Showing posts with label ಪ್ರಬಂಧ. Show all posts
Showing posts with label ಪ್ರಬಂಧ. Show all posts

Monday, July 3, 2023

ಸುರಿವ ಮಳೆಯಲ್ಲೊಂದು ತಿಥಿಯೂಟ.

ನಾನಾಗ 8 ನೇ ತರಗತಿಯಲ್ಲಿ ಓದುತ್ತಿದ್ದೆ. ಹಠ ಹಿಡಿದ ಮಗುವಿನಂತೆ ಧೋ ಎಂದು ಮೂರು ದಿನದಿಂದ ಮಳೆ ಹೊಯ್ಯುತ್ತಿತ್ತು. ರಸ್ತೆ, ಚರಂಡಿ,  ಎಲ್ಲೆಲ್ಲೂ ಕೊನೆಗೆ ನಮ್ಮ ಮನದಲ್ಲೂ ಧೋ ಎಂಬ ಜಡಿ ಮಳೆ ಹೊಯ್ಯುತ್ತಲೇ ಇತ್ತು.

ಹತ್ತು ಕಿಲೋ ಮೀಟರ್ ದೂರದ ಶಾಲೆಗೆ ಹೋದೊಡನೆಯೇ ನಮಗೆ ರಜೆಯು ಸ್ವಾಗತ ಕೋರಿತ್ತು. ಮನಸ್ಸು ಕುಣಿದಾಡಿತ್ತು. ಉಲ್ಲಸಿತರಾಗಿ ಮನೆಗೆ ಮರಳುವ ಹಾದಿಯಲ್ಲಿದ್ದೆ. ಆಗಲೇ ನೆನಪಾಗಿದ್ದು ನನ್ನ ಅಜ್ಜ ಊರಿನಲ್ಲಿ ಇವತ್ತು ತಿಥಿಯೂಟವೆಂದು. ನನಗೋ ಅಜ್ಜನೂರೆಂದರೆ ಬಹಳೇ ಪ್ರೀತಿ, ಮಮಕಾರ, ತುಡಿತ. ಶಾಲೆ ತಪ್ಪಿಸಿ ಅಜ್ಜನೂರಿಗೆ ಹೋಗಲು ನನಗೆ ನಿರ್ಬ೦ಧವಿತ್ತು. ಆದರೆ ಇವತ್ತು ಆ ನಿರ್ಬಂಧ ಕೊಚ್ಚಿ ಹೋಗಿತ್ತು. 

ಮಳೆಗೊಂದು ಉದ್ದಂಡ ನಮಸ್ಕಾರ ಸಲ್ಲಿಸಿದೆ! ಮನಸ್ಸು ಉಲ್ಲಸಿತವಾಗಿ ಅಜ್ಜನೂರಿಗೆ ಹೋಗುವ ಗುಣಾಕಾರ ಭಾಗಾಕಾರ ಹಾಕಿತ್ತು. 

   ಅಮ್ಮ 9 ಗಂಟೆಯ ಬಸ್ಸಿಗೆ ಹೊರಡುವಳೆಂದು ಗೊತ್ತಿತ್ತು. ಹಾಗಾಗಿ ಗೆಳೆಯನಲ್ಲಿ ನಾನು ಮನೆಗೆ ಬರಲಾರೆ, ಅಜ್ಜನ ಮನೆಗೆ ಹೋಗುವೆ, ಅಪ್ಪನಿಗೆ ತಿಳಿಸು ಎಂದು ಹೇಳಿ ಸೀದಾ ಸುರಿವ ಮಳೆಯಲ್ಲಿ ಕೊಚ್ಚೆ ಹಾರಿಸುತ್ತಾ ಬಸ್ಸು ನಿಲ್ದಾಣಕ್ಕೆ ಓಡಿದೆ. ಮೊದಲು ಬಂದ ಶಂಕರ ವಿಠಲ ಬಸ್ಸಿನ ಮುಂಬಾಗಿಲಿನಲ್ಲಿ ಹತ್ತಿ ಬಸ್ಸೆಲ್ಲಾ ಹುಡುಕಿದೆ. ಆ ಬಸ್ಸಿನಲ್ಲಿ ಅಮ್ಮನಿರಲಿಲ್ಲ. ಹಿಂಬಾಗಿಲಿನಲ್ಲಿ ಇಳಿದೆ. ಮುಂದಿನ ಬಸ್ಸಿಗಾಗಿ ಸುರಿವ ಮಳೆಯಲ್ಲಿ ಕಾಯುತ್ತಾ ನಿಂತೆ. ಮನದೊಳಗೆ ಕಾತರ ಅಮ್ಮ ತಪ್ಪಿ ಹೋಗುವಳೋ  ಏನೋ ಎಂಬ ಆತಂಕ. ಅಜ್ಜನೂರಿಗೆ ಹೋಗಲಾರದ ದುಃಖ ಒಂದೆಡೆ. ಅಜ್ಜನೂರಿಗೆ ಹೋಗಲು ಕೈಯಲ್ಲಿರುವ ನಾಲ್ಕಾಣೆ ಏನೇನೂ ಸಾಲದು. ಮಳೆ ನಿಲ್ಲುವ ಲಕ್ಷಣಗಳಿರಲಿಲ್ಲ. ಅಷ್ಟರಲ್ಲೇ ಹನುಮಾನ್ ಬಸ್ಸು ಬಂತು. ಈ ಬಸ್ಸಿನಲ್ಲಿ ಅಮ್ಮನಿರಲಿ ಎಂದು ಪ್ರಾಥರ್ಿಸಿದೆ. ಅದೃಷ್ಟವಶಾತ್ ಅಮ್ಮನೂ ಆ ಬಸ್ಸಿಗೇ ಹೊರಟಿದ್ದಳು. ನನ್ನ ಆತಂಕ ತೀರಿತು. ಅಮ್ಮನ ಪಕ್ಕ ಹೋಗಿ ಕುಳಿತೆ. ಮಳೆಯಲ್ಲಿ ಕುಳಿತು ಸಕತ್ ಪ್ರಯಾಣ. 

ಅಂತೂ ಅಜ್ಜಿ ಮನೆಯಲ್ಲಿ ತಲುಪಿ ಸಕತ್ ಊಟ ಮಾಡಿ ಖುಷಿಯಲ್ಲಿ ಕುಳಿತ್ತಿದ್ದೆವು. ಸಂಜೆ ಮೂರು ಗಂಟೆ ಹೊತ್ತಿಗೆ ಸುರಿವ ಮಳೆಯಲ್ಲಿ ಅಪ್ಪ ನನ್ನನ್ನು ಹುಡುಕುತ್ತಾ ಅಜ್ಜಿ ಮನೆಗೆ ಬಂದಿದ್ದರು. ಅಮ್ಮನೊಂದಿಗೆ ಅಂದು ಸುರಿವ ಮಳೆಯಲ್ಲಿ ಅಜ್ಜನೂರಿಗೆ ಹೋದ ನೆನಪು ಇನ್ನೂ ಹಸಿರಾಗೇ ಇದೆ.

     ಎಲ್ಲರೂ ಈ ನೆನಪುಗಳನ್ನು ಮೆಲುಕು ಹಾಕಿ ನನ್ನ ಛೇಡಿಸುವರು. ಮಾವನಿಗಂತು ಈ ನೆನಪು ಸದಾ ಹಸಿರು.

ಇಂದೇ ನನ್ನ ಅಜ್ಜನ ತಿಥಿ. ಫೋನ್ ಮಾಡಿ ಬರುವಂತೆ ಮಾವ ಕರೆ ಕೊಟ್ಟಾಗ ಎಲ್ಲ ನೆನಪು ಮರುಕಳಿಸಿತು. ಮನೆಯಲ್ಲಿ ದಿವ್ಯ ಏಕಾಂತ ಒಂದೇ ಬೆರಳಿನಲ್ಲಿ ಟೈಪಿಸಿದೆ. ಚೆನ್ನಾಗಿದ್ದರೆ ತಿಳಿಸಿ.

 

Wednesday, March 22, 2023

ಯಾತನೆಗಳಿಗೆ ಕೊಟ್ಟ ಶಬ್ದ ರೂಪ

ಹಕೂನ ಮಟಾಟ

ಒಂದು ಬೇವಾರಸಿ ಟಿಪ್ಪಣಿ….

ನೇರ ರೇಖೆಯನ್ನೇ ವಕ್ರ ಸೊಟ್ಟಗೆ ಎಂದಾಡಿ ಕೊಳ್ಳುವಾಗ ಇಂತಹ ಕತಾ ಸಂಕಲನಕ್ಕೆ ಲೇವಡಿ ಹಚ್ಚಿ ಬಿಡುವುದಿಲ್ಲವೇ? ತಂತ್ರಜ್ಞಾನ ಯುಗದಲ್ಲಿ ತಮ್ಮ ಮೂಗಿನ ನೇರಕ್ಕೆ ಏನೂ ಬೇಕಾದರೂ ನೇತು ಹಾಕಿಕೊಂಡು ಸುಖಿಸಬಹುದಿಲ್ಲಿ. ಅಂಕೆ ಶಂಕೆ ಇಲ್ಲದಿರೆ ಪದಗಳ ಆಮಶಂಕೆ! ನೀನೂ ಮಾಡಿರುವುದೂ ಅದೇ ಎಂದು ಹಳಿಯಬೇಡಿ.

ಅರಿಕೆಯೊ, ಸ್ವಗತಗಳೊ, ತುಮುಲಗಳ ಸಂತೆಯನ್ನು ತಡವಿ ಬಂದ ಅನುಭವ. ಪಟ್ಟದ್ದು ಪಾಡೋ, ಸುಖವೋ ಎಂದು ಹೇಳಲು ಏಕಮಾನವಿಲ್ಲ ಇಲ್ಲಿ. ನಮ್ಮ ಉದ್ದಗಲಕ್ಕೆ ಸರಿಯಾಗಿ. ಮೂಗುತಿ ಭಾರದಿಂದೋ ಅಥವಾ ಮೂಗೇ ಸೊಟ್ಟಗೋ  ನೀವೇ ನೋಡಿ ನಿರ್ಧರಿಸಬೇಕಷ್ಟೆ. 

ಕತೆಯೋ, ಪ್ರಬಂಧವೋ? ಕತೆಯಂತಹ ಪ್ರಬಂಧಗಳಾ? ಸ್ವಗತಗಳ ಸಂತೆಯಾ? ತನ್ನ ಬದುಕಿನ ತುಣುಕುಗಳಾ ತಲೆ ಬಾಲ ಕತ್ತರಿಸಿದ ವೃಕ್ಷ ಕಾಂಡದಂತೆ ಕಂಡರೂ ಭಿನ್ನ ಅಗೋಚರ ಧನಿಯಾಗಿ ನಿರಂತರವಾಗಿ ಕಾಡದೇ ಇರದು. 

ಹೊಸ ಹೊಸದಾದ ರೂಪಕಗಳು ಆಸ್ವಾದಿಸುವವರ ನಾಲಗೆಯ ರುಚಿ ಮೊಗ್ಗುಗಳನ್ನು ಕೆಣಕದೇ ಇರದು. ʼನಾನು ನಿಂತಲ್ಲಿಯೇ ಹೆಪ್ಪಿಬಿಟ್ಟೆʼ, ʼಕಸಿವಿಸಿ ತೊಟ್ಟಿಕ್ಕಿತ್ತುʼ. ʼನಾಲಗೆಯಲ್ಲೇನೋ ಬೇವಾರಸಿ ತೊಡರುʼ, ʼಕತ್ತಲು ಜಿಟಿಪಿಟಿಸುತ್ತಿತ್ತು!ʼ, ʼಎಲೆಯ ವಂದರಿಯಲಿ ಬಿಸಿಲಿನ ಜರಡಿʼ, ʼಸೈಕ್ಲೋನ್‌ ಸುರಿತʼ, ರೇಜಿಗೆಯ ಜಿಟಿ ಪಿಟಿ, ರೇಜಿಗೆಯ ಹಗಲು, “ನನ್ನದೋ ಬೇವಾರಸಿಯ ಚರ್ಯೆ”, ʼತಹ ತಹ ವಿರಹವಲ್ಲʼ, ʼಊಟಕ್ಕೆ ಕುಳಿತಾಗ ಮಾತು ಹೆಕ್ಕಿದ್ದಳು!ʼ, ʼನೆನಪಿಗೆಂದೂ ತೇಗುವುದಿಲ್ಲʼ, ʼನೆಳಲು ಚೆಲ್ಲುತ್ತಾಳೆʼ, ʼರಾಡಿ ಮುಕ್ಕಳಿಸಿದ ರೋಡುʼ, ʼನಗು ಗುಟುರಿದ್ದʼ, ʼಬೀದಿಯ ಕಾಮಾಲೆ ಮಂಪರಿನಲ್ಲಿ.ʼ, ʼಜಿಗುಟು ಹಗಲುʼ ಹೀಗೆ ಪಟ್ಟಿ ಮಾಡುತ್ತಾ ಹೋದರೆ ಎಲ್ಲವು ತಾರಲೋಕದಿಂದ ಎಳೆದು ತಂದವು! ಖಂಡಿತ ನಮ್ಮ ಲೋಕದ್ದಲ್ಲವೇ ಅಲ್ಲ.


ಒಂದು ಬೇವಾರಸಿ ಟಿಪ್ಪಣಿಗಳು ಕತೆಯಿಂದ....


ಅಕ್ಷ್ಯೋಭ್ಯ ಕಡಿದಾಳನ್ನು ಕಟ್ಟಿಕೊಂಡು ಅವಳು ಹೆಣಗುವ ರೀತಿಗೆ ಅವಳ ಅನನ್ಯ ಪ್ರೀತಿಗೆ ಬೆರಗುಗೊಂಡಿದ್ದೇನೆ. ತಾನು ಮೂರನೆಯವಳು ಎಂಬ ಅರಿವಿದ್ದೂ ಅವನ ಮಾತಿಗೆ ಕಟ್ಟುವ ಕಲೆಗೆ ಮರುಳಾದವಳು ಅವಳು! ಅವನ ಆರ್ಕಿಟೆಕ್‌ ಕೈಗಳಿಗೆ ಸೋತವಳು. ಕೊನೆಯವರೆಗೂ ಸೋಲುತ್ತಾ ಬುದುಕುವಳು. ಮಗನನ್ನು ಆರ್ಕಿಟೆಕ್‌ ಆಗಿಯೇ ರೂಪಿಸುವಳು. ಸಣ್ಣ ಸಮಾರಂಭವೊಂದರಲ್ಲಿ ಅವಳು ತನ್ನ ಸವತಿಯನ್ನು ಎದುರಿಸುವ ಪರಿ ಅನನ್ಯವಾಗಿಸಿದ್ದಾರೆ ಕತೆಗಾರ.  ಅವಳ ತುಮುಲಗಳ ಜೊತೆಗೆ ಹೋಗಿ ಇದ್ದು ಬಂದಿದ್ದೇನೆ. ಅವಳ ಕಣ್ಣೀರಿಗೆ ಜೊತೆಯಾಗಿದ್ದೇನೆ. ಅವನ ಜೊತೆಗಿನ ಬಂಧವನು ಅತ್ಯಂತ ನಾಜೂಕಾಗಿ ಪೋಣಿಸಿಕೊಟ್ಟಿದ್ದಾರೆ. ವಾರಸುಗಳಿಲ್ಲದ ಗೆರೆಗಳು…. ಎಲ್ಲೂ ಹೇಳಲಾಗದ ಸಂಕಟಗಳ ಕಡತ. ಕೊನೆಗೂ ಪ್ರಶಸ್ತಿ ಪಡೆಯುವಾಗಲೂ ಹೇಳಲಾಗದೇ ಮಗ ಮತ್ತು ಅಮ್ಮನ ತೊಳಲಾಟಗಳು. ಎಷ್ಟು ನೋವುಗಳನ್ನು ಹಿಡಿದಿಡಬಹುದೋ ಅಷ್ಟನ್ನು  ಹಿಡಿದಿಟ್ಟ ಪರಿ ಅನನ್ಯ.



         

ಬದುಕಿನ ಉತ್ಸವಗಳಲ್ಲಿ ಅವನಿಲ್ಲದ ಖಾಲಿತನ, ಸಾಂಗತ್ಯವಿಲ್ಲದ ವಿರಹದ ದಿನಗಳ ಮರೆವಣಿಗೆ. ಸಾವಿನಲ್ಲೂ ಸಿಗದ ನೆಮ್ಮದಿ. ಒಂದು ಬೇವಾರಸಿ ಸಾವು. ದುಃಖದ ದಂಡೆಯಲಿ ಅವನ ನೆನಪಿನ ಮೆರವಣಿಗೆ. ಹೊಯ್ದಾಟಗಳು. ಯಾವುದು ನಿಚ್ಚಳವಾಗದಂತಹ ಸಂದಿಗ್ಧತೆ. ಯಾವುದೇ ಚೌಕಟ್ಟಿಗೆ ಸಿಗದ ಯಾತನೆಗಳ ಸಂತೆ. ತಂದೆ ಅನಿಸಿಕೊಂಡವನ ಹಸಿ ಬಿಸಿ ನೆನಪುಗಳು ನಮ್ಮನ್ನೂ ಕಲುಕುತ್ತವೆ. ಸಿಗದ ದುಃಖ ಕಾಡುತ್ತದೆ. ನಮ್ಮನ್ನೂ ಹೆಪ್ಪುಗಟ್ಟಿಸಿ ಅಳಿಸುತ್ತವೆ. ಒಳಗೊಳಗೇ ಅಳುತ್ತೇನೆ. 

         ಗುಟುಕು ಪ್ರೀತಿಗೆ ಕಾತರಿಸಿ ಕಾಯುವ ಕಷ್ಟಗಳ ಸಂಕೋಲೆ. ಅದಮ್ಯ ಜೀವನೋತ್ಸಾಹದಲ್ಲಿ ಅನಾಮಿಕವಾಗಿ ಉಳಿವ ತಂದೆಯ ಹೆಸರು ಮತ್ತು ಅವರ ಸಂಬಂಧಗಳು. ತುಮುಲಗಳ ಕಂತೆಯನ್ನು ಆರ್ಕಿಟೆಕ್ಚರ್‌ನ ಮೂಸೆಯಲ್ಲಿಟ್ಟು ನೋಡುವುದು ಸಹ ಕತಾ ಪ್ರಪಂಚಕ್ಕೆ ಹೊಸ ಕಿಂಡಿ. ಎಂದೂ ದಕ್ಕದ ತಂದೆ. ಕತೆ ಹೇಳದ ಏನನ್ನೂ ತಂದು ಕೊಡದ ತಂದೆ! ರಸಿಕೆಯಾಗಿ ಸೋರುವ ಸಣ್ಣ ಹುಣ್ಣಿನಂತೆ ತಂದೆಯ ನೆನಪು. ಒಂದು ಮಾಯದ ಗಾಯ.

ಕತೆ ತೆರೆದಿಡುವ ಟಿಸಿಲುಗಳು ನೂರಾರು. ಭಾವ ಸ್ಪರ್ಶಕ್ಕೆ ದಕ್ಕದ ಬರಡು ಬದುಕು. ಇಂತಹ ನೂರಾರು ಟಿಸಿಲುಗಳಿಂದ ತೊಟ್ಟಿಕ್ಕುತ್ತಿದೆ ನೋವಿನ ನೂರಾರು ಕತೆಗಳು. ನೂರಾರು ಭಾವ ಪ್ರಪಂಚದ ಸಾವಿರ ಬಿಂದುಗಳು. ಪ್ರತಿ ಬಿಂದುವಿನ ಕತೆಯೂ ಭಿನ್ನ. ಇಂತಹ ಒಂದು ಟಿಸಿಲಿನಲ್ಲದರೂ ಬಂದು ಕುಳಿತು ಕತೆ ಕೇಳಿ ಹೋಗಿ.

-----

ಹುತ್ತಗಟ್ಟದೇ ಇಂತಹ ಪ್ರಯತ್ನ ಸಾಧ್ಯವಿಲ್ಲ. ಎಲ್ಲರಂತಲ್ಲದ ಹೊಸ ಕಥಾ ಪ್ರಪಂಚಕ್ಕೆ ಪಾದವಿಟ್ಟ ಅನುಭವ. 


ವಸ್ತಾರೆ ಕತೆಗಳಾಲಿ ಕವಿತೆಗಳಾಗಲಿ ಸುಲಭಕ್ಕೆ ದಕ್ಕಲಾರವು. ಪ್ರಯತ್ನ ಪಟ್ಟು ದಕ್ಕಿಸಿಕೊಳ್ಳುವಾಗ ಸ್ವಲ್ಪ ಯಾಮಾರಿದರೂ ಕೈಯ ಸಂಧಿಯಲಿ ಜಾರಿ ಹೋಗುವವು. ಸುಲಭಕ್ಕೆ ಗ್ರಹಿಸಲು ಸಾಧ್ಯವಾಗದು ಎಂದು ವಾಚಿಕೆಯ ಪ್ರಾರಂಭದಲ್ಲೇ ಶಾಂತಾ ಮಣಿ ಹೇಳಿದ್ದಾಳೆ ಜಾಗೃತೆ! 

ಹಾಗಾಗಿ ನಿಮ್ಮ ಓದಿಗೆ ದಕ್ಕಲಿ ಎನ್ನಲಾರೆ. ದಕ್ಕುವುದು ದಕ್ಕಿಸಿಕೊಳ್ಳುವುದು ನಿಮ್ಮ ಕೈಯಲ್ಲೇ ಇದೆ. ಬದುಕೆಂದರೆ ಮುಕ್ತಾಯವಾಗದ ಕೊನೆ ಮೊದಲಿಲ್ಲದ ಹುಡುಕಾಟ. ಎಂಬುದನು ಸದಾ ನೆನಪಿಸುತ್ತಾ ಕರಣಗಳಲಿ ಮತ್ತೆ ಮತ್ತೆ ಕೇಳುತಿದೆ “ನಿಂತಲ್ಲೇ ನಾನು ಹೆಪ್ಪಿ ಬಿಟ್ಟೆ” ಎಂಬ ಪದಪುಂಜ. ನಿಮ್ಮ ಓದಿಗೆ ದಕ್ಕಿದರೆ ತಿಳಿಸಿ. 

ನಿಮ್ಮ ಓದಿಗೆ ದಕ್ಕಲಿ ಎನ್ನಲಾರೆ ದಕ್ಕುವುದು ದಕ್ಕಿಸಿಕೊಳ್ಳುವುದೂ ನಿಮ್ಮ ಕೈಯಲ್ಲೆ ಇದೆ ಎನ್ನುತ್ತಾ ಈ ಮೋಟು ಲೇಖನಕ್ಕೆ ಪೂರ್ಣ ವಿರಾಮ. ಮತ್ತೆ ಸಿಗೋಣ.

Wednesday, April 1, 2020

ಕರೋನಾ ಕೆರೆತ!


ಕರೋನದಿಂದ ಅತ್ಯಂತ ಅನ್ಯಾಯಕ್ಕೊಳಗಾದ, ನಿರ್ಲಕ್ಷಕೊಳಗಾದ ನಮ್ಮ ದೇಹದ ಭಾಗವೆಂದರೆ ಅದು ಮೂಗು! ಅಯ್ಯೋ ಶಿವನೆ, ಏನು ಹೇಳುತ್ತಾನೆಂದು ಆಶ್ಚರ್ಯವಾಯಿತೇ? ಸ್ವಲ್ಪ ತಾಳ್ಮೆ ಇರಲಿ. ತಲೆ ಬುಡವಿಲ್ಲದ ಸಂಗತಿಗಳನ್ನು ಹೇಳುತ್ತಾನೆಂದು ಅನ್ಕೊಬೇಡಿ.
 ಹೌದು. ಕೋವಿಡ್-19 ಬಂದಾಗಲೇ ವ್ಯಾಟ್ಸಪ್ ಮತ್ತು ಎಫ್ ಬಿ  ಗಳಲ್ಲಿ ಅನುಸರಿಸಬೇಕಾದ ಆವಶ್ಯಕ ಕ್ರಮಗಳ ಕುರಿತು ಟನ್ ಗಟ್ಟಲೆ ಮಾಹಿತಿ ಹರಿದು ಬಂದಿತು. ಅದರ ಮೊದಲ ಅಂಶವೆಂದರೆ ನಮ್ಮ ದೇಹದ ಒಂದು ಭಾಗವಾದ ಮುಖವನ್ನು ಮುಟ್ಟುವಂತಿಲ್ಲ. ಜೊತೆಗೆ ಮೂಗು ಕಣ್ಣು, ಬಾಯಿ ಮುಟ್ಟುವಂತಿಲ್ಲ. ಯಾರೋ ನಮ್ಮ ದೇಹದ ಭಾಗವನ್ನು ಮುಟ್ಟಬೇಡಿ ಎಂಬ ವಿಚಿತ್ರ ನಿಬಂಧನೆ ಬೇರೆ. 
 ಈ ಸುದ್ದಿ ತಿಳಿಯುತ್ತಲೆ ರಚ್ಚೆ ಬಿದ್ದ ಮಗುವಿನಂತಾಗಿದೆ ಮೂಗು! ನಾ ಹೇಳುವುದನ್ನು ಕೇಳದೆ ಪ್ರತಿಭಟನೆಗೆ ಬಿದ್ದಿದೆ. ಮುದ್ದಿಸು ಮುದ್ದಿಸು ಎನುತಿದೆ! ಪ್ರತೀ ಕ್ಷಣವೂ ಮುಟ್ಟು ಮುಟ್ಟು ಎಂದು ತೋರಿಕೆ ತುರಿಕೆ ಉಂಟು ಮಾಡಿ ಯಾವುದೋ ಪ್ರಲೋಭನೆ ಒಡ್ಡುತಿದೆ. ಹೇಗಾದರೂ ಮುಟ್ಟು ಮರಾಯ ಎನ್ನುತಿದೆ. ಏನು ಮಾಡುವುದೆಂದು ತೋಚಲೇ ಇಲ್ಲ. ಮೊದಲ ದಿನವಂತೂ ತಡೆದುಕೊಂಡೆ. ಆದರೆ ಮುಟ್ಟ ಬೇಕೆನ್ನುವ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಯಿತು. 

ಎರಡನೇ ದಿನಕ್ಕೆ ಹೊಸ ಐಡಿಯಾದೊಂದಿಗೆ ಬಂದೆ ತಲೆ ಬಾಚುವ ಹಣಿಗೆಯೊಂದನ್ನು ಸಾನಿಟೈಸ್ ಮಾಡಿ ಇಟ್ಟುಕೊಂಡೆ. ಅದಕ್ಕೂ ದಿನಕ್ಕೆರಡು ಬಾರಿ ಸ್ನಾನ. ತುರಿಸು ತುರಿಸು ಎಂದೊಡನೆ ಅದನ್ನೇ ಹಾಕಿ ತಿಕ್ಕಲು ಸುರುಮಾಡಿದೆ. ಕೋವಿಡ್ ಹರಡುತ್ತಲೆ ನನ್ನ ಪರಿಸ್ಥಿತಿ ಈಗ ವಿಕೋಪಕ್ಕೆ ಹೋಗಿದೆ.  ನನ್ನ ಮುಖವನ್ನೇ ನಾನು ನೋಡಲು ಅಸಹ್ಯ ಪಡುವಂತಾಗಿದೆ. ಅಡ್ಡ ಗೀರು ಉದ್ದಗೀರುಗಳು ಮುಖದ ತುಂಬಾ ಮೂಡಿವೆ. ಬಾಚಣಿಗೆಯಲ್ಲಿ ಕೆರೆದು ಕೆರೆದು ಮೂಗು ಗಡ್ಡಗಳೆಲ್ಲಾ ಕೆಂಪು ಕೆಂಪಾಗಿ ವಿಚಿತ್ರ ಕೆಂಪು ಮೂತಿಯ ಮಂಗನಂತಾಗಿರುವೆ. ಆದರೆ ಕೆರೆತ ಕಡಿಮೆಯಾಗಿಲ್ಲ.

  ಜೊತೆಗೆ ಅಮ್ಮ ಹೇಳಿದ ಎಲ್ಲಾ ಆಯರ್ುವೇದದ ಗಿಡ ಮೂಲಿಕೆಯನ್ನೆಲ್ಲಾ ಅರೆದು ಹಚ್ಚಿದೆ. ಹೆಚ್ಚಿತೆ ಹೊರತು ಕಡಿಮೆಯಾಗಿಲ್ಲ. ಪಾಪದ ಯಾವುದ್ಯಾವುದೋ ಜೇಡಗಳ ಮೇಲೆ ಆಪಾದನೆ ಮಾಡಿದ್ದಾಳೆ ಹೆಂಡತಿ .  ಕೇಳಿಸಿ ಕೊಂಡರೆ ಕಷ್ಟ , ಅವು ಮಾನ ನಷ್ಟ ಮೊಕದ್ದಮೆ ಹೂಡಿಯಾವು ಎಂಬ ಭಯ! 


ಯಾವುದನ್ನು ಮಾಡಬೇಡ ಎನ್ನುವರೊ ಅದನ್ನೇ ಮಾಡಬೇಕು ಎಂಬ ವಿಚಿತ್ರ ಬಯಕೆ ನಮ್ಮ ಮನಸ್ಸಿಗುಂಟಾಗುವುವದೆಂದು ಹೆಂಡತಿ ಹೊಸ ಥಿಯರಿಯೊಂದನ್ನು ಘೋಷಿಸಿ ನನ್ನನ್ನು ಮತ್ತಷ್ಟು ಗೊಂದಲಕ್ಕೀಡು ಮಾಡಿದ್ದಾಳೆ. ಜೊತೆ ಹೊಸದೊಂದು ಮಾನಸಿಕ ಖಾಯಿಲೆಯನ್ನು ಅಂಟಿಸಲು ಹೊರಟಿದ್ದಾಳೆ!  ಏನು ಮಾಡಲಿ. ಕೈ ತೊಳೆದು ತೊಳೆದು ಚರ್ಮ ಸವೆಯುತ್ತಾ ಬಂದಿದೆ. ಉಳಿದ 14 ದಿನ ಉಳಿವುದು ಕಷ್ಟ. ಹಾಗಾಗಿ ಹೊಸ ಉಪಾಯ ಹೂಡಬೇಕು. ನಿಮಗೆ ಹೊಳೆದರೆ ನನಗೂ ಸ್ವಲ್ಪ ಹೇಳಿ. ಇಲ್ಲದಿದ್ದರೆ ನಷ್ಟ ಪರಿಹಾರ ಕೋರಿ ನಾನೆ ಒಂದು ಮೊಕದ್ದಮೆ ಹೂಡಬೇಕೆಂದಿರುವೆ. ಯಾರ ಮೇಲೆ ಎಂದು ಇನ್ನೂ ಯೋಚಿಸಿಲ್ಲ. ಇನ್ನೂ 14 ದಿನವಿದೆಯೆಲ್ಲಾ ಯೋಚಿಸಿದರಾಯ್ತು!
 ಯಾರು ನನ್ನ ಸ್ವಯಂ ಅಧಿಕಾರ ಕಿತ್ತುಕೊಂಡರೋ ಅವರೇ ನನ್ನ ಮೂಗು ಮುಟ್ಟಿಕೊಳ್ಳುವ ಅಧಿಕಾರ ನೀಡಬೇಕು ತನ್ಮೂಲಕ ನನ್ನ ಮೂಗಿನ ಕೆರೆತ ನಿಲ್ಲಿಸ ಬೇಕಾಗಿ ಕಳಕಳಿಯ ವಿನಂತಿ.
#_ಮನೆಯಲ್ಲೇ_ಇರೋಣ_ಮತ್ತಷ್ಟು_ಕೆರೆಯೋಣ!
#_lockdown .
�

Monday, March 30, 2020

ಜಾತ್ರೆ ಎಂಬ ನವಿರಾದ ನವಿಲುಗರಿ.



ಜಾತ್ರೆ ಎಂದರೆ ಬಿಡುವು. ಜಾತ್ರೆ ಎಂದರೆ ಸೇರುವಿಕೆ. ಜಾತ್ರೆ ಎಂದರೆ ಜಂಗುಳಿ. ಮಕ್ಕಳಿಗೆ ಜಾತ್ರೆ ಎಂದರೆ ಉತ್ಸಾಹ, ಆಟಿಕೆ ಅಂಗಡಿಗಳು. ಜಾತ್ರೆ ಎಂದರೆ ಏಕತಾನತೆ ಮುರಿವ ಸಂಸ್ಕ್ರತಿಯ ಬಿಂದುಗಳಾಗಿ ನನಗೆ ಕಾಣುತ್ತೆ.
ಈ ಜಾತ್ರೆ ಅಜ್ಜಿಯೂರಾದ ಬೈಂದೂರ ನೆನಪು ಹೊತ್ತು ತರುವುದು. ಜೊತೆ ಜೊತೆಗೆ ಮಾವು ಕದ್ದ, ಚಿಕ್ಕವಯಸ್ಸಿನಲ್ಲೇ ಎಷ್ಟೋ ಕಿಲೋ ಮೀಟರ್ ನಡೆದ, ನವಿರಾದ ಹೆಸರ ಪಾಯಸ ಹೊಡೆದ, ತಮ್ಮನನ್ನು ಗೋಳು ಹೊಯ್ದು ಕೊಂಡ ನೆನಪುಗಳ ತಕದಿಮಿತ.




ಆಗೆಲ್ಲಾ ನಮಗೆ ಜಾತ್ರೆಗಾಗಿ ನೀಡುವ ಹಣ ಅಷ್ಟಕ್ಕಷ್ಟೆ. ಸ್ವಾಭಿಮಾನದಿಂದಾಗಿ ಯಾರಲ್ಲೂ ಬೇಡುವಂತಿರಲಿಲ್ಲ.  ಜಾತ್ರೆಗಾಗಿ ಕಾಸು ಕೂಡಿಸುವ ಕನಸು. ತರೆವಾರಿ ಅಂಗಡಿಗಳ, ಒಂದು ಆಟಿಕೆ ಕೊಳ್ಳುವ ತವಕ. ಹೇಗೆಂಬ ಚಿಂತೆ? ಶಾಲೆಗೆ ಹೋಗಲು ನೀಡುವ ಹಣವನ್ನು ನೆಡದೇ ಹೋಗಿ ಉಳಿಸುವುದು. ಅಡುಗೆಗೆ ಸಹಾಯಕರಾಗಿ ಹೋಗುವುದು. ಬಡಿಸಲು ಹೋಗುವುದು, ನಮ್ಮ ಕೆಲಸವಾಗಿತ್ತು.

ನಾವು ಚಿಕ್ಕವರಿದ್ದಾಗ ನಮ್ಮಜ್ಜಿ ಮನೆಯ ಹತ್ತಿರದಲ್ಲೇ ಅಜ್ಜಿಯ ಅತ್ತೆಯೊಬ್ಬರಿದ್ದರು. ಶಿಕ್ಷಕಿಯಾಗಿ ನಿವೃತ್ತರಾದವರು. ಅವರಿಗೆ ನಡೆಯಲಾಗುತ್ತಿರಲಿಲ್ಲ. ದೊಡ್ಡ ಮನೆ, ದೊಡ್ಡ ಜಾಗ, ನಿವೃತ್ತಿ ವೇತನ ಎಲ್ಲವೂ ಇತ್ತು. ನೋಡಿಕೊಳ್ಳಲು ಮಾತ್ರ ಯಾರಿರಲಿಲ್ಲ. ಗಂಡ ಯಾವಾಗಲೋ ತೀರಿ ಹೋಗಿದ್ದರು. ಮಕ್ಕಳಿರಲಿಲ್ಲ. ನಮ್ಮಜ್ಜಿಯನ್ನು ಗೋಳು ಹೊಯ್ದುಕೊಂಡ ಅವರು ಆಗ ಅಜ್ಜಿಯನ್ನೇ ಅವಲಂಬಿಸಿದ್ದರು. ರಜೆ ಬಂದಿತೆಂದರೆ ಅಜ್ಜಿಗೆ ಅವರ ಸೇವೆಯಿಂದ ಮುಕ್ತಿ. ನಮ್ಮ ಸೇವೆ ಶುರು. ದಿನಾಲೂ ಬೆಳಗ್ಗೆ ಚಹ, ಮಧ್ಯಾಹ್ನ ಊಟ, ಸಂಜೆಗೆ ಚಹ ಇಷ್ಟನ್ನು ಹೋಟೆಲ್ಗೆ ಹೋಗಿ ತಂದು ಕೊಡಬೇಕಿತ್ತು. ಒಂದಿನಕ್ಕೆ ನಮಗೆ, ಅಂದರೆ ನನ್ನಿಬ್ಬರು ತಮ್ಮಂದಿರು ಶ್ರೀಕಾಂತ, ಶ್ರೀಪತಿಗೆ ಸೇರಿ ತಲಾ ನಾಲ್ಕಾಣೆ ಕೊಡುತ್ತಿದ್ದರು. ಆಟದ ನಡುವೆಯೂ ಆಟಿಕೆ ಆಸೆಗೆ ದಿನಾಲೂ ಚಹ ಸೇವೆಗೆ ಹೋಗುತ್ತಿದ್ದೆವು. ಸೇವೆ ಜೊತೆಗೊದಿಷ್ಟು ಹಣ ಸಂಪಾದನೆಯೂ ಆಗುತ್ತಿತ್ತು. ಆಟಿಕೆ ಕೊಂಡು ವಿಶಾಲ ಹರವಿನ ಅಜ್ಜಿ ಮನೆಯಲ್ಲಿ ಆಡುವ ಸಂತೋಷವೇ ಬೇರೆ. ಎಷ್ಟೋ ವರ್ಷ ಅವರಿಗೆ ಚಹ ಸೇವೆ ಮಾಡಿದೆವು. ಜಾತ್ರೆ ಮುಗಿದ ಮೇಲೆ ನಾವು ಮೂವರೂ ಹೊರಡುತ್ತಿದ್ದೆವು. ಕಣ್ಣೀರಾಗಿ ಅಮ್ಮಮ್ಮ ನಮ್ಮನ್ನು ಬೀಳ್ಕೊಡುತ್ತಿದ್ದರು. ಒಲ್ಲದ ಮನಸಿನಿಂದ ನಮಗೆ ಮಾವ, ಅತ್ತೆಯೂ ಪ್ರೀತಿಯ ವಿದಾಯ ಕೋರುತ್ತಿದ್ದರು. ಜಾತ್ರೆ ನೋಡಿ ಆಟಿಕೆಯೊಂದಿಗೆ ಮರಳುತ್ತಿದ್ದೆವು. ಜಾತ್ರೆ ಎಂದರೆ ಆಟಿಕೆ, ಅಮ್ಮಮ್ಮ ಹಾಗೂ ಅವರ ಅತ್ತಿಗೆ ನೆನಪಾಗುತ್ತಾರೆ.

ಜಾತ್ರೆ ಎಂದರೆ ಈಗ ಆಗಿನಷ್ಟು ಕುತೂಹಲ ಉಳಿದಿಲ್ಲ. ಬಹುಶಃ ನಾವು ದೊಡ್ಡವರಾದೆವೆಂದು ಕಾಣುತ್ತೆ. ದ ಲಾ ಆಪ್ ಮಾಜರ್ಿನಲ್ ಯುಟಿಲಿಟಿ ಜಾತ್ರೆಗೂ ಅನ್ವಯಿಸುತ್ತೆ ಅನಿಸಲಿಕ್ಕೆ ಶುರುವಾಗಿದೆ. ಕಳೆ ಕಳೆದುಕೊಂಡ ಬೈಂದೂರು ಸಪ್ಪಗೆ ಕುಳಿತಿದೆ. ನನ್ನ ಬಾಲ್ಯದ ಗೆಳೆಯರಿಬ್ಬರೂ ಈಗ ಬದುಕಿನ ಸಂತೆಯಲ್ಲಿ ಕಳೆದುಹೋಗಿದ್ದಾರೆ!
ಶ್ರೀಧರ್. ಎಸ್. ಸಿದ್ದಾಪುರ.
ರಥಬೀದಿ, ಸಿದ್ದಾಪುರ ಅಂಚೆ,
ಕುಂದಾಪುರ ತಾಲೂಕು.
ಉಡುಪಿ ಜಿಲ್ಲೆ-576229.

Tuesday, March 24, 2020

'ಅಂತರಂಗ'ದಲ್ಲಿ ಅನಂತ ಪಯಣ...



ನಾವು ಯಾವಾಗ ನಮಗೋಸ್ಕರ ಜೀವಿಸುತ್ತೇವೆ? ನಮ್ಮ ಜೀವಿತದಲ್ಲಿ ನಡೆಯುವ ಘಟನೆಗಳಿಗೆ ಏನಾದರೂ ಕಾರ್ಯಕಾರಣ ಸಂಬಂಧವಿದೆಯೇ? ಎಲ್ಲರೂ ಮತ್ತೊಬ್ಬರ ಖುಷಿಗಾಗಿ ಹಗಲುವೇಷ ತೊಟ್ಟವರಂತೆ ಬದುಕುತ್ತೇವೆ. ಕೆಲವೊಮ್ಮೆ ನಮ್ಮ ಬದುಕಿನ ಮೇಲೆ ನಮಗೇ ಹಿಡಿತವಿಲ್ಲದೇ ಪರಿತಪಿಸುವಂತೆ ಮಾಡಿಬಿಡುವುದು. ರಾಮಾಯಾಣ ಮತ್ತು ಮಹಾಭಾರತದ ಅನೇಕ ಪಾತ್ರಗಳ ಒಳ ಹೊಕ್ಕು ಬರೆದ ಅಂತರಂಗ ವೆಂಬ ವಿಶಿಷ್ಟ ಕೃತಿಯೊಂದನ್ನು ಓದಿ ಮುಗಿಸಿದಾಗ ನನಗಾದ ಅನುಭವಗಳು. ಅಕ್ಕನಂತಹ ಗೆಳತಿ ಸುರೇಖಾ ಭೀಮಗುಳಿ ಮನಮುಟ್ಟುವಂತೆ ಬರೆದಿದ್ದಾರೆ.
ಶ್ರುತಕೀತರ್ಿ, ಮಾಂಡವಿಯ ಸ್ವಗತಗಳು ನಮಗೆ ಹಾಗನ್ನಿಸದೇ ಇರಲು ಬಿಡಲಾರವು. ಯಾರ್ಯಾರಿಗಾಗಿಯೋ ನಾವು ತೊಟ್ಟ ವೇಷವೇ ನಮಗೇ ಒತ್ತಡವನ್ನುಂಟು ಮಾಡುತ್ತವೆ. ಪ್ರತಿ ಪಾತ್ರವು ಕನ್ನಡಿಯಲ್ಲಿ ತಮ್ಮನ್ನು ತಾವೇ ನೋಡಿಕೊಂಡಂತೆ ಭಾಸವಾಗುವುದು. ಮತ್ತೊಬ್ಬರ ದೃಷ್ಟಿಕೋನದಲ್ಲಿ ಎಲ್ಲವನ್ನು ನೋಡುವುದು ಬಲು ಕಷ್ಟದ ಕೆಲಸವೇ. ಈ ಎಲ್ಲಾ ಕಷ್ಟಗಳನ್ನು ಬಹಳ ಸರಳವಾಗಿ ನಿರೂಪಿಸುತ್ತಾ ಪ್ರತಿ ಪಾತ್ರದ ತುಮುಲಗಳನ್ನು, ಕಷ್ಟಗಳನ್ನು ಅತ್ಯಂತ ಸಶಕ್ತವಾಗಿ ನಮ್ಮ ಮುಂದಿಡುವ ಕ್ರಮ ಬಹಳ ಇಷ್ಟವಾಯಿತು.
ಕೈಕೆಯಿ ತನ್ನ ನಿಲುವಿಗೆ ದುಃಖಿಸುತ್ತಾ ರಾಮನಿಂದ ಸಂತೈಸಲ್ಪಟ್ಟಾಗ ನಾನು ಮತ್ತೊಮ್ಮೆ ತಾಯಿಯಾದೆ ಎಂದು ಉಸುರುವ ಆ ಕ್ಷಣ ಅದೇಕೊ ನನ್ನನ್ನು ಅನೇಕ ದಿನಗಳವರೆಗೆ ಕಾಡುತ್ತಲೇ ಇತ್ತು. ರಾಮನ ನಡೆಯಂತೂ ಅಚ್ಚರಿಯ ಕಡಲಿನಲಿ ತೇಲಿಸಿತು. ಎಷ್ಟು ಉದಾತ್ತವಾಗಿ ರಾಮನನ್ನು ಚಿತ್ರಿಸಿದ್ದಾರೆ. ಬೈರಪ್ಪ ಬರೆದ ಉತ್ತರಕಾಂಡವನ್ನು ಮತ್ತೊಮ್ಮೆ ಓದುವಂತೆ ಮಾಡಿತು. ಅತಿ ಚಿಕ್ಕ ಚಿಕ್ಕ ಪಾತ್ರಗಳನ್ನು ಕಟ್ಟಿಕೊಟ್ಟ ಕ್ರಮ ಅನನ್ಯ. ಅವರೇ ಅಂದಂತೆ ಯಕ್ಷಗಾನದಲಿ ಮಿಂಚಲು ಅವಕಾಶವೇ ಇಲ್ಲದ ಅನೇಕ ಪಾತ್ರಗಳಾದ ರುಮೆ, ಅಂಬಾಲಿಕೆ, ಅಂಬಿಕೆ ಮುಂತಾದವರ ಹಾಜರಿ ಹಾಕಿಸಿದ್ದಾರೆ.
ಕೊನೆಗೂ ಕಾಡುವ ಜಿಜ್ಞಾಸೆ:-
ರಾಮಾಯಾಣದ ಅನೇಕ ಪಾತ್ರಗಳು ಎಲ್ಲವೂ ವಿಧಿ ನಿಯಮಾನುಸಾರ ನಡೆಯುವುದು. ಅಥವಾ ತನ್ನ ಮನೋಬಲಕ್ಕನುಗುಣವಾಗಿ ನಡೆಯುವುದೋ ಎಂಬ ತಾತ್ವಿಕ ಪ್ರಶ್ನೆ ನಮಗೆ ಎದುರಾಗುವಂತೆ ಮಾಡುತ್ತಾರೆ ಸುರೇಖಾ. ಎಲ್ಲಕ್ಕೂ ಕಾರ್ಯ ಕಾರಣ ಸಂಬಂಧವನ್ನು ಕಲ್ಪಿಸುತ್ತಾ ನೀನು ಬರಿ ಪಾತ್ರದಾರಿ ಅಷ್ಟೇ ಎಂದು ನಿರೂಪಿಸುತ್ತಾ, ಮಾನವ ಪ್ರಯತ್ನಗಳಿಗೆ ಬೆಲೆ ಇಲ್ಲವೇ ಎಂಬ ಜಿಜ್ಞಾಸೆಯನ್ನೂ ಹುಟ್ಟು ಹಾಕುತ್ತಾರೆ.
ವಿಭಿನ್ನ ಹೊತ್ತಗೆಯೊಂದನ್ನು ಓದಿದ ಅನುಭವ ನಿಮಗಾಗುವುದರಲ್ಲಿ ಅನುಮಾನವಿಲ್ಲ. ತಡವಾಗಿ ಪ್ರತಿಕ್ರಿಯಿಸುವ ಈ ಲೇಟ್ ಲತೀಪನ ಬಗ್ಗೆ ಕ್ಷಮೆ ಇರಲಿ. ನಮಸ್ಕಾರ.

ಶ್ರೀಧರ. ಎಸ್. ಸಿದ್ದಾಪುರ

Wednesday, March 11, 2020

ಬಾಹು ಬಲಿಗೆ ಹೊಯಿಗೆ ಮಜ್ಜನ!



ಏನಿವತ್ತು ಏನೋ ಹೇಳುತ್ತಾನೆಂದು ಹೆದರ ಬೇಡಿ. ನನ್ನ ಬಾಲ್ಯದ ನೆನಪುಗಳನ್ನು ನಿಮ್ಮ ಮುಂದೆ ಹರವಿ ಕುಳಿತಿರುವೆ ಅಷ್ಟೇ.
ಬಾಲ್ಯದ ನೆನಪು ಮಾಸದ ಹೊಂಬಿಸಿಲು. ಅರಳುವ ಕುಡಿ ಮೊಗ್ಗು. ನವಿರಾದ ನವಿಲು ಗರಿ. ಬಾಲ್ಯ ಕಳೆಗಟ್ಟಿದ್ದು ನನ್ನಮ್ಮನ ತವರೂರು ಬೈಂದೂರೆಂಬ ಕಡಲ ತೀರದಲ್ಲಿ. ನನ್ನ ನೆನಪುಗಳಲ್ಲಿ ಬೆಚ್ಚಗಿರುವ ಬೈಂದೂರು. ರಜೆ ಬಂದರೆ ಚೀಲ ಹಿಡಿದು ಬೈಂದೂರಿಗೆ ಪರಾರಿ. ಹಪ್ಪಳ, ಸಂಡಿಗೆಗಳ ಸುವರ್ಣ ಕಾಲ. ಬಾಲ್ಯದ ನೆನಪಿನ ರತ್ನ ನಿಮ್ಮ ಮುಂದೆ.
ಊರ ಜಾತ್ರೆಯ ಸಮಯ. ನನ್ನ ಚಿಕ್ಕಮ್ಮ ತನ್ನಿಬ್ಬರು ಮಕ್ಕಳೊಂದಿಗೆ ಬೈಂದೂರಿಗೆ ಬಂದಿದ್ದರು. ನಾನು ಮತ್ತು ಅಕ್ಕನೂ ಹೋಗಿದ್ದೆವು. ಮನಸೋ ಇಚ್ಚೆ ಆಡುತ್ತಿದ್ದೆವು. ನಮ್ಮೊಂದಿಗೆ ಶ್ರೀಕಾಂತ, ಅವನ ತಮ್ಮ ಶ್ರೀಪತಿಯೂ ಆಡುತ್ತಿದ್ದ. ಏನೋ ಕಟ್ಟಿಸಬೇಕೆಂದು ಮಾವ ಒಂದಿಷ್ಟು ಹೊಯಿಗೆ ತಂದು ರಾಶಿ ಹಾಕಿದ್ದ. ಎಲ್ಲಿತ್ತೊ ಸಣ್ಣ ತುಂಟತನ, ಜಾಗೃತವಾಯಿತು. ತಮ್ಮನನ್ನು ಒಂದು ಪೀಠದಲ್ಲಿ ಕೂರಿಸಿದೆವು. ಒಂದಿಷ್ಟು ಹೊಯಿಗೆಯನ್ನು ಅವನ ತಲೆಗೆ ಹೊಯ್ದೆವು. ಆತನು ತುಟಿ ಪಿಟಕ್ ಎನ್ನದೇ ಕೂತಿದ್ದು ನೋಡಿ ಮತ್ತೆರಡು ಡಬ್ಬ ಹೊಯಿಗೆಯನ್ನು  ಅವನ ತಲೆಗೆ ಸುರಿದೆವು. ಅವನಿಗೆ ಹೊಯಿಗೆ ಮಜ್ಜನ. ಆತ ಬಾಹುಬಲಿಯಂತೆ ಅಲುಗಾಡದೇ ಕೂತ! ನಡು ನಡುವೆ ದೊಡ್ಡ ತಮ್ಮನ ಮಂತ್ರ ಘೋಷ. ನಾವು ಮಜ್ಜನ ನಡೆಸಿದ್ದೇ ನಡೆಸಿದ್ದು. ಆತನನ್ನು ಕೂರಿಸಿ ಋಷಿ ಮಾಡಿದೆವು. ಒಂದೆರಡು ದಾಸವಾಳವನ್ನು ಅವನ ಕಿವಿಗಿಟ್ಟೆವು. ಆತ ಕಲ್ಲಿನ ಮೂತರ್ಿಯಂತೆ ಅಲ್ಲಾಡದೇ ಕೂತಿದ್ದ! ನಮ್ಮ ನಡುವಿನಲ್ಲಾದ ಕಾಂಟ್ರಾಕ್ಟ್ ಏನೆಂದು ಈಗ ನೆನಪಿಲ್ಲ. ಆತನೇಕೆ ಸುಮ್ಮನೆ ಕೂತಿದ್ದನೆಂಬುದೂ ಗೊತ್ತಿಲ್ಲ!
ಹಪ್ಪಳದ ಕೆಲಸದಲ್ಲಿ ನಿರತರಾಗಿದ್ದ ಚಿಕ್ಕಮ್ಮ ನಾವಾಡುವಲ್ಲಿಗೆ ಬಂದಳು. ತಮ್ಮನಿಗಾದ ಗತಿ ನೋಡಿ ಕಣ್ಣೀರಾದಳು ನೋಡಿ. ಅಮ್ಮನಿಗೆ ನೋಡಲಾಗಲಿಲ್ಲ. ಸಿಟ್ಟು ನೆತ್ತಿಗೇರಿತು. ಅಮ್ಮ ಸಾಕ್ಷಾತ್ ರಣಚಂಡಿಯಾದಳು. ಕಟ್ಟಿಗೆ ತುಂಡನೆತ್ತಿಕೊಂಡು ಅಮ್ಮ ನನ್ನನ್ನು ಅಟ್ಟಿಸಿಕೊಂಡು ಬಂದಳು. ಒಂದು ಪೆಟ್ಟು ಸಾಕಿತ್ತು ನನ್ನ ಕೈಕಾಲು ಊನ ಮಾಡಲು, ಅಷ್ಟು ದೊಡ್ಡದಿತ್ತು ಅದು. ಉಪ್ಪರಿಗೆಯಲ್ಲಿ ತಲೆ ಮರೆಸಿಕೊಂಡೆ. ಉಪ್ಪರಿಗೆಯಲ್ಲೊಂದು ಅಡ್ಡ ದಂಡೆ ಇತ್ತು. ಅಲ್ಲಿ ಉಸಿರಾಡದೇ ಕೂತಿದ್ದೆ. ಅಮ್ಮ ನನ್ನ ಅರಸುತ್ತಾ ಸಿಟ್ಟಿನಲ್ಲಿ ಬುಸುಗುಟ್ಟುತ್ತಾ ಉದ್ದನೇ ಹಜಾರದಂತಿದ್ದ ಉಪ್ಪರಿಗೆಯಿಡಿ ಇಲಿಗಾಗಿ ಅರಸುವ ಬೆಕ್ಕಿನಂತೆ ಹುಡುಕ ತೊಡಗಿದಳು. ಅಡ್ಡ ದಂಡೆಯಿಂದ ಒಮ್ಮೆಲೇ ಸದ್ದಾಗದಂತೆ ದುಮುಕಿ ಪೇರಿ ಕಿತ್ತೆ ನೋಡಿ, ಮತ್ತೆ ಪ್ರತ್ಯಕ್ಷನಾಗಿದ್ದು ಊಟದ ಸಮಯಕ್ಕೇ! ನಾ ಓಡಿದ್ದು ಅಮ್ಮನಿಗೆ ಗೊತ್ತಾಗಲೇ ಇಲ್ಲ. ಇಲಿ ಹುಡುಕುವ ಬೆಕ್ಕಿನಂತೆ ಅಲ್ಲೇ ಹುಡುಕುತ್ತಾ ಸುಸ್ತಾದಳು. ಮುಂದೇ ಹೇಗೆ ಬಚಾವಾದೆನೆಂದು ಈಗ ನೆನಪಿಲ್ಲ. ಎಂದಾದರೂ ನಾವು ಮೂವರು ಪುರುಸೊತ್ತಾದಾಗ ಒಟ್ಟಾಗಿ ನೆನಪನ್ನು ಕೆದಕಿ  ಆಗಾಗ ಖುಷಿ ಪಡುತ್ತೇವೆ. 'ರಣಚಂಡಿ' ಅಮ್ಮನೆಂದು ಈಗಲೂ ಗೇಲಿ ಮಾಡುತ್ತೇನೆ. ತುಂಟ ಮಗನೆಂದು ಆಗ ಅವಳೆನ್ನ ಕಿವಿ ಹಿಂಡುತ್ತಾಳೆ!
ಕಳೆ ಕಳೆದುಕೊಂಡ  ಬೈಂದೂರು ಸಪ್ಪಗೆ ಕುಳಿತಿದೆ. ನನ್ನ ಬಾಲ್ಯದ ಗೆಳೆಯರಿಬ್ಬರೂ ಈಗ ಕೆಲಸದಲ್ಲಿ ಕಳೆದುಹೋಗಿದ್ದಾರೆ!
ಮತ್ತೆ ಬಾಲ್ಯದಲ್ಲಿ ಮೀಯುವಾಸೆ. ಈ ಜಗವು ಪುರುಸೊತ್ತು ಕೊಟ್ಟರೆ. ಪುರುಸೊತ್ತಾದಗ ಬಾಲ್ಯದ ಕತೆಗಳನ್ನೆಲ್ಲಾ ನಿಮ್ಮ ಮುಂದೆ ಹರವಿ ಕೂರಬೇಕು. ಸಿಗುವಿರಾ ಇನ್ನೊಮ್ಮೆ ವಿರಾಮದಲ್ಲಿ?


ಶ್ರೀಧರ್. ಎಸ್. ಸಿದ್ದಾಪುರ.

ವಾರೆ ನೋಟ

ಜಾರುಬಂಡಿ ಜಲಪಾತದ ದಾರಿಯಲ್ಲಿ…..

 ಮೌನ ಮಳೆ ಮತ್ತು ಪ್ರೀತಿಗೆ ಮಾತ್ರ ಚಿಗುರಿಸುವ ತಾಕತ್ತಿರುವುದು. ಅಂತಹ ಹೊಸತೊಂದು ನಡಿಗೆಯ ಮೌನದಲಿ ಚಿಗುರಿದ ಹೊಸ ಅಧ್ಯಾಯ. ಯಾವುದೋ ಕಲಾಕಾರ ಕೆತ್ತಿಟ್ಟಂತಹ ಊರು. ಕಲಾ ನ...