Monday, March 30, 2020

ಜಾತ್ರೆ ಎಂಬ ನವಿರಾದ ನವಿಲುಗರಿ.



ಜಾತ್ರೆ ಎಂದರೆ ಬಿಡುವು. ಜಾತ್ರೆ ಎಂದರೆ ಸೇರುವಿಕೆ. ಜಾತ್ರೆ ಎಂದರೆ ಜಂಗುಳಿ. ಮಕ್ಕಳಿಗೆ ಜಾತ್ರೆ ಎಂದರೆ ಉತ್ಸಾಹ, ಆಟಿಕೆ ಅಂಗಡಿಗಳು. ಜಾತ್ರೆ ಎಂದರೆ ಏಕತಾನತೆ ಮುರಿವ ಸಂಸ್ಕ್ರತಿಯ ಬಿಂದುಗಳಾಗಿ ನನಗೆ ಕಾಣುತ್ತೆ.
ಈ ಜಾತ್ರೆ ಅಜ್ಜಿಯೂರಾದ ಬೈಂದೂರ ನೆನಪು ಹೊತ್ತು ತರುವುದು. ಜೊತೆ ಜೊತೆಗೆ ಮಾವು ಕದ್ದ, ಚಿಕ್ಕವಯಸ್ಸಿನಲ್ಲೇ ಎಷ್ಟೋ ಕಿಲೋ ಮೀಟರ್ ನಡೆದ, ನವಿರಾದ ಹೆಸರ ಪಾಯಸ ಹೊಡೆದ, ತಮ್ಮನನ್ನು ಗೋಳು ಹೊಯ್ದು ಕೊಂಡ ನೆನಪುಗಳ ತಕದಿಮಿತ.




ಆಗೆಲ್ಲಾ ನಮಗೆ ಜಾತ್ರೆಗಾಗಿ ನೀಡುವ ಹಣ ಅಷ್ಟಕ್ಕಷ್ಟೆ. ಸ್ವಾಭಿಮಾನದಿಂದಾಗಿ ಯಾರಲ್ಲೂ ಬೇಡುವಂತಿರಲಿಲ್ಲ.  ಜಾತ್ರೆಗಾಗಿ ಕಾಸು ಕೂಡಿಸುವ ಕನಸು. ತರೆವಾರಿ ಅಂಗಡಿಗಳ, ಒಂದು ಆಟಿಕೆ ಕೊಳ್ಳುವ ತವಕ. ಹೇಗೆಂಬ ಚಿಂತೆ? ಶಾಲೆಗೆ ಹೋಗಲು ನೀಡುವ ಹಣವನ್ನು ನೆಡದೇ ಹೋಗಿ ಉಳಿಸುವುದು. ಅಡುಗೆಗೆ ಸಹಾಯಕರಾಗಿ ಹೋಗುವುದು. ಬಡಿಸಲು ಹೋಗುವುದು, ನಮ್ಮ ಕೆಲಸವಾಗಿತ್ತು.

ನಾವು ಚಿಕ್ಕವರಿದ್ದಾಗ ನಮ್ಮಜ್ಜಿ ಮನೆಯ ಹತ್ತಿರದಲ್ಲೇ ಅಜ್ಜಿಯ ಅತ್ತೆಯೊಬ್ಬರಿದ್ದರು. ಶಿಕ್ಷಕಿಯಾಗಿ ನಿವೃತ್ತರಾದವರು. ಅವರಿಗೆ ನಡೆಯಲಾಗುತ್ತಿರಲಿಲ್ಲ. ದೊಡ್ಡ ಮನೆ, ದೊಡ್ಡ ಜಾಗ, ನಿವೃತ್ತಿ ವೇತನ ಎಲ್ಲವೂ ಇತ್ತು. ನೋಡಿಕೊಳ್ಳಲು ಮಾತ್ರ ಯಾರಿರಲಿಲ್ಲ. ಗಂಡ ಯಾವಾಗಲೋ ತೀರಿ ಹೋಗಿದ್ದರು. ಮಕ್ಕಳಿರಲಿಲ್ಲ. ನಮ್ಮಜ್ಜಿಯನ್ನು ಗೋಳು ಹೊಯ್ದುಕೊಂಡ ಅವರು ಆಗ ಅಜ್ಜಿಯನ್ನೇ ಅವಲಂಬಿಸಿದ್ದರು. ರಜೆ ಬಂದಿತೆಂದರೆ ಅಜ್ಜಿಗೆ ಅವರ ಸೇವೆಯಿಂದ ಮುಕ್ತಿ. ನಮ್ಮ ಸೇವೆ ಶುರು. ದಿನಾಲೂ ಬೆಳಗ್ಗೆ ಚಹ, ಮಧ್ಯಾಹ್ನ ಊಟ, ಸಂಜೆಗೆ ಚಹ ಇಷ್ಟನ್ನು ಹೋಟೆಲ್ಗೆ ಹೋಗಿ ತಂದು ಕೊಡಬೇಕಿತ್ತು. ಒಂದಿನಕ್ಕೆ ನಮಗೆ, ಅಂದರೆ ನನ್ನಿಬ್ಬರು ತಮ್ಮಂದಿರು ಶ್ರೀಕಾಂತ, ಶ್ರೀಪತಿಗೆ ಸೇರಿ ತಲಾ ನಾಲ್ಕಾಣೆ ಕೊಡುತ್ತಿದ್ದರು. ಆಟದ ನಡುವೆಯೂ ಆಟಿಕೆ ಆಸೆಗೆ ದಿನಾಲೂ ಚಹ ಸೇವೆಗೆ ಹೋಗುತ್ತಿದ್ದೆವು. ಸೇವೆ ಜೊತೆಗೊದಿಷ್ಟು ಹಣ ಸಂಪಾದನೆಯೂ ಆಗುತ್ತಿತ್ತು. ಆಟಿಕೆ ಕೊಂಡು ವಿಶಾಲ ಹರವಿನ ಅಜ್ಜಿ ಮನೆಯಲ್ಲಿ ಆಡುವ ಸಂತೋಷವೇ ಬೇರೆ. ಎಷ್ಟೋ ವರ್ಷ ಅವರಿಗೆ ಚಹ ಸೇವೆ ಮಾಡಿದೆವು. ಜಾತ್ರೆ ಮುಗಿದ ಮೇಲೆ ನಾವು ಮೂವರೂ ಹೊರಡುತ್ತಿದ್ದೆವು. ಕಣ್ಣೀರಾಗಿ ಅಮ್ಮಮ್ಮ ನಮ್ಮನ್ನು ಬೀಳ್ಕೊಡುತ್ತಿದ್ದರು. ಒಲ್ಲದ ಮನಸಿನಿಂದ ನಮಗೆ ಮಾವ, ಅತ್ತೆಯೂ ಪ್ರೀತಿಯ ವಿದಾಯ ಕೋರುತ್ತಿದ್ದರು. ಜಾತ್ರೆ ನೋಡಿ ಆಟಿಕೆಯೊಂದಿಗೆ ಮರಳುತ್ತಿದ್ದೆವು. ಜಾತ್ರೆ ಎಂದರೆ ಆಟಿಕೆ, ಅಮ್ಮಮ್ಮ ಹಾಗೂ ಅವರ ಅತ್ತಿಗೆ ನೆನಪಾಗುತ್ತಾರೆ.

ಜಾತ್ರೆ ಎಂದರೆ ಈಗ ಆಗಿನಷ್ಟು ಕುತೂಹಲ ಉಳಿದಿಲ್ಲ. ಬಹುಶಃ ನಾವು ದೊಡ್ಡವರಾದೆವೆಂದು ಕಾಣುತ್ತೆ. ದ ಲಾ ಆಪ್ ಮಾಜರ್ಿನಲ್ ಯುಟಿಲಿಟಿ ಜಾತ್ರೆಗೂ ಅನ್ವಯಿಸುತ್ತೆ ಅನಿಸಲಿಕ್ಕೆ ಶುರುವಾಗಿದೆ. ಕಳೆ ಕಳೆದುಕೊಂಡ ಬೈಂದೂರು ಸಪ್ಪಗೆ ಕುಳಿತಿದೆ. ನನ್ನ ಬಾಲ್ಯದ ಗೆಳೆಯರಿಬ್ಬರೂ ಈಗ ಬದುಕಿನ ಸಂತೆಯಲ್ಲಿ ಕಳೆದುಹೋಗಿದ್ದಾರೆ!
ಶ್ರೀಧರ್. ಎಸ್. ಸಿದ್ದಾಪುರ.
ರಥಬೀದಿ, ಸಿದ್ದಾಪುರ ಅಂಚೆ,
ಕುಂದಾಪುರ ತಾಲೂಕು.
ಉಡುಪಿ ಜಿಲ್ಲೆ-576229.

Thursday, March 26, 2020

ಅಳಿಲ ಧ್ಯಾನ!



ಅಳಿಲ ಮರಿಯೇ
ಅಳಿಲ ಮರಿಯೇ
ಎಲ್ಲಿರುವೆ?
ತುಪಾಕಿಯ ಮೇಲೆ
ಕುಂತಿರುವೆ.
ಅಯ್ಯೋ ರಾಮ
ಏನು ಕೆಲಸ
ಅಲ್ಲಿ ನಿನಗೆ?
ಬೇಗ ಸೇರೆ 
ಮನೆಗೆ.
'ತುಪಾಕಿ ಮಾಮ
ಬಂದರೆ ಕೈಯ
ಮುಗಿವೆ
ಹೊಡೆಯದಿರು ಗುಂಡು
ಎನುವೆ.
ನಾಕು ಜನರ ಪ್ರಾಣ
ಉಳಿಸಿ ಬರುವೆ.

ಶ್ರೀಧರ್ ಎಸ್. ಸಿದ್ದಾಪುರ. ಮಾರ್ಚ್ ೨೨.
#ಪುರುಸೊತ್ತು_2020.

#ಮಕ್ಕಳ_ಪದ್ಯಗಳು.

Tuesday, March 24, 2020

'ಅಂತರಂಗ'ದಲ್ಲಿ ಅನಂತ ಪಯಣ...



ನಾವು ಯಾವಾಗ ನಮಗೋಸ್ಕರ ಜೀವಿಸುತ್ತೇವೆ? ನಮ್ಮ ಜೀವಿತದಲ್ಲಿ ನಡೆಯುವ ಘಟನೆಗಳಿಗೆ ಏನಾದರೂ ಕಾರ್ಯಕಾರಣ ಸಂಬಂಧವಿದೆಯೇ? ಎಲ್ಲರೂ ಮತ್ತೊಬ್ಬರ ಖುಷಿಗಾಗಿ ಹಗಲುವೇಷ ತೊಟ್ಟವರಂತೆ ಬದುಕುತ್ತೇವೆ. ಕೆಲವೊಮ್ಮೆ ನಮ್ಮ ಬದುಕಿನ ಮೇಲೆ ನಮಗೇ ಹಿಡಿತವಿಲ್ಲದೇ ಪರಿತಪಿಸುವಂತೆ ಮಾಡಿಬಿಡುವುದು. ರಾಮಾಯಾಣ ಮತ್ತು ಮಹಾಭಾರತದ ಅನೇಕ ಪಾತ್ರಗಳ ಒಳ ಹೊಕ್ಕು ಬರೆದ ಅಂತರಂಗ ವೆಂಬ ವಿಶಿಷ್ಟ ಕೃತಿಯೊಂದನ್ನು ಓದಿ ಮುಗಿಸಿದಾಗ ನನಗಾದ ಅನುಭವಗಳು. ಅಕ್ಕನಂತಹ ಗೆಳತಿ ಸುರೇಖಾ ಭೀಮಗುಳಿ ಮನಮುಟ್ಟುವಂತೆ ಬರೆದಿದ್ದಾರೆ.
ಶ್ರುತಕೀತರ್ಿ, ಮಾಂಡವಿಯ ಸ್ವಗತಗಳು ನಮಗೆ ಹಾಗನ್ನಿಸದೇ ಇರಲು ಬಿಡಲಾರವು. ಯಾರ್ಯಾರಿಗಾಗಿಯೋ ನಾವು ತೊಟ್ಟ ವೇಷವೇ ನಮಗೇ ಒತ್ತಡವನ್ನುಂಟು ಮಾಡುತ್ತವೆ. ಪ್ರತಿ ಪಾತ್ರವು ಕನ್ನಡಿಯಲ್ಲಿ ತಮ್ಮನ್ನು ತಾವೇ ನೋಡಿಕೊಂಡಂತೆ ಭಾಸವಾಗುವುದು. ಮತ್ತೊಬ್ಬರ ದೃಷ್ಟಿಕೋನದಲ್ಲಿ ಎಲ್ಲವನ್ನು ನೋಡುವುದು ಬಲು ಕಷ್ಟದ ಕೆಲಸವೇ. ಈ ಎಲ್ಲಾ ಕಷ್ಟಗಳನ್ನು ಬಹಳ ಸರಳವಾಗಿ ನಿರೂಪಿಸುತ್ತಾ ಪ್ರತಿ ಪಾತ್ರದ ತುಮುಲಗಳನ್ನು, ಕಷ್ಟಗಳನ್ನು ಅತ್ಯಂತ ಸಶಕ್ತವಾಗಿ ನಮ್ಮ ಮುಂದಿಡುವ ಕ್ರಮ ಬಹಳ ಇಷ್ಟವಾಯಿತು.
ಕೈಕೆಯಿ ತನ್ನ ನಿಲುವಿಗೆ ದುಃಖಿಸುತ್ತಾ ರಾಮನಿಂದ ಸಂತೈಸಲ್ಪಟ್ಟಾಗ ನಾನು ಮತ್ತೊಮ್ಮೆ ತಾಯಿಯಾದೆ ಎಂದು ಉಸುರುವ ಆ ಕ್ಷಣ ಅದೇಕೊ ನನ್ನನ್ನು ಅನೇಕ ದಿನಗಳವರೆಗೆ ಕಾಡುತ್ತಲೇ ಇತ್ತು. ರಾಮನ ನಡೆಯಂತೂ ಅಚ್ಚರಿಯ ಕಡಲಿನಲಿ ತೇಲಿಸಿತು. ಎಷ್ಟು ಉದಾತ್ತವಾಗಿ ರಾಮನನ್ನು ಚಿತ್ರಿಸಿದ್ದಾರೆ. ಬೈರಪ್ಪ ಬರೆದ ಉತ್ತರಕಾಂಡವನ್ನು ಮತ್ತೊಮ್ಮೆ ಓದುವಂತೆ ಮಾಡಿತು. ಅತಿ ಚಿಕ್ಕ ಚಿಕ್ಕ ಪಾತ್ರಗಳನ್ನು ಕಟ್ಟಿಕೊಟ್ಟ ಕ್ರಮ ಅನನ್ಯ. ಅವರೇ ಅಂದಂತೆ ಯಕ್ಷಗಾನದಲಿ ಮಿಂಚಲು ಅವಕಾಶವೇ ಇಲ್ಲದ ಅನೇಕ ಪಾತ್ರಗಳಾದ ರುಮೆ, ಅಂಬಾಲಿಕೆ, ಅಂಬಿಕೆ ಮುಂತಾದವರ ಹಾಜರಿ ಹಾಕಿಸಿದ್ದಾರೆ.
ಕೊನೆಗೂ ಕಾಡುವ ಜಿಜ್ಞಾಸೆ:-
ರಾಮಾಯಾಣದ ಅನೇಕ ಪಾತ್ರಗಳು ಎಲ್ಲವೂ ವಿಧಿ ನಿಯಮಾನುಸಾರ ನಡೆಯುವುದು. ಅಥವಾ ತನ್ನ ಮನೋಬಲಕ್ಕನುಗುಣವಾಗಿ ನಡೆಯುವುದೋ ಎಂಬ ತಾತ್ವಿಕ ಪ್ರಶ್ನೆ ನಮಗೆ ಎದುರಾಗುವಂತೆ ಮಾಡುತ್ತಾರೆ ಸುರೇಖಾ. ಎಲ್ಲಕ್ಕೂ ಕಾರ್ಯ ಕಾರಣ ಸಂಬಂಧವನ್ನು ಕಲ್ಪಿಸುತ್ತಾ ನೀನು ಬರಿ ಪಾತ್ರದಾರಿ ಅಷ್ಟೇ ಎಂದು ನಿರೂಪಿಸುತ್ತಾ, ಮಾನವ ಪ್ರಯತ್ನಗಳಿಗೆ ಬೆಲೆ ಇಲ್ಲವೇ ಎಂಬ ಜಿಜ್ಞಾಸೆಯನ್ನೂ ಹುಟ್ಟು ಹಾಕುತ್ತಾರೆ.
ವಿಭಿನ್ನ ಹೊತ್ತಗೆಯೊಂದನ್ನು ಓದಿದ ಅನುಭವ ನಿಮಗಾಗುವುದರಲ್ಲಿ ಅನುಮಾನವಿಲ್ಲ. ತಡವಾಗಿ ಪ್ರತಿಕ್ರಿಯಿಸುವ ಈ ಲೇಟ್ ಲತೀಪನ ಬಗ್ಗೆ ಕ್ಷಮೆ ಇರಲಿ. ನಮಸ್ಕಾರ.

ಶ್ರೀಧರ. ಎಸ್. ಸಿದ್ದಾಪುರ

Wednesday, March 11, 2020

ಬಾಹು ಬಲಿಗೆ ಹೊಯಿಗೆ ಮಜ್ಜನ!



ಏನಿವತ್ತು ಏನೋ ಹೇಳುತ್ತಾನೆಂದು ಹೆದರ ಬೇಡಿ. ನನ್ನ ಬಾಲ್ಯದ ನೆನಪುಗಳನ್ನು ನಿಮ್ಮ ಮುಂದೆ ಹರವಿ ಕುಳಿತಿರುವೆ ಅಷ್ಟೇ.
ಬಾಲ್ಯದ ನೆನಪು ಮಾಸದ ಹೊಂಬಿಸಿಲು. ಅರಳುವ ಕುಡಿ ಮೊಗ್ಗು. ನವಿರಾದ ನವಿಲು ಗರಿ. ಬಾಲ್ಯ ಕಳೆಗಟ್ಟಿದ್ದು ನನ್ನಮ್ಮನ ತವರೂರು ಬೈಂದೂರೆಂಬ ಕಡಲ ತೀರದಲ್ಲಿ. ನನ್ನ ನೆನಪುಗಳಲ್ಲಿ ಬೆಚ್ಚಗಿರುವ ಬೈಂದೂರು. ರಜೆ ಬಂದರೆ ಚೀಲ ಹಿಡಿದು ಬೈಂದೂರಿಗೆ ಪರಾರಿ. ಹಪ್ಪಳ, ಸಂಡಿಗೆಗಳ ಸುವರ್ಣ ಕಾಲ. ಬಾಲ್ಯದ ನೆನಪಿನ ರತ್ನ ನಿಮ್ಮ ಮುಂದೆ.
ಊರ ಜಾತ್ರೆಯ ಸಮಯ. ನನ್ನ ಚಿಕ್ಕಮ್ಮ ತನ್ನಿಬ್ಬರು ಮಕ್ಕಳೊಂದಿಗೆ ಬೈಂದೂರಿಗೆ ಬಂದಿದ್ದರು. ನಾನು ಮತ್ತು ಅಕ್ಕನೂ ಹೋಗಿದ್ದೆವು. ಮನಸೋ ಇಚ್ಚೆ ಆಡುತ್ತಿದ್ದೆವು. ನಮ್ಮೊಂದಿಗೆ ಶ್ರೀಕಾಂತ, ಅವನ ತಮ್ಮ ಶ್ರೀಪತಿಯೂ ಆಡುತ್ತಿದ್ದ. ಏನೋ ಕಟ್ಟಿಸಬೇಕೆಂದು ಮಾವ ಒಂದಿಷ್ಟು ಹೊಯಿಗೆ ತಂದು ರಾಶಿ ಹಾಕಿದ್ದ. ಎಲ್ಲಿತ್ತೊ ಸಣ್ಣ ತುಂಟತನ, ಜಾಗೃತವಾಯಿತು. ತಮ್ಮನನ್ನು ಒಂದು ಪೀಠದಲ್ಲಿ ಕೂರಿಸಿದೆವು. ಒಂದಿಷ್ಟು ಹೊಯಿಗೆಯನ್ನು ಅವನ ತಲೆಗೆ ಹೊಯ್ದೆವು. ಆತನು ತುಟಿ ಪಿಟಕ್ ಎನ್ನದೇ ಕೂತಿದ್ದು ನೋಡಿ ಮತ್ತೆರಡು ಡಬ್ಬ ಹೊಯಿಗೆಯನ್ನು  ಅವನ ತಲೆಗೆ ಸುರಿದೆವು. ಅವನಿಗೆ ಹೊಯಿಗೆ ಮಜ್ಜನ. ಆತ ಬಾಹುಬಲಿಯಂತೆ ಅಲುಗಾಡದೇ ಕೂತ! ನಡು ನಡುವೆ ದೊಡ್ಡ ತಮ್ಮನ ಮಂತ್ರ ಘೋಷ. ನಾವು ಮಜ್ಜನ ನಡೆಸಿದ್ದೇ ನಡೆಸಿದ್ದು. ಆತನನ್ನು ಕೂರಿಸಿ ಋಷಿ ಮಾಡಿದೆವು. ಒಂದೆರಡು ದಾಸವಾಳವನ್ನು ಅವನ ಕಿವಿಗಿಟ್ಟೆವು. ಆತ ಕಲ್ಲಿನ ಮೂತರ್ಿಯಂತೆ ಅಲ್ಲಾಡದೇ ಕೂತಿದ್ದ! ನಮ್ಮ ನಡುವಿನಲ್ಲಾದ ಕಾಂಟ್ರಾಕ್ಟ್ ಏನೆಂದು ಈಗ ನೆನಪಿಲ್ಲ. ಆತನೇಕೆ ಸುಮ್ಮನೆ ಕೂತಿದ್ದನೆಂಬುದೂ ಗೊತ್ತಿಲ್ಲ!
ಹಪ್ಪಳದ ಕೆಲಸದಲ್ಲಿ ನಿರತರಾಗಿದ್ದ ಚಿಕ್ಕಮ್ಮ ನಾವಾಡುವಲ್ಲಿಗೆ ಬಂದಳು. ತಮ್ಮನಿಗಾದ ಗತಿ ನೋಡಿ ಕಣ್ಣೀರಾದಳು ನೋಡಿ. ಅಮ್ಮನಿಗೆ ನೋಡಲಾಗಲಿಲ್ಲ. ಸಿಟ್ಟು ನೆತ್ತಿಗೇರಿತು. ಅಮ್ಮ ಸಾಕ್ಷಾತ್ ರಣಚಂಡಿಯಾದಳು. ಕಟ್ಟಿಗೆ ತುಂಡನೆತ್ತಿಕೊಂಡು ಅಮ್ಮ ನನ್ನನ್ನು ಅಟ್ಟಿಸಿಕೊಂಡು ಬಂದಳು. ಒಂದು ಪೆಟ್ಟು ಸಾಕಿತ್ತು ನನ್ನ ಕೈಕಾಲು ಊನ ಮಾಡಲು, ಅಷ್ಟು ದೊಡ್ಡದಿತ್ತು ಅದು. ಉಪ್ಪರಿಗೆಯಲ್ಲಿ ತಲೆ ಮರೆಸಿಕೊಂಡೆ. ಉಪ್ಪರಿಗೆಯಲ್ಲೊಂದು ಅಡ್ಡ ದಂಡೆ ಇತ್ತು. ಅಲ್ಲಿ ಉಸಿರಾಡದೇ ಕೂತಿದ್ದೆ. ಅಮ್ಮ ನನ್ನ ಅರಸುತ್ತಾ ಸಿಟ್ಟಿನಲ್ಲಿ ಬುಸುಗುಟ್ಟುತ್ತಾ ಉದ್ದನೇ ಹಜಾರದಂತಿದ್ದ ಉಪ್ಪರಿಗೆಯಿಡಿ ಇಲಿಗಾಗಿ ಅರಸುವ ಬೆಕ್ಕಿನಂತೆ ಹುಡುಕ ತೊಡಗಿದಳು. ಅಡ್ಡ ದಂಡೆಯಿಂದ ಒಮ್ಮೆಲೇ ಸದ್ದಾಗದಂತೆ ದುಮುಕಿ ಪೇರಿ ಕಿತ್ತೆ ನೋಡಿ, ಮತ್ತೆ ಪ್ರತ್ಯಕ್ಷನಾಗಿದ್ದು ಊಟದ ಸಮಯಕ್ಕೇ! ನಾ ಓಡಿದ್ದು ಅಮ್ಮನಿಗೆ ಗೊತ್ತಾಗಲೇ ಇಲ್ಲ. ಇಲಿ ಹುಡುಕುವ ಬೆಕ್ಕಿನಂತೆ ಅಲ್ಲೇ ಹುಡುಕುತ್ತಾ ಸುಸ್ತಾದಳು. ಮುಂದೇ ಹೇಗೆ ಬಚಾವಾದೆನೆಂದು ಈಗ ನೆನಪಿಲ್ಲ. ಎಂದಾದರೂ ನಾವು ಮೂವರು ಪುರುಸೊತ್ತಾದಾಗ ಒಟ್ಟಾಗಿ ನೆನಪನ್ನು ಕೆದಕಿ  ಆಗಾಗ ಖುಷಿ ಪಡುತ್ತೇವೆ. 'ರಣಚಂಡಿ' ಅಮ್ಮನೆಂದು ಈಗಲೂ ಗೇಲಿ ಮಾಡುತ್ತೇನೆ. ತುಂಟ ಮಗನೆಂದು ಆಗ ಅವಳೆನ್ನ ಕಿವಿ ಹಿಂಡುತ್ತಾಳೆ!
ಕಳೆ ಕಳೆದುಕೊಂಡ  ಬೈಂದೂರು ಸಪ್ಪಗೆ ಕುಳಿತಿದೆ. ನನ್ನ ಬಾಲ್ಯದ ಗೆಳೆಯರಿಬ್ಬರೂ ಈಗ ಕೆಲಸದಲ್ಲಿ ಕಳೆದುಹೋಗಿದ್ದಾರೆ!
ಮತ್ತೆ ಬಾಲ್ಯದಲ್ಲಿ ಮೀಯುವಾಸೆ. ಈ ಜಗವು ಪುರುಸೊತ್ತು ಕೊಟ್ಟರೆ. ಪುರುಸೊತ್ತಾದಗ ಬಾಲ್ಯದ ಕತೆಗಳನ್ನೆಲ್ಲಾ ನಿಮ್ಮ ಮುಂದೆ ಹರವಿ ಕೂರಬೇಕು. ಸಿಗುವಿರಾ ಇನ್ನೊಮ್ಮೆ ವಿರಾಮದಲ್ಲಿ?


ಶ್ರೀಧರ್. ಎಸ್. ಸಿದ್ದಾಪುರ.

ವಾರೆ ನೋಟ

ಲೋಚನ ದ ತುಂಬಾ ಚಂದ್ರ ತಾಲದ ಬಿಂಬ

( Chandra tal lake .... Himachal pradesh) ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿ...