Tuesday, May 18, 2021

ಓದಲಾರೆ ಓದದೆಯೂ ಇರಲಾರೆ!!



ತೀವ್ರತೆ, ತುಮುಲ, ಕಲ್ಪನೆಗಳಿದ್ದರೆ ಮಾತ್ರ ಕವಿತೆ ಹುಟ್ಟಬಹುದೇನೊ? ಕತೆ ಕಟ್ಟಬಹುದೇನೋ? ತೀವ್ರ ತಿರಸ್ಕಾರ, ವಿಷಾದ ಜೊತೆಯಾದಾಗ ಹುಟ್ಟುವ ಭಾವಕ್ಕೆ ಕತೆಯ ಚೌಕಟ್ಟು ತೊಡಿಸಬಹುದೇನೋ? 

ಸಣ್ಣಗೆ ಜಿನುಗುವ ಲಾಟಾನು ಬೆಳಕಿನಲಿ ಕವಿ ಅನುಭವಿಸಿದ ಅತೀವ ಭಾವನೆಗಳನ್ನು ಕೊನೆ ಮೊದಲಿಲ್ಲದ ವಿಷಾದದಲ್ಲಿ ಅದ್ದಿ ತೆಗೆದಂತಹ ಬರೆಹ. 

ಅಪ್ಪ, ಲೀಲಾವತಿ ಮತ್ತು 'ನಾನು' ಎಂಬ ಮೂರು ಭಿನ್ನ ಟಿಸಿಲುಗಳಲ್ಲಿ ಹಬ್ಬಿ ಹರಡಿದ  ಕಥನ ಕವನ! ಹೃದಯದ ರಕ್ತ ಬಸಿದು ಬಿಡುವಂತಹ ನಿಗಿ ನಿಗಿ ಸುಡು ಸಾಲುಗಳ ನಡುವೆ ಹರಡಿದ ಕತೆ. ಭಿನ್ನ ರೂಪಕಗಳಲ್ಲಿ ಕಸಿ ಕಟ್ಟಲಾದ ಕತೆ. ಈ ಪದಗಳು ಹುಟ್ಟು ಹಾಕುವ ಭಾವ ತೀವ್ರತೆ ನನ್ನಲ್ಲಿ ಮಾತ್ರವಾ ಎಂದು ಆಲೋಚಿಸುತ್ತೇನೆ. ಇಲ್ಲ. ಮುಂಬರಹ, ಹಿಂಬರದ ನುಡಿಗಳಲ್ಲೂ ಅವೇ ಮಾತು. ಕೆಲವೊಮ್ಮೆ ಆಲೋಚಿಸುತ್ತೇನೆ ಓದು, ಬರೆಹ ಎಲ್ಲವೂ            ನಿರರ್ಥಕವೆಂದು. ಎಲ್ಲವೂ ಅಯೋಮಯ. 

ಕಾದಂಬರಿಯ ಕೆಲವು ಸಾಲುಗಳು...

1. ನಿರಾಕರಣವೇ ಬಾಳಿನ ಬೆಳಕು.

ಒಮ್ಮೆಯಾದರೂ ಯಾರಿಂದಲಾದರೂ ತಿರಸ್ಕೃತಗೊಳದೇ ಹೋದರೆ ಕವಿತೆ ಜಾಳಾಗುತ್ತದೆ. ತಿರಸ್ಕೃತಗೊಂಡ ಜೀವಕ್ಕೂ ಕವಿತೆಗೂ ಜಗತ್ತನ್ನೇ ಗೆಲ್ಲುವ ಧೈರ್ಯ ಬರುತ್ತದೆ.

2. ನಿರೂಪಕ ಹೇಳುತ್ತಾನೆ...

ಪದ್ಯ ಬರೆಯಬಾರದು.

ಬರೆದರೆ ಅದು ಮತ್ತೊಬ್ಬರ ವಶವಾಗುತ್ತದೆ. ನಾವು ಪಳಗಿಸದೇ ಹೋದರೂ ಅವರು ಅದನ್ನು ಪಳಗಿಸುತ್ತಾರೆ. ಕವಿತೆಯನ್ನು ಪಳಗಿಸಿದರೆ ಕವಿಯನ್ನು ಪಳಗಿಸಿದಂತೆ ಅಂದುಕೊಳ್ಳುತ್ತಾರೆ. ನೀವು ನನ್ನನ್ನು ಪಳಗಿಸಲಾರಿರಿ. ನನ್ನ ಕವಿತೆಯನ್ನು ಕೂಡ ಎಂದು ಸಿಟ್ಟಿನಿಂದ ಹೇಳಬೇಕು ಅಂದುಕೊಳ್ಳುತ್ತೇನೆ, ಸಿಟ್ಟು ಕೂಡ ಪದ್ಯದ ಹಾಗೆಯೇ. ಮತ್ತೊಬ್ಬರ ವಶವಾದರೆ ಅದನ್ನೂ ಅವರು ಪಳಗಿಸಬಲ್ಲರು.

3. ....

ನಾನು ಕವಿತೆಗಳನ್ನು ಅನುವಾದಿಸಲಿಕ್ಕೇ ಹೋಗಲಿಲ್ಲ. ಅನುವಾದವೆಂದರೆ ಮಕ್ಕಳ ಪೋಟೋ ತೆಗೆದಂತೆ. ಮಕ್ಕಳಂತೆಯೇ ಕಾಣಿಸುತ್ತದೆ. ಜೀವ ಇರುವುದಿಲ್ಲ.

ಜೀವ ಇಲ್ಲದ ಪದ್ಯ ಬರೆಯುವುದಕ್ಕೆ ಹೋಗಬಾರದು.

ಅಂಥ ಪದ್ಯ ಬರೆದರೆ ಒಂದೋ ಕವಿ ಸತ್ತಿರುತ್ತಾನೆ. ಅಥವಾ ಪದ್ಯ.

ಎರಡೂ ಸತ್ತಿರುವುದನ್ನೂ ನೋಡಿದ್ದೇನೆ. ಸತ್ತ ಕವಿ ಸತ್ತು ಹೋದ ಪದ್ಯಗಳನ್ನು ಹೆರುತ್ತಾನೆ. ಅವುಗಳನ್ನು ತೋರಿಸಿ ನನ್ನ ಪದ್ಯಗಳಿವು ಅಂತ ಹೇಳುತ್ತಾನೆ.

4. ..

ಕವಿತೆ ಬರೆಯುವುದು ಅಂದರೆ ಕಳೆದುಕೊಳ್ಳುವುದು. ಬೇರೆ ಯಾರಿಗೋ ಕೊಟ್ಟು ಬಿಡುವುದು. ಸೆರೆಮನೆಯಲ್ಲಿ ಹೆತ್ತ ಮಗುವನ್ನು ನಂದನದಲ್ಲಿ ಬಿಟ್ಟು ಬರುವುದು. ಮತ್ತೆ ಸೆರೆಯಾಗಿ ಏಕಾಂಗಿಯಾಗಿ ಬದುಕುವುದು. ಹಾಗಾಗಿ ಪದ್ಯ ಬರೆಯಲೇ ಬಾರದು. ಹಾಗಾದರೂ ಅದು ನನ್ನ ಜೊತೆಗಿರುತ್ತದೆ.

5. 

ಈ ಕಾದಂಬರಿಯನ್ನು ಮತ್ತೊಮ್ಮೆ ಓದಬೇಕು, ಓದಿಯೂ ಎಲ್ಲೋ ಬಿಟ್ಟುಹೋದ ಒಳ್ಳೆಯ ಇಮೇಜುಗಳು, ಒಳ್ಳೆಯ ಸಾಲುಗಳು ಸಾವಿರಾರು ಇವೆ, ಅವುಗಳನ್ನು ಹಿಡಿಯಬೇಕು. ಈ ಕಾದಂಬರಿ ಒಂದು ಥರ ಅಷ್ಟು ಸುಲಭಕ್ಕೆ ಅರ್ಥಕ್ಕೆ ಸಿಗದ ಒಂದು ಮೊಂಡು ಕವಿತೆಯೇ. ನಾವೂ ಆಗಾಗ ಮೊಂಡು ಹಿಡಿದು, ಒಲಿಸಿಕೊಂಡು, ಹಿಂದೆ ಹೋಗಿ, ಕಾಡಿ, ಕಂಗೆಟ್ಟು, ವಿರಹ ಪಟ್ಟು ಅರ್ಥದೆಡೆಗೆ ಬರಸೆಳೆದುಕೊಳ್ಳಬೇಕು. ಅಥವಾ ಅದರ ಗುಂಗಲ್ಲೇ ಇದ್ದು ಬಿಡಬೇಕು. ಥೇಟು ಲಕ್ಷ್ಮಣ ನೀಲಂಗಿ ಅರ್ಥಾತ್ ಎಲ್, ತನ್ನ ಲೀಲಾಳ ಗುಂಗಲ್ಲೇ ಇದ್ದು ಬಿಡುವಂತೆ.

- ಹಿಂಬರಹದಿಂದ ವಿಕಾಸ್.



***

ಕೆಂಡದಂತೆ ಹಿಡಿದಿಡಲಾಗದ ಕವಿತೆ ಇದ್ದರೆಷ್ಟು ಬಿಟ್ಟರೆಷ್ಟು. ಎನ್ನುವ ತೀವ್ರ ಸಾಲುಗಳನ್ನು ನೆನಪಿಸುತ್ತಾ ಕವಿಯ ಅಸಾಹಕತೆ ಜೊತೆಗೆ ಕವಿತೆಯ ನಿರರ್ಥಕತೆ ಕಾಡುತ್ತಾ ಇರುವಾಗ... ಹೀರಿಬಿಟ್ಟ ಕಾಫಿ ಲೋಟದ ಘಮಲು ಹಾಗೆಯೇ ಉಳಿದಿದೆ. ಈ 'ಎಲ್' ನಂತೆ.


 

No comments:

Post a Comment

ವಾರೆ ನೋಟ

ಲೋಚನ ದ ತುಂಬಾ ಚಂದ್ರ ತಾಲದ ಬಿಂಬ

( Chandra tal lake .... Himachal pradesh) ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿ...