
ಪ್ರಕೃತಿಯೊಂದಿಗೆ ಲೀನವಾಗಿ, ಕಾಡಿನ ಸಂತನೆನಿಸಿದ ತೇಜಸ್ವಿ ನಿಮಗಿದೊ ನುಡಿ ನಮನ. ಪ್ರಕೃತಿಯ ಸೂಕ್ಷ್ಮವನ್ನು ಅದರ ಚಿದಂಬರ ರಹಸ್ಯವನ್ನು ಬೆರಗುಗಣ್ಣಿನಿಂದ ನೋಡಿ, ಮಗುವಿನಂತೆ ಪುಳಕಗೊಳ್ಳುವ, ಇನ್ನೊಬ್ಬರಿಗೆ ಅದನು ತಿಳಿಸುವ ತವಕದ ಸಣ್ಣ ಬಾಲಕ. ಮಿಲೆನಿಯಂ ಸರಣಿ ಇದಕ್ಕೊಂದು ನಿದರ್ಶನ. ತಾನು ಬೆಳೆದು ಉಳಿದವರಿಗೆ ಪ್ರಕೃತಿ ಪ್ರೀತಿಯ ಕಲಿಸಿದ ಗುರು. ಇವರ ಸಾಹಿತ್ಯ ಓದಿದವರಿಗಂತು ಇತರೆ ಕೃತಿಗಳು ಪೇಲವವಿನಿಸಿಕೊಳ್ಳುದರಲ್ಲಿ ಆಶ್ಚರ್ಯವಿಲ್ಲ. ಇಲ್ಲಿ ಎಲ್ಲರೂ ಮುಖ್ಯರೆನ್ನುತ್ತಾ, ಯಾವುದೂ ಮುಖ್ಯವಲ್ಲ ಎಂಬ ಕುವೆಂಪು ದೋರಣೆಯಂತೆ ಅನೇಕ ಪ್ರಯೋಗಶೀಲ ಕೃತಿ ರಚಿಸಿದರು. ಹಳೆಯ ಪದ್ಧತಿಗಳಿಗೆ ಅಂಟಿಕೊಳ್ಳದೇ, ನವ್ಯದ ಕಿಲುಬನ್ನು ತೆಗೆದುಹಾಕಿ, ಹೊಸ ದಿಗಂತದೆಡೆಗೆ ಸಾಗಿದ ಸಂತ. ವಿದೇಶಿ ಸಂಸ್ಕ್ರತಿಯ ಮೋಹಕ್ಕೆ ಒಳಗಾಗದೆ, ಸ್ನಿಗ್ಧ ಸ್ವಚ್ಚಂದ ಝರಿಯಂತೆ ಹರಿದ ಸಾಹಿತ್ಯ ಪ್ರತಿಭೆ.
ವೈಜ್ಜಾನಿಕ ಕಾದಂಬರಿ ಕರ್ವಾರ್ಲೊ:- ಕರ್ವಾರ್ಲೊ, ವೈಜ್ಜಾನಿಕ ಕಾದಂಬರಿಯ ನೈಜ, ನೂತನ ನಿರೂಪಣೆ. ವಿಜ್ಞಾನವನ್ನೂ ಇಷ್ಟು ಸರಳವಾಗಿ, ರೋಚಕವಾಗಿ ಹೇಳಬಹುದೆಂಬುದೆ ಕನ್ನಡ ಸಾಹಿತ್ಯದಲ್ಲಿ ಹೊಸ ಆಯಾಮ. ರೋಸಿ ಹೋದ ಹಳೆ ಪದ್ಧತಿಗಳನ್ನೆಲ್ಲ` ಮುರಿದು ಹೊಸ ಪರಂಪರೆಗೆ ದಿಗ್ರ್ಧಶನ ಮಾಡಿದುದು ಸ್ಮರಣೀಯ. ಓದಿದ್ದನ್ನೇ ಓದಿ ಬೇಸರಿಸಿಕೊಂಡ ಕನ್ನಡಿಗರಿಗೊಂದು ಅಮೃತ ಸಿಂಚನಗೈದಿತು. ಸರಿಸೃಪ ಒಂದು ಜೀವ ವಿಸ್ಮಯದ ಕೊಂಡಿಯಾಗುಳಿದು ಅದರ ಹುಡುಕಾಟವೊಂದನ್ನು ರೋಚಕವಾಗಿ ಹೇಳಿದುದು ಅದ್ಭುತ, ಅನನ್ಯ. ಅತ್ಯಂತ ತಳ ಮಟ್ಟದವರಲ್ಲಿಯೂ ಅತ್ಯಂತ ಉತ್ತಮ ಜ್ಞಾನವಿದೆ, ಮಂದಣ್ಣ ಪಾತ್ರದ ಮೂಲಕ ತೋರಿಸಿದರು, ಆ ಮೂಲಕ ಇಲ್ಲಿ ಎಲ್ಲರೂ ಮುಖ್ಯ ಎಂದು ತೋರಿಸಿದರು. ಕುವೆಂಪುರವರ ಪ್ರಭಾವಕ್ಕೊಳಗಾದುದು ತೋರುತ್ತದೆ. ಅವರೇ ಹೇಳಿಕೊಂಡಂತೆ ಕುವೆಂಪುರವರ ಕಲಾಸೃಷ್ಟಿ, ಕಾರಂತರ ಪ್ರಯೋಗಶೀಲತೆ ಅವರ ಮೇಲೆ ತೀವ್ರ ಪ್ರಭಾವ ಬೀರಿದೆ. ಅವರು ಯಾವುದೇ ಪಂಥ, ತತ್ವಕ್ಕೆ ಒಳಪಡದೆ ನಮ್ಮ ನಮ್ಮೆಲ್ಲರಂತಿರುವ ಪಾತ್ರದಾರಿಗಳನ್ನು ಸೃಷ್ಟಿಸಿದುದು ಸಹ ಒಂದು ಹೊಸ ಪ್ರಯೋಗವೇ.ಜುಗಾರಿ ಕ್ರಾಸ್:- ಯಾವ ಪಾತ್ರವನ್ನೂ ವೈಭವೀಕರಿಸದೇ, ಕಾಡು ಮೇಡು ಹೊಳೆ ಮುಂತಾದವನ್ನೂ ಬಳಸಿಕೊಂಡು, ಜಾಗತೀಕರಣದಿಂದೂಟಾದ ಸಾಂಸ್ಕ್ರತಿಕ ಪಲ್ಲಟ, ಉದ್ಯೋಗ ಪಲ್ಲಟಗಳನ್ನು ಜುಗಾರಿ ಕ್ರಾಸ್ನಲ್ಲಿ ಹೇಳುತ್ತಾರೆ. ಹೇಗೆ ವಿದೇಶದಿಂದ ಕಾಲಿಟ್ಟ ಪ್ಲಾಸ್ಟಿಕ್ ಎಂಬುದು ಒಂದು ಜನಾಂಗದ ಉದ್ಯೋಗದ ಪಲ್ಲಟದಲ್ಲಿ ತೀವ್ರ ಪ್ರಭಾವ ಬೀರಿತು. ಮೇದರ ಕಾಡು ಹೇಗೆ ಅವಸಾನಕ್ಕೊಳಗಾಯಿತು.ಪರಿಸರದ ನಿಗೂಢತೆ ಹಾಗೂ ಮಾನವರ ನಿಗೂಢತೆ ಇಲ್ಲಿ ಮೇಳೈಸಿದಂತಿದೆ. ಒಂದು ದಿನದಲ್ಲಿ ನಡೆಯುವ ಘಟನೆಯಾದರಿಸಿ ಬರೆದ ಕಾದಂಬರಿ ಜುಗಾರಿ ಕ್ರಾಸ್ ಕಾದಂಬರಿ ಲೋಕದಲ್ಲೊಂದು ಮೈಲುಗಲ್ಲು. ಥ್ರಿಲ್ಲರೊಂದನ್ನು ಹೀಗೂ ಬರೆಯಬಹುದೆಂದು, ಆಗಿನ ಕಾಲದ ನವ್ಯ ಲೇಖಕರಿಗೆ ತೋರಿಸಿಕೊಟ್ಟರು. ಈ ಕಾದಂಬರಿ ಅವರ ಕಾದಂಬರಿಗಳಲ್ಲೇ ಅತ್ಯಂತ ಯಶಸ್ವಿ. ತೀರ ಸಾದಾರಣ ಪಾತ್ರವಾದ ಸುರೇಶನು ಮುಖ್ಯ ಭೂಮಿಕೆಗೆ ಬಂದು, ತೀವ್ರ ಕುತೂಹಲ ಕೆರಳಿಸುತ್ತಾರೆ. ಅಲ್ಲದೇ ಅವರ ವಿಶ್ಲೇಷಣೆಗಳು ಓದುಗನಲ್ಲಿ ಆಸಕ್ತಿ ಮೂಡಿಸುತ್ತದೆ.ಕೊನೆ ಮುನ್ನುಡಿ:- ಇದೊಂದು ಬರೆದಷ್ಟೂ ಮುಗಿಯದ ಅಕ್ಷರ ಜಾತ್ರೆ. ಹಾಗಾಗಿ ಇಲ್ಲಿಗೆ ಮುಗಿಸುತ್ತೇನೆ. ಮತ್ತೊಮ್ಮೆ ಅಕ್ಷರ ಬುತ್ತಿಯೊಂದಿಗೆ ಬರುವೆ. ನಮಸ್ಕಾರ.ಶ್ರೀಧರ. ಎಸ್. ಸಿದ್ಧಾಪುರ
No comments:
Post a Comment