Sunday, April 9, 2023

ಅಸೀಮ ಸುಂದರಿ ಮಹರ್ಷೀ ಜಲಧಾರೆ…

 ನಾಲಗೆ ಹೊರಳದ ನಾಡಿನಲ್ಲಿ ನಾಲ್ಕು ದಿನ!

ಅಲೆಮಾರಿಯ ಅಂತರಂಗ...

          

            ಚೆರಿ ಮರದ ಹೂ ಪಕಳೆಗಳು ನಮ್ಮ ಪ್ರವಾಸದ ಹಾದಿಗೆ ಬಣ್ಣ ತುಂಬಿತ್ತು. ಶಿಲ್ಲಾಂಗನ ತುಂಬೆಲ್ಲಾ ಅದರದೇ ಸುದ್ದಿ. ಚೆರಿ ಹಬ್ಬದ ಬಿಸಿ ಬಿಸಿ ಚರ್ಚೆ ನಡೆಯುವ ಸಮಯಕ್ಕೆ ನಾವೈವರು ಮೇಘಾಲಯದ ಶಿಲ್ಲಾಂಗನಲ್ಲಿ ಮೊಕ್ಕಾಂ ಹೂಡಿದೆವು. ನಾಲ್ಕು ದಿನ ಪ್ರವಾಸ ಮಾಡಿದ ಅನುಭವದ ನಾಲ್ಕನೆಯ ಮತ್ತು ಕೊನೆಯ ಕಂತು. ಶಿಲ್ಲಾಂಗನ ಗಿಜಿ ಗುಟ್ಟುವ ಗುಂಪಿನಿಂದ ಏಕಾಂತದ ಸುಂದರ ಸ್ಥಳದ ಹುಡುಕಾಟದಲ್ಲಿದ್ದವರಿಗೆ ಸಿಕ್ಕಿದ್ದು ಈ ಜಲಧಾರೆ!

ಜಲಕನ್ನಿಕೆಯನು ಅರಸಿ ಹೊರಟಾಗ:-



ಜಲಧಾರೆಗೆ ಸಾಗುವ ದಾರಿ...


ನೆನಪುಗಳ ಕೆದುಕುತ್ತಾ ಕುಳಿತವನ ಮುಂದೆ  ಹೇಗೋ ನುಸುಳಿ ಜಾರಿದ  ಈ ಜಲ ಕನ್ನಿಕೆಯ ವಿವರಗಳು ಡಿಸೆಂಬರ್ ತಿಂಗಳ ಚಳಿಯ ನೀರವ ಏಕಾಂತದಲಿ ನಿಧಾನಕ್ಕೆ ತೆರೆದುಕೊಳ್ಳತೊಡಗಿತ್ತು.

          ಹೆಸರು ಮಹರ್ಷಿ ಜಲಧಾರೆ. ಜೊತೆಗೆ ವಹರ್ಷಿ ಎಂಬ ಇನ್ನೊಂದು ಹೆಸರೂ ಇದೆ.   ಯಾಕೆ ಈ ಹೆಸರು ಬಂತು ಎಂದು ಇಲ್ಲಿ ಯಾರಿಗೂ ಗೊತ್ತಿಲ್ಲ. ಭಾಷೆ ಗೊತ್ತಿಲ್ಲದ ಈ ನಾಡಿನಲ್ಲಿ ಹೆಸರಿನ ಕ್ಲಿಷ್ಟತೆಯನ್ನು ಕೆದಕುವುದಾದರೂ ಹೇಗೆ? ಗೊತ್ತಿಲ್ಲ. ಯಾವುದೋ ಬೆಟ್ಟದ ಕೊರಕಲುಗಳಲ್ಲಿ ಅಜ್ಞಾತವಾಗಿ ಹರಿವ ಇವು ಯಾವುದೋ ಕಿಂಕರನ ಶಾಪಕ್ಕೆ ಸಿಕ್ಕು ಅಡವಿಯೊಳಗಡವಿದೆಯೋ?

ನಾಗರೀಕತೆಯ ನಾಗಾಲೋಟಕ್ಕೆ ಸಿಕ್ಕಿ ನುಜ್ಜು ಗುಜ್ಜಾಗಿರುವ ಜಲಧಾರೆಗಳ ನಡುವೆ ಈ ಜಲಧಾರೆ ಅನನ್ಯವಾಗಿ ನಿಲ್ಲುತ್ತದೆ! ಹೊರ ಜಗತ್ತಿಗೆ ಕನಸಿನಂತೆ ಭಾಸವಾಗುವ ಇಲ್ಲಿನ ಪರಿಸರ ಮಿಥ್ಯಾ ವಾಸ್ತವದಂತೆ. ತಿಂಗಳುಗಳ ಕಾಲ ಅನವರತ ಸುರಿವ ಮಳೆ ನೀರು ಇಲ್ಲಿನ ಬೋಳುಗುಡ್ಡದಿಂದ ಬಹು ಬೇಗ ಬಸಿದು ಹೋದಾಗ ಇಲ್ಲಿನವರ ಪರದಾಟ ಹೇಳ ತೀರದು. ಹನಿ ನೀರಿಗೂ ತತ್ವಾರ. ಡಿಸೆಂಬರನಲ್ಲಿ ಸುಡುವ ತಣ್ಣನೆಯ ಚಳಿ. ಕೈತುಂಬಾ ಕೆಲಸಕ್ಕಾಗಿ ಅಲೆದಾಡುವ ಪರಿಸ್ಥಿತಿ. ಬೊಂಬು ಮತ್ತು ಸುಣ್ಣದ ಕಲ್ಲು ಇಲ್ಲಿ ನ ಆಧಾಯದ ಮೂಲ ಮತ್ತು ಮಾಲಿನ್ಯದ ಮೂಲವೂ ಸಹ.

ಬೆಂಕಿ ತಗುಲಿದ ಕೂಡಲೇ ಪ್ರಜ್ವಲಿಸುವ ವಿಶಿಷ್ಟ ಕಟ್ಟಿಗೆ.

ವ್ಯಾಪರಕ್ಕೆ ನಿಂತ ಬುಟ್ಟಿಗಳು...

ಉತ್ಥಾನ:-

          ಹಿಂದಿನ ದಿನವಷ್ಟೇ ʼನಾನ್‌ ಬ್ಲಾಂಗ್‌ʼ ಎಂಬ ಹಳ್ಳಿಯನು ಹತ್ತಿಳಿದ ನಮಗೆ ಕೈ ಕಾಲುಗಳ ನೆಟ್ಟು ಬೊಲ್ಟುಗಳೆಲ್ಲಾ ಸದ್ದು ಮಾಡುತ್ತಿರುವಾಗ ಮತ್ತೊಂದು ಜಲಧಾರೆಗೆ ಇಳಿಯಬೇಕೆಂಬುದು ನನಗೆ ಅರಗಿಸಿಕೊಳ್ಳಲಾರದ ಬಿಸಿ ತುಪ್ಪ. ಪೂರ್ವಾಪರಗಳ ಸುಳಿವು ಕೊಡದೆ ಸೂರ್ಯ ಬೆಟ್ಟಗಳ ಜೊತೆಗೆ ನಮ್ಮನ್ನೂ ಸುಡಲು ಹತ್ತಿದ. ಗೆಳೆಯರು ಹೇಳುವ ʼಇಲ್ಲೇ ಇದೆ, ಬಂತು, ಇನ್ನೊಂದು ಹತ್ತು ನಿಮಿಷʼ ಎಂಬ ಆಮಿಷದ ಪದಗಳಿಗೆ ಕಿವಿ ಬೇಸತ್ತಿತ್ತು.

ಅಂತೂ ಇಂತು ಬಂತು! -    


ವೀಕ್ಷಣಾ ಸೇತುವೆ!

ಸುಮಾರು ನಾಲ್ಕು ಕಿಲೋ ಮೀಟರ್‌ ನಡೆದು ಜಲಧಾರೆಯ ನೀರು ಮುಖಕ್ಕೆ ಚಿಮುಕಿಸಿಕೊಂಡಾಗ ಅಮೃತಾನುಭವ. ಶಿಲ್ಲಾಂಗಿನ ಸಿನ್ಟುಂಗ್‌, (ಮೂಗು ಬಾಯಿ, ತುಟಿ, ಗಂಟಲು ಎಲ್ಲಾ ಸೇರಿಸಿ ಹೇಳಿದರೂ ದೇವರಾಣೆ ನೀವು ಸರಿ ಉಚ್ಚಾರ ಹೇಳಲಾರಿರಿ.) ಹಳ್ಳಿಯ ಪೂರ್ವ ಖಾಸಿ ಬೆಟ್ಟಗಳ ಮಡಿಲಲಿ ಅಡಗಿ ಬಹುದೂರವಿದ್ದರೂ ಪ್ರವಾಸೋಧ್ಯಮ ಇಲಾಖೆಯ ಕೆಲಸ ನೀವು ಮೆಚ್ಚಲೇಬೇಕು. ಜಲಪಾತಕ್ಕೆ ಇಳಿಯುವಲ್ಲಿ ನೀರಿನ ವ್ಯವಸ್ಥೆ, ಸುಂದರ ಮೆಟ್ಟಿಲು, ವೀಕ್ಷಣಾ ಗೋಪುರ, ಜಲಪಾತದೆದುರಿಗೇ ನಿಲ್ಲಲು ಮತ್ತೊಂದು ಬಾಗು ಸೇತುವೆ. ಹೀಗೆ ಹತ್ತಾರು ಕಡೆ ವೀಕ್ಷಿಸಿ ಇಲ್ಲಿನ ಜಲಧಾರೆಯನ್ನು ಮನ ತುಂಬಿಸಿಕೊಳ್ಳಲು ಅಪೂರ್ವ ಅವಕಾಶ ನೀಡಿದುದೇ ಅಚ್ಚರಿ.

ಗುಡ್ಡದಿಂದ ಸುರಿವ ಎಳನೀರು!

          ಮಳೆಯ ದಿನಗಳಲ್ಲಿ ಕುಡಿದ ಹನಿ ಹನಿ ನೀರನ್ನು ತನ್ನ ಹರಿವಿನುದ್ದಕ್ಕೂ ಹರಿವಂತೆ ಮಾಡುವ ಮೋಡಿ ಒಂದು ಸೋಜಿಗಲ್ಲು! ಇಲ್ಲಿನ ತಣ್ಣನೆಯ ನೀರೊಳಗಿನ ಪ್ರತೀ ಕಲ್ಲೂ ಸುಸ್ಪಷ್ಟ. ನನ್ನರಿವಿಗೆ ಬಂದ ಐದೂ ಪಾತಗಳೂ ಅತ್ಯದ್ಭುತ.

ಜಲಪಾತದ ಕೊನೆ ಹಂತ.



ಮೊದಲ ನಾಲ್ಕು ಹಂತ ನಿಧ ನಿಧಾನವಾಗಿ ಬಳುಕುತ್ತಾ ಸಹಸ್ರಧಾರೆಯಾಗಿ ಸುರಿದರೆ, ಎರಡನೆಯದರದು ಅಕ್ಷರಶಃ ಬೋರ್ಗರೆತದ ಪಾತ. ವರ್ಣಿಸಲು ಪದಗಳ ತೊಳಲಾಟ. ಕೆರೆಯಂತಾದ ನೀರು ಅಚ್ಚ ಹಸಿರು ವರ್ಣ. ಮರೆಯಲಸಾಧ್ಯ. ಮೊದಲ ಹಂತದಲಿ ಧುಮುಕಿ ದೊಡ್ಡ ಅಪ್ಸರ ಕೊಂಡದಂತಹ ಕೆರೆಯ ನಿರ್ಮಿಸಿ ಎರಡನೆಯ ಬೋರ್ಗೆರತಕ್ಕೆ ಸಿದ್ಧವಾಗುತ್ತಾಳೆ. ಐದನೆಯ ಹಂತವನು ಮೇಲಿನಿಂದ ವೀಕ್ಷಿಸಲು ನಿರ್ಮಿಸಿದ ಸುತ್ತಲಿನ ಕಾಡು ಜಲಪಾತದ ಜೋಗುಳಕ್ಕೊಂದು ಮೆರಗು.

ಹೊಸತೊಂದು ಅಲೌಕಿಕ ಜಗತ್ತು:-

ಇಲ್ಲಿಗೆ ನೀವು ಬಂದರೆ ಹೊಸದೊಂದು ಜಗತ್ತಿಗೆ ಕಾಲಿಟ್ಟ ಅನುಭವವಾಗುವುದು. ಅಲೌಕಿಕ ಜಗತ್ತಿನ ಮಾಯಾ ಕನ್ನಡಿಯಂತೆ ತನ್ನ ಸುತ್ತಲಿನ ಮರಗಿಡ ಬಳ್ಳಿಗಳನ್ನು ಪ್ರತಿಫಲಿಸುತ್ತಲೇ ತನಗೆ ತಾನೆ ಅಪರಿಚಿತವಾಗಿ ಉಳಿದಿವೆಯೇನೊ ಎನಿಸುತ್ತಿತ್ತು. ಬಿಂಬಕ್ಕೂ ನೈಜಕ್ಕೂ ಪೈಪೋಟಿ ಏರ್ಪಟ್ಟು ಯಾವುದು ನಿಜ ಯಾವುದು ಸುಳ್ಳು ಎಂಬುದು ತಿಳಿಯದೇ ಮನಸ್ಸು ಮೂಕವಿಸ್ಮಿತವಾಗುತ್ತಿತ್ತು. ತನ್ನ ಸುತ್ತಲಿನದ್ದನ್ನು ಪ್ರತಿಫಲಿಸುತ್ತಾ ಸುಮ್ಮನೆ ಸಾಗಬೇಕು.”  ಎನ್ನುತ್ತಾ ದೊಡ್ಡ ನದಿಯೊಂದರ ನಿರೀಕ್ಷೆಯಲಿ ಭೋರ್ಗೆರೆಯುತ್ತಾ ಸಾಗುತ್ತಾ ತನ್ನತನವನ್ನು ಕಳೆದುಕೊಳ್ಳುವ ಸಂಕಟದಲ್ಲೇ ಮಂದಗಮನೆಯಾಗಿ ತನ್ನ ಜಗತ್ತನ್ನು ತೊರೆದು ಬರುವ ಪ್ರೇಯಸಿಯಂತೆ ಎಂಬ ಭಾವ ಮೂಡುತ್ತಲೇ ನೋಡುವ ನೋಟ ಬದಲಾಗಿತ್ತು.

ದಾರಿ ತೋರುವವರ ನಡುವೆ ಗೆಳೆಯ ಪಾಂಡೆ ಮತ್ತು ನಾಗರಾಜ್.


ಇಪ್ಪತ್ತು ವರ್ಷದಿಂದ ಮೇಘಾಲಯದಲ್ಲೇ ನೆಲೆನಿಂತ ನಮ್ಮ ಗೆಳೆಯ ಪಾಂಡೆ ಮೊದ ಮೊದಲು ಮೇಘಾಲಯದ ಎಲ್ಲಾ ಜಲಧಾರೆಗಳ ನೀರು ಸ್ಪಟಿಕ ಶುಭ್ರವಾಗಿತ್ತು ಎಂದು ಹೇಳಿ ನಮ್ಮಗೊಂದು ಅಚ್ಚರಿಯ ಜೊತೆಗೆ ವಿಷಾದವನು ಉಣಬಡಿಸಿದ. ನಾಗರೀಕತೆಯ ಅನಾಗರಿಕ ವರ್ತನೆ ಬಗ್ಗೆ ಜಿಗುಪ್ಸೆ ಹುಟ್ಟಿತು.

ಕಟ್ಟಿಸಿಕೊಂಡ ಪರೋಟ, ಹಣ್ಣುಗಳಿಗೆ ಹೊಟ್ಟೆಗೆ ಗೇಟ್‌ ಪಾಸ್‌ ನೀಡಲಾಯಿತು! ಜಲಧಾರೆಯಲ್ಲಿ ಮುಖ ತೋಯಿಸಿಕೊಂಡು ಹೊರಟಾಗ ಸೂರ್ಯ ಕತ್ತಲ ಪರದೆ ಎಳೆಯುತ್ತಿದ್ದ. ಮತ್ತೊಮ್ಮೆ ನಿನ್ನ ಸೌಂದರ್ಯ ಮೆಲ್ಲುವ ಅವಕಾಶಕ್ಕಾಗಿ ಕಾದಿರುತ್ತಾ ಜಲಧಾರೆಗೆ ಬೈ ಬೈ ಹೇಳಿದೆವು.

ಕೊನೆ ಹನಿ:-

          ನದಿ ಹರಿಯುತ್ತಲೇ ಇರಬೇಕು. ಕ್ಷಣ ಕ್ಷಣವೂ ತನ್ನ ತನವನ್ನು ಕಳೆದುಕೊಳ್ಳುತ್ತಲೇ, ಇಲ್ಲವಾದರೆ ಅದು ನದಿಯಾಗಲಾರದು! ಹಾಗೆ ನದಿಯನ್ನು ಅದರ ನೈಜ ಸೌಂದರ್ಯಕ್ಕೆ ಕುಂದಾಗದಂತೆ ಹರಿಯಲು ಬಿಡಿ.

ವಾರೆ ನೋಟ

ಲೋಚನ ದ ತುಂಬಾ ಚಂದ್ರ ತಾಲದ ಬಿಂಬ

( Chandra tal lake .... Himachal pradesh) ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿ...