Saturday, May 1, 2021

ಯಾಮಿನಿ ಬಂದಿದ್ದಳು!!



12 ವರ್ಷಗಳ ಬಳಿಕ ಯಾಮಿನಿ ಬಂದಿದ್ದಳು. ಅನೇಕ ಬಾರಿ ಬಾ ಎಂದರೂ ಬಂದಿರಲಿಲ್ಲ.  ಅವಳ ಜೊತೆ ಗೆಳೆಯ ಚಿರಾಯು  ಸಹ ಬಂದಿದ್ದ. ಹಗಲು ರಾತ್ರಿ ಅವಳೊಂದಿಗೇ ಮಾತೇ ಮಾತು. ಕಾಫಿ ಕಪ್ ಹಿಡಿದು ಅದನ್ನೇ ಮರೆತು ಅವಳ ಕತೆಯಲ್ಲಿ ತೇಲಿದ್ದಿದೆ. ನಿದ್ದೆಯಲ್ಲೂ ಅವಳ ಕನವರಿಕೆ. ಹೆಂಡತಿಗಂತೂ ವಿಪರೀತ ಹೊಟ್ಟೆ ಕಿಚ್ಚು. ಎನಷ್ಟು ಅವಳೊಂದಿಗೆ ಮಾತು. ಏನೋ ಕುತೂಹಲ ಅವಳಿಗೆ. ಸಣ್ಣ ಸಂಶಯ. ಅಂತಹದ್ದೆನಿದೆ ಅವಳಲ್ಲಿ? ಇವಳ ಪ್ರಶ್ನೆ. ಚೂಪು ಮೂಗಿನ ನವಿರು ಗಲ್ಲದ ಮುದ್ದಾದ ಹುಡುಗಿ. ಏನಿಲ್ಲ ಅವಳಲ್ಲಿ? ವಿವರಣೆಗೆ ಕುಳಿತರೆ ತೇಜಸ್ವಿಯ ಕತೆಗಿಂತಲೂ ರೋಚಕವಾಗಿ ಹೇಳಬಲ್ಲಳು. ಹಾಡಲು ಹೇಳಿದರೆ ಗಂಗೂಬಾಯಿ. ಅತ್ಯುತ್ತಮ ವಿಮರ್ಶಕಿ. ಎದೆಯಲ್ಲೊಂದು ಪ್ರೀತಿಯ ಝರಿ ಜೀವಂತ. ಇಂತಿಪ್ಪ ಯಾಮಿನಿ...

12 ವರ್ಷಗಳ ತನ್ನ ಕತೆಯನ್ನು ಬಿಚ್ಚಿಟ್ಟಳು. ಕರೋನ ಬರುತ್ತದೆಂದು ಹೆಂಡತಿ ಹೆದರಿಸಿದರೂ ಕೇಳದೆ ನಾವಿಬ್ಬರೂ ಒಂದೆರಡು ದಿನ ಹಾಯಾಗಿ ಬೆಂಗಳೂರಿಗೆ, ಶಿವಮೊಗ್ಗಕ್ಕೆ, ಯಲ್ಲಾಪುರ, ಸುಬ್ರಮಣ್ಯ ಸುತ್ತಿ ಸುಳ್ಯದ ಅವಳ ಕಾಡುಮನೆಯಲ್ಲಿ ಒಂದೆರಡು ದಿನವಿದ್ದು ಬಂದೆವು. ಪ್ರಯಾಣದ ನಡುವೆ ಶೃದ್ಧಾ ಶರ್ಮಾ ಸೇರಿಕೊಂಡಳು.

ನಮ್ಮೆಲ್ಲರ ಕಣ್ಮಣಿಯಾದವಳು ಒಲಿದದ್ದು ಮಾತ್ರ ಚಿರಾಯುವಿಗೆ. ನಾವು ಒಲಿಸಿಕೊಳ್ಳಲು ಪ್ರಯತ್ನಿಸಿಲ್ಲವೆಂಬುದು ಶುದ್ಧ ಸುಳ್ಳು! ಒಲಿದಿಲ್ಲವಷ್ಟೇ. ಹಾಗಂತ ಚಿರಾಯುವಿನ ಹೆಂಡತಿ ಅಂದುಕೊಂಡರೆ ನಿಮ್ಮ ಊಹೆ ತಪ್ಪು! ಒಲಿದಿದ್ದು ಗಿರೀಶ್ ಗೆ ಇರುವುದು ಚಿರಾಯುವಿನ ಜೊತೆ!!

ಅವಳು ಬಂದ ದಿನ ರಾತ್ರಿ ಪೂರಾ ಜಾಗರಣೆ. ಓರೆ ಕೋರೆ ಗೆರೆಗಳಂತೆ ಚದುರಿದ ರೇಖೆಗಳಂತೆ ತನ್ನ ಕತೆ ಹೇಳುತ್ತಾ ಕೂತಿದ್ದಳು. ತಾನೇ ಕನ್ನಡಿ ಮುಂದೆ ನಿಂತು ಕತೆ ಹೇಳಿ ಕೊಳ್ಳತೊಡಗಿದಳು. ತನ್ನ ತುಮುಲಗಳನ್ನು, ಒಳತೋಟಿಗಳನ್ನು ಹೇಳುತ್ತಾ ಬೆತ್ತಲಾಗತೊಡಗಿದಳು. 

ಕಮಲಶಿಲೆಯಲ್ಲಿ, ಶಿವಮೊಗ್ಗೆಯಲ್ಲಿ ಚಿರಾಯು ಕಳೆದ ದಿನಗಳು, ಅವನೊಂದಿಗಾದ ಮಾತು ಕತೆಯ ವಿವರಗಳು. ಆತನ ಕತೆಗಳು. ಚಿರಾಯುವಿನ ತಂದೆಯ ತಿರಸ್ಕಾರ, ಸಿಕ್ಕ ಪುರಸ್ಕಾರ. ಯಾವುದು ಶಾಶ್ವತ? ಯಾವುದು ನಶ್ವರ? ಎಂಬ ತೊಳಲಾಟಗಳು. ಅವನ ಹೋರಾಟದ ದಿನಗಳು ಎಲ್ಲವೂ ಮಾತಿನ ನಡುವೆ ಜಾಗ ಮಾಡಿಕೊಂಡವು. ಬದುಕಿನ ನಾಜೂಕಿನ ಸಂದರ್ಭದಲ್ಲಿ ಚಿರಾಯುವಿನಿಂದ ದೂರಾಗಲು ಇಂಗ್ಲೆಂಡ್ಗೆ ಹೊರಟು ನಿಂತ ಕ್ಷಣಗಳು. ವರುಷಗಳ ಬಳಿಕ ಮತ್ತೆ ಚಿರಾಯುವನ್ನೇ ಸೇರಿಕೊಂಡ ಕತೆ. ಆತನನ್ನು ಪ್ರೇರೇಪಿಸಿ ಬರೆಯಿಸಿದ ಕತೆಗೆ ಬಹುಮಾನ ಬಂದಿದ್ದು. ಜೀವನದಲ್ಲಿ ನಡೆದ ಕತೆಗಳನ್ನು ಹೆಕ್ಕಿ ಹೇಳಿದ್ದಳು. ಯಾವುದೂ ಇಲ್ಲಿ ನೇರವಿಲ್ಲ. ಆದರೂ ವಕ್ರವಲ್ಲ. ಅವಳು ಅವನ ಬದುಕಿನ ವಿವರಗಳ ಗುಚ್ಚಗಳು ಅಚ್ಚರಿ ಹುಟ್ಟಿಸುವಂತಹುದು. ಹೀಗೆ ಆಕೆ ಹೇಳಿದ ಸಣ್ಣ ಸಣ್ಣ ವಿವರಗಳು ಎರಡು ದಿನದಿಂದ ನನ್ನ ಎದೆಯಲ್ಲಿ ಗುಂಯ್ ಗುಡುತ್ತಿದೆ. ಹೀಗೂ ಜೀವನವಿರಬಹುದೇ ಎಂಬ ತುಮುಲದಲ್ಲಿರುವೆ. ಕತೆಗಳಿಗಿಂತಲೂ ಕೆಲವರ ಬದುಕುಗಳು ವಿಚಿತ್ರ. ಎರಡು ತಿಂಗಳಿಗಾಗುವಷ್ಟು ಕತೆ ಹೇಳಿ ಹೋಗಿದ್ದಾಳೆ. ಒಂದೊಂದೇ ನವಿಲುಗರಿಯಂತಹ ಕತೆಗಳನ್ನು ಎದೆಯ ಗೂಡಲ್ಲಿ ಬಚ್ಚಿಡಲು ಪ್ರಯತ್ನಿಸುತ್ತಿರುವೆ ಆಗುತ್ತಿಲ್ಲ. ಕತೆಗಾರ್ತಿ ಯಾಮಿನಿಯ ಚಮಕ ಪ್ರತಿ ವಾಕ್ಯದಲ್ಲೂ ಅನುರಣಿಸುತಿದೆ. ನನ್ನ ಎದೆಯ ಗೂಡಲ್ಲಿ ಅರಳಲು ತವಕಿಸುತ್ತಿದೆ. ಕಣ್ಣು ಮಾತಿಗಿಳಿದಾಗ ಬಾಯಿ ಬಲು ಮೌನ! ಅವಕಾಶ.

ಇಂದು ಆಕೆ ಹೊರಟು ನಿಂತಾಗ ಎದೆ ಭಾರ. ಮತ್ತೆ ಕೇಳಿದೆ ಭೇಟಿ ಯಾವಾಗ?

 



 

1 comment:

ವಾರೆ ನೋಟ

ಲೋಚನ ದ ತುಂಬಾ ಚಂದ್ರ ತಾಲದ ಬಿಂಬ

( Chandra tal lake .... Himachal pradesh) ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿ...