Thursday, February 13, 2014

ಹೀಗೊಂದು ಪ್ರೇಮ ಪತ್ರ..

ಇಂದು ಪ್ರೇಮಗಳ ದಿನ ಅದರ ಸಲುವಾಗೊಂದು ಪ್ರೇಮ ಪತ್ರ. ಇದು ಪ್ರೇಮ ನಿವೇದನೆಯಲ್ಲ, ವಿರಹದ ನಿವೇದನೆ... ನಿಮಗಾಗಿ. ನಿಮ್ಮ ನೆನಪು ಮರಳಿದರೆ ನಾನು ಜವಾಬ್ದಾರನಲ್ಲ...

ನೆನಕೆಗಳ ಸುಳಿಯಲ್ಲಿ..
ಪ್ರಿಯ ಮಿತ್ರಾ, 








ಹೊಳೆಯ ತಟದಿಂದ ನಿನಗೊಂದು ಪಾರಿಜಾತದ ಗಂಧದ ನೆನಕೆ ಸಲ್ಲಿಸುತ್ತಿರುವೆ ನದಿಯ ಕಲರವ ಪಕ್ಷಿಗಾನವೆಲ್ಲವೂ ನಿನ್ನನ್ನೇ ಜಪಿಸುತ್ತಿವೆಯೇನೋ ಎಂಬಂತೆ ಭಾಸವಾಗುತ್ತಿದೆ !. ನನ್ನ ಹುಚ್ಚುತನವು ಆಗಿರಲಿಕ್ಕು ಏನೋ ತಿಳಿಯೇ?. ಈ ಬೋರ್ಗರೆತ ನಿನ್ನ ನೆನಪನ್ನು ಅನುರಣಿಸುತ್ತಿದೆ. ಹೊಳೆಯ ತಟದಲ್ಲಿದೆ ನನ್ನೂರು. ಪ್ರಕೃತಿಯೆ ಹೊದ್ದು ಮಲಗುವ ಮಲನಾಡಿಗರು ನಾವು. ಸಾಮಾನ್ಯವಾಗಿ ಭಾವುಕರು. ಎಲ್ಲವನ್ನೂ ಎಲ್ಲರನ್ನೂ ಪ್ರೀತಿಸುತ್ತೇವೆ. ಹಾಗೆ ನಿನ್ನನೂ ಪ್ರೀತಿಸಿದೆ. ನನ್ನ ಜೀವನದ ಭಾವುಕ ಮತ್ತು ಸ್ಮರಣೀಯ ಕ್ಷಣಗಳವು. ಎಷ್ಟು ಬೇಗ ಜಾರಿದವು. ಅನಂತ ಕಾಲವನ್ನು ಹಿಡಿದಿಡುವಂತಿದ್ದರೆ. ಅಂದು ನೀ ನದಿ ತಟಕ್ಕೆ ನಿನ್ನ ಮೋಟಾರ್ ಬೈಕ್ನಲ್ಲಿ ಕರೆದೊಯ್ದ ದಿನಕ್ಕೆ ಕಾಲವನ್ನು ನಿಲ್ಲಿಸುತ್ತಿದ್ದೆ!
ನನ್ನ ನಿನ್ನ ನಡುವಿದ್ದದ್ದೂ ಕೇವಲ ದೈಹಿಕ ಆಕರ್ಷಣೆ ಮಾತ್ರವಲ್ಲ. ನಿನ್ನ ಸೂಜಿಗಲ್ಲಿನಂತೆ ಸೆಳೆಯುತ್ತಿದ್ದ ಬುದ್ದಿವಂತಿಕೆಯೂ. ನಾನು ಮಾತ್ರವಲ್ಲ ಆಮೇಲೆ ತಿಳಿಯಿತು ನನ್ನಂಥವರು ಕಾಲೇಜಿನಲ್ಲಿ ಸಾಕಷ್ಟಿದ್ದರೆಂದು. ಆದರೂ ಆ ನಿನ್ನ ಚೂಪು ಗಲ್ಲ ನನ್ನನು ಇನ್ನಿಲ್ಲದಂತೆ ಆಕಷರ್ಿಸಿತು. ನಿನ್ನ ವಿಶೇಷ ಕ್ರಾಪ್ ಕೂದಲು ಸೆಳೆದ್ದದುಂಟು. ನಿನ್ನ ಗುಲಾಬ್ ಜಾಮನಂತಹ ಮಾತು. ನಿನ್ನ ಮಾತು ಕೇಳುತ್ತಿದ್ದರೆ ಗುಲಾಂ ಅಲಿ ಗಜಲ್ ಕೇಳಿದಂತೆ ನಿಧಾನ ಅತಿ ಮಧುರ. ನಡು ನಡುವೆ ತೇಲಿ ಬರುವ ಕನ್ನಡ ಪದ್ಯಗಳು, ಹಿಂದಿ ಗಜಲ್ಗಳು ನಿನ್ನ ಮಾತಿನಲ್ಲಿ ಮೀಯುತ್ತಿದ್ದವು. ಎಷ್ಟು ಜನರ ಕೊಲೆಮಾಡಿದೆಯೊ ಮಾತಿನಲ್ಲೆ ನಾ ಕಾಣೆ. ಅಂತಹ ಮಧುರ ದಿಗಳವು. ಕೆಲವೊಮ್ಮೆ ಸ್ಪೂತರ್ಿ ಕೆಲವೊಮ್ಮೆ ಅಯ್ಯೋ ಎನಿಸಿಬಿಡುವವು. ಇರಲಿ.
***

 ನನ್ನಲ್ಲಿ ನೀ ಹೇಳಿದ ಪ್ರತಿ ಮಾತು ಇಲ್ಲಿನ ನದಿಗಳಿಗೆ ತಿಳಿದಿರುವಂತಿದೆ. ನೀ ಇಚ್ಚಿಸಿದ್ದು ಧ್ಯಾನಿಸಿದ್ದು ನದಿಯನ್ನಲ್ಲವೇ ನೀ ಹೇಳಿದ ಮಾತಿನ್ನು ನೆನಪಿದೆ ಮನುಷ್ಯ ನದಿಯಂತಾಗಬೇಕು. ಸದಾ ಚಿಲಮೆಯಂತೆ ಹರಿಯಬೇಕು. ಗೆಳೆಯಾ ನೆನಪಿರಲಿ ನದಿಗಳೂ ಬತ್ತುತ್ತದೆ! ಈ ಮಲನಾಡಲ್ಲೂ ಅಲ್ಲಲ್ಲಿ ನೀರಿರುತ್ತವಷ್ಟೇ, ನಾ ನಿನಗೆ ಆ ವಿಷಯದಲ್ಲಿ ಎದುರಾಡಿದ್ದೆ. ನದಿಗಳೇನೋ ಜೀವನಾಡಿಗಳು ಎಲ್ಲೊ ಮಳೆ ಬಂದರೆ ಇನ್ನೆಲ್ಲೋ ಪ್ರವಾಹ ಉಕ್ಕುಸುವವು ಹಾಗಾಗಿ ಮನುಷ್ಯ ನದಿಯಂತಾದರೆ ಒಳಿತಲ್ಲವೆಂದಿದ್ದೆ. ನನಗಾಗ ದ್ವಂದ್ವವೂ ಕಾಡಿತ್ತು. ಇಂದಿನಂತೆ ಸ್ಪಷ್ಟತೆ ಇರಲಿಲ್ಲ. ನೀನಚಿತೂ ನದಿಯಂತಾದೆ ನನ್ನ ಪಾಲಿಗೆ, ಎಲ್ಲೋ ಮಳೆಯಾಗಿ ನನ್ನಲಿ ಪ್ರವಾಹ ಉಕ್ಕಿಸುತ್ತಿದೆ! ಇರಲಿ ಬಿಡು ಏನೋ ಆಗಿದ.ೆ ಕನಸ ಕಟ್ಟಡಗಳೆಲ್ಲವೂ ಮೇಲೇಳರವಲ್ಲಾ ಹೇಳಿದ ಪ್ರತಿಮಾತು ಪಿಸುಮಾತು ಪಿಸುಮಾತಾಗಿ ಏಕಾಂತದಲ್ಲಿ ಸಶಬ್ಧವಾಗುತ್ತಿದೆ.
***
ಅಂದು ನೀ ಹುತ್ತರಿ ಹಬ್ಬಕ್ಕೆ ನಮ್ಮ ಮನೆಗೆ ಬಂದಾಗ ಎಷ್ಟು ಮುದಗೊಂಡಿದ್ದೆ. ಪುಷ್ಪಕ ವಿಮಾನ ನೋಡಿದಷ್ಟು. ನಿನ್ನನ್ನು ಮಾತ್ರ ಕರೆಯುವ ಉದ್ದೇಶವಿದ್ದರೂ ಮನೆಯಲ್ಲಿ ಹೇಗೋ ಏನೋ ಎಂದು ಕೆಲವು ಗೆಳತಿಯರನ್ನು ಕರೆದಿದ್ದೆ ಅಮ್ಮನಿಗೆ ಹೇಳಿ ನಿನಗಿಷ್ಟದ ಕ್ಯಾರೆಟ್ ಹಲ್ವ ಮಾಡಿಸಿದ್ದೆ, ಗಡದ್ದಾಗಿ ಎರಡು ಸವಟು ತಿಂದು ಕಾಲೇಜಿನಲ್ಲಿ ಕೊಂಕು ಆಡಿದ್ದೆ. ಎಷ್ಟು ಬೇಸರವಾಗಿತ್ತು ನನಗೆ.  ಊಟದ ನಂತರ ಸೊಕ್ಕಿದ ಅಡಿಕೆ, ತನಿಗುಂಡಿ ಹೊಗೆ ಸೊಪ್ಪಿನೊಂದಿಗೆ ಬೇಡವೆಂದರೂ ತಿಂದು ತಲೆತಿರುಗಿ ನನ್ನ ಮಡಿಲಲಿ ಮಲಗಿ ನೀರು ಚಿಮುಕಿಸಿಕೊಂಡಿದ್ದು. ಎಲ್ಲರೂ ಕಾಲೇಜಿನಲ್ಲಿ ಗೊಳ್ಳೆಂದು ನಕ್ಕಿದ್ದೆವು. ಅಮ್ಮನಿಗೆ ಆಗಲೇ ನಮ್ಮ ಪ್ರೀತಿಯ ವಾಸನೆ ಬಡಿದಿತ್ತು. ನೀನು ಹೋಗುವಾಗ ಕೈಗಿತ್ತ ಗ್ರೀಟಿಂಗ್ನ ನುಡಿ ನೋಡಿ ಅಮ್ಮ ಗ್ರಹಿಸಿದ್ದಳು.  ಬದುಕೆಂದರೆ ಪ್ರೀತಿಸುವುದು, ಪ್ರೀತಿಸುವುದೆಂದರೆ ನಿನ್ನ ಜೊತೆಗಿರುವುದು ಎಂತಹ ಅಮರ ಸಾಲುಗಳಿವು ಮೋಡಿ ಮಾಡಲು. ಇವನೆಲ್ಲಾ ಎಲ್ಲಿಂದ ಹುಡುಕಿ ತರುತ್ತಿದ್ದೆಯೋ ಕಳ್ಳ ! ಗೊತ್ತಿಲ್ಲ. ಸಚಿನ್ ಹೊಡೆದ ನೇರ ಸಿಕ್ಸರ್ನಂತೆ ನಾನಂತು ಈ ಸಾಲುಗಳಿಗೆ ಮರುಳಾದೆ ! ನಿನ್ನ ಪ್ರೀತಿಯಲ್ಲಿ ಸಿಕ್ಕಿಕೊಂಡೆ. ನಮ್ಮ ಪರಿಚಯವಿರದ ಮರ, ರಸ್ತೆಗಳು ಎಲ್ಲಿಯಾದರು ಇದ್ದರೆ ಹೇಳು ಒಮ್ಮೆ ನೋಡಿ ಬರಬೇಕೆಂದಿದ್ದೆ.
ನೆನಪಿದೆಯಾ ನಿನಗೆ? 
***
ನಾನೊಮ್ಮೆ ನಿನ್ನೊಡನೆ ದ್ವೈತ ಅದ್ವೈತಗಳ ಬಗ್ಗೆ ಜಗಳಾಡಿದ್ದೆ ನೆನಪಿದೆಯಾ. ನಾನು ಅದ್ವೈತವೆನ್ನುವುದು ನೀನು ದ್ವೈತವೇ ಸರಿ ಎನ್ನುವುದು ಹೀಗೆ ಸಾಗಿತ್ತು ನಮ್ಮವಾದ ಸರಣಿ. ನೀ ಎನೋ ಸಮಜಾಯಿಸಿ ಸಹ ಕೊಟ್ಟಿದ್ದೆ. ಅವೆಲ್ಲಾ ನೆನಪಿಲ್ಲಾ. ಅನಾಸ್ತಿಕನಾದ ನಿನ್ನಲ್ಲಿ ನಾ ಬೆರೆತು ಹೋಗುವುದಾದರು ಹೇಗೆ ಅಲ್ಲವೆ?
ಇಲ್ಲೆಲ್ಲಾ ಈಗ ಮಂಜು ಕವಿದಿದೆ. ಮಂಜೆಂದರೆ ಕೊಡಗು, ಕೊಡಗೆಂದರೆ ನೀ ನೆನಪಾಗುತ್ತಿ, ಆ ಮಂಜು, ಮುಂಜಾವು, ಹೋಟೆಲ್ ಮ್ಯಾನೆಜರ್ ಮೇಡ ಫಾರ್ ಇದ್ ಅದರ್ ಎಂದಿದ್ದೂ, ನೆನಪಿದೆ. ಎಣಿಸಿಕೊಂಡರೆ ಈಗ ನಗು ಬರುತ್ತದೆ. ಕೊಡಗಿನ ಮಂಜಿನಲ್ಲಿ ಕೈಹಿಡಿದು ನಡೆದಿದ್ದು. ಕಾಣದ ಕಡಲಿಗೆ ಓಗೊಡುವ ಅಬ್ಬಿ ಜಲಪಾತವನ್ನು ನಿನ್ನ ತೋಳ ತೆಕ್ಕೆಯಲ್ಲಿ ನೋಡಿ ಧನ್ಯನಾದುದು. ಒಂದೆ ಎರಡೇ ನನ್ನ ನಿನ್ನ ನೆನಪ ಮೆರವಣಿಗೆಯ ಚಿತ್ರಗಳು. ನಿನ್ನ ಮುಂಗುರುಳಿನಲ್ಲಿ ಬೆರಳಾಡುತ್ತಾ ಮೇಣದ ಬತ್ತಿಯ ಬೆಳೆಕಿನಲಿ ಪ್ರಜ್ವಲಿಸುವ ನಿನ್ನ ನೋಟ ಆಸ್ವಾದಿಸುತ್ತಾ, ಇಡೀ ರಾತ್ರಿ ನಿನ್ನ ನಿರುಕಿಸುತ್ತಾ ಕಳೆದಿದ್ದು, ಅಬ್ಬಾ. ಅಂದು ನಿಜವಾಗಿ ನೀನು ನದಿಯಂತಿದ್ದೆ.
ಆ ನಿನ್ನ ಮೋಟಾರ್ ಬೈಕ್ನ ಸದ್ದು ನನ್ನ ಕಿವಿಯಲ್ಲಿನ್ನೂ ಗುಂಯ್ ಗುಡುತಿದೆ. ಶಿರಾಡಿಯ ಮಧ್ಯೆ ನೀನೊಮ್ಮೆ ನನ್ನ ಮುದ್ದಿಸಲು ಪ್ರಯತ್ನಿಸಿದ್ದು ನಾ ಮುನಿಸಿಕೊಂಡಿದ್ದು, ನೀ ಮಾತು ಬಿಟ್ಟಿದ್ದು. ಛೇ ಎಂತಹ ಬಾಲತನ ನಿನ್ನದು ಅನ್ನಿಸಿತ್ತಾಗ. 
***

ಅದಿರಲಿ ಗೆಳಯಾ, ಮೊನ್ನೆ ಸಂತೆ ಬೀದಿಯಲಿ ನಿನ್ನ ಕಂಡೆ ಗಡ್ಡ ಬಿಟ್ಟು ಸನ್ಯಾಸಿಯಂತಾಗಿರುವೆ. ನಿನ್ನ ಮನುಷ್ಯ ನದಿಯಂತಾಗಬೇಕೆಂಬ ಆದರ್ಶ ಏನಾಯಿತು?! ತುಂಬಾ ಸೊರಗಿದ್ದಿ ಯಾಕೆ? ನಿನ್ನ ಜೊತೆಗಿದ್ದಳಲ್ಲಾ ಯಾರಾಕೆ? ಭಾವಿ ಪತ್ನಿಯೇ? ಪ್ರಿಯತಮೆ ಯಾ ಇಂಗ್ಲೀಷ್ ಮದುವೆಯಾ, ಸಾರಿ, ಐಮೀನ್ ರಿಜಿಸ್ಟರ್ ಮದುವೆಯಾದವಳೆ? ಏನು ಲಲ್ಲಗರೆಯುತಿದ್ದಳು! ನಾನು ನಿನ್ನೊಡನೆ ಹಾಗೆ ನಡೆದುಕೊಂಡಿದ್ದರೆ ಈ ಪತ್ರ ಬರೆಯುವ ಪ್ರಸಂಗ ಬರುತ್ತಿರಲಿಲ್ಲವೇನೋ? ಈ ನದಿಯ ನಡುಗುಡ್ಡೆಯಲ್ಲಿ ಕೂತು ನಿನ್ನ ನೆನಪು ಮಾಡಿಕೊಳ್ಳಬೇಕಾಗಿ ಬರುತ್ತಿರಲಿಲ್ಲ ಇರಲಿ ಅದಕ್ಕೆ ಹಿರಿಯರಂದ್ದಿದಿರಬೇಕು, ಬ್ರಹ್ಮಚಾರಿ ಶತಮರ್ಕಟ!
***
ಕನಿಷ್ಠ ನಿನ್ನ ನೆನಪನ್ನಾದರೂ ಸಾಯಿಸಲು ನಾ ನೊಬ್ಬನ್ನು ಪ್ರೀತಿಸಬೇಕು, ಮದುವೆಯಾಗಬೇಕು. ಇಲ್ಲ ಇಲ್ಲ ಅಪ್ಪ, ಅಮ್ಮ ನೋಡಿದವರೊಡನೆ ಮದುವೆಯಾಗಬೇಕು. ಕನಿಷ್ಠ ನಿನ್ನ ಮೇಲೆ ಹೀಗಾದರೂ ನಾನು ಸೇಡು ತೀರಿಸಿಕೊಳ್ಳಬೇಕೆಂದಿರುವೆ. ಇಲ್ಲ ಹೀಗೆ ಮಾಡಲು ಈಗ ಮನಸ್ಸು ಒಪ್ಪಲ್ಲ ಇವೆಲ್ಲ ನನ್ನ ನೊಂದ ಮನದ ನುಡಿಗಳು. ಅಷ್ಟೇ. ಸುಮ್ಮನೆ ಬದುಕಲು ಇಷ್ಟೊಂದು ರಗಳೆಗಳೇಕೆ. ಕೆಸುವಿನೆಲೆಯಂತಹ ನಿನ್ನ ಮನಸ್ಸನ್ನು ಸ್ವಲ್ಪವಾದರೂ ತಾಗಲು ಪ್ರಯತ್ನಿಸಿದ ಮಳೆ ಹನಿ ನಾನು! ನಾನೆ ಮೂರ್ಖಳಿರಬೇಕು. ನಮ್ಮ ಕಲ್ಪನೆಗಳೇ ಬೇರೆ ವಾಸ್ತವದ ಬದುಕೇ ಬೇರೆ. ನಿನ್ನ ಅಪ್ಪ ಅಮ್ಮ ಜಾತಿ ಎಲ್ಲವೂ ವಾಸ್ತವ ನಾನು ನೀನು ಭೇಟಿಯಾಗಿದ್ದು ಕೇವಲ ಕಲ್ಪನೆಯಂತೆ ನನಗೆ ತೋರುತ್ತಿದೆ. ತೀರ ವಾಸ್ತವದಲ್ಲಿ ನಿನ್ನಂತೆ ಬದುಕಲು ನನಗಾಗದು. ಕಲ್ಪನೆಗಳಿಲ್ಲದ ಭಾವವಿಲ್ಲದ ಬದುಕು ಶೂನ್ಯದಂತಾಗುತ್ತದೆ. ನಿನಗೂ ಹಾಗನ್ನಿಸಿದರೆ ಉತ್ತರ ಬರೆ. ಇಲ್ಲವಾದರೆ ಉಂಟಲ್ಲ ಒಲೆ! ಕಾಯಿಸಿಕೊಂಡು ನೀನಾದರೂ ಬೆಚ್ಚಗಿರು.

***
ಇಷ್ಟೆಲ್ಲಾ ಇಂದು ನೆನಪಾಗುತ್ತಿದೆ ಏಕೆಂದು ಗೊತ್ತಿದೆಯೇ ಇಂದು ಹುತ್ತರಿ ಹಬ್ಬ. ಅಮ್ಮ ಮಾಡಿದ ಕ್ಯಾರೆಟ್ ಹಲ್ವ ತಿನ್ನದೆ ಇಲ್ಲಿ ನದಿ ಬಳಿ ಬಂದು ಕುಳಿತ್ತಿದ್ದೇನೆ.
ಯಾರೋ ಹೇಳಿದಂತೆ ಪಾರಿಜಾತ ಗಿಡಗಳು ತೋಟದ ನಡುವೆ ನೆಟ್ಟರೆ ಬದುಕಲಾರವೆಂದು. ಅವುಗಳು ಬದಿಯಲ್ಲಿ ನೆಟ್ಟರೆ ಮಾತ್ರ ಚಿಗುರಿ ಹೂ ಬಿಡುವವು. ಅಂತೆಯೇ ಆದಂತಿದೆ ನನ್ನ ಬದುಕು. ಇರಲಿ. ನಿನಗೆ ಹೇಳಿದರೆ ನೀ ನಗುತ್ತಿ. ಹೊಸ ವಿಶ್ವಾಸದೊಂದಿಗೆ ಪುಟಿಯಬೇಕು ಬದುಕು ಹೂವಾಗ ಬೇಕೆಂದು ಆಶಿಸುವವಳು ನಾನು. 

ಸಂಜೆಯಾಗುತ್ತಿದೆ ಕತ್ತಲಾವರಿಸುವ ಮುನ್ನ ಮನೆ ಸೇರಬೇಕು ಅಪ್ಪ ಕೇಳುತ್ತಾರೆ, ಅಮ್ಮ ಮೂದಲಿಸುತ್ತಾಳೆ, ಪತ್ರ ಮುಗಿಸುತ್ತೇನೆ. ನಿನ್ನ ಮೋಟಾರ್ ಬೈಕ್ ಸದ್ದಿನ ನಿರೀಕ್ಷೆಯಲ್ಲಿ !  ಈ ಪತ್ರವು ನಿನ್ನ ಬಚ್ಚಲಿನ ನೀರು ಬಿಸಿ ಮಾಡಲು ಉಪಯೋಗವಾಗದಿರಲಿ. ಇತಿ ನಿನ್ನವಳು, ಓ ಮತ್ತೆ ಸಾರಿ. ಕೇವಲ ಹಾರೈಕೆಗಳು. 
ಇತಿ ನಿನ್ನ ನೆನಪ ಕನ್ನಿಕೆ.
ಪಾರಿಜಾತ.

ವಾರೆ ನೋಟ

ಲೋಚನ ದ ತುಂಬಾ ಚಂದ್ರ ತಾಲದ ಬಿಂಬ

( Chandra tal lake .... Himachal pradesh) ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿ...