Sunday, July 26, 2020

ಕದ








ಅಂದು ನಾನು ಊರಿಗೆ ಹೋಗದೆ ಇದ್ದಿದ್ದರೆ ಈ ಕತೆ ನಡೆಯುತ್ತಲೇ ಇರಲಿಲ್ಲ. ನಿಮ್ಮ ಮುಂದೆ ಹೇಳುವ ಪ್ರಸಂಗ ಬರುತ್ತಲೇ ಇರಲಿಲ್ಲ.
***

ಬಿಸಿಲ ಕೋಲುಗಳು ಬಚ್ಚಲು ಧೂಮದೊಂದಿಗೆ ಬೆರೆತು ವಿಚಿತ್ರ ಪರಿಮಳದಿಂದ ಕೂಡಿ ಆಹ್ಲಾದಕರವಾಗಿತ್ತು. ಯಾವ ಕಟ್ಟಿಗೆ ಹಾಕಿದ್ದರೆಂದು ಮನಸ್ಸಲ್ಲೇ ಲೆಕ್ಕ ಹಾಕ ತೊಡಗಿದೆ.  ಬಿರುಗಾಳಿಗೆ ಬಿದ್ದ ಅಡಿಕೆ ಮರಗಳು ಚಳಿ ಓಡಿಸಲು ಬಿಸಿಲ ಕೋಲಿಗೆ ಮೈ ಒಡ್ಡಿ ಮಲಗಿದ್ದವು. ಬಿಸಿ ಕಾಫಿಯ ಘಮಲುವಿನೊಂದಿಗೆ ಬೆರೆತ ರುಚಿ ರುಚಿ ಪತ್ರೊಡೆಯ ಪಸರಿಸಿದ ಪರಿಮಳ ನಾಸಿಕಾಗ್ರದ ಮೂಲಕ ರವಾನೆಗೊಂಡು ಜಠರಾಗ್ನಿಯನು ಸಚೇತನಗೊಳಿಸಿತ್ತು. ಮನೆಯ ಚೌಕಿಯ ಮುಖ್ಯ ದ್ವಾರಕ್ಕೆ ತಲೆಯಬಾಗಿ ಅಡುಗೆ ಮನೆಗೆ ಹೋಗಿ ಕಾಫೀ ಹೀರಿ ಪತ್ರೊಡೆ ಮೆಲ್ಲುತ್ತಾ ಅಮ್ಮನೊಂದಿಗೆ ಹರಟುತ್ತಾ ಕುಳಿತೆ. 
ಊರ, ಹೊರ ಊರ ಸಮಾಚಾರವನ್ನು ಕೇಳುತ್ತಾ ಸುಬ್ಬಮ್ಮಜ್ಜಿಯ ವಿಚಾರ ಬಂತು. "ಊಟಾದ್ಮೇಲೆ ಸುಬ್ಬಮ್ಮಜ್ಜಿ ಮನಿಗ್ ಹೋಗ್ ಬಾರೋ ಮಗಾ" ಅಮ್ಮ ಎಂದೊಡನೆ ಅವರ ನೆನಪುಗಳ ಸುರುಳಿ ಒಂದೊಂದಾಗಿ ಬಿಚ್ಚ ತೊಡಗಿತು.
ತಂದೆ ಇಲ್ಲದ ನಮ್ಮನ್ನು ತಂದೆಯಂತೆ ಸಲಹಿದವರು ಅವರೇ. ಊರಿಗೇ ಊರುಗೋಲಾಗಿ ನಿಂತವರು. ಚಿಕ್ಕ ವಯಸ್ಸಿಗೆ ನನ್ನ ತಂದೆ ತೀರಿಕೊಂಡಾಗ ಅವರ ಅಪರಕರ್ಮವನ್ನು ಮುಂದೆ ನಿಂತು ಮಾಡಿಸಿದವರು. ನನಗೊಮ್ಮೆ ವಿಪರೀತ ಜ್ವರ ಬಂದಾಗ 10 ಮೈಲಿ ಆಚೆಗಿನ ಕುಮಟಾ ಆಸ್ಪತ್ರೆಗೆ ತನ್ನ ಸೈಕಲ್ಲಿನಲ್ಲಿ ಕರೆದೊಯ್ಯಿದ ನೆನಪಿನ್ನು ಕಳಚದೇ ಸ್ಮೃತಿ ಕೋಶದಲಿ ಕುಳಿತಿದೆ. 
ಡಿಗ್ರಿ ಆಗಿ ಬಿ. ಎಡ್ ಸೇರುವಾಗ ಬಿಡಿಗಾಸೂ ಅಮ್ಮನ ಬಳಿ ಇರಲಿಲ್ಲ. ಆ ವರ್ಷ ಅಡಿಕೆಗೆ ವಿಪರೀತ ಕೊಳೆ. ತನ್ನ ತೋಟದ ಅಡಿಕೆ ಮಾರಿ ನನ್ನ ವಿದ್ಯಾಭ್ಯಾಸಕ್ಕೆ ಹಣ ಕೂಡಿಸಿಕೊಟ್ಟಿತ್ತು. ಎಂತಹ ಕರುಣಾ ಹೃದಯಿ. ಗಣೇಶನ ಹಬ್ಬಕ್ಕೆ, ದೀಪಾವಳಿಗೆ ಮಾಡುವ ವಿಶಿಷ್ಟ್ಯ ಕಡುಬು ಎರಡು ನನಗೆ ಎತ್ತಿಡದೇ ಇರುತ್ತಿರಲಿಲ್ಲ. ಪ್ರತಿ ಬಾರಿ ಊರಿಗೆ ಬಂದಾಗಲೂ ಸುಬ್ಬಮ್ಮಜ್ಜಿಯನ್ನು ಮಾತನಾಡಿಸದೇ ಹೋದದ್ದೇ ಇಲ್ಲ. ನಾನು ಹೋದರೆ ತಾಯಿಯಂತೆ ಪ್ರೀತಿಯ ಮಳೆ ಕರೆಯುತ್ತಿದ್ದಳು.
ತನ್ನ ನಾಲ್ಕು ಮಕ್ಕಳನ್ನು ಚೆನ್ನಾಗಿ ಓದಿಸಿ ಒಳ್ಳೇ ನೌಕರಿ ಸಿಗು ಹಂಗೆ ಮಾಡಿತ್ತು. ಇಲ್ಲಿಯವರೆಗೆ ಎಲ್ಲವೂ ಸುಸೂತ್ರವಾಗಿದ್ದ ಸುಬ್ಬಮ್ಮಜ್ಜಿಯ ಬದುಕು ಈಗ ವಿಚಿತ್ರ ಸಂಕಟಕ್ಕಿಟ್ಟುಕೊಂಡಿತ್ತು. ಗಾಳಿಗೆ ಸಿಕ್ಕ ಗಾಳಿಪಟದಂತೆ ತಾನೊಬ್ಬಳೇ ಇರಬೇಕಾಗಿ ಬಂತು. ಕಲಿತು ಬಿಡಾರ ಬಿಟ್ಟ ಮಕ್ಕಳೆಲ್ಲಾ ಈ ಕೊಂಪೆಗೆ ಬರಲು ನಿರಾಕರಿಸಿದರು. ಹಾಗಾಗಿ ಅಷ್ಟೊ ಇಷ್ಟೋ ಒಬ್ಬೊಬ್ಬರ ಮನೆಯಲ್ಲಿದ್ದು ಸಾಕಾಗಿ ತಾನೆಲ್ಲೂ ಬರೋಲ್ಲ ಎಂದು ಪುನಃ ಊರ ಸೇರಿದವಳು ಮತ್ತೆ ಯಾರ ಮನೆಗೂ ಕಾಲಿಡಲಿಲ್ಲ. ವಯಸ್ಸು ಏರಿದಂತೆ ಉಬ್ಬಸದೊಂದಿಗೆ ಕೆಲಸ ಮಾಡುವುದು ಕಷ್ಟವಾಗ ತೊಡಗಿತು.
ಸುಬ್ಬಮ್ಮಜ್ಜಿಯ ನೇರ ನಿಷ್ಠುರ ಮಾತಿನಿಂದಾಗಿ ಅಜ್ಜಿಗೆ ಉಪಚಾರ ಹೇಳುವವರು ಊರಲ್ಲಿ ಯಾರೂ ಇರಲಿಲ್ಲ. ಆಯಿಯೂ ಈಗೇಕೋ ಬಹಳವೇ ಅಜ್ಜಿ ಮನೆಗೆ ಹೋಗಿ ಬಾ ಎಂದು ಒಂದೇ ಸಮನೆ ಒತ್ತಾಸೆ ಪಡಿಸುವುದನು ನೋಡಿದರೆ ಏನೋ ಒಂಥರಾ ಕಸಿವಿಸಿ.
ಊಟಕ್ಕೆಬ್ಬಿಸಿದಾಗ ಮನೆ ತುಂಬಾ ದೀವಲಸಿನ ಬೋಂಡದ ಘಮ. ನೆತ್ತಿ ಸುಡೋ ಸೂರ್ಯನೂ ನಡುಮನೆಯ ಹೊಕ್ಕು ತಣ್ಣಗಾಗಿದ್ದ.  ನಿನ್ನೆ ಬಸ್ ಹತ್ತುವಾಗಲಿನಿಂದ ಖಾಲಿ ಇದ್ದ ಹೊಟ್ಟೆ ಇಂದು ಆಯಿ ಅಡುಗೆಗೆ ಬಕಾಸುರನಂತೆ ಬಾಯಿ ಕಳೆದಿತ್ತು. ಸ್ವಯಂ ಪಾಕದಿಂದ ನಲುಗಿದವನಿಗೆ ಓಯಸಿಸ್ ಸಿಕ್ಕಂತಾಯಿತು. ಚಕ್ಕಳ ಮಕ್ಕಳವಿಕ್ಕಿ ದೇಸಿ ಅಡುಗೆಯನುಂಡೆ. ಅದು ಇದು ದೇಶಾವರಿ ಮಾತು ಎರಡು ತುತ್ತು ಹೆಚ್ಚೇ ಸೇರುವಂತೆ ಮಾಡಿತ್ತು. ಉಂಡ ಹೊಟ್ಟೆ ವಿರಾಮ ಬಯಸಿತ್ತು. ಕಣ್ಣು ಮುಚ್ಚಿದೆ. ಎದ್ದವನಿಗೆ ಆಯಿಯ ಕಾಫಿ ಕಾದು ಕುಳಿತಿತ್ತು. ಕಾಫಿ ಕುಡಿಯುತ್ತಾ ಆಯಿ ಮತ್ತೊಮ್ಮೆ ಸುಬ್ಬಮ್ಮಜ್ಜಿಯ ನೆನಪಿಸಿದಳು. ಸರಿ ಎಂದು ಹೊರಟೆ.
ತೆರೆ ತೆರೆಯಾಗಿ ಹರಿವ ತೊರೆಯೊಂದ ದಾಟಿ ಇಳಿ ಸಂಜೆ ಹೊತ್ತಿಗೆ ಸುಬ್ಬಮ್ಮಜ್ಜಿಯ ಮನೆ ಎದುರಿಗಿದ್ದೆ. ಎಲೆಯಡಿಕೆ ಕುಟ್ಟುತ್ತಿದ್ದ ಅಜ್ಜಿಗೆ ಒಮ್ಮೆದೊಮ್ಮೆಲೆ ಜೀವರಸವೆಲ್ಲಾ ಮುಖಕ್ಕೆ ಹರಿದು ಮುಖ ಕೆಂಪಾಯಿತು. " ಬಾರಾ ತಮಾ, ಎಷ್ಟು ದಿನಾಗೋತು ನಿನ್ ನೋಡ್ದೆ?" ಎಂದಿತು ಖುಷಿಯಿಂದ. ಹೇಗಿದ್ದಿ ಮರಾಯ ಎಂದು ನನ್ನ ಅಪ್ಪಿಕೊಂಡಿತು. ನನ್ನ ಜಗುಲಿಗೆ ಒಯ್ದು ಕೂರಿಸಿ, ನಟಿಗೆ ತೆಗೆಯಿತು. 
"ಅಜ್ಜಿ ಆನು ಗುತರ್ು ಸಿಗಲ್ಯನೆ ಯನ್ನಾ?" ಎಂದೆ. 
"ಸುಮ್ಮಂಗಿರೋ ತಮಾ, ಯಂಗಿನ್ನು ಕಣ್ ಸಮಾ ಕಾಣ್ತು ಅಕಾ..ಚಸ್ಮಾ ಇಲ್ದೇ ಪೇಪನರ್ೂ ಓದ್ತೆ ಗೊತಿದ್ದಾ"
 "ನೀ ಗನಾಗ್ ಊಟಾನೂ ಮಾಡ್ದೇ ಸೋತ್ಹೋಯ್ದೆ ಮರಾಯಾ?" 
"ಬಾ ಉಣ್ಣಕ್ಕೂ" ಎಂದು ಅಡುಗೆ ಮನೆಗೆ ಹೋಗುವ ತಯಾರಿಯಲಿದ್ದಳು. 
"ಈಗಷ್ಟೇ ಯಂದ್ ಉಟಾತೇ. ನಿಂದಾತನೆ ಅಜ್ಜೀ." ಎಂದೆ. 
"ಯಾಕಾ ತಮಾ ಸುಳ್ಹೇಳ್ತೆ."
"ಸುಮ್ಮಂಗಿರೋ ತಮಾ ಮುಖ ಎಷ್ಟ್ ಬಾಡೋಜು ನೋಡು. ಉಣ್ಣಲ್ ಬಾ." ಎನ್ನುತ್ತಾ ಏಳಲು ಹೊರಟಿತು ಅಜ್ಜಿ.
ಸುಬ್ಬಮ್ಮಜ್ಜಿಯನ್ನು ಸುಧಾರಿಸಿ ಕೂರಿಸಲು ಸ್ವಲ್ಪ ಹೆಚ್ಚೇ ಹೊತ್ತು ಬೇಕಾಯಿತು. ಹೊಯ್ಯುವ ಮಳೆಯಂತೆ ಒಂದೇ ಸಮನೇ ತನ್ನ ಹಳೇ ಕಡತ ಬಿಡಿಸಿಕೊಂಡು ಕುಳಿತಿತು ಅಜ್ಜಿ. ಪಾಪ ತಾನು ಮಾಡಿದ ಸಂಗತಿ ಹೇಳಲು ಯಾರು ಇಲ್ಲದೇ ಪರಿತಪಿಸುತಲಿತ್ತು. ಒಂಟಿತನದ ಸಂಕಷ್ಟಗಳು ನನಗಾಗ ಅರಿವಿಗೆ ಬರತೊಡಗಿತು.
ತನ್ನ ಮಗನಾದ ಸೀತಾರಾಮನನ್ನು ಬೆಳೆಸಲು ಪಟ್ಟ ಕಷ್ಟಗಳನ್ನು ಒಂದೊಂದಾಗಿ ಹೇಳತೊಡಗಿತು. ಆತ ಎಂಟು ತಿಂಗಳಿಗೆ ಹುಟ್ಟಿದವ, ಶಾಲೆಗೇ ಹೋಗುತ್ತಿರಲಿಲ್ಲ ಕೊನೆಗೂ ಆತನನ್ನು ಓದಿಗೆ ಹಚ್ಚಿಸಿ ಇಂಜಿನಿಯರಾಗಿ ರೂಪಿಸಲು ಪಟ್ಟ ಕಷ್ಟಗಳನು ಹೇಳತೊಡಗಿತು. ಅಮೇರಿಕಾದಲ್ಲಿ ಎಂ. ಎಸ್. ಮಾಡಲು ಆತನಿಗಾಗಿ ತಾನು ಪಟ್ಟ ಪಾಡಿನ ಗಂಟನ್ನು ಬಿಚ್ಚಿತು. 
ನಿಜ ತಾಯಿಯಾದವಳ ಕಷ್ಟಗಳಿಗೆ ಮಕ್ಕಳು ಆಗಬೇಕಲ್ಲವೆ? ಯಾರಲ್ಲಿ ಹೇಳುವುದು. ಸೀತಾರಾಮ ಮತ್ತು ಅವನ ಹೆಂಡತಿಗೆ ಅಮೇರಿಕದ ಮತ್ತು ಡಾಲರ್ ಭೂತ ಅಮರಿಕೊಂಡವರಿಗೆ ತಾಯಿ ಕಾಣುವಳೇ?  ಅವನಿಗಾಗುವಷ್ಟು ತೋಟ ಜೊತೆಗೆ ಒಂದಿಷ್ಟು ಗದ್ದೆಯೂ ಅವನ ಪಾಲಿಗಿತ್ತು. ಗಟ್ಟಿ ಮುಟ್ಟಾದ ಅಪ್ಪ ಕಟ್ಟಿಸಿದ 6 ಅಂಕಣದ ತೊಟ್ಟಿ ಮನೆಯಿತ್ತು. ನಿರುಮ್ಮಳವಾಗಿ ತೋಟ ನೋಡಿಕೊಂಡಿದ್ದರೆ ಸಾಕಾಗಿತ್ತು. ಮೇಲು ಖಚರ್ಿಗೆ ಕಾಳು ಮೆಣಸಿನ ಸಂಪಾದನೆ ಸಾಕಾಕ್ತು. ಶಿಕ್ಷಣವೇ ಶಾಪವೇನೋ ಅಂತ ಮನಸಿಗೆ ಬಂತು. ವಿವೇಕವನು ನೀಡದ ಶಿಕ್ಷಣ ಇದ್ದರೆಷ್ಟು ಬಿಟ್ಟರೆಷ್ಟು? 
ಹೀಗೆ ನನ್ನ ಆಲೋಚನೆಯಲಿ ಜೀಕುತ್ತಾ ಇರಲು ಅಜ್ಜಿ "ಅಲ್ದಾ ತಮಾ, ಕಳ್ದ್ ವರ್ಷ  ಶ್ರಾದ್ಧಕ್ಕೆ  ನೀ ಎಂತಕಾ ಬಲರ್ೆ?" ಎಂದು ಗದರಿತು. 
" ಯಂಗೆ ಎಸ್ಟ್ ಬೇಜಾರಾತು ಗೊತಿದಾ ಮಗಾ?" ಎಂದಿತು.
ನನಗೂ ಅಜ್ಜನ ಶ್ರಾಧ್ಧಕ್ಕೆ ಬಂದ ನೆನಪಾಗದೇ ಸುಮ್ಮನಾದೆ.
ಮುಸ್ಸಂಜೆ ದಾಟಿ ಇರುಳು ಇಣುಕಿದ್ದು ಗೊತ್ತಾಗಲೇ ಇಲ್ಲ.
ನನ್ನ ಕೈ ಹಿಡಿದು ನಡುಮನೆಗೆ ಕರೆದೊಯಿದಿತು. ಕವಚಿಕೊಂಡ ಕತ್ತಲ ಸಾಮ್ರಾಜ್ಯವು ಅಜ್ಜಿಯ ಬದುಕಿನ ರೂಪಕದಂತಿತ್ತು. ಬೆಳಕು ಯಾವಾಗಲೋ ಬೇಲಿ ಕಿತ್ತಿತ್ತು. ಮನೆಯೊಳಗೆ ಹಳ್ಳಿ ಅಡುಗೆ ಸುವಾಸನೆ. ಕರೆಂಟು ಯಾವಾಗಲೋ ಹೋಗಿತ್ತು. ಸೀಮೆಎಣ್ಣೆ ಬುಡ್ಡಿಯೊಂದನ್ನು ಹಚ್ಚಿಕೊಂಡು ಬಂದ ಅಜ್ಜಿ ಕೈಯಲ್ಲಿ ಎಳೆ ಬಾಳೆ ಎಲೆ ಇತ್ತು.
ಒಲೆ ಎದುರಿಂದ ಬಿಸಿ ಬಿಸಿ ದೇಸಿ ಅನ್ನಕ್ಕೆ ಘಮ್ ಎನ್ನುವ  ತಿಳಿ ಸಾರು, ಮಿಳ್ಳೆ ತುಪ್ಪ, ನಂಜಿಕೊಳ್ಳಲು ಬಾಳೆ ಕುಂಡಿಗೆಯ ಪಲ್ಯ ಬಡಿಸಿ ಉಣ್ಣು ಎಂದಿತು. ಮರು ಮಾತನಾಡದೇ ಉಣ್ಣುತ್ತಾ ಅಜ್ಜಿಯ ಮುಖ ನೋಡಿದೆ. ಎಂತಹ ಸಂತೃಪ್ತಿ! ಬುಡ್ಡಿ ಬೆಳಕಿನಲಿ ಬೆಳಗುತ್ತಿತ್ತು ಮುಖ. 
ಊಟದ ಸಮಯದಲ್ಲೂ ಸೀತಾರಾಮನ ಪುರಾಣವನ್ನೇ ಹೇಳತೊಡಗಿತು. ಇಲ್ಲಿಯವರೆಗೂ ನಾನು ಮನೆಗೆ ಹೋಗುವ ಆಲೋಚನೆಯಲ್ಲಿದ್ದೆ. ಗಾಳಿ ಕೂಡ ಆಡದೇ ಉಸಿರುಗಟ್ಟಿದ ಭಾವ. ಕತ್ತಲೆಯೊಳಗೂ ಸೀತರಾಮನ ನೆನಪಿನ ಛಾಯೆ. ಸೀತಾರಾಮನ ನೆನಪು ಅಜ್ಜಿಯ ಉಸಿರೊಳಗೆ ಬೆರೆತು ಹೋದಂತೆನಿಸಿ ಅಜ್ಜಿಗೆ ಬೇಸರ ಮಾಡುವುದು ಬೇಡವೆಂದು ಮನೆಗೆ ಹೋಗುವ ಆಲೋಚನೆಯನ್ನೇ ಕೈಬಿಟ್ಟೆ. ಒಂಟಿ ಜೀವ 6 ಅಂಕಣದ ಮನೆಯಲ್ಲಿ ಮಕ್ಕಳ ನೆನಪುಗಳೊಂದಿಗೆ ಜೀಕುತ್ತಾ ಜೀವನ ಕಳೆಯುದನು ಎಣಿಸಿದರೆ ಕಣ್ಣೀರೇ ಬರುತಲಿತ್ತು. 
"ಒಳ್ಕ್ವಾಣಿ ಹಾಸ್ಗೆ ಹಾಸಿದ್ದಿ ನೋಡು ಕತ್ಲಾಗೋತು. ಮನ್ಕ್ಯಾ ತಮಾ." ಎಂದು ಒಳಕೋಣೆಯಿಂದಲೇ ಬರುತ್ತಾ ಹೇಳಿತು ಅಜ್ಜಿ. ಆಗಲೇ ಗೊತ್ತಾದದ್ದು ಅಜ್ಜಿ ನನ್ನನ್ನೇ ಸೀತಾರಾಮ ಎಂದು ತಿಳಿದು ಬಿಟ್ಟಿತ್ತು. ಅಜ್ಜಿಗೆ ತಿಳಿ ಹೇಳುವುದು ಹೇಗೆ ಎಂದು ಚಿಂತಿಸುತ್ತಾ ಮಜ್ಜಿಗೆ ಅನ್ನ ಉಣ್ಣುತಲಿದ್ದೆ. ಒಳ ಕೋಣೆಯಿಂದ ಸಣ್ಣ ಹಿತ್ತಾಳೆ ಪಟ್ಟಿಗೆಯೊಂದನ್ನು ಹಿಡಿದು ಬಂದು "ನೋಡು ಮಗಾ ಇದು ನಿನ್ ಅಪ್ಪಯ್ಯನ್ ಅಸ್ಥಿ. ಇದ್ನಾ ತೆಕಂಡ್ಹೋಗಿ ಗೋಕರ್ಣದಲ್ ವಿಸಜರ್ಿಸಕ್ಕೂ. ನೀ ಬಪ್ಪದನ್ನೆ ಕಾಯ್ತಾ ಇದ್ದಿದ್ದೆ ಮರಾಯ." ಎಂದು ನನ್ನ ಮುಂದಿಟ್ಟಿತು. ಸುಬ್ಬಮ್ಮಜ್ಜಿಯ ಗಂಡ ಸತ್ತು ಕೆಲವು ವರುಷಗಳಾಗಿತ್ತು. ತನ್ನ ದುಃಖವನ್ನು ಎದೆಯೊಳಗಡಗಿಸಿಕೊಂಡಿತ್ತು. ತಂದೆ ಸತ್ತಾಗ ಬಂದಿದ್ದ ಸೀತಾರಾಮ ಮತ್ತೆ ಬಂದಿರಲಿಲ್ಲ. ಇಂದಜ್ಜಿಯ ದುಃಖದ ಕಟ್ಟೆಯೊಡೆಯಿತು. ಸುತ್ತಲಿನ ಕತ್ತಲಿನಲಿ ಹೊಳೆವ ಹಿತ್ತಾಳೆಯ ಕರಡಿಗೆ ನನ್ನ ಕೈಲಿತ್ತು. ಹಾಗೇ ಎಷ್ಟೋ ಹೊತ್ತು ಕತ್ತಲಿನಲಿ ನಿಂತೇ ಇದ್ದೆ. ಕಣ್ಣ ಬಿಂದುಗಳು ಜಾರಿ ಹೊಳೆವ ಪೆಟ್ಟಿಗೆ ಮೇಲೆ ಉದುರುತ್ತಾ ಇದ್ದಂತೆ ಬುಡ್ಡಿ ದೀಪ ನಿಧಾನಕ್ಕೆ ಮಂಜಾಗುತ್ತಾ ಬಂತು.
ಶ್ರೀಧರ್. ಎಸ್. ಸಿದ್ದಾಪುರ.

Thursday, July 16, 2020

ಹಗಲ ಸಂನ್ಯಾಸಿ...

ಬೆನ್ನಿಗೊಂದು ಚೀಲದಂತಹ ಚಿಕ್ಕ ಕಟ್ಟಿಗೆಯ ತುಂಡೊಂದನ್ನು ಕಟ್ಟಿಕೊಂಡು ಸುಮ್ಮನೆ ಹಗಲು ಹೊತ್ತಿನಲ್ಲಿ ಧ್ಯಾನಸ್ಥ ಸಂನ್ಯಾಸಿಯಂತೆ ಕುಳಿತು ಬಿಡುವನೀತ. ಕಟ್ಟಿಕೊಂಡ ಕಟ್ಟಿಗೆಯ ತುಂಡಿನಲ್ಲೂ ವಿಚಿತ್ರ ವಿನ್ಯಾಸ. ಸಣ್ಣ ರಂಧ್ರ. ಮಾತಿಲ್ಲ, ಕತೆಯೂ ಇಲ್ಲ. ಹಗಲು ಪೂರ್ಣ ಏಕಾದಶಿ. ಲಡ್ಡು ತಂದಿಟ್ಟರೂ ಮುಟ್ಟಲೊಲ್ಲ. ಅಲೌಕಿಕ ಚಿಂತನೆಯಲ್ಲೇ ಮುಳುಗೇಳುತ್ತಾ ಕುಳಿತು ಬಿಡುವವ.
POLTYS SPIDER.


ಯಾಕಿಂತಹ ಮಹಾ ಮೌನ? ನಮಗರ್ಥವಾಗುವುದೇ ಇಲ್ಲ. ಅವನ ಬೆನ್ನಟ್ಟಿ ಹೋದರೆ ಪುಣ್ಯಾತ್ಮ ಮಾತನಾಡುವುದೇ ಇಲ್ಲ!! ಇವನ ಮೌನಕೂ ಒಂದು ಹೊಸ ಅರ್ಥ. ತನ್ನ ದೇಹಕ್ಕಿಂತ ದೊಡ್ಡದಾದ ಕಟ್ಟಿಗೆ ತುಂಡನ್ನು ಕಟ್ಟಿಕೊಂಡದ್ದಕ್ಕೆ ದುಃಖವೇ? ಅದಕ್ಕಿಂತ ಅಪಾಯಕಾರಿಯಾದ ಹೆಂಡತಿಯರನ್ನು ಈ ಗಂಡಸರು ಕಟ್ಟಿಕೊಂಡರೂ ಎಷ್ಟು ಆಸಕ್ತಿಯಿಂದ ಖುಷಿಯಾಗೇ ಇರುತ್ತಾರೆ ಗೊತ್ತಾ? ಎಂದು ಕೇಳಬೇಕೆಂದುಕೊಂಡೆ. ಉಹುಂ ಮಾತೇ ಆಡಲಿಲ್ಲ! 'ಇಲ್ಲೇ ಇರು ಬಂದೆ.' ಎಂದು ಹೊರಟೆ.


ಇಳಿ ಸಂಜೆಗೆ ಕ್ಯಾಮಾರವನ್ನು ಹೆಗಲಿಗೇರಿಸಿಕೊಂಡು ಮಾತನಾಡಿಸೋಣವೆಂದು ಮತ್ತೆ ಹೊರಟೆ. ಅಯ್ಯೋ ಪುಣ್ಯಾತ್ಮ ಎಲ್ಲೂ ಇಲ್ಲ. ಹುಡುಕಿ ಸುಸ್ತಾಗಿ ಹೊರಡೊ ಹೊತ್ತಿಗೆ ಕಾಣಿಸಿದ. ಪಕ್ಕದ ಬಿದಿರ ಗಿಡದಲಿ ಮನೆ ಕಟ್ಟುತ್ತಿದ್ದಾನೆ (ಬಲೆ). ಎಂಟು ಕಾಲಿನ ಬಂಟ ಎಂಟರ ಹೊತ್ತಿಗೆ ಸುಂದರ ಮನೆ ಸಿದ್ದವಾಗಿತ್ತು. ಹಗಲಿಡಿ ಹಸಿವೆಯಿಂದ ನರಳಿದವನಿಗೆ ರಾತ್ರಿ ಪುಷ್ಕಳ ಭೋಜನ. ಒಂದರ ಮೇಲೊಂದು ಕೀಟಗಳು ಬಲೆಗೆ ಬಂದು ಬೀಳತೊಡಗಿದವು. ಎಲ್ಲವನ್ನೂ ಸುತ್ತಿಟ್ಟನೇ ಹೊರತು ತಿನ್ನಲೇ ಇಲ್ಲ. ಒಂಬತ್ತರ ಹೊತ್ತಿಗೆ ಮೆಲ್ಲಗೆ ಮನೆ ಕಡೆ ಹೊರಟೆ. ಈತ ಕ್ಯಾರೇ ಎನ್ನದೇ ಏನೂ ತಿನ್ನದೇ ಹಾಗೇ ಇದ್ದ.
ಪೋಲ್ಟಿಸ್ ಪ್ರಭೇದದಕ್ಕೆ ಸೇರಿದ ಜೇಡವಿದು ಅಂತ ನನ್ನ ಮೊದಲ ನೋಟಕ್ಕೆ ತಿಳಿದು ಬರುತ್ತದೆ. 

 ಶ್ರೀಧರ್ ಎಸ್. ಸಿದ್ದಾಪುರ.
ಕುಂದಾಪುರ ತಾಲೂಕು.

Saturday, July 4, 2020

ಭಯಂಕರ ಹೆಸರಿನ ಊರುಗಳು!


ನಾನು ಇಂಗ್ಲೆಡ್ನಲ್ಲಿ ಓದುವ ಸಮಯದಲ್ಲಿ ಲಿಂಕನ್ ಷೈರ್ ಎಂಬ ಊರಿಗೆ ಹೋಗಿದ್ದೆ. ಅದು ಸುಂದರವಾದ ಊರು.  ನಿಸರ್ಗದ ಸೊಬಗನ್ನೆಲ್ಲಾ ಸೂರೆ ಹೊಡೆದು ಅವತರಿಸಿದಂತಿರುವ ಊರು. ಅಲ್ಲಿಂದ ತುಸು ದೂರದಲ್ಲಿ ಒಂದು ಹಳ್ಳಿ ಇದೆ. ನಾನಲ್ಲಿ ಇಡೀ ದಿನ ಉಳಿದಿದ್ದೆ. ಅಲ್ಲಿಂದ ವಾಪಾಸು ಬಂದ ನಂತರ ಅನೇಕ ಸ್ನೇಹಿತರು 'ಎಲ್ಲಿ ಹೋಗಿದ್ದೆ?' ಎಂದು ಕೇಳಿದರೂ ಹೇಳಲು ಏನೋ ಮುಜುಗರ.



ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಅಕ್ಕಪಕ್ಕದಲ್ಲಿ ಮೂರು ಊರುಗಳಿವೆ.  ಆ ಮೂರು ಊರುಗಳ ಹೆಸರುಗಳನ್ನು ಒಂದೇ ಉಸುರಿಗೆ ಹೇಳಿದರೆ ಅಭಾಸವಾಗುತ್ತದೆ. ಅಂದಹಾಗೆ ಆ ಊರುಗಳ ಹೆಸರು ಬಾರೆ, ಸೀರೆ, ಕಳಚೆ'. ಕೆಲವು ಸಲ ಆ ಊರಿನ ಜನರಿಗೆ ತಮ್ಮ ಊರಿನ ಹೆಸರನ್ನು ಹೇಳಲು ಮುಜುಗರವಾಗಲೂಬಹುದು. 
ಅದೇ ರೀತಿ ಇಂಗ್ಲೆಂಡ್ನ ಲಿಂಕನ್ಷೈರ್ ಸನಿಹದ ಹಳ್ಳಿ ಹೆಸರನ್ನು ಹೇಳಲು ಸಹ ಮುಜುಗರವಾಗುತ್ತದೆ. ಕಾರಣ ಅಲ್ಲಿನ ಅವಳಿ ಊರುಗಳ ಹೆಸರು ಬಿಚ್(BITCH ) ಹಾಗೂ ಬಿಚ್ಪೀಲ್ಡ್ (BITCHFEILD ) ಪ್ರಾನ್ಸ್ನಲ್ಲೂ ಇದೇ ಹೆಸರಿನ ಒಂದು ಊರಿದೆಯೆಂದು ಅಲ್ಲಿಗೆ ಹೋದಾಗ ಗೊತ್ತಾಯಿತು.
ಬೋರಿಂಗ್ ಹೆಸರಿನ ಒಂದು ಊರು ಇರಲು ಸಾಧ್ಯವಾ? ಆ ಊರಿನ ಜನ ಹೇಗಿದ್ದಿರಬಹುದು? ಅವರಿಗೆ ಆ ಹೆಸರಿನ ಬಗ್ಗೆ ಯಾವ ಅಭಿಪ್ರಾಯವಿದ್ದಿರಬಹುದು?
ಕೆಲವು ವರ್ಷಗಳ ಹಿಂದೆ ನಾನು ಸ್ಕಾಟ್ಲ್ಯಾಂಡ್ ರಾಜಧಾನಿ ಎಡಿನಬರ್ಗ್ ಗೆ ಹೋಗಿದ್ದೆ. ಅಲ್ಲಿಂದ ನಾನು ಪೋರ್ಟ್ ಮ್ಯಾನ್ ಫೀಲ್ಡ್ಗೆ ಹೋಗಬೇಕಿತ್ತು. ನನ್ನ ಜತೆಗಿದ್ದ ಸ್ನೇಹಿತ 'ಇಲ್ಲೇ ಸನಿಹದಲ್ಲಿ ಒಂದು ಊರಿದೆ. ಅದರ ಹೆಸರು ಡಲ್ ಅಂತ. ಅದರ ಪಕ್ಕ ಮತ್ತೊಂದು ಊರಿದೆ. ಅದರ ಹೆಸರು 'ಬೋರಿಂಗ್' ಎಂದ. ಕುತೂಹಲ ತಾಳಲಾರದೇ ಆ ಊರಿಗೆ ಹೋಗಿದ್ದೆ. ಬೋರಿಂಗ್ ನಿಜಕ್ಕೂ ಲವಲವಿಕೆಯ ಊರು. ಶೀತ ಜಾಸ್ತಿಯಾಗಿರುವುದರಿಂದ ವರ್ಷದ ಹೆಚ್ಚಿನ ಅವಧಿ ಚಟುವಟಿಕೆ ಕಮ್ಮಿಯಾಗಿರುತ್ತದೆ. ಆ ಕಾರಣದಿಂದ ಆ ಹೆಸರು ಬಂದಿರಬಹುದೆ ಎಂಬುದು ಅಲ್ಲಿನ ಸ್ಥಳೀಯರ ಅಭಿಪ್ರಾಯ. ಆದರೆ ಅವರ್ಯಾರಿಗೂ ತಮ್ಮ ಊರಿನ ಹೆಸರಿನ ಬಗ್ಗೆ ಬೇಸರವಾಗಲಿ ಅತೃಪ್ತಿಯಾಗಲಿ ಇದ್ದಂತಿಲ್ಲ. ಕೆಲವರಿಗಂತೂ ಆ ಹೆಸರಿನಿಂದಾಗಿಯೇ ತಮ್ಮ ಊರು ಜನಪ್ರಿಯವಾಗಿರುವುದರಿಂದ, ಆ ಬಗ್ಗೆ ಅಭಿಮಾನವಿದ್ದಂತಿತ್ತು.
ಅಮೇರಿಕದ ಮೇರಿಲ್ಯಾಂಡ್ನಲ್ಲಿ ಸಹ ಬೋರಿಂಗ್ ಹೆಸರಿನ ಊರಿದೆಯೆಂಬುದು ಸ್ಕಾಟ್ ಲ್ಯಾಂಡ್ನಲ್ಲಿರುವ ಬೋರಿಂಗ್ಗೆ ಹೋದಾಗ ಗೊತ್ತಾಗಿದ್ದು. ಮೇರಿಲ್ಯಾಂಡ್ನಲ್ಲಿರುವ ಬೋರಿಂಗ್ಗೆ ಆ ಊರಿನಲ್ಲಿರುವ ಪೋಸ್ಟಮನ್ ಡೆವಿಡ್ ಬೋರಿಂಗ್ ಕಾರಣ. ಅವನ ಸ್ಮರಣಾರ್ಥ ಆ ಹೆಸರನ್ನು ಆ ಊರಿಗೆ ಇಡಲಾಗಿದೆ. ಅಮೆರಿಕದ ಟೆನಿಸ್ಸಿ ರಾಜ್ಯದಲ್ಲೂ ' ಬೋರಿಂಗ್' ಎಂಬ ಊರಿದೆ ಎಂದು ಕೇಳಿದ್ದೇನೆ. ಕೆಲವು ವರ್ಷಗಳ ಹಿಂದೆ, ಇಟಲಿಯ ಸನಿಹದ ಟುರಿನ್ ಎಂಬ ನಗರಕ್ಕೆ ಹೋಗಿದ್ದೆ. ಅಲ್ಲಿಗೆ ಸುಮಾರು ಐವತ್ತು ಕಿ.ಮೀ ದೂರದಲ್ಲಿ ಪೀಡ್ಮಾಂಟ್ ಎಂಬ ಪ್ರಾಂತವಿದೆ. ಅಲ್ಲೊಂದು ತೀರಾ ಅಪರೂಪದ, ಹೇಳಲು ನಾಚಿಕೆಪಡುವ ಊರಿದೆ.

ಬ್ರಾ!

ಆ ಊರಿನ ಹೆಸರು ನಿಮಗೆ ಗೊತ್ತಿರಬಹುದು, ಫಾಸ್ಟ್ಪುಡ್ ಬದಲಿಗೆ ಸ್ಲೋಪುಡ್ ಹೋರಾಟ ಮಾಡಿದ ಕಾರ್ಲೋ ಪೆಟ್ರಿನಿ ಈ ಊರಿನಿಂದಲೇ ತನ್ನ ಅಭಿಯಾನ ಆರಂಭಿಸಿದ್ದು. ಆಗ ಕೆಲವು ಪತ್ರಿಕೆಗಳು Slow food campaign starts from bra ಎಂಬ ತಲೆಬರೆಹ ಕೊಟ್ಟಿದ್ದವು. 
'ಬ್ರಾ ಊರಿಗೆ ಹೋಗ್ತೀನಿ' ಅಂದ್ರೆ ಯಾರಾದರೂ ತಪ್ಪು ಭಾವಿಸಬಹುದು. 'ನೀವು ಯಾವ ಊರಿನಲ್ಲಿದ್ದೀರಿ?' ಎಂದು ಕೇಳಿದಾಗ 'ನಾನು ಬ್ರಾದಲ್ಲಿದ್ದೇನೆ' ಎಂದರೆ ಏನಾಗಬಹುದು? 
ವಿಜಯಪುರದ ಸನಿಹದಲ್ಲಿರುವ 'ಹುಡುಗಿ' ಊರಿಗೆ ಹೋಗುವಾಗ ಬಸ್ ಕಂಡಕ್ಟರ್ ಬಳಿ ' ಒಂದು ಹುಡುಗಿ ಕೊಡಿ'( ಹುಡುಗಿಗೆ ಹೋಗಲು ಒಂದು ಟಿಕೆಟ್ ಕೊಡಿ ಎನ್ನುವ  ಬದಲು) ಎಂದು ತಮಾಷೆ, ಚೋದ್ಯ ಮಾಡಲು ಹಾಗೆ ಹೇಳುವುದುಂಟು. ಅದೇ ರೀತಿ ಬ್ರಾ ಊರಿಗೆ ಹೋಗುವಾಗಲೂ 'ಒಂದು ಬ್ರಾ ಕೊಡಿ, ಎರಡು ಬ್ರಾ ಕೊಡಿ' ಎಂದು ಕಂಡಕ್ಟರ್ಗೆ ಹೆಳುವ ಪ್ರಸಂಗ ತಮಾಷೆಯಾಗಿದ್ದೀತು. ಹೆಂಡತಿಯೇನಾದರೂ ಟಿಕೆಟ್ ತೆಗೆಯುವ ಪ್ರಸಂಗ ಬಂದರೆ, ' ನನ್ನ ಗಂಡನಿಗೊಂದು ಬ್ರಾ ಕೊಡಿ' ಅಂದರೆ ಕಂಡಕ್ಟರ್ ನಗದೇ ಇರುತ್ತಾನಾ?
ಬ್ರಾ ಊರು ಚೀಸ್ಗೆ ಬಹಳ ಪ್ರಸಿದ್ಧ. ಲಕ್ಷಾಂತರ ಜನ ಸೇರಿ ಪ್ರತಿವರ್ಷ ಇಲ್ಲಿ ಚೀಸ್ ಹಬ್ಬವನ್ನು ಆಚರಿಸುತ್ತಾರೆ. Eat cheese from bra, Bra for cheese, As exotic as bra ಮುಂತಾದ ಹೋರ್ಡಿಂಗ್ ಬರಹಗಳು ಅಲ್ಲಿ ಎಲ್ಲೆಡೆ ರಾರಾಜಿಸುತ್ತವೆ. He was born in bra  ಎಂದು ಹೇಳಿದರೆ ಯಾರಾದರೂ ತಪ್ಪು ಭಾವಿಸದಿರುವುದುಂಟಾ? ಹಾಗೆಯೇ ಈ ಊರನ್ನು ಬಣ್ಣಿಸುತ್ತಾ Bra is beautiful  ಅಂದರೆ?!!
ಬ್ರಾ ಎಂಬ ಊರು ಇದ್ದ ಮೇಲೆ ಬ್ರೆಸ್ಟ್ ಎಂಬ ಊರು ಇರಲೇಬೇಕಲ್ಲ? ಒಂದಿದ್ದರೆ ಮೊತ್ತೊಂದು  ಇರಲೇಬೇಕು ತಾನೆ? ಮೂರು ವರ್ಷಗಳ ಹಿಂದೆ ಫ್ರಾನ್ಸ್ನ ಪ್ಯಾರಿಸ್ ನಗರದಿಂದ ಮೂರು ತಾಸು ಬಸ್ ಪ್ರಯಾಣ ಮಾಡಿ ಮೌಂಟ್ಸೇಂಟ್ ಮಿಷೆಲ್ನಲ್ಲಿರುವ ಒಂದು ಅರಮನೆಗೆ ಹೋಗಿದ್ದೆ. ಈ ಊರಿಗೆ ಸನಿಹದಲ್ಲೇ ಬ್ರೆಸ್ಟ್ ಎಂಬ ಊರಿದೆ. ಸ್ಪೆಲ್ಲಿಂಗ್ ಮಾತ್ರ ಬೇರೆ ಉಚ್ಚಾರ ಒಂದೇ. ಪ್ರಕೃತಿಯ ಸೊಬಗನ್ನೆಲ್ಲ ಹೊದ್ದು ಅವತರಿಸಿದಂತಿರುವ ಈ ಊರನ್ನು ನೋಡಿದವರು ಆನಂದದಿಂದ ಏನೇ ಉದ್ಗಾರ ತೆಗೆದರೂ ಅಪಾರ್ಥಕ್ಕೆ, ಡಬಲ್ ಮೀನಿಂಗ್ಗೆ ಎಡೆಮಾಡಿಕೊಡುವುದರಲ್ಲಿ ಸಂದೇಹವಿಲ್ಲ.
ನನ್ನ ಆತ್ಮೀಯ ಸ್ನೇಹಿತ ಗುರುಪಾದ ಶಾಸ್ತ್ರಿಯವರು ಎಂಟು ವರುಷಗಳಿಂದ ಅಮೆರಿಕದ ಅರ್ಕನ್ಸಾಸ್ ರಾಜ್ಯದ ಸ್ಟೋನ್ ಕೌಂಟಿ ಸನಿಹದಲ್ಲಿರುವ ಒಂದು ಪುಟ್ಟ ಊರಿನಲ್ಲಿದ್ದಾರೆ. ಆ ಊರಿನ ಜನಸಂಖ್ಯೆ ಇನ್ನೂರು. ಕಳೆದ ಹದಿನೈದು ವರುಷಗಳಲ್ಲಿ ಹನ್ನೆರಡು ಜನಸಂಖ್ಯೆ ಜಾಸ್ತಿಯಾಗಿದೆಯಂತೆ.
ಆ ಊರಿನ ಹೆಸರು ಫಿಫ್ಟಿ ಸಿಕ್ಸ್!
ಇಂಥಹದ್ದೊಂದು ಹೆಸರಿನ ಊರು ಇರಬಹುದೆಂಬ ಕಲ್ಪನೆಯೂ ನನಗಿರಲಿಲ್ಲ. ಶಾಸ್ತ್ರಿಯವರು ತಮಾಷೆ ಮಾಡುತ್ತಿದ್ದಿರಬಹುದು ಎಂದೇ ಭಾವಿಸಿದ್ದೆ. ಆದರೆ ಅವರು ತಮ್ಮ ವಿಸಿಟಿಂಗ್ ಕಾರ್ಡ್ ತೋರಿಸಿದಾಗಲೇ ನಂಬಿದ್ದು. ಅವರೇ ಹೇಳಿದ ಇನ್ನೊಂದು ಸಂಗತಿಯೇನೆಂದರೆ, 'ನಂಬರ್ ಹೆಸರಾಗಿರುವುದು ನಾನಿರುವ ಊರಿನಲ್ಲೊಂದೇ ಅಲ್ಲ, ಆಸ್ಟ್ರೇಲಿಯದಲ್ಲಿ 1770 ಎಂಬ ಹೆಸರಿನ ಊರಿದೆ.'
ಗೆಳೆಯ ಎಂ.ಕೆ. ನವೀನ ಮಡಗಾಸ್ಕರ್ ನಲ್ಲಿರುವ ಎಂಪನಿಹಿ ಎಂಬ ಪ್ರಾಂತ್ಯದಲ್ಲಿದ್ದಾರೆ. 'ನೀವು ಯಾವ ಊರಿನಲ್ಲಿದ್ದೀರಿ?' ಎಂದು ಅವರನ್ನು ಕೇಳಿದಾಗ 'ಗೋಗೋಗೋಗೋ' ಎಂದು ಹೇಳಿದ್ದರು. ಅವರ ಮಾತನ್ನು ಕೇಳಿ ನನಗೆ ತೀರಾ ಕಸಿವಿಸಿಯಾಗಿತ್ತು. 'ಏನು ಈ ಮುಷ್ಯ ಹೋಗು ಹೋಗು ಹೋಗು ಹೋಗು ಎಂದು ಹೇಳುತ್ತಿದ್ದಾನಲ್ಲ?' ಎಂದು ಅಂದು ಕೊಂಡಿದ್ದೆ. ಕೊನೆಗೆ ಆ ಊರಿನ ಹೆಸರನ್ನು ವಿವರಿಸಿದಾಗ ಬಿದ್ದು ಬಿದ್ದು ನಕ್ಕಿದ್ದೆ.
ಅಮೆರಿಕಾದ ಕೊಲೊರಡೋದಲ್ಲಿ ಒಂದು ನಗರವಿದೆ ಅದರ ಹೆಸರು ಓಠ ಓಚಿಟಜ. ಹೆಸರಿಲ್ಲದ ಊರು! ವಿದೇಶಗಳಲ್ಲೂ ವಿಚಿತ್ರ ಊರುಗಳ ಹೆಸರುಗಳಿಗೆ ಬರವಿಲ್ಲ.
#ವಿಶ್ವೇಶ್ವರ್ ಭಟ್.
22.10.2017 ರ ವಿಶ್ವವಾಣಿಯ ಭಾನುವಾರದ ವಿಶ್ವೇಶ್ವರ ಭಟ್ ರವರ ವಿದೇಶಕಾಲ ಅಂಕಣದಿಂದ ಆರಿಸಿದ್ದು.


ವಾರೆ ನೋಟ

ಲೋಚನ ದ ತುಂಬಾ ಚಂದ್ರ ತಾಲದ ಬಿಂಬ

( Chandra tal lake .... Himachal pradesh) ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿ...