Monday, December 28, 2020

ಜೀವಂತ ಸೇತುವೆಗಳ ಸೆರಗು!-ನಾನ್ ಬ್ಲಾಂಗ್!

ನಾಲಗೆ ಹೊರಳದ ನಾಡಿನಲ್ಲಿ ಮೂರು ದಿನ...

ಸಂಪುಟ-೩




ಅದೇಕೋ ಗೊತ್ತಿಲ್ಲ ಸಣ್ಣ ಸಣ್ಣ ಊರುಗಳ ಸೆಳೆತವೇ ವಿಚಿತ್ರ. ದೊಡ್ಡ ಶಹರಕ್ಕಿಂತ ಪುಟಾಣಿ ಊರುಗಳೇ ನನಗಿಷ್ಟ. ಒಂದೆರಡು ಅಂಗಡಿ ಬಿಟ್ಟರೆ ಮತ್ತೇನೂ ಇಲ್ಲಿಲ್ಲ!  ಮಿಕ್ಕೆಲ್ಲವೂ ಮೊಗೆವಷ್ಟು ಇವೆ.




ಎಲ್ಲರೂ ಎಲ್ಲರಿಗೂ ಪರಿಚಯಸ್ಥರು. ಅಪರಿಚಿತತೆ ಎಂಬುದೇ ಇಲ್ಲಿ ಇಲ್ಲ. ಮಳೆಗೆ ಮನ ತಣಿಸಿದ ಭಾವದಲ್ಲಿರುವ ಜನ. ಹಾಸಿ ಹೊದ್ದು ಮಲಗಿ ಮಿಗುವಷ್ಟು ಸಮಯ. ನೆಟ್ಟಿನಲೇ(ಇಂಟರ್ ನೆಟ್)  ನೇತಾಡಿಕೊಂಡಿರಬೇಕಾದ ಅಗತ್ಯತೆ ಇಲ್ಲ. ಡಾಟಾ ಮುಗಿವ ಚಿಂತೆ ಇಲ್ಲ. ಝರಿ, ಕೊಳ, ಹೊಳೆಯ ಸಾನಿಧ್ಯವಿದ್ದರಂತೂ ಇನ್ನೂ ಅಪ್ಯಾಯಮಾನ. ದೊಡ್ಡ ಸೌಲಭ್ಯಗಳೂ ಇಲ್ಲ. ಸಣ್ಣ ಊರು ಕೊಡುವ ಕುಷಿ ಮೆಟ್ರೋಪಾಲಿಟನ್
 ನೀಡದು. ಅಲ್ಲಿ ಎಲ್ಲವಿದ್ದು ಒಂಟಿ ಎಂಬ ಭಾವ. ಸಣ್ಣ ಊರುಗಳಲ್ಲಿ ಏನಿಲ್ಲದೆಯೂ ಸಂತೃಪ್ತ ಭಾವ. 
ಇಲ್ಲಿ ಸಣ್ಣ ಪುಟ್ಟ ಜಗಳಗಳಿರಬಹುದು. ಅದರ ಎರಡರಷ್ಟು ನೆಮ್ಮದಿ ಇದೆ. ದೈವತ್ವಕ್ಕೆ ಸಮಾನವಾದ ಶುಚಿತ್ವವಿದೆ. ಬೇಜಾರು ಕಳೆಯಲು ಹಸಿರುಕ್ಕಿಸುವ ಮರಗಳಿವೆ. ಸಂಬಂಧಗಳೂ ಮರಗಳಂತೆ ಹಸಿರಾಗಿವೆ. ನಾಳೆಗಳ ಬರವಸೆ ಇದೆ. ಆಪತ್ಕಾಲಕ್ಕಾಗುವ ನೆಂಟರಿದ್ದಾರೆ. ಇಂತಹ ಊರುಗಳಲ್ಲಿ ಹುಟ್ಟಿ ಬರಲು ಪುಣ್ಯ ಮಾಡಿರಬೇಕಷ್ಟೆ. ಇಂತಹ ಸಣ್ಣ ಊರಿನ ಸೆರಗಿಡದ ಹಸಿ ಬಿಸಿ ಅನುಭವವೇ ಈಗ ನಿಮ್ಮ ಮುಂದೆ.

ಗೆಳೆಯ ನಾಗರಾಜ್ ನಾನ್ ಬ್ಲಾಂಗ್ ಊರಿಗೆ ಹೋಗೋಣ ಎಂದು ಹೇಳಿದರೂ ಈ ಹೆಸರು ನನ್ನ ಸುಲಭದ ನೆನಪಿಗೆ ದಕ್ಕದು. ಶಿಲ್ಲಾಂಗ್ನಿಂದ ಡಾಕಿಗೆ ಹೋಗುವ ದಾರಿಯಲ್ಲೇ ಒಂದರ್ದ ಗಂಟೆಯ ದಾರಿಯಲ್ಲಿ ಚಲಿಸಿದರೆ ಪುಟಾಣಿ ಗ್ರಾಮ 'ನಾನ್ ಬ್ಲಾಂಗ್!'. ಹೆಸರ ತಜರ್ುಮೆಗೆ ನಿಲುಕದ ಹಳ್ಳಿ. ತಪ್ಪಿದ್ದರೆ ಕ್ಷಮಿಸಿ. ಕಾಡಿನ ಪುಟಾಣಿ ಬಳ್ಳಿ. ಊರಿನ ಅನುಕೂಲಕ್ಕೆ ಮಾಡಿಕೊಂಡ ವಿಚಿತ್ರ ಜೀವಂತ ಸೇತುವೆಗಳನ್ನು ಮಾತನಾಡಿಸುವ ಮಾತಾಗಿತ್ತು. 
 ನಾಗರಾಜ್ನ 'ಖಾಸಿ' ಭಾಷೆ ಮಾತನಾಡಬಲ್ಲ ಗೆಳೆಯರೂ ಬಂದಿದ್ದರು. ಶಿಲ್ಲಾಂಗನ ಮುಖ್ಯ ರಸ್ತೆಯಿಂದ ಬಲಕ್ಕೆ ಹೊರಳಿ ಹರಡಿಕೊಂಡ ಕಾಲು ಹಾದಿ ಹಿಡಿಯಲು ಸುಮಾರು ಅರ್ಧ ತಾಸು ಬೇಕಾಯ್ತು. ಊರ ಬಾಗಿಲಲಿ ಸಿಕ್ಕ ಇಬ್ಬರು ಖಾಸಿ ಮಂದಿಯನ್ನು ಜೊತೆ ಮಾಡಿಕೊಂಡೆವು.
ನೀರವ ಏಕಾಂತದಲಿ ಇನಿಯನ ಬರುವಿಕೆಗೆ ಕಾದು ಕುಳಿತಂತಿರುವ ಒಂಟಿ ಮನೆಗಳು. ಮನೆ ಎದುರಿಗೆ ಬಿದರ ಬೇಲಿಯಲಿ ನಿಂತು ಇಣುಕುವ ಪುಟಾಣಿ ಪೋರರು. ರಗ್ಗು ಹೊದ್ದುಕೊಂಡೆ ಬೀಡಿ ಎಳೆವ ಮುಗ್ಧ ಜನರ ವಿಚಿತ್ರ ನೋಟ. 
ಚಳಿಗೆ ಪ್ರಿಯತಮೆಯ ಅಪ್ಪುಗೆಯಂತಹ ಸೂರ್ಯ ಮಾಮನ ಬಿಸಿಲು. ಪ್ರತಿಯುಸಿರಿಗೂ ಏಲಕ್ಕಿಯ ಘಮಲು. 




ದೂರದಲ್ಲಿ ಕಾಣುವ ಹಳ್ಳಿ. 
ಅರಳಿನಿಂತ ಮುಖಾರವಿಂದವನು ಹೊತ್ತು 9ರ ಹೊತ್ತಿಗೆ ನಾನ್ ಬ್ಲಾಂಗ್ನ ಹೊರಳು ದಾರಿ ಎದುರಿಗಿದ್ದೆವು. ನಿರುದ್ದೀಶವಾಗಿ ನೇತುಬಿದ್ದ 'ನಾನ್ ಬ್ಲಾಗ್' ಹಳ್ಳಿಗೆ ದಾರಿ ಎಂಬ ಫಲಕ. ಮಳೆರಾಯ ರಾತ್ರಿ ಬಂದು ದಾರಿ ತೊಳೆದಿಟ್ಟಿದ್ದ. ಕೆಂದುಟಿ ಹೊತ್ತು, ನಮ್ಮನ್ನು ಹಿಂದಿಕ್ಕಿ, ಮತ್ತೆಲ್ಲೋ ಹೊರಟ ಅರವತ್ತರ ಹರಯದ ಯುವತಿ! ನಮಗೂ ಮೇಘಾಲಯದ ಎಲೆ ಅಡಿಕೆ ತಿನ್ನಿಸಿದಳು. ಬೆನ್ನ ಮೇಲೆ ಬೆತ್ತದ
 ಚೀಲ. ಉಳಿದ ಪ್ರಶ್ನೆಗಳ ಸರಪಳಿ. ಭಾಷಾ ತೊಡಕು.
ಸರಿ ಸುಮಾರು 5-6 ಕಿ.ಮೀ ಉದ್ದದ ಪ್ರಪಾತದ ಹಾವಿನ ಹಾದಿಗೆ ಅವರಿಬ್ಬರು ತಂದು ನಿಲ್ಲಿಸಿ ಇಳಿಯಿರಿ ಎನ್ನುವುದೆ! ಅಕ್ಷರಶಃ ಆತ್ಮಹತ್ಯೆಗೆ ಸಜ್ಜಾದವರಂತೆ ನಿಂತುಬಿಟ್ಟೆವು. ನಮ್ಮ ಗ್ರಹಚಾರಕ್ಕೆ ಬುತ್ತಿ ಗಂಟು ಮರೆತು ಗಾಡಿಯಲ್ಲೇ ಬಿಟ್ಟು ಬಂದಿದ್ದೆವು. ಇನ್ನೇನು ಮಾಡುವುದು ಬಂದಾಯಿತೆಂದು ಏರಿಳಿವ ಸಾಹಸಕ್ಕೆ ಅಂಟಿಕೊಂಡೆವು. 
ಬಿದಿರ ಹಿಂಡಿಲುಗಳ ನಡುವೆ ಪ್ರಪಾತದ ಹಾದಿ ನುಂಗುವಂತೆ ಬಾಯಿ ಕಳೆದಿತ್ತು. ಅಬ್ಬಾ ಎನಿಸುವ ಇಳಿಜಾರಿಗೆ ಮುಖಮಾಡಿದ್ದೆವು. ಹೆಜ್ಜೆ ಜಾರಿದರೆ ಪ್ರಪಾತದ ಆ ತುದಿಗೆ. ಯಾರೋ ಬೇಕಂತಲೇ ಬೇಕಾಬಿಟ್ಟಿ ಎಸೆದ ಅನಾಥ ಅಂಕುಡೊಂಕಿನ ನಡು ಹರಿವ ನಟೋರಿಯಸ್ ಹಾದಿ. 


ಇಳಿಕೆಯೇ ಎದೆ ಹಾರಿಸುತ್ತೆ.. 

ಎಲ್ಲೋ ಹೊರಟ ಮುದುಕಿ.. 
ಹಳ್ಳಿಯಿಂದ ಕೇಳುವ ಮಕ್ಕಳ ಕೇಕೆ. ದೊಡ್ಡವರ ದನಿಯ ಪ್ರತಿಧ್ವನಿ! ಗಾಳಿಗೆ ಮೂಗೊಡ್ಡಿದರೆ ಕಾಡು ಏಲಕ್ಕಿಯ ಘಮಲು. ಇಳಿವ ಪ್ರತಿ ಹೆಜ್ಜೆಯಲೂ ಸೊಂಟದ ನೆಟ್ಟು ಬೊಲ್ಟುಗಳ ಟಿಕ್ ಟಿಕ್ ಸದ್ದು. ಬಾಕಿ ಎಲ್ಲಾ ಮೌನ.
	ಮೊದಲಿದ್ದ ದೊಡ್ಡ ಮರಗಳ ದಟ್ಟನೆ ಕಡಿಮೆಯಾಗಿ ಬಿದಿರ ಹೊದ್ದ ಬೆಟ್ಟ ಸಾಲು ಶುರುವಾಗಿತ್ತು. ಇಲ್ಲಿನ ಬಿದಿರಿಗೆ ಅದರದೇ ಆದ ಅಸ್ಮಿಯತೆ ಇದೆ. ತೀರಾ ಉದ್ದವಾಗಿ ಬೆಳೆಯದ ಕುಳ್ಳ ಜಾತಿಯ ಸದೃಡವಾದ ಬಿದಿರು ಇಲ್ಲಿನದು.  ಸ್ಥಳೀಯ ಹೆಂಗಸರು ಮತ್ತು ಗಂಡಸರು ಎಲೆ ಅಡಿಕೆ ಜಗಿಯುತ್ತಲೊ, ಹಾಡು ಕೇಳುತ್ತಲೊ, ಕೆಲವರು ಮಕ್ಕಳನ್ನು ತಮ್ಮ ಸೊಂಟಕ್ಕೆ ಸಿಕ್ಕಿಸಿಕೊಂಡು ಆರಾಮಾಗಿ ಇಳಿದು ಹೋಗುತ್ತಿದ್ದರು! ಕೆಲವರು ನಿಧಾನಕ್ಕೆ ಏರಿ ಬರುತಲಿದ್ದರು! ಅವರು ತಮ್ಮೊಳಗೆ ಚಯಾ ಪಯಾವೆಂದು ಹರಟುತ್ತಿದ್ದ ಖಾಸಿ ನುಡಿಗಳೊಂದೂ ನನ್ನ ಮಿದುಳಿನಲ್ಲಿ ದಾಖಲಾಗಲೇ ಇಲ್ಲ! ನಮ್ಮ ನಡುವಿನ ಸಾಮಾನ್ಯ ಶಬ್ದ ಶಿಲ್ಲಾಂಗ್ ಒಂದೇ ಎಂದು ಗೆಳೆಯ ನಾಗರಾಜ್ ತಮಾಷಿ ಮಾಡುತ್ತಾ ಇಳಿಯ ತೊಡಗಿದೆವು. ಪುಣ್ಯಕ್ಕೆ ಶಿಲ್ಲಾಂಗ್ ಒಂಟಿ ಪದವು ನಮ್ಮ ನಾಲಗಗೆ ತೊಂದರೆ ಕೊಡದೆ ಉಳಿದು ಕೊಂಡಿದ್ದು ನಮ್ಮ ಅದೃಷ್ಟವೇ!

ಇಳಿಯುವ ಸರ್ಕಸ್ ನಲ್ಲಿ ನಿರತ ನಮ್ಮ ಗುಂಪಿನ ಲಕ್ಷ್ಮೀ ನಾರಾಯಣ್ 


ಬಿದಿರ ಹಿಂಡಲುಗಳ ನಡುವಿನ ಹರ ದಾರಿ. .. 

ಅರಳಿನಿಂತ ಕಾಡು ಹೂ..  





ಖಾಸಿ ಜನಾಂಗದ ಅಜ್ಜನೊಬ್ಬ ನಮ್ಮಿಬ್ಬರನ್ನು ( ನಾನು ಗೆಳೆಯ ನಾಗರಾಜ್) ತಬ್ಬಿಕೊಂಡು ಖುಷಿಪಟ್ಟ! ಕಣಿವೆಯ ಎಡ ಮತ್ತು ಬಲ ಮಗ್ಗಲುಗಳಲ್ಲಿ ಜೀವಂತ ಸೇತುವೆಗಳ ತೋರಣಗಳನ್ನೇ ನಿಮರ್ಿಸಿದ್ದಾರೆ ಇಲ್ಲಿನ ಸ್ಥಳೀಯರು. ಅರ್ಧ ದಾರಿಗೆ ಕ್ರಮಿಸುತ್ತಲೆ ನಮ್ಮ ತಂಡದ ಲಕ್ಷೀ ನಾರಾಯಣ್ ದಾರಿ ತಪ್ಪಿ ಮುಂದೆ ಹೋಗಿದ್ದರು. ಜೊತೆಯಾದ ಸ್ಥಳೀಯ ಖಾಸಿ ಗೆಳೆಯ 'ಸ್ಮಾಯಿಲ್' ಆತನನ್ನು ಕರೆತರಲು ಪುಟ ಪುಟನೇ ಕೆಳಗೋಡಿ ಕ್ಷಣಾರ್ಧದಲ್ಲಿ ಮೇಲೆ ಬಂದಿದ್ದ. ಇನ್ನೊಬ್ಬ ನಮ್ಮ ಖಾಸಿ ಜೊತೆಗಾರ 'ಸಿಮಜಿನ್' ಕೈಲ್ಲೊಂದು ವಿಚಿತ್ರ ಕತ್ತಿ ಯಾವಾಗಲೂ ತೊನೆದಾಡುತ್ತಲೇ ಇರುತ್ತಿತ್ತು. ಆತ ಮೇಲೆ ಬರುವುದರೊಳಗೆ ಎರಡು ಬೀಡಿ ಎಳೆದು ಬಿಸಾಕಿದ್ದ ಆಸಾಮಿ. 

ಬೆರಗಿನ ಬೇರುಗಳ ಮಾಯಾ ಲೋಕ:-

ಲಕ್ಷ್ಮೀ ನಾರಾಯಣ್ ಮೇಲೆ ಬರುತ್ತಲೇ ಆತನನ್ನು ಜೀವಂತ ಸೇತುವೆಗಳಿರುವ ದಾರಿಗೆ ಹಚ್ಚಿದೆವು. ಇಡಿ ಊರಿಗೂರೇ ಹಳ್ಳ ಕೊಳ್ಳ. ಈ ಕೊಳ್ಳಗಳನ್ನು ದಾಟಿಕೊಳ್ಳಲು ಅವರೇ ರಚಿಸಿಕೊಂಡ ನೂರಾರುವರ್ಷ ಹಳೆಯ ಜೀವಂತ ಸೇತುವೆಗಳು. ಮನುಜನ ಸೃಜನಶೀಲತೆಯ ಪರಾಕಾಷ್ಠೆ. ಸಿಮೆಂಟು ರಾಡುಗಳಿಲ್ಲದ ಕಾಲದಲ್ಲಿ ಬೇರು ನಾರುಗಳನ್ನು ಪಳಗಿಸಿದ ಪರಿ ಅನನ್ಯ. ಆಲದಂತಹ ಮರಗಳನ್ನು ಬಿದಿರಿನ ಬೊಂಬಿನೊಳಗೆ ತೂರಿಸಿ ಮತ್ತೊಂದು ಕಡೆ ಬರುವಂತೆ ನೋಡಿಕೊಳ್ಳುವರು. ಹೀಗೆ ತೂರಿದ ಬೇರಿಗೆ ಆಚೆ ಕಡೆಯ ಮತ್ತೊಂದು ಬೇರಿನೊಂದಿಗೆ ಹೆಣಿಗೆ ಹಾಕಲಾಗುತ್ತದೆ. ಅಂತಹುದೇ ಇನ್ನೊಂದು ಮರದ ಬೇರನ್ನು ಆಚೆಯ ತುದಿಯಿಂದ ಇಚೆಗೆ ಹರಿಯ ಬಿಡಲಾಗುತ್ತದೆ. ಒಟ್ಟು ಎರಡು ದೊಡ್ಡ ಬೇರುಗಳ ಮಹಾ ಜಾಲವೇರ್ಪಟ್ಟು ಒಂದರೊಳಗೆ ಬೆಸೆದು ಸೇತುವೆ ತಯಾರಾಗುತ್ತದೆ. ಕಾಲದ ತೆಕ್ಕೆಯಲಿ ಕರಗದ ಈ ಸೇತುವೆಗಳು ಇನ್ನೂ ಜೀವಂತ. ಇಂತಹ 25 ಸೇತುವೆಗಳಿವೆ ಎಂದ ಖಾಸಿ ಮಾರ್ಗದರ್ಶಕ ಗೆಳೆಯ! ಪ್ರತೀ ಸೇತುವೆಗೂ ಒಂದೊಂದು ಹೆಸರು. ನಾಮಫಲಕ ತೂಗುಹಾಕಲಾಗಿದೆ. ಕೆಲವು ಬೋಡರ್ುಗಳು ಮಳೆ ಗಾಳಿಗೆ ಹಾರಿ ಹೋಗಿವೆ. ಹೀಗೆ ಒಂದಾದ ಮೇಲೊಂದರಂತೆ 8 ಜೀವಂತ ಸೇತುವೆಗಳನ್ನು ನೋಡಿದೆವು. ಪ್ರತಿಯೊಂದು ಮತ್ತೊಂದರಂತಿಲ್ಲ! ಕೊನೆಗೆ ನೋಡಿದ ಎಂಟನೆಯ ಸೇತುವೆಯಂತೂ ಅತ್ಯದ್ಭುತ!





ಊಟವಿಲ್ಲದೆ ಹೊಟ್ಟೆ ಚುರುಗುಟ್ಟುತಲಿತ್ತು. ಅಂತೂ ಸರಪಂಚನ ಮನೆಯಲ್ಲಿ ಚಹ ಸತ್ಕಾರವಾಯಿತು. ಚಹದ ಜೋಡಿ ಬಿಸ್ಕೀಟು ಬಂತು. ಮುಲಾಜಿಲ್ಲದೆ ಹೊಟ್ಟೆಗಿಳಿದ ಬಿಸ್ಕೀಟುಗಳ ಲೆಕ್ಕ ಸಿಕ್ಕಲಿಲ್ಲ. ಮತ್ತೆ ಆಸಾಮಿ ಬಿಸ್ಕೀಟು ಬೇಕೆಂದರೆ ಬರೋಬ್ಬರಿ 4 ರಿಂದ 5 ಗಂಟೆ ನಡೆಯಲೇಬೇಕು. ದುಡ್ಡು ಕೊಟ್ಟರೆ ಬೇಡವೆಂದ. ಪಾಪದವ! 'ನೀವು ನನ್ನ ಅತಿಥಿಗಳು ನಿಮ್ಮಲ್ಲಿ ದುಡ್ಡು ತೆಗೆದುಕೊಳ್ಳುವುದಾ?' ಅವನ ಮುಗ್ಧ ಪ್ರಶ್ನೆ. ಅತಿಥಿ ದೇವೋಭವ. ಹಾಂ ಹೇಳುವುದನು ಮರೆತೆ ಈ ಜಾಗದಲ್ಲೇ ಗುಡ್ಡಗಾಡು ಓಟ ನಡೆಯುವುದು! ನಡೆಯುವಂತಿಲ್ಲ ಓಡಬೇಕು. ಹ್ಹ ಹ್ಹ. ನನ್ನಂಥವರಿಗಲ್ಲ ಬಿಡಿ. ಗುಡ್ಡ ಹತ್ತಿಳಿಯುವುದೇ ಕಷ್ಟ! ಹಂಬಲದ ಬೆಂಬಲವೊಂದೇ ನನ್ನ ಪಾಲಿಗೆ ಉಳಿದಿರುವ ಕೃತತ್ವ ಶಕ್ತಿ.




















ಪೂವರ್ೋತ್ತರ ರಾಜ್ಯಗಳಲ್ಲಿ ಹಗಲು ಬೇಗ ಇಳಿಯುವುದರಿಂದ ಮೂರಕ್ಕೆ ವಾಪಾಸು ಹೊರಡಲೇ ಬೇಕಾಯ್ತು. ದಾರಿ ಸನಿಹದ ಎರಡು ಬಿಳಲುಗಳ ಸೇತುವೆಗೆ ಇನ್ನೊಮ್ಮೆ ಬರುತ್ತೇವೆಂದು ನಮ್ಮೂರಿನ ದಾರಿ ಹಿಡಿದೆವು. ದಾರಿಯುದ್ದಕ್ಕೂ ತಂದ ಉಂಡೆ ಚಕ್ಕುಲಿಗಳನ್ನು ಹೆಗ್ಗಣಗಳಂತೆ ಹೊಡೆಯುತ್ತಾ, ಹರಟುತ್ತಾ ಗುಡ್ಡವೇರಿದೆವು. ಗುಡ್ಡದ ತುದಿಯಲ್ಲೊಮ್ಮೆ ಕತ್ತಲಾದುದರಿಂದ ದಾರಿ ತಪ್ಪಿ ಮತ್ತೆ ಸರಿ ದಾರಿಗೆ ಬಂದೆವು. ಸುಂದರ ಸೂರ್ಯ ಮಾಮ ಕೆಲಸ ಮುಗಿಸಿ ಮನೆಗೆ ಹೊರಟಿದ್ದ. ಸೂರ್ಯ ಮಾಮನ ಚಂದದ ಪಟ ಒಂದೆರಡು ನೆನಪ ಜೋಳಿಗೆಗೆ ಹಾಕಿಕೊಂಡೆ. 6 ಗಂಟೆಯ ಕಡು ಕತ್ತಲೆಗೆ ಬೆಟ್ಟದ ನೆತ್ತಿಯಲ್ಲಿದ್ದೆವು. ಕಾಲು ಮತ್ತು ಸೊಂಟ ಯಾವೊತ್ತೊ ನನ್ನ ಮಾತು ಕೇಳುವುದನ್ನು ನಿಲ್ಲಿಸಿಯಾಗಿತ್ತು!
	ಸ್ಫಟಿಕ ಶುಭ್ರ ನೀರಿನ ಇಲ್ಲಿನ ಜಲಧಾರೆಗಳನ್ನು ನೋಡುವ ಹಂಬಲದೊಂದಿಗೆ ಅಂದಿನ ದಿನಕ್ಕೆ ಮಂಗಳಹಾಡಿದೆವು. ನಿಮ್ಮ ಕಿಸೆಗೆ ಭಾರವಾಗದ ಅನೇಕ ಹೋಟೆಲುಗಳು ರೆಸ್ಟುರೆಂಟ್ಗಳು ಶಿಲ್ಲಾಂಗಿನಲ್ಲಿದೆ. ಯಾಕಿನ್ನು ತಡ?



ಶ್ರೀಧರ್. ಎಸ್. ಸಿದ್ದಾಪುರ.
						ರಥ ಬೀದಿ ಸಿದ್ದಾಪುರ.
						ಕುಂದಾಪುರ ತಾಲೂಕು
						ಉಡುಪಿ ಜಿಲ್ಲೆ-576229.

Wednesday, December 23, 2020

ಕಾಣದ ಕೀಟ ಲೋಕ..



ಸೂಕ್ಷ್ಮ ಅವಲೋಕಿಸುವವರಿಗೆ ಮಾತ್ರ ಪ್ರಕೃತಿಯ ತನ್ನ ವಿಸ್ಮಯಗಳನ್ನು ಬಿಟ್ಟು ಕೊಡುತ್ತೆ. ಇಲ್ಲಿ ಎಲ್ಲವನ್ನೂ ನಮ್ಮ ಮೂಗಿನ ನೇರಕ್ಕೆ ವಿಶ್ಲೇಷಣೆ ಮಾಡುವಂತಿಲ್ಲ. ನೋಡುವುದರ ಹೊಸ ಅರ್ಥಕೊಡುವಂತೆ ನೋಡಬೇಕು. ಅತಿ ಸೂಕ್ಷ್ಮವಾಗಿ ಅವಲೋಕಿಸಿಬೇಕು. ಪುಸ್ತಕಗಳನ್ನು ಪುನರಾವಲೋಕನ ಮಾಡಬೇಕು, ಸಮಾನ ಮನಸ್ಕರೊಂದಿಗೆ ಚರ್ಚಿಸಬೇಕು ನಂತರವೇ ಒಂದು ನಿರ್ಧಾರಕ್ಕೆ ಬರಬೇಕು. ಹೀಗೆ ಮಾಡಿದಾಗಲೂ

 ಕೆಲವು ವಿಚಾರಗಳು ಗೊಂದಲ ಪೂರ್ಣವಾಗಿಯೇ ಉಳಿಯಬಹುದು.  



ಕಳೆದ ಮಳೆಗಾಲದಲ್ಲಿ ವಿಚಿತ್ರ ಜೀವಿಯೊಂದನ್ನು ಕಂಡೆ. ಬಸವನ ಹುಳುವೊಂದು ಸಣ್ಣ ಟೊಂಗೆಗೆ ತನ್ನಿಡೀ ದೇಹವನ್ನು ನೇತು ಹಾಕಿಕೊಂಡಿತ್ತು. ಆದರೆ ಅದರ ಮೇಲ್ಬಾಗವು ಬಸವನ ಹುಳದ ಮೇಲ್ಬಾಗಕ್ಕೆ ಒಂಚೂರು ಹೋಲಿಕೆಯಾಗುತ್ತಿರಲಿಲ್ಲ ಜೊತೆಗೆ ಅದಕ್ಕೆ ಕಣ್ಣುಗಳಿರಲಿಲ್ಲ!! ಜೀವಿಯ ಕೆಳಭಾಗ ಬಸವನ ಹುಳುವಿನಂತಿದ್ದು, ಮೇಲ್ಬಾಗ ಮಾತ್ರ ಯಾವುದೋ ಲಾರ್ವೆಯನ್ನು ಹೋಲುವಂತಿತ್ತು. ಏನಿದು ವಿಚಿತ್ರ

 ಜೀವಿ ಎಂದು ಚಕಿತನಾದೆ. ಮೇಲಿನ ಭಾಗವನ್ನು ಹೋಲುವ ಜೀವಿಯನ್ನು ಅನೇಕ ಬಾರಿ ನೋಡಿದ್ದೆ. ನಮ್ಮ ಕಡೆ ಜವಳೆ ಎಂದು ಕರೆಯುವ ಜೀವಿಯನ್ನು ಹಿಡಿದು ತಿನ್ನುತ್ತಿರುವ ದೃಶ್ಯವನ್ನು ಸೆರೆ ಹಿಡಿದಿದ್ದೆ. ಆದರೂ ಅನುಮಾನ ಬಂದು ಹುಡುಕಾಡಿದೆ. ಕೆಲವು ಪುಸ್ತಕ, ಗೂಗಲ್ನ ಸಹಾಯ ಯಾಚಿಸಿದೆ. ಅಚ್ಚರಿಯೊಂದು ಕಾದು ಕೂತಿತ್ತು. ಬಸವನ ಹುಳುವನ್ನು ತಿನ್ನುವ ಜೀವಿಗಳ ಪಟ್ಟಿ ತಯಾರಿಸಿದೆ. ಕಪ್ಪೆ

, ಪಕ್ಷಿಗಳು, ಸರಿಸೃಪಗಳು ಮೊದಲ ಪಟ್ಟಿಯಲ್ಲಿದ್ದವು. ಇವಲ್ಲದೇ ಮಿಂಚು ಹುಳುವಿನ ಲಾರ್ವಾ ಕೂಡ ಬಸವನ ಹುಳುವನ್ನು ಇಷ್ಟ ಪಟ್ಟು ತಿನ್ನುತ್ತೆ ಎಂದು ಗೊತ್ತಾಗುತ್ತಲ್ಲೇ ಸಣ್ಣ ಮಿಂಚೊಂದು ಮೆಡುಲಾ ಅಬ್ಲಾಂಗೇಟದಿಂದ ಹೊಡೆಯುತ್ತಲೇ ಈ ಚಿತ್ರದ ಹೊಸ ಅರ್ಥವೊಂದು ಬಿಚ್ಚಿಕೊಳ್ಳುತ್ತಾ ಸಾಗಿತು.

ಮಿಂಚು ಹುಳುವಿನ ಲಾರ್ವವೊಂದು ಬಸವನ ಹುಳುವೊಂದರ ಚಿಪ್ಪೊಳಗೆ ಸಾಗಿ ತಿಂದು ಮುಗಿಸುವ ಕಾಯಕದಲ್ಲಿ ತಲ್ಲೀನನಾಗಿತ್ತು. ಗಂಟೆಗಳವರೆಗೆ ಅದನ್ನೇ ಹಿಡಿದು ಕೊಂಡಿತ್ತು. ಎಂಥಾ ವಿಸ್ಮಯವಲ್ಲವೇ?

      ಶ್ರೀಧರ್. ಎಸ್. ಸಿದ್ದಾಪುರ.


Thursday, December 17, 2020

ಮಿಸ್ ಮಾಡದೇ ತಿನ್ನಿ ಮಿಸಳ್ ಬಾಜಿ

 



 

ಮಳೆಗಾಲದ ಒಂದು ದಿನ ನಾನು ಮತ್ತು ನಾಗರಾಜ್ ಉತ್ತರಕನ್ನಡದ ಎರಡು ಜಲಧಾರೆಗಳನ್ನು ನೋಡೋದಕೆಂದು ಹೋಗಿದ್ವಿ. 



ಶಿರಸಿಯಿಂದ ಯಾಣ ದಾರಿಯಲ್ಲಿರುವ ಮಂಜುಗಣಿ ದೇವಸ್ಥಾನದಲ್ಲಿ ವಿಶೇಷ ತಂಬಳಿ ಮತ್ತು ಉತ್ತರ ಕನರ್ಾಟಕದ ವಿಶೇಷ ಅಕ್ಕಿಯ ಊಟ ಬಡಿಸಿದ್ದರು.



ಮೂರು ಮೂರು ಬಾರಿ ತಂಬಳಿ ಕೇಳಿ ಹಾಕಿಸಿಕೊಂಡು ಉಂಡಾಡಿ ಗುಂಡರಂತೆ ನಾಚಿಕೆ ಬಿಟ್ಟು ಉಂಡು ಹೊರಟೆವು ಬೆಣ್ಣೆ ಜಲಧಾರೆಗೆ.


ಒಂದೆರಡು ಕಿಲೋಮೀಟರ್ ನೆಡೆದು ಬೆಣ್ಣೆ ಜಲಪಾತದ ಬುಡದವರೆಗೆ ಹೋಗಿ, ಸಿಡಿಯುವ ನೀರ ಹನಿಗೆ ಮುಖ ಮಜ್ಜನ ಮಾಡಿಸಿಕೊಂಡು; ಅಲ್ಲಿಂದ ಮೇಲಕೆ ಹತ್ತಿ ಬಂದಾಗ ಬಲ್ ನನ್ನ ಮಗನ ಹೊಟ್ಟೆ ಚುರು ಚುರು ಎಂದಿತ್ತು! 


ನಮ್ ಜೀಪ್ ಡ್ರೈವರ್ಗೂ ನಮ್ ಹೊಟ್ಟೆ ಬಾಕತನ ಇಷ್ಟವಾಗಿರಬೇಕು. ಮೋಸ್ಟಲಿ ಅವನೂ ಹೊಟ್ಟೆಬಾಕನಿರಬೇಕು. ಅವನ ಮುಂದೆ ಪ್ರಸ್ತಾಪಿಸಿದ್ದೇ ಟಣ್ ಎಂದು 'ಅವರ್ ನೆಕ್ಸ್ಟ್ ಡೆಸ್ಟಿನೇಶನ್ ಈಸ್ ಶ್ಯಾನುಭೋಗರ ಕ್ಯಾಂಟಿನ್' ಎಂದು ಬಿಡೋದೆ. 


ನನಗೆ ಒಳಗೊಳಗೆ ಖುಷಿಯಾದರೂ ಸ್ವಲ್ಪ ನಾಚಿಕೆಯಾಯಿತು; ನಾಲಿಗೆಯ ಜೊಲ್ಲು ಸಲೀಸಾಗಿ ಹೊರ ಬಂದಿತ್ತು. 'ಥೂ ನಾಯಿ ಬುದ್ದೀದೆ' ಎಂದು ಬೈದುಕೊಂಡು ನಾಲಿಗೆಯ ಸುಮ್ಮನಿರಿಸಿದೆ. 

ಆದರೂ ಕೇಳಬೇಕಲ್ಲ. ಕ್ಯಾಂಟಿನ್ ಬಂದೊಡನೆ ನಿಲ್ಲಿಸೋಣವೇ ಎಂದು ಕೇಳಿದ ಚಾಲಕ. 'ಹಂ' ಅಂದ್ದಿದ್ದೇ ನಿಲ್ಲಿಸಿಬಿಡೋದೆ! 

ಕ್ಯಾಂಟಿನಲ್ಲಿ ಹಾಜರಿ ಹಾಕಿಯಾಗಿತ್ತು. ನಮ್ಮ ಜೊತೆಗೇನೆ ದೇವಸ್ಥಾನದಲ್ಲಿ ಊಟ ಮಾಡಿದ ಚಾಲಕನಿರುವುದರಿಂದ ದಾಕ್ಷಿಣ್ಯಕ್ಕೆ ಅರ್ಧ ಪ್ಲೇಟ್ ಮಿಸಳ ಬಾಜಿ ಹಾಗೂ ಎರಡು ಕಪ್ ಕಾಫಿಗೆ ಆಹ್ವಾನವಿಟ್ಟೆವು. 


ಹನಿ ಮಳೆ ನೋಡುತ್ತಾ ಕೂತೆವು. ಮಿಸಳಿನ ಜೊತೆಗೆ ಕೊಡುವ ಬಾಜಿಯನ್ನು ಬೇರೆಯಾಗಿ ಕೊಟ್ಟ ಕ್ಯಾಂಟಿನಿನ ಮಾಮ್. ಒಂದು ತುತ್ತು ಮಿಸಳ ಬಾಜಿಯನ್ನು ಬಾಯಿಗೆ ಹಾಕಿದ್ದೆನಷ್ಟೇ; ಅದರ ಮೋಡಿಗೆ

 ನನ್ನ ನಾಲಿಗೆಯ ರುಚಿ ಮೊಗ್ಗುಗಳೆಲ್ಲಾ ಒಮ್ಮೆಲೆ ಯಾರೋ ಬಡಿದೆಬ್ಬಿಸಿದಂತಾಯಿತು. ನಿಜವಾಗಲೂ ಸ್ವರ್ಗ ಸದೃಶ ರುಚಿ ಆ ಮಿಸಳ ಬಾಜಿಗಿತ್ತು. 

ನಮ್ಮ ಜೊತೆಗೇನೆ ದೇವಸ್ಥಾನದಲ್ಲಿ ಊಟ ಮಾಡಿದ ಚಾಲಕನಿರುವುದರಿಂದ ದಾಕ್ಷಿಣ್ಯಕ್ಕೆ ಅರ್ಧ ಪ್ಲೇಟ್ ಮಿಸಳ ಬಾಜಿ ಹಾಗೂ ಎರಡು ಕಪ್ ಕಾಫಿಗೆ ಆಹ್ವಾನವಿಟ್ಟೆವು. ಹನಿ ಮಳೆ ನೋಡುತ್ತಾ ಕೂತೆವು. ಮಿಸಳಿನ ಜೊತೆಗೆ ಕೊಡುವ ಬಾಜಿಯನ್ನು ಬೇರೆಯಾಗಿ ಕೊಟ್ಟ ಕ್ಯಾಂಟಿನಿನ ಮಾಮ್. ಒಂದು ತುತ್ತು ಮಿಸಳ ಬಾಜಿಯನ್ನು ಬಾಯಿಗೆ ಹಾಕಿದ್ದೆನಷ್ಟೇ; ಅದರ ಮೋಡಿಗೆ  ನನ್ನ ನಾಲಿಗೆಯ ರುಚಿ ಮೊಗ್ಗುಗಳೆಲ್ಲಾ ಒಮ್ಮೆಲೆ ಯಾರೋ ಬಡಿದೆಬ್ಬಿಸಿದಂತಾಯಿತು.



ನಿಜವಾಗಲೂ ಸ್ವರ್ಗ ಸದೃಶ ರುಚಿ ಆ ಮಿಸಳ ಬಾಜಿಗಿತ್ತು. ಅವಲಕ್ಕಿಗೆ ಒಂದಿಷ್ಟು ವಿಶೇಷ ಮಸಾಲೆ ಹಾಕಿ ತಯಾರು ಮಾಡಿಟ್ಟುಕೊಂಡಿರುತ್ತಾರೆ. ಅದಕ್ಕೆ ಖಾರಾಸೇವು, ಶಂಕರಪೋಳೆ ಸೇರಿಸಿ ಜೊತೆಗೆ ವಿಶಿಷ್ಟ ರುಚಿಯ ಸಾಂಬಾರು ನೀಡುತ್ತಾರೆ. 'ಮೂಲತಃ ಇದೊಂದು ಮಹರಾಷ್ಟ್ರದ ಕಡೆಯ ತಿಂಡಿ' ಎಂದು ನನ್ನ ಪ್ರೀತಿಯ

 ತಿರಗಾಲ ತಿಪ್ಪ ಗೆಳೆಯ ನಾಗರಾಜ ಹೇಳಿದ. ನನಗೆ ಯಾವ ಫಕರ್ೂ ಕಾಣಲಿಲ್ಲ. ಇದರ ವಿಶಿಷ್ಟ ರುಚಿಗೆ ಮನಸೋತೆ.


ಇನ್ನೊಂದು ಪ್ಲೇಟ್ ಹೇಳೋಣವೆಂದುಕೊಂಡರೆ ಓರೆ ನೋಟದಲ್ಲೇ ಚಾಲಕ ನಮ್ಮನ್ನೇ ನೋಡುತ್ತಿದ್ದಾನೆ. ಜೊತೆಗೆ ಮೀಸೆ ಕೆಳಗಿನ ಕಿರು ನಗೆ ಬೇರೆ. ಇನ್ನೊಮ್ಮೆ ಮಿಸಳ್ ಬಾಜಿ ತಿನ್ನಲೆಂದೇ ಇಲ್ಲಿಗೆ ಬರಬೇಕೆಂದು ಮಾತಾಡಿಕೊಂಡೆವು. ಚಾಲಕ ನಗುತಲಿದ್ದ. ಅನೇಕ ಕಡೆ ಈ ತಿಂಡಿಯನ್ನು ನಾ ಸವಿದಿದ್ದೆ ಆದರೆ ಇಷ್ಟು ರುಚಿಕಟ್ಟಾದ ಮಿಸಳಬಾಜಿ ಮತ್ತೆಲ್ಲೂ ನನಗೆ ತಿಂದ ನೆನಪಿಲ್ಲ್ಲ. 



ಹಾಂ ಈ ಕ್ಯಾಂಟಿನ್ ಇರುವುದು ಶಿರಸಿ ಕುಮುಟಾ ನಡುವಿನ ರಾಗಿ ಹೊಸ ಹಳ್ಳಿ ಎಂಬ ಪುಟ್ಟ ಊರಲ್ಲ್ಲಿ. ಮುಂದಿನ ಸಾರಿ ಈ ಕಡೆ ಬಂದಾಗ ಮಿಸ್ ಮಾಡದೇ ಮಿಸಳ್ ಬಾಜಿ ತಿನ್ನಿ.


Sunday, December 6, 2020

ಮಜೋಲಿ ಎಂಬ ಮಾಯಾನಗರಿ..



ಪಿಸುಗುಡುವ ಆಕಾಶ. ನಿರಭ್ರ ನೀರ ಚಿಲುಮೆಯಲಿ ಬಿದ್ದ ಹೂ ಮಳೆಯ ನೀಲಾಕಾಶ. ಎಳೆದಿಟ್ಟ ಮೀನು ಹಿಡಿವ ಛತ್ರಿಗಳು. ಇಬ್ಬನಿಯಲಿ ಮಿಂದ ರಸ್ತೆ. ಸೂರ್ಯಪ್ಪಂಗೆ ಮೋಡದ ಮರೆ. ರೇಡಿಯೋದಲಿ ಬರುತಿರೊ ಯಾವುದೋ ಅಸ್ಸಾಮಿ ಹಾಡು. ಗೋಪಾಲಕರ ಮೆರವಣಿಗೆ. ದನಕರುಗಳ ಗಂಟೆಯ ನಾದ. "ಹೇಗಿದೆ ನಮ್ಮ ಮಜೋಲಿ" ಎಂಬ ಸೈಕಲ್ ಸವಾರರ ಮುಗ್ಧ ಪ್ರಶ್ನೆ. ಬ್ರಹ್ಮಪುತ್ರ, ಲೂಯಿಟ್ (ಕಿರ್ಕಿಟಿಯಾ) ನದಿಗಳ ಬಳಸು ಹಾರದಂತಿರುವ ದ್ವೀಪ ಅಸ್ಸಾಂನ ಮನೋಹರ ಮಜೋಲಿ.
ಸೋಮಾರಿ ಸೂರ್ಯಣ್ಣ ಕಣ್ಣು ಬಿಟ್ಟಿರಲಿಲ್ಲ. ನಾವು ತಿಂಡಿ ಮುಗಿಸಿ ಮಿಶಿಂಗ್ ಸಮುದಾಯದವರ ವಿಶಿಷ್ಟ ಬಿಡಾರಗಳಿಗೆ ಲಗ್ಗೆ ಇಟ್ಟಿದ್ದೆವು. ಅಸ್ಸಾಂನಲ್ಲಿ ಬ್ರಹ್ಮಪುತ್ರ ಸೃಜಿಸಿರುವ ಸುಂದರ ದ್ವೀಪವೇ ಮಾಜೋಲಿ. ಇಲ್ಲಿನ ಆಚರಣೆಗಳು ಜೀವನ, ಬಟ್ಟೆ ಎಲ್ಲವೂ ಭಿನ್ನ.

ಮಿಸ್ಟೀರಿಯಸ್ ಮಜೋಲಿ...


ಜೋಹರ್ಾಟ್ನಿಂದ ನಿಮತಿ ಘಾಟ್ನಿಂದ ಲಾಂಚ್ನಲಿ ಇಪ್ಪತ್ತು 

ನಿಮಿಷ ದಾಟ ಬೇಕಾದಷ್ಟು ಹರವಿಕೊಂಡ ನದಿ ಪಾತ್ರ. ನದಿಯೋ 

ಸಮುದ್ರವೋ ಎಂದು ತಿಳಿಯದಷ್ಟು ವಿಸ್ತಾರ. ಫೆರಿಯಲ್ಲಿ ಕುಳಿತರೆ ವಿಚಿತ್ರ 

ವಾಸನೆ! ಹೊಟ್ಟೆ ತುಂಬಿದರೆ ಮುಗಿದೇ ಹೋಯಿತು. ವಿಚಿತ್ರ ದೋಣೆಯಲಿ 

ಮೀನುಗಾರರ ಮೀನ ಭೇಟೆ. ಪೆಟ್ರೋಲ್ ಬ್ಯಾರಕ್ ತುಂಬಿಸಿಕೊಂಡು ಹೊರಟ 

ಐ. ಓ. ಸಿ. ಯವರ ಫೆರಿಗಳು. ನೂರಾರು ವರುಷಗಳಿಂದ ಈ ಪುಣ್ಯ 

ಭೂಮಿಯಲ್ಲಿ ಆಚರಿಸುವ ವಿಶಿಷ್ಟ ಹಬ್ಬ ರಾಮ್ ಲೀಲಾಗೆ ಹೋದಾಗ ಕಂಡ 

ಅಸ್ಸಾಂನ ಮಜೋಲಿಯ ಅಪೂರ್ವ ನೋಟ. ಇಲ್ಲಿ ವಾಸಿಸುವ ಭಿನ್ನ 

ಸಮುದಾಯವೇ ಮಿಶಿಂಗ್. ಮೂಲತಃ ಮೀನುಗಾರರು. ಅವರ ಹಾಡು 

ಪಾಡುಗಳ ಸುಂದರ ಕಥಾನಕ. ಹರಿ ಕತೆ ಶುರು ಮಾಡೋಣವೇ?



ಮಾಜೋಲಿಯ ಮಿಶಿಂಗ್ ಸಮುದಾಯ:-

ಶತಮಾನಗಳಿಂದ ಇಲ್ಲೇ ವಾಸವಾಗಿರುವ ಇವರು ರೂಪಿಸಿಕೊಂಡ ತಮ್ಮ ವಿಚಿತ್ರ ಆಚರಣೆಗಳು, ಜೀವನ ವಿಧಾನಗಳು ನೋಡಲು ಸಿಕ್ಕಿದ್ದು ನಮ್ಮ ಗೆಳೆಯ ಸುಭಾಸ್ ಬಿಸ್ವಾಸ್ ಮತ್ತು ನಾಗರಾಜ್ರ ಸಹಕಾರದಿಂದ.
ಅನೇಕ ಬುಡಕಟ್ಟುಗಳು 1,150 ಚದರ ಕಿಲೋ ಮಿಟರ್ ವಿಸ್ತೀರ್ಣದಲಿ ಹರಡಿಕೊಂಡಿದ್ದಾರೆ. ಸೂರ್ಯ ಚಂದ್ರನನ್ನು ದೇವರಂತೆ ಆಧರಿಸುತ್ತಾರೆ. ಬಿದಿರು ಇವರ ಪ್ರಧಾನ ಜೀವನ ಆಧಾರ ಸರಕು. ಬಿದಿರಿನಿಂದ ಮಾಡಿದ ಅತಿ ಸರಳ ಅಟ್ಟಣಿಗೆಯ ಮನೆ. ಬಿದಿರ ಗೋಡೆಗೆ ಮಣ್ಣಿನ ಮುಚ್ಚಿಗೆ. ಹುಲ್ಲಿನ ಮಾಡು.  ಬಿದಿರಿನಿಂದ ಮಾಡಿದ ವಿಶಿಷ್ಟ ಬುಟ್ಟಿಗಳು. ಏರಿಸಿ ಇಳಿಸಬಹುದಾದ ವಿಶಿಷ್ಟ ಮನೆ! ಬ್ರಹ್ಮಪುತ್ರ ನದಿಯ ನೀರಿಳಿದಾಗ ಮನೆಯನ್ನು ಕೆಳಗಿಳಿಸುವರು! ಮನೆಯೊಳಗೆ ಹೋಗಬೇಕಾದರೆ ಏಣಿಯೊಂದು ಬೇಕೇ ಬೇಕು.












ಇಲ್ಲಿ ಮೀನು ಹಿಡಿಯುವ ಕ್ರಮವೂ ವಿಶಿಷ್ಟ. ಎರಡು ಬಿದಿರ ಕಂಬಗಳಿಗೆ ಅಡ್ಡಲಾಗಿ ಬಿದಿರ ಕೋಲುಗಳು ಅವಕ್ಕೆ ದೊಡ್ಡದಾದ ಬಲೆಯೊಂದನ್ನು ಕಟ್ಟಿ ಬ್ರಹ್ಮಪುತ್ರ ನದಿಯಲಿ ಇಳಿ ಬಿಡುವರು. ಬಲೆ ತುದಿಗೊಂದು ಹಗ್ಗ ಸಿಕ್ಕಿಸುವರು. ಗಂಟೆಗಳ ಕಾಲ ಕಾದು ಮೀನುಗಳು ಬಲೆಯ ಮೇಲೆ ಓಡಾಡುತ್ತಲೇ ಹಗ್ಗ ನಿಧಾನಕ್ಕೆ ಮೇಲೆತ್ತುವರು. ಕೆಲವೊಮ್ಮೆ ಹೊಟ್ಟೆ ತುಂಬುವಷ್ಟು ಮೀನು ಕೆಲವೊಮ್ಮೆ ಖಾಲಿ ಕೈ.
ಇವರ ದೋಣಿಗಳಂತೂ ಕರೀನಾ ಕಪೂರನ ಸೊಂಟಕ್ಕಿಂತಲೂ ಸಪೂರ. ಕುಳಿತರೆ ಅಲುಗುವ ಪುಟಾಣಿ ದೋಣಿಯಲಿ ಜೀವ ಕಿಸೆಯೊಳಗಿಟ್ಟು ಒಂದೆರಡು ಪರ್ಲಾಂಗ್ ಪ್ರಯಾಣಿಸಿದ ಅನುಭವಂತೂ ಅನನ್ಯ. ಯಾವಾಗ ಇಳಿದೆನೋ ಎಂಬ ಆತಂಕ.  ದೊಡ್ಡ ದೊಡ್ಡ ಲಾಂಚ್ಗಳಂತೂ ಬ್ರಹ್ಮಪುತ್ರದಲ್ಲಿ ಕಿಲೋಮೀಟರ್ಗಟ್ಟಲೆ ಪ್ರಯಾಣಿಸುತ್ತವೆ. ಅಂತಹ ದೋಣಿಗಳಲ್ಲೂ ನಾವೊಂದು ಸುತ್ತು ಹೊಡೆದು ಬಂದೆವು. 



ಯಾರಲ್ಲೂ ಕಲಿಯದೆ ಕೊಳಲು ನುಡಿಸುವುದರಲ್ಲಿ ಇವರದು ಎತ್ತಿದ ಕೈ. ಮನೆಯ ಹೆಣ್ಣು ಮಕ್ಕಳೆಲ್ಲಾ ಸೇರಿ ಶಾಲುಗಳನ್ನು, ದಂತ, ಅರಶಿನ ಬಣ್ಣದ ಅಸ್ಸಾಂ ಸೀರೆ ನೇಯುವುದು ಇವರ ಉಪ ಕಸುಬುಗಳು. ಇವರು ನೇಯುವ ಶಾಲುಗಳು, ಸೀರೆಗಳು ಇವರಂತೆ ಬಹಳ ನಾಜೂಕು. ಇಲ್ಲಿನ ಸೀರೆಗಳು ವಿದೇಶದಲ್ಲೂ ತಮ್ಮ ತನ ಕಾಯ್ದುಕೊಂಡಿವೆ. ತಮ್ಮದೇ ಆದ ನೇಕಾರರ ಸೊಸೈಟಿ ನಿಮರ್ಿಸಿಕೊಂಡಿದ್ದಾರೆ. ಮನೆಗೆ ಅಗತ್ಯವಾದ ಮಡಿಕೆಗಳನ್ನು ಇವರೇ ತಯಾರಿಸುವರು. ಚಕ್ರ ಬಳಸದೆಯೇ ಮಡಿಕೆ ತಯಾರಿಸುವ ವಿಧಾನ ಅಚ್ಚರಿ ಹುಟ್ಟಿಸುತ್ತದೆ. ಇದು ಹರಪ್ಪ ಮಹಿಂಜೋದಾರೋನಲ್ಲಿನ ವಿಧಾನಕ್ಕೆ ಅತಿ ಸಮೀಪವಿದೆ ಎನ್ನುತಾರೆ ಸಂಶೋಧಕರು! 



ದೇವಾಲಯಗಳು:-  





ಇವರು ಆಚರಿಸುವ ರಾಸ್ ಲೀಲಾ ಹಬ್ಬವು ಇವರ ವಿಶಿಷ್ಟ ದೇವಾಲಯಗಳಲ್ಲಿ ಆಚರಿಸಲ್ಪಡುತ್ತದೆ. ಇವರ ದೇವಾಲಯಗಳನ್ನು ಸತ್ರಾ ಎಂದು ಕರೆಯುತ್ತಾರೆ. ಕಮಲಾ ಬರಿ ಸತ್ರ ಒಂದು ವಿಶಿಷ್ಟ ದೇವಾಲಯವಾಗಿದ್ದು ಇಲ್ಲಿ ಕಲೆ ಮತ್ತು ಕುಸುರಿಗೆ ಪ್ರಖ್ಯಾತಿಯನ್ನು ಹೊಂದಿದೆ. ಗುರು ಶ್ರೀ ಶಂಕರ್ ದೇವ್ ಅವರು 1500 ನೆಯ ಇಸವಿಯ ಸುಮಾರಿಗೆ ಇದನ್ನು ಸ್ಥಾಪಿಸಲಾಗಿದೆ ಎಂದು ಹೇಳಲಾಗುತ್ತದೆ. ಇಲ್ಲಿ ಗರುಡನ ದೊಡ್ಡ ಮುಖವಾಡವೊಂದನ್ನು ಮಾಡಿಡಲಾಗಿದೆ. ರಾಸ್ ಲೀಲಾದ ಸಮಯದಲ್ಲಿ ಇಲ್ಲಿ ವಿಶೇಷವಾದ ದೋಣಿಯೊಂದನ್ನು ನಿಮರ್ಿಸಲಾಗುತ್ತದೆ. ಅಂತಹ ದೋಣಿ ನಿಮರ್ಾಣಕ್ಕೆ ಸಾಕ್ಷಿಯಾದುದು ನಮ್ಮ ಸುದೈವ. ಇದರಲ್ಲಿ ಕೃಷ್ಣ ತನ್ನ ಪ್ರೇಯಸಿ ರಾಧಳೊಂದಿಗೆ ನೃತ್ಯ ಮಾಡುತ್ತಾ ಬರುವಂತೆ ಚಿತ್ರಿಸುತ್ತಾರೆ. ಇಲ್ಲಿನ ಎಲ್ಲಾ ಸತ್ರಗಳಿಗೂ ಒಂದಕ್ಕೊಂದು ಹೋಲಿಕೆಗಳಿವೆ. ಇವರ ಪೂಜಾ ವಿಧಾನಗಳೂ ವಿಭಿನ್ನ. ನಿಯೋ ವೈಷ್ಣವ ಪಂಗಡಕ್ಕೆ ಇಲ್ಲಿನ ಅರ್ಚಕರು ಸೇರಿದವರಾಗಿದ್ದಾರೆ. ಹೆಚ್ಚಿನವರು ಬ್ರಹ್ಮಚಾರಿಗಳು. ಗಾರಮುರ್ಹ ಸತ್ರದಲಿ ಅರ್ಚಕರು ಸೇರಿ ಯಾವುದೋ ಮಂತ್ರ ಪಠಣದಲಿ ತೊಡಗಿದ್ದರು. ಡೋಲಕ್ ಬಳಸಿ ಇವರು ಮಾಡುವ ಅತ್ಯಾಕರ್ಷಕ ನೃತ್ಯ ನಮ್ಮ ಕ್ಯಾಮರವನ್ನು ತಣಿಸಿತು. ತೋಪು ತುಪಾಕಿಗಳನ್ನು ಸಂಗ್ರಹಿಸಿಟ್ಟ 'ಗಾರಮುರ್ಹ' ಸತ್ರ (ವಿಶಿಷ್ಟ ದೇವಾಲಯ) ಬಹಳ ವಿಶಿಷ್ಟವಾಗಿದೆ. ಇಲ್ಲಿ  ವಿದೇಶಿ ಹಕ್ಕಿಗಳೂ ಸಾವಿರ ಸಾವಿರ ಸಂಖ್ಯೆಯಲ್ಲಿ ನವೆಂಬರ್ ಮಾಸದಲ್ಲಿ ಇಲ್ಲಿಗೆ ಆಗಮಿಸುತ್ತವೆ.



ರಾಸ್ ಲೀಲಾ:- 

ಕೃಷ್ಣನ ಲೀಲೆಗಳನ್ನು ತೋರಿಸುವ ಒಂದು ವಿಶಿಷ್ಟ ಹಬ್ಬ. ನವೆಂಬರ್ ತಿಂಗಳಿನಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಎಲ್ಲಾ ಸತ್ರಗಳಲ್ಲಿ ಈ ಹಬ್ಬವನ್ನು ವಿಶಿಷ್ಟವಾಗಿ ಆಚರಿಸುತ್ತಾರೆ. ಊರಿನ ತುಂಬಾ ಹಬ್ಬದಿನ ಹಚ್ಚುವ ಹಣತೆ ಬಹಳ ವಿಭಿನ್ನ. ಕಮಲಾ ಬರಿ ಸತ್ರದಲ್ಲಿ ದೋಣಿಗಳನ್ನು ನಿಮರ್ಿಸಿ ಅದರಲ್ಲಿ ಕೃಷ್ಣ ವೇದಿಕೆಗೆ ಬರುವಂತೆ ಮಾಡುವ ಕ್ರಮ ಅನನ್ಯವಾದುದು. ಭಿನ್ನವಾದ ಬೆಳಕಿನ ವ್ಯವಸ್ಥೆ ಹಬ್ಬದ ದಿನ ಊರಿನವರಿಗೆ ಹಾಗೂ ಅತಿಥಿಗಳಿಗೆ ಪುಷ್ಕಳವಾದ ಭೋಜನದ ವ್ಯವಸ್ಥೆ ಇರುತ್ತದೆ. ಪ್ರತಿ ಸಂಜೆ ನಾಟಕಗಳು, ಸತ್ರದ ಬ್ರಹ್ಮಚಾರಿಗಳಿಂದ ವಿಶಿಷ್ಟ ನೃತ್ಯ ಹಾಗೂ ಕೃಷ್ಣನ ರಾಸ ಲೀಲೆಗಳನ್ನು ಪದ್ಯಗಳೊಂದಿಗೆ ಆಡಿ ತೋರಿಸುವರು. ಹಬ್ಬದ ಹಿಂದಿನ ದಿನದಿಂದಲೇ ಪ್ರದರ್ಶನಕ್ಕಾಗಿ ಅಭ್ಯಾಸ ನೋಡಬಹುದು ಜೊತೆಗೆ 




ಭತ್ತದ ಬಯಲಾಗಿರುವ ಮಜೋಲಿಯಲಿ ಊಟವಂತು ಬಲು ಕಡಿಮೆ ದರದಲ್ಲಿ ಲಭ್ಯ ಮತ್ತು ಬಲು ರುಚಿಕರ. ಕೇವಲ ಹತ್ತು ರೂಪಾಯಿಗೆ ರೊಟ್ಟಿ ಮತ್ತು ಚಹಾ ಲಭ್ಯ. ಇಂತಹ ವಿಭಿನ್ನ ಸಮುದಾಯವಿರುವ ಮಜೋಲಿ ಬಲು ವಿಶಿಷ್ಟವಾಗಿ ನಿಲ್ಲುತ್ತದೆ. 
                              
                                                                                                      ಶ್ರೀಧರ್. ಎಸ್. ಸಿದ್ದಾಪುರ.
 

Saturday, November 21, 2020

ಚಿಟ್ಟೆ ಎಂಬ ಅಮಿತ ಅಚ್ಚರಿಗಳ ಮೂಟೆ!!


 
ಪ್ಯೂಪಾದಿಂದ ಹೊರಬಂದಾಗ
ಅದ್ಯಾಕೋ ಈ ಬಾರಿಯ ಅಕ್ಟೋಬರ್(2020) ತಿಂಗಳು ಬಹಳ ಆಪ್ಯಾಯಮಾನವಾಯಿತು. ಪ್ರಕೃತಿ ವಿಸ್ಮಯದ ಕೆಲವು ತುಣುಕುಗಳನ್ನು ನನ್ನ ಮುಂದೆ ಹಿಡಿದಿದ್ದೇ ಈ ವಿಶೇಷತೆಗೆ ಕಾರಣ. 
 
ಈ ಬಾರಿ ಬಿಡದೇ ಸುರಿದ ಬಾರೀ ಮಳೆಗೆ ಬೆಳೆ ಕೊಚ್ಚಿ ನಾಶವಾದರೆ ಅನೇಕ ಕ್ರೀಮಿ, ಕೀಟಗಳೂ, ಜೇಡಗಳು ತಮ್ಮ ಜೀವ ಕಳೆದುಕೊಂಡವು. ಇಂತಹ ಸಂಧಿ ಕಾಲದಲ್ಲಿ ಪ್ರಕೃತಿ ನಮಗೆ ತನ್ನ ಗುಟ್ಟನ್ನು ಅತಿ ಸುಲಭಕ್ಕೆ ಬಿಟ್ಟುಕೊಡುವುದೇ ಇಲ್ಲ. ಅದಕ್ಕೆ ನಾವು ಬಹಳ ಶ್ರಮ ಪಡಬೇಕು. 

pupa.

ಚಿಟ್ಟೆಯೊಂದು ತನ್ನ ಪ್ಯೂಪಾ ಸ್ಥಿತಿಯಿಂದ ದಾಟಿಕೊಂಡು ಬರುವ ವಿಸ್ಮಯಕ್ಕೆ ಸಾಕ್ಷಿಯಾಗಬೇಕೆಂಬ ಹಂಬಲವೊಂದು ನನ್ನೊಡಲಿನಲಿ ಬೆಚ್ಚಗೆ ಕುಳಿತ್ತಿತ್ತು.ಆದರೂ ಸಾಧ್ಯವಾಗಲೇ ಇಲ್ಲ. ಅವಂತೂ ಮಳೆಗಾಲದಲ್ಲೇ ಚಿಟ್ಟೆಯಾಗಿ ಹೊರ ಹೊಮ್ಮುವವು. ನೋಡಿದ ಪ್ಯೂಪವನ್ನು ನೆನಪಿಟ್ಟುಕೊಂಡು ದಿನಗಟ್ಟಲೇ ಅದರ ಮುಂದೆ ತಪಸ್ಸು ಮಾಡಬೇಕು. ಎಲ್ಲಾ ಪ್ಯೂಪಾಗಳು ಚಿಟ್ಟೆಯಾಗುವವು ಎಂಬ ಖಾತರಿ ಕೂಡಾ ಇಲ್ಲ. ನಾವು ನೋಡುವ ಸಮಯಕ್ಕೂ ಅದೂ ಹೊರ ಬರುವುದಕ್ಕೂ ಸರಿ ಹೊಂದಬೇಕು!! ಎಲ್ಲವೂ ಹೊಂದಾಣಿಕೆಯಾಗಿ ಸಿಗುವುದು ಬಲು ಅಪರೂಪ. ಕೆಲವು ಚಿಟ್ಟೆಯಾದರೆ ಕೆಲವು ಪತಂಗ (ಮೊತ್).


ಪ್ರತೀ ಚಿಟ್ಟೆಗೂ ಅದರದೇ ಆದ ಮಾತೃ ಗಿಡವೊಂದೊ ಎರಡೋ ಮೊಟ್ಟೆಯಿಡಲು ಆಯ್ಕೆ ಮಾಡಿಕೊಳ್ಳುವುದು. ಇದು ಪ್ರಕೃತಿಯ ಆಯ್ಕೆ. ಮಿಲಿಯಗಟ್ಟಲೆ ವರ್ಷದಿಂದ ನಡೆದುಬಂದ ರೀತಿ. ಮೊಟ್ಟೆಯಿಂದ ಹೊರಬಂದ ಚಿಟ್ಟೆಯ ಎರಡನೇ ಹಂತವಾದ ಹುಳವು ಮರಿಯಾಗಿ ಗಿಡದ ಸರ್ವ ಎಲೆಯನ್ನು ಭಕ್ಷಿಸಿ ಅದೇ ಗಿಡದಲ್ಲೊಂದು ಗೂಡು ನಿರ್ಮಿಸುವವು. ಈ ಗೂಡಿನಲ್ಲೇ ಅನೇಕ ದಿನಗಳ ಕಾಲ ಆಹಾರವಿಲ್ಲದೇ ಮಲಗಿ ಚಿಟ್ಟೆ ಎಂಬ ಹುಳ ರೂಪ ಪರಿವರ್ತನೆಯಾಗಿ ಚಿಟ್ಟೆಯಾಗುವುದು. ಈ ವಿಸ್ಮಯವನ್ನು ಈ ಬಾರಿಯ ದಸರಾ ರಜೆ ನನಗೆ ದಯಪಾಲಿಸಿದ್ದು ನನ್ನ ಪಾಲಿನ ಪುಣ್ಯ.




ತನ್ನ ಮರಿ ಹೊರ ಬರಲು ಸೂಕ್ತವಾದ ಗಿಡವನ್ನೇ ಚಿಟ್ಟೆ ಆಯ್ಕೆ ಮಾಡಿಟ್ಟುಕೊಂಡು ಮೊಟ್ಟೆ ಇಡುವುದು. ಮೊಟ್ಟೆ ಇಟ್ಟ ಬಳಿಕ ಅದರ ಕೆಲಸ ಮುಗಿದು ಹೋದಂತೆ. ವಾತಾವರಣದ ಶಾಖ ಮತ್ತಿತರ ಅನುಕೂಲವನ್ನು ಬಳಸಿ ಮೊಟ್ಟೆ ಒಡೆದು ನಿಧಾನಕ್ಕೆ ಮರಿ ಹುಳವಾಗಿ ಹೊರಬರುವುದು. ಹೊರ ಬಂದ ಮೇಲೆ ಅವಕ್ಕೆ ಪುರುಸೊತ್ತೆಂಬುದೇ ಇಲ್ಲ. ಬರೀ ಎಲೆ ತಿನ್ನುವ ಕಾಯಕ. ಹಗಲು ರಾತ್ರಿಗಳ ವ್ಯತ್ಯಾಸವಿಲ್ಲದೇ ಅವ್ಯಾಹತ ಎಲೆ ಭಕ್ಷಣೆ. 


ಭಕ್ಷಣೆ ಮುಗಿಯಿತು ಎಂದ ಕೂಡಲೇ ತನ್ನ ದೇಹದಿಂದ ನೂಲನ್ನು ಬಿಟ್ಟು ಗೂಡು ನಿರ್ಮಿಸುವುದರಲ್ಲಿ ನಿರತ. ಮೊದಲೆರಡು ನೂಲನ್ನು ಬಿಟ್ಟು ನೇತಾಡಿಕೊಂಡಿದ್ದು ಒಂದೆರಡು ದಿನದಲ್ಲಿ ಗೂಡು ಕಟ್ಟಲು ತಯಾರಿ ಶುರು. 


ತನ್ನ ಸುತ್ತ ತನ್ನದೇ ದೇಹದ ಎಳೆ ಬಿಟ್ಟು ಗೂಡು ಕಟ್ಟುತ್ತೆ. ತನ್ನನ್ನು ತಾನೇ ಬಂದಿಸಿಕೊಳ್ಳುವ ಎರಡನೇ ಜೀವಿ. ಮೊದಲನೆಯದು ಮನುಷ್ಯ! ಹೀಗೆ ಬಂದಿಸಿಕೊಂಡು ಮಲಗಿ ಬಿಟ್ಟರೆ ಮತ್ತೆ ಏಳುವುದು ಕಾಲನ ಕರೆ ಬಂದಾಗಲೇ. ಭ್ರೂಣದಲ್ಲೇ ಕಪ್ಪಾಗಿ ಅಲ್ಲೇ ಸಾಯುವವೂ ಇವೆ. ಇರುವೆಗಳು ಇವುಗಳ ಕೋಶವನ್ನು ಒಡೆದು ಒಳಗಿನ ರಸ ಹೀರುವವು. ಹಾಗಾಗಿ ಇರುವೆಗಳಿಲ್ಲದ ಜಾಗವನ್ನು ಮೊಟ್ಟೆ ಇಡುವ ಚಿಟ್ಟೆ ಆಯ್ಕೆ ಮಾಡಿಕೊಳ್ಳಬೇಕು. 

ಅಂತೂ ಬಂತು-


ಹೀಗೆ ಮಲಗಿದ ಹುಳವೊಂದು ಕೆಲವು ದಿನಗಳ ಬಳಿಕ ಒಳಗೊಳಗೆ ರೆಕ್ಕೆ ಮೂಡಿ, ರೆಕ್ಕೆ ಮೂಡಿದ ಎಚ್ಚರವು ಅದಕೆ ತಿಳಿದು ನಿಧಾನಕ್ಕೆ ಕೋಶ ಒಡೆದು ಚಿಟ್ಟೆಯಾಗಿ ಹೊರ ಹೊಮ್ಮುವುದು. 
A Butterfly coming out of pupa.


ರೆಕ್ಕೆ ಮೂಡಿದುದು ತಿಳಿವ, ಕೋಶ ಹರಿದು ಹೊರ ಬರುವ ವಿಸ್ಮಯಕೆ ಬೆರಗಾದೆನೆಂಬುದು ಕಡಿಮೆ. ವಿಸ್ಮಯದಲಿ ಮಿಂದ ಪುಳಕ ನನ್ನೊಡಲಿನಲಿ ಹಾಗೇ ಇದೆ ಇನ್ನು. ಎಂದು ನೀವು ನನ್ನೊಂದಿಗೆ ಹೊಸ ವಿಸ್ಮಯಕೆ ಸಾಕ್ಷಿಯಾಗುವಿರಿ. 

ಮುಂದಿನ ಅಚ್ಚರಿ....

ಹುಟ್ಟಿದ ಕೂಡಲೇ ಕೂಡಿಕೆ-





ಶ್ರೀಧರ್. ಎಸ್. ಸಿದ್ದಾಪುರ


 

Wednesday, October 21, 2020

ಹಾರೋ ಹಾತೆಗಳ ಹಿಂದೆ ಬಿದ್ದು.

ಇಂದು ನಾ ನಿಮ್ಮನ್ನು ನನ್ನ ಬಾಲ್ಯದ ಗೆಳೆಯನನ್ನು ಭೇಟಿ ಮಾಡಿಸುವೆ. ನನ್ನದಲ್ಲದೆ ನಿಮ್ಮ ಬಾಲ್ಯ ಕಾಲದ ಸ್ನೇಹಿತನೂ ಆಗಿರಬಹುದು. ಸಾವಿರ ಕಣ್ಣುಗಳು ದುಂಡಗಿನ ತಲೆ, ಪಾರದರ್ಶಕ ರೆಕ್ಕೆ! ಸಣ್ಣ ಆಂಟೆನಾ. ಹೀಗೆ ಅತಿ ವಿಶಿಷ್ಟ್ಯ ವಾದ ರಚನೆಯನ್ನು ಹೊಂದಿದಾತ. ಆತನೇ ನಮ್ಮ ನಿಮ್ಮೆಲ್ಲರ ಡ್ರಾಗನ್ ಪ್ಲೈ, ಹಾತೆ, ಏರೋಪ್ಲೇನ್ ಚಿಟ್ಟೆ.
ಆಟಿಕೆಗಳಿಲ್ಲದ ಕಾಲದಲ್ಲಿ ಇವನ್ನು ಆಟಿಕೆಯಂತೆ ಬಳಸುತ್ತಿದ್ದೆವು ನಾವು. ನಮ್ಮ ಮನೆಯ ಬಾವಿ ಸುತ್ತಲೂ, ಶಾಲೆಯ ಬಯಲಿನಲಿ ಕತ್ತರಿಸಿ ತೆಗೆದ ಗಿಡಗಳ ಸಂದುಗಳಿಂದ ಇವು ದುತ್ತನೆ ಪ್ರತ್ಯಕ್ಷವಾಗಿ ಇಷ್ಟು ಹೊತ್ತು ಎಲ್ಲಿದ್ದವು? ಎಂಬ ಜಟಿಲ ಪ್ರಶ್ನೆಯೊಂದನ್ನು ಮೂಡುವಂತೆ ಮಾಡುತ್ತಿದ್ದವು. ಕೆರೆಗಳ ಅಂಚಿನಲಿ, ಹೊಳೆಯ ಸುತ್ತಲಿನಲಿ ಧ್ಯಾನಕ್ಕೆ ಕೂರುತ್ತವೆ! ಜೊತೆಗೆ ತಮ್ಮ ಉದ್ದನೆಯ ಬಾಲವನ್ನು ನೀರಿಗೆ ತಾಕಿಸುತ್ತಾ ಓಡುವುದು ಏಕೆಂದು ಇತ್ತೀಚಿನವರೆಗೂ, ಮಳೆ ಕಾಡು ಸಂಶೋಧನಾಲಯದ ಅಜಯ್ ಗಿರಿ ಸಣ್ಣ ಪುಸ್ತಕವೊಂದು ನನಗೆ ನೀಡುವವರಗೂ ಗೊತ್ತಿರಲಿಲ್ಲ. ಹೆಲಿಕಾಪ್ಟರ್ನಂತೆ ಹಾರಾಡುತ್ತಾ ಗಾಳಿಯಲ್ಲೇ ದೇಹವನ್ನು ನಿಯಂತ್ರಿಸುತ್ತಾ ನೋಡುವುದೇ ಒಂದು ಚೆಂದ.
ಕಾಡಿನ ನಡುವಿದ್ದ ದೊಡ್ಡಮ್ಮನ ಮನೆಗೆ ಹೋದಾಗ ಆಡಲು ಯಾರೂ ಇಲ್ಲದಾಗ ಈ ಡ್ರಾಗನ್ ಪ್ಲೈಗಳ ದೋಸ್ತಿ ಮಾಡುತ್ತಿದ್ದೆ. ಇವುಗಳಲ್ಲಿ ಅರಶಿನ ಮತ್ತು ಕೆಂಪು ನನ್ನ ಅಚ್ಚು ಮೆಚ್ಚಿನ ಬಣ್ಣದವು. ಹಂಬಲಿಸಿ ಹಂಬಲಿಸಿಯೇ ಅವುಗಳ ಬೆನ್ನು ಹತ್ತುತಿದ್ದೆ. ಹಿಂದಿನಿಂದ ನಿಧಾನಕ್ಕೆ ಹೋಗಿ ಬಾಲ ಹಿಡಿದಿಬಿಡುತ್ತಿದ್ದೆ. ಅದರ ಬಾಲಕ್ಕೆ ಹಗ್ಗ ಕಟ್ಟಿ ಗಾಳಿಯಲ್ಲಿ ತೇಲಿ ಬಿಡುತ್ತಿದ್ದೆ. ನಮ್ಮಿಂದ ತಪ್ಪಿಸಿಕೊಳ್ಳಲು ಅದು ವಿಶ್ವ ಪ್ರಯತ್ನವನ್ನೇ ಮಾಡುತ್ತದೆ. ಯಾವುದೋ ಮರದ ಟೊಂಗೆಯ ಮೇಲೆ ಹೋಗಿ ಕುಳಿತು ಬಿಡುತ್ತದೆ. ಜಪ್ಪಯ್ಯ ಅಂದರೂ ಕೆಳಗಿಳಿದು ಬರುವುದಿಲ್ಲ. ಜಗ್ಗಿ ಜಗ್ಗಿ ಎಳೆದು ಕೆಳಗಿಳಿಸಿ, ಸಂಜೆಯಾದೊಡನೆ ಅದನ್ನೊಂದು ಪೆಟ್ಟಿಗೆಯಲಿ ತುಂಬಿಡುತ್ತಿದ್ದೆ. ದೊಡ್ಡಮ್ಮ ನಮಗೆ ಗೊತ್ತಾಗದಂತೆ ಅದರ ದಾರ ಬಿಚ್ಚಿ ಹಾರಿ ಬಿಡುತ್ತಿದ್ದರು. ರಾತ್ರಿಯೇ ಹಾರಿ ಹೋಯಿತೆಂದು ಸುಳ್ಳು ಹೇಳುತ್ತಿದ್ದರು. ನಾವು ಇನ್ನೊಂದು ಹಾರೋ ಹಾತೆ ಬೆನ್ನು ಬೀಳುತ್ತಿದ್ದೆವು. ಮೈಸೂರಿನ ಕಡೆಯವರು ಅದರ ರೆಕ್ಕೆಯನ್ನು ಇಟ್ಟುಕೊಂಡರೆ ಹಣ ಸಿಗುತ್ತದೆಂದು ನಂಬಿದ್ದರೆಂದು ತಮ್ಮ ಅನುಭವನ್ನು ತೇಜಸ್ವಿ ಬಹಳ ಅದ್ಭುತವಾಗಿ ಚಿತ್ರಿಸಿದ್ದಾರೆ. ಈ ಡ್ರಾಗನ್ ಪ್ಲೈಗಳ ರೆಕ್ಕೆಗಾಗಿ ಅವುಗಳ ಹಿಂದೆ ಅಲೆದು, ಅವುಗಳು ಸಿಕ್ಕದೆ ತಪ್ಪಿಸಿಕೊಂಡು ಹಾರಿ ಬಿಡುತ್ತಿದ್ದವು ಎಂದಿದ್ದಾರೆ. ***
ಮಿಲಿಯಗಟ್ಟಲೆ ವರ್ಷಗಳಿಂದ ಹಾರುತ್ತಿರುವ ಈ ಜೀವಿ, ಸಹಸ್ರ ಸಹಸ್ರ ವರ್ಷಗಳಾಚೆ ದೈತ್ಯನಿದ್ದವನು ಕುಬ್ಜನಾಗಿ ಇಲ್ಲಿಯತನಕ ಸಾಗಿ ಬಂದುದು ಅನಂತ ವಿಸ್ಮಯ. ಭ್ರಮೆ ಏನೋ ಎನ್ನಿಸುವ ಸಂಖ್ಯೆ. ನಮಗಿಂತಲೂ ಹಿರಿಯ. ಭೂಮಿಯ ವಿವಿಧ ವಿಪರೀತ ಪರಿಸ್ಥಿತಿಗಳನ್ನು, ವಿಪ್ಲವಗಳನ್ನು ಗೆದ್ದು, ಅವನ್ನೆಲ್ಲಾ ತನ್ನ ಜಿನೋಮ್ ಒಳಗೆ ಕಟ್ಟಿಕೊಂಡು 21 ನೆಯ ಶತಮಾನದವರೆಗೂ ಬೆಳೆದ ಪರಿ ಅಚ್ಚರಿ! ವಿಕಾಸದ ಏಣಿಯಲ್ಲಿ ಜೀವಿಯ ಅನುವಂಶೀಯತೆಯಲ್ಲಾದ ಬದಲಾವಣೆಗಳು ಸಂಶೋಧನಾರ್ಹ. 75 ಮೀಟರ್ ಉದ್ದಕ್ಕೆ ಬೆಳೆಯುತ್ತಿದ್ದ ಇವುಗಳ ಅಚ್ಚು ಸಿಕ್ಕ ಮೇಲೆ ವಿಜ್ಞಾನಿಗಳಿಗಾದ ಅಚ್ಚರಿ ಅಷ್ಟಿಷ್ಟಲ್ಲ!! ಜೊತೆಗೆ ಇವುಗಳ ಸ್ವಯಂ ಭಕ್ಷಕ ಗುಣ. ಈ ಹಾರೋ ಹಾತೆಗಳು ಮರಿ ಇಡುವುದು ನೀರಿನಲ್ಲಿ. ಇವುಳ ಮರಿಯನ್ನು ನಿಂಫ್ ಎನ್ನುತ್ತಾರೆ. ನಿಂಫ್ಗಳು ನೀರಿನಲ್ಲೇ ಸುಮಾರು 4 ವರ್ಷಗಳ ಕಾಲ ಬದುಕಿ ಹೊರ ಬಂದು ಹಾತೆಗಳಾಗುತ್ತವೆ. ಚಿಟ್ಟೆಗಳಂತೆ ಇವುಗಳ ಜೀವನವು ಅನೇಕ ಹಂತಗಳನ್ನು ಒಳಗೊಂಡಿದ್ದರೂ ಇವು ಚಿಟ್ಟೆಗಳಲ್ಲ! ಹಾತೆಗಳಾಗುವ ರೂಪ ಪರಿವರ್ತನೆಯ ಗುಟ್ಟನ್ನು ತಮ್ಮ ಮೆದುಳಿನೊಳಗೆ ಅಡಗಿಸಿಟ್ಟುಕೊಂಡಿರುತ್ತವೆ, ಜೊತೆಗೆ ಯಾವುದೇ ಗಡಿಯಾರವಿಲ್ಲದೆಯೇ ಕಾಲದ ಗಣತಿಯೂ! ಇವು ನೀರಿನಿಂದ ಹೊರಬಂದು ಚಿಟ್ಟೆಯಾಗುವುದನ್ನು ಒಮ್ಮೆ ನೋಡಬೇಕು. ಮತ್ತೊಂದು ವಿಶಿಷ್ಟ್ಯ ಜೀವಿಯೊಂದಿಗೆ ಮತ್ತೊಮ್ಮೆ ಭೇಟಿಯಾಗೋಣ. ಅಲ್ಲಿಯವರೆಗೆ ಅಲ್ವಿದಾ.

Tuesday, October 13, 2020

ಸೈಕಲ್ ಸಾಹಸದ ಸುಮಧುರ ನೆನಪು....


ಮಗನಿಗೊಂದು ಸೈಕಲ್ ಕೊಳ್ಳುವಾಗ ನನ್ನ ಸೈಕಲ್ ಪುರಾಣದ ನೆನಪು ಬಿಚ್ಚಿಕೊಳ್ಳ ತೊಡಗಿತು. ಅಂದು ನಾವೊಂದು 8 ಜನ ಹರಯದ ಹುರುಪಿನಲಿ ತೇಲುತ್ತಿರುವವರು, ಹುಚ್ಚು ಕನಸು ಹತ್ತಿಸಿಕೊಂಡು, ಕಾರಿಗೆ ಕೊಡಲು ಕಾಸಿಲ್ಲದೆ, ಕಾಲನ್ನೆ ನಂಬಿ ಸೈಕಲ್ಲನಲ್ಲಿ ಸವಾರಿ ಹೊರಡಲು ತಯಾರಾದೆವು. ಸಿದ್ದಾಪುರದಿಂದ ಹೊರಟು ಮಾಸ್ತಿಕಟ್ಟೆ ತಲುಪಿ ಯಡೂರು ಮಾರ್ಗವಾಗಿ ಮಾಣಿ ಅಣೆಕಟ್ಟೆಯನ್ನು ದಾಟಿ ಮೇಲುಸುಂಕದ ದುರ್ಗಾ ಪರಮೇಶ್ವರಿ ದೇವಾಲಯವನ್ನು ಹಾದು ಹುಲಿಕಲ್ ತಲುಪಿ ವಾಪಾಸು ಸಿದ್ದಾಪುರ ತಲುಪುವುದು ನಮ್ಮ ಯೋಜನೆಯಾಗಿತ್ತು.






ಸಿದ್ದಾಪುರ ಪ್ರೌಢಶಾಲೆಯ ಮೈದಾನದಲ್ಲಿ ನಮ್ಮ ಕ್ರಿಕೆಟ್ ತಂಡದ ಸದಸ್ಯರೆಲ್ಲಾ ಸೇರಿ ನಾಳೆ ದಿನ ಹೊರಡುವುದೆಂದು ತೀರ್ಮಾನ ಕೈಗೊಂಡೆವು. ಯಾರ ಕೈಲೂ ಬಿಡಿಗಾಸಿರಲಿಲ್ಲ. ಕೆಲವರ ಬಳಿ ಸೈಕಲ್ಲು ಇರಲಿಲ್ಲ. ನನ್ನ ಬಳಿ ಆಗಿನ ಕಾಲದಲ್ಲಿ ವಿಶೇಷವಾದ  HERO MTB ಎಂಬ ನೀಲಿ ಬಣ್ಣದ ಸೈಕಲ್ಲಿತ್ತು. ಸೈಕಲ್ ಇರದವರು ಬಾಡಿಗೆಗೆ ಕೊಂಡರು.  1998ರ ಸುಮಾರಿಗೆ ಅತ್ಯಂತ ಪ್ರಸಿದ್ದವಾದ ತೆಂಗಿನ ಕಟ್ಟೆ ಹೋಟೆಲಿನಲ್ಲಿ ಪಲಾವು ಮಾಡಿಸಿ 8 ಜನರಿಗೆ 20 ಪ್ಯಾಕೆಟ್ಸ್ ಕಟ್ಟಿಸಿಕೊಂಡೆವು.



ಜಾಂಟಿ ಕಾಲಿನ ಸುಧೀರ, ನೀತು ಭಂಡಾರಿ, ಸಂದೀಪ, ಗುರುರಾಜ, ಪ್ರವೀಣ, ಪ್ರಕಾಶ, ಗುರು ಮತ್ತು ನಾನು ಸಕಲ ಸಿದ್ದತೆಯೊಂದಿಗೆ, ಒಂದು  ಚೀಲದಲ್ಲಿ ಡಬ್ಬಿಗೆ ಮೊಸರು ಬಜ್ಜಿಯನ್ನು ಇನ್ನೊಂದು ದೊಡ್ಡ ಪೆಟ್ಟಿಗೆಯಲಿ ಪಲಾವ್ ಕಟ್ಟಿಕೊಂಡೆವು. ಹೊರಡುವ ಉಮೇದಿನಲ್ಲಿ ನಾನೆ ಮೊದಲಿಗೆ ಮೊಸರು ಬಜ್ಜಿಯ ದೊಡ್ಡ ಡಬ್ಬಿ ಹೊತ್ತೆ.
ಸಿದ್ದಾಪುರದಿಂದ ಹೊಸಂಗಡಿ ಹಾದು ಮೇಲ್ಮುಖ ಪ್ರಯಾಣ ಪ್ರಾರಂಭವಾಗಿತ್ತು. ಹೊಸಂಗಡಿಯ ನಂತರ ರಸ್ತೆ ಘಟ್ಟದ ಏರು ನಮ್ಮ ಉಸ್ಸಾಹಕ್ಕೇನೂ ಭಂಗ ತರಿಸಲಿಲ್ಲ! ಮೊಸರು ಬಜ್ಜಿ ಹೊತ್ತು ಒದ್ದಾಡುತ್ತಿದ್ದ ನನ್ನ ನೋಡಿ ಕನಿಕರಗೊಂಡು ಯಾರೋ ಒಬ್ಬರು ಮೊಸರು ಬಜ್ಜಿ ಇಸಗೊಂಡರು. ತಿರುವು ಮುರುವು ದಾರಿಯಲ್ಲಿ ಸೈಕಲ್ ಹೊಡೆದು ಅಭ್ಯಾಸವಿಲ್ಲದ ಅನೇಕರು ಒದ್ದಾಡತೊಡಗಿದರು. ಮಳೆಗಾಲ ಪ್ರಾರಂಭವಾಗುವ ಹೊತ್ತು ಹಾಗಾಗಿ ವಾತಾವರಣ ಅಹ್ಲಾದಕರವಾಗಿತ್ತು. ಅಂತು ಇಂತೂ ಘಾಟಿ ಇಡೀ ತುಳಿದು ತುಳಿದು ಸುಸ್ತು ಹೊಡೆದಾಗಲೇ ಚಂಡಿಕಾಂಬ ದೇವಾಲಯ ಬಂದಿತ್ತು. ದೇವಿಗೆ ನಮಸ್ಕರಿಸಿ ಅವಲಕ್ಕಿ ಪಂಚಕಜ್ಜಾಯ ಕೊಂಡು ಒಂದಿಷ್ಟು ತಿಂದು ನೀರು ಕುಡಿದೆವು. ಎಂಟು ಗಂಟೆಗೆ ಹೊರಟ ನಮ್ಮ ತಂಡ 12 ಗಂಟೆಗೆಲ್ಲಾ ಮಾಸ್ತಿಕಟ್ಟೆಯಲ್ಲಿದ್ದೆವು. ಮಾಸ್ತಿಕಟ್ಟೆಯಲ್ಲಿ ಮಾಣಿ ಅಣೆಕಟ್ಟೆಗೆ ಹೋಗುವ ಅನುಮತಿಯನ್ನು ಪಡೆದುಕೊಂಡೆವು. ಮಾಣಿ ಅಂದು ನಮಗೆ ಸಿಕ್ಕಿದ ಅನುಮತಿ ಇಂದು ಸಿಗುವುದು ಬಹಳಾ ಕಷ್ಟ. ಇಂದು ಅನುಮತಿ ಇದ್ದರೂ ಬಿಡಲು ಹಿಂದೆ ಮುಂದೆ ನೋಡುವರು. 


ನಾನಂತೂ ಮಾಸ್ತಿಕಟ್ಟೆ ತಲುಪುವಷ್ಟರಲ್ಲಿ ಹೈರಾಣಾಗಿದ್ದೆ. ಇನ್ನು ತುಳಿಯಲು ಸಾಧ್ಯವಿಲ್ಲ ಎನ್ನುವಾಗಲೇ ಎದುರಿನಿಂದ ವಿಪರೀತ ವೇಗದಲ್ಲಿ ಲಾರಿಯೊಂದು ಬಂದಿತು. ನಮ್ಮ ತಂಡದ ನಿತ್ತು ತನ್ನ ಸೈಕಲ್ನ್ನು ನಡು ರಸ್ತೆಯಲ್ಲಿ ಕವುಚಿಕೊಂಡು ಬಿದ್ದ. ಇನ್ನೇನು ಲಾರಿ ನಿತ್ತುವಿನ ಮೈಮೇಲೆ ಹರಿದು ಚಟ್ನಿಯಾಗುದರಲ್ಲಿದ್ದ. ನಮಗೆಲ್ಲಾ ಆತಂಕ. ಜೋರಾಗಿ ಕೂಗಿ ಕೊಂಡೆವು. ಆತ ತಂದಿದ್ದು ಬಾಡಿಗೆ ಸೈಕಲ್. ಸೈಕಲ್ ಅಂಗಡಿಯವನಿಗೆ ಏನು ಹೇಳುವುದೆಂಬ ಮತ್ತೊಂದು ಚಿಂತೆ ಹತ್ತಿತು. ಲಾರಿಯಲ್ಲಿದ್ದ ಡ್ರೈವರ್ ಕೊನೆಗಳಿಗೆಯಲ್ಲಿ ಲಾರಿಯ ಬಿರಿಕುಂಟಿಯನ್ನು(ಬ್ರೇಕ್) ಬಿಗಿ ಹಿಡಿದು ನಮ್ಮ ಗೆಳೆಯನ ಜೀವ ಉಳಿಸಿದ.
ಮಾಸ್ತಿಕಟ್ಟೆ ದಾಟಿದ ಮೇಲೆ ಪಲಾವಿನ ಪರಿಮಳ ತಡೆಯಲಾಗದೆ ಪ್ಯಾಕೆಟ್ ಬಿಚ್ಚಿದೆವು. ಒಂದೊಂದರಲ್ಲಿ ಸಣ್ಣ ಮೊರ ತುಂಬುವಷ್ಟು ಪಲಾವು ಇತ್ತು. ನಾನು ಎರಡು ಪ್ಯಾಕೆಟ್ನ್ನು ಮಟಾಷ್ ಮಾಡಿದೆ!!! ಎಲ್ಲರಿಗೂ ಅಚ್ಚರಿಯೋ ಅಚ್ಚರಿ. 'ಕಂಡ್ರ ಮಾಣಿ ಉಂಡ್ರ ಗೋಣಿ' ಅಂದ ಗೆಳೆಯ ಸಂದೀಪ. ಪಲಾವ್ ತಿಂದ ಹೊಡೆತ ತಾಳಲಾರದೆ 'ನಾ ಮುಂದೆ ಬತ್ತಿಲ್ಲೆ' ಎಂಬ ವರಾತ ಶುರುವಿಟ್ಟೆ. ಜೊತೆಗೆ ಎಲ್ಲರಿಗಿಂತ ಹಿಂದುಳಿದೆ. ಆದರೂ ಗೆಳೆಯ ಸಂದೀಪ ಬಿಡದೇ ನನ್ನ ಯಡೂರಿನ ಮಾಣಿ ಡ್ಯಾಂವರೆಗೆ ಕೊಂಡೊಯ್ದ.

ಹೀಗಿದೆ ಡ್ಯಾಂ..


ದಾರಿಯುದ್ದಕ್ಕೂ ಅನೇಕರು ನಮ್ಮನ್ನು ನೋಡಿ ಅಚ್ಚರಿಗೊಂಡರು. ಅಂದಿನ ಪರಿಸರವಂತೂ ಅತ್ಯದ್ಭುತವಾಗಿತ್ತು. ಜನಸಂಖ್ಯೆಯಂತೂ ವಿರಳಾತಿ ವಿರಳ. ಮಾಸ್ತಿಕಟ್ಟೆಯಲ್ಲಿ ಶಬರಿ ಎಂಬ ಹೋಟೆಲ್ ಬಿಟ್ಟರೆ ಬೇರೆ ಗತಿ ಇರಲಿಲ್ಲ.
 ಮೋಡಗಳೆಲ್ಲಾ ನಮ್ಮ ನೆತ್ತಿಯ ಮೇಲೇ ಚಪ್ಪರ ಹಾಸಿತ್ತು. ಡ್ಯಾಂ ತಲಪುವಷ್ಟರಲ್ಲಿ ನಮಗೆಲ್ಲಾ ಮಳೆಯ ಮಾಘ ಸ್ನಾನವಾಗಿತ್ತು. ಮಂಜು ಮುಸುಕಿದ ಹಾದಿ. ಅಲ್ಲಿನ ತಂಪು ಹವೆಯ ಆಹ್ಲಾದಕರ ವಾತಾವರಣ. ಸೈಕಲ್ ತುಳಿದುದರಿಂದ ಮೈ ಕೂಡ ಬೆಚ್ಚಗಿತ್ತು. ಯಡೂರಿನಿಂದ ಒಳ ಹೊಕ್ಕ ರಸ್ತೆ ಎತ್ತರೆತ್ತರಕ್ಕೆರುತ್ತಾ ಡ್ಯಾಂನ ನೆತ್ತಿಗೆ ರಸ್ತೆ ಬಂದು ತಲುಪುತ್ತದೆ. ಅಲ್ಲಿಂದ ಅನೇಕ ಕವಲುಗಳ ಮೂಲಕ ರಸ್ತೆ ವಿವಿಧ ಸ್ಥಳಗಳಿಗೆ ಹೋಗಿ ಬರುತ್ತದೆ. ಮೇಲುಸುಂಕವೆಂಬಲ್ಲಿನ ದೇವಸ್ಥಾನಕ್ಕೂ ಒಂದು ರಸ್ತೆ ನಿಮ್ಮನ್ನು ಕರೆದೊಯ್ಯುತ್ತದೆ. ಒಂದು ರಸ್ತೆಯು ವರಾಹಿ ಮೂಲ ಹರಿವಿನ ಜಾಗವಾದ ಕುಂಚಿಕಲ್ಲು ಅಬ್ಬಿಗೊಯ್ಯುತ್ತದೆ. ಎಲ್ಲಾ ಕಡೆ ಓಡಾಡಲು ಉತ್ತಮ ರಸ್ತೆ ನಿರ್ಮಿಸಿದ್ದಾರೆ. ಒಂಟಿ ಕಾವಲುಗಾರರು ತಮ್ಮ ಮನೆ ಖರ್ಚಿಗೂ ಹಾಗೂ ಬೇಸರ ಕಳೆಯಲು ಅಲ್ಲಲ್ಲಿ ತರಕಾರಿ ಬೆಳೆಯುತ್ತಾರೆ. ಡ್ಯಾಂನ ಇಕ್ಕೆಲಗಳಲ್ಲಿ ದೀಪಗಳನ್ನು ಅಳವಡಿಸಲಾಗಿದೆ. ದೊಡ್ಡ ತೂಬುಗಳನ್ನು ಮುಚ್ಚಲು ತೂಬು ನಿಯಂತ್ರಕಗಳಿವೆ. ಮಳೆ ಶುರುವಾದದಷ್ಟೇ ಆದ್ದರಿಂದ ಅಲ್ಲಲ್ಲಿ ಸಣ್ಣ ದ್ವೀಪಗಳಂತಾಗಿ ಮಂಜು ಅವನ್ನು ಸವರಿ ಹೋಗುವುದನ್ನು ಮೌನವಾಗಿ ನೋಡುತ್ತಾ ನಿಂತೆವು.
ನಮ್ಮ ಗ್ರಹಚಾರಕ್ಕೆ ಡ್ಯಾಂ ಪ್ರವೇಶಿಸುತ್ತಲೆ ನಮ್ಮ ಪ್ರಕಾಶನ ಸೈಕಲ್ಲು ಮುಷ್ಕರ ಹೂಡಿತು, ಪಂಕ್ಚರ್ ಆಗಬೇಕೆ? ಪಂಕ್ಚರ್ ಸಲಕರಣೆ ಇಲ್ಲದ್ದರಿಂದ ಬರಿ ರಿಮ್ನಲ್ಲೇ ತುಳಿಯಬೇಕಾದ ಪರಿಸ್ಥಿತಿ!

ಅಂದು ನನ್ನ ಬಳಿ ಕೊಡಾಕ್ ರೀಲ್ ಕ್ಯಾಮರವೊಂದಿತ್ತು. ಅದರ ಹೊಟ್ಟೆಯನ್ನು ಕೊಡಾಕ್ ರೀಲಿನಿಂದ ತುಂಬಿಸಿದ್ದೆ. ಅದರಲ್ಲೇ ಮಾಣಿ ಅಣೆಕಟ್ಟಿನ ಸುತ್ತಮುತ್ತಲಿನ ಸೌಂದರ್ಯವನ್ನು ಸೆರೆಹಿಡಿದೆ. ಗೆಳೆಯರ ಪೋಟೊ ಶೂಟ್ ನಿರಂತವಾಗಿ ನಡೆಯುತ್ತಿತ್ತು. ನಡುಗುಡ್ಡೆಗಳ ಚಿತ್ರಗಳು ಒಂದೊಂದಾಗಿ ಕ್ಯಾಮರದ ಹೊಟ್ಟೆ ಸೇರುತ್ತಲೇ ರೀಲು ಖಾಲಿ ಮಾಡ್ಬೇಡ್ರೊ ಎಂಬ ಗೆಳೆಯನ ಬೊಬ್ಬೆ ಕೇಳಿಸಿತು.
 ಮಾಣಿಯಿಂದ ನೀರು ಪಿಕಪ್ ಡ್ಯಾಂಗೆ ಬಂದು ಅಲ್ಲಿಂದ ನೇರವಾಗಿ ಹೊಸಂಗಡಿ ಸಮೀಪ ದೊಡ್ಡ ನಾಲ್ಕು ಪೈಪುಗಳಲ್ಲಿ ಹರಿದು ಬರುವುದೆಂದು ಅಲ್ಲಿನ ಕಾವಲುಗಾರ  ವಿವರಿಸಿದ. ಹೊಸಂಗಡಿಗೆ ಹೋದಾಗ ಅದರ ಭೀಮಕಾಯವನ್ನು ಕಂಡು ಬೆರಗಾಗಿದ್ದೆ.

ಬೆಳಕಿನ ಕತೆ ಹೇಳುವ ಕತ್ತಲೆ ಮನೆಗಳು-




ಮಾಣಿ ಡ್ಯಾಂ ನೋಡಿಕೊಂಡು ಪಿಕಪ್ ಡ್ಯಾಂನ್ನು ಸವರಿಕೊಂಡು ಹುಲಿಕಲ್ ಮೂಲಕ ಹೊರ ಬಿದ್ದೆವು. ಡ್ಯಾಂನ ಅನೇಕ ಕಡೆ ಈಗಲೂ ಮನೆ ಕೆಡವಿದ, ತೆಂಗಿನ ಮರಗಳ ಕುರುಹು ಈಗಲೂ ಇದೆ. ಹಡಿಲು ಬಿದ್ದ ಗದ್ದೆಗಳು ನಿಮಗೆ ದರ್ಶನ ಕೊಟ್ಟಾಗ ಕರಳು ಕಿತ್ತು ಬರುವುದು. ಜೀವ ಒಸರುತ್ತಿದ್ದ ಕಣಿವೆ ಈಗ ನಿರ್ಜನ ಬೆಂಗಾಡು. ಹೀಗೆ ಮುಳುಗಡೆ ಪ್ರದೇಶಗಳ ಕತೆ ಹೇಳುತ್ತಾ ಹೋದರೆ ಅದೊಂದೇ ವಿಶಿಷ್ಟ ದಸ್ತಾವೇಜಾಗುವುದು. ಅಭಿವೃದ್ದಿಯ ಅಡ್ಡ ಪರಿಣಾಮ ನೋಡಲೊಮ್ಮೆ ನೀವಿಲ್ಲಿಗೆ ಬರಬೇಕು. ಸುರಿವ ಮಳೆಯಲ್ಲಿ ಇಲ್ಲಿನವರ ಕತೆ ಕೇಳಬೇಕು! 
ಇಳಿ ಸಂಜೆ ಹೊತ್ತಿಗೆ ಮೂಕಾಂಬಿಕಾ ದೇವಾಲಯ ಚಂಡಿಕಾಂಬ ದೇವಾಲಯಕ್ಕೆ ನಮ್ಮ ಪ್ರವೇಶವಾಯ್ತು. ಹಸಿದ ಹೊಟ್ಟೆಗೆ ನೈವೇದ್ಯದ ಅವಲಕ್ಕಿ ಯಥೇಚ್ಛವಾಗಿ ಹೊಟ್ಟೆ ಸೇರಿ ಸಂಪ್ರೀತಗೊಂಡಿತು. ದೇವಾಲಯದಿಂದ ಹೊರ ಬರುತ್ತಲೇ ಮಳೆಗೆ ಮಿಂಚು ಗುಡುಗುಗಳ ಹಿಮ್ಮೇಳ. ಹತ್ತು ನಿಮಿಷ ದೇವಾಲಯದಲ್ಲೇ ಉಳಿಯಬೇಕಾಯ್ತು. ಮಳೆ ನಿಲ್ಲುವವರೆಗೆ ಅಲ್ಲೇ ನಿಲ್ಲಬೇಕಾಯ್ತು. ಮಳೆ ನಿಂತು ಹೊರಟಾಗ ಮುಗಿಯದ ಮುಗಿಲನಿಂದ ಹುಲಿಕಲ್ ಘಾಟಿ ಸ್ವಲ್ಪವೂ ಕಾಣುತ್ತಿರಲಿಲ್ಲ. ಸ್ವಲ್ಪ ಯಾಮಾರಿದರೂ ಕಣಿವೆಗೆ ಪಾದ ಬೆಳೆಸಬೇಕಿತ್ತು. ಒಂದು ಪಂಕ್ಚರ್ ಆದ ಸೈಕಲ್ಲು ತುಳಿಯೋ ಕಷ್ಟ ಇಮ್ಮಡಿಗೊಳಿಸಿತ್ತು. ಮರದ ಸೈಕಲ್ ತುಳಿದಂತೆ. ಯಾವನೋ ಪುಣ್ಯಾತ್ಮ ಜೀಪ್ನಲ್ಲಿ ನಮ್ಮ ಹಿಂದೆಯೇ ಹೊಸಂಗಡಿವರೆಗೆ ಬಂದು ನಮಗೆ ಬೆಳಕಿನ ವ್ಯವಸ್ಥೆ ಮಾಡಿಕೊಟ್ಟ. ದೇವಿ ಕೃಪೆಯಿಂದ ನಿರಾತಂಕವಾಗಿ ಘಾಟಿ ಇಳಿದೆವು!
ಹೊಸಂಗಡಿ ತಲುಪುತ್ತಲೆ ಗೆಳೆಯ ಪ್ರಕಾಶನ ಸೈಕಲ್ಗೆ ಪಂಕ್ಚರ್ ಹಾಕಿಸಿದೆವು. ಯಾರ ಸೈಕಲ್ಲಿನಲ್ಲಿ ಡೈನಮೋವೇ ಇರಲಿಲ್ಲ. ಮುಂದೆ ಹೋಗುವ ದಾರಿ ಸ್ವಲ್ಪವೂ ಕಾಣೋದಿಲ್ಲ. ಕಾಟಿ, ಕಡವೆ, ಚಿರತೆಗಳ ಆವಾಸವಾದ್ದರಿಂದ ಭಯಗೊಂಡೆವು. ಕೊನೆಗೊಂದು ಉಪಾಯ ಮಾಡಿ ಹಳೆಯ ಟೈರೊಂದಕ್ಕೆ ಬೆಂಕಿ ಕೊಟ್ಟು ಅದನ್ನು ಸುಧೀರ ಕೈಗಿತ್ತೆವು. ಅವನು ಒಂದು ಕೈಯಲ್ಲಿ ಸೈಕಲ್ ತುಳಿಯುತ್ತಾ ಮತ್ತೊಂದು ಕೈಯಲ್ಲಿ ಟಯರ್ ಹಿಡಿದುಕೊಂಡು ಸರ್ಕಸ್ ಮಾಡುತ್ತಾ ನಿಧಾನವಾಗಿ ಸಿದ್ದಾಪುರ ತಲುಪಿ ನಮ್ಮ ಮೊದಲ ಸೈಕಲ್ ಪ್ರವಾಸಕ್ಕೆ ಶುಭ ಮಂಗಳ ಹಾಡಿದೆವು. ಈ ಪ್ರವಾಸವನ್ನು ಮೆಲುಕು ಹಾಕಿದಾಗೆಲ್ಲ ರೋಮಾಂಚವಾಗುವುದು. ನಿತ್ತು ಸಿಕ್ಕರೆ ಮತ್ತೆ ನೆನಪು ಕೆದಕಿ ಅವನ ಕಾಲೆಳೆಯುವೆವು. ಸರಿಯಾದ ಮಾರ್ಗದರ್ಶನ ದೊರೆತಿದ್ದರೆ ಇನ್ನೂ ಅನೇಕ ಸೈಕಲ್ ಪ್ರಯಾಣದ ಸುಖ ನೆನಪುಗಳು ನಮ್ಮ ಜೋಳಿಗೆಯಲ್ಲಿರುತ್ತಿತ್ತು. ಮತ್ತೆಂದೂ ನಾವು ಇಂತಹ ದೊಡ್ಡ ಸೈಕಲ್ ಸಾಹಸ ಮಾಡಲೇ ಇಲ್ಲ!! ಇನ್ನೊಮ್ಮೆ ಮತ್ತೊಂದು ಸಾಹಸದೊಂದಿಗೆ ನಿಮ್ಮ ಮುಂದೆ ಬರುವೆ ಅಲ್ಲಿಯವರೆಗೆ ನಮಸ್ಕಾರ. 


ಶ್ರೀಧರ್ ಎಸ್. ಸಿದ್ದಾಪುರ.



Sunday, October 4, 2020

ಕಾಟಿ ಮರಿಯ ಕೃಪಾಕಟಾಕ್ಷ....



 

ಹೆಸರು ಹೇಮಂತ್.‌ ಅವಧೂತನಂತಹ ಗಡ್ಡ. ಹೊಳೆವ ಜಿಂಕೆ ಕಣ್ಣು . ಛೆ ಜಿಂಕೆ ಎಂದರೆ ಮೋಸವಾದೀತು. ಕಾಡುಕೋಣದ ಕಣ್ಣು. ವದನದ ತುಂಬಾ ಹರಡಿಕೊಂಡ ಕುರುಚಲು ಗಡ್ಡ. ಎಲ್ಲೋ ನೆಟ್ಟ ನೋಟ.  ಭಾವತತ್ಪರತೆ. ಬಿಗುಮಾನ. ಎತ್ತರದ ನಿಲುವು. 

ಬಿಚ್ಚಲೊಲ್ಲದೆ ಬಿಗಿದ ಅವನ ತುಟಿಗಳನು ಮೆಲು ಮಳೆಯಲ್ಲಿ ಮಾತಿಗೆಳೆದಳು ಅವನಿ. ಕತೆಗಳು, ಮಲೆನಾಡು ಅವರ ನಡುವಿನ ಏಕತ್ರ ಸೂತ್ರ. ಅವನ ಸೃಜನಾತ್ಮಕ ಕೆಲಸಗಳಲ್ಲಿ ಅವಳ ಹಾಜರಿ ಇತ್ತು. ಇಂದು ಅವನ ಎರಡನೆಯ ಕತಾ ಸಂಕಲನ ಅನಾವರಣಗೊಂಡಿತ್ತು. ಪುಸ್ತಕ ಅನಾವರಣದ ಗೌಜಿ ಮುಗಿದು ಅವರಿಬ್ಬರು ಕಲಾ ಪರಿಷತ್ತಿನ ಎದುರಿನ ಕಾಫಿಬಾರ್ ನಲ್ಲಿದ್ದರು. ಕಪಚಿನೊಗೆ ಆರ್ಡರಿಸಿದ್ದರು.


ಗುಡುಗು ಬಂದು ಅವರ ಮಾತಿಗೆ ಮೇಳವಾಗಿತ್ತಂದು. ಧೋ ಎಂದು ಸುರಿವ ಮಳೆಯ ನಡುವೆ ಅವಳು ಅವನನ್ನು ಮಾತಿಗೆ ಎಳೆದಳು.
ಏಯ್ ಹೇಮ್, ನೀನು ಹೇಗೆ ಪರ್ತಕರ್ತನಾದೆ? ಎಂದು ಹೇಳುತ್ತಿಯೆಂದು ಕಳೆದ ಬಾರಿಯೇ ಹೇಳಿದ್ದೆ ಎಂದು ಜೋಗುಳದಂತೆ ಅವಳು ಪಿಸುಗುಟ್ಟಿದಳು.
ಮಲೆನಾಡಿನ ನನ್ನ ನೆನಪೇ ನನಗೆ ಶ್ರೀರಕ್ಷೆ.
ಹೇಳಿದರೆ ನೀ ನಗುತ್ತಿ, ಯಾಕೆ ಈಗ ಅದೆಲ್ಲಾ ಮೆಲ್ಲಗೆ ಅವನೆಂದ.
ಕೇಳುವ ಕುತೂಹಲ ಎಂದು ಮೆಲ್ಲಗೆ ಅವನ ಬೆನ್ನಿಗೆ ಗುದ್ದಿದಳು.
ಮರಾಯ್ತಿ ನೀ ಬಿಡುವ ಹಾಗೆ ಕಾಣಿಸೊಲ್ಲ ಎಂದು ಒಂದು ನೋಟವನ್ನು ಅವಳೆಡೆಗೆ ಎಸೆದು ನಕ್ಕ.
..........................ಹಂ ಅವಳೂ ನಕ್ಕಳು.
ಅದೊಂದು ವಿಚಿತ್ರ ಕತೆ. ನಾನೊಂದು ಕಾಡುಕೋಣದ ಮರಿಯಿಂದಾಗಿ ಈ ವೃತ್ತಿಗೆ ಬಂದೆ.
ಏನು? ಅವಳು ಆಶ್ಚರ್ಯ ತಡೆಯಲಾಗದೆ ಕೇಳಿದಳು.
ಹೌದು
ಅದು ಹೇಗೋ? ಎಂದಳು.
ಅದೊಂದು ನನ್ನ ಬದುಕಿನ ಅತಿ ವಿಚಿತ್ರ ಘಟನೆ. ಎಲ್ಲರ ಬದುಕಲ್ಲೂ ಘಟಿಸೊಲ್ಲವೆಂದು ನೆನಪ ಸುರುಳಿ ಬಿಚ್ಚತೊಡಗಿದ.
***
ಮಾಘ ಮಾಸದ ಸಂಜೆಗತ್ತಲಿನ ಸಮಯ. ಹಸುಗಳು ಹಟ್ಟಿಗೆ ಮರಳುವ ಹೊತ್ತು. ಸೂರ್ಯ ತನ್ನ ಕೆಲಸ ಮುಗಿಸಿದ್ದ. ಗಾಳಿ ತಣ್ಣಗೆ ಹೊಯ್ಯುತ್ತಿತ್ತು.
ಓತಿಕ್ಯಾತನಂತಿರುವ ತನ್ನ ನೆಚ್ಚಿನ ಬಂಟ ಅಂಜು ಬುರುಕ ಮಾಚನೊಡನೆ "ಬೇಟೆಗೆ ಹೋಗುವಾ." ಎಂದೆ. ಮಾಚ ನನ್ನ ಬೇಟೆಯ ಸಂಗಾತಿ. ಮೂರು ಹೊತ್ತು ನಮ್ಮನೆಯ ಕೂಳು ತಿನ್ನದಿದ್ದರೆ ಅವನಿಗೆ ಸರಿಯಾಗಿ ನಿದ್ರೆ ಹತ್ತಲ್ಲ. ಬೇಟೆ ಹುಚ್ಚಿನ ಮನುಷ್ಯ. ತನ್ನ ಸ್ವಭಾವಕ್ಕೂ ಬೇಟೆಗೂ ವಿರುದ್ಧ ಪದದಂತಿದ್ದ.
ಮಲೆನಾಡಿನ ನಮ್ಮ ಒಂಟಿ ಮನೆಯಿಂದ ಚರೆ ಕೋವಿ ಹಿಡಿದು ಕಬ್ಬಿನಗದ್ದೆ, ಕಾಲು ತೋಡು ದಾಟಿ ಕುರುಚಲು ಕಾಡಿಗೆ ಬಂದಿದ್ದೆವು. ರಾತ್ರಿ ಪೂರಾ ತಿರುಗುವ ಉದ್ದೇಶದಿಂದ ಒಂದಿಷ್ಟು ಕಡುಬು, ಚರೆ ಕೋವಿಗೊಂದಿಷ್ಟು ಗುಂಡು ನಮ್ಮ ಜೊತೆಗಿದ್ದವು. ಕಾಟಿ, ಚಿರತೆ, ಹಂದಿಗಳು ಕಾಡ ನಡುವೆ ಹೆದ್ದಾರಿ ಕೊರೆದ ಜಾಗವದು. 
ಕುರುಚಲು ಕಾಡಿನ ನಡುವೆಯೊಂದು ದೊಡ್ಡಾಲದ ಮರವಿತ್ತು. ಕುರುಚಲು ಕಾಡಿನ ನಡುವೆಯೇ ಜಿಂಕೆ, ಕಡವೆಗಳನ್ನು ಒಂದೇಟಿಗೆ ಹೊಡೆದುರುಳಿಸಿದ್ದ ನಡು ಕಾಡಲ್ಲಿ ಅವತ್ತು  ಯಾವ ಬೇಟೆಯೂ ಕಾಣಸಿಗದೇ, ನಿರಾಶನಾಗಿ  ಆ ಆಲದ ಮರದಡಿ ಸ್ವಲ್ಪ ಕೂರೋಣವೇ? ಎಂದೆ. ಅಯ್ಯೋ, ಸರಿ ದ್ಯಾವ್ರೆ ಎಂದ ಮಾಚ. ಥೂ ಹಲ್ಕಾ ಸುವರ್, ಎಲ್ಲದಕ್ಕೂ ಅಯ್ಯೋ ಸೇರಿಸಿ ಕನ್ನಡದ ಮಯರ್ಾದೆ ತೆಗಿಬೇಡ್ವೋ ಮರಾಯ ಎಂದು ಗದರಿದೆ. ಆಗಲೇ ಆಲದ ಮರದಡಿ ಏನೋ ಬಹೃತ್ ಪ್ರಾಣಿಯೊಂದು ನೆಗೆಯೊ ಸದ್ದಿನಿಂದ ನಮ್ಮ ಕಿವಿ ನೆಟ್ಟಗಾಯಿತು. ಚರೆ ಕೋವಿ ನಿಮಿರಿ ನಿಂತಿತು ನೋಡು.
ಸದ್ದಾಗದಂತೆ ನಾವು ಆಲದ ಮರವನ್ನು ಸಮೀಪಿಸಿದೆವು. ಎದೆ ಢವ-ಢವನೇ ಹೊಡೆದುಕೊಳ್ಳ ಹತ್ತಿತ್ತು. ಈ ರೀತಿ ಕುಣಿಯುವ ಪ್ರಾಣಿ ಯಾವುದೆಂದು ನಮಗೆ ಹೊಳೆಯಲೇ ಇಲ್ಲ. ಹಂದಿ, ಕಡವೆಯಾಗಿದ್ದರೆ ಅವುಗಳ ಸದ್ದು ಹೀಗಿರುತ್ತಿರಲಿಲ್ಲ. ನಿಧಾನಕ್ಕೆ ನಾನು ಕಳ್ಳ ಹೆಜ್ಜೆ ಇಟ್ಟು ಕುರುಚಲು ಕಾಡಿನೊಳಗೆ ಇಣುಕಿ ನೋಡಿದೆ. ಧಿಗ್ಮೂಢನಾದೆ. ಕಾಡುಕೋಣದ ಮರಿಯೊಂದು ಮರದಡಿಯಲ್ಲಿ ಖುಷಿಯಿಂದ ಕುಣಿಯುತಲಿತ್ತು. ನಾವಿಬ್ಬರೂ ಜಾಗೃತರಾದೆವು.
ಮರಿ ಇದೆ ಎಂದರೆ ಹತ್ತಿರದಲ್ಲೆಲ್ಲೋ ಅದರ ತಾಯಿ ಇರಲೇ ಬೇಕಲ್ಲ. ಸುತ್ತಲೂ ಹುಡುಕಿದರೂ. ಏನೂ ಕಾಣಲಿಲ್ಲ. 
ಅಯ್ಯೋ, ಇಲ್ಲೇನೂ ಕಾಂತಿಲ್ಯಲೆ ದ್ಯಾವ್ರೇ ಎಂದ ಮಾಚ ಆಶ್ಚರ್ಯ ಸೂಚಿಸುತ್ತಾ.
 ಹತ್ತಿರ ಹೋಗಿ ನೋಡೋ ಮರಾಯ, ಪಕ್ಕದಲ್ಲೇ ಮಲಗಿರಬಹುದು ಎಂದೆ. ಮರಿ ಎಮ್ಮೆ ಅಸಾಧ್ಯ ಶಬ್ದಮಾಡುತ್ತಾ ಜಾತ್ರೆಯ ಕೀಲು ಗೊಂಬೆಯಂತೆ ಕುಣಿಯುತಲಿತ್ತು. 
ಎಷ್ಟು ದಿನಗಳ ಮರಿ ಇರ್ಬೊದು ಮಾಚ? 
ಅಯ್ಯೋ, ಒಂದಿಪ್ಪತ್ತು ದಿನದ್ದು, ದ್ಯಾವ್ರೆ 
 ಹಟ್ಟಿಯ ದನಗಳೊಂದಿಗೆ ಸಾಕಿದ್ರೆ ಹೆಂಗೆ? ನಾನೆಂದೆ.
ಅಯ್ಯೋ, ಥೂ ನಿಮ್ಮ, ಅದರಮ್ಮ ಬಂದ್ರೆ ಸಿಗದ್ ಹಾಕತ್ತೆ ಅಷ್ಟೇ! 400 ಕೆ. ಜಿ ಬಬ್ಬರ್ಯದಾಂಗ್ ಇಪ್ಪೊ ಅದನ್ ಎದ್ರುಸುಕಾತ್ತೆ? ಅದ್ ನಮ್ಮನ್ ಕಂಡು ಕೊಂದ್ ಹಾಕುತ್ತೆ ದ್ಯಾವ್ರೆ. ಎಂದು ಪಿಸುಗುಟ್ಟಿದ ಮಾಚ. ನಾ ಕೇಳುವ ಸ್ಥಿತಿಯಲ್ಲಿರಲಿಲ್ಲ.
ಎಷ್ಟು ಹಾಲು ಕೊಡುತದೆಂದು ನೋಡ್ಬೇಕು ಮರಾಯ?
"ನಮ್ ತಿಥಿ ಆಯ್ದಿರ್ ಸಾಕ್." 
ಮಾಚ ಏನು ಹೇಳುವುದೆಂದು ತೋಚದೆ ಗರ ಬಡಿದವನಂತೆ ನಿಂತ .
ಏಯ್ ಮಾಚ, ನೀನು ಲಂಗೋಟಿ ಕಟ್ಟಿದ್ಯಾ? ಕೇಳಿದೆ.
ಅಯ್ಯೋ, ಅದು ಈ ಮರಿ ಕಟ್ಟುವಷ್ಟು ಉದ್ದವಿಲ್ಲ ದ್ಯಾವ್ರೆ
ಥೂ, ಹಲ್ಕಾ ಬಡ್ಡಿ ಮಗನೆ, ನಿನ್ನ ಲಂಗೋಟಿ ಯಾರಿಗೆ ಬೇಕೋ?
ಬೇಕಾಗಿರೋದು ನಿನ್ನ ಪಂಚೆ. 
ಅಯ್ಯಯ್ಯೋ, ಬ್ಯಾಡ ದೇವ್ರೆ ಎಂದು ಕಿರುಚಲು ಬಾಯಿ ತೆರೆದ. ಅಯ್ಯೋ, ಊರ ದನಕಳ ಕಾಯ್ಲಿ ಅವಕ್ಕೂ ಬತ್ತ್ ಮರ್ರೆ, ಬ್ಯಾಡ ದ್ಯಾವ್ರೆ ಎನ್ನುವುದನ್ನು ಕಿವಿಗೆ ಹಾಕಿಕೊಳ್ಳದೇ ಹಠ ಹಿಡಿದಾಗ ಅನಿವಾರ್ಯವಾಗಿ ಮಾಚ ಸುಮ್ಮನಾದ. 
***
ಕಪಚಿನೋ ಬಂದಿತ್ತು. ಅದನ್ನು ಸವಿಯುತಲಿದ್ದ ಹೇಮಂತ್ ಮತ್ತು ಅವನಿ. ಎನ್ ಧೈರ್ಯ ನಿಂದು ಎಂದು ಕಣ್ಣಲ್ಲೇ ನಕ್ಕಳು. ಅವನೂ ನಕ್ಕ. ಮತ್ತೊಂದು ಸಿಗರೇಟಿಗೆ ಕೈ ಹಚ್ಚಿದ್ದ. ಅವನಿ ಮುನಿಸಿಕೊಂಡು ಕೆಂಪಗಾದಳು. ಸಿಗರೇಟಿನ ಧೂಮದೊಂದಿಗೆ ಕತೆ ಮತ್ತೆ ಬಿಚ್ಚಿಕೊಳ್ಳ ತೊಡಗಿತು.
***
ಕುಣಿತಿದ್ದ ಕಾಟಿ ಮರಿ ಹಿಂದೆ ಹೋಗಿ ಅಡಗಿ ಸದ್ದಾಗದಂತೆ ಅದರ ಕುತ್ತಿಗೆ ಸುತ್ತ ಪಂಚೆ ಬಿಗಿದು ಆಲದ ಮರಕ್ಕೆ ಕಟ್ಟಿ ಹಾಕಿದೆವು. ಕಟ್ಟಿದ ಕೂಡಲೇ ತಟಪಟವೆಂದು ಕಾಲನ್ನು ವಿಚಿತ್ರ ರೀತಿಯಿಂದ ಬಡಿಯತೊಡಗಿತು. ಅಪಸ್ವರದ ಶಂಖದಿಂದ ಹೊಮ್ಮಿದಂತಹ ಸ್ವರವೊಂದನು ಅದು ಹೊರಡಿಸಿತು. ಕಾಡಿನ ಮರಗಿಡಗಳೆಲ್ಲಾ ಅಲ್ಲಾಡಿದವು. ಅನೇಕ ಬಾರಿ ಕಾಡೆಮ್ಮೆಯ ಸ್ವರ ಕೇಳಿದ್ದ ನಾವಿಬ್ಬರೂ ಮರಿ ಈ ವಿಚಿತ್ರ ಸ್ವರಕ್ಕೆ ವಿಚಲಿತರಾದೆವು. ಅಷ್ಟು ಕರ್ಕಶವಾಗಿತ್ತದು. ಇದು ಯಾವುದೋ ಸನಿಹದ ಮತ್ತೊಂದಕ್ಕೆ ಸಂದೇಶ ನೀಡುತ್ತಿದೆ ಎಂದು ನಮಗೆ ಖಾತ್ರಿಯಾಯಿತು. ಚರೆ ತುಂಬಿದ ಕೋವಿ ಹಿಡಿದೆವು. ಕರುವನ್ನು ಆಲದ ಉದ್ದದ ಬಿಳಲುಗಳನ್ನು ಸೇರಿಸಿ ಪಂಚೆಯಿಂದ ಕಟ್ಟಿದ್ದೆವು.
ಕುರುಚಲು ಕಾಡಿನ ಕಡೆಯಿಂದ ಏನೋ ಸದ್ದಾಯಿತು. ಮಹಾ ಧೈತ್ಯ ಕಾಟಿಯೊಂದು ಬುಸು ಬುಸು ಉಸಿರ ಬಿಡುತ್ತಾ ಬಂದಿತು. ಅದರ ಎತ್ತರದ ನಿಲುವು ಹೊಳೆಯುವ ಮೈ. ಕೆಂಗಣ್ಣು. ಕೋಪದಿಂದ ಬುಸುಗುಡುವ ಅದರ ಮೂತಿ ನೋಡಿ ನಮ್ಮ ಚಡ್ಡಿ ಒದ್ದೆಯಾಗುವುದೊಂದು ಬಾಕಿ. ತನ್ನ ಕೋಡಿನಿಂದ ತಿವಿಯುವಂತೆ ಎತ್ತುತ್ತಾ ನಾವಿರುವಲ್ಲಿಗೆ ನುಗ್ಗಿತು. ಬಿಳಲುಗಳನ್ನು ಹಿಡಿದು ನಾವಿಬ್ಬರು ಮರವೇರಿದರು. ಗಜರ್ಿಸುತ್ತಾ ಮರವನ್ನೇ ತಿವಿಯ ತೊಡಗಿತು. ಐದಾರು ಬಾರಿ ಮರ ಸುತ್ತಿ ಬಂದಿತು. ತನ್ನ ಕಂದನ ಬಿಡಿಸಿರೆಂದು ಒಮ್ಮೆ ಆರ್ತನಾದ ಮಾಡಿ ಕೂಗಿತು. ಬರಿ ಅಂಗಿಯಲ್ಲಿದ್ದ ಮಾಚನಿಗೆ ಸಂಜೆಗತ್ತಲಾವರಿಸುವುದ ನೋಡಿ ಚಿಂತೆಯಾಯಿತು. ಅಯ್ಯೋ, ಗಾಳಿಯಲ್ಲಿ ಒಂದು ಗುಂಡು ಹಾರಿಸಿ ದ್ಯಾವ್ರೆ ಎಂದ. ತಡಮಾಡದೆ ನಾನು, ಕಾಡೆಮ್ಮೆಯ ಕಿವಿಗಳ ನಡುವೆ ಗುಂಡು ಹಾರಿಸಿದೆ. ಕೋಡುಗಳ ನಡುವೆ ಗುಂಡು ಹಾರಿತು. ಒಂದೇ ನೆಗೆತಕ್ಕೆ ತನ್ನ ಮರಿಯಿಂದ ಅನತಿ ದೂರಕ್ಕೆ ಹೋಗಿ ಕಾಟಿ ನಿಂತು ಬಿಟ್ಟಿತು. ಸ್ಪೋಟಿಸಿದ ಶಬ್ದಕ್ಕೆ ಕಾಡೊಮ್ಮೆ ನಿಶ್ಯಬ್ದವಾಯಿತು. ದೂರ ಹೋಗಿ ನಿಂತ ಎಮ್ಮೆ ತನ್ನ ಮರಿಗೆ ಬರುವಂತೆ ಬುಸುಗುಟ್ಟಿ ಕರೆಯತೊಡಗಿತು. ಮತ್ತೊಂದು ಚರೆ ತುಂಬಿಸಿ ಅದರ ಕೋಡುಗಳ ನಡುವೆ ಹೊಡೆದೆ. ವಿಚಿತ್ರವಾಗಿ ಕೂಗೂತ್ತಾ ಕಾಡಿನಲ್ಲಿ ಕಣ್ಮರೆಯಾಯಿತು. ಅದರ ವಿಚಿತ್ರ ದನಿ ನನ್ನ ಕಿವಿಗಳಲ್ಲಿ ಇನ್ನೂ ರಿಂಗಿಣಿಸುತ್ತಿದೆ.
ಕಾಡಿನ ಮೌನದಲ್ಲೇ ಲೀನವಾದ ನಾವಿಬ್ಬರೂ ಕುಳಿತಲ್ಲೇ ಕುಳಿತ್ತಿದ್ದರಿಂದ ಸೊಳ್ಳೆಗಳು ಕಡಿಯ ತೊಡಗಿದವು. ನಡೆದ ಘಟನಾವಳಿಗಳಿಂದ ಸ್ವಲ್ಪ ವಿಚಲಿತನಾದೆ. ಮಾಚನಿಗೆ ತೋರಿಸಿಕೊಳ್ಳದೆ ಸುಮ್ಮನಿದ್ದೆ. ಇಳಿದು ಹೋಗಲು ಅಂಜಿಕೆ. ಮಾಚನೊಬ್ಬನನ್ನೇ ಬಿಟ್ಟು ಹೋದರೆ ಅವನಿಗೆ ಗುಂಡು ಹಾರಿಸಲೂ ಬರದು. ಕಾಡಿನ ಹಾದಿಯಲ್ಲಿ ಕೋವಿ ಇರದೇ ನಡೆದು ಹೋಗುವುದು ಅತಿ ಅಪಾಯ. ಹಾಗೇ ಸಂದಿಗ್ಧದಲ್ಲೇ ಕೆಲ ಕ್ಷಣಗಳು ಕಳೆದವು. ರಾತ್ರಿ ಎರುವ ಹೊತ್ತಲ್ಲಿ ಮಾಚನನ್ನು ಸಮಾಧಾನ ಮಾಡಿ, ಕೋವಿಗೆ ಚರೆ ತುಂಬಿಸಿ ಅಲ್ಲೇ ಬಿಟ್ಟು ಧೈರ್ಯ ಮಾಡಿ ಹೊರಟೆ. 
ಬಲವಾದ ಹಗ್ಗ, ಪಂಚೆ ಒಂದಿಷ್ಟು ಹುಲ್ಲಿನೊಂದಿಗೆ ಹಿಂದಿರುಗಿದೆ.
ಅಯ್ಯೋ, ಬಂದ್ಬಿಟ್ರಾಯ್ಯಾ ದ್ಯಾವ್ರೆ
ಯಾಕೆ ಬರ ಬಾರದಿತ್ತೆ.? 
ಮಾಚನಿಗೆ ಪಂಚೆ ಕೊಟ್ಟು ಬಲವಾದ ಹಗ್ಗದಿಂದ ಮರಿಯನ್ನು ಬಂದಿಸಿದೆ. ನಿಶೆಯ ಮೊದಲ ಘಳಿಗೆಯೊಳಗೆ ಮನೆ ತಲುಪಿದೆವು. ಹಟ್ಟಿಯಲ್ಲಿ ಕರುವನ್ನು ಉಳಿದ ಕರುಗಳ ಜೊತೆಗೇ ಕಟ್ಟಿ ನಿಟ್ಟುಸಿರಿಟ್ಟೆ.
***
ರಾತ್ರಿ ತನ್ನ ಮಗ್ಗಲು ಬದಲಿಸಿತ್ತು. ತೋಟ ತಿರುಗಿ ಬಂದ ತಂದೆ ಹಟ್ಟಿ ಕಡೆ ಹೋದವರಿಗೆ ಈ ಹೊಸ ಅತಿಥಿ ಗುಟುರು ಹಾಕಿತು. 
ಗಾಬರಿ ಬಿದ್ದವರು, ನೇರ ಮನೆಯೊಳಗೆ ಹೋಗಿ  ಎಲ್ಲಿಂದ ತಂದ್ಯೋ ಇದ್ನಾ, ಅಲ್ಲೇ ಬಿಟ್ಟು ಬಾ. ಡಿಪಾರ್ಟಮೆಂಟಿಗೆ ಗೊತ್ತಾದರೆ ಮುಗೀತು ಕತೆ. 
ಹಾಗೇನೂ ಆಗಲ್ಲ. ಅದು ಕಾಡುಕೋಣದ ಮರಿಯೆಂದು ಯಾರಿಗೂ ಗೊತ್ತಾಗಲ್ಲ ಬಿಡಿ. ನೀವೇನು ತಲೆ ಬಿಸಿ ಮಾಡ್ಬೇಡಿ. ಎಂದು ಅವರ ಬಾಯಿ ಮುಚ್ಚಿಸಿದೆ.
ಒಂದು ನಾಲ್ಕು ದಿನ ಕಷ್ಟ ಕೊಟ್ಟಿತು. ನಂತರ ಅದುವೇ ಮರಿಗಳೊಂದಿಗೆ ಹೊಂದಿಕೊಂಡಿತು. ಮನೆಯ ದನ ಕರುಗಳೊಂದಿಗೆ ಒಂದಾದ ಮರಿ ದಿನಾಲೂ ಮೇಯಲು ಹೋಗಿ ಹಟ್ಟಿಗೆ ಹಿಂತಿರುಗುತಲಿತ್ತು. ಅದಕೆ ದಿನಾಲೂ ನಾಲ್ಕು ಲೀಟರ್ ಹಾಲು ಕುಡಿಸುತ್ತಿದ್ದೆ. 
***
ಒಂದು ಮುಂಜಾನೆ ಧೂಳೆಬ್ಬಿಸುತ್ತಾ ಬಂದ ಕಪ್ಪು ಪೋಲಿಸ್ ಜೀಪು ನನ್ನ ಅಪ್ಪಯ್ಯನ ಎದೆ ಪಸೆ ಆರುವಂತೆ ಮಾಡಿತ್ತು. 
ಏನ್ರೀ ಕಾಡುಕೋಣದ ಮರಿ ಸಾಕುತ್ತಿದ್ದೀರಿಯಂತೆ? ಎಂದು ಜಂಬದಿಂದ ಜಬರಿಸಿದ ಅರಣ್ಯಾಧಿಕಾರಿ.
ಎ...........ಲ್ಲಾ..........ದ........ರೂ......ಉಂ.....ಟೆ?. ಎಂದರು ಅಪ್ಪಯ್ಯ ನಡುಗುವ ಕಂಠದಲ್ಲಿ. ಅರಣ್ಯಾಧಿಕಾರಿ ನೇರ ಹಟ್ಟಿಗೆ ಹೋಗಿ ನೋಡಿದ. ದನಗಳು, ಕರುಗಳು, ಎಮ್ಮೆಗಳು ಇವನನ್ನು ಪಿಳಿ-ಪಿಳಿ ನೋಡಿದವು. ಅವನೂ ದಿಟ್ಟಿಸಿದ. ಯಾವನೋ ಹೊಸಬನ ನೋಡಿ ಬೆಚ್ಚಿ ಬೊಬ್ಬಿರಿದು ಕೂಗ ತೊಡಗಿದವು. 10-15 ಮರಿಗಳಲ್ಲಿ ಕಾಡುಕೋಣ ಯಾವುದೆಂದು ಅವನಿಗೆ ಗುರುತಿಸಲಾಗಲಿಲ್ಲ. ಅಧಿಕಾರಿಯೋ ಬಯಲು ಸೀಮೆಯವನು. ನಿರಾಶನಾಗಿ ಹಿಂದೆ ಬಂದು ಆ ಮರಿಗಳವುಗಳ ಪೋಟೋ ತೆಗೆದು ಕೊಳ್ಳಿ ಎಂದು ಪೋಟೊಗ್ರಾಫರ್ಗೆ ಆದೇಶಿಸಿದ. ಅಪ್ಪಯ್ಯನ ಎದೆಯಲ್ಲಿ ಅವಲಕ್ಕಿ ಕುಟ್ಟಲಾರಂಬಿಸಿತು. ಅಧಿಕಾರಿ ಅಪ್ಪಯ್ಯನೊಡನೆ ಏನೋ ಮಾತನಾಡಿಕೊಂಡು ಜೀಪು ಹತ್ತಿ ಹೊರಟ. 
ಅವರು ಬಂದು ಹೋದ ಮೇಲೆ ಅಪ್ಪಯ್ಯ ಚಿಂತಾಕ್ರಾಂತರಾದರು. ನನ್ನೊಡನೆ ಮಾತು ನಿಲ್ಲಿಸಿದರು. ನೀನು ಸ್ವಲ್ಪ ದಿನಗಳಿಗೆ ಊರು ಬಿಡು. ಆ ಮರಿಯನ್ನ ಹಟ್ಟಿಯಿಂದ ಬಿಡು ಎಂದು ವರಾತ ಶುರುವಿಟ್ಟರು. ಸಣ್ಣ ಶಬ್ದಕ್ಕೂ ಎಗರಿ ಬೀಳುತ್ತಿದ್ದರು. ಅಪ್ಪಯ್ಯ ದಿನದಿಂದ ದಿನಕ್ಕೆ ಕೃಶರಾಗತೊಡಗಿದರು. ಅವರ ಅವಸ್ಥೆ ನೋಡಲಾಗದೇ ಮರಿಯನ್ನು ಕಾಡಿಗೆ ಬಿಟ್ಟು ಬಂದೆ. ಅದು ಐದಾರು ಬಾರಿ ಇವನನ್ನೇ ನೋಡಿ ಕಾಡಿನಲ್ಲಿ ಕಣ್ಮರೆಯಾಯಿತು. ಏನೇ ಮಾಡಿದರೂ ಅಪ್ಪಯ್ಯನ ದಿಗಿಲು ಕಡಿಮೆಯಾಗಲಿಲ್ಲ. ಆರೋಗ್ಯ ಸ್ಥಿತಿ ಸುಧಾರಿಸಲಿಲ್ಲ. ಯಾವಾಗ ಮಗ ಅರಸ್ಟ್ ಆಗುವನೊ ಎಂಬ ಚಿಂತೆಯಲ್ಲೇ ಕಾಲ ಹಾಕತೊಡಗಿದರು. 
***
"ಇದೇ ನನ್ನ ಜೀವನದ ಟರ್ನಿಂಗ್ ಪಾಯಿಂಟ್" ಎಂದು ಕಪಾಚಿನೋ ಹೀರುತ್ತಾ ಹೇಳಿದ ಹೇಮಂತ್.
ಅವನಿ ಮುಂದೆ ಎನ್ನುವಂತೆ ಅವನನ್ನೆ ನೋಡತೊಡಗಿದಳು.
***
ಇದೇ ಚಿಂತೆಯಲ್ಲಿ ಅವರನ್ನು ನೋಡಲಾದೇ ನಾನು ಮನೆ ಬಿಟ್ಟೆ. ಮೊದ ಮೊದಲಿಗೆ ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದೆ. ಜೊತೆ ಜೊತೆಗೆ ಓದು ಮುಂದುವರಿಸಿದೆ. ಬೆಂಗಳೂರಿಗೆ ಬಂದೆ ಬರವಣಿಗೆ ಕೈ ಹತ್ತಿತು. ನಾ ಬರೆದ 'ಕಾಟಿ ಮರಿಯ ಕೃಪಾಕಟಾಕ್ಷ' ಕತೆಗೆ ಮೊದಲ ಬಹುಮಾನ ಕೂಡ ಬಂದಿತು. ಪ್ರಜಾ ಮಿತ್ರಕ್ಕೆ ದುಡಿದೆ. ಅಲ್ಲಿಂದ ನಾನು ಹಿಂದಿರುಗಿ ನೋಡಿದ್ದೆ ಇಲ್ಲಾ.
***
ಕಪ್ನಲ್ಲಿದ್ದ ಕಪಚಿನೋ ಕೂಡಾ ಮುಗಿದಿತ್ತು. ತುಂತುರು ಮಳೆಯೂ ಆಗಸ್ಟೇ ನಿಂತಿತು.
ಪ್ರಪಂಚದಲ್ಲಿ ಕಾಡೆಮ್ಮೆ ಮರಿಯಿಂದಾಗಿ ಪರ್ತಕರ್ತರಾದವರು ಇರಲಿಕ್ಕಿಲ್ಲ. ಎಂದು ಹೇಳಿ ನಕ್ಕ. 
ಅವಳೂ ಅವನ ಜೊತೆಗೂಡಿದಳು.
***
ಶ್ರೀಧರ್. ಎಸ್. ಸಿದ್ದಾಪುರ.
x

Wednesday, September 16, 2020

ಭಿನ್ನೋಟ


ಒಂದು ಭಿನ್ನ ನೋಟದ ಚಿತ್ರ.- ಇದೊಂದು ಹೊಸ ಅಂಕಣ. ಇಷ್ಟವಾದ ಚಿತ್ರಗಳ ಷೋಕೇಸ್..

ಪೋಲ್ಟಿಸ್ ಪ್ರಭೇದದ ಈ ಜೇಡದ ಚಿತ್ರ ಯಾಕೋ ಬಹಳ ಇಷ್ಟವಾಯಿತು. ಎರಡು ಕೋಡುಗಳ ನಡುವೆ ಸುಮ್ಮನೆ ಕೂತು ಧ್ಯಾನಸ್ಥನಾಗಿದ್ದಾನೆ. ಎಲೆಗಳ ಎಡೆಯಲ್ಲಿ ನೋಡುತ್ತಿದ್ದರೆ ಯಾವುದೋ ಪರಕಾಯ ಕಾಳಿನಂತೆ ಗೋಚರಿಸುವ ಇದು ಹೇಗೋ ನನ್ನ ಕಣ್ಣಿಗೂ ಕಾಣಸಿಕ್ಕಿತು! ಸುತ್ತಲಿನ ಪರಿಸರದಲಿ ಒಂದಾಗಿ ಕಾಣದಂತೆ ಬದುಕುವುದು ಅವುಗಳ ಅನಿವಾರ್ಯತೆ . ನಮ್ಮದು ಆದಷ್ಟು ಎಲ್ಲರ ಕಣ್ಣಿಗೆ ಬೀಳುವ ಹಪಾಹಪಿ ಮನಸ್ಸು!  ಮತ್ತಷ್ಟು ಚಿತ್ರಗಳೊಂದಿಗೆ ಮತ್ತೆ ಬರುವೆ. ಅಲ್ಲಿಯವರೆಗೆ ನಮಸ್ಕಾರ.. 

Poltys Spider

Thursday, September 3, 2020

ಸೂಡಿ ಎಂಬ ಕಾಡ ಬೆರಗು...

 




ಅಬಚೂರಿನ ಪೋಸ್ಟಾಫೀಸು ಕೃತಿಯಲ್ಲಿ ತೇಜಸ್ವೀ ಹೊಸ ನುಡಿಗಟ್ಟು ಉಕ್ತಿ ಬಂಗಿಯನ್ನು ಸೃಷ್ಟಿಸಬೇಕೆಂದು ತಮ್ಮ ಮುನ್ನುಡಿಯಲ್ಲಿ ಬರೆದುಕೊಂಡಿದ್ದಾರೆ. ಅದದೇ ಹಳಸಲು ಸರಕು ರೇಜಿಗೆ ಹುಟ್ಟಿಸುತ್ತೆ. ಜೊತೆಗೆ ನವ್ಯದ ಹಿಡಿತದಿಂದ ಸಾಹಿತ್ಯವನ್ನು ಪಾರು ಮಾಡಬೇಕೆಂಬ ಘನ ಉದ್ದೇಶದಿಂದ ಈ ಮಾತು ಹೇಳಿರಬೇಕು. 
  ಇತಂಹ ಹೊಸ ಶಕೆಯೊಂದನ್ನು ಬರೆಯ ಹೊರಟ ಕೃತಿ ಕಾಡ ಸೆರಗಿನ ಸೂಡಿ. ತೇಜಸ್ವಿ ಕೃತಿಯೊಂದನ್ನು ಓದಿದ ನಂತರ ನಮಗೆ ಆ ಜಾಗಕ್ಕೆ ಹೋಗಬೇಕು ಅನಿಸುತ್ತೆ. ಆದರೆ ಸೂಡಿ ಓದಿದ ಮೇಲೆ ನನಗನಿಸಿದ್ದು ಅವರು ವಿವರಿಸಿದ ಜಾಗದಲ್ಲೇ ಮನೆ ಮಾಡಿ ಕೊಂಡಿರಬೇಕು!! ಅಷ್ಟು ಪರಿಣಾಮಕಾರಿಯಾಗಿ ಪರಿಸರ ಅದರ ಜೊತೆಗಿನ ತಮ್ಮ ಅನುಭವವನ್ನು ಪನ್ನೀರ ಪಾನಕದಂತೆ ವಿವರಿಸಿದ್ದಾರೆ ಮಂಜುನಾಥ್ ಚಾಂದ್. ನಾವೇ ಸೌಪರ್ಣಿಕಾ ನದಿಯ ಬೆಳದಿಂಗಳಲ್ಲಿ ಮಿಂದ ಅನುಭವ. ಈ ಪರಿಯ ಪರಿಸರ ಮಿಳಿತಗೊಂಡು ಅಮಿತಾನುಭವ ನೀಡಿದ ಕೃತಿ ಮತ್ತೊಂದಿಲ್ಲವೆಂದೇ ಹೇಳಬೇಕು. ಕನ್ನಡ ಸಾಹಿತ್ಯಲೋಕದ ಹೊಸ ಮೈಲುಗಲ್ಲು. ಇಂಥಹ ಅಪ್ಪಟವಾದ ಅಪರಂಜಿ ಕತೆ ಹೆಣೆದ ಮಂಜುನಾಥ್ ಚಾಂದ್ ನಮ್ಮ ತ್ರಾಸಿಯವರು ಎಂಬುದೇ ನಮಗೆ ಹೆಮ್ಮೆ.
ಕೆಲವು ಲೇಖಕರ ಕತೆ ಕಾದಂಬರಿಗಳಿಗೆ ಒಂದು ಸ್ಥಾಯಿ ಭಾವವಿದೆ ಎಂಬುದು ನನ್ನ ಸ್ವ ಅನಿಸಿಕೆ. ವಿಶಾದವೇ ಜೋಗಿ ಬರೆಹದ ಸ್ಥಾಯಿ ಭಾವ. ಹುಡುಕಾಟವೇ ತೇಜಸ್ವಿ ಬರೆಹದ ಸ್ಥಾಯಿ ಭಾವ. ಹೊಸ ಬರವಸೆಯ ಸೆಳಕೇ ಮಂಜುನಾಥ್ ಅವರ ಸ್ಥಾಯಿ ಭಾವ ಎಂಬುದು ನನ್ನ ವೈಯಕ್ತಿಕ ಅನಿಸಿಕೆ. 

ಅನೇಕ ಹೊಸತುಗಳ ಹೂರಣ :-

ಹೊಸ ಹೊಸ ಭಾಷಾ ಪ್ರಯೋಗಗಳು ಕಚಗುಳಿ ಇಕ್ಕಿದವು. ಅವುಗಳಲ್ಲಿ ಕೆಲವು... 1. "ಸೂರ್ಯ ಕಂದೀಲು ಗುಡ್ಡವನ್ನೂ, ಸೌಪರ್ಣಿಕಾ ನದಿಯನ್ನೂ ದಾಟಿಕೊಂಡು ಕಡಲ ಹೊಟ್ಟೆ ಸೇರಿಕೊಳ್ಳುವ ದಾವಂತದಲ್ಲಿತ್ತು." 2. "ಆ ಮಧ್ಯರಾತ್ರಿಯ ಸರಿ ಹೊತ್ತಿನಲ್ಲಿ  ಹೊತ್ತಿಕೊಂಡ ಚಿಮಣಿ ದೀಪದ ಬೆಳಕು ಆ ಕೊಪ್ಪದ ತುಂಬಾ ಚೆಲ್ಲಾಡಲು ಒದ್ದಾಟ ನೆಡೆಸಿ ಒಂದಪಾ ಹಾಗೇ ತಟಸ್ಥವಾಯಿತು. 3. "ಒಂದಿದ್ದ ಸೂಡಿ ಎರಡಾಗಿ ಮೂರಾಗಿ ಆರಾಗುವ ಹೊತ್ತಿಗೆ ಆ ಪುಟ್ಟ ತೋಪಿನ ಕೆರೆಯ ನೀರು ಕೆಂಡದ ಓಕಳಿ ತುಂಬಿಕೊಂಡಂತೆ ಕಾಣುತ್ತಿತ್ತು." ಹೀಗೆ ಕವಿತೆಗಳಂತೆ ಪೋಣಿಸಿಕೊಟ್ಟ ಕಾಡಿನ ಹಾರದಂತೆ, ಒಂದೊಳ್ಳೆ ಪ್ರವಾಸ ಮಾಡಿದಂತೆ ಸೌಪರ್ಣಿಕೆಯಲ್ಲಿ ತೇಲಿ ಬರುವ ಬೆಳದಿಂಗಳಂತೆ ಪದಗಳನ್ನು ಬಳಸಲಾಗಿದೆ.
ಗಿರಿಜಾ ಹೆಗೆಡೆಯವರು ಗಂಡ ತೀರಿ ಹೋದಾಗ ಅನುಭವಿಸುವ ಗಾಢವಾದ ವಿಷಾದವನ್ನೂ ವಿಶಿಷ್ಟವಾಗಿ ಪೋಣಿಸಿಕೊಟ್ಟ ಪರಿ ಅನನ್ಯ. ಅನುಭವಿಸಿ ಬರೆದಂತಹ ವಿಷಾದ ಯೋಗ. ಹೀಗಿದೆ ಒಕ್ಕಣೆ "ಏಕಾಏಕಿ ಇವೆಲ್ಲಾ ನಡೆದು ಹೋದವು. ಬದುಕಿನ ರೀತಿಯೇ ಬದಲಾಗಿ ಹೋಯಿತು. ಆಸೆ, ಜಿಹಾಸೆ, ಮುನಿಸು, ಸ್ಪರ್ಶ ಎಲ್ಲಕ್ಕೂ ಅರ್ಥವಿತ್ತು. ಬದುಕಿನ ಕಿಂಡಿಯಲ್ಲಿ ಸಹ್ಯ ಕ್ಷಣಗಳಿದ್ದವು. ಮನಸ್ಸು ಎಲ್ಲವನ್ನೂ ಆಸ್ವಾದಿಸುವ ಶಕ್ತಿಯನ್ನು ಹೊಂದಿತ್ತು. ಈಗ ಬರೀ ಏಕಾಂತ. ಒಳಗಿನ ಧಗ್ಧ ಭಾವಗಳಿಗೆ ಅಂಕುಶವಿಡುವುದು ಅತ್ಯಂತ ಯಾತನಾಮಯ. ಹೊರಗೆ ಬೆಳದಿಂಗಳು ಹಾಲು ಸುರಿಯುತ್ತಿದೆ. ಆದರೆ ಇಣುಕಿ ನೋಡಬೇಕು ಅನಿಸುವುದಿಲ್ಲ. ಅದು ಈ ಮನಸ್ಸಿನ ನೋಟಕ್ಕೆ ಕಾಂತಿಹೀನ ಅನಿಸುತ್ತಿದೆ.....ಸಹಸ್ರಾತಿ ಸಹಸ್ರ ನಕ್ಷತ್ರಗಳ ಚಾಪೆಗೆ ಸೌಪರ್ಣಿಕಾ ನದಿ ಕನ್ನಡಿ ಹಿಡಿದಿರುವುದನ್ನು ಮನಸ್ಸು ಗ್ರಹಿಸುವುದೇ ಇಲ್ಲ! ಅತ್ಯಂತ ನವಿರಾಗಿ ವಿಶಾದವನ್ನು ಅಕ್ಷರಕ್ಕೆ ಪೋಣಿಸಿದ ಪರಿ ಅಚ್ಚರಿ. 

ತನಿಯಾ ಎಂಬ ಅಮಾಯಕ:- 

ಕತೆಯುದ್ದಕ್ಕೂ ಹಬ್ಬಿನಿಂತ ತನಿಯಾ ಅವನ ಅಮಾಯಕತೆ, ಅವನ ಜೀವನ ಪ್ರೀತಿ, ನಿಷ್ಠೆ ಗಮನ ಸೆಳೆಯುತ್ತದೆ. ಆತ ಗಿರಿಜಾ ಹೆಗಡೆ ಅವರಲ್ಲಿ ಕೇಳ್ತಾನೆ "ಅಲ್ಲಾ ಒಡ್ತಿಯರೆ, ಪ್ಯಾಪರ್ ಅಂದ್ರೆ ಎಂತ? ಸತಂತ್ರ ಅಂದ್ರೆ ಎಂತ? ಗಾಂಧಿ ಎಂದ್ರೆ ಯಾರ್? ಹೀಗೆ ಅವನ ಅಮಾಯಕತೆ ಕತೆಯುದ್ದಕ್ಕೂ ಸಾಗುತ್ತದೆ. 
ಕತೆಯನ್ನೂ ಎಲ್ಲೂ ಎಳೆಯದೆ, ತತ್ವ ಸಿದ್ಧಾಂತಗಳ ಭಾರವನ್ನು ಹೊರಿಸದೇ ನೇರವಾಗಿ ಕತೆ ಹೆಣೆದ ಮಂಜುನಾಥ್ ಚಾಂದ್ ಯಶಸ್ವಿಯಾಗಿದ್ದಾರೆ. ಪುಸ್ತಕವನ್ನು ನಿಮ್ಮ ಜೋಳಿಗೆಗೆ ಹಾಕಿದ್ದೇನೆ. ನಿಮಗೇನನ್ನಿಸಿತೆಂದು ಓದಿ ಹೇಳಿ.

Saturday, August 22, 2020

ಮಿಸ್ಟರ್ ಗರಗಸ...





ದಶಕಗಳ ಹಿಂದೆ ಈ ಹೆಸರಿನ ಚಲನಚಿತ್ರ ತೆರೆಕಂಡಿತ್ತು. ನೆನಪು ತಪ್ಪಿಲ್ಲದಿದ್ದರೆ ಕೋಮಲ್ ನಾಯಕ. ಆತನದು ಆ ಚಿತ್ರದಲಿ ತಡೆರಹಿತ ಕೊರೆತ. ರಿಯಲಿ ರೀಲ್ ಗರಗಸನೇ ಈತ! ನೀವೇನಂತೀರಿ?



ನಮ್ಮ ಕತೆಯ ಗರಗಸನೇ ಬೇರೆ. ಯಾವ ನಾಯಕನಿಗಿಂತಲೂ ಕಡಿಮೆ ಏನಿಲ್ಲಾ. ಪರಿಸರ ಸ್ನೇಹಿ, ಹತ್ತಾರು ಜೀವಿಗಳೊಂದಿಗೆ ಸಹ ಜೀವನ ನಡೆಸಬಲ್ಲ! ತನ್ನದಲ್ಲದ ವಸ್ತು ಕ್ಷೇತ್ರವನ್ನು ಮುಟ್ಟಲಾರ! ಕಮರ್ಶಿಯಲ್ ನಾಯಕನಿಗಿರುವ ಅರ್ಹತೆಯಲ್ಲಾ ಇವೆ. ಡ್ಯಾನ್ಸ ಒಂದನ್ನು ಬಿಟ್ಟು! ಅದನ್ನೂ ಮಾಡುತ್ತಾನೊ ಗೊತ್ತಿಲ್ಲ. ಸಂಭಾವನೆ ಮಾತ್ರ ಶೂನ್ಯ. ಕೊಟ್ಟರು ಇಸಕೊಳ್ಳದ ಪುಣ್ಯಾತ್ಮ. ನಾವೆಷ್ಟೇ ಅವನಿಗೆ ಕೃತಜ್ಞರಾಗಿದ್ದರೂ ಕಡಿಮೆಯೆ. ಸದಾ ಕ್ರಿಯಾಶೀಲ ಬಿಡುವಿಲ್ಲದ ವೇಳಾಪಟ್ಟಿ. 

ಅಡಗಿ ಕೂತ ಕದೀಮರನ್ನು ಅರಸರಸಿ ಹೊಡೆವ. ಅವನಿಗೆ ಬೇಕಾದವರನ್ನು ಮಾತ್ರ!! ಇವನ ಕಷ್ಟಕ್ಕೆ ನೀವೇನೇ ಕೊಟ್ಟರು ಕಡಿಮೆಯೇ. ಯಾರೆಂದು ಕೊಂಡಿರಿ ನೀವು? ನಿಮ್ಮ ಊಹೆ ಸರಿ. ಇದೊಂದು Myrmarachne    ಜೇನಸ್ ಗೆ ಸೇರಿದ ಜೇಡ. ನಮ್ಮ ಬಿದಿರ ಕಟ್ಟೆಯನ್ನು ಅನುಕರಿಸುತ್ತಾ ಸುತ್ತಾಡುತ್ತಾನೆ. ನಿಮಗೆ ಬಿದಿರ ಕಟ್ಟೆ ನೆನಪಾದೀತು. ಇಂದಿನ ಯುಗದಲ್ಲಿ ತನ್ನನ್ನು ಎಲ್ಲರೂ ಗುರುತಿಸಲಿ ಎಂದೇ ಬಯಸುವಲ್ಲಿ ಈತ ಯಾರೂ ಗುರುತಿಸದಿರಲಿ ಎಂದು ವೇಷಮರೆಸಿಕೊಂಡೇ ಇರುವವನು. ಎಲೆ ಮರೆಯ ಕಾಯಿಯಂತೆ. 

ಇವನ ಬೇಟೆ ಹತ್ತಿರಕ್ಕೆ ಬಂದರೆ ಹರೋಹರ! ಒಂದೇ ಗುಕ್ಕಿಗೆ ತನ್ನ ಗರಗಸವನ್ನು ಚಾಚಿ ರಕ್ತ ಚಲ್ಲಾಡುತ್ತಾನೆ. ಇವನ ಹಿಡಿತಕ್ಕೊಮ್ಮೆ  ಸಿಕ್ಕಿದರೆ ಮುಗೀತು. ಅಂತಹ ಹಿಡಿತ. ಅನೇಕ ಜೇಡಗಳು, ಬಿದಿರ ಕಟ್ಟೆಗಳು (ಕಟ್ಟೆ ಹಿಡಿದ ಚಿತ್ರಗಳು ಇನ್ನೂ ಸಿಕ್ಕಿಲ್ಲ!! ) ಇವನ ಆಹಾರ. 

 

ವಾರೆ ನೋಟ

ಬೆಣ್ಣಿಯೊಂದಿಗೆ ಬೆರೆತ ಮಜ್ಜಿಗೆ ಮಂಜುಗುಣಿ

ನಮ್ಮ ತಿರುಗಾಲು ತಿಪ್ಪಲುತನಕ್ಕೆ ಕಿಚ್ಚುಹಚ್ಚಿಸಿದ್ದು ಹೊಸ ಕರ್ಮವೀರ! ಕರ್ಮವೀರದ ಜೋಳಿಗೆಯ ತುಂಬಾ ಅರವತ್ತು ಜಲಪಾತಗಳನ್ನು ಕಟ್ಟಿಕೊಟ್ಟಿದ್ದ ಸಂಪಾದಕ ಮಹಾಶಯ. ಗುಣಿಸಿ ಭ...