Sunday, July 26, 2020

ಕದ








ಅಂದು ನಾನು ಊರಿಗೆ ಹೋಗದೆ ಇದ್ದಿದ್ದರೆ ಈ ಕತೆ ನಡೆಯುತ್ತಲೇ ಇರಲಿಲ್ಲ. ನಿಮ್ಮ ಮುಂದೆ ಹೇಳುವ ಪ್ರಸಂಗ ಬರುತ್ತಲೇ ಇರಲಿಲ್ಲ.
***

ಬಿಸಿಲ ಕೋಲುಗಳು ಬಚ್ಚಲು ಧೂಮದೊಂದಿಗೆ ಬೆರೆತು ವಿಚಿತ್ರ ಪರಿಮಳದಿಂದ ಕೂಡಿ ಆಹ್ಲಾದಕರವಾಗಿತ್ತು. ಯಾವ ಕಟ್ಟಿಗೆ ಹಾಕಿದ್ದರೆಂದು ಮನಸ್ಸಲ್ಲೇ ಲೆಕ್ಕ ಹಾಕ ತೊಡಗಿದೆ.  ಬಿರುಗಾಳಿಗೆ ಬಿದ್ದ ಅಡಿಕೆ ಮರಗಳು ಚಳಿ ಓಡಿಸಲು ಬಿಸಿಲ ಕೋಲಿಗೆ ಮೈ ಒಡ್ಡಿ ಮಲಗಿದ್ದವು. ಬಿಸಿ ಕಾಫಿಯ ಘಮಲುವಿನೊಂದಿಗೆ ಬೆರೆತ ರುಚಿ ರುಚಿ ಪತ್ರೊಡೆಯ ಪಸರಿಸಿದ ಪರಿಮಳ ನಾಸಿಕಾಗ್ರದ ಮೂಲಕ ರವಾನೆಗೊಂಡು ಜಠರಾಗ್ನಿಯನು ಸಚೇತನಗೊಳಿಸಿತ್ತು. ಮನೆಯ ಚೌಕಿಯ ಮುಖ್ಯ ದ್ವಾರಕ್ಕೆ ತಲೆಯಬಾಗಿ ಅಡುಗೆ ಮನೆಗೆ ಹೋಗಿ ಕಾಫೀ ಹೀರಿ ಪತ್ರೊಡೆ ಮೆಲ್ಲುತ್ತಾ ಅಮ್ಮನೊಂದಿಗೆ ಹರಟುತ್ತಾ ಕುಳಿತೆ. 
ಊರ, ಹೊರ ಊರ ಸಮಾಚಾರವನ್ನು ಕೇಳುತ್ತಾ ಸುಬ್ಬಮ್ಮಜ್ಜಿಯ ವಿಚಾರ ಬಂತು. "ಊಟಾದ್ಮೇಲೆ ಸುಬ್ಬಮ್ಮಜ್ಜಿ ಮನಿಗ್ ಹೋಗ್ ಬಾರೋ ಮಗಾ" ಅಮ್ಮ ಎಂದೊಡನೆ ಅವರ ನೆನಪುಗಳ ಸುರುಳಿ ಒಂದೊಂದಾಗಿ ಬಿಚ್ಚ ತೊಡಗಿತು.
ತಂದೆ ಇಲ್ಲದ ನಮ್ಮನ್ನು ತಂದೆಯಂತೆ ಸಲಹಿದವರು ಅವರೇ. ಊರಿಗೇ ಊರುಗೋಲಾಗಿ ನಿಂತವರು. ಚಿಕ್ಕ ವಯಸ್ಸಿಗೆ ನನ್ನ ತಂದೆ ತೀರಿಕೊಂಡಾಗ ಅವರ ಅಪರಕರ್ಮವನ್ನು ಮುಂದೆ ನಿಂತು ಮಾಡಿಸಿದವರು. ನನಗೊಮ್ಮೆ ವಿಪರೀತ ಜ್ವರ ಬಂದಾಗ 10 ಮೈಲಿ ಆಚೆಗಿನ ಕುಮಟಾ ಆಸ್ಪತ್ರೆಗೆ ತನ್ನ ಸೈಕಲ್ಲಿನಲ್ಲಿ ಕರೆದೊಯ್ಯಿದ ನೆನಪಿನ್ನು ಕಳಚದೇ ಸ್ಮೃತಿ ಕೋಶದಲಿ ಕುಳಿತಿದೆ. 
ಡಿಗ್ರಿ ಆಗಿ ಬಿ. ಎಡ್ ಸೇರುವಾಗ ಬಿಡಿಗಾಸೂ ಅಮ್ಮನ ಬಳಿ ಇರಲಿಲ್ಲ. ಆ ವರ್ಷ ಅಡಿಕೆಗೆ ವಿಪರೀತ ಕೊಳೆ. ತನ್ನ ತೋಟದ ಅಡಿಕೆ ಮಾರಿ ನನ್ನ ವಿದ್ಯಾಭ್ಯಾಸಕ್ಕೆ ಹಣ ಕೂಡಿಸಿಕೊಟ್ಟಿತ್ತು. ಎಂತಹ ಕರುಣಾ ಹೃದಯಿ. ಗಣೇಶನ ಹಬ್ಬಕ್ಕೆ, ದೀಪಾವಳಿಗೆ ಮಾಡುವ ವಿಶಿಷ್ಟ್ಯ ಕಡುಬು ಎರಡು ನನಗೆ ಎತ್ತಿಡದೇ ಇರುತ್ತಿರಲಿಲ್ಲ. ಪ್ರತಿ ಬಾರಿ ಊರಿಗೆ ಬಂದಾಗಲೂ ಸುಬ್ಬಮ್ಮಜ್ಜಿಯನ್ನು ಮಾತನಾಡಿಸದೇ ಹೋದದ್ದೇ ಇಲ್ಲ. ನಾನು ಹೋದರೆ ತಾಯಿಯಂತೆ ಪ್ರೀತಿಯ ಮಳೆ ಕರೆಯುತ್ತಿದ್ದಳು.
ತನ್ನ ನಾಲ್ಕು ಮಕ್ಕಳನ್ನು ಚೆನ್ನಾಗಿ ಓದಿಸಿ ಒಳ್ಳೇ ನೌಕರಿ ಸಿಗು ಹಂಗೆ ಮಾಡಿತ್ತು. ಇಲ್ಲಿಯವರೆಗೆ ಎಲ್ಲವೂ ಸುಸೂತ್ರವಾಗಿದ್ದ ಸುಬ್ಬಮ್ಮಜ್ಜಿಯ ಬದುಕು ಈಗ ವಿಚಿತ್ರ ಸಂಕಟಕ್ಕಿಟ್ಟುಕೊಂಡಿತ್ತು. ಗಾಳಿಗೆ ಸಿಕ್ಕ ಗಾಳಿಪಟದಂತೆ ತಾನೊಬ್ಬಳೇ ಇರಬೇಕಾಗಿ ಬಂತು. ಕಲಿತು ಬಿಡಾರ ಬಿಟ್ಟ ಮಕ್ಕಳೆಲ್ಲಾ ಈ ಕೊಂಪೆಗೆ ಬರಲು ನಿರಾಕರಿಸಿದರು. ಹಾಗಾಗಿ ಅಷ್ಟೊ ಇಷ್ಟೋ ಒಬ್ಬೊಬ್ಬರ ಮನೆಯಲ್ಲಿದ್ದು ಸಾಕಾಗಿ ತಾನೆಲ್ಲೂ ಬರೋಲ್ಲ ಎಂದು ಪುನಃ ಊರ ಸೇರಿದವಳು ಮತ್ತೆ ಯಾರ ಮನೆಗೂ ಕಾಲಿಡಲಿಲ್ಲ. ವಯಸ್ಸು ಏರಿದಂತೆ ಉಬ್ಬಸದೊಂದಿಗೆ ಕೆಲಸ ಮಾಡುವುದು ಕಷ್ಟವಾಗ ತೊಡಗಿತು.
ಸುಬ್ಬಮ್ಮಜ್ಜಿಯ ನೇರ ನಿಷ್ಠುರ ಮಾತಿನಿಂದಾಗಿ ಅಜ್ಜಿಗೆ ಉಪಚಾರ ಹೇಳುವವರು ಊರಲ್ಲಿ ಯಾರೂ ಇರಲಿಲ್ಲ. ಆಯಿಯೂ ಈಗೇಕೋ ಬಹಳವೇ ಅಜ್ಜಿ ಮನೆಗೆ ಹೋಗಿ ಬಾ ಎಂದು ಒಂದೇ ಸಮನೆ ಒತ್ತಾಸೆ ಪಡಿಸುವುದನು ನೋಡಿದರೆ ಏನೋ ಒಂಥರಾ ಕಸಿವಿಸಿ.
ಊಟಕ್ಕೆಬ್ಬಿಸಿದಾಗ ಮನೆ ತುಂಬಾ ದೀವಲಸಿನ ಬೋಂಡದ ಘಮ. ನೆತ್ತಿ ಸುಡೋ ಸೂರ್ಯನೂ ನಡುಮನೆಯ ಹೊಕ್ಕು ತಣ್ಣಗಾಗಿದ್ದ.  ನಿನ್ನೆ ಬಸ್ ಹತ್ತುವಾಗಲಿನಿಂದ ಖಾಲಿ ಇದ್ದ ಹೊಟ್ಟೆ ಇಂದು ಆಯಿ ಅಡುಗೆಗೆ ಬಕಾಸುರನಂತೆ ಬಾಯಿ ಕಳೆದಿತ್ತು. ಸ್ವಯಂ ಪಾಕದಿಂದ ನಲುಗಿದವನಿಗೆ ಓಯಸಿಸ್ ಸಿಕ್ಕಂತಾಯಿತು. ಚಕ್ಕಳ ಮಕ್ಕಳವಿಕ್ಕಿ ದೇಸಿ ಅಡುಗೆಯನುಂಡೆ. ಅದು ಇದು ದೇಶಾವರಿ ಮಾತು ಎರಡು ತುತ್ತು ಹೆಚ್ಚೇ ಸೇರುವಂತೆ ಮಾಡಿತ್ತು. ಉಂಡ ಹೊಟ್ಟೆ ವಿರಾಮ ಬಯಸಿತ್ತು. ಕಣ್ಣು ಮುಚ್ಚಿದೆ. ಎದ್ದವನಿಗೆ ಆಯಿಯ ಕಾಫಿ ಕಾದು ಕುಳಿತಿತ್ತು. ಕಾಫಿ ಕುಡಿಯುತ್ತಾ ಆಯಿ ಮತ್ತೊಮ್ಮೆ ಸುಬ್ಬಮ್ಮಜ್ಜಿಯ ನೆನಪಿಸಿದಳು. ಸರಿ ಎಂದು ಹೊರಟೆ.
ತೆರೆ ತೆರೆಯಾಗಿ ಹರಿವ ತೊರೆಯೊಂದ ದಾಟಿ ಇಳಿ ಸಂಜೆ ಹೊತ್ತಿಗೆ ಸುಬ್ಬಮ್ಮಜ್ಜಿಯ ಮನೆ ಎದುರಿಗಿದ್ದೆ. ಎಲೆಯಡಿಕೆ ಕುಟ್ಟುತ್ತಿದ್ದ ಅಜ್ಜಿಗೆ ಒಮ್ಮೆದೊಮ್ಮೆಲೆ ಜೀವರಸವೆಲ್ಲಾ ಮುಖಕ್ಕೆ ಹರಿದು ಮುಖ ಕೆಂಪಾಯಿತು. " ಬಾರಾ ತಮಾ, ಎಷ್ಟು ದಿನಾಗೋತು ನಿನ್ ನೋಡ್ದೆ?" ಎಂದಿತು ಖುಷಿಯಿಂದ. ಹೇಗಿದ್ದಿ ಮರಾಯ ಎಂದು ನನ್ನ ಅಪ್ಪಿಕೊಂಡಿತು. ನನ್ನ ಜಗುಲಿಗೆ ಒಯ್ದು ಕೂರಿಸಿ, ನಟಿಗೆ ತೆಗೆಯಿತು. 
"ಅಜ್ಜಿ ಆನು ಗುತರ್ು ಸಿಗಲ್ಯನೆ ಯನ್ನಾ?" ಎಂದೆ. 
"ಸುಮ್ಮಂಗಿರೋ ತಮಾ, ಯಂಗಿನ್ನು ಕಣ್ ಸಮಾ ಕಾಣ್ತು ಅಕಾ..ಚಸ್ಮಾ ಇಲ್ದೇ ಪೇಪನರ್ೂ ಓದ್ತೆ ಗೊತಿದ್ದಾ"
 "ನೀ ಗನಾಗ್ ಊಟಾನೂ ಮಾಡ್ದೇ ಸೋತ್ಹೋಯ್ದೆ ಮರಾಯಾ?" 
"ಬಾ ಉಣ್ಣಕ್ಕೂ" ಎಂದು ಅಡುಗೆ ಮನೆಗೆ ಹೋಗುವ ತಯಾರಿಯಲಿದ್ದಳು. 
"ಈಗಷ್ಟೇ ಯಂದ್ ಉಟಾತೇ. ನಿಂದಾತನೆ ಅಜ್ಜೀ." ಎಂದೆ. 
"ಯಾಕಾ ತಮಾ ಸುಳ್ಹೇಳ್ತೆ."
"ಸುಮ್ಮಂಗಿರೋ ತಮಾ ಮುಖ ಎಷ್ಟ್ ಬಾಡೋಜು ನೋಡು. ಉಣ್ಣಲ್ ಬಾ." ಎನ್ನುತ್ತಾ ಏಳಲು ಹೊರಟಿತು ಅಜ್ಜಿ.
ಸುಬ್ಬಮ್ಮಜ್ಜಿಯನ್ನು ಸುಧಾರಿಸಿ ಕೂರಿಸಲು ಸ್ವಲ್ಪ ಹೆಚ್ಚೇ ಹೊತ್ತು ಬೇಕಾಯಿತು. ಹೊಯ್ಯುವ ಮಳೆಯಂತೆ ಒಂದೇ ಸಮನೇ ತನ್ನ ಹಳೇ ಕಡತ ಬಿಡಿಸಿಕೊಂಡು ಕುಳಿತಿತು ಅಜ್ಜಿ. ಪಾಪ ತಾನು ಮಾಡಿದ ಸಂಗತಿ ಹೇಳಲು ಯಾರು ಇಲ್ಲದೇ ಪರಿತಪಿಸುತಲಿತ್ತು. ಒಂಟಿತನದ ಸಂಕಷ್ಟಗಳು ನನಗಾಗ ಅರಿವಿಗೆ ಬರತೊಡಗಿತು.
ತನ್ನ ಮಗನಾದ ಸೀತಾರಾಮನನ್ನು ಬೆಳೆಸಲು ಪಟ್ಟ ಕಷ್ಟಗಳನ್ನು ಒಂದೊಂದಾಗಿ ಹೇಳತೊಡಗಿತು. ಆತ ಎಂಟು ತಿಂಗಳಿಗೆ ಹುಟ್ಟಿದವ, ಶಾಲೆಗೇ ಹೋಗುತ್ತಿರಲಿಲ್ಲ ಕೊನೆಗೂ ಆತನನ್ನು ಓದಿಗೆ ಹಚ್ಚಿಸಿ ಇಂಜಿನಿಯರಾಗಿ ರೂಪಿಸಲು ಪಟ್ಟ ಕಷ್ಟಗಳನು ಹೇಳತೊಡಗಿತು. ಅಮೇರಿಕಾದಲ್ಲಿ ಎಂ. ಎಸ್. ಮಾಡಲು ಆತನಿಗಾಗಿ ತಾನು ಪಟ್ಟ ಪಾಡಿನ ಗಂಟನ್ನು ಬಿಚ್ಚಿತು. 
ನಿಜ ತಾಯಿಯಾದವಳ ಕಷ್ಟಗಳಿಗೆ ಮಕ್ಕಳು ಆಗಬೇಕಲ್ಲವೆ? ಯಾರಲ್ಲಿ ಹೇಳುವುದು. ಸೀತಾರಾಮ ಮತ್ತು ಅವನ ಹೆಂಡತಿಗೆ ಅಮೇರಿಕದ ಮತ್ತು ಡಾಲರ್ ಭೂತ ಅಮರಿಕೊಂಡವರಿಗೆ ತಾಯಿ ಕಾಣುವಳೇ?  ಅವನಿಗಾಗುವಷ್ಟು ತೋಟ ಜೊತೆಗೆ ಒಂದಿಷ್ಟು ಗದ್ದೆಯೂ ಅವನ ಪಾಲಿಗಿತ್ತು. ಗಟ್ಟಿ ಮುಟ್ಟಾದ ಅಪ್ಪ ಕಟ್ಟಿಸಿದ 6 ಅಂಕಣದ ತೊಟ್ಟಿ ಮನೆಯಿತ್ತು. ನಿರುಮ್ಮಳವಾಗಿ ತೋಟ ನೋಡಿಕೊಂಡಿದ್ದರೆ ಸಾಕಾಗಿತ್ತು. ಮೇಲು ಖಚರ್ಿಗೆ ಕಾಳು ಮೆಣಸಿನ ಸಂಪಾದನೆ ಸಾಕಾಕ್ತು. ಶಿಕ್ಷಣವೇ ಶಾಪವೇನೋ ಅಂತ ಮನಸಿಗೆ ಬಂತು. ವಿವೇಕವನು ನೀಡದ ಶಿಕ್ಷಣ ಇದ್ದರೆಷ್ಟು ಬಿಟ್ಟರೆಷ್ಟು? 
ಹೀಗೆ ನನ್ನ ಆಲೋಚನೆಯಲಿ ಜೀಕುತ್ತಾ ಇರಲು ಅಜ್ಜಿ "ಅಲ್ದಾ ತಮಾ, ಕಳ್ದ್ ವರ್ಷ  ಶ್ರಾದ್ಧಕ್ಕೆ  ನೀ ಎಂತಕಾ ಬಲರ್ೆ?" ಎಂದು ಗದರಿತು. 
" ಯಂಗೆ ಎಸ್ಟ್ ಬೇಜಾರಾತು ಗೊತಿದಾ ಮಗಾ?" ಎಂದಿತು.
ನನಗೂ ಅಜ್ಜನ ಶ್ರಾಧ್ಧಕ್ಕೆ ಬಂದ ನೆನಪಾಗದೇ ಸುಮ್ಮನಾದೆ.
ಮುಸ್ಸಂಜೆ ದಾಟಿ ಇರುಳು ಇಣುಕಿದ್ದು ಗೊತ್ತಾಗಲೇ ಇಲ್ಲ.
ನನ್ನ ಕೈ ಹಿಡಿದು ನಡುಮನೆಗೆ ಕರೆದೊಯಿದಿತು. ಕವಚಿಕೊಂಡ ಕತ್ತಲ ಸಾಮ್ರಾಜ್ಯವು ಅಜ್ಜಿಯ ಬದುಕಿನ ರೂಪಕದಂತಿತ್ತು. ಬೆಳಕು ಯಾವಾಗಲೋ ಬೇಲಿ ಕಿತ್ತಿತ್ತು. ಮನೆಯೊಳಗೆ ಹಳ್ಳಿ ಅಡುಗೆ ಸುವಾಸನೆ. ಕರೆಂಟು ಯಾವಾಗಲೋ ಹೋಗಿತ್ತು. ಸೀಮೆಎಣ್ಣೆ ಬುಡ್ಡಿಯೊಂದನ್ನು ಹಚ್ಚಿಕೊಂಡು ಬಂದ ಅಜ್ಜಿ ಕೈಯಲ್ಲಿ ಎಳೆ ಬಾಳೆ ಎಲೆ ಇತ್ತು.
ಒಲೆ ಎದುರಿಂದ ಬಿಸಿ ಬಿಸಿ ದೇಸಿ ಅನ್ನಕ್ಕೆ ಘಮ್ ಎನ್ನುವ  ತಿಳಿ ಸಾರು, ಮಿಳ್ಳೆ ತುಪ್ಪ, ನಂಜಿಕೊಳ್ಳಲು ಬಾಳೆ ಕುಂಡಿಗೆಯ ಪಲ್ಯ ಬಡಿಸಿ ಉಣ್ಣು ಎಂದಿತು. ಮರು ಮಾತನಾಡದೇ ಉಣ್ಣುತ್ತಾ ಅಜ್ಜಿಯ ಮುಖ ನೋಡಿದೆ. ಎಂತಹ ಸಂತೃಪ್ತಿ! ಬುಡ್ಡಿ ಬೆಳಕಿನಲಿ ಬೆಳಗುತ್ತಿತ್ತು ಮುಖ. 
ಊಟದ ಸಮಯದಲ್ಲೂ ಸೀತಾರಾಮನ ಪುರಾಣವನ್ನೇ ಹೇಳತೊಡಗಿತು. ಇಲ್ಲಿಯವರೆಗೂ ನಾನು ಮನೆಗೆ ಹೋಗುವ ಆಲೋಚನೆಯಲ್ಲಿದ್ದೆ. ಗಾಳಿ ಕೂಡ ಆಡದೇ ಉಸಿರುಗಟ್ಟಿದ ಭಾವ. ಕತ್ತಲೆಯೊಳಗೂ ಸೀತರಾಮನ ನೆನಪಿನ ಛಾಯೆ. ಸೀತಾರಾಮನ ನೆನಪು ಅಜ್ಜಿಯ ಉಸಿರೊಳಗೆ ಬೆರೆತು ಹೋದಂತೆನಿಸಿ ಅಜ್ಜಿಗೆ ಬೇಸರ ಮಾಡುವುದು ಬೇಡವೆಂದು ಮನೆಗೆ ಹೋಗುವ ಆಲೋಚನೆಯನ್ನೇ ಕೈಬಿಟ್ಟೆ. ಒಂಟಿ ಜೀವ 6 ಅಂಕಣದ ಮನೆಯಲ್ಲಿ ಮಕ್ಕಳ ನೆನಪುಗಳೊಂದಿಗೆ ಜೀಕುತ್ತಾ ಜೀವನ ಕಳೆಯುದನು ಎಣಿಸಿದರೆ ಕಣ್ಣೀರೇ ಬರುತಲಿತ್ತು. 
"ಒಳ್ಕ್ವಾಣಿ ಹಾಸ್ಗೆ ಹಾಸಿದ್ದಿ ನೋಡು ಕತ್ಲಾಗೋತು. ಮನ್ಕ್ಯಾ ತಮಾ." ಎಂದು ಒಳಕೋಣೆಯಿಂದಲೇ ಬರುತ್ತಾ ಹೇಳಿತು ಅಜ್ಜಿ. ಆಗಲೇ ಗೊತ್ತಾದದ್ದು ಅಜ್ಜಿ ನನ್ನನ್ನೇ ಸೀತಾರಾಮ ಎಂದು ತಿಳಿದು ಬಿಟ್ಟಿತ್ತು. ಅಜ್ಜಿಗೆ ತಿಳಿ ಹೇಳುವುದು ಹೇಗೆ ಎಂದು ಚಿಂತಿಸುತ್ತಾ ಮಜ್ಜಿಗೆ ಅನ್ನ ಉಣ್ಣುತಲಿದ್ದೆ. ಒಳ ಕೋಣೆಯಿಂದ ಸಣ್ಣ ಹಿತ್ತಾಳೆ ಪಟ್ಟಿಗೆಯೊಂದನ್ನು ಹಿಡಿದು ಬಂದು "ನೋಡು ಮಗಾ ಇದು ನಿನ್ ಅಪ್ಪಯ್ಯನ್ ಅಸ್ಥಿ. ಇದ್ನಾ ತೆಕಂಡ್ಹೋಗಿ ಗೋಕರ್ಣದಲ್ ವಿಸಜರ್ಿಸಕ್ಕೂ. ನೀ ಬಪ್ಪದನ್ನೆ ಕಾಯ್ತಾ ಇದ್ದಿದ್ದೆ ಮರಾಯ." ಎಂದು ನನ್ನ ಮುಂದಿಟ್ಟಿತು. ಸುಬ್ಬಮ್ಮಜ್ಜಿಯ ಗಂಡ ಸತ್ತು ಕೆಲವು ವರುಷಗಳಾಗಿತ್ತು. ತನ್ನ ದುಃಖವನ್ನು ಎದೆಯೊಳಗಡಗಿಸಿಕೊಂಡಿತ್ತು. ತಂದೆ ಸತ್ತಾಗ ಬಂದಿದ್ದ ಸೀತಾರಾಮ ಮತ್ತೆ ಬಂದಿರಲಿಲ್ಲ. ಇಂದಜ್ಜಿಯ ದುಃಖದ ಕಟ್ಟೆಯೊಡೆಯಿತು. ಸುತ್ತಲಿನ ಕತ್ತಲಿನಲಿ ಹೊಳೆವ ಹಿತ್ತಾಳೆಯ ಕರಡಿಗೆ ನನ್ನ ಕೈಲಿತ್ತು. ಹಾಗೇ ಎಷ್ಟೋ ಹೊತ್ತು ಕತ್ತಲಿನಲಿ ನಿಂತೇ ಇದ್ದೆ. ಕಣ್ಣ ಬಿಂದುಗಳು ಜಾರಿ ಹೊಳೆವ ಪೆಟ್ಟಿಗೆ ಮೇಲೆ ಉದುರುತ್ತಾ ಇದ್ದಂತೆ ಬುಡ್ಡಿ ದೀಪ ನಿಧಾನಕ್ಕೆ ಮಂಜಾಗುತ್ತಾ ಬಂತು.
ಶ್ರೀಧರ್. ಎಸ್. ಸಿದ್ದಾಪುರ.

3 comments:

  1. ತುಂಬಾ ಚಂದಾ ಅಯ್ತ ಮರಯಾ ಅಲ್ಲಾ ನೀನ್ ಅದ್ ಏಗಳ್ ಉತ್ತರಕನ್ನಡ ಭಾಷಿ ಕಲ್ತೆ ಮರಯಾ ಒಳ್ಳೆ ಪ್ರಯತ್ನ. ಸೀತಾರಾಮನ ಅಮೇರಿಕಾ ಪಯಣ ಮತ್ತು ಶಿಕ್ಷಣ ಇಲ್ಲಿನ ಸ್ಥಿತಿ ಇದನ್ನು ಇನ್ನೂ ವಿಸ್ತರಿಸ ಬಹುದಿತ್ತು.

    ReplyDelete
  2. ತುಂಬಾ ಚಂದಾ ಅಯ್ತ ಮರಯಾ ಅಲ್ಲಾ ನೀನ್ ಅದ್ ಏಗಳ್ ಉತ್ತರಕನ್ನಡ ಭಾಷಿ ಕಲ್ತೆ ಮರಯಾ ಒಳ್ಳೆ ಪ್ರಯತ್ನ. ಸೀತಾರಾಮನ ಅಮೇರಿಕಾ ಪಯಣ ಮತ್ತು ಶಿಕ್ಷಣ ಇಲ್ಲಿನ ಸ್ಥಿತಿ ಇದನ್ನು ಇನ್ನೂ ವಿಸ್ತರಿಸ ಬಹುದಿತ್ತು.

    ReplyDelete
  3. ವಂದನೆಗಳು ಸರ್...ನನ್ನ ದೊಡ್ಡಪ್ಪನ ಮನೆ ಉತ್ತರ ಕನ್ನಡ ದ ಗುಣವಂತೆ. ಹಾಗಾಗಿ ಅಲ್ಪ ಸ್ವಲ್ಪ ಬತ್ತ...ಕತೆ ಕೇವಲ ಸುಬ್ಬಮ್ಮನ ಜೀವನದ ಘಟನೆ ಆದರಿಸಿದ್ದು, ಜೊತೆಗೆ ಸಣ್ಣ ಕತೆಯಾದ್ದರಿಂದ ಹೆಚ್ಚು ಸೇರಿಸಿದರೆ ನೀಳ್ಗತೆಯಾಗಿಬಿಡುವುದರಿಂದ ಅವನ್ನೆಲ್ಲಾ ಬಿಟ್ಟೆ...👍🙏🙏

    ReplyDelete

ವಾರೆ ನೋಟ

ಲೋಚನ ದ ತುಂಬಾ ಚಂದ್ರ ತಾಲದ ಬಿಂಬ

( Chandra tal lake .... Himachal pradesh) ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿ...