್ಲಾಸ್ಟಿಕ್‌ ಪಳೆಯುಳಿಕೆನ್ನುಳಿಸದೇ ಸುಂದರ ನೆನಪುಗಳನ್ನು ಮಾತ್ರ ಉಳಿಸಿಕೊಂಡು ಬಂದೆವು. 












ಪುರುಸೊತ್ತಾದಾಗ ನೀವು ಒಮ್ಮೆ ಇಲ್ಲಿಗೆ ಹಾಜರಿ ಹಾಕಿ. ಏನಂತೀರಿ?




 

Saturday, July 27, 2024

ನಿಶ್ಚಲವಾದ ಊರುಗಳ ನಡುವೆ

 


ಯಾರೋ ಹರವಿದ ಕ್ಯಾನವಾಸ ಮೇಲೆ ಹದವಾಗಿ ಬಿಡಿಸಿಟ್ಟ ಊರು. ಚಿತ್ರಕಾರ ತನ್ನ ಕುಂಚದಿಂದ ರಚಿಸಿದಂತಹ ರಚನೆಗಳು. ಊರಿನ ಜನರಂತೆ ಇಲ್ಲಿನ ದೇವಾಲಯಗಳೂ ಅನಾಥರಂತೆ ಅಲ್ಲಲ್ಲಿ ಹರಡಿವೆ.


ಎಲ್ಲೋ ಕಳೆದು ಹೋದ ಹಿಂದಿನ ಶತಮಾನದ ಮಾನಸ ಪುತ್ರ ರತ್ನರಂತೆ, ಕಾಲದೊಂದಿಗೆ ಋಜುತ್ವ ಸಾಧಿಸಿದವರಂತೆ ಈ ಪುಟಾಣಿ ಹಳ್ಳಿಯಲ್ಲಿ ಬಂದಿಯಾದವರು ಶಾಪಗ್ರಸ್ಥ ಅಹಲ್ಯೆಯ ನೆನಪಾಗುವಂತೆ ಮಾಡುತ್ತಾರೆ. ಅವಳ ಚಂಚಲತೆಗೆ ಶಾಪ, ಇವರಿಗೆ ನಿಶ್ಚಲವಾಗಿರುವಂತಹ ಶಾಪ! ಎರಡೂ ಶಾಪವೇ. ಚಂಚಲತೆ ಮತ್ತು ನಿಶ್ಚಲತೆಯ ನಡುವಿನ ಗಡಿ ರೇಖೆಯೊಂದನ್ನು ಗುರುತಿಸಬೇಕಿದೆ.

ಇಲ್ಲಿನವರು ಎಲ್ಲೂ ಗಡಿಬಿಡಿ ಇಲ್ಲದೆ, ಯಾವುದಕ್ಕೂ ಹಪಹಪಿಸದೇ ಕಾಲ ದೇಶದ ಗಡಿ ಮೀರಿದವರಂತೆ, ಯಾರಿಗೋ ಕಾದು ಕುಳಿತವರಂತೆ ಭಾಸವಾಗುತ್ತಾ, ಕಿರು ವ್ಯಾಪಾರಕ್ಕೂ ಖುಷಿ ಪಡುತ್ತಾ ಇಟ್ಟಿಗೆ ಗೂಡಿನಂತಹ ಮನೆಗಳಲ್ಲಿ ವಾಸ ಮಾಡುತ್ತ ಬದುಕುತ್ತಿದ್ದಾರೆ. ಪೆನ್ನಾ ನದಿಯೂ ಯಾವುದೇ ಗಡಿ ಬಿಡಿ ಇಲ್ಲದೆ ಪ್ರಶಾಂತವಾಗಿ ಪ್ರವಹಿಸುತ್ತಾ ಇಲ್ಲಿನ ಬದುಕಿಗೆ ರೂಪಕವಾಗಿದೆ. ಮುಂದೆಲ್ಲೋ ಇದಕ್ಕೆ ಅಣೆಕಟ್ಟು ಕಟ್ಟಿದಂತೆ ನೀರು ನಿಂತಂತೆ ಹರಿಯುತ್ತಿದೆ.  




ಭಾರತದ ಎರಡನೇ ದೊಡ್ಡ ಕ್ಯಾನ್ಯಾನ್‌ ಎಂದು ಕರೆಯಿಸಿಕೊಳ್ಳುವ ಇಲ್ಲಿನ ನದಿ, ಅದರ ಹರಿವ ಸೌಂದರ್ಯ ಪದಗಳಲ್ಲಿ ಹಿಡಿದಿಡಲಾಗದು. ಶಾಪ ಗ್ರಸ್ಥ ಕೋಟೆಯೊಳಗೆ ಮಾಧವ ಮತ್ತು ರಂಗಸ್ವಾಮಿ ದೇವಾಲಯವಿದೆ.  

 ಗಂಡೀಕೊಟ ಒಂದು ಕಾಲದ ಶ್ರೀಮಂತ ಬೀಡು, ಇಂದು ಬಡತನ ಮತ್ತು ಅವಜ್ಞೆಯ ಕತೆ ಹೇಳುತ್ತದೆ. ಹಿಂದೆ ಸರಿಯಲಾರದ ಮುಂದೆ ಹೋಗಲಾರದ ಒಂದಿಷ್ಟು ಮಂದಿ ಮಾತ್ರ ಉಳಿದಿದ್ದಾರೆ. ಅರ್ಥವೇ ಇಲ್ಲದ ಅನಾಥರು. ಯಾವ ರಾಮನ ಬರುವಿಕೆಗಾಗಿ ಕಾದಿರುವರೋ? ಒಂದಿಡಿ ಬದುಕು ರಾಮನ ಬರುವಿಕೆಗಾಗಿ ಕಾದಂತಿರುವ ನೂರಾರು ಶಬರಿಯರು. ಯಾರೋ ಅವರನ್ನು ಸ್ವಯಂ ಆಗಿ ನಿಯಂತ್ರಿಸುವಂತೆ ಪ್ರೊಗ್ರಾಂ ಮಾಡಿರುವರೋ ಎಂಬಂತಿದ್ದಾರೆ.  ಪೆನ್ನಾರನ ಗಾಢ ಹಸಿರಿನಂತಿರದೆ ಬದುಕು ಇವರದು ಕಡು ಕಷ್ಟ. ದಿನಕ್ಕೆರಡು ಬಸ್ಸು ಬಿಟ್ಟರೆ ಬೇರೆ ಸೌಲಭ್ಯಗಳಿಲ್ಲದೂರು. ಬಂದರೆ ಬಂತು  ಇಲ್ಲವಾದರೆ ಇಲ್ಲ. ಭಗ್ನಗೊಂಡ ಕೋಟೆ ಮತ್ತು ಊರು ಬಿಕೋ ಅನ್ನುತ್ತಿತ್ತು. ಭಗ್ನತೆಗೆ ತುಪ್ಪ ಸುರಿದಂತೆ ಆಕಾಶ ಬಿಕ್ಕ ತೊಡಗಿತು! ಹೊಟೆಲ್‌ ಹರಿತಾ ಬಿಟ್ಟರೆ ಬೇರೆ ವ್ಯವಸ್ಥೆಗಳಿಲ್ಲ. ಇತಿಹಾಸದ ಪ್ರಜ್ಞೆ ಮತ್ತು ತೀವ್ರ ಅವಜ್ಞೆಗೆ ಮತ್ತೊಂದು ಹೆಸರೇ ಗಂಡೀಕೊಟ!!



ಕಲೆ, ಇತಿಹಾಸ ಮತ್ತು ಪ್ರಾಕೃತಿಕ ಅಚ್ಚರಿಗಳ ಸಂಮ್ಮಿಶ್ರಣದಂತಿರುವ ಕೋಟೆಯೂರು ಗಂಡಿಕೋಟ. ಆಂಧ್ರದ ನಂದ್ಯಾಲ ಜಿಲ್ಲೆಯ ಅಹೋಬಿಲಂನಿಂದ ೮೦ ಕಿಲೋ ಮೀಟರ್. ಗಂಡಿಕೊಟವು ಆಂಧ್ರದ ಕಡಪಾ ಜಿಲ್ಲೆಯ ಕೊಟೆಯೂರು.

            ಚಿದ್ರಗೊಂಡ ಊರಿನಿಂದ ಭಗ್ನ ಮನಸ ಹೊತ್ತು ಹೊರಟು ನಿಂತಾಗ ಇಳಿ ಸಂಜೆ.

Sunday, March 17, 2024

ಲೋಚನ ದ ತುಂಬಾ ಚಂದ್ರ ತಾಲದ ಬಿಂಬ

( Chandra tal lake .... Himachal pradesh)

ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿತ್ತಿದ್ದ. ಯಾವದೋ ಚಂದ್ರನ ತುಂಡೊಂದು ಭೂಮಿಗೆ ಉದುರಿದ ಭಾವ. ಅತಿ ಸಣ್ಣ ಊರು ಲೋಸರ್ ಧೂಳಿನಲ್ಲಿ ಮಿಂದ ರಸ್ತೆ, ಜನ. ಬೌದ್ಧರ ಒಂದು ಹಬ್ಬವನ್ನು ನೆನಪಿಗೆ ತರುವ ಹೆಸರು ಲೋಸರ್. ಕಾಝಾ ಗೆ ಹೊರಟ ಒಂಟಿ ಸರಕಾರಿ ಬಸ್.‌ ಗಂಟೆ ಮೂರಕ್ಕೆ ಹಿಂದಿರುಗುವ ದನ ಕರುಗಳ ಮೆರವಣಿಗೆ. ಧೂಳನ್ನು ಲೆಕ್ಕಿಸದೆ ಬಿಸಿಲಿಗೆ  ಕೂತ ಜನ. ಬಲಕ್ಕೆ ಹರಿವ ಹಿಮ ಝರಿ. ಸುತ್ತಲೂ ಕೋಟೆ ಕಟ್ಟಿ ನಿಂತ ಬೆಟ್ಟ ಸಾಲು. ಕತ್ತಿ ಅಲಗಿನಂತಹ  ಚಳಿ. ಜಗತ್ತಿನ ತುತ್ತ ತಲುಪಿದ ಅನುಭವ. 




ಕುಂಜುಂ ಪಾಸ್‌ನಿಂದ ಬೀಸುವ ಹಿಮಗಾಳಿಗೆ ಲೋಸರ್‌ ಹಳ್ಳಿ -೩ ಡಿಗ್ರಿಯಲ್ಲಿ ತಣ್ಣಗೆ ಕುಳಿತ್ತಿತ್ತು. ಸುಸ್ತು ಹೊಡೆಸಿದ ಪ್ರಯಾಣ ಎಲ್ಲಿಗೂ ಹೊರಡದಂತೆ ಎಲ್ಲಿಗೂ ಹೊರಡದಂತೆ ಪ್ರತಿಬಂದಿಸಿತ್ತು. ಹೊಕ್ಕಳೊಳಗೆ ಚಳಿ ಕುಣಿತ. ಹೊದ್ದು ಮಲಗಬೇಕೆಂಬ ತವಕ.


ಬೆಟ್ಟದ ಮೇಲೊಂದು ಕೆಳಗೊಂದು ಬುದ್ಧನ ದೇವಾಲಯ. ಊರ ನಡುವಿನ ಪುಟ್ಟ ಕ್ಯಾಂಟಿನ್‌ ಒಂದರಲ್ಲಿ ದಾಲ್‌ ಚಾವಲ್‌ ನ ಸವಿದು ಬೆಟ್ಟದ ಮೇಲಿನ ಬುದ್ಧ ದೇವಾಲಯಕ್ಕೆ ಲಗ್ಗೆ ಇಟ್ಟೆವು. ಸೂರ್ಯ ಇಳಿಯುತಲಿದ್ದ. ಹಸುಗಳ ಕೊರಳ ನಾದ ಆಲಿಸುತ್ತಾ ಗುಡ್ಡ ಏರತೊಡಗಿದೆವು. ಚಂದ್ರನ ತುಂಡೊಂದರ ಮೇಲಿಳಿದ ಭಾವ. ಹೂ ಚೆಲ್ಲಿದಂತಿದ್ದ ಮೋಡಗಳ ನಡುವೆ ಸೂರ್ಯ ಚಂದ್ರನಂತಾಗಿದ್ದ. ಕಡಲ ನೀಲಿ ಕುಡಿದು ಮತ್ತೇರಿಸಿಕೊಂಡ ನೀಲಾಕಾಶ. ಚಳಿ ಹೊಡೆತಕ್ಕೆ ಹಳದಿಯಾದ ಗಿಡ ಮರಗಳು. ಬೆಟ್ಟದ ಮೇಲೆಲ್ಲಾ ಸುಣ್ಣ ಚಲ್ಲಿದಂತೆ ಬಿದ್ದ ಹಿಮ ರಾಶಿಗಳು. ಶಿಖರದಾಚೆ ಚೀನಾ ದೇಶ. ನೆತ್ತಿಯಲ್ಲೇನೋ ಅಲೌಕಿಕ ಆನಂದ. ದಿವ್ಯ ಏಕಾಂತದ ಅಮಲು. ಅಲ್ಲೇ ಕೂರುವಂತೆ ಪ್ರೇರೇಪಿಸಿದ್ದರೂ ಚಳಿ ಬೇಗನೆ ಕೆಳಗಿಳಿ ಕೆಳಗಿಳಿ ಎನ್ನುತಲಿತ್ತು. ಇಲ್ಲಿನ ಚಳಿಗೆ ಕಪ್ಪ ಕೊಟ್ಟೆ. 

Losar Village

    ರೆಸಾರ್ಟ್‌ ಸೇರುತ್ತಲೇ ಬಿಸಿ ಬಿಸಿ ಲಿಂಬೆ ಚಹದ ಬರಪೂರ ಸ್ವಾಗತ. ಕಾಝಾದಿಂದ ಬೈಕ್ ನಲ್ಲಿ ಬರುವ ಗೆಳೆಯರು ಧೂಳ ಸ್ನಾನಗೈಯುತ್ತಾ ನಿದಾನಕ್ಕೆ ಬಂದರು. ಇಲ್ಲಿ ಒಂದೆರಡು ಹೋಟೆಲ್‌ ಬಿಟ್ಟರೆ ಬೇರಿಲ್ಲ. ಇದ್ದುದರಲ್ಲೇ ಉತ್ತಮವಾದುದೊಂದು ನನ್ನ ಪಾಲಿಗೆ ಬಂದಿತ್ತು. ಪ್ರಶಾಂತ ಹಿಮಾಲಯದ ಕೊನೆ ಹಳ್ಳಿ ಅದ್ಭುತ ಪಯಣಕ್ಕೊಂದು ಮುನ್ನುಡಿ ಬರೆಯಿತು. ಹಿಮಾಲಯದ ಹಳ್ಳಿಗಳಲ್ಲಿರುವ ದೈವೀಕತೆ ಎಂತಹ ಪಾಮರನಲ್ಲೂ ಆಧ್ಯಾತ್ಮದ ಸೆಳಕನ್ನು ಹೊತ್ತಿಸಬಲ್ಲದು.

A temple near Losar Village

A mud road to Kumzum Pass

ಪಯಣದಿಂದ ಜರ್ಜರಿತವಾದ ದೇಹಕ್ಕೆ ಸ್ನಾನದ ಸಾಂತ್ವಾನ ನೀಡಲೆನ್ನಿಸಿದೆ. ಸಿಕ್ಕ ಒಂದೇ ಬಕೆಟ್‌ ಉಗುರು ಬೆಚ್ಚಗಿನ ನೀರಲ್ಲಿ ಮಿಂದೆದ್ದವನಿಗೆ ಮೈಯಲ್ಲಿ ಭೂಕಂಪ. ಭೂತ ಆವರಿಸಿದಂತೆ ನಡುಕ. ಸಂಜೆ ಐದಕ್ಕೆ ಹೊಕ್ಕ ಚಳಿ ಏಳಾದರೂ ಹೋಗಿರಲಿಲ್ಲ. ಹೊದ್ದು ಮಲಗಿದೆ. ಎರಡು ಚಹ ಕುಡಿದೆ ಆದರೂ ನಡುಕದ ಮುಂದುವರಿಕೆ. 

7.45 ಕ್ಕೆ ಊಟಕ್ಕೆ ಕರೆ ಬಂತು. ಪುಟಾಣಿ, ಚಳಿಗೆ ಜಾಗವಿಲ್ಲದ ಡೈನಿಂಗ್‌. ಬಿಸಿ ಬಿಸಿ ಕಪ್ಪು ಕಡಲೆ ಬೀಜದ ಸೂಪ್‌ ಹಬೆಯಾಡುತ್ತಾ ನನ್ನ ಕುಡಿ ಕುಡಿ ಎಂದು ಬಂತು. ಹೊಟ್ಟೆ ಸೇರುತ್ತಲೇ ಚಳಿ ತನ್ನೂರ ಸೇರಿತ್ತು. ಜೀವದಲ್ಲಿ ಹೊಸ ಜೀವ ಸಂಚಾರ. ಇಂತಹ ಚಳಿಯಲ್ಲಿ ಸೂಪ್‌ ಹೀರುವುದೇ ಅವರ್ಣನೀಯ ಆನಂದ. ಸ್ಪಿಟಿ ಹಳ್ಳಿಯೂಟವೊಂದು ಸವಿಯುವ ಸದಾವಕಾಶವೊಂದನ್ನು ನಮಗೆ ಕರುಣಿಸಿದ ಹೊಟೆಲ್‌ ಮಾಲೀಕ ಮತ್ತು ಅವರ ತಾಯಿಗೆ ವಂದನೆ ಸಲ್ಲಿಸಿದೆ. ನಾಚಿಕೆಯಲ್ಲಿ ಮುದುಡಿಕೊಂಡರು. ಕತ್ತಲು ನಮ್ಮನ್ನು ಅದರ ತೆಕ್ಕೆಯಲ್ಲಿ ಬಹು ಬೇಗನೆ ಕರಗಿಸಿಕೊಂಡಿತು.

ಕುಂಜುಂ ಮಾತಾ ಮಂದಿರದೆಡೆಗೆ…


ಕತ್ತಿಯ ಅಲುಗಿನಂತಹ ಚಳಿಯಲಿ ಬೇಗನೆದ್ದು ಬ್ರೆಡ್‌ ಆಮ್ಲೇಟ್‌ ಮೆದ್ದು ೫.೩೦ ಕ್ಕೆ ಹೊರಟು ನಿಂತೆವು. ಮಧ್ಯ ಮಧ್ಯ ಒಂದರೆಗಳಿಗೆ ಸೆಲ್ಫೀ ಸಮಾರಾಧನೆ ನಡೆಯಿತು. ಮುನಿಸಿಕೊಂಡ ಸೂರ್ಯ ನಿಧಾನಕ್ಕೆ ಬೆಟ್ಟಗಳ ಬೆಳಗಿಸ ತೊಡಗಿದ. ಸುಮಾರು ಒಂದು ಗಂಟೆ ಜೀವ ಕೈಯಲ್ಲಿ ಹಿಡಿದುಕೊಂಡು, ಧೂಳ ಸ್ನಾನ ಮುಗಿಸಿ ಕುಂಜುಂ ಮಾತಾದಲ್ಲಿದ್ದೆವು. 

ಕುಂಜುಂ ಮಾತಾ ಮಂದಿರದಲ್ಲಿ….

ಕುಂಜುಂ ಮಾತಾ ಮಂದಿರ.


ಕಾವಲಿಗಿಟ್ಟ ಗಿರಿ ಶಿಖರಗಳು ಚಳಿಗೆ ಬಿಳಿ ಸ್ವೆಟರು ಹೊದ್ದು ನಿಂತಿದ್ದವು. ಶರಾಬಿನಲಿ ಅದ್ದಿ ತೆಗೆದಂತಹ ಚಳಿಗೆ ಪತರುಗುಟ್ಟುತಲಿತ್ತು ಕೈ, ಕಾಲು ದೇಹ. ಬೈಕ್‌ ಸವಾರರು ಚಳಿಗೆ ಕೈ ಮುಗಿಯುತಲಿದ್ದರು. ಧೂಳ ಸ್ನಾನ.

ವಿಚಿತ್ರ ಮಂದಿರದಲ್ಲಿ …….

ದಕ್ಷಿಣ ಭಾರತದವರಿಗೆ ಇದೊಂದು ವಿಚಿತ್ರ ಮಂದಿರವೇ. ಸುಮಾರು 14,900 ಅಡಿ ಎತ್ತರವು ಅದಕ್ಕೊಂದು ಕಿರಿಟ ತೊಡಿಸಿತ್ತು. ಪರ್ವತಗಳೇ ಗೋಡೆ. ಆಕಾಶವೇ ಮೇಚ್ಛಾವಣಿ! ನಿನ್ನೆ ಮುಗಿಲಿನಿಂದ ಸುರಿದ ಹಿಮವೇ ಸುಂದರ ನೆಲಹಾಸು! ಕೇವಲ ಒಂದಿಷ್ಟು ಸಣ್ಣ ಸಣ್ಣ ಗೋಪುರ ನಿರ್ಮಿಸಿ ಇಟ್ಟ ಜಾಗವೇ ಮಂದಿರ. ಸುತ್ತಲೂ ಪತಾಕೆಗಳು. ಕಪ್ಪು ಬಳಪದ ಶಿಲೆಯೇ ದೇವರು. ಪ್ರತಿ ವಾಹನ ಇಲ್ಲಿ ನಿಲ್ಲಿಸಿ ಒಂದು ಸುತ್ತು ಬಂದು ಹೊರಡುತ್ತವೆ. 
     ನಮ್ಮ ಮನೋಕಾಮನೆಗಳು ಈಡೇರಬೇಕಾದರೆ ಈ ಶಿಲೆಗೆ ನಾಣ್ಯ ಅಂಟಬೇಕಂತೆ! ನಮ್ಮ ತಂಡದವರ ಯಾರ ನಾಣ್ಯವೂ ಅಂಟಲಿಲ್ಲ. ನನ್ನೆದುರಿಗೇ ಯಾತ್ರಿಕನೊಬ್ಬನ ನಾಣ್ಯ ಅಂಟಿ ನನಗೆ ಅಚ್ಚರಿ ಮೂಡಿಸಿತು! ಏನೇ ಮಾಡಿದರೂ ನನ್ನ ನಾಣ್ಯ ಈ ಶಿಲೆಗೆ ಅಂಟಲೇ ಇಲ್ಲ. ನನ್ನ ಪಾಪ ಕರ್ಮ ಹೆಚ್ಚಾಯಿತಿರಬೇಕು.🤣🤣🤣 
ಕುಂಜುಂ ಮಾತಾ ಮಂದಿರ

ಕುಂಜುಂ ದೇವಾಲಯದ ಎದುರಿನ ಬುದ್ಧ




ಕುಂಜುಂ ಮಾತಾ ಎದುರಿನ ಹಿಮ ಹೊತ್ತ ಶಿಖರ

ಬಾರಾ ಶೆಂಗ್ರಿ ಗ್ಲೀಷಿಯರ ವಿಶ್ವದ ಅತಿ ಉದ್ದನೆಯದರಲ್ಲಿ ಎರಡನೆಯದ್ದು ಇಲ್ಲಿಂದ ನಾಲ್ಕು ಹಾಡಿನ ದೂರದಲ್ಲಿದೆ. 

ಕಂದು ಬಣ್ಣದ ಗಿರಿ. ಭಯಂಕರ ಚಳಿಗೆ ಸೂರ್ಯ ಮೇಲೆ ಬಂದಿರಲಿಲ್ಲ. ಕುಂಜುಂ ಮಾತೆಯ ವಿಚಿತ್ರ ಕತೆ ಕೇಳುತ್ತಾ ತೀವ್ರ ಕೊರಕಲಿನಲ್ಲಿ ಕಣ್ಣು ಇಳಿಸುತ್ತಾ ಮುಂದೆ ಸಾಗಿದೆವು. ದಾರಿಯ ಭೀಕರತೆಗೆ ಬೆರಗುಗೊಳ್ಳುತ್ತಾ ೧೨ ಕಿ.ಮೀ ದೂರದ ಚಂದ್ರ ತಾಲ್‌ನತ್ತ ಮುಂಬರಿದೆವು. ಮನಾಲಿಯಿಂದಲೂ ಇಲ್ಲಿಗೆ ತಲುಪಬಹುದು.  

ಸುಮನೋಹರ ಚಂದ್ರತಾಲ್‌ 

ಚಂದ್ರತಾಲ್ ಸನಿಹದ ಬೆಟ್ಟ ಸಮೂಹ



ಚಂದ್ರ ತಾಲ್


ಮನ ಮನಸಿನ ತುಂಬಾ ಚಂದ್ರತಾಲ್‌ದ ಬಿಂಬ. ಚಂದ್ರ ತಾಲ್‌ಗೆ ಹಿಮ ಶಿಖರಗಳ ಪಹರೆ. ಗಳಿಗೆಗೊಂದರಂತೆ ಬಣ್ಣ ಬದಲಿಸುವ ಸರೋವರ. ಚಂದ್ರಾ ನದಿ ಹುಟ್ಟುವುದು ಇಲ್ಲಿಂದಲೇ.‌ ಮುಂದೆ ಇದು ಚಿನಾಬ ನದಿಯೊಂದಿಗೆ ಸೇರುತ್ತದೆ. 

ಲೋಸರ್‌ನಿಂದ ಸುಮಾರು ೨ ಗಂಟೆಯ ದಾರಿ. ಪಾರ್ಕಿಂಗ್‌ ಜಾಗದಿಂದ ೧೫ ನಿಮಿಷಗಳ ನಡಿಗೆಯಲಿ ಸುತ್ತಲಿನ ದಿವ್ಯ ಶಿಖರಗಳ ನೋಟಕ್ಕೆ ಬೆರಗಾಗುತ್ತಾ ಚಂದ್ರತಾಲ್‌ ಸರೋವರದ ತಟ ತಲುಪಿದೆವು.

ಚಂದ್ರ ತಾಲ್‌ ಸರೋವರದ ಸುತ್ತಳತೆ ಸುಮಾರು ೨.೫ ಕಿ.ಮೀ. ಗ್ಲೇಷಿಯರ್‌ ನ ಕರಗಿದ ನೀರನ್ನು ಪ್ರತಿಫಲಿಸುತ್ತದೆ. ನಸು ಗುಲಾಬಿ ಶಿಖರಗಳ ನೆತ್ತಿಯಲ್ಲಿ ಹಿಮ ಬಿಂದು ಕರಗದೇ ಹೊಳೆಯುತ್ತಿತ್ತು. ಕೊರೆವ ನೀರಿಗೆ ಪಾದವಿಟ್ಟರೆ ನಡೆದ ಹಾದಿಯ ದಣಿವು ಮಾಯ. ಚಂದ್ರತಾಲ್‌ ಸುತ್ತಲಿನ ಬೆಟ್ಟ ದರ್ಶನ. ಯಾವುದೋ ಕಾಲ ಘಟ್ಟದಲ್ಲಿ ಬಿದ್ದ ಉಲ್ಕೆಯಿಂದ ಈ ಸರೋವರ ರಚಿತವಾಗಿರಬೇಕು. ಸುತ್ತೆಲ್ಲವೂ ಶಿಖರಗಳಿದ್ದರೆ ಚಂದ್ರತಾಲ್‌ ದ ಬಲಕ್ಕೆ ಸಪಾಟು ನೆಲವಿದೆ. ಅನೇಕ ಕಡೆ ಇಂತುಹುದೇ ಸಪಾಟು ನೆಲವಿರುವುದೇ ನನ್ನ ನಿಲುವಿಗೆ ಕಾರಣ. ಇದರ ಕುರಿತು ತುದಿ ಮೊದಲಿಲ್ಲದ ಅನೇಕ ಕತೆಗಳು ಪ್ರಚಾರದಲ್ಲಿವೆ. 

ಪುರಾಣದಲ್ಲಿ ಚಂದ್ರತಾಲ್…..


ಯುದಿಷ್ಟಿರನು ಸ್ವರ್ಗವೇರಿದ್ದೂ ಇಲ್ಲಿಂದಲೇ ಎಂದು ನಂಬಲಾಗಿದೆ. ಇಂದ್ರ ತನ್ನ ರಥದಲ್ಲಿ ಬಂದು ಆತನನ್ನು ಕರೆದೊಯಿದ್ದ ಎನ್ನುತ್ತದೆ ಪುರಾಣ. 

         ಹುಯ್‌ನ್‌ ಸಾಂಗ್‌ ಚೀನಿ ಯಾತ್ರಿ ಈ ಸರೋವರದ ಸಮೀಪ ಹಾದು ಅದನ್ನು ಲೋಹಿತ್ಯ ಸರೋವರವೆಂದು ಕರೆದ. 

  ಮೋಹಕ ಚಂದ್ರ ತಾಲ್ ಸರೋವರ

ಚಂದ್ರ ತಾಲ್‌ನ ನೀರಿನ ಮೂಲವಿನ್ನೂ ತಿಳಿದಿಲ್ಲ. ದೂರದ ಗ್ಲೇಷಿಯರ್‌ ನಿಂದ ನೀರು ಇಲ್ಲಿಗೆ ಹರಿದು ಬರುತ್ತದೆ ಎನ್ನುತ್ತಾರೆ. ಈ ನೀರು ಹರಿದು ಚಿನಾಬ್‌ ನದಿಗೆ ಸೇರುತ್ತದೆ. 

ಲೌಕಿಕ ಜಗತ್ತಿನಿಂದ ದೂರವಿರುವ ಈ ತಾಣ ಆಧ್ಯಾತ್ಮದ ಅತೀಂದ್ರಿಯ ಸ್ಪರ್ಶವೊಂದನ್ನು ನನಗೆ ಗೊತ್ತಾಗದಂತೆ ಕರುಣಿಸಿತ್ತು. ಸ್ಪಟಿಕ ಶುಭ್ರ ಜಲದಲ್ಲಿ ಕಾಲು ತೋಯಿಸಲು ಮತ್ತೊಮ್ಮೆ ಏಕಾಂಗಿಯಾಗಿ ಬರಬೇಕು. ಇಲ್ಲಿನ ಬದುಕನ್ನು ಆಸ್ವಾದಿಸಬೇಕು ಎಂಬ ಹಂಬಲದೊಂದಿಗೆ ಹೊರಟು ನಿಂತೆ. ನನ್ನ ಮನೋಭಿತ್ತಿಯಲ್ಲಿ ಸರೋವರ ಸಣ್ಣ ಉಲ್ಲಾಸದ ಅಲೆಗಳನ್ನು ಎಬ್ಬಿಸುತ್ತಲೇ ಇದೆ. ಲೋಚನದ ತುಂಬಾ ಚಂದ್ರ ತಾಲದ ಬಿಂಬ. ಯಾಕೆ ನೀವು ಒಮ್ಮೆ ಹೋಗಿ ಬರಬಾರದು.

ಹಾಗೆ ಇಲ್ಲಿನ ಬತ್ತಲಿನಲ್ಲಿರುವ ಚಾಚಾ ಚಾಚಿ ದಾಬಾದಲ್ಲಿ ಊಟ ಮಾಡಲು ಮರೆಯದಿರಿ. ಅತ್ಯಂತ ಕಡಿಮೆ ದರದಲ್ಲಿ ನಿಮಗೆ ಊಟವನ್ನು ಬಿಡಿಸುತ್ತಾರೆ. ಸುಮಾರು ವರ್ಷಗಳ ಕೆಳಗೆ ಹಿಮದಲ್ಲಿ ಸಿಕ್ಕಿಬಿದ್ದ 15 ಜನರಿಗೆ ತಿಂಗಳುಗಳ ಕಾಲ ಉಚಿತ ಊಟವನ್ನು ಇವರು ವ್ಯವಸ್ಥೆ ಮಾಡಿದ್ದರು. ಚಂದ್ರ ತಾಲ ನೋಡುವವರು ಮರೆಯದೆ ಭೇಟಿ ನೀಡಬೇಕಾದ ಜಾಗವೆಂದರೆ ಬತ್ತಾಲ್ ನ ಚಾಚಾ ಚಾಚಿ ದಾಬ.

ಚಾಚಾ ಚಾಚಿ ಡಾಬಾದ ಚಾಚಾ ಮತ್ತು ಚಾಚಿ




ವಾರೆ ನೋಟ

ಹಸಿರು ಮುಕ್ಕಳಿಸುವ ದಾರಿಯಲ್ಲಿ ಮೂರು ಹೆಜ್ಜೆ

ಬ ಯಲ ಜಗಲಿಗೆ ಬಂದ ಸೂರ್ಯ ಗುಟ್ಟಾಗಿ ಹೂಗಳ ಮಧುವ ಹೀರುತಲಿದ್ದ. ಕಾಫೀ ಪ್ಲಾಂಟೇಷನೊಳಗೆ ಅಲ್ಲಲ್ಲಿ ಬಿಸಿಲ ಛಾಪೆ ಹಾಸಿದ್ದ. ಮೂಡಿಗೆರೆಯಿಂದ ನಮ್ಮ ತೇರು ಹೊರಟಿದ್ದು ಜೇನು ಕ...