Sunday, May 12, 2019

ಕನಸುಗಳು unlimited.

       ನಮ್ಮ ಶಾಲೆಗೆ ಪರಿಸರ ಮಿತ್ರ ಪ್ರಶಸ್ತಿಯ ಗರಿ ಮೂಡಿಸಿಕೊಂಡ ಸಂರ್ದಭ. ಮನದಲಿ ಮತ್ತೊಂದಿಷ್ಟು ಕನಸುಗಳು ಮೊಳೆತವು. 
ನಾಲ್ಕನೆಯ ಬರಿ ಪರಿಸರ ಮಿತ್ರ ಶಾಲೆ ಪ್ರಶಸ್ತಿ ಪಡೆದ ಕ್ಷಣ 






ಶಾಲೆಯಲ್ಲಿ ನಡೆದ ಕೆಲವು ಕಾರ್ಯಕ್ರಮಗಳು.... 

ಕೆಲವನ್ನು ಮಾತ್ರ ಇಲ್ಲಿ ಹಾಕಲಾಗಿದೆ. 


ಇಕೋ ಕ್ಲಬ್ ಉದ್ಘಾಟನೆ- ಗಿಡ ನೆಡುವ ಮೂಲಕ..  
2010-11 ರ ಸಮಯ ನಮ್ಮ ಶಾಲೆ ಶಿಕ್ಷಕರೆಲ್ಲಾ ಶಾಲೆಯ ಸುತ್ತಲೂ ಔಷಧೀಯ ಗಿಡಗಳಿರಬೇಕು, ಶಾಲಾ ಎದುರಿಗೆ ಸುಂದರವಾದದೊಂದು ವನವಿರಬೇಕು, ಪುಟ್ಟ ಕೈತೋಟ, ಗಿಡಗಳಿಗೆಲ್ಲಾ ಹನಿ ನೀರಾವರಿ ಮಾಡಬೇಕೆಂದು ನಿರ್ಧರಿಸಿದೆವು.
ರಾಮನ್ ವಿಜ್ಞಾನ ಕಲಿಕಾ ಪ್ರಯೋಗಾಲಯ 

ಆ ವರ್ಷ ಪೋಷಕರ ಮತ್ತು ಊರವರ ಸಹಕಾರದಿಂದ ಶಾಲಾ ಸುತ್ತಲೂ ಒಂದಿಪ್ಪತ್ತು ಗಿಡ ನೆಟ್ಟೆವು. ಕೆಲವೇ ಕೆಲವು ಬದುಕುಳಿಯಿತು. ಮುಂದಿನ ವರ್ಷವೂ ಒಂದತ್ತು ಗಿಡ ನೆಟ್ಟೆವು. ಆ ವರ್ಷ ಮುಖ್ಯ ಶಿಕ್ಷಕರಾಗಿದ್ದ ರಘುರಾಮ್ ಕೊಠಾರಿಯವರು ನಾಲ್ಕು ತೆಂಗಿನ ಸಸಿ ಮತ್ತು ಮೇ ಪ್ಲವರ್ ಗಿಡಗಳನ್ನು ತಂದು ನೆಟ್ಟರು.
ವಿವಿಧ ಗಿಡ ನೆಡುವ ಕಾರ್ಯಕ್ರಮ.. 
ಆ ವರ್ಷವೇ ಅವುಗಳಿಗೆ ಹನಿ ನೀರಾವರಿ ಮಾಡಿಸಬೇಕಿತ್ತು, ಜೊತೆಗೆ ಮೇ ತಿಂಗಳಿನಲ್ಲಿ ಅವನ್ನು ಬದುಕಿಸಿಕೊಳ್ಳುವ ಸವಾಲಿತ್ತು. ನಮ್ಮ ನೆರವಿಗೆ ಬಂದವರು ದಿ. ನಾರಾಯಣ ಶೆಟ್ಟಿ. ಶಾಲಾ ಮಕ್ಕಳಿಗೆ ಎಲ್. ಐ. ಸಿ ಮಾಡಿಸಿ ವಿಮಾ ಶಾಲೆ ಎಂದು ಘೋಷಣೆ ಮಾಡಿದರು. ಎಲ್. ಐ. ಸಿ ಯಿಂದ ಬಂದ ಸ್ವಲ್ಪ ಹಣ ಜೊತೆಗೆ ನಾರಾಯಣ ಶೆಟ್ಟರು ಸ್ವಲ್ಪ ಸೇರಿಸಿ ಧನ ಸಹಾಯ ಮಾಡಿದರು. ಮೊತ್ತ ರೂಪಾಯಿ 12,000 ದಾಟಿತು. ಆ ಹಣದಲ್ಲೇ ಹನಿ ನೀರಾವರಿ ವ್ಯವಸ್ಥೆ ತಲೆ ಎತ್ತಿತ್ತು. ಮೇ ತಿಂಗಳಿನಲ್ಲಿ ನೀರು ಹಾಕಲು ಶಾಲೆಯ ಸನಿಹದ ನಾಲ್ಕನೇ ತರಗತಿಯ ಮಕ್ಕಳು ಒಪ್ಪಿಕೊಂಡರು. ಮುಂದಿನ ಎರಡು ವರ್ಷ ಏಳನೆ ತರಗತಿಯ ವಿನುತಾ ಮೇ ತಿಂಗಳಿನಲ್ಲಿ ನೀರುಣಿಸಿದಳು. ಈಗ ಶಾಲೆಯ ಸುತ್ತ ಮುತ್ತಲೂ ಔಷಧೀ ಗಿಡಗಳು.
ಮಕ್ಕಳ ವಾರದ ಪ್ರಯೋಗ 

ಶಾಲೆಯಲ್ಲಿ ಬೆಳೆದ ಬಾಳೆಹಣ್ಣು ಮಕ್ಕಳಿಂದ ಮಕ್ಕಳಿಗೆ ..... 

ಮಕ್ಕಳ ಪ್ರವಾಸ 

     ಶಾಲೆಯಲ್ಲಿರುವ ಅನೇಕ ವಿಜ್ಞಾನ ಮಾದರಿಗಳನ್ನು, ರಾಸಾಯನಿಕಗಳು, ಗಾಜಿನ ಉಪಕರಣಗಳು, ಜೀವಿಗಳ ಮಾದರಿಗಳು, ಮಾನವ ದೇಹದ ಅಂಗ ರಚನೆಗಳನ್ನು ಮಕ್ಕಳಿಗೆ ತೋರಿಸಲು ಅವನ್ನೆಲ್ಲಾ ಜೋಡಿಸಿಕೊಂಡು ವ್ಯವಸ್ಥಿತವಾಗಿ ಇರಿಸಲು ಮಕ್ಕಳ ಪ್ರಯೋಗಾಲದ ಜರೂರಿತ್ತು. ರೋಟರೀ ಕ್ಲಬ್ ಸಿದ್ದಾಪುರ ಹೊಸಂಗಡಿ ಇವರ ಸಹಾಯದಿಂದ ಪ್ರಯೋಗಾಲದ ಮಾಡಿಗೊಂದು ರೂಫಿಂಗ್ ವ್ಯವಸ್ಥೆ ಮಾಡಿಕೊಟ್ಟರು. ಈಗ ನಮ್ಮ ಪ್ರಯೋಗಾಲಯ ನವ ವಧುವಿನಂತೆ ಸಿಂಗಾರಗೊಂಡಿದೆ. ಸ್ಥಳೀಯರಾದ ವಿಶ್ವನಾಥ್ ಭಟ್ ಇವರು ಹೊಸದೊಂದು ಕವಾಟು ತೆಗೆಸಿಕೊಟ್ಟರು. ರಘುಶೆಟ್ಟಿ ನಡುಮಕ್ಕಿಯವರು ಹತ್ತು ಪ್ಲಾಸ್ಟಿಕ್ ಕುಚರ್ಿಯನ್ನು ಕೊಡುಗೆಯಾಗಿ ನೀಡಿದರು. ಡಾ.ಗುರುದತ್ತ್ ಕೊಡ್ಗಿ, ಅನಂತ ಕೊಡ್ಗಿ ಮತ್ತು ತಿಮ್ಮಪ್ಪ ಹೆಬ್ಬಾರ್ ಮನೆಯವರು ಕೈತೋಟಕ್ಕೆ ಸುಂದರ ಬೇಲಿ ಮಾಡಿಕೊಟ್ಟಿದ್ದಾರೆ.
ಸ್ವಚ್ಛತಾ ಅಭಿಯಾನ 


ಅರಳಿ ನಿಂತ ಗಿಡ ಬಳ್ಳಿಗಳು.. 

ಕೋಳಿ ಸಾಕಾಣಿಕಾ ತಂತ್ರಗಳು 

ತೋಟದಲ್ಲಿ ಕೃಷಿ ತರಬೇತಿ 

ಪರಿಸರ ಮಿತ್ರ ತಂಡ ಶಾಲೆಗೆ ಭೇಟಿ ನೀಡಿದ ಸಮಯ 


ಕಾರ್ಖಾನೆ ಭೇಟಿ ... 

ಪರಿಕಲ್ಪನೆಯ ಆಧಾರಿತ ವಿಜ್ಞಾನ ಮೇಳ ... 

ಕನಸುಗಳು 

ಶಾಲೆಗೊಂದು ಹೊಸ ಕಟ್ಟಡವಾಗಬೇಕು (ಹೆಂಚಿನ ಮಾಡು). ಜೊತೆಗೆ ಇಂಗು ಗುಂಡಿ, ಮಳೆ ನೀರಿನ ಕೊಯ್ಲು, ಗೊಬ್ಬರದ ಗುಂಡಿ,  ಇಂಗ್ಲೀಷ್  ಕಲಿಕೋಪಕಾರಣಗಳು,  ಔಷಧಿ ಮೂಲಿಕೆಗಳ ವನವಾಗಬೇಕು. ಊರವರು, ಪೋಷಕರು, ಹಿರಿಯ ವಿದ್ಯಾಥರ್ಿಗಳ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಕಾರದ ನಿರೀಕ್ಷೆಯಲ್ಲಿದ್ದೇವೆ.

ಶ್ರೀಧರ್ ಎಸ್. ಸಿದ್ದಾಪುರ.

Friday, April 12, 2019

'ವೆಂಬನಾಡ್ 'ಎಂಬ ಒಳನಾಡಿನ ಸಮುದ್ರ...

Vembanad kerala

ಈ ಸಮುದ್ರದ ಹೆಸರು ಎಲ್ಲೂ ಕೇಳಲಿಲ್ವಲ್ಲಾ? ಎಂದು ಹುಬ್ಬೇರಿಸಬೇಡಿ. ಇದು ಸಮುದ್ರ ಅಲ್ಲವೇ ಅಲ್ಲ! ಸಮುದ್ರದಂತಹ ಸರೋವರ. ಅರ್ಧ ಸಿಹಿ ಅರ್ಧ ಉಪ್ಪು ನೀರಿನಿಂದಾದ ಭಾರತದ ಅತ್ಯಂತ ಉದ್ದವಾದ ಮಹಾ ಸರೋವರ. ನೀಲ ನೀರ ತಾಣ. ವೆಲ್ಲಾರಪದಮ್, ವಿಲ್ಲಿಂಗ್ಡಮ್ ಎಂದೂ ಇದಕ್ಕೆ ಹೆಸರಿದೆ. ದೇವರ ಸ್ವಂತ ನಾಡಾದ ಕೇರಳದ ಕರಾವಳಿಯ ಅಳಪಿ ಯಾನೆ ಅಲಪುಝಾ ನಗರದಲ್ಲಿದೆ. ಒಂದೆರಡಲ್ಲ ದಿನವೂ ಇಲ್ಲಿ ನೂರಾರು ಬೋಟುಗಳ ಸಂತೆ! ಕಣ್ಣು ಹಾಯಿಸಿದಲ್ಲೆಲ್ಲಾ ನೀರು, ತೇಲು ಮನೆಗಳು, ತೆಂಗಿನ ಮರಗಳು, ಅವುಗಳ ಮೇಲೆ ಬೆಚ್ಚಗೆ ಕುಳಿತ ಪಕ್ಷಿ ಗಡಣ.
ವೆಂಬನಾಡ್ ಸರೋವರದಲ್ಲೊಂದು ಸಂಜೆ.

ಸಾಹಸಿ ಮಹಿಳಾ ಚಾಲಕಿ.


ಮೊಹಮ್ಮಾ ದ್ವೀಪದಲ್ಲಿ ಜೊತೆಯಾದ ನನ್ನ ಸಂಗಾತಿ...

ವಿಸ್ಮಯಗೊಳಿಸುವ ವಿಸ್ತಾರ:-

ಪಂಬಾ, ಪೆರಿಯಾರ್, ಮೂವಾಟೂಪೂಝಾ, ಮಿನಾಚಿ, ಮನಿಮಾಲ, ಅಚಿನಕೊವಿಲ್ ಮುಂತಾದ ದಶ ನದಿಗಳ ಸಂಗಮದಿಂದುಂಟಾದ ಮಹಾ ಸಮುದ್ರ. ಸರಿ ಸುಮಾರು 96.5 ಕಿ. ಮೀ ಉದ್ದ. 14 ಕಿ. ಮೀ ಗರಿಷ್ಠ ಅಗಲ. ಮೂರು ಜಿಲ್ಲೆಗಳಲ್ಲಿ ಇದರ ವ್ಯಾಪ್ತಿ ಹರಡಿದೆಯೆಂದರೆ ವಿಸ್ತಾರವನ್ನು ನೀವು ಕಲ್ಪಿಸಿಕೊಳ್ಳಿ! ಭಾರತದ ಅತಿ ಉದ್ದದ ಸರೋವರವೆಂಬ ಖ್ಯಾತಿಯೂ ಇದಕ್ಕಿದೆ. ಸರೋವರವ ಬಿಗಿದಪ್ಪಿದ ದ್ವೀಪಗಳೂ ಅನೇಕ. ಅವುಗಳಲ್ಲಿ ಪಾದಿರಾಮಲೈ ಕೂಡಾ ಒಂದು. ಕುಮಾರಕೊಂ ಪಕ್ಷಿಧಾಮವೂ ಪಕ್ಕದಲ್ಲೇ ಇದೆ. 16 ಮಿಲಿಯನ್ ಜನ ಈ ಸರೋವರದಂತಹ ಸಮುದ್ರವನ್ನು ತಮ್ಮ ದಿನ ನಿತ್ಯದ ಅನ್ನ, ಬಟ್ಟೆಗಾಗಿ ಅವಲಂಬಿಸಿದ್ದಾರೆಂದರೆ ಅಚ್ಚರಿಯಾಗುತ್ತದೆ! ಒಟ್ಟು 290 ಚದರ ಕಿಲೋ ಮೀಟರ್ ಹರಡಿಕೊಂಡ ಇದರ ವಿಸ್ತಾರ. ಕೇರಳ ರಾಜ್ಯದ 30 ಶೇಕಡ ನೀರು ಈ ಸರೋವರದಲ್ಲೇ ಇದೆ ಎಂದರೆ ನೀವು ನಂಬಲೇಬೇಕು.

ಮುಗಿಲಿನೊಂದಿಗೆ  ಸರೋವರದ  ಅಂದ



ನಡುವಿರುವ ತಗ್ಗಾದ ದ್ವೀಪದಂತಹ ಜಾಗಗಳಲ್ಲಿ ಜನರು ಮನೆಗಳ ನಿಮರ್ಿಸಿಕೊಂಡಿದ್ದಾರೆ ಎಂದರೆ ಅಚ್ಚರಿ ಎನಿಸುತ್ತದೆ. ಅನೇಕ ನಡುಗುಡ್ಡೆಗಳನ್ನು ಬಳಸಿ ಜನ ಗದ್ದೆಗಳ ನಿಮರ್ಿಸಿ ಬೇಸಾಯದಲ್ಲಿ ತೊಡಗಿದ್ದಾರೆ! ನಡುವಿನ ನಡುಗುಡ್ಡೆಯೊಂದರಲ್ಲಿ ಚಚರ್್ ಒಂದಿದೆ. ಸರೋವರವನ್ನು ನೋಡಲು ಬಂದು ಗದ್ದೆ ಅಂಚಿನ ಕಂಬಗಳಲ್ಲಿ ಕುಳಿತ ವಿದೇಶಿ ಸಮುದ್ರ ಕಾಗೆಗಳ ಹಿಂಡು. ನೀರನ್ನೇ ಹೊದ್ದು ಹಾಸಿಕೊಂಡ ಕೇರಳಿಗರ ದಿನ ನಿತ್ಯದ ಹಾಡು ಪಾಡು ಇಲ್ಲಿ ಅನಾವರಣ. ಹುಲ್ಲು ಕೊಯ್ಯುವವರು, ದೋಣಿಗಳ ಮೂಲಕ ಹೊರೆ ಹುಲ್ಲು ಹೊತ್ತೊಯ್ಯುವವರು, ನದಿ ಗುಂಟ ಬಟ್ಟೆ ಒಗೆಯುವವರು, ಪಾತ್ರೆ ತೊಳೆಯುವ ದೃಶ್ಯ ಇಲ್ಲಿ ಸಾಮಾನ್ಯ. ನಮ್ಮ ನಾಡಿನ ವೆನಿಸ್ ಎಂದು ಹೇಳಲಡ್ಡಿ ಇಲ್ಲ! ಇಡೀ ನಗರವನ್ನದು ಸುತ್ತಿ ಬರೋ ಇರಾದೆ ಇದ್ದರೆ ದೋಣಿ ಬಾಡಿಗೆಗೆ ಪಡೆದು ಸುತ್ತಿ ಬಂದರಾಯಿತು. ಬಾಡಿಗೆಯಂತೂ ಕೊಂಚ ಹೆಚ್ಚೇ. ದಿನವೊಂದಕ್ಕೆ ಏನಿಲ್ಲವೆಂದರೂ ಒಬ್ಬರಿಗೆ 1500 ರೂ ಕೇಳುವರು.






ತಂತಿಯ  ಮೆಲೆ ವಿದೇಶಿ  ವಿೀಕ್ಷಕರು   

ಇತಿಹಾಸ-
ಇಲ್ಲಿನ ಗದ್ದೆಗಳು ಸರೋವರಕ್ಕಿಂತ ತಗ್ಗಾಗಿವೆ. ಹೀಗೆ ರೂಪುಗೊಂಡಿರುವುದು ಹೇಗೆಂಬುವುದೇ ಒಂದು ವಿಸ್ಮಯ! ಇದರ ಇತಿಹಾಸ ಕೆದಕುತ್ತಾ ಹೋದರೆ 14 ನೇ ಶತಮಾನಕ್ಕೆ ಕರೆದೊಯ್ಯುವುದು.




ಗೆಳೆಯ     ಗ ೌತಮ್

ಪ್ರಸಿದ್ಧ ನೆಹರು ಟ್ರೋಫಿ ಬೋಟ್ ರೇಸ್ ನಡೆಯುವುದು ಇಲ್ಲೇ. ಒಂದೆರಡು ವಿಶಿಷ್ಟ 'ಹಾವು ದೋಣಿಗಳನ್ನು' ಕಣ್ತುಂಬಿಕೊಂಡು, ನಡು ಮಧ್ಯಾಹ್ನದ ಹೊತ್ತಿನಲ್ಲಿ ನಮ್ಮ ಬೋಟ್ ದೂರ ತೀರದಲ್ಲೆಲ್ಲೋ ಲಂಗರು ಹಾಕಿತು. ಬೋಟಿನಲ್ಲೇ ತಿಂಡಿ ತೀರ್ಥವೂ ಸರಬರಾಜಾಯಿತು. ಹೊಟ್ಟೆ ಉಬ್ಬರಿಸುವಷ್ಟು ತಿಂದು ಸಂಜೆ ಅಲಪಿಗೆ ವಾಪಾಸಾದೆವು.


ಇಲ್ಲಿ ಮಾತ್ರವೇ ಸಿಗುವ ವಿಶಿಷ್ಟ ಶ್ರಿಂಪ್ಗಳು, ಬಲು ದೊಡ್ಡ ಏಡಿಗಳು, ವಿಶಿಷ್ಟ ಜಾತಿಯ ಚಿಪ್ಪುಗಳು ಈ ಸರೋವರದಲ್ಲಿ ಬೆಳೆಯುತ್ತಿರುವ ಕಳೆಗಿಡಗಳಿಂದ ಕಂಟಕವನ್ನು ಎದುರಿಸುತ್ತಿವೆ. ಜೊತೆಗೆ ಪ್ರವಾಸಿಗರೆಸೆದ ಪ್ರತಿ ಕಸವೂ ಇಲ್ಲಿನ ವಿಶಿಷ್ಟ ಜೀವಿಗಳ ನಿದ್ದೆ ಕೆಡಿಸಿದೆ. ಇನ್ನು ಕೆಲವೇ ವರ್ಷಗಳಲ್ಲಿ ಗಂಗೆಯಂತೆ ಈ ಸರೋವರವೂ ಬತ್ತಿ ಹೋಗುವುದೆಂಬ ಎಚ್ಚರಿಕೆಯನ್ನೂ ವಿಜ್ಜಾನಿಗಳು ನೀಡಿದ್ದಾರೆ. ಜೊತೆಗೆ ಇದರ ವಿಸ್ತಾರ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ ಎಂದು ಸಮೀಕ್ಷೆಯಿಂದ ತಿಳಿದು ಬಂದಿದೆ. ಮುಂದಿನ ಜನಾಂಗಕ್ಕೆ ಇದನ್ನು ಉಳಿಸೋಣವಲ್ಲವೇ?

ವಿಶಿಷ್ಟ ಸಮುದ್ರ  ಜ ೀವಿ
ಇಲ್ಲಿ ಹೇಳದೇ ಇದ್ದ ಜನ ಜೀವನದ ಕತೆಯನ್ನು ಇನ್ನೊಮ್ಮೆ ಹೇಳುವೆ ಪುರುಸೊತ್ತು ಮಾಡಿಕೊಂಡು ಕೇಳುವಿರಲ್ಲವೇ?



Wednesday, March 6, 2019

Ballalarayana Durga Fort ಬೆರಗಿನ ಬಲ್ಲಾಳರಾಯನ ದುರ್ಗಾ-

      ಏಕದಂ ರಜೆಗಳ ಸಾಲು ಸಾಲು ಬಂದು ನಿಂತದ್ದೆ ಪ್ರವಾಸದ ಚುಂಗು ಹಿಡಿದುಬಿಟ್ಟಿತು. ಗೆಳೆಯರಿಗೆಲ್ಲಾ ಚುಂಗು ಹಿಡಿಸಿ ಹೊರಟು ನಿಂತೆ. 
      ಬೆಳಕು ಕಣ್ಣು ಬಿಡುವ ಮುನ್ನ ಚುಮು ಚುಮು ಚಳಿಗೆ ಕಾಫಿಗೆ ಮುತ್ತಿಕ್ಕಿ, ನಮ್ಮ ಬೈಕ್ನ ಕಿವಿ ಹಿಂಡುತ್ತಾ, ಕಾಫಿ ಕಾಡಿನ ತಿರುವುಗಳಲ್ಲಿ ಹಿಂದಿನ ದಿನ ಬಿದ್ದ ಮಳೆಯ ಘಮಲನ್ನು ಆಸ್ವಾದಿಸುತ್ತಾ, ಕುದುರೆ ಮುಖ ಶ್ರೇಣಿಗಳ ಹಿಂದಿಕ್ಕಿ ಬಲಕ್ಕೆ ಹೊರಳಿ, ಕಡಿದಾದ ಗುಡ್ಡದ ಕಡೆ ಹೊರಳಿ, ತ್ರಿಪಾಠಿ ಎಸ್ಟೇಟ್ನ ಮ್ಯಾನೇಜರ್ ಬಂಗೇರಾ ಅವರನ್ನು ಎದುರುಗೊಂಡು ರಾಣಿ ಝರಿ ಶಿಖರದ ಬಳಿ ನಿಶ್ಚಲವಾಯಿತು ನಮ್ಮ ಬೈಕು. ಬಂಗೇರಾ ಅಂಕಲ್ ಸಕತ್ ಆಗಿ ಇತಿಹಾಸದ ಆ ತುದಿಗೂ ಶಿಖರದ ಮತ್ತೊಂದು ತುದಿಗೂ ನಮ್ಮನ್ನು ಒಯ್ದರು. ಸದ್ಯಕ್ಕೆ ಸೆಲ್ಪಿ ತೆಗೆಯುತ್ತಾ ತಲ್ಲೀನರಾದೆವು.


ರಾಣಿ ಪೀಕ್.

ಹತ್ತು ಹೆಜ್ಜೆ ಮುಂದಿಟ್ಟರೆ ಕಡಿದಾದ ಪ್ರಪಾತ. ಮುಂದಕ್ಕೆ ದಕ್ಷಿಣ ಕನ್ನಡ. ನಾವು ಮತ್ತು ಬೈಕ್ ಇರುವುದು ಚಿಕ್ಕಮಗಳೂರಿನಲ್ಲಿ! ದೂರದಲ್ಲೆಲ್ಲೋ ಜಮಾಲಾಬಾದ್ ಕೋಟೆ ತಣ್ಣಗೆ ಮಂಜಿನೊಂದಿಗೆ ಮುದ್ದಾಡುತ್ತಿತ್ತು. ನಮ್ಮ ಎಡಕ್ಕೆ ಧರ್ಮಸ್ಥಳಕ್ಕೆ ಕಾಲ್ನಡಿಗೆಯಲ್ಲಿ ಸೇರುವ 8 ಕಿ. ಮೀ. ನ ಕಾಲು ಹಾದಿ. ಟಿಪ್ಪು ಸೈನಿಕರು ಅಟ್ಟಿಸಿಕೊಂಡು ಬಂದಾಗ ಬಲ್ಲಾಳರಾಯನ ಪತ್ನಿ ಹಾರಿಕೊಂಡಳೆನ್ನಳಾದ ರಾಣಿ ಝರಿ ಬಲಕ್ಕೆ ಬಾಯ್ಕಳೆದು ಬಾಯಾರಿದಂತೆ ನಿಂತಿತ್ತು. ನಡೆದಾಡಲೇ ಕಷ್ಟ ಪಡುವ ಹಾದಿಯಲ್ಲಿ ಅವಳು ಹೇಗೆ ಓಡಿದಳೋ ಇವರು ಹೇಗೆ ಅಟ್ಟಿಸಿಕೊಂಡು ಬಂದರೋ ಫುಲ್ ಕನಪ್ಯೂಷ್ನ್ನೊ ಕನ್ಫ್ಯೂಷ್ನ್! 
       ಹೆಜ್ಜೆ ಹೊರಳಿದರೆ ಸ್ವರ್ಗಕ್ಕೆ ಗೇಟ್ ಪಾಸ್. ಎಡ ದಿಕ್ಕಿನಲ್ಲಿ ಹೊರಟರೆ ಮತ್ತೊಂದು ಸ್ವರ್ಗ ಶಿಖರ. ಮಂಜಿನ ಮಸ್ತಾದ ರಗ್ ಹೊದ್ದುಕೊಂಡು ಹೊಗೆ ಬಿಡುತಲಿದ್ದ ಚೋಟಾ ಉಸ್ತಾದ್. ಅದರ ನಡು ಸೀಳಿ ನಡೆದರೆ ಬಲ್ಲಾಳರಾಯನ ಕೋಟೆ ದಾರಿ ಬಿಡಿಸಿಕೊಳ್ಳುತ್ತಾ ಹೋಗುತ್ತದೆ.

A SUN SET IN KUDUREMUKA RANGE 

DEVARA MANE

ಮೊದಲ ಅರ್ಧ ಗಂಟೆ ಕಾಡಿನ ಏರು ದಾರಿ. ಜಿಗಿವ ಜಿಗಣೆಗಳ ಗೊಲ್ಲೆ. ಯಾರಿಗೆ ಕಡಿಮೆ ಕಚ್ಚುತ್ತೆ ಎಂಬ ಪೈಪೋಟಿಯಲ್ಲೇ ಕಾಡು ದಾಟಿ ಕೊಂಡೆವು. ಜಾರುವ ಅಂಟು ಮಣ್ಣಿನ ಏರು ದಾರಿಯಲಿ ಹೆಜ್ಜೆ ಮೇಲೆ ಹೆಜ್ಜೆ, ಭರತನಾಟ್ಯ. ಎಡಕ್ಕೆ ಮಹಾ ಪ್ರಪಾತ ಬಿಟ್ಟು ಬಂದ ಬೆಟ್ಟದ ಹಳ್ಳಿ. ವೆಲ್ವೆಟ್ ಹಸಿರು ರವಿಕೆ ತೊಟ್ಟ ಸುಂದರಿಯರ ಸಾಲು ಸಾಲೇ ನಮ್ಮ ಮುಂದಿದ್ದರು!  ಯಾರನ್ನು ನೋಡುವುದೆಂಬ ವಿಚಿತ್ರ ತಳಮಳ. ಯಾರನ್ನು ಬೇಕಾದರೂ ನೋಡಿಕೊ, ಚಿವುಟಲು ಹೆಂಡತಿಯಿಲ್ಲ ಪಕ್ಕದಲ್ಲಿ ಎಂದಿತು ಮರ್ಕಟ ಮನ! ಮೋಡಗಳು ತಮ್ಮ ಬಾಹುಗಳಲ್ಲಿ ಶಿಖರಗಳ ಬಳಸಿ ಮುದ್ದಿಸಿ ಒಮ್ಮೆಲೆ ಅವುಗಳ ಬಿಟ್ಟು ಬಿಡುತ್ತಿದ್ದವು. ಚಕ್ಕನೆ ಕಣ್ಣೆದುರು ಬಂದು ಆಶ್ಚರ್ಯ ಮೂಡಿಸಿ ಮತ್ತೆ ಮಂಜಿನೊಂದಿಗೆ ಸರಸಕ್ಕಿಳಿಯುತ್ತಿದ್ದವು. ಕ್ಯಾಮರವೂ ಎರಡು ಮೂರು ಬಾರಿ ವಾವ್ ಎಂದು ಕ್ಲಿಕ್ಕಿಸುತ್ತೇ ಇತ್ತು. ಮೋಡಗಳೆದ್ದು ನಾವು ಹೋದಲ್ಲೇ ನಮ್ಮ ಬೆನ್ನಟ್ಟಿ ಬರುತ್ತಿದ್ದವು. ರಸಿಕನಿಗೆ ರಸಗವಳ. ನೆತ್ತಿಗೇರಿದ ಮೇಲೂ ನಾಲ್ಕು ಹನಿ ಚೆಲ್ಲಿ ಹೆದರಿಸಿದವು. ನೆತ್ತಿ ಮೇಲಿನ ದುರ್ಗದ ಕುರುಹುಗಳನ್ನು ಒಂದೊಂದಾಗಿ ನೋಡುತ್ತಾ ಪುಳಕಗೊಂಡೆವು. ಕಲ್ಲಿಗೆ ಮಾತು ಬಂದಿದ್ದರೆ ಚೆನ್ನಿತ್ತ. ಸ್ವಲ್ಪ ಹರಟ ಬಹುದಿತ್ತ. 

Add caption




THE RUINED BALLALA RAYA FORT FROM FAR

ಚಳಿಯ ರಗ್ ಹೊದ್ದು ಮಲಗಿದ್ದ ಬಲ್ಲಳರಾಯನ ಕೋಟೆ ನಮ್ಮೆದುರು ಇತಿಹಾಸದ ಮಗ್ಗಲನ್ನು ಬಿಡಿಸಿಡುತ್ತಾ ಸಾಗುವುದು. ನೆತ್ತಿಯ ಮೂರು ನಾಲ್ಕು ಕಡೆ ಕಾವಲು ಬುರುಜಿದೆ. ದಕ್ಷಿಣ ಕನ್ನಡದ ಬಳಿ ತೀರಾ ಕಡಿದಾದ ಪ್ರಪಾತವಿದೆ. ಚಾಮರ್ಾಡಿಯ 'ಏರಿಕಲ್ಲು' ಅಥವಾ 'ಹುಲಿ ದನ' ಬೆಟ್ಟ, ಕುದುರೆ ಮುಖ ಶಿಖರ ಇಲ್ಲಿಂದ ನಿಚ್ಚಳ. ಬೆಟ್ಟದ ತುದಿಯಲ್ಲಿ ಗೋಡೆ ನಿಮರ್ಿಸಿದ್ದಾರೆ. ನೆತ್ತಿಯನ್ನು ಸಪಾಟುಗೊಳಿಸಿ ಮನೆಯಂತಹ ರಚನೆಗಳನ್ನು ನಿಮರ್ಿಸಿದ್ದಾರೆ!

        ಅದರೊಳಗೆ ಪ್ಲಾಸ್ಟಿಕ್ ಬಾಟಲಿಗಳು! ಜೀವ ಹೊತ್ತು ಬಂದವರಿಗೆ ಬಾಟಲಿಗಳು ಭಾರವಾಗಿ ಕೋಟೆಯ ಹೊಂಡದಲ್ಲಿ ಬಿಸುಟು ಹೋಗಿದ್ದಾರೆ! ನಮ್ಮ ಜನರ ಪರಿಸರ ಪ್ರಜ್ಞೆ ಇನ್ನೂ ಪಾತಾಳದಲ್ಲಿದ್ದರೆ ಬೆಟ್ಟವೇರುವ ಕನಸು ಉತ್ತುಂಗದಲ್ಲಿದೆ.
ON TOP OF THE FORT

ಕಪ್ಪು ಬಿಳಿ ಬಣ್ಣದಲ್ಲಿ     ಕೊಟೆಯ  ಗೊಡೆ.
         
                     ಬೆಟ್ಟದ ಕಲ್ಲುಗಳನ್ನೇ ಕೋಟೆಗೆ ಬಳಸಿ, ಬೃಹತ್ ಕಡೆಯುವ ಕಲ್ಲು, ಬೀಸುವ ಕಲ್ಲು ತಯಾರಿಸಿದ್ದಾರೆ. ಬಲ್ಲಾಳರಾಯನ ಕಾಲದ ಸಾಕ್ಷವಾಗಿ ಇನ್ನೂ ನಿಂತಿವೆ. ಶಿವನ ಬಾಗಿಲೆಂಬ ಶಿಲೆಯ ಮಹಾದ್ವಾರ ನೆತ್ತಿಯ ಸ್ವಲ್ಪ ಕೆಳಗಿನ ಕಾಡುಗಳಲ್ಲಿ ಅನಾಥವಾಗಿ ಬಿದ್ದಿದೆ. ಬಾಗಿಲು ಮಾಡುವಷ್ಟು ದೊಡ್ಡ ಬಂಡೆ ಸುತ್ತಲ್ಲೆಲ್ಲೂ ಇಲ್ಲ! ಕೆಳಗಿನ ಕಣಿವೆಯಿಂದ ಕ್ರೇನು, ಟ್ರಕ್ಕುಗಳಿಲ್ಲದ ಕಾಲದಲ್ಲಿ ಹೊತ್ತುಕೊಂಡೇ ಬರಬೇಕು. ಅಂತಹ ಬೃಹತ್ ಬಾಗಿಲು. ನಮ್ಮ ಹಿರಿಯರ ಪರಿಶ್ರಮಕ್ಕೊಂದು ಸೆಲ್ಯೂಟ್ನ್ನು ಮನದಲ್ಲೇ ಹೊಡೆೆದೆ. ಹೆಮ್ಮೆ ಮೂಡಿಸಿತು.

ON THE WAY TO BALLALARAYANA DURGA FORT

ಒಂದು ಬುರುಜಿನಿಂದ ಮತ್ತೊಂದಕ್ಕೆ ದಾಟಿಕೊಳ್ಳಲು ಕನಿಷ್ಟ ಅರ್ಧ ಗಂಟೆ ಬೇಕು. ಅಷ್ಟೂ ಉದ್ದಕ್ಕೂ ಕಲ್ಲಿನ ಪಾಗಾರ ಕಟ್ಟಿದ್ದಾರೆ. ಬಂಡಾಜೆ ಅಬ್ಬಿ, ಸುಂಕಸಾಲೆ ಅಬ್ಬಿ ಇಲ್ಲಿಂದ ಬಹಳ ಸನಿಹದಲ್ಲಿದೆ. 360 ಕೋನದಲ್ಲೂ ಎತ್ತ ನೋಡಿದರು ಬೆಟ್ಟಗಳ ರಾಶಿ.


ಹಿಂದಿನ ದಿನ ಮಳೆಗೆ ಕಪ್ಪ ಕೊಟ್ಟಿದ್ದರಿಂದ ಇಂದು ಬೇಗ ಹೊರಟೆವು. ಬಿಟ್ಟು ಬಂದು ತಿಂಗಳಾದರೂ ಮನದ ತುಂಬಾ ಬಲ್ಲಾಳರಾಯನ ಕೋಟೆಯ ನೆನಪುಗಳ ತೋರಣ. ಮನಸ್ಸು ಮತ್ತೊಮ್ಮೆ ಲಗ್ಗೆ ಇಡಲು ಕಾತುರವಾಗಿದೆ! ನೀವೂ ಬರುವಿರಾ?
ಶ್ರೀಧರ್. ಎಸ್. ಸಿದ್ದಾಪುರ.

Saturday, March 2, 2019

ಚಳಿಗೆ ಮುದುರಿದ ನೀಲಕಂಠ-


ಇದರ ಚಿತ್ರ ತೆಗೆಯುವುದು ಪ್ರತಿಯೊಬ್ಬ ಛಾಯಾಚಿತ್ರಗಾರನ ಕನಸು. ಬಣ್ಣದಲ್ಲಿ ಸರಿಸಾಟಿ ಇಲ್ಲದ ಚೂಟಿ. ಬೇಟೆಯಲ್ಲಿ ನಿಷ್ಣಾತ. ಅತಿ ಸಮೀಪದಿಂದ ಚಿತ್ರ ತೆಗೆಯುವುದು ಬಲು ಕಷ್ಟ! (ನನ್ನ ಅನುಭವ) ಅನೇಕ ವರ್ಷ ನನ್ನ ಕ್ಯಾಮರವಾದ ತಪ್ಪಿಸಿಕೊಳ್ಳುತ್ತಲೇ ಇತ್ತು. ಈ ಬಾರಿ ಮಾತ್ರ ನನ್ನ ಕ್ಯಾಮರ ಕಣ್ಣಿಗೆ ಸಿಕ್ಕಿ ಬಿತ್ತು. ಇಂತಹ ಚಿತ್ರಕ್ಕಾಗಿ ದಶಕಗಳ ಕಾಲ ಕಾದಿದ್ದೆ. ಸಖತ್ ಚಳಿ ಇದ್ದ ದಿನ. ತನ್ನ ದೇಹದ ಗರಿಗಳನ್ನು ಕೆದರಿಕೊಂಡು ರೆಂಬೆಯ ತುದಿಯಲ್ಲಿ ಬಿಸಿಲಿಗೆ  ತನ್ನ ದೇಹವನ್ನು ಒಡ್ಡಿಕೊಂಡು ಕುಳಿತಿತ್ತು. 'ಅರೆ ಇವನಾ' ಎಂಬ ನೋಟವನ್ನು ನನ್ನೆಡೆಗೆ ಎಸೆದು ಗಂಟೆಗಳ ಕಾಲ ಬೆಚ್ಚಗೆ ಕುಳಿತಿತ್ತು. ನನಗೇ ಬೇಸರ ಬಂದು ಎದ್ದು ಬಂದೆ. ನಿಜ ಅದೇ ನೀಲಕಂಠ (Coracias benghalensis). ಕನರ್ಾಟಕದ ರಾಜ್ಯ ಪಕ್ಷಿ.
ಸುಮಾರು 26-27 ಸೆಂಟಿ ಮೀಟರ್ ಉದ್ದವಿರುವ, 50 ಶೇ ಬೀಟಲ್ 25 ಶೇ ಗ್ರಾಸ್ ಹೋಪರ್ ಮತ್ತು ಮಿಡತೆಗಳನ್ನೇ ಹೆಚ್ಚಾಗಿ ತಿನ್ನುತ್ತೆ. ಮಾರ್ಚನಿಂದ ಜೂನ್ವರೆಗೆ ಮೊಟ್ಟೆ ಇಟ್ಟು ಮರಿ ಮಾಡುತ್ತೆ. ದಸರಾ ಹಬ್ಬಕ್ಕೂ ಇದಕ್ಕೂ ವಿಸಿಷ್ಟ ಸಂಬಂಧವಿದೆಯಂತೆ. ಈ ಹಬ್ಬದಲ್ಲಿ ಈ ಹಕ್ಕಿಯನ್ನು ಹಿಡಿದು ಮತ್ತೆ ಬಿಡಲಾಗುತ್ತದೆ. ಕನರ್ಾಟಕ, ತೆಲಂಗಾಣ ಮತ್ತು ಒಡಿಸ್ಸಾ ರಾಜ್ಯದ ರಾಜ್ಯ ಪಕ್ಷಿಯೂ ಹೌದು.




ರೈತನ ಮಿತ್ರ-
ಗದ್ದೆಗಳಲ್ಲಿ ಹಾರುವ ಹಾತೆಗಾಗಿ ಕಾದು ಕುಳಿತುಕೊಳ್ಳುವ ಇನ್ನೊಂದು ಹಕ್ಕಿಯ ಪರಿಚಯ ಮಾಡಿಕೊಳ್ಳೊಣ ಬನ್ನಿ. ನಿಮಗೆಲ್ಲಾ ಇದರ ಗುರುತು ಇದ್ದೇ ಇದೆ. ಗಿಣಿಗಾರಲು ಎಂದು ಕರೆಸಿಕೊಳ್ಳುವ ಇದನ್ನು ಆಂಗ್ಲ ಭಾಷೆಯಲ್ಲಿ  bee eater ಎನ್ನುವರು. ಇದೊಂದು ಅತ್ಯಂತ ಚುರುಕು ಕಣ್ಣಿನ ಹಕ್ಕಿ. ಹಾರುವ ಹಾತೆ, ಜೇನು ಹುಳಗಳು, ಮಿಡತೆ, ಚಿಟ್ಟೆಗಳೇ ಇದರ ಮುಖ್ಯ ಆಹಾರ. ಗದ್ದೆಗೆ ಬರುವ ಅನೇಕ ಮಿಡತೆಗಳು ಇದರ ಹೊಟ್ಟೆ ಸೇರುತ್ತದೆ. ತಿನ್ನುವುದರಲ್ಲೂ ಇದು ಬಕಾಸುರನ ತಮ್ಮ. ವಿದ್ಯುತ್ ತಂತಿಗಳ ಮೇಲೆ ಗುಂಪಾಗಿ ಕೂತು ಮೀಟಿಂಗ್ ಮಾಡುವುದು ಇದೆ. ಹಸಿರು ಗಿಣಿಗಾರಲು ಸಾಮಾನ್ಯವಾಗಿ ಒಂಟಿ ಅಥವಾ ಜಂಟಿ. ಗಾತ್ರದಲ್ಲಿ ಸ್ವಲ್ಪ ದೊಡ್ಡವು. ಕೆಂಪು ಕತ್ತಿನವು ಒತ್ತೊತ್ತಾಗಿ ಕೂತು ಹರಟೆ ಕೊಚ್ಚುವುದೂ ಉಂಟು! ಈ ಚಿತ್ರದಲ್ಲಿರುವುದು ಹಸಿರು ದೇಹದ ಹಕ್ಕಿ. ಚಳಿಗೆ ತನ್ನ ಗರಿಗಳ ಕೆದರಿಕೊಂಡು ಕುಳಿತ್ತಿತ್ತು. ನನ್ನ ನೋಡುತ್ತಲೇ ಹಾರಿ ಹೋಯಿತು. 


Thursday, February 7, 2019

ಲೋಕ್ತಾಕ್ ಸರೋವರದಲ್ಲಿ ಲೋಕಾಭಿರಾಮ!

      ನೀಲ ನೀರ ತುಣುಕಿನ ಮೇಲೆಯೇ ತೇಲುವ ಒಂದು ಅಪರೂಪದ ಪಯಣದ ಅನುಭವ! ಅಮ್ಮ ಹಾಕಿದ ಉಜಾಲದಂತೆ ಕೊಳವೆಲ್ಲಾ ನೀಲಿ ನೀಲಿ. ನೀರ ಮೇಲೆ ತೇಲುತ್ತಾ ಬೆಳೆವ ಹುಲ್ಲು, ಪುಮ್ಡಿನ್. ಪನ್ನೀರಷ್ಟು ಶುಭ್ರ ನೀರ ಸರೋವರ. ಅಲ್ಲಲ್ಲಿ ಹುಲ್ಲ ಮೇಲೆಯೇ ತೇಲುವ ಮನೆಗಳು! ಮನೆಗಳು ತನ್ನ ಸ್ಥಳ ಬದಲಾಯಿಸದಂತೆ ಹುಗಿದ ಬಿದಿರ ಕೋಲುಗಳು. ಕೊಳದ ನಡುವೆಯೊಂದು ಸಣ್ಣ ದ್ವೀಪ ಸೆಂಡ್ರಾ! ಕೊಳದ ಇಕ್ಕಲೆಗಳಲ್ಲಿ ಮೀನುಗಾರರ ಬಡಾವಣೆ. ಕಣ್ಣ ತುದಿಯವರೆಗೂ ನೀಲಿಯ ನೀರೇ ನೀರು! ಸ್ವರ್ಗ ಸದೃಶ ನೋಟ. ಈ ಸರೋವರದ ಒಟ್ಟು ವಿಸ್ತೀರ್ಣ 287 ಚದರ ಕಿಲೋ ಮೀಟರ್!

ದಾರಿ ಕೇಳಿದಿರಾ?
ಮಣಿಪುರದ (manipur) ರಾಜದಾನಿ ಇಂಪಾಲದಿಂದ ಎರಡು ಗಂಟೆಯ ಪ್ರಯಾಣದ ದೂರದಲ್ಲಿರುವ ಪನ್ನೀರ ಕೊಳ ಲೊಕ್ತಾಕ್ (Loktak Lake). ಇಲ್ಲಿಗೆ ದೇಶದ ನಾನಾ ಕಡೆಯಿಂದ ನೇರ ವಿಮಾನ ಸಂಪರ್ಕವಿದೆ. ಕೈಯಲ್ಲೊಂದು 15 ಸಾವಿರವಿದ್ದರೆ ನಾಲ್ಕು ದಿನವಿದ್ದು ಬರಬಹುದು. ಸರೋವರದ ಬಳಿ ಸಾಕಷ್ಟು ಹೋಟೆಲ್ಗಳಿವೆ.

ವಿಚಿತ್ರ ವಿನ್ಯಾಸ

ಜಿಲೇಬಿ ಹೊಯ್ದಂತೆ ವೃತ್ತಾಕಾರದಲ್ಲೇ ಬೆಳೆವ ಹುಲ್ಲು! ನೀವದರ ಮೇಲೆ ನಿಂತು ನಿರಾತಂಕವಾಗಿ ನಡೆಯಬಹುದು! ನೀರ ಮೇಲೆ ಹುಲ್ಲು, ಹುಲ್ಲ ಮೇಲೆ ನೀವು! ನಿಮ್ಮನ್ನು ಅಚ್ಚರಿಯ ಕಡಲಲ್ಲಿ ತೇಲಿಸಲು ಇಷ್ಟು ಸಾಕಲ್ಲ? ಮೇಲಿನಿಂದ ನೋಡಿದರೆ ಯಾರೋ ಬೇಕೆಂತಲೇ ಹಾಕಿದಂತಹ ಗೋಲಾಕಾರದ ಹುಲ್ಲು ಕಾಣುವುದು. ತೇಲುತ್ತಾ ಹೋದಂತೆ ಸರೋವರದ ನಡುವೆಯೊಂದು ರೆಸ್ಟೋರೆಂಟ್ ಇದೆ. ನಮ್ಮ ದೋಣಿಯ ಅಂಬಿಗ ರೆಸ್ಟೋರೆಂಟ್ಗೆ ಕಾಫಿ ಹೀರಲು ಹೋಗೋಣವೇ ಎಂದ. ನಾವು ಧೈರ್ಯ ಸಾಲದೇ ಬೇಡವೆಂದು ನುಣುಚಿಕೊಂಡೆವು. ಸರೋವರಕ್ಕೆ ಒಂದು ಸುತ್ತು ಬರಲು ಅನೇಕ ಗಂಟೆಗಳೇ ಬೇಕು.

ಇಲ್ಲಿನ ವೈಶಿಷ್ಟ್ಯ ಪೂರ್ಣ ಹುಲ್ಲಿನಲ್ಲಿ 13 ಜಾತಿಗಳಿವೆ ಎಂದು ಅಂಬಿಗನಿಂದ ತಿಳಿದೆವು. ವೃತ್ತಾಕಾರವಾಗಿ ಬೆಳೆಯುವ ಇದು ಮೇಲಿನಿಂದ ನೋಡುವವರಿಗೆ ಹಸಿರು ಜಿಲೇಬಿ ತೇಲಿಬಿಟ್ಟಂತೆ ತೋರುತ್ತೆ! ಬಲೆ ಬೀಸುವ ಮೀನುಗಾರರು ಜಿಲೇಬಿ ಹಿಡಿವ ದೇವತೆಗಳಂತೆ ಕಾಣುತ್ತಾರೆ! ಮಣಿಪುರದ ನದಿಗಳ ಕೊನೆ ತುದಿಯೇ ಈ ಲೋಕ್ತಾಕ್ ಶಬ್ದದ ಅರ್ಥ. 
ಚಂದ್ರನ ತುಣುಕಿನಂತಿರುವ ತಂಪು ತಂಪು ಸರೋವರವನ್ನು ಯಾರೋ ಅಪಹರಿಸುವರೋ ಎಂಬಂತಿರುವ  ಸೈನಿಕರ ದಂಡು ದಂಡೆಯಲಿ ಕವಾಯತು ನಡೆಸುತ್ತಿತ್ತು. ದಂಡೆ ಬದಿ ಬಗೆ ಬಗೆ ಅಂಗಡಿಗಳ ಹಿಂಡು. ಒಬ್ಬಳು ಕರಿ ಸಿಯುಂಡೆಯಂತಿದ್ದ ವಿಚಿತ್ರ ವಸ್ತುವೊಂದನ್ನು ರಾಶಿ ಹಾಕಿಕೊಂಡು ಮಾರಲು ಕುಳಿತಿದ್ದಳು! ಕೇಳಿದರೆ, ತಿನ್ನುವ ವಸ್ತು ಎನ್ನಬೇಕೆ? ಬೇಯಿಸಿದ ಕಮಲದಗಡ್ಡೆ! ಬುಕ್ಕನಂತೆ ನಾವು ಬಾಯಿಗೆ ಹಾಕಿಕೊಂಡೆವು. ಸಪ್ಪೆ ಸಪ್ಪೆ ಗೆಣಸಿನಂತಹ ರುಚಿ.



ತೇಲುವ ಉದ್ಯಾನವನ!



ಸರೋವರದ ಉತ್ತರ ಭಾಗದತ್ತ ಹೊರಟೆವು. ಅಗಾದವಾಗಿ ಆಳೆತ್ತರ ಬೆಳೆದ ಆನೆ ಹುಲ್ಲಿನಿಂದ ತುಂಬಿದ ವಿಶ್ವದ ಏಕೈಕ ತೇಲುವ 'ಕೈಬುಲ್ ಲೆಮ್ಜಾವೊ' ಎಂಬ  ರಾಷ್ಟ್ರೀಯ ಉದ್ಯಾನದಲ್ಲಿದ್ದೆವು! ಉದ್ಯಾನವನದ ನಡುಗುಡ್ಡೆಯನ್ನೇರಿ ಹುಲ್ಲರಾಶಿಗಳ ನಡುವೆ ಮೇವ ಹುಲ್ಲೆಯೊಂದನು ಕಂಡೆವು. ಇಲ್ಲಿನವರು ಪ್ರೀತಿಯಿಂದ 'ಶಂಘೈ' ಎನ್ನುವರು. ಅಳಿದವೆಂದುಕೊಂಡ ಶಂಫೈ ಈಗ ಸರಕಾರದ ಕ್ರಮದಿಂದ 265 ಹೆಚ್ಚು ಉಳಿದುಕೊಂಡಿದೆ. ವಿಶ್ವದ ಯಾವ  ಮೂಲೆಯಲ್ಲೂ ಕಾಣಸಿಗದ ಅಪರೂಪದ, ಹುಲ್ಲಿನ ಜೊಂಡಿನ ಮೇಲೆ ಜಿಗಿಯುವ ಶಂಘೈಯನ್ನು ಕಣ್ತುಂಬಿಕೊಂಡೆವು. ತೇಲುವ ಉದ್ಯಾನದ ಹುಲ್ಲನ್ನು ಮೈಸೂರ್ ಪಾಕ್ ಕತ್ತರಿಸಿದಂತೆ ಕತ್ತರಿಸಿದ ದಾರಿಯಲ್ಲಿ  ದೋಣಿಗಳ ಮೇಲೆ ಉದ್ಯಾನಕ್ಕೆ ಒಂದು ಸುತ್ತು ಬಂದೆವು. ಶಂಘೈ ಜಿಂಕೆ ನಮ್ಮ ಗಲಾಟೆಗೆ ಅಡಗಿಕುಳಿತಿತಿರಬೇಕು. ತೇಲುವ ಹುಲ್ಲಿನ ಮೇಲೆ ಅಂಬಿಗನ ಸಹಾಯದಿಂದ ನಡೆದಾಡಿ ಪುಳಕಗೊಂಡೆವು. ಅಕ್ಷರಶಃ ಹುಲ್ಲು ನಮ್ಮನ್ನು ಮುಳುಗಿಸದೇ ತೇಲಿಸಿತ್ತು.


ಪರಿಸರ ಮಾಲಿನ್ಯದಿಂದ ಮೊದಲಿನ ಶುದ್ಧತೆ, ಸ್ಪಟಿಕ ಶುಭ್ರತೆ ಈಗಿಲ್ಲವೆಂದು ಸ್ಥಳೀಯರು ಬೇಸರದಿಂದ ಹೇಳುತ್ತಾರೆ. ಜೊತೆಗೆ ಲೋಕ್ತಾಕ್ ಹೈಡ್ರೋ ಪವರ್ ಪ್ರಾಜೆಕ್ಟ್ ಸರೋವರಕ್ಕೆ ಸಾಕಷ್ಟು ದಕ್ಕೆ ಉಂಟು ಮಾಡಿದೆ. ಇಂತಹ ಅಪರೂಪದ ಸರೋವರ ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಲ್ಲವೇ?
                              ಶ್ರೀಧರ್. ಎಸ್. ಸಿದ್ದಾಪುರ
                     

ವಾರೆ ನೋಟ

ಬೆಣ್ಣಿಯೊಂದಿಗೆ ಬೆರೆತ ಮಜ್ಜಿಗೆ ಮಂಜುಗುಣಿ

ನಮ್ಮ ತಿರುಗಾಲು ತಿಪ್ಪಲುತನಕ್ಕೆ ಕಿಚ್ಚುಹಚ್ಚಿಸಿದ್ದು ಹೊಸ ಕರ್ಮವೀರ! ಕರ್ಮವೀರದ ಜೋಳಿಗೆಯ ತುಂಬಾ ಅರವತ್ತು ಜಲಪಾತಗಳನ್ನು ಕಟ್ಟಿಕೊಟ್ಟಿದ್ದ ಸಂಪಾದಕ ಮಹಾಶಯ. ಗುಣಿಸಿ ಭ...