Friday, July 13, 2018

ಲಾಚೆನ್ ಟು ಗುರುದೊಂಗ್ಮಾರ್



ಪೂವರ್ೋತ್ತರ ಸೀಮೆಯ ಕೊನೆ ಹಳ್ಳಿ, ಲಾಚೆನ್. ನಾಗರಿಕತೆಯ ಕೊನೆಯ ತಾಣ. ನಾವಿಲ್ಲಿ ಬಂದಿಳಿದಾಗ ಸಂಜೆ ಆರು ಗಂಟೆ. ಎರಡು ಬೃಹತ್ ಬೆಟ್ಟದ ನಡುವಿನ ಪುಟ್ಟ ಹಳ್ಳಿ ನಿದ್ರೆಗೆ ಜಾರುತಲಿತ್ತು. ಬಗ್ದೋದ್ರ ಎರ್ಪೋಟರ್ಿನಿಂದ ಒಂದುವರೆ ದಿನದ ಪ್ರಯಾಣ. ಏರು ದಾರಿಯಲಿ ಹೊಟ್ಟೆಯೊಳಗಿರುವುದನ್ನೆಲ್ಲಾ ಹೊರ ಹಾಕುವಂತಹ ಕುಲುಕಾಟದ ಪ್ರಯಾಣ. ಗುರುದೊಂಗ್ ಮಾರ್ ಎಂಬ ವಿಶಿಷ್ಟ ಸರೋವರ ನೋಡಲು ಇಲ್ಲಿ ತನಕ ಪ್ರಯಾಣ ಬೆಳೆಸಿದ್ದೆವು.
ಉತ್ತರದ ಕೊನೆಯ ಹಳ್ಳಿ ಲಾಚೆನ್: -


ವರ್ಷದ ಕೆಲವೇ ದಿನಮಾಸದಲ್ಲಿ ಪ್ರವಾಸಿಗರಿಂದ ಗಿಜಿಗುಡುವ ಊರು. ನಾವು ಹೋದಾಗ ಬಿಕೋ ಎನ್ನುತ್ತಿತ್ತು. ಅಲ್ಲಿಲ್ಲಿ ಒಂದೆರಡು ಗುಂಪುಗಳಿಗಿದ್ದವು. ಹಿಮ ಬೆಟ್ಟಗಳ ಪಾದದಡಿಯಲ್ಲಿ ಮಗುವಾಗಿ ಮಲಗಿಹ ಹಳ್ಳಿ. ಸಣ್ಣ ಶಾಲೆ, ಬೆಳಿಗ್ಗೆ 9 ರಿಂದ 3ರವರೆಗೆ ಮಾತ್ರ ಕಾರ್ಯಾಚರಿಸುವ ಪೋಸ್ಟಾಪೀಸು ಈ ಊರಿನಲ್ಲಿರುವ ಸೌಲಭ್ಯಗಳು. ಬೆಟ್ಟದ ಮೇಲೊಂದು ಬುದ್ದನ ದೇವಾಲಯ. ಕೇವಲ ಒಂದು ಕಿಲೋ ಮೀಟರ್ ವ್ಯಾಪಿಸಿರುವ ಊರು. ಸಾಂಬಾರಿನಲ್ಲಿ ಸಿಗುವ ಸಾಸಿವೆಯಂತೆ ಚದುರಿದ ನಾಲ್ಕಾರು ಮನೆಗಳು, ಹತ್ತಾರು ಹೋಟೆಲುಗಳನ್ನು ಹೊಂದಿದ ಹಿಮದ ನಾಡಿನ ಪುಟಾಣಿ ಗ್ರಾಮ. ಬಯಲಿನಿಂದ ಸುಮಾರು 8,838 ಅಡಿ ಎತ್ತರದಲ್ಲಿದೆ!
ಜನ ಜೀವನ:-

ಬೆಳಗ್ಗೆ ಬೇಗ ಏಳುವ ಇಲ್ಲಿನವರು ತುಂಬಾ ಸರಳರು ಹಾಗೂ ಸಜ್ಜನರು. ತಮ್ಮ ಪಾಡಿಗೆ ತಾವಿದ್ದು, ಪ್ರವಾಸಿಗರಿಗೂ ನೆರವಾಗುವುದು ಇವರಿಗೆ ಇಷ್ಟ. ಅವರು ತೋರುವ ಪ್ರೀತಿಯೂ ಅನ್ಯಾದರ್ಶ. ನಾವಿದ್ದ ಮನೆಯವರು ಊಟ ಮಾಡಿಕೊಂಡೇ ಹೊರಡಿ ಮುಂದೆ ನಿಮಗೆ ಎಲ್ಲೂ ಊಟ ಸಿಗದೆಂದು ಅಕ್ಷರಷಃ ಅಡ್ಡ ಕಟ್ಟಿದ್ದರು. ಒಂದು ಹೋಮ್ ಸ್ಟೇನವರಂತೂ ನಾವು ಹೇಳಿದ ಅಲ್ಲಿನ ವಿಶೇಷ ಖಾದ್ಯವೊಂದನ್ನು ನಮ್ಮ ಕೋರಿಕೆ ಮೇರೆಗೆ ಮಾಡಿ ಬಡಿಸಿದ್ದರು. ನಾವಿದ್ದ ಹೋಟೆಲಿನಲ್ಲೊಬ್ಬ ಏಳನೇ ತರಗತಿ ಕಲಿಯುತ್ತಿದ್ದ ಹುಡುಗನಂತು ಯಾವಾಗ ತಿಂಡಿಗೆ ಬರುತ್ತೀರಿ ಎಂದು ಪ್ರೀತಿಯಿಂದ ಕೇಳುತ್ತಲೇ ಇರುತ್ತಿದ್ದ.
ಮರುದಿನ ಬೆಳಗ್ಗೆ ಹಕ್ಕಿ ಫೋಟೋ ತೆಗೆಯುವ ವೇಳೆ ಎಲ್ಲೆಲ್ಲಿ ಯಾವ ಹಕ್ಕಿ ಎಲ್ಲಿ ಕೂರುವುದೆಂದು ದಾರಿಹೋಕನೊಬ್ಬ ಬೆಳಗ್ಗೆ 5 ಗಂಟೆಗೆ ಅವುಗಳ ಇಂಗ್ಲೀಷ್ ಹೇಸರಿನೊಂದಿಗೇ ಹೇಳಿಹೋದ. ಇಲ್ಲಿನ ಮನೆಗಳು ಬಹಳ ವಿಶಿಷ್ಟ. ಮರದ ಗೋಡೆಗಳ, ಕಲ್ಲಿನ ಹೊದಿಕೆಯ ಮಾಡು. ಪ್ರತಿ ಮನೆಯ ಕಿಟಕಿ ಬಾಗಿಲುಗಳನ್ನು ಸಮಯ ಕೊಟ್ಟು ಸಿಂಗರಿಸುತ್ತಾರೆ. ಒಂದೊ ಎರಡೋ ಪುಟ್ಟ ಕೋಣೆಯ ಪುಟಾಣಿ ಮನೆಗಳಲ್ಲಿ ಇವರ ವಾಸ. ಇಂತಹ ಒಂದಂತಸ್ತಿನ ಮನೆಗಳಿಗೆ ತಲಗಟ್ಟೆಂಬುದೇ ಇರದು! ಒಳ ಕೋಣೆಯನ್ನು ಶಿಸ್ತಾಗಿ ಜೋಡಿಸಿಟ್ಟಿರುತ್ತಾರೆ. ಜಾಗವಿರದ ಮನೆಗಳ ತೊಲೆಗಳ ಮೇಲೂ ಅನೇಕ ಗಿಡಗಳ ತೂಗುಬುಟ್ಟಿಗಳು ನೇತು ಬಿದ್ದಿರುತ್ತಿದ್ದವು. ಇವರ ಸೌಂದರ್ಯ ಪ್ರಜ್ಞೆಗೆ ಮೆಚ್ಚಲೇ ಬೇಕು.

ಇಲ್ಲಿನ ಮಹಿಳಾ ಮಣಿಗಳನ್ನು ಮೆಚ್ಚಲೇ ಬೇಕು. ಬಹು ಕಷ್ಟ ಜೀವಿಗಳು. ಹೋಟೆಲ್ ಉದ್ಯಮದಿಂದ ಹಿಡಿದು ರಸ್ತೆ ಕಾಮಾಗಾರಿಯಲ್ಲೆಲ್ಲಾ ಇವರದೇ ಕೈಚಳಕ. ಮನೆ ಸಂಭಾಳಿಸಿಕೊಂಡು ಅದು ಹೇಗೋ ಹೋಟೆಲ್ ನೋಡಿಕೊಳ್ಳುತ್ತಾರೆ. ನಮ್ಮೂರಿನ ಹೆಂಗಸರಿಗೆ ಮನೆ ಎದುರಿನ ಅಂಗಳ ತೊಳೆ ಎಂದರೆ, ನೀವು ನನಗೆ ಬಹಳ ಕೆಲಸ ಹೇಳುತ್ತಿದ್ದೀರಿ, ಮಹಿಳಾ ಮಣಿಗಳ ಸ್ವಾತಂತ್ರ್ಯ ಹರಣವೆಂದು ಬೊಬ್ಬೆ ಹಾಕುತ್ತಾರೆ! ಅದಕ್ಕೆ ಹೇಳುವುದಿರಬೇಕು ಹಿಂದಿನವರು, ಜಗತ್ತು ಸುತ್ತಿ ನೋಡು ಎಂದು. ಚಳಿ ಹವೆೆಗೋ ಅಥವಾ ಅವರ ವಂಶವಾಹಿಯ ಕಾರಣಕ್ಕೋ ಹೆಚ್ಚಿನೆಲ್ಲಾ ಮಹಿಳೆಯರು ಸ್ಫುರದ್ರುಪಿಗಳು. ಮನೆಯಿಂದ ಹೊರ ಹೊರಡುವ ಮುನ್ನವೇ ಒಂದಿಷ್ಟು ಲಿಪ್ಸ್ಟಿಕ್ ಬಳಿದುಕೊಳ್ಳದೇ ಹೊರಡುತ್ತಿರಲಿಲ್ಲ. ಬೆಳಗ್ಗೆ 7 ಕ್ಕೆ ಹೊಕ್ಕ ಸಣ್ಣ ಕ್ಯಾಂಟಿನ್ ಒಡತಿಯೊಬ್ಬಳು ಅದೆಷ್ಟು ಹೊತ್ತಿಗೊ ಲಿಪ್ಸ್ಟಿಕ್, ಬಣ್ಣ ಬಳಿದುಕೊಂಡು ಸಜ್ಜಾಗಿ ಬಂದಿದ್ದಳು!
ಅಡಿಗಡಿಗೂ ಮದ್ಯ.
ಸಣ್ಣ ಸಣ್ಣ ಗೂಡಂಗಡಿಯಲ್ಲೂ ಮದ್ಯ ಮಾರಟಕ್ಕೆ ಅವಕಾಶವಿತ್ತು. ವೈನಾಗಿ ವೈನನ್ನ ಜೋಡಿಸಿದ ನೋಡಲು ಎರಡು ಕಣ್ಣು ಸಾಲದು! ಚಿಕ್ಕ ಅಂಗಡಿಗಳಲ್ಲಿ ಅವರು ವಸ್ತುಗಳ ಜೋಡಿಸುವ ಕ್ರಮ ಅನುಕರಣೀಯ. ನಮ್ಮೂರಿನ ಸೇಂದಿಯಂತೆ ಅಲ್ಲಿನವರೇ ರಾಗಿಯಿಂದ ತಯಾರಿಸುವ 'ತುಂಬಾ' ಎಂಬ ವಿಶಿಷ್ಟ ಪಾನೀಯ ಎಲ್ಲಾ ಗೂಡಂಗಡಿಗಳಲ್ಲೂ ಸಿಗುತ್ತಿತ್ತು!
ಗಂಟೆ ಎಂಟಕ್ಕೆಲ್ಲಾ ಮೂಳೆ ಕೊರೆವ ಚಳಿಯ ಮೊರೆತ. ಎಲ್ಲೆಲ್ಲೂ ಹಿಮ ಕರಗಿ ಮನೆ ಮನೆಗಳ ಅಂಚುಗಳಲಿ ಹರಿವ ಝರಿಗಳ ಸದ್ದು. ನೀರವ ರಾತ್ರಿಗಳಲೂ ನೀರ ಮೊರೆತ. ನೀರ ಸೆಳೆತಕೆ ಸಿಕ್ಕಿ ಸಿಕ್ಕಿಂ ರಾಜ್ಯ ಕೊಚ್ಚಿ ಹೋಗುವುದೋ ಎಂಬ ಭಾವ ಸದಾ ನಮ್ಮನ್ನು ಕಾಡುತಲಿತ್ತು. ನಾವೈವರು ಗೆಳೆಯರು ನಮ್ಮ ನಮ್ಮ ಕೋಣೆಗೆ ಹೊರಡುವ ಸನ್ನಾಹದಲ್ಲಿದ್ದೆವು. ಹೋಟೆಲ್ ಮಾಲಿಕ ತನ್ನ ಕಷ್ಟ ಹೇಳಿಕೊಳ್ಳುತ್ತಿದ್ದ. ಬೆಳಗಿನ ಜಾವ ಬೇಗ ಏಳ ಬೇಕಾದುದರಿಂದ ಮಾತು ಮುಗಿಸಿ ಬೇಗ ಹೊರಟೆವು. ಹೊಟೆಲ್ ಎದುರಿಗಿನ ಕಣಿವೆಯಲ್ಲಿ ಟೀಸ್ಟಾ ನದಿ ಅಬ್ಬರದಿಂದ ಹರಿಯುತ್ತಿದ್ದಳು. ಬ್ರಹ್ಮಪುತ್ರ ನದಿ ಸೇರುವ ತವಕವಿರಬೇಕು. ಪ್ರಯಾಣದ ಆಯಾಸವು ನಮ್ಮನ್ನು ಬೇಗನೆ ಹಾಸಿಗೆಗೆ ಕೆಡವಿತ್ತು. ನಮ್ಮ ಕನಸಿಗೋಗೊಡಲು ಬೆಳಗ್ಗೆ ನಾಲ್ಕಕ್ಕೇ ಏಳಬೇಕಿತ್ತು. ನಡುಗುವ ಚಳಿಗೆ ಎರಡು ಹೊದಿಕೆಯೂ ಸಾಲದಾಗಿತ್ತು.


ಬೆಳ್ಳಂ ಬೆಳಗ್ಗೆ ಬರೀ ನಾಲ್ಕಕ್ಕೇ;-
ಪಶ್ಚಿಮ ಕರಾವಳಿಗರಾದ ನಮಗೆ ಸೂರ್ಯ ದರ್ಶನ 6 ರಿಂದ 7 ಕ್ಕೆ. ಆದರಿಲ್ಲಿ ಬರೀ ನಾಲ್ಕಕ್ಕೇ ಬೆಳ್ಳಂ ಬೆಳಗ್ಗೆ. ನಾವಿದ್ದ ಹೋಟೆಲ್ನೆದುರಿಗೆ ಹಿಮ ಪರ್ವತವೊಂದು ಬೆಳ್ಳಂ ಬೆಳಗ್ಗೆ ನಾಲ್ಕಕ್ಕೇ ಹಣಕಿ ಹಾಕಿತ್ತು. ಬೆಳಗ್ಗೆ ಮೂರು ಗಂಟೆಗೆದ್ದು ತಯಾರಾದೆವು. ಮೂರರ ನಂತರ ಯಾರಿಗೂ ನಿದ್ದೆಯೇ ಸರಿಯಾಗಿ ಬಂದಿಲ್ಲ.
ಗುರುದೊಂಗ್ ಮಾರ್ ಸರೋವರದೆಡೆಗೆ:-

ಚಹ ಹೀರಿ ಬೆಳಗ್ಗೆ 4 ರ ಹೊತ್ತಿಗೆ ನಮ್ಮನ್ನು ಹೊತ್ತ ಜೀಪ್ ಹೊರಟಿತು. ಹೊರಟ ಎರಡೇ ನಿಮಿಷಕ್ಕೆ ಊರಾಚೆಗಿದ್ದೆವು. ಬೀಜ ಚಲ್ಲಿದಲ್ಲಿ ಬೆಳೆವ ಹೂ ಕೋಸಿನ, ಎಲೆ ಕೋಸಿನ ಹೊಲಗಳನ್ನು ದಾಟಿ ನೂರಾರು ಝರಿಗಳ ಹಾದು ಹೊರಟೆವು. ಹೊರಟ ಕೂಡಲೇ ಸಿಕ್ಕಿದುದು ಎರಡು ಜಲಧಾರೆ ಮತ್ತೊಂದು ಕಬ್ಬಿಣದ ಸೇತುವೆ. ಎಷ್ಟು ಸೇತುವೆ, ಜಲಧಾರೆ ನೋಡಿದೆವೆಂಬುದು ಲೆಕ್ಕವಿಡಲಸದಳದ ಸಂಖ್ಯೆ! ನಮ್ಮ ಹೋಟೆಲ್ ಎದುರಿಗೇ ಸುಂದರ ಜಲಪಾತವೊಂದು ಸುರಿಯುತ್ತಿತ್ತು. ಕೆಲವೆಡೆ ಗುಡ್ಡ ಕುಸಿದು ದಾರಿ ಅದಲು ಬದಲಾಗಿತ್ತು.

ಲಾಚೆನ್ನ ಸ್ವಲ್ಪ ದೂರದಲ್ಲಿಯೇ ಸೈನಿಕರ ಮಕ್ಕಳಿಗಾಗಿ ಶಾಲೆಯೊಂದ ತೆರೆದಿತ್ತು. ಆ ಶಾಲೆಯನ್ನು ಸಮುದ್ರ ಮಟ್ಟದಿಂದ ಅತಿ ಎತ್ತರದಲ್ಲಿರುವ ಶಾಲೆಯೆಂದರೆ ತಪ್ಪಾಗಲಿಕ್ಕಿಲ್ಲ. ನಡುವೆ 'ಟೀಸ್ಟಾ' ನದಿಗೆ ಅಣೆಕಟ್ಟು ಕಟ್ಟಿದ್ದರು. ಪ್ರತಿ ಕಿಲೋ ಮೀಟರ್ಗೊಂದರಂತೆ ಸೈನಿಕರ ಬಂಕರ್ಗಳು, ಪೆಟ್ರೋಲ್ ಬಂಕ್ಗಳು, ಶೇಖರಣಾ ತೊಟ್ಟಿಗಳಿದ್ದವು. ಲಾಚೆನ್ನಿಂದ 14,000 ಅಡಿಯ ತಾಂಗು ಎಂಬ ತಪಾಸಣಾ ಜಾಗಕ್ಕೆ ಬಂದ್ದಿದ್ದೆವು. ಮದ್ರಾಸ್ ರೆಜಿಮೆಂಟ್ ದಾಟಿ ಮುಂದೆ ಸಾಗಿದರೆ ಸೇನಾ ತಪಾಸಣೆ. ನಮ್ಮ ಪಮರ್ೀಟುಗಳ ದಾಖಲೆ ತೋರಿಸಲು ಡ್ರೈವರ್ ಹೋದ. ಮೂರು ನಾಲ್ಕು ಮನೆಯಿರುವ ಊರು ತಾಂಗು. ಮನೆ ಮಾಡಿಗೆ ಶೀಟುಗಳು ಮತ್ತು ಬಳಪದ ಕಲ್ಲುಗಳ ಬಳಸಿ ಹೊದಿಸಲಾಗಿತ್ತು.


ಕೆಫೆ ಎಟ್ 14,000, ತಾಂಗು:-
ಬೆಳಗ್ಗೆ ಬೇಗ ಎದ್ದಿರುವುದಕ್ಕೋ ಎನೋ ಹೊಟ್ಟೆ 7 ಕ್ಕೆ ಚುರುಗುಡುತ್ತಿತ್ತು. ಕೊರೆವ ಚಳಿಗೆ ಮೈ ಮನಸ್ಸು ಚಹಕ್ಕೆ ಹಾತೊರೆಯುತ್ತಿತ್ತು. ಚಿಕ್ಕ ಗುಡುರಾದೊಳಗೆ ನುಗ್ಗಿದೆವು. ಅಲ್ಲಿದ್ದದ್ದು ಬ್ರೆಡ್ ಜಾಮ್, ಆಮ್ಲೆಟ್. ಮೂರ್ನಾಲ್ಕು ದಿನದಿಂದ ಬ್ರೆಡ್ ತಿಂದುಕೊಂಡಿದ್ದ ನಮಗೆ ಮತ್ತೆ ಅದರ ದರ್ಶನ. ಅನಿವಾರ್ಯ. ಪಾಶ್ ಹೋಟೆಲ್ನಲ್ಲಿ ಉಳಿದ ಜೋಡಿಯೊಂದು ತಣಿದ ಬ್ರೆಡ್ ತಿನ್ನುವುದು ನಮಗೆ ನಗು ತರಿಸಿತು. ನಾವು ಬಿಸಿ ಬ್ರೆಡ್ ಜಾಮ್, ಆಮ್ಲೇಟ್ಗೆ ಆರ್ಡರಿಸಿದೆವು. ಬ್ರೆಡ್ನ ಪರಮ ವೈರಿಯಾದ ನಾನು ಬ್ರೆಡ್ ತಿನ್ನುತ್ತಿದ್ದುದು ನೋಡಿ ಗೆಳೆಯ ನಾಗರಾಜ ನನ್ನ ಕಾಲೆಳೆಯುತ್ತಿದ್ದ. ಕೊನೆ ಕೊನೆಗೆ ಬ್ರೆಡ್ ಆಮ್ಲೆಟ್ ಎಂದರೆ ವಾಕರಿಕೆ ಬರುವಂತಾಗಿತ್ತು.
ಹೊಟೆಲ್ ಒಡತಿ ಬಂದ ಹತ್ತಾರು ಜನರಿಗೆ ತನ್ನ ಕೆರೊಸಿನ್ ಸ್ಟೋವ್ನಲ್ಲಿ ತಿಂಡಿ ಮಾಡಿ ಬಡಿಸುತ್ತಿದ್ದಳು. ದಿನದ ಒಂದೆರಡು ಗಂಟೆಯಷ್ಟೇ ವ್ಯಾಪಾರ. ಉಳಿದ ಸಮಯ ಸೂಟಿ. ಲಾಚೆನವಳಾದ ಈಕೆ ಪರಮ ಸುಂದರಿ. ಅನಿವಾರ್ಯವಾಗಿ ಒಂದೆರಡು ಬ್ರೆಡ್ ಆಮ್ಲೆಟ್ ತಿಂದು ಹೊರಟೆವು.
ದಟ್ಟ ಕಾನನದ ನಡುವೆ ಹುದುಗಿದ್ದ ಲಾಚೆನ್ಗೂ ಇಲ್ಲಿನ ಪರಿಸರಕ್ಕೂ ಅಜಗಜಾಂತರ. ಗುಡ್ಡದ ಝರಿಯೇ ಜೀವಸೆಲೆ. ಇಲ್ಲಿನ ಕುರುಚಲು ಕಾಡಿನ ಬೆಟ್ಟಗಳ ಮೇಲ್ಮೈ ವಿಶಿಷ್ಟವಾಗಿದೆ. ಬೆಟ್ಟದ ಬಿಳಿ ಕಾಂಡಗಳ ಪುಟ್ಟ ಮರಗಳು ಬೆಟ್ಟದ ಮೇಲೆ ನೆಟ್ಟ ಕೋಲಿನಂತೆ ಕಾಣುತ್ತವೆ. ಮಾರ್ಚ-ಎಪ್ರಿಲ್ ತಿಂಗಳಿನಲ್ಲಿ ಬೆಟ್ಟವೆಲ್ಲಾ  ವಿಶಿಷ್ಟ ಹೂಗಳಿಂದ ಅಲಂಕರಿಸಿ ಅದ್ಭುತವಾಗಿ ಕಾಣುತ್ತವಂತೆ.

ತಾಂಗುವಿನ ಬಳಿಕ ಸುಮಾರು ಮೂರು ಸಾವಿರ ಅಡಿಗಳ ಎತ್ತರವನ್ನು ದಾಟಿ ಮರುಭೂಮಿಯಂತಹ ಒಣ ಹವೆಗೆ ದಾಟಿಕೊಳ್ಳಬೇಕು. ಸಣ್ಣ ಮೊಟರು ಕಲ್ಲಿನ ಬೆಟ್ಟಗಳ ಸಾಲು. ಅಲ್ಲಲ್ಲಿ ಕಲ್ಲುಗಳು ಋಷಿಗಳಂತೆ ಪೋಜು ಕೊಟ್ಟು ನಿಂತಿದ್ದವು. ಬಿಸಿಲಿಗೆ ಹೊಳೆವ ಬಿಳಿ ಕಲ್ಲುಗಳ ಗುಡ್ಡಗಳು. ಹಿಮನದಿಗಳು ಅಷ್ಟಿಷ್ಟು ಕಲ್ಲುಗಳನ್ನು ತಂದು ದಾರಿಯುದ್ದಕ್ಕೂ ಹರಡಿದ್ದವು. ಬ್ರೆಡ್ಡಿನ ಹಲ್ಲೆಗಳಂತಿರುವ ಕಲ್ಲರಾಶಿಗಳ ಹತ್ತಿಳಿಯುತ್ತಾ ಸಾಗಿತ್ತು ನಮ್ಮ ವಾಹನ. ಶುಷ್ಕಗಾಳಿಯ ಹಾವಳಿ. ಒಂಟಿ ಬಂಕರಗಳು, ಬೆಪ್ಪರಂತೆ ಹಸಿರು ಹೊದ್ದ ಬೆಟ್ಟಗಳಲ್ಲಿ ಚೇಳುಗಳಂತೆ ಕಲ್ಲು ಸಂಧಿಗಳಲ್ಲಿ ಅವಿತಿದ್ದವು. ಪರಿಸರದ ಸೌಂದರ್ಯಕ್ಕೆ ಮೋಡಿಗೊಳಗಾದವರಂತೆ ನೋಡತೊಡಗಿದೆವು ನಾವು. ಪ್ರತಿಯೊಬ್ಬರ ಬಾಯಿಯಿಂದ ವಾವ್ ಎಂಬ ಉದ್ಘಾರ. ಮೊದ ಮೊದಲಿಗೆ ಸರ್ಕಸ್ಸನಂತಿದ್ದ ದಾರಿ ಈಗ ಬಹಳೇ ಚೆನ್ನಾಗಿತ್ತು. ಇಲ್ಲಿಂದ ಚೀನಾ ಕೇವಲ 15 ಕಿಲೋ ಮೀಟರ್. ಮೊಟರು ಕಲ್ಲಿನ ಬೆಟ್ಟ ದಾಟಿ ಯಾರೋ ಇಸ್ತ್ರಿ ಮಾಡಿಟ್ಟಂತಹ ಕೆಂಬಣ್ಣದ ಬೆಟ್ಟ ಸಾಲು ನಮ್ಮೆದುರಿಗೆ ಬಂದು ನಿಂತಿದ್ದು ಗೊತ್ತೇ ಆಗಲಿಲ್ಲ. ಬೆಟ್ಟದ ಮೇಲೆ ಹಿಮ ಕೊರೆದ ದಾರಿಗಳು ಗೀಟು ಎಳೆದಂತೆ ಕಾಣುತ್ತಿದ್ದವು. ಕೆಂಬಣ್ಣದ ಪರ್ವತದ ಕೆಳೆಗೆ ಹಸಿರು ಪರ್ವತಗಳು. ಕೆಲವನ್ನು ಕಣ್ತುಂಬಿಕೊಳ್ಳುತ್ತಾ ಕೆಲವನ್ನು ಕ್ಯಾಮರದಲ್ಲಿ, ಹೀಗೆ ಸಾಗಿತ್ತು ಪ್ರಯಾಣ. ತಾಂಗು ಬಳಿಕ ಜೊತೆಯಾದ ಹಿಮ ಬೆಟ್ಟವೊಂದು ದಾರಿ ಹೇಳುತ್ತಾ ಹಿಂಬಾಲಿಸಿ ಬಂದಿದ್ದು ಸರೋವರ ತಲುಪುವ ಕೊನೆ ಕ್ಷಣದಲ್ಲಿ ಕಣ್ಮರೆಯಾಗಿತ್ತು.
ಇನ್ನೇನು ಸರೋವರಕ್ಕೆ 5 ಕಿಲೋ ಮೀಟರ್ ಇರಬೇಕಾದರೆ ಚಾದರ ಹೊದ್ದಂತಿದ್ದ ಯಾಕ್ಗಳು ಯಾತ್ರೆಗೆ ಹೊರಟಂತೆ ನಮಗೆದುರಾಯಿತು. ದೈತ್ಯ ಯಾಕ್ಗಳೆದುರು ಧೈರ್ಯಮಾಡಿ ಒಂದೆರಡು ಪೋಟೊ ಕ್ಲಿಕ್ಕಿಸಿದೆ. ಗೆಳೆಯ ನಾಗರಾಜ್ ಜಾಗೃತೆ ಹೇಳಿದ. ಇಲ್ಲಿಂದ ಶುರುವಾಯಿತು ನೋಡಿ ನಗಲು, ಮಾತನಾಡಲೂ ಸಾಧ್ಯವಾಗದಂತಹ ಚಳಿ!  ಅಂತೂ 9.30ರ ಸುಮಾರಿಗೆ ಪವಿತ್ರ ಸರೋವರದಲ್ಲಿದ್ದೆವು.
ಪವಿತ್ರ ಸರೋವರದಲ್ಲಿ:-



ಭಾರತದ ಅತಿ ಎತ್ತರದ ಎರಡನೇ ಸರೋವರ. 290 ಎಕರೆಯಷ್ಟು ವಿಸ್ತೀರ್ಣ. ಒಟ್ಟು ಮೂರು ಸರೋವರಗಳ ಗುಚ್ಛ. 5 ಕಿ. ಮೀ ವ್ಯಾಸವಿರುವ ಗುರುದೊಂಗ್ ಮಾರ್. ಹಿಮಗಟ್ಟದೇ ಉಳಿವ ಇದರ ಕೆಲ ಭಾಗಗಳು ವಿಶಿಷ್ಟ. 8ನೇ ಶತಮಾನಕ್ಕೂ ಚಾಚಿಕೊಂಡ ಇದರ ಇತಿಹಾಸ. ಕಡು ನೀಲಿ, ಕಂದು, ಅಲ್ಲಲ್ಲಿ ಬದಲಾಗುವ ನೇರಳೆ ಬಣ್ಣವೋ ಮನಮೋಹಕ. ಹಿಮ ಬೆಟ್ಟದಡಿಯಲ್ಲಿ ತಣ್ಣಗೆ ನಲಿಯುತ್ತಿತ್ತು. ಹಿಮಗಾಳಿಗೆ ಸಣ್ಣ ತೆರೆಗಳೆದ್ದು ಬರುವ ಪರಿ ಅಮೋಘ.


ಸರೋವರದೆದುರಿಗೆ ನಿಂತರೆ ಧನ್ಯತಾ ಭಾವ. ಸ್ವಚ್ಛ ಪರಿಸರ. ಎವರೆಸ್ಟ್ ಬೇಸ್ ಕ್ಯಾಂಪನಷ್ಟು ಎತ್ತರ,  17,100 ಅಡಿ. ಗ್ಲೇಷಿಯರ್ನ ಹಿಮಗಾಳಿಗೆ ಶತಮಾನದಿಂದ ಸ್ವಲ್ಪವೂ ಅಂಜದೇ ನಿಂತಿರುವ ಕಾಂಗಚೇನ್ ಪರ್ವತ. ಮಡಿಲಲ್ಲಿ ಸರೋವರ. ಹಿಮಗಾಳಿಗೆ ಮೂಳೆ ಮುರಿವಂತಹ ಚಳಿ. ಪ್ರತಿ ಉಸಿರಿಗೂ ತಿಣುಕುವಂತೆ ಮಾಡುವ ಆಕ್ಸಿಜನ್ ಅಭಾವ. ಎಂತಹ ಗಟ್ಟಿಗರಿಗೂ ಎದೆ ನಡುಕ ಬರದಿರದು. ಬಲಕ್ಕೆ ಭೂತಾನ್, ಉತ್ತರಕ್ಕೆ ಚೀನಾದ ಗಡಿ. ಎದುರಿಗಿದ್ದ ಹಿಮ ಹೊದ್ದ ಶಿಖರಗಳು ಮೋಡಗಳೊಳಗೆ ನುಸುಳಿ ಬರುತ್ತಿದ್ದವು. ಮೊಗೆದಷ್ಟು ಚಿಮ್ಮುವ ಹಿಮಗಾಳಿ. ಊಸರವಳ್ಳಿಯಂತೆ ಗಳಿಗೆಗೊಂದು ಬಣ್ಣ ಬದಲಾಯಿಸುತ್ತಿತ್ತು. ಸರೋವರದ ಎದುರಿನ ಬೆಟ್ಟಕ್ಕೂ ಇದೇ ಚಾಳಿ ಅಂಟಿಕೊಂಡಿತು. ಸರೋವರ ತಲುಪಿದಾಗ ಕೆಂಪಗಿದ್ದವು ಸ್ವಲ್ಪ ಹೊತ್ತಿಗೆ ಹಸಿರಾದವು. ಕಪ್ಪಗಿದ್ದ ಕೆಲವು ಹಸಿರಾದವು!



ತಿಳಿ ನೀರ ಸರೋವರದಲ್ಲಿ ಮೀಯುವಾಸೆ. ಪುಸಲಾಯಿಸಿದರೂ ಪುಪ್ಪಸಗಳು ಮುಷ್ಕರ ಹೂಡಿತ್ತು. ಅವಿರತವಾಗಿ ಕ್ಯಾಮರ ತನ್ನ ಕೆಲಸ ಮಾಡುತ್ತಿತ್ತು. ಗಳಿಗೆ ಗಳಿಗೂ ಹಾರಿ ಬರುವ ಹತ್ತಿ ಹಿಂಜಿದಂತಹ ಮೋಡಗಳು ಪ್ರತಿ ಚಿತ್ರಕ್ಕೊಂದು ಕಲಾತ್ಮಕ ಸ್ಪರ್ಶ ನೀಡುತ್ತಿದ್ದವು.
ಇತಿಹಾಸ:-

ಇದರ ಇತಿಹಾಸಕ್ಕೆ ಸುತ್ತು ಹಾಕಿದರೆ 8 ನೇ ಶತಮಾನದ ಕಾಲಕ್ಕೆ ಬಂದು ನಿಲ್ಲುತ್ತೆ. ರಿಂಪೋಚೆ ಯಾ ಪದ್ಮಸಂಭವ, ಟಿಬೆಟಿಯನ್ ಮಹಾಯನ ಸ್ಥಾಪಕನ ಸುತ್ತು ಗಿರಕಿ ಹೊಡೆಯುತ್ತೆ. ಈತ ಟಿಬೆಟಿನಿಂದ ಹಿಂದಿರುಗುವಾಗ ಈ ಸರೋವರದ ಸನಿಹದಲ್ಲಿ ಹಾದು ಹೋಗುತ್ತಾನೆ. ಆತನಲ್ಲಿ ಹಳ್ಳಿಗರು ಬೇಡಿಕೆಯೊಂದನ್ನು ಇಡುತ್ತಾರೆ. ಈಗಿಲ್ಲಿ ಹಳ್ಳಿಯೇ ಇಲ್ಲ ನೆನಪಿರಲಿ. ಸೈನಿಕರ ಬಂಕರ್ಗಳು ಜೊತೆಗೆ ಟೀಸ್ಟಾ ನದಿ ಮಾತ್ರ. ನಮಗೆ ಚಳಿಗಾಲಕ್ಕೆ ಕುಡಿಯಲು ನೀರಿಲ್ಲ, ಎಲ್ಲವೂ ಹಿಮವಾಗುತ್ತದೆ. ಹಾಗಾಗಿ ತಾವು ದಯಮಾಡಿ ಸಹಾಯ ಮಾಡಿ ಎಂದು ಬೇಡುತ್ತಾರೆ. ಚಳಿಗಾಲದಲ್ಲಿ ಇಲ್ಲಿನ ಉಷ್ಣಾಂಶ -35 ಡಿಗ್ರಿಗೆ ಇಳಿಯುತ್ತೆ. ಉರುವಲಿಲ್ಲದ ತಣ್ಣನೆ ಮರುಭೂಮಿಯ ನಡುವಿರುವ ಸರೋವರಕ್ಕೆ ಗುರು ಪದ್ಮ ಸಂಭವ ತಮ್ಮ ಕೋಲಿನಿಂದ ಕೆಲಭಾಗಕ್ಕೆ ಬಾರಿಸುತ್ತಾರೆ. ಆ ಭಾಗ ಹಾಗೆ ಉಳಿದು ಉಳಿದೆಲ್ಲಾ ಭಾಗ ಚಳಿಗಾಲದಲ್ಲಿ ಹೆಪ್ಪುಗಟ್ಟುತ್ತದೆ, ಅದೂ -35ಡಿಗ್ರಿಯಲ್ಲಿ. ಹಾಗಾಗಿ ಈ ಸರೋವರಕ್ಕೆ ಗುರುದೊಂಗ್ ಮಾರ್ ಎಂಬ ವಿಶಿಷ್ಟ ಹೆಸರು. ಗುರು ತನ್ನ ಕೋಲಿನಿಂದ ಬಾರಿಸಿದ ಎಂದು ಇದರ ಅರ್ಥ. ಇವತ್ತಿಗಿದು ಬೌದ್ಧರ ಪವಿತ್ರ ಸ್ಥಳವಾಗಿ ಗುರುತಿಸಲ್ಪಟ್ಟಿದೆ. ಮಕ್ಕಳಿಲ್ಲದವರು ಬೇಡಿಕೊಂಡರೆ ಮಗುವೆಂಬ ಪ್ರಸಾದವೂ ಆಗುವುದೆಂಬ ಪ್ರತೀತಿಯೂ ಇದೆ. ಇದರ ನೀರನ್ನು ಕೆಲವು ಪ್ರವಾಸಿಗರು ಸಂಗ್ರಹಿಸಿ ಕೊಂಡೊಯ್ಯುವರು.
ಒಂದೇ ದಿನ 10,000 ಅಡಿ ಎತ್ತರಕ್ಕೆ:-
ವಿಜ್ಞಾನದ ಪ್ರಕಾರ ಒಂದು ದಿನಕ್ಕೆ ಹೆಚ್ಚೆಂದರೆ ಸಾವಿರ ದಿಂದ ಎರಡು ಸಾವಿರ ಅಡಿಗಳವರೆಗೆ ಏರಬಹುದು. ನಾವು ಬರೋಬ್ಬರಿ 10 ಸಾವಿರ ಅಡಿ ಏರಿದ್ದೆವು. ಎಲ್ಲರಿಗೂ ಸಣ್ಣಗೆ ತಲೆ ತಿರುಗಿದಂತಹ ಅನುಭವ. ಅಲ್ಲಿಗೆ ಬಂದ ಹೆಚ್ಚಿನವರು ಕೂಡಲೇ ಹಿಂದಿರುಗುತ್ತಿದ್ದರು. ಕೆಲವರಲ್ಲಿ ವಾಂತಿ ಮಾಡಿಕೊಳ್ಳುತ್ತಿದ್ದರು.
ಸರೋವರದ ಒಂದು ಸುತ್ತು ಹೊಡೆದು ಬಂದೆವು. ಪವಿತ್ರ ಸರೋವರದ ಪ್ರದಕ್ಷಿಣೆ ಮಾಡಲು ನಾಗರಾಜ ಮತ್ತು ಮಿಲಿಂದ್ ಹೊರಟು ನಿಂತರು. ನಾನು ಮಮತಾ, ಅನುರಾಧ ದಂಡೆಯಲ್ಲಿ ಉಳಿದು ಸರೋವರದ ಸೌಂದರ್ಯ ಸವಿಯುತ್ತಾ ಕುಳಿತೆವು. ಹಲವು ಹಿಮಗುಬ್ಬಿ ಮರಿಗಳು ನಮ್ಮ ಜೊತೆಗಿದ್ದವು. ಸುಂದರ ಮತ್ತೊಂದು ಹಕ್ಕಿಯೂ ನಮಗೆ ಗಿರಕಿ ಹೊಡೆದು ಬರುತ್ತಿತ್ತು.
17 ಸಾವಿರ ಅಡಿಯಲ್ಲೊಂದು ಚಹದಂಗಡಿ:-
ಅವರು ಹಿಂದಿರುಗುವಾಗ 12.30. ಆಕ್ಸಿಜನ್ ಅಭಾವಕ್ಕೆ ನಮ್ಮ ಡ್ರೈವರ್ಗೆ ತಲೆ ಗಿರಕಿ ಹೊಡಿತ್ತಿತ್ತು. ಆತನಿಗೆ ಚಾ ಕುಡಿಸಿ, ಮ್ಯಾಗಿ ತಿನ್ನಿಸಿ ಸ್ವಲ್ಪ ಸುಧಾರಿಸಿದ ಕೂಡಲೇ ಹೊರಟು ಬಿಟ್ಟೆವು. 17 ಸಾವಿರ ಅಡಿಯಲ್ಲಿ ಗೇಲೇ ಎನ್ನುವ ಸಾಹಸಿಗನಿಲ್ಲಿ ಚಹದಂಗಡಿ ಇಟ್ಟಿದ್ದ! ಚಹ ಒಂದಕ್ಕೆ 40 ರೂ. ಮ್ಯಾಗಿಯೊಂದಕ್ಕೆ 70 ರೂಪಾಯಿ. ದೇವಸ್ಥಾನದ ಕಾವಲುಗಾರನಾದ ಈತ ಚೀನಾ ಗಡಿ ಭಾಗದಲ್ಲಿ ರೂಂ ಮಾಡಿ ವಾಸಕ್ಕಿದ್ದ. ಮತ್ತೊಮ್ಮೆ ಬಂದು ಈತನನ್ನು ಮಾತನಾಡಿಸುವ ಹಂಬಲದೊಂದಿಗೆ ಅಲ್ಲಿಂದ ಹೊರಟು ನಿಂತೆವು. ನಸು ಕಂದು ಬಣ್ಣದಿಂದ ತಿಳಿ ನೀಲಿ ಬಣ್ಣಕ್ಕೆ ತಿರುಗುತ್ತಾ ಸರೋವರ ನಮಗೆಲ್ಲಾ ಬಾಯ್ ಬಾಯ್ ಹೇಳಿತ್ತು. ಅಗಾಧ ಅನುಭವದ ಬುತ್ತಿಯೊಂದು ನಮ್ಮ ಜೊತೆಗಿತ್ತು.

ಶ್ರೀಧರ್. ಎಸ್. ಸಿದ್ದಾಪುರ
  ಕುಂದಾಪುರ ತಾಲೂಕು
ಉಡುಪಿ ಜಿಲ್ಲೆ-576229



No comments:

Post a Comment

ವಾರೆ ನೋಟ

ಲೋಚನ ದ ತುಂಬಾ ಚಂದ್ರ ತಾಲದ ಬಿಂಬ

( Chandra tal lake .... Himachal pradesh) ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿ...