Wednesday, January 14, 2026

ತಿಲಮಿಟ್ಟಿಯ ತೀರದಲಿ

 


ಭಾವುಟ ಹೊತ್ತ ಯಾವುದೋ ದೋಣಿ ಕಾರವಾರದ ದಡವ ತಡುವಲು ದೂರದಲಿ ಬರುತಲಿತ್ತು. ದಂಪತಿಗಳಿಬ್ಬರ ಜೊತೆ  ಇನ್ನಿಬ್ಬರು ಸೇರಿ ಮತ್ತೊಂದು ದೋಣಿಯ ದಡಕ್ಕೆ ಎಳೆಯುತ್ತಿದ್ದರು.  ಮತ್ತಿಬ್ಬರು ಬೆಳಗಿನ ಮೀನು ಶಿಖಾರಿಗೆ ಬಲೆ ಸರಿಪಡಿಸುತ್ತಿದ್ದರು. ಮರಳ ಮೇಲೆ ಚೆಲ್ಲಿದ ಹಳದಿ ಬೆಳಕು. ಸಮುದ್ರದ ನೀಲಿ ಕುಡಿದು ಕುಡಿ ಒಡೆದ ಆಕಾಶ. ಗಾಳಿ ತೆಕ್ಕೆಗೆ ಸೇರಿದ  ತೆಂಗಿನ ಗರಿಗಳ ಓಲಾಟದ ನಡುವೆ ಹರಿದ ನೇರ ರಸ್ತೆ. ಕಾರೊಳಗೆ ನುಗ್ಗುವ ಕಡಲ್ಗಾಳಿ. ಹಾರುವ ಮರಳಿನ ಕಣ. ಸೂರ್ಯನಾಗಲೇ ದಿನವಿಡೀ ದುಡಿದ ಸುಸ್ತು ಕಳೆಯಲು ಅಂಗಿ ಚಡ್ಡಿ ಕಳಚಿ ಕಡಲಿಗಿಳಿದು ಮೀಯುವ ತಯಾರಿಯಲ್ಲಿದ್ದಿದ್ದ. ಮುಂಬರಿದಾಗ ದೂರದಿಂದಲೇ ಕಣ್ಣಿಗೆ ಬಿದ್ದ ಸಣ್ಣ ಫಲಕ ʻತಿಲಮಿಟ್ಟಿʻ, ನಮ್ಮನ್ನು ಆಕರ್ಷಿಸಿತು. ಏನಿದೆಂದು ಕೇಳಲೂ ಒಬ್ಬರೂ ಸನಿಹದಲ್ಲಿ ಪತ್ತೆಯಿಲ್ಲ. ಒಂದು ಕಿ.ಮೀ ಕಳೆದಾಗ ಸಿಕ್ಕ ಮೀನುಗಾರರ ಮನೆಯಲ್ಲಿ ಏನಿದು ತಿಲಮಿಟ್ಟಿ ಎಂದು ಕೇಳಿದೆವು. ಖಾರ್ವಿ ಕೊಂಕಣಿ, ಮರಾಠಿ ಮಿಶ್ರಿತ ಕನ್ನಡದಲಿ ನಾಚಿಕೆಯಿಂದ ಏನೋ ಉಲಿದಳೊಬ್ಬಳು ತ್ರಿಪುರ ಸುಂದರಿ. ನನಗಂತೂ ಅರ್ಥವಾಗಲಿಲ್ಲ. ಮರಾಠಿ ಬಲ್ಲ  ಗೆಳೆಯನೊಬ್ಬನಿಗೆ ಅಲ್ಪ ಸ್ವಲ್ಪ ಅರ್ಥವಾಗಿ ಕಡಲ ಕಿನಾರೆಯ ತುದಿಗೆ ಕರೆದೊಯ್ದ.  ಕನ್ನಡದ ಅನಂತ ಸಾಧ್ಯತೆಯ ವಿಸ್ತೃತ ಪ್ರಸ್ತುತಿಯೊಂದು ನಮ್ಮೆದುರಿಗೆ ಅನಾವರಣಗೊಂಡು ಹಾಗೋ ಹೀಗೋ ಅರ್ಥೈಸಿ ಕಡಲ ತುದಿಗಿಳಿದಿದ್ದೆವು. ಗುಡ್ಡದಾಟಿ ಆಚೆಗೆ ಹೋಗಬೇಕೆಂಬುದು ಅವಳ ಭಾವವಷ್ಟೇ ನನಗೆ ಅರ್ಥವಾಗಿದ್ದು. ಭಾಷೆಯ ಅನಂತ ಸಾಧ್ಯತೆಯನಿಲ್ಲಿ ಆಕೆ ನಮಗೆ ತೋರಿಸಿಕೊಟ್ಟಿದ್ದಳು. ಅವಳ ಉಚ್ಛಾರ ಎಲ್ಲವೂ ಕನ್ನಡದಂತಿಲ್ಲ. 

ದೂರದೂರದಲ್ಲಿ ನಿಂತ ನಡುಗುಡ್ಡೆಗಳು ನಡುವೆ ಸೂರ್ಯ ನಮ್ಮನ್ನೇ ಅಣಕಿಸುತ್ತಾ ಕಡಲಿಗಿಳಿದಿದ್ದ. ಖಾರ್ವಿ ಹೆಂಗಸು ದಾರಿ ತೋರಿದಲ್ಲಿ ಕುಂಬದಂತಹ ಗುಡ್ಡ ತನ್ನ ನೀಳ ಕಾಲುಗಳನ್ನು ಕಡಲಿಗೆ ಚಾಚಿ ಮಲಗಿತ್ತು. ಮಲಗಿದ ಕುಂಬದಂತಹ ಬಸಾಲ್ಟ್‌ ಶಿಲೆಯ ಗುಡ್ಡವೇರಿ ಆಚೆಗೆ ಹೊರಟೆವು.

ಬಸಾಲ್ಟ್‌ ಬೆಟ್ಟವೇರಿ

ತೆಂಗಿನ ಗರಿಗಳ ನಡುವೆ ಜಾಗ ಮಾಡಿಕೊಂಡು ಮರಾಠಿ ಮಿಶ್ರಿತ ಕೊಂಕಣಿ ಕನ್ನಡದ ದಾರಿ ತೋರಿದೆಡೆಗೆ ಓಡಿ ಕಿನಾರೆಗೆ ಜೋಡಿಸಿದ ಕಿರುದಾರಿಯಲಿ ಸಣ್ಣ ಗುಡ್ಡವೇರಿದೆವು. ಜ್ವಾಲಾಮುಖಿ ಉಗುಳಿನಿಂದಾದ ಕಿರುಗುಡ್ಡ ಕಿನಾರೆಗೆ ತಾಕಿಕೊಂಡಿತ್ತು. ಸೂರ್ಯ ಚೆಲ್ಲಿದ ಪ್ರತಿಫಲಿತ ಬೆಳಕಿನಲ್ಲಿ 20 ನಿಮಿಷದ ಏರು ದಾರಿಯಲಿ ಪಯಣ. ಎಲ್ಲಿಗೆ ಹೋಗುತ್ತಿದ್ದೇವೆ ದಾರಿ ಕೊನೆಗೆ ನಮಗೆ ದಕ್ಕುವುದಾದರೂ ಏನು ಎಂಬ ಕಲ್ಪನೆ ಇಲ್ಲದ ನಿರುದ್ಧೀಶ ನಡಿಗೆ. ದಾರಿ, ಕಿನಾರೆ ಎರಡೂ ಆಹ್ಲಾದಕರ. ಅಲ್ಲಲ್ಲಿ ಕೇಸರಿ ಬಾವುಟ ನೆಟ್ಟು ದೂರದ ದೋಣಿಗಳು ಈ ಕಡೆ ಬರದಂತೆ ಪ್ರತಿಬಂದಿಸಿದ್ದರು. ದೂರದಿಂದಲೇ ಲಂಗರು ಹಾಕಿದ ದೋಣಿಯೊಂದು ಕಂಡಿತು. ಪ್ರವಾಸಿಗರೋ ಇರಬೇಕೆಂದುಕೊಂಡು ಹೆಜ್ಜೆ ಮುಂದಿಟ್ಟೆವು. 

 


ಕರಿ ಕಲ್ಲುಗಳ ನಡುವೆ ಜಾಗ ಮಾಡಿಕೊಂಡು ನಡೆದು ತಲುಪುವ ಧಾವಂತದಲ್ಲಿದ್ದೆವು. ಸುತ್ತಲೂ ಕಲ್ಲು ಕುರುಚಲುಗಳ ನಡುವೆ ತುರುಕಿಟ್ಟಂತಹ ಕೆಂಪು ಮಣ್ಣು. ಮಿಲಿಯಾಂತರ ವರ್ಷಗಳ ಕೆಳಗೆ ಜ್ವಾಲಾಮುಖಿಯಿಂದ ರೂಪುಗೊಂಡ ಕಲ್ಲುಗಳು ಭೂಮಿಯ ವಿವರವನ್ನರಹುತ್ತದೆ. ಇಲ್ಲಿನ ಬಂಡೆಗಳು ಭೂ ಸಂರಚನೆಯ, ಭೂ ಖಂಡಗಳ ಚಲನೆಯ ವಿಸ್ತೃತ ವಿವರದ ಪಟ್ಟಿಯಂತೆ ಸಂಶೋಧಕರಿಗೆ ವಿವರಿಸುತ್ತವೆ. ಬಸಾಲ್ಟ ಶಿಲೆಯ ರೂಪಾಂತರದ ಕತೆಯನ್ನೂ ಅರಹುತ್ತದೆ.

ಕರಿ ಸುಂದರಿಯ ಬೆನ್ನು ಬಿದ್ದು



ಕಾರವಾರ ಮತ್ತು ಗೋವಾದ ಕಿನಾರೆಯಲ್ಲಿ ಅಡ್ಡಾಡುತ್ತಿದ್ದಾಗ ಕಂಡ ಬೋರ್ಡಿನೆಡೆಗೆ ಸೆಳದ ವಿಚಿತ್ರ ಸೆಳೆತ ಇಲ್ಲಿಗೆ ಎಳೆದುಕೊಂಡು ಬಂದಿತ್ತು. ಕಾರವಾರದ ಟ್ಯಾಗೋರ್ ಬೀಚಿನಿಂದ ಕೇವಲ 20 ನಿಮಿಷದ ಹಾದಿ!


ಬೆಟ್ಟವಿಳಿಯುತ್ತಲೇ ಅಲ್ಲಿಬ್ಬರು ದಂಪತಿಗಳು ಕಾಣಸಿಕ್ಕರು. ಪ್ರವಾಸಿಗರಿರಬೇಕೆಂದು ಕೊಂಡೆ. ಸನಿಹ ಬರುತ್ತಲೇ ಸಂಜೆ ಮೀನುಗಾರಿಕೆ ಮಾಡಿ ಮರಳಿದ ಮೀನುಗಾರರೆಂದು ತಿಳಿಯಿತು. ಆಕೆ, ಆತ ಮತ್ತು ಕಡಲಷ್ಟೇ ಅಲ್ಲಿ. ಅವರ ನಡುವೆ ಅನೂಹ್ಯ ಮಾತುಕತೆಯೊಂದು ನಿರ್ಲಿಪ್ತ ಏಕಾಂತದ ಆ ಘಳಿಗೆಯಲಿ ಅಲ್ಲಿ ನಡೆಯುತ್ತಲಿತ್ತು. ಅಲೆಗಳ ಮೊರೆತ. ಮೌನವೂ ಸಹಾ ಸಹಜ ಮಾತಂತೆ ಭಾಸ. ಮಹಾ ಧ್ಯಾನದಂತೆ ಮೀನನ್ನು ಬಲೆಯಿಂದ ಬಿಡಿಸುತ್ತಾ ಇರುವ ಇವರು ಬದುಕಿನ ಸಿಕ್ಕು ಬಿಡಿಸುವವರಂತೆ ಕಂಡರು! ಮರಾಠಿ ಮಿಶ್ರಿತ ಕೊಂಕಣಿಯಲ್ಲಿ ಏನೋ ಮಾತನಾಡುತ್ತಿದ್ದರು.


ದಂಡೆಗೆ ಬಡಿ ಬಡಿದು ತಮ್ಮನ್ನು ಮಾತಾಡಿಸಲೋ ಎಂಬಂತೆ ಬಂದು ಹೋಗುತ್ತಿದ್ದ ಅಲೆಗಳ ಮುತ್ತಿಗೆ ವಿಚಲಿತರಾಗದೆ ಮೀನು ಬಿಡಿಸುವುದರಲ್ಲೇ ತಲ್ಲೀನ. ಮೂರು ಮತ್ತೊಂದು ಮೀನು ಬಿಡಿಸುತ್ತಾ ಬದುಕಿನ ಸಿಕ್ಕುಗಳಲ್ಲಿ ಸಿಕ್ಕಿ ಹಾಕಿಕೊಂಡಂತೆನಿಸಿ ವಿಷಾದ ಕಾಡಿತು.

ಅಚಾನಕ್‌ ಆಗಿ ಸಿಕ್ಕ ಕರಿ ಸುಂದರಿ

ಸಹಸ್ರ ಮಾನದಿಂದ ಬೇಸರಿಸದೇ ಬಡಿದ ಅಲೆಗಳು ಕರಿ ಬಂಡೆಗಳನ್ನು ಗೀಚುತ್ತಾ ತನ್ನೊಲವ ತೋರುತ್ತಾ ಬಂಡೆಗಳನ್ನು ಖಾಲಿ ಮಾಡುತಲಿದ್ದವು!  ಹೊಸತೊಂದನು ಸಾಧ್ಯವಾಗಿಸುತಲಿದ್ದವು. ತಿಲಮಿಟ್ಟಿಯು ಕರಿ ಮುರುಳ ಕಿನಾರೆಗೆ ಬಡಿದ ಅಲೆಗಳಿಂದ ಸೃಷ್ಟಿಯಾಗಿತ್ತು. ಕರಿ ಮರಳ ಕಿನಾರೆಯ ಗುಟ್ಟದು! ತಿಲ ಎಂದರೆ ಎಳ್ಳು ಮಿಟ್ಟಿ ಎಂದರೆ ಮಣ್ಣು. ತಿಲಮಿಟ್ಟಿ ಎಂದರೆ ಕರಿ ಮಣ್ಣ ಕಿನಾರೆ. ಯಾವ ಅಲಂಕಾರ ಎಂದು ಮಾತ್ರ ಕೇಳಬೇಡಿ! 



ಭಾರತದಲ್ಲಿ ಒಟ್ಟು ೧೦ ಕರಿ ಮಣ್ಣ ಕಿನಾರೆಗಳಿವೆ. ಅವುಗಳಲ್ಲಿ ತಿಲ ಮಿಟ್ಟಿಯು ಒಂದು. ಅನನ್ಯವಾದ ಕರ್ನಾಟಕದ ಕರಿ ಮರಳ ಕಿನಾರೆಯಾಗಿ ಕಂಗೊಳಿಸುತಲಿದೆ. ಇದು ಜ್ವಾಲಾಮುಖಿ ಸ್ಪೋಟದಿಂದಾದ ಬಸಾಲ್ಟ್‌ ಶಿಲೆ ಕರಗಿ ಉಂಟಾದ ಕಿನಾರೆಯಾಗಿದೆ. ಕಿನಾರೆಯ ಸುತ್ತಲೂ ಬಸಾಲ್ಟ್‌ ಶಿಲೆಗಳದೇ ಕಾರುಬಾರು.

ಅಲೆ ಎಂಬ ಒಲವ ದೋಣಿ ಏರಿ



ಇನ್ನೊಬ್ಬರಿಗಾಗಿ ತಾನು ಖಾಲಿಯಾಗುವುದೇ ಒಲವಲ್ಲವೇ?  ಈ ಜಗದ ಜಗುಲಿಯಲಿ ಅದು ಸಾಧ್ಯವೇ? ಎಂಬ ಪ್ರಶ್ನೆಯೊಂದು ನನ್ನ ಮನಪಟಲದಲ್ಲಿ ಎದ್ದಿತು.  ಹೊಸತೊಂದನು ಸೃಷ್ಟಿಸಲು ಸವೆಯದೇ ಬೇರೆ ವಿಧಿಯಿಲ್ಲ ಎಂದು ಸಾರಿ ಸಾರಿ ಹೇಳುತಲಿದೆ ಎನಿಸುತ್ತಿತ್ತು. ಸವಕಲಾಗುವುದರಲ್ಲೂ ಸಂತೋಷವಿದೆ ಎಂಬ ಭಾವ ಉಕ್ಕುಕ್ಕಿ ತೆರೆಯಂತೆ ಮನದ ಕಡಲಿಗಪ್ಪಳಿಸುತ್ತಲೇ ಇದೆ. ತಿಲ ಮಿಟ್ಟಿಯ ನೆನಪಿನಂತೆ. 

ಅವನ ಕಣ್ಣ ಪಾಪಿಯಲ್ಲಿನ ಸೂರ್ಯ ಕಂತುತಲಿದ್ದ. ಭವದ ಬವಣೆ ತೀರಿಸಿತೇ ಕಡಲು. ಬೆಲೆಯೇ ಇಲ್ಲದ ಮೀನುಗಳ ಸಂಗಡ ಮೀನಾರಿಸುತ್ತಾ ತಿಲಮಿಟ್ಟಿಯ ದಡದಲ್ಲಿ ಬದುಕಿನ ನೌಕೆಗೆ ಹುಟ್ಟು ಹಾಕುತಿರುವ ತೀರ ಸಿಗದ ಜೋಡಿ! ಅಪ್ಪಟ ಕೊಂಕಣಿ ಮಿಶ್ರಿತ ಮರಾಠಿಯಲ್ಲಿ ಸ್ನೇಹಿತನ ಜೊತೆ ಮಾತೆಗಿಳಿದರು! ನಡುನಡುವೆ ನಗುವಿನ ಅಲೆಗಳ ವಿನಿಮಯವಾಗಿದ್ದಷ್ಟೇ ನನಗೆ ಗೊತ್ತು.  ಹತ್ತಾರು ಸಿಗಡಿಗಳು, ಸ್ವಲ್ಪ ಸ್ವಲ್ಪವೇ ಪುಡಿ ಮೀನುಗಳೊಂದಿಗೆ ಮರಳುವ ದಾವಂತದಲ್ಲಿದ್ದರು. ಆದರೂ ನಾಲ್ಕಾರು ಮೀನುಗಳನ್ನೂ ನಮಗೂ ಕಟ್ಟಿಕೊಡಲು ಬಂದರು! ನಾವು ಬೇಡವೆಂದಿದ್ದಕ್ಕೆ ಬೇಸರಿಸಿಕೊಂಡರು. ನಾಲ್ಕಾರು ಸಿಗಡಿಗಳ ತೋರಿಸಿ ಕುಶಿ ಪಟ್ಟ. ಕಡಲ ಕಿನಾರೆಗೆ ಬಡಿದು ಬಡಿದೂ ಸವೆದ ಚಪ್ಪಲಿ ಹಾಕಿ ಹೊರಟಾಗ ಮನದ ಕರಳು ಚುರುಕ್‌ ಎಂದಿತು. ಬೈರವಿ ರಾಗದ ಆಲಾಪದಂತೆ ಭಾಸವಾದ ಅಲೆಗಳು ಅವಳ ಕಾಲಂದುಗೆಗೆ ಮತ್ತೆ ಮತ್ತೆ ಮುತ್ತಿಕ್ಕುತಾ ಖುಷಿಯಲ್ಲಿ ಮರಳುತ್ತಲಿದ್ದವು.

ಕೊನೆಯ ತುತ್ತು



ಇಂತಹ ವಿಶಿಷ್ಟ ಕಿನಾರೆಯಲ್ಲಿ ಸಿಕ್ಕ ಅಪರೂಪದ ಜೋಡಿಗಳ ನಗು, ಹಾಸ್ಯ, ಬೆರಗು, ಬೇಸರವಿಲ್ಲದ ಅವರ ನಿರ್ಮಲ ಮನ ನನ್ನೆದೆಯ ಆಲ್ಬಂನಲ್ಲಿ ಸದಾ ಜೀವಂತವಾಗಿ ಒಂದು ವಿಶಿಷ್ಟ ಪುಟವಾಗಿ ಸೇರ್ಪಡೆಗೊಂಡಿತು. ಕಡಲು ಕಾಣಲು ಬಂದ ಪ್ರವಾಸಿಗರೆಸೆದ ಕಸವನ್ನೆಲ್ಲಾ ತನ್ನೊಡಲಿನಿಂದ ಕಡಲು ದಡಕ್ಕೆ ಮರಳಿಸಿತ್ತು. ಕಡಲ ಬದುಕು ಕದಡದಂತೆ ಬದುಕಲು ಎಂದು ನಾವು ಕಲಿವೆವೋ? ವಿಧಿ ಲಿಖಿತದ ಅಲೆಯೊಂದು ನಮ್ಮ ಕಾಲಿಗೆ ಸೋಕಿ ಕೇವಲ ನೆನಪನ್ನು ಮಾತ್ರ ಉಳಿಸಿ ಸರ್ವವನೂ ಸ್ವಚ್ಛಗೊಳಿಸಿ ಕಡಲಿಗಿಳಿಯಿತು.

ಶ್ರೀಧರ್‌ ಎಸ್.‌ ಸಿದ್ದಾಪುರ.

Monday, December 22, 2025

ಜೋಧಪುರದಲ್ಲಿ ಜುಗಲ್‌ಬಂದಿ

 


ಅದೇ ರುಚಿಯ ಅದದೇ ವಾಕ್ಯಗಳು, ಮಾಹಿತಿಗಳಿಂದ ರೋಸಿ ಹೋಗಿ ಬಿಟ್ಟೆ. ಓದದೇ ಹೇಳಬಹುದಾಗಿದ್ದ ಮುಂದಿನ ವಾಕ್ಯ. ಹಳಸಲು ಆಗಬಾರದು ಆದರೆ ಹೇಗೆ? ತಿಳಿಯದ ತಿಳಿಯಾಗದ ಅನವರತ ಜಿಜ್ಞಾಸೆ. ಬಾಲ್ದಿಲಿ ಇಟ್ಟ ನೀರೇ ಸಮುದ್ರವೆಂದು ತಿಳಿವ ಬದುಕು ನಮದಾಗಬಾರದು ಅಲ್ವಾ? ಸಣ್ಣ ಬದಲಾವಣೆಯ ಹನಿಯೊಂದು ಬೇಕಿದೆ. ಹಾಗಾಗಿ ಹೊಸ ವಿನ್ಯಾಸದ ಹುಡುಕಾಟ! ಜೋಧಪುರದಲ್ಲಿ ಜುಗಲ್‌ಬಂದಿ ನಿಮ್ಮ ಮುಂದೆ.

***



ಮೆಹರ್‌ಗಾನ್‌ ಕೋಟೆಯ ಹೊರ ಆವರಣದಲಿ ರಾವಣತಾರ ಸಂಗೀತ ವಾದ್ಯದ ಸ್ವರ ಚಮತ್ಕಾರ. ಬರಹಕ್ಕೆ ನೆನಪಿನ ಜುಗಲ್‌ಬಂಧಿ. ಬಿಸಿಲಿಗೆ ಬೆವರಿನ ಜುಗಲ್‌ಬಂಧಿ. ವಾಸ್ತವಕೆ ಇತಿಹಾಸದ ಜುಗಲ್‌ಬಂಧಿ ಎಂತಹ ಲಯ ವಿಜ್ಞಾನ ಇವರ ನರನಾಡಿಗಳಲ್ಲಿ ಮನಸೋಲದೇ ವಿಧಿ ಇಲ್ಲ. ರಾಜಸ್ಥಾನದ ಜೋಧಪುರದಲ್ಲಿ ಕಂಡ ದೃಶ್ಯಾವಳಿಯ ನೆನಪುಗಳ ಜುಗಲ್‌ಬಂಧಿ ನಿಮ್ಮ ಮುಂದೆ.

***

ಹೋಟೆಲ್ ವೀವ್ ಪಾಯಿಂಟ್ ಕಿಟಕಿ ತುಂಬಾ ಹರಡಿದ ಬೃಹತ್ ಕೋಟೆಯ ಹರವು! ಹೋಟೆಲ್ ಮಾಣಿ ಅಟ್ಟೆ ಅಟ್ಟೆ ಪರೋಟ ತಂದಿಟ್ಟಾಗ ತಿನ್ನುವುದು ಹೇಗೆಂದು ಕಳವಳಗೊಂಡೆ. ಪರೋಟಾಗೆ ಮೊಸರಿನ ಜುಗಲ್‌ಬಂಧಿ. " ಇಲ್ಲಿನ ಬಿಸಿಲಿಗೆ ಬೇಕಾಗುತ್ತೆ ತಿನ್ನಿ ಸಾರ್." ಎಂದ. ಬಿಸಿಲೇ ತಿನ್ನುತ್ತೊ ಬಿಸಿಲಿಗೆ ತಿನ್ನುವುದೋ ಅನುಮಾನ ಕಾಡಿತು. ಕೋಟೆಯ ಗೋಡೆಗಳಂತೆ ಒಂದರ ಮೇಲೊಂದು ಹೇರಿಕೊಂಡಿತ್ತು. ಅಂತು ಇಂತೂ ಕೋಟೆ ನೋಡುತ್ತಾ ಒಂದು ಪರೋಟವನ್ನು ಮೊಸರಿನ ಜುಗಲ್‌ಬಂಧಿಯೊಂದಿಗೆ ತಿಂದು ಮುಗಿಸಿದೆ.

ನೀವು ಸ್ವಲ್ಪ ನೋಡಿ... 😂


ಬಿಸಿಲ ಕೋಲುಗಳು ಕೋಟೆಯ ಗೋಡೆಯೊಂದಿಗೆ ಜುಗಲ್‌ಬಂಧಿ ನಡೆಸಿತ್ತು. ಕೋಟೆಯೊಳಗೆ ಬೆಳಕಿನ ಚಿತ್ತಾರ ಕೆತ್ತಿತ್ತು. ಇಲ್ಲಿಂದ ಹೊರಟಾಗ ಎಂಟು ಗಂಟೆ. ನೀಲಿ ನೀಲಿ ಮನೆಯಿಂದೆದ್ದ ಧೂಮ ಕೋಟೆಯ ಗೋಡೆಯ ಸೋಕಿ ಜುಗಲ್‌ಬಂಧಿ ನಡೆಸಿದ್ದವು. 

ಕೋಟೆ ವದನದ ತುಂಬಾ ರಾಜಸ್ಥಾನಿ ಚಿತ್ತಾರ

ಬನ್ನಿ ಕೋಟೆಯೊಳಗೆ ಹೋಗೋಣ. ಚಿತ್ರಕಾರಗಳಿದ್ದರೂ ಆತನ ಸೃಜನಶೀಲ ಮನಸ್ಸು ಪ್ರತೀ ಕೋನದಲ್ಲೂ ಪ್ರತಿಫಲಿಸುತಲಿತ್ತು. ಕೋಟೆಯ ಮಹಾದ್ವಾರಗಳಲ್ಲೇ ಅತ್ಯಂತ ಸುಂದರವಾದುದು ಜೈಪೋಲ್ 1806ರಲ್ಲಿ ಕಟ್ಟಲ್ಪಟ್ಟಿದ್ದು. ಇದರ ನಿರ್ಮಾತ ಮಾನ್‌ಸಿಂಗ್.




ಅಲ್ಲಿ ಕೆತ್ತಿದ ಆನೆ, ಕುದುರೆಗಳು ಈಗಷ್ಟೇ ಎದ್ದು ಬಂದಂತಿದ್ದವು. ಎರಡನೆಯ ದ್ವಾರ ಫತೇ ಪೋಲ್ ದ್ವಾರ ಯುದ್ದ ಕಾಲದಲ್ಲಿ ಬಿದ್ದ ಗುಂಡುಗಳಿಂದ ನುಜ್ಜು ಗುಜ್ಜಾದ ಮುದುಕನ ಗುಳಿಬಿದ್ದ ವದನದಂತಿತ್ತು!

ಕೋಟೆಯ ಮುಂದಡಿ ಇಟ್ಟರೆ ತುತ್ತಿನ ಚೀಲ ತುಂಬಲೊಬ್ಬ ರಾವಣ್ ತಾರ್‌ವಾದ್ಯವನ್ನು ತನ್ನ ರಾಧೆಯೊಂದಿಗೆ ಬಾರಿಸುತ್ತಿದ್ದ. ಈ ರಾವಣ್ ತಾರದ ಮಧುರ ಆಲಾಪ ಕೋಟೆಯ ಮೌನದೊಂದಿಗೆ ಜುಗಲ್‌ಬಂಧಿ ನಡೆಸಿತ್ತು! ಬಿಸಿಲಿಗೆ ಒಣಗುತ್ತಾ ಚಹವೇ ನಮ್ಮ ಲಕ್ಸೂರಿ ಎಂಬಂತೆ ಹೀರುತಲಿದ್ದರು! ಅವರಿಗೆ ಹತ್ತಿಪ್ಪತ್ತು ನೀಡಲೂ ಹಿಂಜರಿಯುವ ಕೆಲವರು ಒಂದು ದಿನದ ಸಂಗೀತ ಕಾರ‍್ಯಕ್ರಮಕ್ಕೆ ಐದು ಸಾವಿರ ಪೀಕುತ್ತಿದ್ದರು! ರಾವಣ್ ತಾರ್‌ದ ಸ್ವರ ನಮ್ಮ ನಾಡಿಗಳಲ್ಲಿ ವ್ಯಾಪಿಸುತ್ತಿತ್ತು.

 ವಿ ಆಕಾರದ ತುದಿಯಿಂದ ಕೋಟೆಯ ದ್ವಾರ ಪ್ರಾರಂಭವಾಗಿ ಎಡಮಗ್ಗುಲಿನಲಿ ಹೊರಳಿ ಏರುದಾರಿಯೊಂದಿಗೆ ಬಲಕ್ಕೆ ಹೊರಳಿಕೊಂಡಿತ್ತು. ಬೆಟ್ಟದ ಬಳುಕುಗಳನ್ನೇ ಬಳಸಿಕೊಂಡ ಪರಿ ನಿಜಕ್ಕೂ ಅನನ್ಯ. ಬಲಕ್ಕೆ ಕೋಟೆಯ ದ್ವಾರ. ಮಹಲುಗಳು ಗಗನಮುಖಿಯಾಗಿದ್ದವು!



ಚರ್ಮವಾದನದಲ್ಲಿ ಪರಿಣತಿ ಹೊಂದಿದವನನ್ನು ದಾಟಿದರೆ ಕೋಟೆಯ ಕಾವಲುಗಾರರು ಬಿಳಿ ಸಮವಸ್ತೃ ಮತ್ತು ರಾಜಸ್ಥಾನಿ ರುಮಾಲಿನಲ್ಲಿ ಕೋಟೆಯೊಂದಿಗೆ ಜುಗುಲ್‌ ಬಂದಿ ನಡೆಸಿದ್ದರು. ಎಲ್ಲರಿಗೂ ರುಮಾಲು ಸುತ್ತುವುದನು ತೋರಿಸುತಲಿದ್ದರು. ಮಹಲಿನ ಕೆತ್ತನೆ, ಕಾವಲುಗಾರರ ಉಡುಪು ಜುಗಲ್ ಬಂದಿಗಿಳಿದಿತ್ತು. ಮರ್‌ವಾರ ರಾಜರ ಕಲಾ ನೈಪಣ್ಯವಿಲ್ಲಿ ಅನಾವರಣಗೊಂಡಿದ್ದವು. ಒಂದಕ್ಕಿಂತ ಒಂದು ವಿಭಿನ್ನ ಕಿಟಕಿ ಗೋಡೆಗಳ ಕೆತ್ತನೆ ಬಿಸಿಲಿನೊಂದಿಗೆ ಜುಗಲ್‌ಬಂಧಿಗಿಳಿದಿತ್ತು. ಅನೇಕ ಸುತ್ತುಗಳಿಂದ ಸುತ್ತುವರಿದ ಏಳುದ್ವಾರಗಳಿಂದ ಅತಿಭದ್ರ ಕೋಟೆಯಾಗಿ ಉಳಿದಿದೆ. ಈಗಲೂ ಈ ಕೋಟೆ ಮೇವಾರದ ರಾಜ ಗಜಸಿಂಗನ ಹಿಡಿತದಲ್ಲಿದೆ!

ಕರಣೀ ಮಾತೆಯ ಕೃಪೆ 


ಕರಣೀ ಮಾತೆಯ ಕೃಪೆಯಿಂದ ಅಡಿಗಲ್ಲು ಹಾಕಿಸಿಕೊಂಡ ಕೋಟೆ, ಬೆಳಕಿನ ದೇವರು ಸೂರ್ಯನ ಕೋಟೆ ಎಂದು ರಾಜಸ್ಥಾನಿ ಭಾಷೆಯಲ್ಲಿ ಕರೆಸಿಕೊಳ್ಳುವುದು.



ಮರ್‌ವಾರ್ ಸಂಗೀತೋತ್ಸವದ ಸಲುವಾಗಿ ಅನೇಕರು ದೇಸಿ ಸಂಗೀತ ನೃತ್ಯದಿಂದ ನೆರೆದವರನ್ನು ರಂಜಿಸುತ್ತಿದ್ದರು. ಸುಂದರ ಕೆತ್ತನೆಗೆ ದೇಶೀಯ ನೃತ್ಯ ಸಂಗೀತದ ಜುಗಲ್‌ಬಂಧಿ ಕ್ಯಾಮಾರದಲ್ಲಿ ನೃತ್ಯ ಸಂಗೀತ ಬಂದಿ. ಬೆಳಗಿನಿಂದ ಹಾಡು, ಕುಣಿತ ಜೋಶ್‌ನಲ್ಲಿದ್ದರೂ ಸ್ವಲ್ಪವೂ ಬೇಸರ ಅವರ ಮುಖದಲ್ಲಿರಲಿಲ್ಲ. ಮೋತಿ ಮಹಲ್, ಫುಲ್ ಮಹಲ್ ನೋಡಿಕೊಂಡು ಶೀಶ್ ಮಹಲಿನಲ್ಲಿ ಕಾಲಿಟ್ಟರೆ ಅಚ್ಚರಿಗಳ ಜುಗಲ್‌ಬಂಧಿ. ಹಚ್ಚಿಟ್ಟ ಒಂದು ಮೇಣದ ಬತ್ತಿ ಸಾವಿರವಾಗಿ ಕಾಣುತಲಿತ್ತು. ಪುಡಿ ವರ್ಣದ ಅಮೃತಶಿಲೆಗಳಿಂದಾದ, ಶೃಂಗರಿಸಿದ ಮೂರಂತಸ್ತಿನ ಭವನದ ಹೊಸ್ತಿಲಲ್ಲೇ ರಾವಣ್‌ತಾರದ ಮೆಲುದನಿ ಸ್ವರ, ಶಿಲ್ಪದೊಂದಿಗೆ ಜುಗಲ್‌ಬಂದಿಗಿಳಿದಿತ್ತು.




ಹಲವು ಕೋಣೆಗಳಲ್ಲಿ ರಾಜಸ್ಥಾನಿ ಕಲೆ ಬಿಂಬಿಸುವ ವಸ್ತುಗಳಿದ್ದವು. ಕೆಲವು ಕೋಣೆ ಮುಚ್ಚಿದ್ದವು. ಅಮೃತಶಿಲೆಯಲ್ಲಿ ಚಿತ್ತಾಕರ್ಷಕ ಹೂ ಬಳ್ಳಿ. ಜಾಲಾಂಧ್ರ ರಚನೆ ನಿಮ್ಮನ್ನು ಸ್ವಾಗತಿಸುತ್ತೆ. ಮಾರ್‌ವಾರ್ ಹಬ್ಬದ ಸಲುವಾಗಿ ದೇಸಿ ನೃತ್ಯ ದರ್ಬಾರ್ ಹಾಲ್‌ನಲ್ಲಿ ಎದುರಿನ ಅಂಗಳದಲ್ಲಿ ನಡೆಯುತ್ತಿತ್ತು. 



ನೋಡಲೇ ಬೇಕಾದ ನೀಲೂರು

ಊರಿಗೊರೇ ನೀಲಿಕುಡಿದು ನೀಲವಾಗಿ ಕುಳಿತಿತ್ತು. ನೀಲೂರು! ಬ್ಲೂ ಸಿಟಿ ಕ್ಯಾಮರಾಕ್ಕಂತೂ ಪುರುಸೊತ್ತಿರಲಿಲ್ಲ ಊರಿಗೊಂದು ಕಿರೀಟ. ತಣ್ಣಗೆ ಮಲಗಿದ ರಕ್ಕಸಗಾತ್ರದ ಪಿರಂಗಿಗಳು ಇತಿಹಾಸದ ಹಸಿ ಬಿಸಿ ಕಥಾನಕವನ್ನು ಉಣಬಡಿಸುತ್ತಿವೆ. ಕೋಟೆಯನ್ನು ವಶಪಡಿಸಿಕೊಳ್ಳಲು ಬಂದ ಪ್ರತಿಯೊಬ್ಬರಿಗೂ ಅದು ನೀಡಿದ ಉತ್ತರಗಳ ನಿಟ್ಟುಸಿರು ಅಲ್ಲೇ ಇತ್ತು!




 ಫಿರಂಗಿಯ ಮೇಲೆ ಕುಳಿತ ಅಳಿಲು ತನ್ನ ಇನಿಯನೊಂದಿಗೆ ಜುಗಲ್‌ಬಂದಿಗಿಳಿದಿತ್ತು. ಕೈ ಕೈ ಹಿಡಿದ ನವವಿವಾಹಿತರು, ಅಪ್ಪ-ಮಗನ ಜುಗಲ್‌ಬಂದಿ ಕೋಟೆಯ ಛಾವಣಿಯಲ್ಲಿ ಛಾವಣಿಯಿಂದ ಕಾಣುವ ನೀವು ನೋಡದ ಅಮೃತ ಶಿಲೆಯ ತಾಜ್‌ಮಹಲ್ ಮೇಹರ್‌ನ್‌ಗಢದೊಂದಿಗೆ ಜುಗಲ್‌ಬಂದಿಗೆ ಇಳಿದಿತ್ತು. ಮುಳುಗುವ ಸೂರ‍್ಯ ಕತ್ತಲಿನೊಂದಿಗೆ ಜುಗಲ್‌ಬಂದಿಗಿಳಿದಿತ್ತು. ಮಹಲಿನ ಇಂಚಿಂಚು ಅದ್ಭುತ ಕಲಾಕುಸುರಿಯಿಂದ ಅಲ್ಲಿನ ಪಾರಂಪರಿಕ ಉಡುಗೆಯ ಜನರೊಂದಿಗೆ ಜುಗಲ್‌ಬಂದಿಗಳಿದಿತ್ತು. ಎಲ್ಲೆಲ್ಲೂ ಪೊಗದಸ್ತಾದ ಹುರಿ ಮೀಸೆಯ ಹುರಿಯಾಳುಗಳು ರುಮಾಲು ಸುತ್ತಿಕೊಂಡು ಜುಗಲ್‌ಬಂದಿಗಿಳಿದಿದ್ದರು.

ನೋಡಲೇ ಬೇಕಾದ ನೀಲಿಯೂರಿನ ಇತಿಹಾಸ

ರಾವ್ ಜೋಧನಿಂದ 1459ರಲ್ಲಿ ನಿರ್ಮಿಸಲ್ಪಟ್ಟ ಇದು ಮಂಡೋರದ 9 ಕಿ.ಮೀ. ದಕ್ಷಿಣಕ್ಕೆ ಸ್ಥಾಪಿಸಿದ ನಗರ ಜೋಧಪುರ. ಪಕ್ಷಿಗಳ ಗುಡ್ಡವಾಗಿತ್ತು ಒಮ್ಮೆ. ಊರ ನಡುವೆ ಕಾಂತದಂತೆ ಆಕರ್ಷಿಸುವ ಮೇಹರ್‌ಗಾನ್ ಕೋಟೆ. ಸೂರ‍್ಯನ ಆರಾಧಕರ ಸೂರ‍್ಯನ ಕೋಟೆ. ಘಡವಾಲಿಯಾ ಸಮುದಾಯದವರ ಅಪೂರ್ವ ಕಲ್ಲಿನ ಜ್ಞಾನಕ್ಕೊಂದು ಸಾಕ್ಷೀ. ಇವರ ಜೊತೆಗೆ ಬೆರೆತ ಚವಾಲಿಯ ಸಮುದಾಯದವರು ಎಂತಹ ಭಾರವನ್ನು ತಮ್ಮದೇ ತಂತ್ರಗಾರಿಕೆಯಲ್ಲಿ ಎತ್ತಿ ಸಾಗಿಸಬಲ್ಲವರು. ಈ ಎರಡೂ ಸಮುದಾಯದವರು ಪ್ರಕೃತಿಯನ್ನು ಪಳಗಿಸಿದ ಪರಿ ಅನನ್ಯ. ಇಲ್ಲಿನ ನೀರಿನ ಜ್ಞಾನವೂ ಅನನ್ಯ. ಇವರಿಬ್ಬರ ಜುಗಲ್‌ಬಂದಿಯಲ್ಲಿ ನಿರ್ಮಿತ ಈ ಕೋಟೆ ಏಷ್ಯಾದ ಒಂದು ಅತ್ಯುತ್ತಮ ಕಲಾಕೃತಿ! ಇಲ್ಲಿನ ಪ್ರತೀ ಕೋಣೆಯೂ ಗತ ಇತಿಹಾಸವ ಉಸುರುತ್ತದೆ. ಶೃಂಗಾರ ಕೋಣೆ , ಹೌದಾ, ಶೀಶ್‌ ಮಹಲ್‌, ಹೂವಿನರಮನೆ ಮತ್ತು ಹೆಮ್ಮಕ್ಕಳ ಅರಮನೆಯ ಕೋಣೆಯೊಳಗೊಮ್ಮೆ ಹೊಕ್ಕು ಬರೋಣ.

 ಶೃಂಗಾರ ಚೌಕ -

 ಗಜರಾಜ ಸಿಂಗ್ - 1 ರಾಜರನ್ನು ಪ್ರವೇಶಿಸುವ ಅದ್ಭುತ ಜಾಗ. ಅಲ್ಲಿಂದ ಮುಂದೆ ದೌಲತ್ ಖಾನಾ 18ನೆಯ ಶತಮಾನದಲ್ಲಿ ಅಜಿತ್‌ಸಿಂಗ್ ನಿರ್ಮಿತ.(1730) 


 ಆನೆ ಮೇಲೆ ಹೊರಿಸುವ ಹೌದಾಗಳಿಗಾಗಿಯೇ ರಚಿಸಿದ ಕೋಣೆ ನಿಮ್ಮ ಮುಂದೆ ತೆರೆದುಕೊಳ್ಳುತ್ತದೆ. ಮಹರಾಜ ಜಸ್ವಂತ್ ಸಿಂಗ್‌ನಿಗೆ ಶಹಜಾನ್ ನೀಡಿದ ಹೌದಾ ಕೋಟೆಯೊಂದಿಗೆ ಜುಗಲ್ ಬಂದಿಗಿಳಿದಿತ್ತು! ಇದರ ರಚನೆ ನಿಮ್ಮ ಕಣ್ಮನ ಸೆಳೆಯುತ್ತದೆ.

ಇವೆಲ್ಲವನ್ನು ನೋಡಿ ಮುಂದಡಿ ಇಟ್ಟರೆ ಸಿಗುವುದೇ ಅಜಿತ್ ಸಿಂಗ್‌ನ ಶಯನಗೃಹ ಶೀಶ್ ಮಹಲ್. ಅದ್ಭುತವಾದ ಕನ್ನಡಿ ಕಲೆಯಿಂದ ಬೆಳಕು ಕನ್ನಡಿಯೊಂದಿಗೆ ಬೆಳಕಿನ ಜುಗಲ್‌ಬಂದಿ ನಡೆಸಿತ್ತು. ಬನ್ನಿ ಗಾಜಿನ ಮಹಲಿಗೆ ಒಂದು ಸುತ್ತು ಬರೋಣ.

  ಗಾಜಿನ ಮಹಲ್‌ (ಶೀಶ್‌ ಮಹಲ್‌) 



ಶೀಶ್ ಮಹಲ್‌ನ್ನು ಅಜಿತ್‌ಸಿಂಗ್, ಪೂಲ್ ಮಹಲ್‌ನ್ನು ಅಭಯಸಿಂಗರು 17ನೆಯ ಶತಮಾನದಲ್ಲಿ ನಿರ್ಮಿಸಿದ್ದರು. ಕನ್ನಡಿ ಅಳವಡಿಸಿ ಚಿನ್ನ ಲೇಪಿಸಿ ಗೋಡೆ ಸೀಲಿಂಗ್ ಇರುವುದು ಶೀಶ್ ಮಹಲಿನ ವಿಶೇಷತೆ. ಬೆಳಕಿನೊಂದಿಗೆ ಕನ್ನಡಿ ಜುಗುಲ್‌ಬಂದಿಗಿಳಿದಿತ್ತು.

ಶೀಶ್ ಮಹಲಿನ ಕೋಣೆಯ ಬಾಗಿಲ ಬಾಗುವಿನಲ್ಲಿ ಕುಳಿತ ಶಿವ, ಬ್ರಹ್ಮ, ಪಾರ್ವತಿ, ದೇವಿ, ಕೃಷ್ಣ, ಗಣೇಶರ ನಡುವೆ ಸುಂದರ ಜುಗಲ್‌ಬಂದಿ. ಗೋವರ್ಧನ ಗಿರಿಯ ನೆತ್ತಿದ ಕೃಷ್ಣನ ಕೆತ್ತನೆ ಅದ್ಭುತ. ಇಲ್ಲಿ ಕಲೆಯೊಂದಿಗೆ ಬೆಳಕಿನ ಜುಗಲ್‌ಬಂದಿ ನಡೆದಿತ್ತು.

 ಅಭಯಸಿಂಗ್ ನಿರ್ಮಿತ ಹೂವಿನರಮನೆ ಇಲ್ಲಿಂದ ಮುಂದೆ ತೆರೆದುಕೊಳ್ಳುತ್ತದೆ. ಇದೊಂದು ಸಂಗೀತವನ್ನು ಆಲಿಸುವ ಖಾಸಗಿ ವರಾಂಡ ಇಲ್ಲಿಂದ ಮುಂದೆ ತಾಕತ್‌ಸಿಂಗ್ ನಿರ್ಮಿಸಿದ ತಾಕತ್‌ನಿವಾಸದ ಕಲ್ಲುಗಳು ಕಲೆ ನಮ್ಮೊಂದಿಗೆ ಮೌನ ಸಂವಾದಕ್ಕಿಳಿದಿದ್ದವು. 


 ಇವೆಲ್ಲವ ದರ್ಶಿಸಿ ಮುಂದಡಿ ಇಟ್ಟರೆ ಹಳದಿ ಮರಳುಕಲ್ಲಿನ ಅಪರೂಪದ ಕೆತ್ತನೆಯ, ನಿಮ್ಮ ಬಾಯಿಯಿಂದ `ವಾವ್' ಎಂಬ ಉದ್ಗಾರವನ್ನು ಹೊಮ್ಮಿಸುವ ಹೆಮ್ಮಕ್ಕಳ ಅರಮನೆ ಮಂತ್ರಮುಗ್ಧವಾಗಿಸುತ್ತದೆ. ಅರಮನೆಗೊಂದು ಶೋಭೆ ಅರಮನೆಯ ಅತ್ಯಂತ ಹಳೆಯ ಭಾಗವೂ ಇದಾಗಿದೆ. ಮೇವಾರರ ಸೌಂದರ್ಯ ಪ್ರಜ್ಞೆಗೆ ಸಾಕ್ಷಿ ನುಡಿಯುತ್ತದೆ.

ಮೇವಾರ್‌ ಚಿತ್ರಕಲೆ...

  ಮೇವಾರ್‌ ಚಿತ್ರಕಲೆ 17ನೆಯ ಶತಮಾನದಲ್ಲಿ ಪ್ರವರ್ಧಮಾನಕ್ಕೆ ಬಂದಿತು. ಮೊದಮೊದಲು ಮೊಗಲರಿಂದ ಪ್ರಭಾವಿಸಿದ್ದ ಈ ಕಲೆ ತದನಂತರ ತನ್ನದೇ ವಿಶಿಷ್ಟತೆಯ ಚಾಪ್‌ನ್ನು ಪಡೆದುಕೊಂಡಿತು. ಉಗುರಿನ ಮೇಲೆ ಇವರು ಮೂಡಿಸುವ ಚಿತ್ರ ಒಂದು ಅದ್ಭುತ ಕಲೆ. ಬಟ್ಟೆ ಮೇಲೆ ಮೂಡಿಸುವ ಅವರ ಕಲೆ ಅಪೂರ್ವ. ಇಂದಿಗೂ ನಮ್ಮ ಮನೆಯಲ್ಲಿ ಬಟ್ಟೆ ಮೇಲೆ ರಚಿಸಿದ ಸುಂದರ ಚಿತ್ರವೊಂದು ರಾಜಸ್ಥಾನದ ಮೇವಾರ್‌ ಕಲೆಯ ಜುಗಲ್‌ಬಂದಿ ನಡೆಸಿತ್ತು. ಇಲ್ಲಿಂದ ನಾವು ಹೊದ ಶಿಲ್ಪಗ್ರಾಮವು ರಾಜಸ್ತಾನಿ ಕಲೆಯನ್ನು ಅನಾವರಣಗೊಳಿಸುವ ಸಂಸ್ಕೃತಿಕ ನಿಲ್ದಾಣ. ಮುಂದಿನ ಜನಾಂಗಕ್ಕೆ ಕಲೆ ಸಂಸ್ಕೃತಿಯನ್ನು ಪರಿಚಯಿಸಲು ಅವರು ರೂಪಿಸಿಕೊಂಡು ನಿರ್ವಹಿಸುವ ತಾಣ. ನಿವಿಲ್ಲಿಗೆ ಭೇಟಿ ಕೊಟ್ಟಾಗ ತಪ್ಪದೇ ಹೋಗಿಬನ್ನಿ.

ಇಲ್ಲಿನ ಇಂಡೋ ಮೊಘಲ್ ಶೈಲಿಯ ಕಟ್ಟಡಗಳು ಒಂದಕ್ಕಿಂತ ಒಂದು ಭಿನ್ನ. ಎಲ್ಲಿ ಹೋಗಿ ಎಲ್ಲಿಂದ ಹೊರಬರುವುದೋ ಎಲ್ಲವೂ ಗೋಜಲು. ಕರನಿಮಾತೆಗೆ ನಮಸ್ಕರಿಸಿ ಕೋಟೆಯ ನೆತ್ತಿ ತಲುಪಿದರೆ ನಾಲ್ಕಾರು ಪಿರಂಗಿಗಳು ಮುಳುಗುವ ಸೂರ‍್ಯನೊಂದಿಗೆ ಜುಗಲ್‌ಬಂದಿಗಿಳಿದಿದ್ದವು.

 ಹಳದಿ ಮರಳು ಕಲ್ಲು, ಬಿಸಿಲಕೋಲು, ಅಮೃತಶಿಲೆಯ ಜಸವಂತ್ ಥಾಡಾ ನಮ್ಮ ಮನಸ್ಸಿನೊಂದಿಗೆ ಬೆರೆತು ಸದಾ ಜುಗಲ್‌ಬಂದಿಗಳಿದು ನೆನಪುಗಳನ್ನು ಮುನ್ನಲೆಗೆ ತರುತ್ತಲೇ ಇದೆ. 



Friday, October 24, 2025

ನೀರಿಗೆ ಬಿದ್ದ ಆಕಾಶದ ನೀಲಿ !

 


ಪೂರ್ವಾಪರ

ಮೇಘಾಲಯದ ಮೂರು ಬುಡಕಟ್ಟುಗಳು ಮೂರು ಬೆಟ್ಟಗಳಲ್ಲಿ ತಮ್ಮನ್ನು ಕಂಡು ಕೊಂಡವರು. ಸರಳರೂ ಮತ್ತು ಪ್ರಾಮಾಣಿಕರು. ಖಾಸಿ, ಗಾರೊ ಮತ್ತು ಜಟಿಂತ್ಯಾ ಬೆಟ್ಟದ ಬುಡಕಟ್ಟಿನವರು. ಎಲ್ಲರೂ ಬೆಟ್ಟಗಳ ನೆತ್ತಿಯಲಿ ಪುಟಾಣಿ ಮನೆ ಕಟ್ಟಿಕೊಂಡು ಬಿದಿರು, ಹಿಡಿಕಟ್ಟು, ಕಿತ್ತಳೆ, ಅಕ್ಕಿ ಬೆಳೆದುಕೊಂಡು ತಮ್ಮದೇ ಜಗತ್ತು ಮತ್ತು ಭಾಷೆ ಹಬ್ಬವನು ಸೃಷ್ಟಿಸಿಕೊಂಡು ಖುಷಿಯಾಗಿರುವವರು. 

ಕಳೆದ ಪ್ರವಾಸದ ವೇಳೆ ಖಾಸಿ ಬೆಟ್ಟಗಳಲ್ಲಿ ಅಲೆದು ಬಂದಿದ್ವಿ. ಈ ಬಾರಿಯ ಪ್ರವಾಸದ ವೇಳೆ ಜಟಿಂತ್ಯಾ ಮತ್ತು ಗಾರೋ ಬೆಟ್ಟಗಳ ಕೆಲವೊಂದು ಬೆಲ್ಲದಂತಹ ಜಾಗಗಳ ತಡುವಲು ಹೊರಟೆವು. ಗಾರೋ ಬುಡಕಟ್ಟುಗಳಂತೆ ಜಟಿಂತ್ಯಾ ಬುಡಕಟ್ಟು ಕುಳ್ಳಗಿನ ಜನ, ಸ್ವಲ್ಪ ದಪ್ಪಗಿನ ಮೈಕಟ್ಟು, ಗೋಧಿ ಬಣ್ಣ.


ಸ್ವಚ್ಛಂದ ಬೆಳಿಗ್ಗೆ

ನೀಲ ಗಗನಕ್ಕೇರಿದ ಸೂರ‍್ಯ ನಮ್ಮ ಹೊಸ ದಿನದತ್ತ ಕೈಚಾಚುತಲಿದ್ದ. ಚಳಿ ರಗ್ಗನು ಮೆಲ್ಲಗೆ ಸರಿಸುತಲಿದ್ದ. ನಸುಕಿಗೆ ಎದ್ದು ಬಿರಿದ ಚೆರಿ ಹೂಗಳ ನಲಿವನು ನೋಡುತ್ತಾ ಶಿಲ್ಲಾಂಗಿನಿಂದ ಜವಾಯಿ ಕಡೆಗೆ ಹೋಗಲು ಅಂಜಲಿ ಎಂಬ ಜಂಕ್ಷನ್ ಬಳಿ 57 ಕಿ.ಮೀ ದಾರಿಗಾಗಿ ಒಂದು ಲಟಾರಿ ಟಾಟಾ ಸುಮೋ ಬಾಡಿಗೆಗೆ ಪಡೆದೆವು. ನಮ್ಮನ್ನೇ ದೇವರೆಂಬಂತೆ ಚಂದಗೆ ಕೂರಿಸಿಕೊಂಡು ಖಾಸಿ ಬೆಟ್ಟಗಳ ನಡುವೆ ಹೊರಟ. ಚಾಲಕನ ಖುಷಿಗೆ ಪಾರವೇ ಇರಲಿಲ್ಲ!


ವಾಹನದಲ್ಲಿ ಪಚೀತಿ

ಹಾದಿಗೊಬ್ಬರು ನಮ್ಮ ವಾಹನಕ್ಕೆ ಕೈ ಅಡ್ಡ ಹಾಕುತಲಿದ್ದರು! ಇರಲಿ ಇನ್ನೊಂದಿಬ್ಬರನ್ನು ಕೂರಿಸಿಕೊ ಅವರು ಕಾಯಬೇಕಲ್ಲ ಪಾಪ ಎಂದೆವು ಚಾಲಕನಲ್ಲಿ. ತನ್ನ ಅರ್ಧ ಸೀಟ್‌ನ್ನು ಇನ್ನೊಬ್ಬರಿಗೆ ಬಿಟ್ಟುಕೊಟ್ಟು ನಾವೇ ಹೌಹಾರುವಂತೆ ಮಾಡಿದ. ಗೆಳೆಯನ ಬಳಿ ಇಬ್ಬರು ತರುಣಿಯರು ಸೀಟು ಹಂಚಿಕೊಂಡರು! ನನ್ನ ಕಾಲ ಬುಡದಲ್ಲೂ ಒಬ್ಬನನ್ನು ತುರುಕಿ ಕೂರಿಸಲು ನೋಡಿದ, ನಾವೇ ಮುಫ್ತಿನಲಿ ಹೋಗುತ್ತಿದ್ದೇವೇನೊ ಎಂಬ ಭಾವನೆ ಮೂಡಿಸಿ, ಏನೂ ಆಗದವನಂತೆ ವೀಳ್ಯ ಜಗಿಯತೊಡಗಿದ. 

ಹಳೆ ವಾಹನಗಳ ಪ್ರದರ್ಶನ ರಸ್ತೆ

ಚಳಿಗೆ ಪತರುಗುಟ್ಟುತ್ತಾ ಕೆಲವು ಪ್ರವಾಸಿಗರು ಬೈಕ್ ಸವಾರಿ ಮಾಡುತಲಿದ್ದರು! ಪಾಪ. ಎಲ್ಲೂ ಕಾಣ ಸಿಗದ ವಿಶಿಷ್ಟ ವಿನ್ಯಾಸದ ಹಳೆ ಕಾಲದ ವಾಹನಗಳು ಒಂದೊಂದೇ ಹಾದು ಹೋದವು. ನಾವೇನು ಟೈಮ್‌ ಮೆಷಿನ್‌ ನಲ್ಲಿ ಹಿಮ್ಮುಖವಾಗಿ ಪ್ರಯಾಣ ಮಾಡುತ್ತಿಲ್ಲ ತಾನೆ ಎಂದು ನನ್ನನ್ನೇ ಚಿವುಟಿ ಕೊಂಡೆ. ಕೆಲವು ಹಳೆ ವಾಹನಗಳು ತಮ್ಮೆಲ್ಲ ನಟ್ಟು ಬೋಲ್ಟು ಕಳಚಿಕೊಂಡು ಸುಮ್ಮನೆ ರಸ್ತೆ ಪಕ್ಕದಲ್ಲಿ ಹೋಗಿ ಬರುವ ವಾಹನಗಳ ಲೆಕ್ಕ ಮಾಡತೊಡಗಿದ್ದವು. ಎರಡನೆಯ ಮಹಾಯುದ್ಧ ಕಾಲದ ಕೆಲವು ಜೀಪುಗಳೂ ನಮ್ಮನ್ನು ಕಾಣಲು ಬಂದವು. ಜವಾಯಿಯಿಂದ ಹೊರಟ ಹಳೆ ಕಾಲದ ಬಸ್ಸುಗಳು ಕೆಲವು ದರ್ಶನಕೊಟ್ಟವು. 30 ವರ್ಷಗಳ ಹಿಂದೆ ಇಂತಹುದೇ ವಾಹನಗಳ ಕಂಡಿದ್ದೆ. ಹಳೆಯ ನೆನಪುಗಳು ತೊಟ್ಟಿಕ್ಕತೊಡಗಿತು. ರಸ್ತೆ ಬದಿಯಲ್ಲಿ ಕೆಲವು ಹಳೆ ವಾಹನಗಳು ತಮ್ಮ ಅಂಗಾಂಗ ಪ್ರದರ್ಶಿಸುತ್ತಾ ನಿಂತಿದ್ದು ಏಕೆಂದು ಗೊತ್ತಿಲ್ಲ.
ಇಲ್ಲಿ ಕಣ್ಣು ಹಚ್ಚಿದ್ದಲ್ಲೆಲ್ಲಾ ಭತ್ತದ ಗದ್ದೆಗಳು. ಶೀಟು ಹೊದ್ದ ಪುಟಾಣಿ ಮನೆಗಳು. ದಾರಿಗುಂಟಿದ ಓಕ್ ಮತ್ತು ಫೈನ್ ಮರಗಳು ಶುಭಕೋರಲು ನಿಂತಿದ್ದವು. ಚಾಲಕನಿಗೆ ನಮ್ಮೊಂದಿಗೆ ಹರಟಲು ನೂರಾರು ವಿಷಯಗಳಿದ್ದವು. ಗಳಿಗೆಗೊಮ್ಮೆ ಏನೇನೋ ಹೇಳುತ್ತಿದ್ದ. ಒಂದೂ ಅರ್ಥವಾಗುತ್ತಿರಲಿಲ್ಲ. ನಾಲಿಗೆ ಹೊರಳದ ನಾಡಿನಲ್ಲಿ ಏನು ಮಾತನಾಡುವುದು ತಿಳಿಯದಾದ ನಾನೂ ಸುಮ್ಮನಾದೆ. 


ಊರ ಹೆಬ್ಬಾಗಿಲಿನಲ್ಲಿ 

ಅಂತೂ ಒಂಭತ್ತರ ಸುಮಾರಿಗೆ ಜವಾಯಿಯ ಬಳಿ ಇಳಿಸಿ ಹೋದ. ವೀಳ್ಯ ಜಗಿಯುವ ಕೆಂದುಟಿಯ ಯುವಕರು, ಯುವತಿಯರು, ಸುಣ್ಣದ ಹಚ್ಚೆ ಹಾಕಿಸಿಕೊಂಡ ಕಟ್ಟಡಗಳ ನೋಡುತ್ತಾ ಖಾಸಿ ಗೆಳೆಯನ ನಿರೀಕ್ಷೆ ಮಾಡತೊಡಗಿದೆವು. ಊರ ಸಂತೆಯೊಂದು ಸಣ್ಣ ಓಣಿಯಲ್ಲಿ ಚಿತ್ರ ವಿಚಿತ್ರ ವಸ್ತುಗಳನ್ನಿಟ್ಟು ಮಾರುತ್ತಿದ್ದರು. ಹೋಗೋಣವೆನ್ನುವಷ್ಟರಲ್ಲೇ ಖಾಸಿ ಗೆಳೆಯನ ವಾಹನ ನಮ್ಮನ್ನು ಹೊತ್ತೊಯ್ಯಲು ಬಂದಿತು.
ಅಲ್ಲಿಂದ ಖಾಸಿ ಗೆಳೆಯನ ವಾಹನದಲ್ಲಿ ಗೊತ್ತು ಗುರಿ ಇಲ್ಲದೆ ಜಲಪಾತವೊಂದಕ್ಕೆ ಪ್ರಯಾಣ ಬೆಳೆಸಿದೆವು. ಗಡಿಗಡಿಗೆ ಒಂದರಂತೆ ಅರುಚಿಯ ವೀಳ್ಯ ಜಗಿಯುತ್ತಾ ಕಾಡು ಹರಟೆ ಕೊಚ್ಚುತ್ತಾ ಕ್ರೇಮ್‌ಸೂರಿ ಜಲಧಾರೆಯತ್ತ ಹೊರಟೆವು. ಇಲ್ಲಿ ಪ್ರತಿಯೊಬ್ಬರೂ ವೀಳ್ಯ ಜಗಿಯುವವರೇ. ಬೆಳೆಯೂ ಕಡಿಮೆ. ಹಾಗಾಗಿ ಅಡಿಕೆಗಿಲ್ಲಿ ಚಿನ್ನದ ಬೆಲೆ. ವ್ಯಾಪಾರ ಕುದುರಿಸುವ ಮಾತುಕತೆಯೂ ಆಯಿತು! ಮತ್ತೆ ಮುಂದುವರಿದಂತೆ ಕಾಣಲಿಲ್ಲ.









ಬೆಟ್ಟದಿಂದ ಬಯಲಿಗೆ.

ಜವಾಯಿಯಿಂದ ಡೌಕಿ ದಾರಿಯಲ್ಲಿ ಹೊರಬಿದ್ದು ನಾಲ್ಕಾರು ಕಿಲೋಮೀಟರ್‌ ಬಂದರೆ ವಿಶಾಲ ಬಯಲೊಂದು ತೆರೆದುಕೊಳ್ಳುತ್ತದೆ. ಬಯಲ ಮೇಲೆ ಹರಡಿದ ಸ್ಪಟಿಕ ಶುಭ್ರ ಜಲಧಾರೆಗಳು. ಚಂದಕ್ಕಿಂತ ಚಂದ. ಜೋವಾಯಿಯಿಂದ ೨೪ ಕಿಲೋಮೀಟರ್‌ ಚಲಿಸಿ ಒಂದೆಡೆ ಎಡಕ್ಕೆ ಹೊರಳಿ 4-5 ಕಿಲೋಮೀಟರ್‌ ಕ್ರಮಿಸಬೇಕು. ಜಟಿಂತ್ಯಾ ಮೋನೋಲಿತ್‌ ಸಹ ನಡುವೆ ಕಾಣ ಸಿಗುತ್ತದೆ. ನಡು ದಾರಿಯ ಹುಲ್ಲುಗಾವಲಿನಲಿ ಎಡಬದಿಯಲ್ಲಿ ಹಿರಿಯರ ಸಮಾಧಿಸಹ ಕಾಣಸಿಗುತ್ತದೆ. ಮಾಸ್ತಿ, ವೀರಗಲ್ಲುಗಳಂತೆ ಅನಾಥವಾಗಿ ನಿಂತು ತಮ್ಮ ಹಿರಿಯ ತಲೆಮಾರಿನ ಕತೆ ಹೇಳುತ್ತವೆ. ಇಂತಹ ದೊಡ್ಡ ಸಮಾಧಿಗಳು ಮೇಘಾಲಯದ ಸುತ್ತಮುತ್ತ ಬಹಳಷ್ಟಿದೆ. ಕಾಣದ ಇತಿಹಾಸದ ಕಗ್ಗತ್ತಲಿನಲ್ಲಿ ಪಯಣಿಸುವ ಆಸಕ್ತಿ ಇರಬೇಕಷ್ಟೆ. ಮಾತು ಮಥಿಸುತ್ತಾ ಜಲಪಾತದ ಹೆಬ್ಬಾಗಿಲಿಗೆ ಬಂದಿದ್ದೆವು. ಇಲ್ಲಿಂದ ಇಪ್ಪತ್ತರಿಂದ ಮವತ್ತು ನಿಮಿಷಗಳ ಅವರೋಹಣ.
ಪ್ರಪಾತಕ್ಕೆ ಬಾಯ್ತೆರೆದ ದಾರಿಯಲ್ಲಿ ಪ್ರತಿಯೊಬ್ಬರೂ ಇಲ್ಲಿ ತಲೆಗೆ ಐವತ್ತರಂತೆ ಸುಂಕ ಕಟ್ಟಿ ನೂರಾರು ಕೆಂಪು ಕಲ್ಲಿನ ಮೆಟ್ಟಿಲಿಳಿಯಬೇಕು. ಅರಿವೆಂಬ ಹರಿವು ಮನದ ಭಿತ್ತಿಯಲಿ ಹರಿದಂತೆ ಜಲಧಾರೆ ನೀಲಿ ಕುಡಿದ ಆಕಾಶದಂತೆ ಭಾಸವಾಗುತ್ತದೆ. ಆಕಾಶದ ನೀಲಿಯನ್ನೇ ಕದ್ದ ಜಲಧಾರೆ ತಣ್ಣಗೆ ಹರಿಯುತ್ತಲೇ ಇತ್ತು. ಕೆಳಗಿಳಿಯುತ್ತಲೇ ಕಿವಿ ತೂತಾಗುವಂತೆ ನೀರು ಮತ್ತು ಜೀರುಂಡೆಯ ಸದ್ದು ಕಿವಿತುಂಬುತ್ತದೆ. ಕುಂದಾಪುರ ಭಾಷೆಯಲ್ಲಿ ಹೇಳುವುದಾದರೆ ಒರ್ಲುತ್ತಿತ್ತು!! 







ಆಕಾಶದ ನೀಲಿಯನ್ನೇ ಕದ್ದ ಜಲಧಾರೆ.

ಅನಂತ ಕಾಲದಿಂದ ಹರಿದು ಬಂದ ನದಿಯೊಂದು ಬೆಟ್ಟದ ಕಣಿವೆಗಳಲ್ಲಿ ನುಗ್ಗಿ ಬಯಲಿಗೆ ಜೀಕಿ ಕಡಲೊಡಲ ಸೇರಲು ತವಕಿಸುತ್ತದೆ. ತನ್ನ ತನವ ಕಳಕೊಳ್ಳುತ್ತದೆ. ನದಿಯೊಂದು ಸದಾ ಹರಿಯಲೇ ಬೇಕು. ಹರಿದಾಗಲೇ ಅದಕ್ಕೆ ಅಸ್ತಿತ್ವ. ಗಮ್ಯ ತಲುಪಲು ನೂರಾರು ಏರು ತಗ್ಗು. ಇದರಿಂದಲೇ ಜಲಪಾತವೊಂದು ಸೃಷ್ಟಿಯಾಗುತ್ತದೆ.
ನೀರಿಗೆ ಮೆತ್ತಿದ ಬಣ್ಣ, ಸೋತ ಮನಕ್ಕಿಲ್ಲಿ ಉಲ್ಲಾಸದ ಬುಗ್ಗೆ. ಕಡುನೀಲ ತೆಳು ಹಸಿರ ಸ್ಫಟಿಕ ಸದೃಶ ಪ್ರಾಂಜಲಾಂಬುಧಿ ಧುಮುಕುತಿದೆ ನೋಡಲ್ಲಿ ಶಿವನ ಜಟೆಯಿಂದೆಂಬಂತೆ. ಸುತ್ತಲೂ ಕವುಚಿಕೊಂಡ ಕಾಡ ನಡುವೆ ವೈಯಾರದಿ ಬಳುಕಿ ಧುಮುಕುವ ವೈಯಾರಿಣಿ. 




ಹರಿವೆಂಬ ಹೊಸ ಅರಿವು

 ಈ ಜಲಧಾರೆಯ ಹರಿವಿಗಡ್ಡವಾಗಿ ಸಿಕ್ಕಿಸಿಕೊಂಡಂತೆ ಬೃಹತ್ ಬಂಡೆ ಹೊರಚಾಚಿದೆ. ಬಂಡೆಯಿಂದ ಜಾರಿದ ನೀರು ನವಿರಾಗಿ ಹರಿಯುತ್ತದೆ. ಪಶ್ಚಿಮ ಘಟ್ಟದಲ್ಲಿ ಧುಮುಕುವ ಜಲಪಾತದಡಿ ಹೋಗಲಸಾಧ್ಯ. ಆದರೆ ಇಲ್ಲಿ ನೀವು ಜಲಪಾತದಡಿ ನಿದ್ರಿಸಬಹುದು. ನಾನಲ್ಲಿ ಹೋಗಿ ನಿಂತು ಒಂದಿಷ್ಟು ಫೋಟೊ ಕ್ಲಿಕ್ಕಿಸಿದೆ. ನೀರಂತೂ ನೀಲ ಮಣಿ ಸ್ಪಟಿಕ. ದುರ್ಯೋಧನ ಅಡಗಲಾರದಷ್ಟು ಸುಸ್ಪಷ್ಟ. ಜಲಪಾತದ ಹೊಂಡದಲಿ ಕೆಲವರು ಲೈಫ್ ಜಾಕೆಟ್ ತೊಟ್ಟು ಈಜುತ್ತಿದ್ದರು. ಜಲಪಾತದಡಿ ತಲುಪಿದ ಕೆಲವರು ಪನ್ನೀರ ಅಭಿಷೇಕಕ್ಕೆ ತಲೆಕೊಟ್ಟು ಸುಖಿಸುತ್ತಿದ್ದರು. 
ಯಾವುದೇ ಮರಗಳಿಗೆ ಹಾನಿಯಾಗದಂತೆ ರೋಪ್‌ವೇ ಜಲಪಾತದೆದುರೇ ನಿರ್ಮಿಸಲಾಗಿದೆ. ಜಲಧಾರೆಯ ಮೇಲಿನ ಹರಿವಿನಲ್ಲಿ ಬೋಟಿಂಗ್ ವ್ಯವಸ್ಥೆ ಮಾಡಲಾಗಿದೆ. ಆಕಾಶದ ನೀಲಿ ಕುಡಿದ ನೀರಲಿ ತೇಲುತ್ತಾ ಬೋಟಿಂಗ್ ಮಾಡುವುದು ಒಂದು ರೋಚಕಾನುಭ! ಆಕಾಶದಲಿ ದೋಣಿ ಬಿಟ್ಟಂತಹ ಭ್ರಮೆ ಭರಿಸುವ ಅನುಭವ. ನೀರೋ ಆಕಾಶ ನೀಲಿ. ಕೆಲವೆಡೆ ಪಚ್ಚೆ ಹಸಿರು! 
ಕ್ರೆಮ ಸುರಿ ಜಲಧಾರೆ ಡಾರ್ವೆ ನದಿ ಸೇರಿ ತನ್ನ ಹರಿವನ್ನು ಕೊನೆಗೊಳಿಸುತ್ತದೆ. ಜೂನ್‌ನಿಂದ ಆಗಸ್ಟ್ ತನಕ ಅಬ್ಬರಿಸಿ ಸಪ್ಟೆಂಬರ್ ಬಳಿಕ ಮಂದಗಮನೆಯಾಗುತ್ತಾಳೆ. ಏಪ್ರಿಲ್ ಸುಮಾರಿಗೆ ತನ್ನೊಡಲ ಬರಿದು ಮಾಡಿಕೊಳ್ಳುತ್ತಾಳೆ. 
ನೀಲಕಂಠನ ನೆನಪು ಮಾಡಿಸುತ್ತಾ ಜಗದ ನೀಲಿ ನುಂಗಿದ ಜಲಪಾತ ನಗುತ್ತಲೆ ಬೀಳ್ಕೊಟ್ಟಿತು. ಚಂದ್ರಶೇಖರನ ಜಟೆಯ ಚಂದ್ರನಂತೆ ಅರ್ಧ ಚಂದ್ರನ ಕಾಮನಬಿಲ್ಲು ಮೂಡಿ ಮರೆಯಾಗಿ ಹೊಸ ನೋಟ ಹೊಸ ಹೊಳೆಹು ಒದಗಿಸಿತು. ಎಲ್ಲಾ ಕ್ಯಾಮರಾಗಳು ಕೂಡಲೇ ಸಚೇತನಗೊಂಡವು. ಕಾಮನಬಿಲ್ಲನು ಕಂಡ ಕಣ್ಣು ಜಲಪಾತದಿಂದ ಕಣ್ಣು ಕೀಳಲು ಮನಸ್ಸೊಪ್ಪದೇ ಹಾಗೆ ನೋಡುತ್ತಲೇ ಇತ್ತು. ಜಲಪಾತದ ಉಜಾಲ ನೀಲಿ ನೀರಲಿ ತೇಲಬೇಕೆಂಬ ಅದಮ್ಯ ಹಂಬಲವನು ಹತ್ತಿಕ್ಕಿ ಹೊರಟು ನಿಂತೆ!
ಜಲಪಾತದ ಹಿಂದೆ ಚಿಕ್ಕ ಡ್ಯಾಂ ಒಂದನ್ನು ನಿರ್ಮಿಸಿ ಸ್ಪಟಿಕ ಶುಭ್ರ ನೀರಿನಲ್ಲಿ ಬೋಟಿಂಗ್ ವ್ಯವಸ್ಥೆ ಮಾಡಿದ್ದಾರೆ. ನದಿಯಲಿ ತೇಲುವ ಮನಸಿದ್ದರೂ ಸಮಯವಿರಲಿಲ್ಲ. ಇಲ್ಲಿಂದ ನಾವು ಹೊರಟದ್ದೇ ಹೊಟ್ಟೆ ಪೂಜೆಗೆ. ಬೆಳಿಗ್ಗೆ ಸಹ ಸರಿಯಾಗಿ ಏನೂ ತಿಂದಿರಲಿಲ್ಲ.
ಜಟಿಂತ್ಯಾ ಬೆಟ್ಟಗಳ ವಿಶಿಷ್ಟ ರುಚಿಯ ಊಟವೊಂದಕ್ಕೆ ಸಾಕ್ಷಿಯಾಗಿ ಡಾವ್ಕಿ ನದಿ ನೋಡಲು ವೀಳ್ಯ ಜಗಿಯುತ್ತಾ ಹೊರಡಿಸಿದ ಖಾಸಿ ಗೆಳೆಯ. ಡಾವ್ಕಿ ನದಿಯದು ಇನ್ನೊಂದು ಕತೆ. ಪುರುಸೊತ್ತಾದಾಗ ಅರಹುವೆ.



ಬಾಂಗ್ಲಾ ಸನಿಹದ ಬಾಕೂರ್

ಬಾಂಗ್ಲಾಗೆ ತಾಕಿಕೊಂಡ ಬಾಕುರ್‌ ಹಳ್ಳಿ ಪ್ರವಾಸಿಗರಿಲ್ಲದೇ ಬಿಕೋ ಎನ್ನುತ್ತಿತ್ತು. ಬಾಂಗ್ಲಾ ಪ್ರವೇಶಿಸದೇ ಹಲವು ಬಾಂಗ್ಲಾ ನೋಟುಗಳನ್ನು ಸಂಪಾದಿಸಲು ಇಲ್ಲಿಗೆ ಬಂದಿದ್ದೆವು! ನನಗಂತೂ ಬಾಂಗ್ಲಾ ಗಡಿಯಾಚೆ ಹೋಗಬೇಕೆಂಬ ತವಕವಿತ್ತು. ಬಿಗಿ ಭದ್ರತೆಯಿಂದಾಗಿ ಅದು ಸಾಧ್ಯವಾಗಲಿಲ್ಲ. ಡಾವ್ಕಿ ನದಿ ತನ್ನ ಮೇಲಿರುವ ದೋಣಿಗಳನ್ನು ಪಚ್ಚೆ ಹಸಿರು ನೀರಲ್ಲಿ ಪ್ರತಿಫಲಿಸುತ್ತಿತ್ತು.





ಹಗಲು ರಾತ್ರಿ ಎನ್ನದೇ ನದಿಯೊಂದು ಯಾರೂ ಭಾರತದೊಳಗೆ ನುಸುಳದಂತೆ ಕಾವಲಿಗೆ ನಿಂತಿದೆ. ಬಾಂಗ್ಲಾದಿಂದ ಹಲವರು ಈ ನುಸುಳುದಾರಿಯಲ್ಲೇ ಒಳ ಬರುತ್ತಾರೆ ಎಂಬುದು ಗೆಳೆಯನ ಅಂಬೋಣ. ನದಿ ಬಲ ಕಳಕೊಂಡ ಕಡೆಗಳಲ್ಲಿ ನುಸುಳುಕೋರರು ಸದಾ ಒಳನುಗ್ಗುತ್ತಲೇ ಇರುತ್ತಾರೆ. ದೇಶದ ವಿವಿಧ ನಗರಗಳಲ್ಲಿ ಹರಡಿ ವೈರಸಿನಂತೆ ಹಬ್ಬುತ್ತಾರೆ ಎಂದು ಕರೆದುಕೊಂಡು ಬಂದ ಗೆಳೆಯ ಉಸುರಿದ. ಮನದಲ್ಲೇನೋ ಕ್ಲೇಶ, ಕಳವಳ, ಕಸಿವಿಸಿ, ಅಸ್ತವ್ಯಸ್ತತೆ. ಬಾಕುರ್ ಹಳ್ಳಿಯ ಬಾಜುವಲ್ಲೇ ಕಂಡ ಬಾಂಗ್ಲಾದ ಹಸಿ ಹಸಿ ನೆನಪುಗಳೊಂದಿಗೆ ಹಿಂದಿರುಗಿದೆವು.

Sunday, August 3, 2025

ಜಾರುಬಂಡಿ ಜಲಪಾತದ ದಾರಿಯಲ್ಲಿ…..


 ಮೌನ ಮಳೆ ಮತ್ತು ಪ್ರೀತಿಗೆ ಮಾತ್ರ ಚಿಗುರಿಸುವ ತಾಕತ್ತಿರುವುದು. ಅಂತಹ ಹೊಸತೊಂದು ನಡಿಗೆಯ ಮೌನದಲಿ ಚಿಗುರಿದ ಹೊಸ ಅಧ್ಯಾಯ.


ಯಾವುದೋ ಕಲಾಕಾರ ಕೆತ್ತಿಟ್ಟಂತಹ ಊರು. ಕಲಾ ನಿರ್ದೇಶಕನ ಕೈಚಳಕದಿ ಮೂಡಿ ಬಂದಂತಹ ಊರು. ಕೋಲ್‌ ಬಿಸಿಲಿಗೆ ಕುಣಿವ ಚಿಟ್ಟೆ ದಂಡು.  ನಿಮ್ಮ ಕಲ್ಪನೆಯೂ ಸಪ್ಪೆಯಾದೀತು ಸುಮ್ಮನಿರಿ. ಯಾರೋ ಚಿತ್ರಗಳಲ್ಲಿ ಬಿಡಿಸಿಟ್ಟ ಬಿದಿರ ಕಾಡು. ಹಾಡು ಹಾಡುವ ಹಳ್ಳೀ ‘ಕಾಂಗ್ ತಾಂಗ್’ ನಿಂದ ಅರ್ಧ ದಿನದ ಹಾದಿ. ಒಟ್ಟು ಜನಸಂಖ್ಯೆ ೭೫೦! ಹಾದಿ ತುಂಬಾ ಹೂವ ಹೊತ್ತ ಬೆಟ್ಟದಂಚು. ನೆನಪಿನ ನೀಲಿ ಕುಡಿದು ಕುಡಿ ಒಡೆದ ಆಕಾಶ. ಇಬ್ಬನಿ ತೋಯ್ದ ಒಂಟಿ ರಸ್ತೆ. ರಸ್ತೆಯುದ್ದಕ್ಕೂ ಫರ್ನ್‌ ಗಿಡಗಳ ಸ್ವಾಗತ. ನಿಲ್ಲದ ಬಿದಿರ ತೋಟದಲಿ ಅಲ್ಲಲ್ಲಿ ಕಿತ್ತಳೆ ಹಿಂಡಲು, ನಡುನಡುವೆ ಕಾಡು ಜನ. ವಿಹಂಗಮತೆ ಮತ್ತು ಪ್ರಪಾತಕ್ಕೆ ಮತ್ತೊಂದು ಹೆಸರು! ಇದು ಮೇಘಾಲಯದ ಕಾಂಗ್‌ತಾಂಗ್‌ ಹಳ್ಳಿಯಿಂದ ಜಾರುವ ಜಲಪಾತದ ದಾರಿಯಲ್ಲಿ ಕಂಡ ದೃಶ್ಯಾವಳಿ. ನಾಲಗೆ ಹೊರಳಲು ಕಷ್ಟ ಪಡುವ ಇಲ್ಲಿನ ಪ್ರತೀ ಊರಿನ ಹೆಸರು ನಾಲಗೆ ಸುರುಳಿ!

 

‘ಸೀಟಿʼ ಹೊಡೆಯುವ ಊರಿನಲ್ಲಿ!!


ಪುರದ ಹೊರಗೆ ಒರಗಿಕೊಂಡ ಸ್ವಾಗತ ಗೋಪುರ. ಹಾಡುವ ಹಳ್ಳಿ ಎಂಬ ವಿಶೇಷಣ (Whistling village of India). ಭಟ್ಕಳ ಬಳಿಯ ಹಾಡೋ ಹಳ್ಳಿ ಅಲ್ಲ. ಮೇಘಾಲಯದ ಸಣ್ಣೂರು! ಗುಡ್ಡದ ತುದಿಯೂರು. ವಿಶಿಷ್ಟ ಗುಡ್ಡಗಾಡು ಜನಾಂಗ. ಚಳಿ ಹೊತ್ತಿನಲ್ಲೂ ಬೆಳ್ಳಂಬೆಳಗ್ಗೆ ಪ್ರಾರಂಭವಾದ ಶಾಲೆ 12ರೊಳಗೇ ಮುಗಿದಿತ್ತು. ಅದರ ಸನಿಹವೇ ಪುಟಾಣಿ ಕಾಂಗ್ ತಾಂಗ್ ಬೋರ್ಡು. ಕ್ರಿಶ್ಚಿಯನ್ ಆಗಿ ಪರಿವರ್ತಿತರಾಗಿದ್ದಾರೆ. ಹೆಸರೂ ಅವರದೇ.


ವಸಾಹತುಶಾಹಿಗಳ ಆರ್ಭಟದಿಂದ ಮೂಲ ಸಂಸ್ಕೃತಿಯ ಪಳಿಯುಳಿಕೆಯಷ್ಟೇ ಉಳಿದಿದೆ! ಮೂಲತಃ ಇವರು ಯಾವುದೇ ಧರ್ಮಕ್ಕೆ ಸೇರಿದವರಲ್ಲ. ಕೇವಲ ಬೆಟ್ಟವಾಸಿ ಬುಡಕಟ್ಟು. ಮೂಲತಃ ಸೆಂಗ್‌ ಖಾಸಿ ಬುಡಕಟ್ಟು ಜನಾಂಗಕ್ಕೆ ಸೇರಿದ ಇವರನ್ನು ಬ್ರಿಟಿಷ್‌ರು ಕ್ರಿಶ್ಚಿಯನ್‌ರಾಗಿ ಪರಿವರ್ತಿಸಿದ್ದಾರೆ. ಇಲ್ಲಿಂದ ಇನ್ನೊಂದು ತುದಿಯಲ್ಲಿರುವ ವಾಕೆನ್‌ ಹಳ್ಳಿಗರು ಇನ್ನೂ ವರ್ಜಿನ್ ಗಳಾಗಿ ಉಳಿದಿದ್ದಾರೆ. ಯಾವುದೇ ಧರ್ಮಕ್ಕೆ ಸೇರದ ಇವರು ಸರಳರು. ಕಾಂಗ್‌ ತಾಂಗ್‌ ನಿಂದ ವಾಕೆನ್‌ ಹಳ್ಳಿಗೆ ನಮ್ಮ ಪಯಣವು ಮತ್ತೊಂದು ಸೋಜಿಗ. ಮತ್ತೆಂದಾದರೂ ಪುರುಸೊತ್ತು ಮಾಡಿಕೊಂಡು ವಾಕೆನ್‌ ಕತೆ ಹೇಳುವೆ. 

           ಕಾಂಗ್ ತಾಂಗನ ಹಳ್ಳಿ ಹೆಂಗಸು. 

ಸೀಟಿಯೊಂದು ಹೆಸರಾಗಿ:-

ಇಲ್ಲಿ ಮಗುವಿಗೊಂದು ಹೆಸರಿನಂತೆ ಹುಟ್ಟಿನಿಂದ ‘ಸೀಟಿಯೊಂದು’ ಮಗುವಿಗೆ ಇಡಲಾಗುತ್ತದೆ. ಸಿಳ್ಳೆಯಿಂದಲೇ ಮಗುವನ್ನು ಕರೆಯಲಾಗುತ್ತದೆ. ಹೆಂಗಳೆಯರನ್ನೂ ನೀವು ಸೀಟಿಯೂದಿ ಕರೆಯಬಹುದು! ಯಾರೂ ತಪ್ಪು ತಿಳಿಯಲ್ಲ! ಹಾಗಂತ ಸೀಟಿಯ ಹೊಡೆಯಬೇಡಿ.

ʼಜಿನ್ಗ್ರವಾಯಿ ಲಾವ್ಬಿʼ ಎಂಬ ವಿಶಿಷ್ಟ ಭಾಷಾ ಅಧ್ಯಯನಕ್ಕೆ ಅಮೇರಿಕಾ ಜರ್ಮನಿಯಿಂದೆಲ್ಲಾ ಸಂಶೋಧಕರ ತಂಡ ಇಲ್ಲಿಗೆ ಭೇಟಿ ನೀಡುತ್ತಾರೆ! ಈ ವಿಶಿಷ್ಟ ಪದ್ಧತಿಯಲ್ಲಿ ಮಗುವಿಗೆ ವಿಶಿಷ್ಟವಾದ ಸ್ವರವೊಂದನ್ನು ತಾಯಿಯಾದವಳು ನೀಡುವಳು. ಇದರಲ್ಲಿ ಎರಡು ವಿಧಗಳಿವೆ ಒಂದು ಚಿಕ್ಕ ಸ್ವರ ಇನ್ನೊಂದು ದೀರ್ಘ. ಜೀವ ಮಾನವಿಡಿ ಅದೇ ಸ್ವರದಿಂದ ಅವನನ್ನು/ಅವಳನ್ನು ಕರೆಯಲಾಗುತ್ತದೆ. ಊರಿನವರೆಲ್ಲಾ ಅದೇ ಸ್ವರದಿಂದ ಆತನನ್ನು/ಆಕೆಯನ್ನು ಗುರುತಿಸುತ್ತಾರೆ. ಬೆಟ್ಟದ ಮೇಲೆ ವಾಸಿಸ ಹೊರಟ ಇವರು ತಮ್ಮತನವನ್ನು ಉಳಿಸಿಕೊಳ್ಳಲು ಕಂಡು ಕೊಂಡ ವಿಚಿತ್ರ ಕ್ರಮ. ಬೆಟ್ಟದಲ್ಲಿನ ಕೆಟ್ಟ ಶಕ್ತಿಗಳು ಕಣ್ಣು ಹಾಕದಿರಲಿ ಎಂಬ ಮುಂದಾಲೋಚನೆಯ ಫಲವಾಗಿ ಈ ರೀತಿಯಾಗಿ ಮುಗುವಿಗೆ ಹೆಸರನ್ನಲ್ಲದೇ ʼಸೀಟಿʼಯಿಂದ ಕರೆಯುವ ಕ್ರಮ ರೂಢಿಗೆ ಬಂತು ಎನ್ನುತ್ತಾರೆ ನಮ್ಮ ಗೈಡ್ ಫಿಡ್ಲಿಂಗ್‌ ಸ್ಟಾರ್‌ನ ಅಮ್ಮ!



ಹುಟ್ಟಿಗೊಂದು ಹೆಸರಿಟ್ಟು : – ‌

ನಾವೆಲ್ಲಾ ಮಗು ಹುಟ್ಟಿದರೆ ಹೆಸರಿಡಲು ಒದ್ದಾಡಿದಂತೆ ಇಲ್ಲಿ ಆತನಿಗೆ ಸೀಟಿಯಂತಹ ಹೆಸರಿಡಲು ತಾಯಿ ಒದ್ದಾಡುವಳು. ಇಲ್ಲಿ ಹೆಸರೆಂಬುದೇ ಸೀಟಿ. ಹೊಸಕಂಪನ ಹೊಸ ಅಲೆ. ಅಮ್ಮನ ಮಡಿಲ ಶಾಖ. ನೆಲಮೂಲವಾದ ವಿಶಿಷ್ಟ ಸಂಸ್ಕೃತಿ! ಪ್ರತಿಯೊಬ್ಬನಿಗೂ ಒಂದು ವಿಶಿಷ್ಟ ಸೀಟಿ (ವಿಶಿಲ್) ಎಷ್ಟೇ ದೂರದಲ್ಲಿರಲಿ ಆತನಿಗದು ಕೇಳುವ ಕಂಪನನಾಂಕದಲ್ಲಿರುತ್ತದೆ. ಇದನ್ನೆಲ್ಲಾ ನಾವು ನಮ್ಮ ಗೈಡ್‌ ಫಿಡ್ಲಿಂಗ್‌ ಸ್ಟಾರ್‌ ಮನೆಯಲ್ಲಿ ಕುಳಿತು ಮಾತನಾಡುತ್ತಾ ತಿಳಿದುಕೊಂಡೆವು. ಇಲ್ಲಿನ ೨೩ ಹಳ್ಳಿಗಳಲ್ಲಿ ಈ ಕ್ರಮ ಅನುಸರಿಸುತ್ತಾರೆ ಎಂಬುದು ಸೋಜಿಗ. ಆದರೆ ಕಾಂಗ್ ತಾಂಗ್‌ ಮಾತ್ರ Whistling village of India ಎಂದು ಕರೆಯಿಸಿಕೊಂಡಿದೆ. ‌
ಜಾರ್‌ ಬಂಡೆ ಜಲಪಾತದ ಸಂಗದಲಿ ಸಿಕ್ಕ ಕೊಂಗ್‌ ತಾಂಗ್‌ ಎಂಬ ಹಾಡುವ ಹಳ್ಳಿ ಬೋನಸ್.
 ಇಲ್ಲಿಗ್ಯಾವ ಟಿಂಪೊ ವ್ಯವಸ್ಥೆಯಾಗಲೀ ಬಸ್ಸಿನ ವ್ಯವಸ್ಥೆಯಾಗಲಿ ಇಲ್ಲ. ಶಿಲ್ಲಾಂಗಿನಿಂದ ಕಾರು ಅಥವಾ ಬೈಕ್‌ ಬಾಡಿಗೆಗೆ ಪಡೆದು ಬರಬೇಕು. ನಾವೊಂದು ಕಾರು ಬಾಡಿಗೆಗೆ ಹಿಡಿದು ಹೊರಟೆವು.

ಜಲಧಾರೆಯೆಡೆಗೆ :-

ಸೀಟಿ ಹೊಡೆಯುವ ಕಾಂಗ್ ತಾಂಗ್ ಎಂಬ ವಿಚಿತ್ರ ಹಳ್ಳಿಯಿಂದ ಎರಡು ಪುರಿ ಹೊಡೆದು ಹೊರಟಾಗ ಗಂಟೆ 11. ನಿನ್ನೆ ರಾತ್ರಿಯೇ ಬಂದಿಳಿಯಬೇಕಿತ್ತು ಅನಿಸಿತೆನಗೆ.

ಮುಗಿಲಿಗೆ ಮುಟ್ಟೋ ಹುಮ್ಮಸ್ಸು ಹೊತ್ತ ನಾವು ಗೈಡ್‌ ಇಬ್ಬರ ಜೊತೆಗೆ ಪ್ರಪಾತಕ್ಕೆ ಇಳಿಬಿಟ್ಟಂತಹ ನಾಗವೇಣಿಯಂತಹ ದಾರಿಯಲ್ಲಿ ಹೊರಟೆವು. ಭಾಷೆ ಬಾರದ ಚಂದಕೆ ನೀಟಾಗಿದ್ದ ಗೈಡ್, ಅವನ ಜೊತೆಗೊಂದು ವಿಚಿತ್ರ ಕತ್ತಿ. ನೋಡಿದರೆ ಭಯ ಪಡಬೇಕು! ಇಂತಹ ಕತ್ತಿಗಳು ಇಲ್ಲಿ ಸರ್ವೇ ಸಾಮಾನ್ಯ!


ನಾಲಗೆ ರುಚಿಗೆ ಬಲಿಯಾದ ನವ ಯುವಕರು:-

ಸ್ವಲ್ಪ ದೂರ ನಡೆಯುತ್ತಲೇ ಎದುರಾದ ಡಬ್ಬಿ ಅಂಗಡಿ. ಗಿರಾಕಿಗಾಗಿ ಕಾಯೋ ನಿರ್ಲಿಪ್ತ ಕಣ್ಣಿನ ವ್ಯಾಪಾರಿ ಬೀಡಿ ಹಚ್ಚಿದ್ದ. ನಾವೇನೋ ಆತ್ಮಹತ್ಯೆಗಾಗಿ ಹೊರಟವರಂತೆ ಪ್ರಪಾತಕ್ಕೆ ಇಳಿಬಿದ್ದೆವು. ಅಯ್ಯೋ ಎನ್ನುವ ನಿರುದ್ವಿಗ್ನ ನೋಟ ಬೀರಿ ನಮ್ಮನ್ನು ಕಳುಹಿಸಿಕೊಟ್ಟ. ಆತನ ದೃಷ್ಟಿಯೂ ಹಾಗೆ ಇತ್ತು! ಲಿಮ್ಕಾ, ಕೊಕೋ ಕೊಲಾ, ಲೇಸ್‌, ಆತನಂಗಡಿಯಲಿ ಹಲ್ಲು ಕಿಸಿಯುತ್ತಾ ನೇತು ಬಿದ್ದಿದ್ದವು. ಜಾಗತೀಕರಣದ ಜಾರುಬಂಡಿಯಲಿ ಎಲ್ಲರೂ ಜಾರಲು ತೊಡಗಿದ್ದಾರೆ!


ಜಾಗತೀಕರಣ, ವ್ಯಾಪಾರಿಕರಣ, ಪ್ರೀತಿಯನ್ನು ನೆಲಮಟ್ಟದ ಸಂಸ್ಕೃತಿಯನ್ನು ದೋಚುತ್ತಲೇ ಇದೆ. ಪಿಜ್ಜಾ, ಬರ್ಗರ್‌ ರುಚಿಗೆ ನಮ್ಮೂರಿನ ಆರೋಗ್ಯಕರ ತಿನಿಸುಗಳು ಹೇಳ ಹೆಸರಿಲ್ಲದೇ ಜಾಗ ಕೀಳುತ್ತಿವೆ. ಕಿತ್ತಳೆ ರಸದ ರುಚಿಗೆ ಪಕ್ಕಾದ ನಾಲಿಗೆಯಲಿ ಘಂಟಾ ಥಂಸಪ್ ರುಚಿ ಮೊಗ್ಗ ಅರಳಿಸಲು ಹೊರಟಿದ್ದಾರೆ. ಜಾಗತೀಕರಣವೇ ಜಗತ್ತನ್ನು ಆಳುತ್ತಿವೆ. ಎಲ್ಲರೂ ಇಲ್ಲಿ ಖರೀದಿದಾರರೇ. ಕಳೆದ ವರ್ಷ ಪಾರ್ವತಿ ಕಣಿವೆಯ ಕೊನೆಯ ಹಳ್ಳಿ ತೋಷ್‌ಗೆ ಹೋದಾಗ ಅಲ್ಲಿಯೂ ಜರ್ಮನ್ ಬೇಕರಿಗಳು ಜಾಗ ಮಾಡಿಕೊಂಡಿರುವುದು ವಿಪರ್ಯಾಸ! ನಮ್ಮ ಅದ್ಭುತ ರುಚಿಯ ತಿಂಡಿಗಳನ್ನು ನಾವು ಶೋಕೇಸ್‌ ಮಾಡದೇ ಇದ್ದಿದ್ದು ನಮ್ಮ ಸೋಮಾರಿತನವೋ, ನಮ್ಮದೆಲ್ಲಾ ಕೀಳೆಂಬ ನಮ್ಮದೇ ಮೌಡ್ಯವೋ? ಅದನ್ನು ಬಿತ್ತಿದ ಹೊಸ ಶಿಕ್ಷಣ ನೀತಿಯೋ?! 



ದಾರಿ ತಪ್ಪಲಿ ದೇವರೇ!

ಅಪ್ರತಿಮ ಮೇಘಾಲಯದ ಸುಂಟರಗಾಳಿಯಂತಹ ಸೌಂದರ್ಯಕ್ಕೆ ಮರುಳಾಗಿ ಇಳಿಯೊ ಹಾದಿಯಲ್ಲಿ ದಾರಿತಪ್ಪಿ ಬಲಕೆ ತಿರುಗೋ ಬದಲು ನೇರವಾಗಿ ಹೊರಟ ಗೆಳೆಯ ಹಾದಿ ತಪ್ಪಿದ! ನಿಜವಾಗಿ ದಾರಿ ತಪ್ಪಿದ್ದು ಅವನೋ ನಾವೋ ಗೊತ್ತಿಲ್ಲ. ದಾರಿ ತಪ್ಪಿದ ಮಗ. ಇಬ್ಬರು ಗೈಡ್‌ಗಳಲ್ಲಿ  ಭಾಷೆ ಬಾರದ ವಿಚಿತ್ರ ಕತ್ತಿ ಹಿಡಿದ ಗೈಡ್ ಒಬ್ಬನೇ ನನ್ನ ಜೊತೆಗೆ ಉಳಿದ. ಎದೆಯಲ್ಲಿ ಕುಟ್ಟವಲಕ್ಕಿ. ಸುತ್ತಲೂ ನಿಬಿಡಾರಣ್ಯ. ಜೀರುಂಡೆ ಗಾಯನ. ಹಾದಿ ತಪ್ಪಲು ನೂರಾರು ದಾರಿ. ಇವನೋ ಅನನುಭವಿ. ಆದರೆ ಇವನಷ್ಟು ಪಾಪದ ಅಮಾಯಕ ಮತ್ತೊಬ್ಬನಿಲ್ಲ ಎಂಬುದು ಸ್ವಲ್ಪ ಹೊತ್ತಿಗೆ ತಿಳಿಯಿತು. ಬಯಲಿನ ಜನರಂತಲ್ಲ ಬೆಟ್ಟದವರು! ಕಾನನದ ಸ್ವರ ಸಂಮೋಹನಕ್ಕೆ ಒಳಗಾಗಿ ಜಲಧಾರೆಯ ನೆತ್ತಿಗೆ ನಡೆದು ತಲುಪಿದೆವು. ಅಂತೂ ಜಲಧಾರೆಯ ನೆತ್ತಿ ತಲುಪಿಸಿದ!
ಏನ್‌ ಅಚ್ಚರಿ ನಮಗಿಂತಲೂ ಮುಂದೆ ಗೆಳೆಯನ ಸವಾರಿ ಬಂದು ತಲುಪಿತ್ತು. ಬಂದವನೇ ದಾರಿ ತಪ್ಪಿದ್ದೇ ಒಳ್ಳೇದಾತು ಅಂತಿದ್ದ! ದಾರಿ ತಪ್ಪಲಿ ದೇವರೇ ಅಂತ ಬೇಡಿಕೊಂಡಿರಬೇಕು ಆತ! ದಾರಿ ತಪ್ಪಿದ್ದರಿಂದ ಮೇಘಾಲಯದ ಅತಿ ಎತ್ತರದ ಬೇರಿನ ಸೇತುವೆ, ಇನ್ನೊಂದೆರಡು ಜಲಧಾರೆಯ ಸಖ್ಯ ಬೆಳೆಸಿ ಬಂದಿದ್ದ. ಕಷ್ಟವಾದರೂ ಅದನ್ನೆಲ್ಲಾ ಅಚಾನಕ್‌ ಆಗಿ ನೋಡುವ ಅವಕಾಶವೊಂದು ಅವನ ಪಾಲಿಗೆ ಬಂತು. ಇಂತಹ ದಾರಿಗಳಲ್ಲಿ ಸದಾ ದಾರಿ ತಪ್ಪಲಿ. ಹೊಸ ಅಚ್ಚರಿಗಳು ತೆರೆದುಕೊಳ್ಳಲಿ! ಸದಾ ದಾರಿ ತಪ್ಪಿಸು ದೇವರೇ.
ದಾರಿ ತಪ್ಪಿದ್ದು ಒಳಿತೇ ಆಯಿತು ಎಂದೆನ್ನುತ್ತಾ ಹಿಂದಿರುಗಿದ ಮೆಲ್ಲಗೆ ಅರುಹಿದ ಗೆಳೆಯ! ಬಿದ್ದರೂ ಮೀಸೆ ಮಣ್ಣಾಗಲಿಲ್ಲ! ಮೇಘಾಲಯದ ಅತಿ ಎತ್ತರದ ಬೇರಿನ ಸೇತುವೆ ಇರುವುದೇ ಇಲ್ಲಿ. ಮತ್ತೆ ಮತ್ತೆ ಇಂತಹ ದಾರಿಯಲ್ಲಿ ದಾರಿ ತಪ್ಪಿಸು ದೇವರೇ ಎಂದು ಬೇಡಿಕೊಳ್ಳುವೆ ಎಂದ! ರುಚಿಕಟ್ಟಾದ ನಾಲ್ಕು ಫೋಟೋ ತೆರೆದಿಟ್ಟ! ಒಂದಕ್ಕಿಂತ ಒಂದು ಚೆಂದದ ಹೊಟ್ಟೆಕಿಚ್ಚಾಗುವಂತಹ ಚಿತ್ರ!! ದಾರಿ ತಪ್ಪಿಯೂ ನಮಗಿಂತ ಮೊದಲೇ ಜಲಪಾತದ ನೆತ್ತಿ ಹತ್ತಿ ಕುಣಿಯುತ್ತಲಿದ್ದ! 




ತಣ್ಣಗಿನ ನೀರಲ್ಲಿ ಜಾರುತ್ತಲೇ ಕೊಳ ಒಂದಕ್ಕೆ ಜಾರಲು ವಿದೇಶಿಗನೊಬ್ಬ ಸಶಬ್ದವಾಗಿ ಜಾರಿ ನಮಗೆ ಒಂದೆರಡು ಟ್ರಯಲ್ ತೋರಿದ ಮೇಲೆ ಸ್ವಲ್ಪ ಧೈರ್ಯ ಮಾಡಿ ಹೊರಟಿತು ಗೆಳೆಯನ ಸವಾರಿ. ಹೊರಟಿದ್ದೇನೋ ಸರಿ ನಡುವೆಯೇ ಜಾರದೆ ಸ್ಟ್ರಕ್ ಆಯಿತು. ಕೊನೆಗೂ ಕುಂಡೆ ಹರಿದುಕೊಳ್ಳದೇ ಗೆಳೆಯನ ಸವಾರಿ ಜಾರುತ್ತಾ ಕೆಳಗೆ ಬಂದಿತು! ನೀರ ಹೊಂಡಕ್ಕೆ ʼಗುಳುಮುಳಕʼದಂತೆ ಮುಳುಗು ಹಾಕಿದ. ನನ್ನ ಪುಣ್ಯ ಜಾರಿ ಪ್ರಪಾತಕ್ಕೆ ಹೋಗಲಿಲ್ಲ. ನಾನೂ ಸ್ವಲ್ಪ ಹೊತ್ತು ಸ್ಪಟಿಕ ಶುಭ್ರ ನೀರಲ್ಲಿ ಮಿಂದೆದ್ದು ಪುಣಕಗೊಂಡೆ. ಜಾರುವಿಕೆ ಎಲ್ಲಿಯಾದರೂ ಆಯತಪ್ಪಿದರೆ ನೇರ ಪ್ರಪಾತ ದರ್ಶನ! ಒಂದು ಹಲ್ಲೂ ಸಿಗದ ಮಹಾ ಬ್ರಹ್ಮಗುಂಡಿ. ಅವಾಂತರವಾಗುವುದು ಬೇಡವೆಂದು ನಾನಾ ಸಾಹಸಕ್ಕೆ ಇಳಿಯಲೇ ಇಲ್ಲ. ದಟ್ಟ ಕಾನನದ ನಡುವೆ ಅವಿತಿರುವ ಪ್ರಕೃತಿ ಮಡಿಲ ಈ ತಾಣ ರಮ್ಯಾದ್ಬುತ!

ಇಳಿ ಸಂಜೆಗೆ ಮೇಘಾಲಯದ ಹಾಡು ಹಳ್ಳಿಯಲ್ಲಿ ಅಂದು ತಂಗಿದೆವು. ಅಲ್ಲಿನ ಜೀರುಂಡೆ ಗಾಯನ, ನೊಣದ ಬೋನು ಗಿಡಗಳೊಂದಿಗೆ ಲೀನವಾಗಿ ಅಲ್ಲಿನ ಕಾಟೇಜ್‌ ಒಂದರಲ್ಲಿ ಉಳಿದುಕೊಂಡೆವು.




  ನೂರಾರು ಆರ್ಕಿಡ್‌ಗಳು ನಮಗೊಂದು ಅಚ್ಚರಿ! ಎಲ್ಲೆಲ್ಲೂ ಆರ್ಕಿಡ್‌ಗಳು. ಚಿತ್ರ ವಿಚಿತ್ರ ಬಣ್ಣಗಳು. ಕೆಲವನ್ನು ಕತ್ತರಿಸಿ ತಂದು ನಾವು ಉಳಿದುಕೊಂಡಿದ್ದ ಕಾಟೇಜ್‌ನಲ್ಲಿ ಬೆಳೆಸಿದ್ದರು. ಒಂದಿಷ್ಟು ತರೇವಾರಿ ಜೇಡಗಳು, ನೂರಾರು ಚಿಟ್ಟೆಗಳ ಮೆರವಣಿಗೆ ನಮಗೆ ಮುದ ನೀಡುತ್ತಲಿತ್ತು! ನೈಸರ್ಗಿಕ ಪರಿಸರದಲ್ಲಿ ನೊಣದ ಬೋನು ಎಂಬ ವಿಸ್ಮಯಕಾರಿ ಸಸ್ಯವನ್ನು ಬೆಳೆಸಿದ್ದ ನಮ್ಮ ಕಾಟೇಜ್ ಮಾಲೀಕ! ಎರಡನೆಯ ಬಾರಿಗೆ ಇಷ್ಟು ಸಂಖ್ಯೆಯ ನೊಣದ ಬೋನು ನೋಡಿದ ಖುಷಿ. ಅತ್ಯಂತ ಶುಭ್ರವಾಗಿಟ್ಟುಕೊಂಡ ಆತನ ಕಾಟೇಜ್ ಬಹಳ ಇಷ್ಟವಾದವು. 
ಇಲ್ಲಿಂದ ನಮ್ಮ ಸವಾರಿ ಹೊರಟಿದ್ದು ವಾಕೆನ್‌ ಎಂಬ ಮತ್ತೊಂದು ವಿಶಿಷ್ಟ ಹಳ್ಳಿಗೆ. ಆ ಕತೆಯನ್ನು ಮತ್ತೊಮ್ಮೆ ಅರಹುವೆ.

ವಾರೆ ನೋಟ

ತಿಲಮಿಟ್ಟಿಯ ತೀರದಲಿ

  ಭಾವುಟ ಹೊತ್ತ ಯಾವುದೋ ದೋಣಿ ಕಾರವಾರದ ದಡವ ತಡುವಲು ದೂರದಲಿ ಬರುತಲಿತ್ತು. ದಂಪತಿಗಳಿಬ್ಬರ ಜೊತೆ  ಇನ್ನಿಬ್ಬರು ಸೇರಿ ಮತ್ತೊಂದು ದೋಣಿಯ ದಡಕ್ಕೆ ಎಳೆಯುತ್ತಿದ್ದರು.  ...