Sunday, March 17, 2024

ಲೋಚನ ದ ತುಂಬಾ ಚಂದ್ರ ತಾಲದ ಬಿಂಬ

( Chandra tal lake .... Himachal pradesh)

ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿತ್ತಿದ್ದ. ಯಾವದೋ ಚಂದ್ರನ ತುಂಡೊಂದು ಭೂಮಿಗೆ ಉದುರಿದ ಭಾವ. ಅತಿ ಸಣ್ಣ ಊರು ಲೋಸರ್ ಧೂಳಿನಲ್ಲಿ ಮಿಂದ ರಸ್ತೆ, ಜನ. ಬೌದ್ಧರ ಒಂದು ಹಬ್ಬವನ್ನು ನೆನಪಿಗೆ ತರುವ ಹೆಸರು ಲೋಸರ್. ಕಾಝಾ ಗೆ ಹೊರಟ ಒಂಟಿ ಸರಕಾರಿ ಬಸ್.‌ ಗಂಟೆ ಮೂರಕ್ಕೆ ಹಿಂದಿರುಗುವ ದನ ಕರುಗಳ ಮೆರವಣಿಗೆ. ಧೂಳನ್ನು ಲೆಕ್ಕಿಸದೆ ಬಿಸಿಲಿಗೆ  ಕೂತ ಜನ. ಬಲಕ್ಕೆ ಹರಿವ ಹಿಮ ಝರಿ. ಸುತ್ತಲೂ ಕೋಟೆ ಕಟ್ಟಿ ನಿಂತ ಬೆಟ್ಟ ಸಾಲು. ಕತ್ತಿ ಅಲಗಿನಂತಹ  ಚಳಿ. ಜಗತ್ತಿನ ತುತ್ತ ತಲುಪಿದ ಅನುಭವ. 




ಕುಂಜುಂ ಪಾಸ್‌ನಿಂದ ಬೀಸುವ ಹಿಮಗಾಳಿಗೆ ಲೋಸರ್‌ ಹಳ್ಳಿ -೩ ಡಿಗ್ರಿಯಲ್ಲಿ ತಣ್ಣಗೆ ಕುಳಿತ್ತಿತ್ತು. ಸುಸ್ತು ಹೊಡೆಸಿದ ಪ್ರಯಾಣ ಎಲ್ಲಿಗೂ ಹೊರಡದಂತೆ ಎಲ್ಲಿಗೂ ಹೊರಡದಂತೆ ಪ್ರತಿಬಂದಿಸಿತ್ತು. ಹೊಕ್ಕಳೊಳಗೆ ಚಳಿ ಕುಣಿತ. ಹೊದ್ದು ಮಲಗಬೇಕೆಂಬ ತವಕ.


ಬೆಟ್ಟದ ಮೇಲೊಂದು ಕೆಳಗೊಂದು ಬುದ್ಧನ ದೇವಾಲಯ. ಊರ ನಡುವಿನ ಪುಟ್ಟ ಕ್ಯಾಂಟಿನ್‌ ಒಂದರಲ್ಲಿ ದಾಲ್‌ ಚಾವಲ್‌ ನ ಸವಿದು ಬೆಟ್ಟದ ಮೇಲಿನ ಬುದ್ಧ ದೇವಾಲಯಕ್ಕೆ ಲಗ್ಗೆ ಇಟ್ಟೆವು. ಸೂರ್ಯ ಇಳಿಯುತಲಿದ್ದ. ಹಸುಗಳ ಕೊರಳ ನಾದ ಆಲಿಸುತ್ತಾ ಗುಡ್ಡ ಏರತೊಡಗಿದೆವು. ಚಂದ್ರನ ತುಂಡೊಂದರ ಮೇಲಿಳಿದ ಭಾವ. ಹೂ ಚೆಲ್ಲಿದಂತಿದ್ದ ಮೋಡಗಳ ನಡುವೆ ಸೂರ್ಯ ಚಂದ್ರನಂತಾಗಿದ್ದ. ಕಡಲ ನೀಲಿ ಕುಡಿದು ಮತ್ತೇರಿಸಿಕೊಂಡ ನೀಲಾಕಾಶ. ಚಳಿ ಹೊಡೆತಕ್ಕೆ ಹಳದಿಯಾದ ಗಿಡ ಮರಗಳು. ಬೆಟ್ಟದ ಮೇಲೆಲ್ಲಾ ಸುಣ್ಣ ಚಲ್ಲಿದಂತೆ ಬಿದ್ದ ಹಿಮ ರಾಶಿಗಳು. ಶಿಖರದಾಚೆ ಚೀನಾ ದೇಶ. ನೆತ್ತಿಯಲ್ಲೇನೋ ಅಲೌಕಿಕ ಆನಂದ. ದಿವ್ಯ ಏಕಾಂತದ ಅಮಲು. ಅಲ್ಲೇ ಕೂರುವಂತೆ ಪ್ರೇರೇಪಿಸಿದ್ದರೂ ಚಳಿ ಬೇಗನೆ ಕೆಳಗಿಳಿ ಕೆಳಗಿಳಿ ಎನ್ನುತಲಿತ್ತು. ಇಲ್ಲಿನ ಚಳಿಗೆ ಕಪ್ಪ ಕೊಟ್ಟೆ. 

Losar Village

    ರೆಸಾರ್ಟ್‌ ಸೇರುತ್ತಲೇ ಬಿಸಿ ಬಿಸಿ ಲಿಂಬೆ ಚಹದ ಬರಪೂರ ಸ್ವಾಗತ. ಕಾಝಾದಿಂದ ಬೈಕ್ ನಲ್ಲಿ ಬರುವ ಗೆಳೆಯರು ಧೂಳ ಸ್ನಾನಗೈಯುತ್ತಾ ನಿದಾನಕ್ಕೆ ಬಂದರು. ಇಲ್ಲಿ ಒಂದೆರಡು ಹೋಟೆಲ್‌ ಬಿಟ್ಟರೆ ಬೇರಿಲ್ಲ. ಇದ್ದುದರಲ್ಲೇ ಉತ್ತಮವಾದುದೊಂದು ನನ್ನ ಪಾಲಿಗೆ ಬಂದಿತ್ತು. ಪ್ರಶಾಂತ ಹಿಮಾಲಯದ ಕೊನೆ ಹಳ್ಳಿ ಅದ್ಭುತ ಪಯಣಕ್ಕೊಂದು ಮುನ್ನುಡಿ ಬರೆಯಿತು. ಹಿಮಾಲಯದ ಹಳ್ಳಿಗಳಲ್ಲಿರುವ ದೈವೀಕತೆ ಎಂತಹ ಪಾಮರನಲ್ಲೂ ಆಧ್ಯಾತ್ಮದ ಸೆಳಕನ್ನು ಹೊತ್ತಿಸಬಲ್ಲದು.

A temple near Losar Village

A mud road to Kumzum Pass

ಪಯಣದಿಂದ ಜರ್ಜರಿತವಾದ ದೇಹಕ್ಕೆ ಸ್ನಾನದ ಸಾಂತ್ವಾನ ನೀಡಲೆನ್ನಿಸಿದೆ. ಸಿಕ್ಕ ಒಂದೇ ಬಕೆಟ್‌ ಉಗುರು ಬೆಚ್ಚಗಿನ ನೀರಲ್ಲಿ ಮಿಂದೆದ್ದವನಿಗೆ ಮೈಯಲ್ಲಿ ಭೂಕಂಪ. ಭೂತ ಆವರಿಸಿದಂತೆ ನಡುಕ. ಸಂಜೆ ಐದಕ್ಕೆ ಹೊಕ್ಕ ಚಳಿ ಏಳಾದರೂ ಹೋಗಿರಲಿಲ್ಲ. ಹೊದ್ದು ಮಲಗಿದೆ. ಎರಡು ಚಹ ಕುಡಿದೆ ಆದರೂ ನಡುಕದ ಮುಂದುವರಿಕೆ. 

7.45 ಕ್ಕೆ ಊಟಕ್ಕೆ ಕರೆ ಬಂತು. ಪುಟಾಣಿ, ಚಳಿಗೆ ಜಾಗವಿಲ್ಲದ ಡೈನಿಂಗ್‌. ಬಿಸಿ ಬಿಸಿ ಕಪ್ಪು ಕಡಲೆ ಬೀಜದ ಸೂಪ್‌ ಹಬೆಯಾಡುತ್ತಾ ನನ್ನ ಕುಡಿ ಕುಡಿ ಎಂದು ಬಂತು. ಹೊಟ್ಟೆ ಸೇರುತ್ತಲೇ ಚಳಿ ತನ್ನೂರ ಸೇರಿತ್ತು. ಜೀವದಲ್ಲಿ ಹೊಸ ಜೀವ ಸಂಚಾರ. ಇಂತಹ ಚಳಿಯಲ್ಲಿ ಸೂಪ್‌ ಹೀರುವುದೇ ಅವರ್ಣನೀಯ ಆನಂದ. ಸ್ಪಿಟಿ ಹಳ್ಳಿಯೂಟವೊಂದು ಸವಿಯುವ ಸದಾವಕಾಶವೊಂದನ್ನು ನಮಗೆ ಕರುಣಿಸಿದ ಹೊಟೆಲ್‌ ಮಾಲೀಕ ಮತ್ತು ಅವರ ತಾಯಿಗೆ ವಂದನೆ ಸಲ್ಲಿಸಿದೆ. ನಾಚಿಕೆಯಲ್ಲಿ ಮುದುಡಿಕೊಂಡರು. ಕತ್ತಲು ನಮ್ಮನ್ನು ಅದರ ತೆಕ್ಕೆಯಲ್ಲಿ ಬಹು ಬೇಗನೆ ಕರಗಿಸಿಕೊಂಡಿತು.

ಕುಂಜುಂ ಮಾತಾ ಮಂದಿರದೆಡೆಗೆ…


ಕತ್ತಿಯ ಅಲುಗಿನಂತಹ ಚಳಿಯಲಿ ಬೇಗನೆದ್ದು ಬ್ರೆಡ್‌ ಆಮ್ಲೇಟ್‌ ಮೆದ್ದು ೫.೩೦ ಕ್ಕೆ ಹೊರಟು ನಿಂತೆವು. ಮಧ್ಯ ಮಧ್ಯ ಒಂದರೆಗಳಿಗೆ ಸೆಲ್ಫೀ ಸಮಾರಾಧನೆ ನಡೆಯಿತು. ಮುನಿಸಿಕೊಂಡ ಸೂರ್ಯ ನಿಧಾನಕ್ಕೆ ಬೆಟ್ಟಗಳ ಬೆಳಗಿಸ ತೊಡಗಿದ. ಸುಮಾರು ಒಂದು ಗಂಟೆ ಜೀವ ಕೈಯಲ್ಲಿ ಹಿಡಿದುಕೊಂಡು, ಧೂಳ ಸ್ನಾನ ಮುಗಿಸಿ ಕುಂಜುಂ ಮಾತಾದಲ್ಲಿದ್ದೆವು. 

ಕುಂಜುಂ ಮಾತಾ ಮಂದಿರದಲ್ಲಿ….

ಕುಂಜುಂ ಮಾತಾ ಮಂದಿರ.


ಕಾವಲಿಗಿಟ್ಟ ಗಿರಿ ಶಿಖರಗಳು ಚಳಿಗೆ ಬಿಳಿ ಸ್ವೆಟರು ಹೊದ್ದು ನಿಂತಿದ್ದವು. ಶರಾಬಿನಲಿ ಅದ್ದಿ ತೆಗೆದಂತಹ ಚಳಿಗೆ ಪತರುಗುಟ್ಟುತಲಿತ್ತು ಕೈ, ಕಾಲು ದೇಹ. ಬೈಕ್‌ ಸವಾರರು ಚಳಿಗೆ ಕೈ ಮುಗಿಯುತಲಿದ್ದರು. ಧೂಳ ಸ್ನಾನ.

ವಿಚಿತ್ರ ಮಂದಿರದಲ್ಲಿ …….

ದಕ್ಷಿಣ ಭಾರತದವರಿಗೆ ಇದೊಂದು ವಿಚಿತ್ರ ಮಂದಿರವೇ. ಸುಮಾರು 14,900 ಅಡಿ ಎತ್ತರವು ಅದಕ್ಕೊಂದು ಕಿರಿಟ ತೊಡಿಸಿತ್ತು. ಪರ್ವತಗಳೇ ಗೋಡೆ. ಆಕಾಶವೇ ಮೇಚ್ಛಾವಣಿ! ನಿನ್ನೆ ಮುಗಿಲಿನಿಂದ ಸುರಿದ ಹಿಮವೇ ಸುಂದರ ನೆಲಹಾಸು! ಕೇವಲ ಒಂದಿಷ್ಟು ಸಣ್ಣ ಸಣ್ಣ ಗೋಪುರ ನಿರ್ಮಿಸಿ ಇಟ್ಟ ಜಾಗವೇ ಮಂದಿರ. ಸುತ್ತಲೂ ಪತಾಕೆಗಳು. ಕಪ್ಪು ಬಳಪದ ಶಿಲೆಯೇ ದೇವರು. ಪ್ರತಿ ವಾಹನ ಇಲ್ಲಿ ನಿಲ್ಲಿಸಿ ಒಂದು ಸುತ್ತು ಬಂದು ಹೊರಡುತ್ತವೆ. 
     ನಮ್ಮ ಮನೋಕಾಮನೆಗಳು ಈಡೇರಬೇಕಾದರೆ ಈ ಶಿಲೆಗೆ ನಾಣ್ಯ ಅಂಟಬೇಕಂತೆ! ನಮ್ಮ ತಂಡದವರ ಯಾರ ನಾಣ್ಯವೂ ಅಂಟಲಿಲ್ಲ. ನನ್ನೆದುರಿಗೇ ಯಾತ್ರಿಕನೊಬ್ಬನ ನಾಣ್ಯ ಅಂಟಿ ನನಗೆ ಅಚ್ಚರಿ ಮೂಡಿಸಿತು! ಏನೇ ಮಾಡಿದರೂ ನನ್ನ ನಾಣ್ಯ ಈ ಶಿಲೆಗೆ ಅಂಟಲೇ ಇಲ್ಲ. ನನ್ನ ಪಾಪ ಕರ್ಮ ಹೆಚ್ಚಾಯಿತಿರಬೇಕು.🤣🤣🤣 
ಕುಂಜುಂ ಮಾತಾ ಮಂದಿರ

ಕುಂಜುಂ ದೇವಾಲಯದ ಎದುರಿನ ಬುದ್ಧ




ಕುಂಜುಂ ಮಾತಾ ಎದುರಿನ ಹಿಮ ಹೊತ್ತ ಶಿಖರ

ಬಾರಾ ಶೆಂಗ್ರಿ ಗ್ಲೀಷಿಯರ ವಿಶ್ವದ ಅತಿ ಉದ್ದನೆಯದರಲ್ಲಿ ಎರಡನೆಯದ್ದು ಇಲ್ಲಿಂದ ನಾಲ್ಕು ಹಾಡಿನ ದೂರದಲ್ಲಿದೆ. 

ಕಂದು ಬಣ್ಣದ ಗಿರಿ. ಭಯಂಕರ ಚಳಿಗೆ ಸೂರ್ಯ ಮೇಲೆ ಬಂದಿರಲಿಲ್ಲ. ಕುಂಜುಂ ಮಾತೆಯ ವಿಚಿತ್ರ ಕತೆ ಕೇಳುತ್ತಾ ತೀವ್ರ ಕೊರಕಲಿನಲ್ಲಿ ಕಣ್ಣು ಇಳಿಸುತ್ತಾ ಮುಂದೆ ಸಾಗಿದೆವು. ದಾರಿಯ ಭೀಕರತೆಗೆ ಬೆರಗುಗೊಳ್ಳುತ್ತಾ ೧೨ ಕಿ.ಮೀ ದೂರದ ಚಂದ್ರ ತಾಲ್‌ನತ್ತ ಮುಂಬರಿದೆವು. ಮನಾಲಿಯಿಂದಲೂ ಇಲ್ಲಿಗೆ ತಲುಪಬಹುದು.  

ಸುಮನೋಹರ ಚಂದ್ರತಾಲ್‌ 

ಚಂದ್ರತಾಲ್ ಸನಿಹದ ಬೆಟ್ಟ ಸಮೂಹ



ಚಂದ್ರ ತಾಲ್


ಮನ ಮನಸಿನ ತುಂಬಾ ಚಂದ್ರತಾಲ್‌ದ ಬಿಂಬ. ಚಂದ್ರ ತಾಲ್‌ಗೆ ಹಿಮ ಶಿಖರಗಳ ಪಹರೆ. ಗಳಿಗೆಗೊಂದರಂತೆ ಬಣ್ಣ ಬದಲಿಸುವ ಸರೋವರ. ಚಂದ್ರಾ ನದಿ ಹುಟ್ಟುವುದು ಇಲ್ಲಿಂದಲೇ.‌ ಮುಂದೆ ಇದು ಚಿನಾಬ ನದಿಯೊಂದಿಗೆ ಸೇರುತ್ತದೆ. 

ಲೋಸರ್‌ನಿಂದ ಸುಮಾರು ೨ ಗಂಟೆಯ ದಾರಿ. ಪಾರ್ಕಿಂಗ್‌ ಜಾಗದಿಂದ ೧೫ ನಿಮಿಷಗಳ ನಡಿಗೆಯಲಿ ಸುತ್ತಲಿನ ದಿವ್ಯ ಶಿಖರಗಳ ನೋಟಕ್ಕೆ ಬೆರಗಾಗುತ್ತಾ ಚಂದ್ರತಾಲ್‌ ಸರೋವರದ ತಟ ತಲುಪಿದೆವು.

ಚಂದ್ರ ತಾಲ್‌ ಸರೋವರದ ಸುತ್ತಳತೆ ಸುಮಾರು ೨.೫ ಕಿ.ಮೀ. ಗ್ಲೇಷಿಯರ್‌ ನ ಕರಗಿದ ನೀರನ್ನು ಪ್ರತಿಫಲಿಸುತ್ತದೆ. ನಸು ಗುಲಾಬಿ ಶಿಖರಗಳ ನೆತ್ತಿಯಲ್ಲಿ ಹಿಮ ಬಿಂದು ಕರಗದೇ ಹೊಳೆಯುತ್ತಿತ್ತು. ಕೊರೆವ ನೀರಿಗೆ ಪಾದವಿಟ್ಟರೆ ನಡೆದ ಹಾದಿಯ ದಣಿವು ಮಾಯ. ಚಂದ್ರತಾಲ್‌ ಸುತ್ತಲಿನ ಬೆಟ್ಟ ದರ್ಶನ. ಯಾವುದೋ ಕಾಲ ಘಟ್ಟದಲ್ಲಿ ಬಿದ್ದ ಉಲ್ಕೆಯಿಂದ ಈ ಸರೋವರ ರಚಿತವಾಗಿರಬೇಕು. ಸುತ್ತೆಲ್ಲವೂ ಶಿಖರಗಳಿದ್ದರೆ ಚಂದ್ರತಾಲ್‌ ದ ಬಲಕ್ಕೆ ಸಪಾಟು ನೆಲವಿದೆ. ಅನೇಕ ಕಡೆ ಇಂತುಹುದೇ ಸಪಾಟು ನೆಲವಿರುವುದೇ ನನ್ನ ನಿಲುವಿಗೆ ಕಾರಣ. ಇದರ ಕುರಿತು ತುದಿ ಮೊದಲಿಲ್ಲದ ಅನೇಕ ಕತೆಗಳು ಪ್ರಚಾರದಲ್ಲಿವೆ. 

ಪುರಾಣದಲ್ಲಿ ಚಂದ್ರತಾಲ್…..


ಯುದಿಷ್ಟಿರನು ಸ್ವರ್ಗವೇರಿದ್ದೂ ಇಲ್ಲಿಂದಲೇ ಎಂದು ನಂಬಲಾಗಿದೆ. ಇಂದ್ರ ತನ್ನ ರಥದಲ್ಲಿ ಬಂದು ಆತನನ್ನು ಕರೆದೊಯಿದ್ದ ಎನ್ನುತ್ತದೆ ಪುರಾಣ. 

         ಹುಯ್‌ನ್‌ ಸಾಂಗ್‌ ಚೀನಿ ಯಾತ್ರಿ ಈ ಸರೋವರದ ಸಮೀಪ ಹಾದು ಅದನ್ನು ಲೋಹಿತ್ಯ ಸರೋವರವೆಂದು ಕರೆದ. 

  ಮೋಹಕ ಚಂದ್ರ ತಾಲ್ ಸರೋವರ

ಚಂದ್ರ ತಾಲ್‌ನ ನೀರಿನ ಮೂಲವಿನ್ನೂ ತಿಳಿದಿಲ್ಲ. ದೂರದ ಗ್ಲೇಷಿಯರ್‌ ನಿಂದ ನೀರು ಇಲ್ಲಿಗೆ ಹರಿದು ಬರುತ್ತದೆ ಎನ್ನುತ್ತಾರೆ. ಈ ನೀರು ಹರಿದು ಚಿನಾಬ್‌ ನದಿಗೆ ಸೇರುತ್ತದೆ. 

ಲೌಕಿಕ ಜಗತ್ತಿನಿಂದ ದೂರವಿರುವ ಈ ತಾಣ ಆಧ್ಯಾತ್ಮದ ಅತೀಂದ್ರಿಯ ಸ್ಪರ್ಶವೊಂದನ್ನು ನನಗೆ ಗೊತ್ತಾಗದಂತೆ ಕರುಣಿಸಿತ್ತು. ಸ್ಪಟಿಕ ಶುಭ್ರ ಜಲದಲ್ಲಿ ಕಾಲು ತೋಯಿಸಲು ಮತ್ತೊಮ್ಮೆ ಏಕಾಂಗಿಯಾಗಿ ಬರಬೇಕು. ಇಲ್ಲಿನ ಬದುಕನ್ನು ಆಸ್ವಾದಿಸಬೇಕು ಎಂಬ ಹಂಬಲದೊಂದಿಗೆ ಹೊರಟು ನಿಂತೆ. ನನ್ನ ಮನೋಭಿತ್ತಿಯಲ್ಲಿ ಸರೋವರ ಸಣ್ಣ ಉಲ್ಲಾಸದ ಅಲೆಗಳನ್ನು ಎಬ್ಬಿಸುತ್ತಲೇ ಇದೆ. ಲೋಚನದ ತುಂಬಾ ಚಂದ್ರ ತಾಲದ ಬಿಂಬ. ಯಾಕೆ ನೀವು ಒಮ್ಮೆ ಹೋಗಿ ಬರಬಾರದು.

ಹಾಗೆ ಇಲ್ಲಿನ ಬತ್ತಲಿನಲ್ಲಿರುವ ಚಾಚಾ ಚಾಚಿ ದಾಬಾದಲ್ಲಿ ಊಟ ಮಾಡಲು ಮರೆಯದಿರಿ. ಅತ್ಯಂತ ಕಡಿಮೆ ದರದಲ್ಲಿ ನಿಮಗೆ ಊಟವನ್ನು ಬಿಡಿಸುತ್ತಾರೆ. ಸುಮಾರು ವರ್ಷಗಳ ಕೆಳಗೆ ಹಿಮದಲ್ಲಿ ಸಿಕ್ಕಿಬಿದ್ದ 15 ಜನರಿಗೆ ತಿಂಗಳುಗಳ ಕಾಲ ಉಚಿತ ಊಟವನ್ನು ಇವರು ವ್ಯವಸ್ಥೆ ಮಾಡಿದ್ದರು. ಚಂದ್ರ ತಾಲ ನೋಡುವವರು ಮರೆಯದೆ ಭೇಟಿ ನೀಡಬೇಕಾದ ಜಾಗವೆಂದರೆ ಬತ್ತಾಲ್ ನ ಚಾಚಾ ಚಾಚಿ ದಾಬ.

ಚಾಚಾ ಚಾಚಿ ಡಾಬಾದ ಚಾಚಾ ಮತ್ತು ಚಾಚಿ




Saturday, January 20, 2024

ಕಲ್ಲು ಕರಗಿಸುವ ಕೊಟಚಾದ್ರಿಯ ಕರೆ….


ರೆ ಕೊಟಚಾದ್ರಿ ಎಂದರೆ ಅದೇಕೋ ರೋಮಾಂಚನ! ಧಮನಿಗಳಲ್ಲಿ ರುಧಿರ ನರ್ತನ. ಇಂತಹ ಕುಟಚಾದ್ರಿ, ಕೊಡಚಾದ್ರಿ ಎಂದು ಕರೆಸಿಕೊಳ್ಳುವ ಈ ಸ್ಥಳವೇ ಅಪೂರ್ವ. ಏಳು ಅಶ್ವಗಳ ಸೆಳೆತ. ಮುಗಿಲು ಚುಂಬಿಸಿ ಬಂದ ಅನುಭವವನ್ನು ಹೊಸ ರೀತಿಯಲ್ಲಿ ಹೇಳುವ ಸಣ್ಣ ಪ್ರಯತ್ನ.

 ಜೀಪಿನಲ್ಲೂ ಹೋಗಿ ಬರಬಹುದು. ಹೋಗಿಬರಲು 2 ಸಾವಿರ ತೆಗೆದುಕೊಳ್ಳುವರು. ಮಳೆಗಾಲ ವಿಡಿ ಬ್ಯುಸಿಯಾಗಿರುವ ಇಲ್ಲಿನ ಜೀಪಿನವರು ಬೇಸಿಗೆಯಲಿ ಇವರಿಗೆ ಸೂಟಿ. ವಾರಕ್ಕೆರಡು ಬಾಡಿಗೆಯಾದರೆ ಹೆಚ್ಚು. ಇದನ್ನೇ ಪ್ರಧಾನ ಉದ್ಯೋಗವಾಗಿ ನೆಚ್ಚುವಂತಿಲ್ಲ. ಬೇರೊಂದು ಉದ್ಯೋಗದ ಜೊತೆ ಜೀಪು ಸವಾರಿ ಎಂಬುದು ನಮ್ಮ ಜೊತೆ ಬಂದ ನಿತ್ಯಾನ ಉವಾಚ. ಜೀಪಿನ ಸವಾರಿಯೂ ಒಂದು ಆಧ್ಯಾತ್ಮಿಕ ಪಯಣ.



ಹೆಸರಿನ ನಂಟು….     

ಕುಟಜವೆಂದರೆ ಸಸ್ಯ. ಅದನ್ನ ಹೊದ್ದ ಅದ್ರಿ ಕುಟಚಾದ್ರಿ ಅಥವಾ ಕೊಡಚಾದ್ರಿ ಎಂಬ ಅರ್ಥವಿದೆ ಎಂದವರು ಗಣ್ಯರಾದ ವಸಂತ ಕುಮಾರ ಪೆರ್ಲಾ. ಇಂತಹ ಅದ್ರಿಯು ನೂರಾರು ಗಿಡ ಮೂಲಿಕೆಗಳ ಕಣಜ!. ಮೂಕಾಂಬಿಕಾ ವನದ ಸೆರಗಲ್ಲೆ ಮಲಗಿದ ಐದನೆಯ ದೊಡ್ಡ ಅದ್ರಿ. ಅಪ್ಪೆ, ಮತ್ತಿ ಮುಂತಾದ ವಿಶಿಷ್ಟ ಮರಗಳ ಗಮ್ಯ.  ಏನೇ ಇರಲಿ ತುದಿಯೇರುವ ತವಕದಲ್ಲಿರುವ ನಮಗೆ ಬಾಕಿ ಎಲ್ಲವೂ ಗೌಣ. ಮುಳ್ಳಯ್ಯನ ಗಿರಿಗೆ ಬಿಟ್ಟರೆ ಕೊಡಚಾದ್ರಿಗೆ ಮಾತ್ರ ರಸ್ತೆ ಮಾರ್ಗ. ಹಾಗಾಗಿ ಬೈಕನ್ನೇರಿಸುವ ಹುಚ್ಚು ಸಾಹಸ ಮೈ ಮೇಲೆಳೆದು ಕೊಂಡೆವು. ಅದೂ ಬುಲೆಟ್!‌


ಬೈಕಿನ ಬಂಟ ಹೆಂಗೆ ಹೊಂಟ..

ಗೌರಿ ಕೆರೆ ಎಂಬೂರಿನಲಿ ಬಲಕ್ಕೆ ತೇಲಿಕೊಂಡರೆ ಸಿಗುವ ಜಲಧಾರೆವರೆಗೆ ಒಮ್ಮೆ ಬಂದು ಹೋಗಿದ್ದೆ. ಅದೇ ಎಮ್ಮೆ ಹೊಂಡ ಜಲಪಾತ. ಅಂದೇ ಒಮ್ಮೆ ಈ ಅದ್ರಿಯ ಏರಬೇಕೆಂದು ಕನಸು ಕಂಡಿದ್ದೆ.

ಈ ಅದ್ರಿ ಏರಲು ಎರಡು ದಾರಿಗಳಿವೆ. ಮೊದಲನೆಯದು ಒಂಟಿ ಮರದ ಅತಿ ಭಯಂಕರ ಏರು ದಾರಿ. ದಾರಿ ತಪ್ಪಿದರೆ ಕಾಡೊಳಗೆ ಲೀನ. ಗೆಳೆಯನೊಬ್ಬರ ತಂಡ ಇಲ್ಲೇ ಕಳೆದು ಹೋಗಿ ಸಂಜೆ ಊರು ಸೇರಬೇಕಾದವರು ಮಧ್ಯ ರಾತ್ರಿ ಊರು ಸೇರಿದರು! ರಹಮತ್‌ ತರಿಕೇರಿ ಎಂಬ ಉಪನ್ಯಾಸಕರೂ ಇಲ್ಲಿ ದಾರಿ ತಪ್ಪಿ ಅಲೆದಿದ್ದರು. ಎರಡನೆಯದು ರಸ್ತೆ ಮಾರ್ಗ. ಕಾಲು ನೋವಿದ್ದ ಕಾರಣ ಅತಿ ದೂರದ ರಸ್ತೆ ಮಾರ್ಗವನ್ನೇ ಆಯ್ದುಕೊಂಡೆವು.

ಗೆಳೆಯ ನಾಗರಾಜನೇ ಮುಖ್ಯ ಸವಾರ. ಹೊರಟಿದ್ದು ನಡು ಮಧ್ಯಾಹ್ನಕ್ಕೆ. ಇಳಿ ಸಂಜೆಗೆ ಮೊದಲು ನಾಗೋಡಿ ದಾಟಿ ಕುಟಚಾದ್ರಿಯ ತಿರುವಿನಲ್ಲಿದ್ದೆವು. ಒಂದೆರಡು ಜೀಪುಗಳು ಕಾದು ನಿಂತಿದ್ದವು. ಸುಲಭಾಗೇ ಚೆಕ್‌ ಪೋಸ್ಟವರೆಗೆ ದಾಟಿಕೊಂಡೆವು. ಮುಂದಿನದು ಅತಿ ದುರ್ಗಮ ಪಯಣ. ಹೋರಿಯಂತಹ ರಾಯಲ್‌ ಎನಪೀಲ್ಡ್‌ನ್ನು ಜೋಲಿ ಹೊಡೆಯದಂತೆ ಕಾಪಾಡುವುದೇ ದೊಡ್ಡ ಸಾಹಸ. ರಸ್ತೆ ನಡುವಿನ ನೀರ ತೋಡುಗಳ ದಾಟುವುದೇ ಮಹಾ ಸಂಕಷ್ಟ. ಇಂತಹುದೇ ಒಂದು ಗಾಳಿ ಗುಡ್ಡ ವೆಂಬ ಪರ್ವತ ಹೊರನಾಡಿನ ಸಮೀಪವಿದೆ. ಅದರ ಚಾರಣವಂತೂ ಭಾರಿ ಭೀಕರ. 

ಬೈಕ್‌ ಎಲ್ಲೂ ನಮ್ಮ ಮಾತೇ ಕೇಳದೇ ಸ್ವಂತ ಬುದ್ದಿ ಇರುವಂತೆ ವರ್ತಿಸತೊಡಗಿತು. ಯಾವಾಗಲೂ ತೋಡುಗಳೆಡೆಗೆ ಅತೀವ ಆಕರ್ಷಣೆ. ಭರ್ಜರಿ ಹಾರ್ನ್‌ ಹಾಕುತ್ತಾ ಹಿಂದಿನಿಂದ ಜೀಪೊಂದು ಧೂಳ ಸಾಗರವನ್ನು ಕಟ್ಟಿಕೊಂಡೇ ತಿರುವಿನಲ್ಲಿ ಬುಸುಗುಡುತ್ತಾ ಬರುತಲಿತ್ತು. ಮ್ಯಾಂಗನೀಸ್ ಅದಿರಿನ ಮಹಾ ಧೂಳಿನ ಮೋಡವೊಂದು ಎದ್ದಿತು. ಆಗಲೇ ನಮ್ಮ ಬೈಕ್‌ ನೀರ ಓಣಿಯೊಳಗೆ ಸವಾರನ ಆಜ್ಞೆಯನ್ನು ದಿಕ್ಕರಿಸಿ ಮಲಗಿಬಿಟ್ಟಿತು. ಕೆಸರ ಹೊಂಡದಲ್ಲಿ ಮಲಗಿದ ಎಮ್ಮೆಯಂತೆ ಏಳಲು ಒಪ್ಪಲೇ ಇಲ್ಲ. ಅಂತೂ ಕಷ್ಟ ಪಟ್ಟು ಎತ್ತಿ ಹಿಡಿದಾಗ ಉಸ್ಸಪ್ಪವೆಂಬ ಉಸಿರು ಹೊರ ಚೆಲ್ಲಿತು. ಜೀಪಿನವನೂ ನಿಲ್ಲಿಸಿ ಸಹಾಯ ಬೇಕೇ? ಎಂದು ಕೇಳಿದ. ಜೀಪಿನ ಮಾಲಿಕನಿಗೆ ಧನ್ಯವಾದ ಹೇಳಿ ಏರು ದಾರಿಯ ಏರಲು ಅನುವಾದೆವು. ಕಾಲಿಗೆರಡು ಬರ್ಜರಿ ಬರೆ ಬಿದ್ದವು. ಕಾಲಿನ ಬರೆಯ ಬಿಸಿಯನು ಹೊತ್ತೇ ನೆತ್ತಿ ಹತ್ತಿತು ನಮ್ಮ ಬೈಕ್.‌ ಮೂಲ ಮೂಕಾಂಬಿಕೆ, ಹುಲಿ ದೇವರ ಗುಡಿಯ ಸನಿಹ ಬೈಕ್ ನಿಲ್ಲಿಸಿದೆವು. ನಾಗ ತೀರ್ಥದ ಪನ್ನೀರು ಚಿಮುಕಿಸಿಕೊಂಡು ಹೊರಟೆವು.


ಅದಿರಿನ ಖದರು ...

ಅಪಾರ ಅದಿರಿನ ಖನಿಯಾದ ಇಲ್ಲಿನ ಬೆಟ್ಟ ಬಗೆಯಲು ಖಾದಿಯವರು ಕಾದು ಕುಳಿತಿದ್ದಾರೆ. ಬೆಟ್ಟ ಬಯಲು ಮಾಡಲು! ಮುಕಾಂಬಿಕಾ ಅಭಯಾರಣ್ಯದ ವ್ಯಾಪ್ತಿಗೆ ಬರುವುದರಿಂದ ಕೊಂಚ ನಿರಾಳವಾಗಿದೆ. ಇಲ್ಲವಾದರೆ ಎಂದೋ ಇದನ್ನು ಬಗೆದು ಹಾಕುತ್ತಿದ್ದರು. ಮನುಷ್ಯನ ದುರಾಸೆಗೆ ಮಿತಿ ಎಲ್ಲಿ?

ಬೆಲೆ ಕಟ್ಟಲಾಗದ ಹಸಿರು ಮತ್ತು ಜೀವಜಗತ್ತಿನ ತಾಣ ಈ ಕೊಡಚಾದ್ರಿ . ಹಗಲು ಹೊತ್ತಿನಲಲ್ಲೇ ಕಾಡು ಕೋಣಗಳ ಹಿಂಡು ಕೆಲವೊಮ್ಮೆ ಕಾಣಸಿಗುತ್ತದೆ. ಹುಲಿ ಚಿರತೆಗಳ ಸಂಖ್ಯೆಯೂ ಕಮ್ಮಿ ಇಲ್ಲ. 

ಶಂಕರ ಪೀಠದ ಹಾದಿಯಲಿ…

ಬೈಕಿನಿಂದಿಳಿದು ಬೈಗಿಗೆ ಜಾರುವ ದಿನಕರನ ದರುಶನಕೆ ಸರ್ವಜ್ಞ ಪೀಠಕ್ಕೆ ಲಗ್ಗೆ ಇಟ್ಟೆವು. ನಭವನು ಕಡು ಕಿತ್ತಳೆಗೆ ತಿರುಗಿಸಿದ ದಿನಕರನು ಕಡಲಿಗಿಳಿದು ತನ್ನ ಉರಿಯನ್ನು ತಣ್ಣಗೆ ಮಾಡಿಕೊಳ್ಳುತ್ತಿದ್ದ. ನಾವಿಬ್ಬರು ಚಿಪ್ಪ್ಸು ಮತ್ತು ಹಣ್ಣಿನ ರಸವನು ಹೊಟ್ಟೆಗಿಳಿಸಿ ಹೊಟ್ಟೆಯುರಿಯನ್ನು ಸಾಕಷ್ಟು ತಣ್ಣಗೆ ಮಾಡಿಕೊಳ್ಳ ತೊಡಗಿದೆವು.  ಇಷ್ಟು ಎತ್ತರಕೆ ಕಲ್ಲು ಸಾಗಿಸಿ ಕಟ್ಟಿದ ಸರ್ವಜ್ಞ ಪೀಠ/ ಶಂಕರ ಪೀಠದ ಕೆತ್ತನೆಗೆ ಮನ ಕರಗಿತು. ಯಾರನ್ನು ಮೆಚ್ಚಿಸಲು ಈ ಪರಿ ಕಸರತ್ತು!? ಗೊತ್ತಿಲ್ಲ.

ಚಾರಣಿಗರ ಸಂತೆಯಲಿ ಕರಗದೇ ಮುಂದಿನ ಇಳಿ ಜಾರಿನ ತುದಿಗಿದ್ದ ಗುಡ್ಡವೇರಿದೆವು. ಈಗ ಇಲ್ಲೊಂದು ಬೇಲಿ ನಿರ್ಮಿಸಿದ್ದಾರೆ. ಚಾರಣಿಗರೆಸದ ಕಸವ ಕಂಡು ಕೆಂಪು ಮೂತಿ ಮಾಡಿಕೊಂಡು ಕಡಲಿಗಿಳಿದ ಸೂರ್ಯ ಮಾಮನಿಗೆ ಟಾಟಾ ಹೇಳಿದೆವು. ನಮ್ಮ ವರ್ತನೆಗೆ ಬೇಸರಿಸಿಕೊಂಡ. ತಾವು ತಂದ ಬಾಟಲಿ, ಜರಿಗಳನು ಅಲ್ಲೇ ಬಿಸುಟು ಹೋಗಿದ್ದರು. ಎಂದು ಬರುವುದೋ ಇವರಿಗೆ ಪರಿಸರ ಕಾಳಜಿ. 


 ಶಂಕರ ಪೀಠದ ಬಲ ಮಗ್ಗುಲಿನಲ್ಲೇ ಚಿತ್ರಾ ಮೂಲವಿದೆ. ಇದೇ ಸೌಪರ್ಣಿಕೆಯ ಉಗಮ ಎನ್ನುತ್ತಾರೆ. ಸಾಕಷ್ಟು ಸಂಜೆ ಆದುದರಿಂದ ಇಳಿಯುವ ಸಾಹಸ ಮಾಡಲಿಲ್ಲ.

 ಟೆಂಟಿಗೆ ಅಂಟಿ…

ನಮ್ಮ ಟೆಂಟುಗಳಿಗೆ ಹಿಂದಿರುಗುವಾಗ ಮೂಡಣದ ಬೆಳ್ಳಿ ಹಣಕಿ ಹಾಕಿತ್ತು. ಜೋಗಿಯವರ ಬಿಡಾರದಲ್ಲಿ ಉಳಿಯುವ/ಉಣ್ಣುವ ವ್ಯವಸ್ಥೆಯಾಯಿತು. ಅಂದು ಚಳಿ ಬಹಳವೇ ಇತ್ತು. 

ಮುಂದಿನ ದಿನಕೆ ಅಣಿಯಾಗಲು ನಮ್ಮ ನಮ್ಮ ನಿದ್ರಾ ಚೀಲದೊಳಗೆ ನುಸುಳಿಕೊಂಡಾಗ ನಕ್ಷತ್ರವೊಂದು ನನ್ನ ನೋಡಲ್ವೆ ಎಂದು ನಕ್ಕಿತು. ಕೆಲವರು ನಕ್ಷತ್ರ ವೀಕ್ಷಣೆಗೆ ಹೊರಟು ನಿಂತರು. ಶುಚಿಯಾಗಿ ಗುಡಿಸಿಟ್ಟಂತಹ ಆಕಾಶ ವೀಕ್ಷಣೆಗೆ ಇಂಬು ಕೊಟ್ಟಿತ್ತು. ಸುಸ್ತಾದ ನಾನು ನಿದ್ರಾ ಚೀಲದೊಳಗೆ ಹೊಕ್ಕು ಗೊರಕೆಗೆ ಬಿದ್ದೆ!


ಸೂರ್ಯನ ಎಬ್ಬಿಸಲು ಹೊರಟಾಗ…...




ಗಂಟೆ ೬ ಆದರೂ ಸೂರ್ಯ ಮಾಮ ಎದ್ದಿರಲೇ ಇಲ್ಲ! ನಾವೈವರು ಗಲಾಟಿ ಮಾಡಿ ಅವನ ಎಬ್ಬಿಸಲು ಹೊರಟು ನಿಂತೆವು. ಒಂದಿಷ್ಟು ಪ್ರಿ ಪೋಟೋ ಸೆಷನ್ ನಡೆಸಿದೆವು.  ಬಂಗಾರದ ಬೆಳಕು ಹುಲ್ಲ ಮೇಲೆಲ್ಲ ಹರಡಿ ಬಂಗಾರವಾಗಿಸಿತು. 

ಅಸ್ಸಾಂಗೆ ವಲಸೆ ಹೋಗುವ ಲೆಸ್ಸರ್‌ ಕೆಸ್ಟ್ರಲ್‌ ಹಕ್ಕಿಯೊಂದು ಖುಷಿಯಲ್ಲಿ ಹಾಡು ಹೇಳುತ್ತಲೇ ಇತ್ತು. ದೂರದಲ್ಲೆಲ್ಲೋ ಬ್ಲಾಕ್‌ ಈಗಲ್ ನ ಕೂಗಿಗೆ ಮೆಲ್ಲ ಮೆಲ್ಲನೆ ನೆತ್ತರು ಸುರಿದಂತೆ ಕಾಣುತ್ತಿದ್ದ ಸೂರ್ಯ ಮೆಲ್ಲಗೆ ಮೇಲೆ ಬರುತಲಿದ್ದ. ಸೂರ್ಯ ನೆದುರಿಗೆ ಒಂದಿಷ್ಟು ಪೋಟೋ ನೈವೇದ್ಯವಾಯಿತು. ನೆತ್ತಿಯಿಂದ ಕಾಣುವ ಸೊಬಗು ಅನ್ಯಾದರ್ಷ. ಪ್ರಕೃತಿಯ ರಮ್ಯತೆಯ ಅನುಭವಿಸಿಯೇ ತಿಳಿಯಬೇಕು. 

ಮಾನವನ ಹಸ್ತಕ್ಷೇಪ ಕಡಿಮೆಯಾದಂತೆ ಅದರ ಸೊಬಗು ಇಮ್ಮಡಿಸುವುದು. 




ಝರಿ ಕತೆ….

ಸೌಪರ್ಣಿಕೆಯ ಒಡುಲು ಸೇರುವ ಇಲ್ಲಿನ ಝರಿಗಳು ಒಂದಕ್ಕಿಂದ ಒಂದು ಚಂದ. ಚಿತ್ರಾ ಮೂಲವು ಅದರಲ್ಲಿ ಒಂದು. ಗುಡ್ಡ ವಿಳಿದು ಚಿತ್ರಾ ಮೂಲ ದರುಶನವೂ ಅದರಲ್ಲಿ ಒಂದು ವಿಶಿಷ್ಟ ಗುಹಾ ಝರಿ. ಬೆಟ್ಟವಿಳಿದು ಇದರ ಒಡಲು ಸೇರುವುದು ವಿಶಿಷ್ಟ ಅನುಭೂತಿ. ಇಲ್ಲೊಂದು ಲಿಂಗವೂ,  ಇದೆ. ಈ ಝರಿಗಳ ನೀರು ಅನೇಕ ಔಷಧೀಯ ಗುಣ ಹೊಂದಿದೆ ಎನ್ನುತ್ತಾರೆ ಇಲ್ಲಿನವರು. ಜನವರಿಯ ನಂತರ ತನ್ನ ಹರಿವನ್ನು ಈ ಝರಿ ಕಳೆದು ಕೊಳ್ಳುತ್ತದೆ ಎನ್ನುತ್ತಾರೆ ಇಲ್ಲಿನ ಪೂಜಾರಿಯವರು. ಇಲ್ಲಿ ತಪಸ್ವಿಗಳಿದ್ದರು ಎನ್ನುತ್ತದೆ ಇಲ್ಲಿನ ಜನಪದ.

ಚಿತ್ರಾ ಮೂಲಕ್ಕೆ ಹೋಗಿ ಹಣಕಿ ಹಾಕಿ ಬರುವ ಹುಮ್ಮಸ್ಸಿದ್ದರೂ ಹಿಂಡಲು ಮನೆಯ ಜಲಧಾರೆ ನನ್ನ ಕರೆಯುತ್ತಲೇ ಇತ್ತು. ಸಿಕ್ಕಾ ಪಟ್ಟೆ ಬೆಸ್ತು ಬೀಳಿಸಿದ ಬೈಕ್‌ನ್ನು ನಾಗರಾಜನ ತೆಕ್ಕೆಗೆ ಒಪ್ಪಿಸಿ ನಾನು ನಟರಾಜ ಸರ್ವಿಸ್‌ ಹತ್ತಿದೆ! ಅಂದರೆ ನಡಿಗೆ! ನಮ್ಮನ್ನು ಬೀಳಿಸಿದ ಅದೇ ಬೈಕು ಗೆಳೆಯ ರಾಘುವನ್ನು ಬೀಳಿಸಿ ಮೈ ಕೈ ತುಂಬಾ ತರಚು ಗಾಯವಾಗುವಂತೆ ಮಾಡಿತು!

ನನ್ನ ಜೊತೆ ಒಂದೈದು ಜನ ಗೆಳೆಯರು ಜೊತೆಯಾದರು. ಚಾರಣದ ಕತೆ ಹೇಳುತ್ತಾ ಸಮಯದ ಪರಿವೆಯೇ ಇಲ್ಲದೆ ಹಿಂಡ್ಲು ಮನೆಯ ಹಾದಿ ತುಳಿದೆವು. ಅದರ ರೋಚಕ ಕತೆಯನ್ನು ಮನಸ್ಸಾದರೆ ಮತ್ತೆ ಎಂದಾದರೂ ಹೇಳುವೆ. ಅಲ್ಲಿಯವರೆಗೆ…..






Sunday, August 20, 2023

ಕಾಯುವ ಸುಖ ಕಷ್ಟ....

                ಬೆಳಿಗ್ಗೆ ಬೆಂಗಳೂರಿನ ಗಾಂಧಿ ಬಜಾರಿನಲ್ಲಿ ಸಿಕ್ಕಿ ಎಂದಿದ್ದ ಗೆಳೆಯ. ಮಾಡಲೇನೂ ಕೆಲಸವು ಇರಲಿಲ್ಲ ಹಾಗಾಗಿ ಕಾಫೀ ಹೀರಿ ಅಂಕಿತದ ಜಗುಲಿಗೆ ಬಂದು ಪುಸ್ತಕ ತಿರುವುತ್ತಾ ಕೂತೆ. ಗಂಟೆ ಹತ್ತಾದರೂ ಆಸಾಮಿ ನಾಪತ್ತೆ. ಕಾಯುವಿಕೆ ಮುಂದುವರಿದಿತ್ತು.



ಪ್ರೇಯಸಿಗಾಗಿ ಅವಳ ಒಂದು ನೋಟಕ್ಕಾಗಿ, ಸ್ಪರ್ಶಕ್ಕಾಗಿ ಕಾದವನಂತೆ ಪುಸ್ತಕದಂಚು ಸವರುತಲಿದ್ದೆ. ಸಿ. ಇ. ಟಿ ಬರೆದು ರಿಸಲ್ಟ್‌ ಗೆ ಕಾದ ಇಂಜಿನಿಯರಿಂಗ್‌ ವಿದ್ಯಾರ್ಥಿಯಂತೆ. ಮಿಸ್‌ ಯು ಹೇಳುವ ಅವಳ ತುಟಿ ಅಂಚಿನ ಮೋಹಕತೆ.




            ಪಕ್ಕನೆ ಸಿಕ್ಕಿದ್ದೆ ಮಾರ್ಕ್ವೇಜ್ನ ʼನೋಬಡಿ ರೈಟ್ಸ್‌ ಟು ಕರ್ನಲ್ʼ. ಪುಟ ತಿರುತಿರುಗಿಸುತ್ತಾ ಕುಳಿತೆ. ಮಾರ್ಕ್ವೇಜ್‌ ಕಾಯುವಿಕೆಯೊಂದನ್ನು ರೂಪಕದಂತೆ ಇಲ್ಲಿ ಬಳಸಿದ್ದಾನೆ, ಕರ್ನಲ್‌ ಬದುಕಿನ ಸಂಧ್ಯಾ ಕಾಲವಿಡಿ ಬಾರದ ಒಂದು ಪತ್ರಕ್ಕಾಗಿ ಕಾಯುತ್ತಾನೆ. ಅರ್ಥ ನಿರರ್ಥಕಗಳ ಪರಿವೇ ಇಲ್ಲದ ಅಸಾಮಾನ್ಯ ಕಾಯುವಿಕೆ ಆತನದು. ಕಾಯುವಿಕೆಯೇ ಸುಂದರ  ಕಾದು ಕಾದು ಸುಣ್ಣವಾದರೂ ಕತೆಗಳಲ್ಲಿ ನಿಜ ಜೀವನದ ಸಿಕ್ಕುಗಳಲ್ಲಿ ಸಿಕ್ಕಿ ನಮಗೂ ಸಿಕ್ಕಿ ಅಸಾಮಾನ್ಯವಾದುದೇನೋ ಒಂದನ್ನು ಹೊಳೆಯಿಸುತ್ತಾನೆ.



                ಹೀಗೆ ತೇಜಸ್ವಿಯ ತಬರನೂ ಅಂಥವರಲ್ಲೊಬ್ಬ. ತಬರ ಬಾರದ ಪೆನ್ಶನ್ಗಾಗಿ, ತಬರನಿಗೆ ಸಾಲಕೊಟ್ಟ ಅಂಗಡಿಯಾತ ಆತನಿಗೆ ಬರಬೇಕಾದ ದುಡ್ಡಿಗೆ, ಹೆಂಡತಿ ಔಷಧಿಗಾಗಿ ಅನವರತ ಕಾಯುತ್ತಿರುತ್ತಾಳೆ. ನಾನು ಗೆಳೆಯನಿಗೆ, ಅಂಗಡಿಯಾತ ಈತ ಪುಸ್ತಕ ಕೊಳ್ಳಲಿ, ಬೋಣಿಯಾಗಲಿ ಎಂದು ಕಾಯುತ್ತಿರುತ್ತಾನೆ.

ಇನಿಯ ಅವಳ ಮೋಹಕ ನೋಟಕ್ಕೆ. ಜಗತ್ತೇ ಕಾಯುವವರ ಸಂತೆಯಂತೆ ಕಾಣಿಸುತ್ತದೆ. ಈ ಜಗದಲ್ಲಿ ಕಾಯದೇ ಇರುವವರು ಯಾರು? ಕಾಯುವಿಕೆ ಅನವರತ. 
ಹುಟ್ಟಿದವ ಸಾವಿಗೆ. ಸ್ಪರ್ಧಿ ರಿಸಲ್ಟ್‌ಗೆ ಮತದಾರ ಮತ ಎಣಿಕೆಯ ರೋಚಕತೆಗೆ. ಗುಮಾಸ್ತ ಪ್ರಮೋಷನ್‌ಗೆ.
ಕೋರ್ಟನ ವಿಚಾರಣೆಗೆ ಕಾಯುವ ಅನಸೂಯಳಂತೆ ನಾವೆಲ್ಲಾ ಯಾವುದೋ ಫಲಿತಕ್ಕಾಗಿ ಕಾಯುತ್ತಿರುತ್ತೇವೆ.
        ನೈದಿಲೆಯು ಸೂರ್ಯನಿಗೆ, ಚಕೋರಿಯು ಚಂದ್ರನಿಗೆ ಕಾದಂತೆ. ಇಲ್ಲಿ ಎಲ್ಲರೂ ಕಾಯುವವರೇ.       


 

ಕಾಯುವ ಸುಖಕಷ್ಟ ಕುರಿತು ಚಂದದ ಲೇಖನ ಈ ಕೃತಿಯಲ್ಲಿ ಉಂಟು. 

    ಕಾಯುವುದರಲ್ಲೂ ಕಾಯಕ್ಕೆ ಸುಖವುಂಟು. ಅದಮ್ಯವಾದ ಪ್ರೀತಿಯುಂಟು. ಕಾಯ ಕಾಯಬೇಕು. ಅಹಲ್ಯ ಮತ್ತು ಶಬರಿ ರಾಮನಿಗಾಗಿ ಕಾಯುವಿಕೆಗೆ ಕೊನೆಯುಂಟೆ? ಅಂದ ಹಾಗೆ ನೀವು ಯಾವುದಕ್ಕೆ ಕಾಯುತ್ತಿರುವಿರಿ.


ಶ್ರೀಧರ್‌ ಎಸ್. ಸಿದ್ದಾಪುರ.

Sunday, July 16, 2023

ಪ್ಯಾಪಿಲೋ ಬುದ್ಧನ ಹುಡುಕಾಟದಲ್ಲಿ ಸಿಕ್ಕ ಅಪ್ಸರೆ..

    ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನ.


   ಇವನೇನು ಹೇಳುವನೆಂದು ಹುಬ್ಬೇರಿಸಬೇಡಿ ಕೆಲವೊಮ್ಮೆಒಂದರ ಹುಡುಕಾಟದಲ್ಲಿರುವಾಗ ಇನ್ನೇನೋ ಸಿಕ್ಕಿ ಎಲ್ಲಿಗೋ ಒಯ್ಯುವುದು. 




ಆಗ ನನ್ನ ಬಳಿ ಪುಟಗೋಸಿ ಸುಣ್ಣದ ಡಬ್ಬಿಯಂತಹ ಚಿಕ್ಕ ಕ್ಯಾಮರವೊಂದಿತ್ತು. ಆಗಿನ ಕಾಲಕ್ಕೆ ಅತಿ ಆಸೆ ಪಡುವಂತಹ ಕನಸು ಕಾಣುತ್ತಿದ್ದೆ. ಚಿಟ್ಟೆಗಳ ಸುಂದರ ಚಿತ್ರ ತೆಗೆಯೋದು.  ಆಗ ನನ್ನ ಕಣ್ಣಿಗೆ ಬಿದ್ದವ ಪ್ಯಾಪಿಲೋ ಬುದ್ದ ಎಂಬ ಸುಂದರ ಚಿಟ್ಟೆ.  ಅದರ ಸೌಂದರ್ಯಕ್ಕೆ ಮಾರು ಹೋಗಿ ಬಿಟ್ಟೆ. ಪಶ್ಚಿಮ ಘಟ್ಟಗಳಿಗೇ ಸೀಮಿತವಾದ ವಿಶಿಷ್ಟ ಚಿಟ್ಟೆ. ಎಂಥವರನ್ನೂ ಮಂತ್ರ ಮುಗ್ಧಗೊಳಿಸುವ ಅದರ  ಸುಮನೋಹರ ಸೌಂದರ್ಯವೇ ನನ್ನ ಕಂಗೆಡಿಸಿತು. ಕಡು ಹಸಿರಾದ ಅದರ ಮೈಯನ್ನು ಒಮ್ಮೆ ನೋಡಿದರೆ ಮುಗೀತು, ನೀವು ಸಮ್ಮೋಹಿತರಾಗೋದು ಗ್ಯಾರೆಂಟಿ. ಈ ಚಿಟ್ಟೆಯ ಅಂದವೇ ನನ್ನನ್ನು ಇಲ್ಲಿಯವರೆಗೆ ಎಳೆದು ತಂದಿದ್ದು.  




 ನಾಗರಹೊಳೆಯ ಕಾಡುಗಳಲ್ಲಿ ಕಾಟಿ ಚಿರತೆಗಳ ಸಂಗಕ್ಕೆ ಬಿದ್ದು ಸುಮ್ಮನೆ ಅಲೆಯುತ್ತಿದ್ದವನಿಗೆ ಸಿಕ್ಕ ನ್ಯಾಚುರಲಿಸ್ಟ್‌ ಒಬ್ಬರು ಇರ್ಫು ಜಲಧಾರೆಯಲಿ ಇವು ಧಾರಾಳವಾಗಿವೆ ಎಂದಿದ್ದ. ತಡ ಮಾಡದೇ ಕಾರೊಂದನ್ನು ಬುಕ್‌ ಮಾಡಿ ಹೊರಟೆವು!

ಕುಟ್ಟಂನಲ್ಲಿ ಕಟ್ಟಂ ಚಾ ಕುಡಿದು

ವಿಚಿತ್ರವಾದ ದ್ರಾವಣದಲ್ಲಿ ಅದ್ದಿ ತೆಗೆದಂತಹ ಕುಟ್ಟಂನ ಪರಿಸರ. ಸೆಪಿಯಾ ಬಣ್ಣದಲ್ಲಿ ಅದ್ದಿ ತೆಗೆದಂತಹ ಊರು ವಿಚಿತ್ರವಾದ ಸೆಳೆತದಿಂದ ನನ್ನ ಕಂಗೆಡಿಸಿತ್ತು. ನಾಗರಹೊಳೆ ದಾಟಿದವರಿಗೆ ಕುಟ್ಟಂ ಎಂಬ ಪುಟ್ಟ ಹಳ್ಳಿಯ ಬೆಚ್ಚಗಿನ ಸ್ವಾಗತ. ಹೆಚ್ಚಿನವರು ಕೇರಳಿಗರು. ಇಲ್ಲಿ ಕಟ್ಟಂ ಚಾಯ್‌ ಬಹಳ ಫೇಮಸ್.

         ಹದವಾದ ಚಹ ಎಲೆಗಳು ಕೆಟಲಿನಲ್ಲಿ ಕುದಿಯುತ್ತಾ, ಹಬೆಯಾಡುತ್ತಾ ಇತ್ತು ಕಟ್ಟಂ ಚಾಯ. ಬದುಕೊಂದು ಕೆಟಲಿನಲಿ ಬೇಯುತಿರುವ ಅನುಭವ. ಕುಟ್ಟಂನಲ್ಲಿ ಕಟ್ಟಗಿನ ಬಿಸಿ ಬಿಸಿ ಕರಿ ಚಹಾ ಹೀರುವ, ಚಹಾ ಕಾಫೀ ತೋಟದ ಕೂಲಿಗಳು ಸಾಕಷ್ಟು. ನಾವು ಹೋದಾಗಲೂ ಅನೇಕರು ಅಲ್ಲಲ್ಲಿ ಚಹ ಹೀರುತಲಿದ್ದರು. ನಾವೂ ಗೂಡಂಗಡಿಗಳಲ್ಲಿ ಸಿಗುವ ಹಬೆಯಾಡುವ ಚಹಾ ಕಣ್ಣು ಹೀರಿದೆವು. ಕ್ಯಾನ್ಸರ್ಗೂ ಗಿಡಮೂಲಿಕೆ ಔಷಧ ನೀಡಿ ಗುಣಪಡಿಸುವವರು ಇಲ್ಲಿದ್ದಾರೆಂದು ಬೆಂಗಳೂರಿನ ಗೆಳೆಯನೊಬ್ಬ ಯಾವಾಗಲೂ ಹೇಳುತ್ತಿದ್ದ. ಹಾಗೇ ಅವರನ್ನೂ ಒಮ್ಮೆ ಭೇಟಿಯಾಗಬೇಕು. ಅವರ ಮಾತಿಗೆ ಕಿವಿಯಾಗಬೇಕು. 




ಲಾಮಾ ನಾಡಿನ ಲಕ್ಷ್ಮಣ  ತೀರ್ಥದೆಡೆಗೆ…


         ಲಾಮಗಳ ಭೂತಾನ್‌ನ ರಾಜಧಾನಿ ಥಿಂಪುವನ್ನು ನೆನಪಿಸುವಂತಿರುವ ದಕ್ಷಿಣ ಕೊಡಗಿನ ಈ ತಾಣ ಎಷ್ಟೊಂದು ರಮಣೀಯ ಅಂತೀರಾ. ಬನ್ನಿ ಹೇಗಿದೆ ನೋಡೋಣವೇ?

         ಜಲಧಾರೆಯ ಬಲಕ್ಕೆ ಕೇರಳವಿದ್ದರೆ ಎಡಕ್ಕೆ ನಾಗರಹೊಳೆ ಅಭಯಾರಣ್ಯವಿದೆ. ಅದೇ ಈ ಜಲಧಾರೆಯ ಮೂಲ. ಕೇರಳಿಗರೇ ಇಲ್ಲಿ ಹೆಚ್ಚು. ಜಲಧಾರೆಗೆ ಹಲವು ಕಿಲೋಮೀಟರ್‌ ಇರುವಾಗಲೇ ಇದು ನಿಮ್ಮನ್ನು ಕೈಬೀಸಿ ಕರೆಯುತ್ತದೆ.

         ಇದನ್ನು ನೋಡಲು ಕೇರಳದ ತುದಿಯ ತಲುಪಬೇಕು. ಮಂಜು ತುಂಬಿದ ಗಿರಿಗಳಿಂದ ಜಡೆ ಬಿಟ್ಟಂತೆ ಧುಮುಕುವ ಲಲನೆ. ಅಲ್ಲಲ್ಲಿ ಬಳುಕುವ ಬಳ್ಳಿ. ನಿಸರ್ಗದ ಗರ್ಭಗುಡಿಯಲ್ಲಿ ಅಡಗಿದ ರತ್ನ ಮಣಿ.

ಸುತ್ತೆಲ್ಲಾ ಗಡಿಬಿಡಿ ಇಲ್ಲದೇ ಹಾರಾಡುವ ಹಕ್ಕಿಗಳು. ಕೆನ್ನೆಗೆ ಮುತ್ತಿಕ್ಕಲು ಬರುವ ಪ್ಯಾಪಿಲೋ ಬುದ್ಧ! ಹೆಸರೇ ಎಷ್ಟೊಂದು ಆಕರ್ಷಕ. ದರ್ಶನ ಪಡೆದರಂತೂ ಅದರ ಮೋಹಕತೆಗೆ ಬೆರಗಾಗದೇ ಇರಲಾರಿರಿ.


ಮೆಟ್ಟಿಲೇರಿ ಮುಗಿಲಿಗೆ ಕೈಯ ಚಾಚಿ…


ಇಲ್ಲಿ ಹರಿವ ತೊರೆಯ ಸೆರಗ ಸೆಳೆಸಿ ಮೇಲೇರಿದಂತೆ ಮಂಜು ನಿಮ್ಮನ್ನು ಆವರಿಸುತ್ತದೆ. ಕಿವಿಯೊಳಗೆಲ್ಲಾ ಹಾದು ಕಚಗುಳಿ ಇಡುತ್ತದೆ.

ಜಲಪಾತದ ಹಾದಿಯೇ ಎಷ್ಟೊಂದು ರೋಚಕ. ಹೂ ಬಳ್ಳಿಗಳು, ಶೃಂಗಾರಕ್ಕಿಟ್ಟಂತೆ ಕಾಣುವ ದಪ್ಪ ದಪ್ಪ ಬಿಳಲುಗಳು. ಜಲಪಾತದ ಸನಿಹದೊರೆಗೆ ಮೆಟ್ಟಿಲುಗಳ ಸಖ್ಯ ಬೆಳೆಸಿದ ದಪ್ಪ ದಪ್ಪ ಮರಗಳು.

ಕಾವೇರಿಯ ಉಪನದಿಯಾಗಿ ಮುಂದೆ ಹರಿಯುವ ಗಂಡು ನದಿ ಲಕ್ಷ್ಮಣ ತೀರ್ಥ. ಮುಂದೆ ಹುಣಸೂರು, ಮೈಸೂರು ಮಂದಿ ಇದನ್ನು ಕುಲಗೆಡಿಸಿದ್ದಾರೆ. ಹುಣಸೂರಿನಲ್ಲೊಮ್ಮೆ ನೋಡಿದ್ದೆ ನದಿಯೋ ಗಟಾರವೋ ಎಂಬಷ್ಟು ಗಬ್ಬು. ಹಾಳುಗೆಡುಹದೇ ನೆಮ್ಮದಿ ಇಲ್ಲವೇನೋ ನಮ್ಮ ಜನಕ್ಕೆ.

ಪುಟಾಣಿ ಮೆಟ್ಟಿಲ ಏರಿ ಪುಷ್ಪ ಗಿರಿಯ ಬುಡವನ್ನೊಮ್ಮೆ ಮುಟ್ಟಿ ಬರಬೇಕು. ಹೂವ ಕಣಿವೆ ತುಂಬಾ ಪುಷ್ಪ ಪಕಳೆ ಹಾಸಿದಂತ ದಾದಿಯ ಹೊಕ್ಕು ಬರಬೇಕು. ನೀವು ಎಂದೂ ಮರೆಯಲಾರಿರಿ ಇರ್ಫು ಎಂಬ ಚಕೋರಿಯ.

ತರುಲತೆಗಳ ಜೊತೆಗೆ ಹಾದು ಬಂಡೆಯಿಂದ ಬಂಡೆಗೆ ಕುಪ್ಪಳಿಸುತ್ತಾ ಪುಳಕಗೊಳಿಸುವುದು. ಅರಸಿಕನ ಮನದ ಕದ ತೆರೆವ ತಾಣ!

ಇರ್ಫು ನಾಗರಹೊಳೆ ಅಭಯಾರಣ್ಯಕ್ಕೆ ಬಲು ಸನಿಹದಲ್ಲಿದೆ. ಅಲ್ಲಿಂದ ಬ್ರಹ್ಮಗಿರಿ, ಪುಷ್ಪಗಿರಿಗೆ ಚಾರಣ ಕೂಡ ಮಾಡಬಹುದು. ಕೊಡಗಿನ ಕೆಳ ತುದಿಯಲ್ಲಿರುವುದರಿಂದ ತಲುಪುವುದೇ ಬಲು ಕಷ್ಟ. ಈ ಜಲಪಾತ ವೀಕ್ಷಣೆಗೆ ಕೊಡಗಿನಿಂದ ಬಂದು ಹೋಗಲು ಒಂದಿಡಿ ದಿನ ಬೇಕಾಗುವುದು. ಈ ಜಲಪಾತದ ಬಳಿ ಈಶ್ವರ ದೇವಾಲಯವಿದೆ. ಪ್ರಕೃತಿ ಅಧ್ಯಯನಕ್ಕೆ ಹಲವು ತಂಡಗಳು ಬಂದು ಹೋಗುತ್ತಾರೆ. ಹಲವರು ಇಲ್ಲಿ ಬಂದು ಜೀವಜಾಲದ ಅಧ್ಯಯನ ಮಾಡುತ್ತಾರೆ. 



ಸಿಕ್ಕನೇ ಬುದ್ಧ:-

ಹಲವು ಪ್ಯಾಪಿಲೊ ಬುದ್ಧದ ಜೊತೆ ಜೊತೆಗೆ ಅನೇಕ ಮನಮೋಹಕ ಚಿಟ್ಟೆಗಳು ಅಲ್ಲಲ್ಲಿ ಕಾಣ ಸಿಕ್ಕವು. ಜೊತೆಗೊಂದಿಷ್ಟು ನೆನಪುಗಳು.

ಸಿಕ್ಕೀತೆ ಮುಂದಿನ ದಾರಿ:-

    ನಾಳೆಗಾಗಿ ನಮ್ಮನ್ನುಳಿಸಿ ಎಂಬ  ಲಕ್ಷ್ಮಣ ತೀರ್ಥದ ಆರ್ತ ನಾದ ನಮ್ಮನ್ನು ಇನ್ನೂ ತಾಕದಿರುವುದು ವಿಪರ್ಯಾಸ. ಲಕ್ಷ್ಮಣ ತೀರ್ಥವೆಂಬ ವಿಶಿಷ್ಟ ನದಿಯು ತನ್ನ ನೈಜ ಸೌಂದರ್ಯವನ್ನು ಉಳಿಸಿಕೊಳ್ಳುವಂತೆ ಮಾಡುವುದು ನಮ್ಮೆಲ್ಲರ ಹೊಣೆಯಲ್ಲವೇ?




Saturday, July 8, 2023

ನಿಲ್ದಾಣವಲ್ಲದ ನಿಲ್ದಾಣದಲ್ಲಿ…

 

ಪಶ್ಚಿಮ ಘಟ್ಟದ ಸೆರಗ ಹಿಡಿದು ಅದರ ತೊಡೆಯ ಮೇಲೆ ಮಲಗಿದ ರಮ್ಯ ರೈಲು ನಿಲ್ದಾಣ! ಕಾವಲಿಗೆ ನಿಂತ ಬೆಟ್ಟ ಸಾಲು. ಪಶ್ಚಿಮ ಘಟ್ಟವನ್ನು ಸೀಳಿಕೊಂಡು ಸಾಗುವ ನೋಟ ಎಂತಹ ಜಡ ಭರತರನ್ನೂ ಕವಿಯಾಗಿಸಬಲ್ಲದು! ಭಾರತದ ಉದ್ದಗಲಕ್ಕೂ ಇಷ್ಟು ವಿಶಿಷ್ಟವಾದ ಮತ್ತೊಂದು ರೈಲು ನಿಲ್ದಾಣವಿರಲಿಕ್ಕಿಲ್ಲ. ಯಡಕುಮರಿ. ಎಂತಹ ವಿಚಿತ್ರ ಹೆಸರು. ಹೆಚ್ಚು ಕಡಿಮೆ ಎಡಕುಮೇರಿ ಅಥವಾ ಯಡಕುವೇರಿ ಎಂಬ ಹೆಸರು ಕೇಳಿರದ ಚಾರಣಿಗ ಇಲ್ಲವೇನೋ.


ತೇಜಸ್ವಿಯವರ ಜುಗಾರಿ ಕ್ರಾಸ್ ಓದಿದವರಿಗೆ ಕುಂಟರಾಮನ ಕಥಾ ಪ್ರಸಂಗ ಎಡಕುವೇರಿಯ ಸುರಂಗಗಳನ್ನು ನೆನಪಿಸುತ್ತೆ. ಅಂತಹ ಬೀಕರತೆ ಇಲ್ಲಿನ ಸುರಂಗಗಳಿಗೆ ಲಭಿಸಿದೆ. ಎಡಕುಮರಿ ಸನಿಹದಲ್ಲೇ ನಡೆಯುವ ಕತಾ ಪ್ರಸಂಗವೊಂದನ್ನು ಗಿರಿ ಮನೆ ಶ್ಯಾಂ ರಾವ ಕಟ್ಟಿ ಕೊಟ್ಟ ನೆನಪು. ಭಯಾನಕ ಹುಲಿಯೊಂದನ್ನು ಭೇಟೆಯಾಡಿದ ಫಾರೆಸ್ಟರ್‌ ಕೊನೆಗೆ ಅಮಾನತಿಗೆ ಒಳಗಾಗುವ ಕತೆ ಇಲ್ಲಿಯೇ ನಡೆದುದು. ಇಂತಹ ಮಾನವ ತಲುಪಲಾಗದ ಹಳ್ಳಿ ನಮ್ಮ ದೇಶದಲ್ಲಿ ಹಲವಿರಬಹುದು ಆದರೆ ತಲುಪಲಾಗದ ಸ್ಟೇಷನ್‌ ಒಂದು ಇದೆ ಎಂಬುದೇ  ಒಂತರಾ ವಿಚಿತ್ರವಲ್ಲವೇ? ಮಾನವ ನಾಗರಿಕತೆಯ ಸೋಂಕಿಗೆ ಒಳಗಾಗಲು ನೀವು ಬರೋಬ್ಬರಿ ೮ ಕಿ. ಮೀಟರ್‌ ನಡೆಯಬೇಕು! ಸುಬ್ರಮಣ್ಯದಿಂದ ಹೊರಟು ದೋಣಿಗಲ್ಲು ದಾಟಿದರೆ ಮುಂದೆ ಸಿಗುವುದೇ ಯಡಕುಮರಿ.


            ಇಲ್ಲಿ ನೀವು ದಾಟುವ ಸುರಂಗಗಳು ಹಲವು. ದಾಟುವ ತೊರೆಗಳು ನೂರಾರು. ಮಳೆಗಾಲ ಬಂತೆಂದರೆ ತೊರೆಗಳ ಮೆರವಣಿಗೆ. ಮಳೆಗಾಲ ಪೂರ್ಣ ಹಸಿರು ಚಾದರ ಹೊದ್ದ ಬೆಟ್ಟ ಗುಡ್ಡಗಳು. ಬೇಸಿಗೆಯಲ್ಲೂ ಹಸಿರಾಗಿರುತ್ತವೆ. ಕಡಿದಾದ ಕಣಿವೆಗಳಲ್ಲಿ ಹನಿಗಳ ಕಲರವ. ಜೀರುಂಡೆ ಗಾಯನ. ದಿನಕ್ಕೊಂದು ರೈಲು ಬಂದರೆ ಮುಗೀತು. ಮತ್ತೆರಡು ರಾತ್ರಿಗೆ. ಉಳಿಯುವುದು ನೀರವ ಏಕಾಂತ.‌ ಕೇಳುವವರೇ ಇಲ್ಲದ ಕ್ಯಾರೆ ಎನ್ನದ ದಿವ್ಯ ಮೌನ. ಮಾತಿಗೆ ಮೌನ ಸ್ವೆಟರಿನ ಮುಚ್ಚಿಗೆ. ಜೀರುಂಡೆಗಳ ಸಮೂಹಗಾಯನ. ಇನಿಯಳೊಂದಿಗೆ ಮುದ್ದು ಮಾಡುತ್ತಾ ಕೂರಬಹುದಾದ ಜಾಗ. 



ಇಲ್ಲಿನ ರೈಲ್ವೆ ಮಾಸ್ತರರನ್ನು ಮಾತಾಡಿಸಿದೆ. ಇಲ್ಲಿನ ಕಲ್ಲು ಬಂಡೆಗಳಂತೆ ಆತ ನಮ್ಮೊಡನೆಯೂ ಮಾತು ಬಿಟ್ಟಿದ್ದ! ಈ ಏಕಾಂತದ ಮಜವನ್ನು ಅನುಭವಿಸಿದವನಿಗೇ ಗೊತ್ತು ಎಂಬಂತೆ ಮುಗುಮ್ಮಾಗಿದ್ದ!

            ಇಲ್ಲಿ ನೇಮಕವಾದ ಹೊರಮುಖಿ ವ್ಯಕ್ತಿತ್ವದ ಸ್ಟೇಶನ್‌ ಮಾಸ್ಟ್ರುಗಳಿಗೆ ಬಹಳ ಕಷ್ಟ! ವಿದ್ಯುತ್‌ ಬೇರೆ ಇಲ್ಲ. ಬೆಟ್ಟ ಸಾಲಿಗೆ ಮುಖಮಾಡಿ ಡಿಪಾರ್ಟುಮೆಂಟು ಹಾಕಿಸಿದ ಬೆಂಚೊಂದಿದೆ. ಎಷ್ಟು ಹೊತ್ತು ಕುಳಿತರೂ ಕೇಳುವವರಿಲ್ಲ. ಇಲಾಖೆ ನಿರ್ಮಿಸಿದ ಒಂದೆರಡು ಸಣ್ಣ ಮನೆಗಳು ಆಟಕ್ಕೆ ಉಂಟು ಲೆಕ್ಕಕ್ಕೆ ಇಲ್ಲ!


    ನಿಲ್ದಾಣವಲ್ಲದ ನಿಲ್ದಾಣ! ಇಲ್ಲಿ ಇಳಿಯುವವರೇ ಇಲ್ಲ! ಹತ್ತುವವರೂ ಇಲ್ಲ.  ಆದರೂ ಒಂದು ನಿಲ್ದಾಣ!! ಇಲ್ಲಿ ಸ್ವಲ್ಪ ಹೊತ್ತು ರೈಲು ನಿಂತು ನೀರು ಕುಡಿದು ಏರಿ ಬಂದ ಕಷ್ಟಗಳ ನೆನೆದು ದಣಿವಾರಿದಿಕೊಂಡು ಮತ್ತೆ ಹೊರಡುತ್ತೆ. ನೀವಿಲ್ಲಿ ಇಳಿಯುವಂತಿಲ್ಲ. ಇಳಿದರೆ ಇಲ್ಲಿನ ಏಕಾಂತದಲ್ಲಿ ಬಂಧಿ. ಹಲವು ವರ್ಷಗಳ ಕಾಲ ಈ ಸ್ಥಳಕ್ಕೆ ದೋಣಿಗಲ್ಲಿನಿಂದ ಸಾಹಸಿಗರು ನಡೆದುಕೊಂಡು ಬರುತ್ತಿದ್ದರು! ಈಗ ಈ ಚಾರಣ ಸಂಪೂರ್ಣ ನಿಶೇಧಿಸಲಾಗಿದೆ. ಈಗಿಲ್ಲಿ  ಚಾರಣಕ್ಕೆ ಹೋದವರ ಮೇಲೆ ಟ್ರೆಸ್ಪಾಸ್‌ ಕೇಸ್‌ ಜಡಿದು ಹೊರಬರಲಾರದಂತೆ ಮಾಡಲಾಗುತ್ತದೆ. ಸಕಲೇಶಪುರದ ಸನಿಹದಲ್ಲಿರುವ ಮೌನವೇ ಹೊದ್ದು ಮಲಗಿದ ಇಲ್ಲಿಗೆ ಒಮ್ಮೆಯಾದರೂ ಹೋಗಿ ನೀರವ ಏಕಾಂತವನ್ನು ತಬ್ಬಿ ಮಲಗಬೇಕು. ನೀವು ಬರುವಿರಾ?



Monday, July 3, 2023

ಸುರಿವ ಮಳೆಯಲ್ಲೊಂದು ತಿಥಿಯೂಟ.

ನಾನಾಗ 8 ನೇ ತರಗತಿಯಲ್ಲಿ ಓದುತ್ತಿದ್ದೆ. ಹಠ ಹಿಡಿದ ಮಗುವಿನಂತೆ ಧೋ ಎಂದು ಮೂರು ದಿನದಿಂದ ಮಳೆ ಹೊಯ್ಯುತ್ತಿತ್ತು. ರಸ್ತೆ, ಚರಂಡಿ,  ಎಲ್ಲೆಲ್ಲೂ ಕೊನೆಗೆ ನಮ್ಮ ಮನದಲ್ಲೂ ಧೋ ಎಂಬ ಜಡಿ ಮಳೆ ಹೊಯ್ಯುತ್ತಲೇ ಇತ್ತು.

ಹತ್ತು ಕಿಲೋ ಮೀಟರ್ ದೂರದ ಶಾಲೆಗೆ ಹೋದೊಡನೆಯೇ ನಮಗೆ ರಜೆಯು ಸ್ವಾಗತ ಕೋರಿತ್ತು. ಮನಸ್ಸು ಕುಣಿದಾಡಿತ್ತು. ಉಲ್ಲಸಿತರಾಗಿ ಮನೆಗೆ ಮರಳುವ ಹಾದಿಯಲ್ಲಿದ್ದೆ. ಆಗಲೇ ನೆನಪಾಗಿದ್ದು ನನ್ನ ಅಜ್ಜ ಊರಿನಲ್ಲಿ ಇವತ್ತು ತಿಥಿಯೂಟವೆಂದು. ನನಗೋ ಅಜ್ಜನೂರೆಂದರೆ ಬಹಳೇ ಪ್ರೀತಿ, ಮಮಕಾರ, ತುಡಿತ. ಶಾಲೆ ತಪ್ಪಿಸಿ ಅಜ್ಜನೂರಿಗೆ ಹೋಗಲು ನನಗೆ ನಿರ್ಬ೦ಧವಿತ್ತು. ಆದರೆ ಇವತ್ತು ಆ ನಿರ್ಬಂಧ ಕೊಚ್ಚಿ ಹೋಗಿತ್ತು. 

ಮಳೆಗೊಂದು ಉದ್ದಂಡ ನಮಸ್ಕಾರ ಸಲ್ಲಿಸಿದೆ! ಮನಸ್ಸು ಉಲ್ಲಸಿತವಾಗಿ ಅಜ್ಜನೂರಿಗೆ ಹೋಗುವ ಗುಣಾಕಾರ ಭಾಗಾಕಾರ ಹಾಕಿತ್ತು. 

   ಅಮ್ಮ 9 ಗಂಟೆಯ ಬಸ್ಸಿಗೆ ಹೊರಡುವಳೆಂದು ಗೊತ್ತಿತ್ತು. ಹಾಗಾಗಿ ಗೆಳೆಯನಲ್ಲಿ ನಾನು ಮನೆಗೆ ಬರಲಾರೆ, ಅಜ್ಜನ ಮನೆಗೆ ಹೋಗುವೆ, ಅಪ್ಪನಿಗೆ ತಿಳಿಸು ಎಂದು ಹೇಳಿ ಸೀದಾ ಸುರಿವ ಮಳೆಯಲ್ಲಿ ಕೊಚ್ಚೆ ಹಾರಿಸುತ್ತಾ ಬಸ್ಸು ನಿಲ್ದಾಣಕ್ಕೆ ಓಡಿದೆ. ಮೊದಲು ಬಂದ ಶಂಕರ ವಿಠಲ ಬಸ್ಸಿನ ಮುಂಬಾಗಿಲಿನಲ್ಲಿ ಹತ್ತಿ ಬಸ್ಸೆಲ್ಲಾ ಹುಡುಕಿದೆ. ಆ ಬಸ್ಸಿನಲ್ಲಿ ಅಮ್ಮನಿರಲಿಲ್ಲ. ಹಿಂಬಾಗಿಲಿನಲ್ಲಿ ಇಳಿದೆ. ಮುಂದಿನ ಬಸ್ಸಿಗಾಗಿ ಸುರಿವ ಮಳೆಯಲ್ಲಿ ಕಾಯುತ್ತಾ ನಿಂತೆ. ಮನದೊಳಗೆ ಕಾತರ ಅಮ್ಮ ತಪ್ಪಿ ಹೋಗುವಳೋ  ಏನೋ ಎಂಬ ಆತಂಕ. ಅಜ್ಜನೂರಿಗೆ ಹೋಗಲಾರದ ದುಃಖ ಒಂದೆಡೆ. ಅಜ್ಜನೂರಿಗೆ ಹೋಗಲು ಕೈಯಲ್ಲಿರುವ ನಾಲ್ಕಾಣೆ ಏನೇನೂ ಸಾಲದು. ಮಳೆ ನಿಲ್ಲುವ ಲಕ್ಷಣಗಳಿರಲಿಲ್ಲ. ಅಷ್ಟರಲ್ಲೇ ಹನುಮಾನ್ ಬಸ್ಸು ಬಂತು. ಈ ಬಸ್ಸಿನಲ್ಲಿ ಅಮ್ಮನಿರಲಿ ಎಂದು ಪ್ರಾಥರ್ಿಸಿದೆ. ಅದೃಷ್ಟವಶಾತ್ ಅಮ್ಮನೂ ಆ ಬಸ್ಸಿಗೇ ಹೊರಟಿದ್ದಳು. ನನ್ನ ಆತಂಕ ತೀರಿತು. ಅಮ್ಮನ ಪಕ್ಕ ಹೋಗಿ ಕುಳಿತೆ. ಮಳೆಯಲ್ಲಿ ಕುಳಿತು ಸಕತ್ ಪ್ರಯಾಣ. 

ಅಂತೂ ಅಜ್ಜಿ ಮನೆಯಲ್ಲಿ ತಲುಪಿ ಸಕತ್ ಊಟ ಮಾಡಿ ಖುಷಿಯಲ್ಲಿ ಕುಳಿತ್ತಿದ್ದೆವು. ಸಂಜೆ ಮೂರು ಗಂಟೆ ಹೊತ್ತಿಗೆ ಸುರಿವ ಮಳೆಯಲ್ಲಿ ಅಪ್ಪ ನನ್ನನ್ನು ಹುಡುಕುತ್ತಾ ಅಜ್ಜಿ ಮನೆಗೆ ಬಂದಿದ್ದರು. ಅಮ್ಮನೊಂದಿಗೆ ಅಂದು ಸುರಿವ ಮಳೆಯಲ್ಲಿ ಅಜ್ಜನೂರಿಗೆ ಹೋದ ನೆನಪು ಇನ್ನೂ ಹಸಿರಾಗೇ ಇದೆ.

     ಎಲ್ಲರೂ ಈ ನೆನಪುಗಳನ್ನು ಮೆಲುಕು ಹಾಕಿ ನನ್ನ ಛೇಡಿಸುವರು. ಮಾವನಿಗಂತು ಈ ನೆನಪು ಸದಾ ಹಸಿರು.

ಇಂದೇ ನನ್ನ ಅಜ್ಜನ ತಿಥಿ. ಫೋನ್ ಮಾಡಿ ಬರುವಂತೆ ಮಾವ ಕರೆ ಕೊಟ್ಟಾಗ ಎಲ್ಲ ನೆನಪು ಮರುಕಳಿಸಿತು. ಮನೆಯಲ್ಲಿ ದಿವ್ಯ ಏಕಾಂತ ಒಂದೇ ಬೆರಳಿನಲ್ಲಿ ಟೈಪಿಸಿದೆ. ಚೆನ್ನಾಗಿದ್ದರೆ ತಿಳಿಸಿ.

 

Friday, May 12, 2023

ಅಬ್ಬೆ ಎಂಬ ಅನನ್ಯ ಕತೆ

 ಆತ್ಮಕತೆಯ ಭಾಗವಾಗುವಂತಹ ಕಾದಂಬರಿಗಳು ವಿರಳ. ಅಂತಹ ವಿರಳ ಕಾದಂಬರಿ ಅಬ್ಬೆ . ಹಾಲಾಡಿ ಸನಿಹದ ಮುದೂರಿಯ ಶಶಿಧರ್ ಇದರ ಲೇಖಕರು


ಅಬ್ಬೆಯ ಅನನ್ಯತೆ:

ಅಬ್ಬೆ ಎಂಬ ಜೇಡವೇ ಕತೆಯ ಆತ್ಮ. ಯಾರಿಗೂ ಇದರ ಸ್ಪಷ್ಟ ಪರಿಚಯವಾಗಲಿ ನಿಖರವಾಗಿ ತಿಳಿದಿಲ್ಲ. ಆದರೆ ಅನೇಕ ಸಾವುಗಳ ಅಪರಾಧಿ ಈ ಜೇಡ. ಅಬ್ಬೆ ಕಚ್ಚಿದರೆ ಹೆಬ್ಬಾಗಿಲಿಗೆ ಬರುವಷ್ಟು  ಸಮಯವಿಲ್ಲ ಎಂಬ ಗಾದೆ ಕಲ್ಕೆ ರೆ ಎಂಬ ಗ್ರಾಮದ ಜನ ನಂಬುತ್ತಾರೆ.  

ಈ ಗ್ರಾಮಕ್ಕೆ ಬರುವ ಶಿವರಾಂ ಎಂಬ ಬ್ಯಾಂಕ್ ಅಧಿಕಾರಿ ಇಲ್ಲಿನ ನಿಗೂಢತೆಯನ್ನು ಬೇಧಿಸಲು ಪ್ರಯತ್ನಿಸುತ್ತಾನೆ. ತಾನು ಬಂದು ಸೇರುವ ಹೊತ್ತಿಗೇ ಕೊಲೆಯೊಂದು ನಡೆದಿರುತ್ತದೆ. ಆ ಕೊಲೆಯು ಕೊನೆಗೆ ಆತ್ಮಹತ್ಯೆ ಎಂದು ವರದಿ ಯಾಗುತ್ತದೆ. ಕತಾ ನಾಯಕನಿಗೆ ಇದು ಕೊಲೆ ಎಂಬ ಸಂಶಯ ಕಾಡುತ್ತಲೇ ಇರುತ್ತದೆ. ಕೊನೆಯ ಕ್ಷಣದವರೆಗೂ ಆತ ತನ್ನ ತನಿಖೆ ಮುಂದುವರಿಸುತ್ತಾನೆ. 

ಕ್ರಿಟಿಕಲ್ ಕೆಂಚಪ್ಪ

ಕತೆಯಲ್ಲಿ ಕಂಡ ವಿಶಿಷ್ಟ ಪಾತ್ರ ಕೆಂಚಪ್ಪ . ಚಿಪ್ಪು ಹಂದಿ ಹಿಡಿಯುವ ಅವನು ಬ್ಯಾಂಕ್ ಗೆ ಬಂದು ಡಿಪಾಸಿಟ್ ಮಾಡಿ ಎಲ್ಲರಿಗೂ ಅಚ್ಚರಿ ಉಂಟು ಮಾಡುತ್ತಾನೆ. ದಿನಕಳೆದ ಕಾಡುತ್ತಾ ಹೋಗುತ್ತಾನೆ. ಯಾವುದೇ ಪ್ರಾಣಿಶಾಸ್ತ್ರಜ್ಞನಿಗೂ ಕಮ್ಮಿ ಇಲ್ಲದ ಇವನ ಪ್ರತಿಭೆಯನ್ನು ಕೆಲವರು ದುರುಪಯೋಗ ಪಡಿಸಿಕೊಳ್ಳುತ್ತಾರೆ. ತನ್ನ ಪ್ರತಿಭೆ ತನಗೇ ತಿಳಿಯದ ಅಮಾಯಕ. ಇಂತಹ ನೂರಾರು ಪ್ರತಿಭಾವಂತರು ನಮ್ಮ ನಡುವಿದ್ದಾರೆ ಎಂಬ ಸಣ್ಣ ವಿಶಾದವು ನಮ್ಮನ್ನು ಕಾಡುತ್ತದೆ. ಬದುಕಿನ ಕ್ರಿಟಿಕಲ್ ಸಮಯದಲ್ಲಿ ಅವನಾಡುವ ಮಾತು ವಿಶಿಷ್ಟವೆನಿಸುತ್ತವೆ.

ಕತೆಯ ಉದ್ದಕ್ಕೂ ಕಿರಿಕಿರಿ ಮಾಡುತ್ತಾ ಶಿವರಾಂ ನನ್ನು ಗೋಳು ಹೊಯ್ದು ಕೊಳ್ಳುವ ಪಾತ್ರವಾಗಿ ಮ್ಯಾನೇಜರ್ ಕಾಣಿಸುತ್ತಾನೆ. ಅನವಶ್ಯಕ ದ್ವೇಷ ಮತ್ತು ಇಂದಿನ ಸಮಾಜದ ವ್ಯಕ್ತಿಯನ್ನು ಆತ ಪ್ರತಿನಿಧಿಸುವಂತಿದೆ. 

ದ್ವೇಷದ ಜೊತೆ ಜೊತೆಗೆ ಸ್ನೇಹ ಪ್ರೀತಿ ಸುರಿಸುವ ಅಪರೂಪದ ವ್ಯಕ್ತಿಗಳು ಇರುತ್ತಾರೆ.  ಕ್ರಿಕೆಟ್ ತಂಡ ಮತ್ತು ಭಾಸ್ಕರನ ತಾಯಿ ಮತ್ತು ಭಾಸ್ಕರ  ಪ್ರೀತಿಗೆ ಕಲಶವಿಟ್ಟಂತೆ ಕಾಡುತ್ತಾರೆ.

ಕತೆಗೆ ಪೂರಕವಾಗಿ ಕಲ್ಲೂರಾಯ, ಭಾಸ್ಕರ ಮುಂತಾದ ಪೂರಕ ಪಾತ್ರ ರಚಿಸಿದ್ದಾರೆ. 

ಕತೆಯ ಓಟ:

ಕತೆಗಾರನಿಗಿಲ್ಲಿ ಯಾವ ಅವಸರವೂ  ಕಾಣಿಸುವುದಿಲ್ಲ.  ತನ್ನದೇ ವಿಶಿಷ್ಟ ವೇಗದಲ್ಲಿದೆ ಕತೆ. ಅದೇ ಕತೆಯ ಜೀವಾಳ. 

ಮುಕ್ತ ಅಂತ್ಯ

ಕತೆಯ ಅನನ್ಯತೆ ಇರುವುದು ಅದು ಮುಕ್ತ ಅಂತ್ಯವನ್ನು ಕಾಣುವುದರಲ್ಲಿ, ಹೆಚ್ಚಾಗಿ ಕತೆಗಳು ಮುಕ್ತ ಅಂತ್ಯ ಕಾಣುತ್ತವೆ. ಆದರೆ ಕಾದಂಬರಿಯೊಂದು ಮುಕ್ತ ಅಂತ್ಯ ಕಾಣುವುದು ಅಪರೂಪ. ಅಂತಹ ಅಪರೂಪದ ಕಾದಂಬರಿ ಸಾಲಿಗೆ ಅಬ್ಬೆ ಸೇರಿದೆ. 

ಅಬ್ಬೆಯ ಕುರಿತಾದ ನಿಗೂಢತೆಯನ್ನು ಹಾಗೇ ಉಳಿಸಿಕೊಂಡು ಕಾದಂಬರಿಯನ್ನು ಮುಕ್ತ ಅಂತ್ಯಕ್ಕೆ ಕೊಂಡೊಯಿದ್ದಿದ್ದಾರೆ.

ನಿರೂಪಕ ಅಂಡಮಾನ್ ನಿಕೋಬಾರ್ ದ್ವೀಪಕ್ಕೆ ವರ್ಗ ಆಗುವುದರೊಂದಿಗೆ ಕತೆ ಮುಕ್ತ ಅಂತ್ಯ ಕಾಣುತ್ತದೆ. ಅದೇ ಮತ್ತೊಂದು ಕಾದಂಬರಿಗೆ ಮುನ್ನುಡಿಯಾ ಎಂಬ ಆಲೋಚನೆಗೂ ರಾಜ ದಾರಿ.  ಪ್ರವಾಸದ ಗೀಳಿರುವ ನನ್ನಂತವರಿಗೆ ನಿರೂಪಕನ ವರ್ಗಾವಣೆ ಚೇತೋಹಾರಿ.


ಕೆಲವರು ಅಪಾರವಾದ ಪ್ರತಿಭೆ ಶ್ರಮವಿದ್ದರೂ ಅದೃಷ್ಟದ ತೀವ್ರ ನಿರ್ಲಕ್ಷಕ್ಕೆ ಈಡಾಗುತ್ತಾರೆ. ಇದೇ ಬದುಕಿನ ವಿಕ್ಷಿಪ್ತತೆ.  ಕೆಲವರಷ್ಟೇ ಈ ನಿರ್ಲಕ್ಷದ ಬಲೆಯಿಂದ ಹೊರಬರಬಲ್ಲರು. ಕೆಲವರಿಗೆ ಅದೃಷ್ಟ ಕೈ ಹಿಡಿಯುತ್ತದೆ. 

 ಎಲ್ಲೂ ಸ್ಥಾವರವಾಗದೇ ಜಂಗಮನಂತಿರುವುದೇ ಬದುಕಿನ ಅಂತಿಮ ಸತ್ಯವೇನೋ ?  ಎಂಬ ಮಿಂಚನ್ನು ಮಿಂಚಿಸುತ್ತದೆ ಈ ಕಾದಂಬರಿ.


Sunday, April 9, 2023

ಅಸೀಮ ಸುಂದರಿ ಮಹರ್ಷೀ ಜಲಧಾರೆ…

 ನಾಲಗೆ ಹೊರಳದ ನಾಡಿನಲ್ಲಿ ನಾಲ್ಕು ದಿನ!

ಅಲೆಮಾರಿಯ ಅಂತರಂಗ...

          

            ಚೆರಿ ಮರದ ಹೂ ಪಕಳೆಗಳು ನಮ್ಮ ಪ್ರವಾಸದ ಹಾದಿಗೆ ಬಣ್ಣ ತುಂಬಿತ್ತು. ಶಿಲ್ಲಾಂಗನ ತುಂಬೆಲ್ಲಾ ಅದರದೇ ಸುದ್ದಿ. ಚೆರಿ ಹಬ್ಬದ ಬಿಸಿ ಬಿಸಿ ಚರ್ಚೆ ನಡೆಯುವ ಸಮಯಕ್ಕೆ ನಾವೈವರು ಮೇಘಾಲಯದ ಶಿಲ್ಲಾಂಗನಲ್ಲಿ ಮೊಕ್ಕಾಂ ಹೂಡಿದೆವು. ನಾಲ್ಕು ದಿನ ಪ್ರವಾಸ ಮಾಡಿದ ಅನುಭವದ ನಾಲ್ಕನೆಯ ಮತ್ತು ಕೊನೆಯ ಕಂತು. ಶಿಲ್ಲಾಂಗನ ಗಿಜಿ ಗುಟ್ಟುವ ಗುಂಪಿನಿಂದ ಏಕಾಂತದ ಸುಂದರ ಸ್ಥಳದ ಹುಡುಕಾಟದಲ್ಲಿದ್ದವರಿಗೆ ಸಿಕ್ಕಿದ್ದು ಈ ಜಲಧಾರೆ!

ಜಲಕನ್ನಿಕೆಯನು ಅರಸಿ ಹೊರಟಾಗ:-



ಜಲಧಾರೆಗೆ ಸಾಗುವ ದಾರಿ...


ನೆನಪುಗಳ ಕೆದುಕುತ್ತಾ ಕುಳಿತವನ ಮುಂದೆ  ಹೇಗೋ ನುಸುಳಿ ಜಾರಿದ  ಈ ಜಲ ಕನ್ನಿಕೆಯ ವಿವರಗಳು ಡಿಸೆಂಬರ್ ತಿಂಗಳ ಚಳಿಯ ನೀರವ ಏಕಾಂತದಲಿ ನಿಧಾನಕ್ಕೆ ತೆರೆದುಕೊಳ್ಳತೊಡಗಿತ್ತು.

          ಹೆಸರು ಮಹರ್ಷಿ ಜಲಧಾರೆ. ಜೊತೆಗೆ ವಹರ್ಷಿ ಎಂಬ ಇನ್ನೊಂದು ಹೆಸರೂ ಇದೆ.   ಯಾಕೆ ಈ ಹೆಸರು ಬಂತು ಎಂದು ಇಲ್ಲಿ ಯಾರಿಗೂ ಗೊತ್ತಿಲ್ಲ. ಭಾಷೆ ಗೊತ್ತಿಲ್ಲದ ಈ ನಾಡಿನಲ್ಲಿ ಹೆಸರಿನ ಕ್ಲಿಷ್ಟತೆಯನ್ನು ಕೆದಕುವುದಾದರೂ ಹೇಗೆ? ಗೊತ್ತಿಲ್ಲ. ಯಾವುದೋ ಬೆಟ್ಟದ ಕೊರಕಲುಗಳಲ್ಲಿ ಅಜ್ಞಾತವಾಗಿ ಹರಿವ ಇವು ಯಾವುದೋ ಕಿಂಕರನ ಶಾಪಕ್ಕೆ ಸಿಕ್ಕು ಅಡವಿಯೊಳಗಡವಿದೆಯೋ?

ನಾಗರೀಕತೆಯ ನಾಗಾಲೋಟಕ್ಕೆ ಸಿಕ್ಕಿ ನುಜ್ಜು ಗುಜ್ಜಾಗಿರುವ ಜಲಧಾರೆಗಳ ನಡುವೆ ಈ ಜಲಧಾರೆ ಅನನ್ಯವಾಗಿ ನಿಲ್ಲುತ್ತದೆ! ಹೊರ ಜಗತ್ತಿಗೆ ಕನಸಿನಂತೆ ಭಾಸವಾಗುವ ಇಲ್ಲಿನ ಪರಿಸರ ಮಿಥ್ಯಾ ವಾಸ್ತವದಂತೆ. ತಿಂಗಳುಗಳ ಕಾಲ ಅನವರತ ಸುರಿವ ಮಳೆ ನೀರು ಇಲ್ಲಿನ ಬೋಳುಗುಡ್ಡದಿಂದ ಬಹು ಬೇಗ ಬಸಿದು ಹೋದಾಗ ಇಲ್ಲಿನವರ ಪರದಾಟ ಹೇಳ ತೀರದು. ಹನಿ ನೀರಿಗೂ ತತ್ವಾರ. ಡಿಸೆಂಬರನಲ್ಲಿ ಸುಡುವ ತಣ್ಣನೆಯ ಚಳಿ. ಕೈತುಂಬಾ ಕೆಲಸಕ್ಕಾಗಿ ಅಲೆದಾಡುವ ಪರಿಸ್ಥಿತಿ. ಬೊಂಬು ಮತ್ತು ಸುಣ್ಣದ ಕಲ್ಲು ಇಲ್ಲಿ ನ ಆಧಾಯದ ಮೂಲ ಮತ್ತು ಮಾಲಿನ್ಯದ ಮೂಲವೂ ಸಹ.

ಬೆಂಕಿ ತಗುಲಿದ ಕೂಡಲೇ ಪ್ರಜ್ವಲಿಸುವ ವಿಶಿಷ್ಟ ಕಟ್ಟಿಗೆ.

ವ್ಯಾಪರಕ್ಕೆ ನಿಂತ ಬುಟ್ಟಿಗಳು...

ಉತ್ಥಾನ:-

          ಹಿಂದಿನ ದಿನವಷ್ಟೇ ʼನಾನ್‌ ಬ್ಲಾಂಗ್‌ʼ ಎಂಬ ಹಳ್ಳಿಯನು ಹತ್ತಿಳಿದ ನಮಗೆ ಕೈ ಕಾಲುಗಳ ನೆಟ್ಟು ಬೊಲ್ಟುಗಳೆಲ್ಲಾ ಸದ್ದು ಮಾಡುತ್ತಿರುವಾಗ ಮತ್ತೊಂದು ಜಲಧಾರೆಗೆ ಇಳಿಯಬೇಕೆಂಬುದು ನನಗೆ ಅರಗಿಸಿಕೊಳ್ಳಲಾರದ ಬಿಸಿ ತುಪ್ಪ. ಪೂರ್ವಾಪರಗಳ ಸುಳಿವು ಕೊಡದೆ ಸೂರ್ಯ ಬೆಟ್ಟಗಳ ಜೊತೆಗೆ ನಮ್ಮನ್ನೂ ಸುಡಲು ಹತ್ತಿದ. ಗೆಳೆಯರು ಹೇಳುವ ʼಇಲ್ಲೇ ಇದೆ, ಬಂತು, ಇನ್ನೊಂದು ಹತ್ತು ನಿಮಿಷʼ ಎಂಬ ಆಮಿಷದ ಪದಗಳಿಗೆ ಕಿವಿ ಬೇಸತ್ತಿತ್ತು.

ಅಂತೂ ಇಂತು ಬಂತು! -    


ವೀಕ್ಷಣಾ ಸೇತುವೆ!

ಸುಮಾರು ನಾಲ್ಕು ಕಿಲೋ ಮೀಟರ್‌ ನಡೆದು ಜಲಧಾರೆಯ ನೀರು ಮುಖಕ್ಕೆ ಚಿಮುಕಿಸಿಕೊಂಡಾಗ ಅಮೃತಾನುಭವ. ಶಿಲ್ಲಾಂಗಿನ ಸಿನ್ಟುಂಗ್‌, (ಮೂಗು ಬಾಯಿ, ತುಟಿ, ಗಂಟಲು ಎಲ್ಲಾ ಸೇರಿಸಿ ಹೇಳಿದರೂ ದೇವರಾಣೆ ನೀವು ಸರಿ ಉಚ್ಚಾರ ಹೇಳಲಾರಿರಿ.) ಹಳ್ಳಿಯ ಪೂರ್ವ ಖಾಸಿ ಬೆಟ್ಟಗಳ ಮಡಿಲಲಿ ಅಡಗಿ ಬಹುದೂರವಿದ್ದರೂ ಪ್ರವಾಸೋಧ್ಯಮ ಇಲಾಖೆಯ ಕೆಲಸ ನೀವು ಮೆಚ್ಚಲೇಬೇಕು. ಜಲಪಾತಕ್ಕೆ ಇಳಿಯುವಲ್ಲಿ ನೀರಿನ ವ್ಯವಸ್ಥೆ, ಸುಂದರ ಮೆಟ್ಟಿಲು, ವೀಕ್ಷಣಾ ಗೋಪುರ, ಜಲಪಾತದೆದುರಿಗೇ ನಿಲ್ಲಲು ಮತ್ತೊಂದು ಬಾಗು ಸೇತುವೆ. ಹೀಗೆ ಹತ್ತಾರು ಕಡೆ ವೀಕ್ಷಿಸಿ ಇಲ್ಲಿನ ಜಲಧಾರೆಯನ್ನು ಮನ ತುಂಬಿಸಿಕೊಳ್ಳಲು ಅಪೂರ್ವ ಅವಕಾಶ ನೀಡಿದುದೇ ಅಚ್ಚರಿ.

ಗುಡ್ಡದಿಂದ ಸುರಿವ ಎಳನೀರು!

          ಮಳೆಯ ದಿನಗಳಲ್ಲಿ ಕುಡಿದ ಹನಿ ಹನಿ ನೀರನ್ನು ತನ್ನ ಹರಿವಿನುದ್ದಕ್ಕೂ ಹರಿವಂತೆ ಮಾಡುವ ಮೋಡಿ ಒಂದು ಸೋಜಿಗಲ್ಲು! ಇಲ್ಲಿನ ತಣ್ಣನೆಯ ನೀರೊಳಗಿನ ಪ್ರತೀ ಕಲ್ಲೂ ಸುಸ್ಪಷ್ಟ. ನನ್ನರಿವಿಗೆ ಬಂದ ಐದೂ ಪಾತಗಳೂ ಅತ್ಯದ್ಭುತ.

ಜಲಪಾತದ ಕೊನೆ ಹಂತ.



ಮೊದಲ ನಾಲ್ಕು ಹಂತ ನಿಧ ನಿಧಾನವಾಗಿ ಬಳುಕುತ್ತಾ ಸಹಸ್ರಧಾರೆಯಾಗಿ ಸುರಿದರೆ, ಎರಡನೆಯದರದು ಅಕ್ಷರಶಃ ಬೋರ್ಗರೆತದ ಪಾತ. ವರ್ಣಿಸಲು ಪದಗಳ ತೊಳಲಾಟ. ಕೆರೆಯಂತಾದ ನೀರು ಅಚ್ಚ ಹಸಿರು ವರ್ಣ. ಮರೆಯಲಸಾಧ್ಯ. ಮೊದಲ ಹಂತದಲಿ ಧುಮುಕಿ ದೊಡ್ಡ ಅಪ್ಸರ ಕೊಂಡದಂತಹ ಕೆರೆಯ ನಿರ್ಮಿಸಿ ಎರಡನೆಯ ಬೋರ್ಗೆರತಕ್ಕೆ ಸಿದ್ಧವಾಗುತ್ತಾಳೆ. ಐದನೆಯ ಹಂತವನು ಮೇಲಿನಿಂದ ವೀಕ್ಷಿಸಲು ನಿರ್ಮಿಸಿದ ಸುತ್ತಲಿನ ಕಾಡು ಜಲಪಾತದ ಜೋಗುಳಕ್ಕೊಂದು ಮೆರಗು.

ಹೊಸತೊಂದು ಅಲೌಕಿಕ ಜಗತ್ತು:-

ಇಲ್ಲಿಗೆ ನೀವು ಬಂದರೆ ಹೊಸದೊಂದು ಜಗತ್ತಿಗೆ ಕಾಲಿಟ್ಟ ಅನುಭವವಾಗುವುದು. ಅಲೌಕಿಕ ಜಗತ್ತಿನ ಮಾಯಾ ಕನ್ನಡಿಯಂತೆ ತನ್ನ ಸುತ್ತಲಿನ ಮರಗಿಡ ಬಳ್ಳಿಗಳನ್ನು ಪ್ರತಿಫಲಿಸುತ್ತಲೇ ತನಗೆ ತಾನೆ ಅಪರಿಚಿತವಾಗಿ ಉಳಿದಿವೆಯೇನೊ ಎನಿಸುತ್ತಿತ್ತು. ಬಿಂಬಕ್ಕೂ ನೈಜಕ್ಕೂ ಪೈಪೋಟಿ ಏರ್ಪಟ್ಟು ಯಾವುದು ನಿಜ ಯಾವುದು ಸುಳ್ಳು ಎಂಬುದು ತಿಳಿಯದೇ ಮನಸ್ಸು ಮೂಕವಿಸ್ಮಿತವಾಗುತ್ತಿತ್ತು. ತನ್ನ ಸುತ್ತಲಿನದ್ದನ್ನು ಪ್ರತಿಫಲಿಸುತ್ತಾ ಸುಮ್ಮನೆ ಸಾಗಬೇಕು.”  ಎನ್ನುತ್ತಾ ದೊಡ್ಡ ನದಿಯೊಂದರ ನಿರೀಕ್ಷೆಯಲಿ ಭೋರ್ಗೆರೆಯುತ್ತಾ ಸಾಗುತ್ತಾ ತನ್ನತನವನ್ನು ಕಳೆದುಕೊಳ್ಳುವ ಸಂಕಟದಲ್ಲೇ ಮಂದಗಮನೆಯಾಗಿ ತನ್ನ ಜಗತ್ತನ್ನು ತೊರೆದು ಬರುವ ಪ್ರೇಯಸಿಯಂತೆ ಎಂಬ ಭಾವ ಮೂಡುತ್ತಲೇ ನೋಡುವ ನೋಟ ಬದಲಾಗಿತ್ತು.

ದಾರಿ ತೋರುವವರ ನಡುವೆ ಗೆಳೆಯ ಪಾಂಡೆ ಮತ್ತು ನಾಗರಾಜ್.


ಇಪ್ಪತ್ತು ವರ್ಷದಿಂದ ಮೇಘಾಲಯದಲ್ಲೇ ನೆಲೆನಿಂತ ನಮ್ಮ ಗೆಳೆಯ ಪಾಂಡೆ ಮೊದ ಮೊದಲು ಮೇಘಾಲಯದ ಎಲ್ಲಾ ಜಲಧಾರೆಗಳ ನೀರು ಸ್ಪಟಿಕ ಶುಭ್ರವಾಗಿತ್ತು ಎಂದು ಹೇಳಿ ನಮ್ಮಗೊಂದು ಅಚ್ಚರಿಯ ಜೊತೆಗೆ ವಿಷಾದವನು ಉಣಬಡಿಸಿದ. ನಾಗರೀಕತೆಯ ಅನಾಗರಿಕ ವರ್ತನೆ ಬಗ್ಗೆ ಜಿಗುಪ್ಸೆ ಹುಟ್ಟಿತು.

ಕಟ್ಟಿಸಿಕೊಂಡ ಪರೋಟ, ಹಣ್ಣುಗಳಿಗೆ ಹೊಟ್ಟೆಗೆ ಗೇಟ್‌ ಪಾಸ್‌ ನೀಡಲಾಯಿತು! ಜಲಧಾರೆಯಲ್ಲಿ ಮುಖ ತೋಯಿಸಿಕೊಂಡು ಹೊರಟಾಗ ಸೂರ್ಯ ಕತ್ತಲ ಪರದೆ ಎಳೆಯುತ್ತಿದ್ದ. ಮತ್ತೊಮ್ಮೆ ನಿನ್ನ ಸೌಂದರ್ಯ ಮೆಲ್ಲುವ ಅವಕಾಶಕ್ಕಾಗಿ ಕಾದಿರುತ್ತಾ ಜಲಧಾರೆಗೆ ಬೈ ಬೈ ಹೇಳಿದೆವು.

ಕೊನೆ ಹನಿ:-

          ನದಿ ಹರಿಯುತ್ತಲೇ ಇರಬೇಕು. ಕ್ಷಣ ಕ್ಷಣವೂ ತನ್ನ ತನವನ್ನು ಕಳೆದುಕೊಳ್ಳುತ್ತಲೇ, ಇಲ್ಲವಾದರೆ ಅದು ನದಿಯಾಗಲಾರದು! ಹಾಗೆ ನದಿಯನ್ನು ಅದರ ನೈಜ ಸೌಂದರ್ಯಕ್ಕೆ ಕುಂದಾಗದಂತೆ ಹರಿಯಲು ಬಿಡಿ.

ವಾರೆ ನೋಟ

ಲೋಚನ ದ ತುಂಬಾ ಚಂದ್ರ ತಾಲದ ಬಿಂಬ

( Chandra tal lake .... Himachal pradesh) ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿ...