Wednesday, May 29, 2019

ಮೆಲೊ ಡ್ರಾಮ್ಯಾಟಿಕ್ ಮೇಲುಕೋಟೆ

ಅರೆ ನಾಟಕದ ಪದವನ್ನು ಮೇಲುಕೋಟೆಗೆ ಅಂಟಿಸಿದ್ದಾನಲ್ಲ ಎಂದು ಹುಬ್ಬೇರಿಸಬೇಡಿ.
 
      ಇಲ್ಲಿನ ವಿಶಿಷ್ಟ ಆಚರಣೆಗಳು, ವಿಚಿತ್ರ ಪದ್ಧತಿಗಳು, ನಡೆಯುವ ಉತ್ಸವಗಳು, ಇಲ್ಲಿರುವ 108 ಪುಷ್ಕರಣಿಗಳು, ಸುತ್ತಲಿನ ಕೋಟೆ, ಪೋಟೋಗೆ ಪೋಸು ನೀಡುವ ಲಲನೆಯರು, ಅಲ್ಲಲ್ಲಿ ಸ್ಥಾಪಿಸಿರುವ ಮಂಟಪಗಳಿಂದ ನಿಮಗೆ ಹಾಗನ್ನಿಸದೇ ಇದ್ದರೆ ಹೇಳಿ. ನಾವು ಹೋದಾಗ ಕಲ್ಯಾಣಿಯಲ್ಲಿ ಪ್ರಾರಂಭವಾದ ಪೂಜೆಯೊಂದು ಚೆಲುವೆ ನಾರಾಯಣನ ಗುಡಿಯೊಳಗೆ ಅಂತ್ಯಗೊಂಡಿತು.


ಅನೇಕ ಬಾರಿ ಇಲ್ಲಿಗೆ ಹೋಗಬೇಕೆಂದು ಕೊಂಡರೂ ಹೋಗಲಾಗಲಿಲ್ಲ. ಮೈಸೂರಿಗೆ ಐದಾರು ಬಾರಿ ಹೋದರೂ ಮೇಲುಕೋಟೆಗೆ ಹೋಗಲು ಸಾಧ್ಯವಾಗಲಿಲ್ಲ. ಆದರೆ ಈ ಬಾರಿ ಪಟ್ಟು ಬಿಡದೇ ಹೋಗಿ ಬಂದೆ.


ತನ್ನ ಹಳೇ ಕಾಲದ ಬೀದಿಗಳಿಂದ, ಗುಡಿ ಗೋಪುರಗಳಿಂದ, ಪುರಾತನ ದೋಣಿ ಹಂಚಿನ ಮನೆಗಳಿಂದ, ತಮಿಳು ಮಿಶ್ರಿತ ಕನ್ನಡ ಮಾತನಾಡುವ ವಿಚಿತ್ರ ಜನಗಳಿಂದ, ತಮಿಳು ಶೈಲಿಯ ಊಟೋಪಚಾರದಿಂದ ಮೇಲುಕೋಟೆ ಬಹಳ ಇಷ್ಟವಾಗಿ ಬಿಟ್ಟಿತು.


ಅನೇಕರ ಬಾಯಿಗೆ ಕೋಲಿಕ್ಕಿ ಇಲ್ಲಿನ ಪುರಾಣ, ಇತಿಹಾಸ ಕೆದಕಲು ನೋಡಿದೆ. ಬೀದಿ ಬೀದಿ ಸುತ್ತಾಡಿ ವಿಷಯ ಸಂಗ್ರಹಿಸಿದೆ.



ಪುಸ್ತಕದಂಗಡಿಯ ಅಯ್ಯಂಗಾರರನ್ನು ಭೇಟಿ ಮಾಡಿದೆ. ಹಂಪಿ ಬಿಟ್ಟರೆ ಮೇಲುಕೋಟೆಯೇ ಫೋಟೋಗ್ರಾಪರ್ ಗಳ ಸ್ವರ್ಗ! ಇಲ್ಲಿನ ಒಂದೊಂದೇ ಸ್ಥಳಗಳಿಗೆ ಹೋಗಿ ಬರೋಣ ಬನ್ನಿ. ಪದ್ಧತಿಯಂತೆ ಮೊದಲಿಗೆ ಸುಮಾರು 11ನೇ ಶತಮಾನದಲ್ಲಿ ಚಾಲುಕ್ಯರಿಂದ ನಿಮರ್ಾಣವಾದ ಯೋಗಾ ನರಸಿಂಹನನ್ನು ನೋಡಿ ಬರೋಣ.

ಯೋಗಾ ನರಸಿಂಹ





ಯಾದವಗಿರಿ, ಯತಿಶೈಲ ಎಂದು ಕರೆಯುವ ಬೆಟ್ಟದ ಮೇಲಿದ್ದಾನೆ ಯೋಗಾ ನರಸಿಂಹ. ಚಾಲುಕ್ಯರಿಂದ ಸ್ಥಾಪಿಸಲ್ಪಟ್ಟು, ಯದುವಂಶದ ದೊರೆಗಳ ಸಹಾಯದಿಂದ ರಾಮಾನುಜಾಚಾರ್ಯರು ಉತ್ಥಾನಗೊಳಿಸಿದ ದೇವಾಲಯ. ರಾಮಾನುಜಾಚಾರ್ಯರು 14 ವರ್ಷ ಇಲ್ಲಿ ವಾಸವಾಗಿದ್ದು ಶ್ರೀ ವೈಷ್ಣವ ಪಂಥ ಮತ್ತು ಮೇಲುಕೋಟೆಯ ಉದ್ದಾರದಲ್ಲಿ ತೊಡಗಿಕೊಂಡಿದ್ದರು. 52 ಅರ್ಚಕರನ್ನೂ ಅವರು ತಮಿಳುನಾಡಿನಿಂದ ಕರೆಸಿಕೊಂಡಿದ್ದರು!
ಇಲ್ಲಿನ ಕ್ರಮದಂತೆ ಮೊದಲಿಗೆ ಯೋಗ ನರಸಿಂಹನ ಭೇಟಿ. ಅನೇಕ ಸಣ್ಣ ಗೋಪುರಗಳನ್ನು ಹೊಕ್ಕು ಯೋಗಾ ನರಸಿಂಹನಿಗೆ ನಮಸ್ಕರಿಸಿ ಬರೋಣ. ಕನರ್ಾಟಕದಲ್ಲೆಲ್ಲೂ ಈ ರೀತಿಯ ಗೋಪುರ ಹೊಕ್ಕಿ ದೇವಾಲಯ ಪ್ರವೇಶ ಮಾಡುವ ಕ್ರಮವಿಲ್ಲ. ಬೇಲೂರು, ಹಳೆಬೀಡು ಹೊಕ್ಕರೆ ಒಂದೇ ಒಂದು ಸ್ವಾಗತ ಗೋಪುರ. ಇದು ಪಕ್ಕಾ ತಮಿಳುನಾಡಿನ ಪದ್ಧತಿ.


ಶ್ರೀ ರಂಗಂನಲ್ಲಿ ರಂಗನಾಥನಿಗೆ ಬರೋಬ್ಬರಿ ಒಟ್ಟು 21 ಸ್ವಾಗತ ಗೋಪುರಗಳಿವೆ! ಅದೇ ಕ್ರಮ ಇಲ್ಲೂ ಅನುಸರಿಸಲಾಗಿದೆ. ಪಶ್ಚಿಮಾಭಿಮುಖವಾದ ಗೋಪುರಗಳನ್ನು ದಾಟಿ, ನಂತರದ ಎರಡು ಎತ್ತರದ ಗೋಪುರಗಳನ್ನು ದಾಟಿ ಮೇಲುಕೋಟೆಯ ಶಿಖರದ ನೆತ್ತಿಯಲ್ಲಿ ಪೂವರ್ಾಭಿಮುಖಿ ಧ್ಯಾನಸ್ಥ ನರಸಿಂಹನನ್ನು ಎಬ್ಬಿಸಿ ದರ್ಶನ ಪಡೆಯಬೇಕು.


ಮುಂಜಾವಿಗೆ ನೆತ್ತಿ ಏರಿದರೆ ಮಾತ್ರ ಬೇಗ ದರ್ಶನ ಪಡೆಯಬಹುದು ಇಲ್ಲವಾದರೆ ಕಾಯ ಬೇಕಾದೀತು. ಕೆಳಗಿನ ಕಲ್ಯಾಣಿಯಿಂದಲೇ ನರಸಿಂಹನಿಗೆ ಅಭಿಷೇಕದ ನೀರು ತರಬೇಕು. ಏರುವ ದಾರಿಯುದ್ದಕ್ಕೂ ಮಂಗಗಳ ಕಾಟವಿದೆ. ನಿಮ್ಮ ಜಂಬದ ಚೀಲಗಳನ್ನು ಜೋಪಾನ ಮಾಡದಿದ್ದರೆ ಮಂಗಗಳ ಪಾಲಾಗುವುದು ಖಚಿತ. ಊರಿನ ಪಕ್ಷಿ ನೋಟವೂ ನಿಮಗೆ ಮೇಲಿನಿಂದಲೇ ಸಿಗುವುದು. ಸರಿ ಚೆಲುವ ನಾರಾಯಣನನ್ನು ನೋಡೋಣವೇ?

ಚೆಲುವ ನಾರಾಯಣನ ಸನ್ನಿಧಿಗೆ




ನೇರ ಬೆಟ್ಟವಿಳಿದು ಕಲ್ಯಾಣಿ ಸುತ್ತಿ, ಸುತ್ತಲಿನ ದೈವಗಳಿಗೆ ಸುತ್ತು ಬಂದು ನಾರಾಯಣನಿದ್ದಲ್ಲಿಗೆ ಹೊರಟೆವು. ಹಾಂ ಕಲ್ಯಾಣಿಯಲ್ಲೊಂದು ಚೆಂದದ ನಕ್ಷತ್ರಾಕಾರದ ಮಂಟಪವಿದೆ. ಜೊತೆಗೆ ಕಲ್ಯಾಣ ಮಂದಿರವೂ ಜೊತೆಯಲ್ಲಿದೆ. ಎರಡನ್ನೂ ನೋಡಿ ಬಿಡಿ.
ದೇವಾಲಯದ ಒಳ ಆವರಣದಲ್ಲಿ ಸುಂದರ ಕೆತ್ತನೆಯ ಕಂಬಗಳಿವೆ. ಒಂದೊಂದು ಕಂಬದ ವಿನ್ಯಾಸವೂ ವಿಭಿನ್ನ. ಇಲ್ಲಿನ ಸೂಕ್ಷ್ಮ ಕೆತ್ತನೆ ಮನಸೂರೆಗೊಳಿಸುವಷ್ಟು ಚೆನ್ನಾಗಿದೆ. ಕೆಲವು ಕಂಬಗಳಲ್ಲಿ ನವಿಲಿನ ಸುಂದರ ವಿನ್ಯಾಸವಿದೆ. ಅನೇಕ ನವಿಲಿನ ಶಿಲ್ಪಗಳನ್ನು ನಮ್ಮವರೇ ಹಾಳುಗೆಡಹಿದ್ದಾರೆ. ದೇವಾಲಯದ ಪೌಳಿಯ ಕೆತ್ತನೆಗಳನ್ನು ನೋಡಿಕೊಂಡು ಮೇಲುಕೋಟೆಯ ನಾರಾಯಣನಿಗೆ ನಮಸ್ಕರಿಸಿ, ಹೊರ ಪೌಳಿ ಸುತ್ತಿ ಸನಿಹದ ಅಕ್ಕ-ತಂಗಿ ಕೊಳ ನೋಡಿಕೊಂಡು ಅಲ್ಲಿಂದ ರಾಯ ಗೋಪುರಕ್ಕೆ ಹೊರಟೆವು.

ರಾಯಗೋಪುರ



ರಾಯಗೋಪುರ ಅರ್ಧಂಬರ್ಧ ಕಟ್ಟಿ ನಿಲ್ಲಿಸಿದ ದೊಡ್ಡ ರಚನೆಯಂತಿದೆ. ಅಲಂಕೃತ ಸುಂದರ ಆನೆ, ಕಂಬಕ್ಕೆ ಒರಗಿ ನಿಂತ ಸುಂದರಿ. ಪುಂಗಿ ಊದುವ ಮಹಿಳೆ.  ಹೀಗೆ ಅನೇಕ ಸುಂದರ ರಚನೆಯನ್ನು ಕಟ್ಟಿ ಅರ್ಧಕ್ಕೆ ನಿಲ್ಲಿಸಿದಂತಿದೆ. ಯಾಕೆ ಇಷ್ಟು ದೊಡ್ಡ ರಚನೆಯನ್ನು ನಿಮರ್ಿಸಿ ನಿಲ್ಲಿಸಿದ್ದಾರೆಂದು ಹೆಚ್ಚಿನವರಿಗೆ ತಿಳಿದಿಲ್ಲ. ಕಾಲ ಗರ್ಭದಲ್ಲಿ ಅನೇಕ ರಹಸ್ಯಗಳನ್ನು ಈ ರಾಯಗೋಪುರ ಅಡಗಿಸಿಕೊಂಡಿದೆ. ನೋಡಿ ಅನ್ವೇಷಿಸುವ ಮನಸ್ಸು ನಮಗಿರಬೇಕಷ್ಟೇ. ಇಲ್ಲಿನ ಇತಿಹಾಸ, ಜನಪದದ ಚರಿತ್ರೆಯನ್ನು ಅರಿಯಲು ನಾಲ್ಕೈದು ದಿನ ಬಿಡುವು ಮಾಡಿಕೊಂಡು ಬರಬೇಕು. ಮತ್ತೆ ಬರುವೆನೆಂಬ ಬರವಸೆಯೊಂದಿಗೆ ಮೇಲುಕೋಟೆಯನ್ನು ಬೀಳ್ಕೊಟ್ಟೆವು.


ಸನಿಹದಲ್ಲಿ ಶ್ರವಣ ಬೆಳಗೊಳ, ಮೊಸಳೆ ಹೊಸಳ್ಳಿಯ ನಾಗೇಶ್ವರ ಮತ್ತು ಚೆನ್ನಕೇಶ್ವರವೆಂಬ ಎರಡು ವಿಶಿಷ್ಟ ದೇವಾಲಯವಿದೆ. ಮಂಡ್ಯದ ಸನಿಹದ ಬಸರಾಳು ಗ್ರಾಮದಲ್ಲಿರುವ ಹೊಯ್ಸಳ ಶಿಲ್ಪ ವೈಭವದ  ಮಲ್ಲಿಕಾಜರ್ುನ ದೇವಾಲಯವನ್ನೂ ನೋಡಿಕೊಂಡು ಬರಬಹುದು. ಉಳಿದುಕೊಳ್ಳಲು ಸನಿಹದಲ್ಲೇ ನಿಮ್ಮ ಜೇಬಿನ ಗಾತ್ರಕ್ಕನುಸಾರವಾಗಿ ಅನೇಕ ಹೊಟೆಲುಗಳಿವೆ. ಹಾಂ ಸುಬ್ಬಣ್ಣ ಮೆಸ್ನಲ್ಲಿ ಸವಿದ ಸಕ್ಕರೆ ಪೊಂಗಲ್ ಮತ್ತು ತಟ್ಟೆ ಇಡ್ಲಿ ಪರಿಮಳವಿನ್ನೂ ನನ್ನ ನಾಸಿಕಾಗ್ರಗಳಲ್ಲಿದೆ. ಹಾಗೆ ಅಲ್ಲಿನ ವಿಶಿಷ್ಟ ರುಚಿಯ ಮಜ್ಜಿಗೆ ಹುಳಿಯ ಘಮವೂ! ಮರೆಯದೇ ನೀವೂ ಅವೆಲ್ಲವನ್ನು ಸವಿದು ನೋಡಿ.

ಶ್ರೀಧರ್. ಎಸ್. ಸಿದ್ದಾಪುರ.
ರಥಬೀದಿ ಸಿದ್ಧಾಪುರ,
          ಸಿದ್ದಾಪುರ ಅಂಚೆ, ಕುಂದಾಪುರ ತಾಲೂಕು,



No comments:

Post a Comment

ವಾರೆ ನೋಟ

ಲೋಚನ ದ ತುಂಬಾ ಚಂದ್ರ ತಾಲದ ಬಿಂಬ

( Chandra tal lake .... Himachal pradesh) ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿ...