Wednesday, March 7, 2012

ಮಾಯಾಲೋಕದ ಮಾಯಾವಿ 'ತೇಜಸ್ವೀ'ಪ್ರಿಯ ಕವಿಗೊಂದು ಹ್ರದಯಸ್ಪಶ್ರಿ ನುಡಿ ನಮನ


ಪ್ರಕೃತಿಯೊಂದಿಗೆ ಲೀನವಾಗಿ, ಕಾಡಿನ ಸಂತನೆನಿಸಿದ ತೇಜಸ್ವಿ ನಿಮಗಿದೊ ನುಡಿ ನಮನ. ಪ್ರಕೃತಿಯ ಸೂಕ್ಷ್ಮವನ್ನು ಅದರ ಚಿದಂಬರ ರಹಸ್ಯವನ್ನು ಬೆರಗುಗಣ್ಣಿನಿಂದ ನೋಡಿ, ಮಗುವಿನಂತೆ ಪುಳಕಗೊಳ್ಳುವ, ಇನ್ನೊಬ್ಬರಿಗೆ ಅದನು ತಿಳಿಸುವ ತವಕದ ಸಣ್ಣ ಬಾಲಕ. ಮಿಲೆನಿಯಂ ಸರಣಿ ಇದಕ್ಕೊಂದು ನಿದರ್ಶನ. ತಾನು ಬೆಳೆದು ಉಳಿದವರಿಗೆ ಪ್ರಕೃತಿ ಪ್ರೀತಿಯ ಕಲಿಸಿದ ಗುರು. ಇವರ ಸಾಹಿತ್ಯ ಓದಿದವರಿಗಂತು ಇತರೆ ಕೃತಿಗಳು ಪೇಲವವಿನಿಸಿಕೊಳ್ಳುದರಲ್ಲಿ ಆಶ್ಚರ್ಯವಿಲ್ಲ. ಇಲ್ಲಿ ಎಲ್ಲರೂ ಮುಖ್ಯರೆನ್ನುತ್ತಾ, ಯಾವುದೂ ಮುಖ್ಯವಲ್ಲ ಎಂಬ ಕುವೆಂಪು ದೋರಣೆಯಂತೆ ಅನೇಕ ಪ್ರಯೋಗಶೀಲ ಕೃತಿ ರಚಿಸಿದರು. ಹಳೆಯ ಪದ್ಧತಿಗಳಿಗೆ ಅಂಟಿಕೊಳ್ಳದೇ, ನವ್ಯದ ಕಿಲುಬನ್ನು ತೆಗೆದುಹಾಕಿ, ಹೊಸ ದಿಗಂತದೆಡೆಗೆ ಸಾಗಿದ ಸಂತ. ವಿದೇಶಿ ಸಂಸ್ಕ್ರತಿಯ ಮೋಹಕ್ಕೆ ಒಳಗಾಗದೆ, ಸ್ನಿಗ್ಧ ಸ್ವಚ್ಚಂದ ಝರಿಯಂತೆ ಹರಿದ ಸಾಹಿತ್ಯ ಪ್ರತಿಭೆ.ವೈಜ್ಜಾನಿಕ ಕಾದಂಬರಿ ಕರ್ವಾರ್ಲೊ:- ಕರ್ವಾರ್ಲೊ, ವೈಜ್ಜಾನಿಕ ಕಾದಂಬರಿಯ ನೈಜ, ನೂತನ ನಿರೂಪಣೆ. ವಿಜ್ಞಾನವನ್ನೂ ಇಷ್ಟು ಸರಳವಾಗಿ, ರೋಚಕವಾಗಿ ಹೇಳಬಹುದೆಂಬುದೆ ಕನ್ನಡ ಸಾಹಿತ್ಯದಲ್ಲಿ ಹೊಸ ಆಯಾಮ. ರೋಸಿ ಹೋದ ಹಳೆ ಪದ್ಧತಿಗಳನ್ನೆಲ್ಲ` ಮುರಿದು ಹೊಸ ಪರಂಪರೆಗೆ ದಿಗ್ರ್ಧಶನ ಮಾಡಿದುದು ಸ್ಮರಣೀಯ. ಓದಿದ್ದನ್ನೇ ಓದಿ ಬೇಸರಿಸಿಕೊಂಡ ಕನ್ನಡಿಗರಿಗೊಂದು ಅಮೃತ ಸಿಂಚನಗೈದಿತು. ಸರಿಸೃಪ ಒಂದು ಜೀವ ವಿಸ್ಮಯದ ಕೊಂಡಿಯಾಗುಳಿದು ಅದರ ಹುಡುಕಾಟವೊಂದನ್ನು ರೋಚಕವಾಗಿ ಹೇಳಿದುದು ಅದ್ಭುತ, ಅನನ್ಯ. ಅತ್ಯಂತ ತಳ ಮಟ್ಟದವರಲ್ಲಿಯೂ ಅತ್ಯಂತ ಉತ್ತಮ ಜ್ಞಾನವಿದೆ, ಮಂದಣ್ಣ ಪಾತ್ರದ ಮೂಲಕ ತೋರಿಸಿದರು, ಆ ಮೂಲಕ ಇಲ್ಲಿ ಎಲ್ಲರೂ ಮುಖ್ಯ ಎಂದು ತೋರಿಸಿದರು. ಕುವೆಂಪುರವರ ಪ್ರಭಾವಕ್ಕೊಳಗಾದುದು ತೋರುತ್ತದೆ. ಅವರೇ ಹೇಳಿಕೊಂಡಂತೆ ಕುವೆಂಪುರವರ ಕಲಾಸೃಷ್ಟಿ, ಕಾರಂತರ ಪ್ರಯೋಗಶೀಲತೆ ಅವರ ಮೇಲೆ ತೀವ್ರ ಪ್ರಭಾವ ಬೀರಿದೆ. ಅವರು ಯಾವುದೇ ಪಂಥ, ತತ್ವಕ್ಕೆ ಒಳಪಡದೆ ನಮ್ಮ ನಮ್ಮೆಲ್ಲರಂತಿರುವ ಪಾತ್ರದಾರಿಗಳನ್ನು ಸೃಷ್ಟಿಸಿದುದು ಸಹ ಒಂದು ಹೊಸ ಪ್ರಯೋಗವೇ.ಜುಗಾರಿ ಕ್ರಾಸ್:- ಯಾವ ಪಾತ್ರವನ್ನೂ ವೈಭವೀಕರಿಸದೇ, ಕಾಡು ಮೇಡು ಹೊಳೆ ಮುಂತಾದವನ್ನೂ ಬಳಸಿಕೊಂಡು, ಜಾಗತೀಕರಣದಿಂದೂಟಾದ ಸಾಂಸ್ಕ್ರತಿಕ ಪಲ್ಲಟ, ಉದ್ಯೋಗ ಪಲ್ಲಟಗಳನ್ನು ಜುಗಾರಿ ಕ್ರಾಸ್ನಲ್ಲಿ ಹೇಳುತ್ತಾರೆ. ಹೇಗೆ ವಿದೇಶದಿಂದ ಕಾಲಿಟ್ಟ ಪ್ಲಾಸ್ಟಿಕ್ ಎಂಬುದು ಒಂದು ಜನಾಂಗದ ಉದ್ಯೋಗದ ಪಲ್ಲಟದಲ್ಲಿ ತೀವ್ರ ಪ್ರಭಾವ ಬೀರಿತು. ಮೇದರ ಕಾಡು ಹೇಗೆ ಅವಸಾನಕ್ಕೊಳಗಾಯಿತು.ಪರಿಸರದ ನಿಗೂಢತೆ ಹಾಗೂ ಮಾನವರ ನಿಗೂಢತೆ ಇಲ್ಲಿ ಮೇಳೈಸಿದಂತಿದೆ. ಒಂದು ದಿನದಲ್ಲಿ ನಡೆಯುವ ಘಟನೆಯಾದರಿಸಿ ಬರೆದ ಕಾದಂಬರಿ ಜುಗಾರಿ ಕ್ರಾಸ್ ಕಾದಂಬರಿ ಲೋಕದಲ್ಲೊಂದು ಮೈಲುಗಲ್ಲು. ಥ್ರಿಲ್ಲರೊಂದನ್ನು ಹೀಗೂ ಬರೆಯಬಹುದೆಂದು, ಆಗಿನ ಕಾಲದ ನವ್ಯ ಲೇಖಕರಿಗೆ ತೋರಿಸಿಕೊಟ್ಟರು. ಈ ಕಾದಂಬರಿ ಅವರ ಕಾದಂಬರಿಗಳಲ್ಲೇ ಅತ್ಯಂತ ಯಶಸ್ವಿ. ತೀರ ಸಾದಾರಣ ಪಾತ್ರವಾದ ಸುರೇಶನು ಮುಖ್ಯ ಭೂಮಿಕೆಗೆ ಬಂದು, ತೀವ್ರ ಕುತೂಹಲ ಕೆರಳಿಸುತ್ತಾರೆ. ಅಲ್ಲದೇ ಅವರ ವಿಶ್ಲೇಷಣೆಗಳು ಓದುಗನಲ್ಲಿ ಆಸಕ್ತಿ ಮೂಡಿಸುತ್ತದೆ.
ಅವರ ಕತೆಗಳು:- ಪ್ರಕೃತಿ, ಹಕ್ಕಿಗಳ ಬಗ್ಗೆ ಏನೂ ತಿಳಿಯದವರಿಗೂ ತಿಳಿಹಾಸ್ಯದ ದಾಟಿಯಲ್ಲಿ ಆಸಕ್ತಿ ಮೂಡಿಸುವುದು ಇವರ ವಿಶೇಷತೆ. ಆ ಕತೆಗಳ ಹಿಂದಿರುವ ರೋಚಕತೆಯೂ ಅದ್ಭುತ. 'ಏರೋಪ್ಲೇನ್ ಚಿಟ್ಟೆ', 'ಚೀಂಕ್ರ ಮೇಸ್ರ್ತೀ ಮತ್ತು ಅರಿಸ್ಟಾಟಲ್' ಕತೆ ಓದಿದವರಿಗೆ ಪ್ರಕೃತಿ ಮತ್ತು ಅದರ ನಿಗೂಢತೆಯನ್ನು ಢಾಳಾಗಿ ಬಳಸಿಕೊಂಡಿದ್ದಾರೆ ಎಂಬುದು ಸ್ಪಷ್ಡವಾಗುತ್ತದೆ. ಸಣ್ಣ ಎಳೆಯನ್ನು ಸಹ ಕತೆಯಾಗಿಸುವ ಅವರ ಜಾಣ್ಮೆ, ಮಾಯಾಮೃಗ ಎಂಬ ಕತೆಯಲ್ಲಿ ಭೂತದ ಕಲ್ಪನಯನ್ನು ಹಾಸ್ಯವಾಗಿ ಪರಿವತರ್ಿಸಿದ್ದಾರೆ. ಅವರ ಹಾಸ್ಯಪ್ರಜ್ಞೆ ವಿಶೇಷವಾದುದು. ಅದಕ್ಕೆ 'ವಿಶ್ವ' ಕತೆ ಸಾಕ್ಷಿಯಾಗಿ ನಿಲ್ಲುತ್ತದೆ. ತಾವು ತಮ್ಮ ಅಜ್ಜಿ ಮನೆಯಲ್ಲಿ ಕಳೆದ ಒಂದು ಘಟನೆಯನ್ನೆ ಕತೆಯಾಗಿಸಿದ್ದಾರೆ. ಆ ಕತೆಯಲ್ಲಿ ಬರುವ ವಿವರಗಳು ಅದ್ಭುತ ಹಾಸ್ಯಪ್ರಜ್ಞೆಗೆ ಸಾಕ್ಷಿ. ಘಾಟಿ ಹೆಂಗಸಿನ ಮಾತುಗಳು , ಬಾಲಕನು ತಾನು ಸತ್ತನೆಂದು ಭಾವಿಸಿಕೊಂಡು ಆ ಹೆಂಗಸಿನೊಂದಿಗೆ ಅವನ ವ್ಯವಹಾರ, ಹಾಗೂ ಸೈಕಲ್ಗೂ ವ್ಯಕ್ತಿತ್ವವನ್ನು ಆರೋಪಿಸಿ, "ಘಾಟಿ ಹೆಂಗಸನ್ನು ನೋಡಿದ ಸೈಕಲ್ ಆ ಬದಿಗೆ ವಾಲಿತು" ಎಂದು ಬರೆಯುತ್ತಾರೆ. ಸಿದ್ಧ ಪ್ರತಿಮೆಗಳನ್ನು ಬಳಸದೇ ಹೊಸ ಮಾದರಿಗೆ ತುಡಿದುದು ಅವರ ಪ್ರಯೋಗಶೀಲತೆಗೆ ಸಾಕ್ಷಿ.ನವ್ಯ ಪಂಥವನ್ನು ದಿಕ್ಕರಿಸಿ ಆಗಲೇ ಅವರು ಹೊರ ನೆಡೆದಿದ್ದರು, ಅವರ ಅಬಚೂರಿನ ಪೋಸ್ಟಾಪೀಸು ಕೃತಿಯಿಂದ ವ್ಯಕ್ತವಾಗುತ್ತದೆ. ಬರವಣಿಗೆಯ ತಂತ್ರಗಾರಿಕೆಯ ಬದಲಾವಣೆಗಾಗಿ ಈ ಕೃತಿಯನ್ನು ರಚಿಸಿದೆ ಎಂದಿದ್ದಾರೆ. ಕತೆಯನ್ನು ಹೇಳುವುದರ ಜೊತೆಗೆ ಪ್ರಕೃತಿಗೆ ನಾವು ಮಾಡಿದ ದ್ರೋಹವನ್ನು ಸಹ ಸಣ್ಣ ಎಳೆಯಾಗಿ ಕತೆಯಲ್ಲಿ ಬಳಸಿದ್ದಾರೆ ಎನ್ನುವುದು ಪ್ರೌಢ ಓದುಗರಿಗೆ ತಿಳಿಯುತ್ತದೆ.
ಕೊನೆ ಮುನ್ನುಡಿ:- ಇದೊಂದು ಬರೆದಷ್ಟೂ ಮುಗಿಯದ ಅಕ್ಷರ ಜಾತ್ರೆ. ಹಾಗಾಗಿ ಇಲ್ಲಿಗೆ ಮುಗಿಸುತ್ತೇನೆ. ಮತ್ತೊಮ್ಮೆ ಅಕ್ಷರ ಬುತ್ತಿಯೊಂದಿಗೆ ಬರುವೆ. ನಮಸ್ಕಾರ.ಶ್ರೀಧರ. ಎಸ್. ಸಿದ್ಧಾಪುರ

No comments:

Post a Comment

ವಾರೆ ನೋಟ

ಲೋಚನ ದ ತುಂಬಾ ಚಂದ್ರ ತಾಲದ ಬಿಂಬ

( Chandra tal lake .... Himachal pradesh) ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿ...